Connect with us

State

ಚುನಾವಣೆ ವೇಳೆ ಜಪ್ತಿ ಮಾಡಲಾಗುವ ಹಣ, ಒಡವೆ, ಮದ್ಯ ಎಲ್ಲಿಗೆ ಹೋಗುತ್ತೆ? ವಶ ಪಡಿಸಿಕೊಂಡ ಹಣ ವಾಪಸ್ ಪಡೆಯಬಹುದಾ?

Published

on

* ಚುನಾವಣೆ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ದೊಡ್ಡ ಮೊತ್ತದ ಹಣವನ್ನು ವಾಹನಗಳಲ್ಲಿ ತೆಗೆದುಕೊಂಡು ಹೋಗಲು ಆಗುವುದಿಲ್ಲ. ಹೈವೇಗಳಲ್ಲಿ, ಗಡಿ ಭಾಗದಲ್ಲಿ, ಅಲ್ಲಲ್ಲಿ ಚೆಕ್ ಪೋಸ್ಟ್ ಹಾಕಿ ತಪಾಸಣೆ ಮಾಡಲಾಗುತ್ತಿರುತ್ತದೆ. ಮದುವೆಗೆ ಹೋಗುತ್ತಿದ್ದೇವೆ, ಆಸ್ಪತ್ರೆಯಲ್ಲಿ ಆಪರೇಷನ್ ಇದೆ. ಹೀಗಾಗಿ ಹಣ ತೆಗೆದುಕೊಂಡು ಹೋಗುತ್ತಿದ್ದೀವಿ ಎಂದರೂ ಅಧಿಕಾರಿಗಳು ಬಿಡುವುದಿಲ್ಲ. ಹಣ ನಿಮ್ಮದು ಎನ್ನಲು ಪುರಾವೆ ನೀಡಿ ಎನ್ನುತ್ತಾರೆ. ಈ ರೀತಿ ಚುನಾವಣೆ ವೇಳೆ ಜಪ್ತಿ ಮಾಡಲಾಗುವ ಹಣ, ನಗದು, ಮದ್ಯವನ್ನು ಏನು ಮಾಡಲಾಗುತ್ತೆ ಎಂಬ ಪ್ರಶ್ನೆ ನಿಮ್ಮಲ್ಲಿ ಕಾಡಿದರೆ, ಅದಕ್ಕೆ ಉತ್ತರ ಇಲ್ಲಿದೆ.
ಇಡೀ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ 2024 ಕದನ ರಂಗೇರಿದೆ. ಇದೇ ಏಪ್ರಿಲ್ 26ರಿಂದ ಜೂನ್ 04ರ ವರೆಗೆ ದೇಶದಲ್ಲಿ ಒಟ್ಟು 7 ಹಂತದಲ್ಲಿ ಚುನಾವಣೆ ನಡೆಯಲಿದೆ. ಹಾಗೂ ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ಘೋಷಣೆಯಾದ ದಿನವೇ ಅಂದರೆ ಮಾರ್ಚ್ 16ರ ಸಂಜೆಯಿಂದಲೇ ದೇಶದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು ಭದ್ರತಾ ಪಡೆಗಳು ನಿರಂತರ ತಪಾಸಣೆ ನಡೆಸುತ್ತಿದ್ದಾರೆ. ಅಲ್ಲಲ್ಲಿ ಚೆಕ್ ಪೋಸ್ಟ್​ಗಳನ್ನು ಹಾಕಿ ಹದ್ದಿನ ಕಣ್ಣಿಟ್ಟಿದ್ದಾರೆ. ಬಸ್ ನಿಲ್ದಾಣ, ರೈಲ್ವೇ ನಿಲ್ದಾಣಗಳಲ್ಲಿ ತಪಾಸಣೆ ನಡೆಯುತ್ತಿದೆ. ಹೈವೇಗಳಲ್ಲಿ ಸಾಗುವ ಪ್ರತಿಯೊಂದು ಬೈಕು, ಕಾರು, ಬಸ್, ಲಾರಿ ಸೇರಿದಂತೆ ವಾಹನಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಆದರೆ ಈ ರೀತಿ ತಪಾಸಣೆ ಮಾಡುವಾಗ ವಶಪಡಿಸಿಕೊಳ್ಳಲಾಗುವ ಹಣ, ಒಡವೆ ಮತ್ತು ಮದ್ಯವನ್ನು ಚುನಾವಣಾ ಆಯೋಗ ಮತ್ತು ಪೊಲೀಸರು ಏನು ಮಾಡುತ್ತಾರೆ ಎಂಬ ಪ್ರಶ್ನೆ ಜನ ಸಾಮಾನ್ಯರಲ್ಲಿ ಮೂಡುವುದು ಸಹಜ. ಅದಕ್ಕೆ ಸಂಪೂರ್ಣ ಉತ್ತರ ಇಲ್ಲಿದೆ.

ಒಬ್ಬ ಅಭ್ಯರ್ಥಿಯ ಚುನಾವಣಾ ಖರ್ಚು ಎಷ್ಟು?
ಚುನಾವಣೆ ಬಂತೆಂದರೆ ಸಾಕು ಹಣದ ಹೊಳೆಯೇ ಹರಿಯುತ್ತೆ. ವಿಧಾನಸಭೆ ಚುನಾವಣೆಯೇ ಆಗಲಿ, ಲೋಕಸಭಾ ಚುನಾವಣೆಯೇ ಆಗಲಿ, ಯಾವುದಕ್ಕೂ ಭೇದ ಭಾವ ಇಲ್ಲದೆ ಚುನಾವಣಾ ಅಭ್ಯರ್ಥಿಗಳು ಹಣದ ಹೊಳೆಯನ್ನೇ ಹರಿಸುತ್ತಾರೆ. ಇದು ನಮಗೆಲ್ಲಾ ತಿಳಿದಿರುವ ವಿಷಯ. ಜೊತೆಗೆ ಮತದಾರರಿಗೆ ಈ ರೀತಿ ಹಣ, ಹೆಂಡ ಕೊಡುವ ವಿಷಯದಲ್ಲಿ ಇಡೀ ಭಾರತದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಚುನಾವಣೆ ಆಯೋಗದ ನಿಯಮವನ್ನೂ ಗಾಳಿಗೆ ತೂರಿ, ಮತದಾರರನ್ನು ಸೆಳೆಯಲು ಕಳ್ಳ ಮಾರ್ಗದಲ್ಲಿ ಹೆಚ್ಚಿನ ಹಣ ವ್ಯಯಿಸುತ್ತಾರೆ. ಹೀಗಾಗಿ ಚುನಾವಣಾ ಆಯೋಗ ಅಭ್ಯರ್ಥಿ ಖರ್ಚು ಮಾಡುವ ಪ್ರತಿಯೊಂದು ರೂಪಾಯಿಯ ಮೇಲೂ ಕಣ್ಣಿಡುತ್ತೆ. ಚುನಾವಣಾ ಆಯೋಗವು ನಿಗದಿಪಡಿಸಿದ ನಿಯಮಗಳ ಪ್ರಕಾರ ಲೋಕಸಭಾ ಕ್ಷೇತ್ರ ದೊಡ್ಡದಾಗಿದ್ದರೆ ಅಭ್ಯರ್ಥಿಯು 95 ಲಕ್ಷದ ವರೆಗೆ ಹಣ ಖರ್ಚು ಮಾಡಬಹುದು. ಅದೇ ಚಿಕ್ಕ ಲೋಕಸಭಾ ಕ್ಷೇತ್ರವಾದ್ರೆ 75 ಲಕ್ಷ ರೂ. ವರೆಗೆ ಮಾತ್ರ ಖರ್ಚು ಮಾಡಬೇಕು. ಆಯೋಗ ನಿಗದಿ ಪಡಿಸಿರುವ ವೆಚ್ಚಕ್ಕಿಂತ ಹೆಚ್ಚು ಖರ್ಚು ಮಾಡಿದರೆ ಕಠಿಣ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತೆ. ಅಭ್ಯರ್ಥಿ ಪ್ರತ್ಯೇಕ ಖಾತೆ ತೆರೆದು ಚುನಾವಣೆ ಖರ್ಚಿನ ಲೆಕ್ಕವಿಡಬೇಕು. ಅಲ್ಲದೆ ಪ್ರಚಾರದ ವೇಳೆ ಕಾರ್ಯಕರ್ತರ ಟೀ-ಕಾಫಿ, ಊಟದ ವೆಚ್ಚುವನ್ನೂ ಕೂಡ ಚುನಾವಣೆ ಆಯೋಗಕ್ಕೆ ಸಲ್ಲಿಸಬೇಕು. ಹಾಗೂ ಚುನಾವಣಾ ಆಯೋಗ ಪ್ರತ್ಯೇಕ ಸದಸ್ಯರನ್ನು ನೇಮಿಸಿ ಪ್ರಚಾರದ ವೇಳೆ ಬಳಸಲಾಗುವ ವಸ್ತುಗಳು, ಸಭೆಗಳಲ್ಲಿ ನೀಡಲಾಗುವ ಹೂಗುಚ್ಛ ಸೇರಿದಂತೆ ಪ್ರತಿಯೊಂದು ವಸ್ತುವಿನ ಚಿತ್ರೀಕರಣ ಮಾಡಿಸುತ್ತೆ. ಈ ಮೂಲಕ ಅಭ್ಯರ್ಥಿ ಖರ್ಚಿನ ಮೇಲೆ ನಿಗಾ ಇಡುತ್ತೆ.

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ಹೆಸರನ್ನು ಪಕ್ಷ ಘೋಷಣೆ ಮಾಡುತ್ತಿದ್ದಂತೆಯೇ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಾರೆ. ಒಂದು ವೋಟಿಗೆ ಇಷ್ಟು ಎಂದು ಹಣ ಎಂದು ಹಂಚುತ್ತಾರೆ, ಮದ್ಯ, ಒಡವೆ, ಪಾತ್ರೆ ಸಾಮಾನುಗಳು, ದಿನಸಿ, ದಿನ ನಿತ್ಯ ಬಳಕೆಯಾಗುವ ವಸ್ತುಗಳು, ಟಿವಿ, ಕುಕ್ಕರ್, ಮಿಕ್ಸರ್, ಸೀರೆ, ಚೂಡಿದಾರ್, ಪ್ಯಾಂಟ್-ಶರ್ಟ್, ಡಿಜಿಟಲ್ ವಾಚುಗಳು, ತಂಬಾಕು, ಗುಡ್ಕ ಸೇರಿದಂತೆ ಅನೇಕ ವಸ್ತುಗಳನ್ನು ನೀಡಿ ಆಮಿಷವೊಡ್ಡುತ್ತಾರೆ ಎಂದು ಕರ್ನಾಟಕದ ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ ವೆಂಕಟೇಶ್ ಕುಮಾರ್ ತಿಳಿಸಿದರು. ಈ ರೀತಿಯ ಆಫರ್​ ನೀಡಲಾಗುತ್ತಿರುವ ಜಿಲ್ಲೆಗಳ ಪಟ್ಟಿಯಲ್ಲಿ ಬೀದರ್, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕಲಬುರಗಿ ಜಿಲ್ಲೆಗಳು ಇಡೀ ರಾಜ್ಯದಲ್ಲೇ ಅಗ್ರಸ್ಥಾನದಲ್ಲಿವೆ. ಇನ್ನು ಗಮನಿಸುವ ವಿಷಯವೆಂದರೆ ಈ ಬಾರಿ ದಿನಸಿ ವಸ್ತುಗಳು ಹೆಚ್ಚಾಗಿ ಜಪ್ತಿಯಾಗಿವೆ. ಫುಡ್ ಕಿಟ್​ಗಳು, ತರಕಾರಿ, ಅಕ್ಕಿ, ಬೇಳೆ, ಟೊಮೆಟೋ ಸಾಸ್, ತಂಬಾಕು ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಬೀದರ್ ಜಿಲ್ಲೆಯಲ್ಲಿ 10 ಲಕ್ಷ ಮೌಲ್ಯದ 4,000 ಕೆಜಿ ತೂಕದ ಅಪಾರ ಪ್ರಮಾಣದ ಪಾನ್ ಮಸಾಲಾ ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. 24 ಲಕ್ಷ ಮೌಲ್ಯದ 96 ದುಬಾರಿ ವಾಚ್‌ಗಳನ್ನು ಚಿಕ್ಕಬಳ್ಳಾಪುರ ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮಾರ್ಚ್ 22 ರಂದು ಬಳ್ಳಾರಿ ಕ್ಷೇತ್ರದಲ್ಲಿ 30 ಲಕ್ಷ ಮೌಲ್ಯದ 203 ಕೆಜಿ ಶ್ರೀಗಂಧವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಎಫ್‌ಐಆರ್ ದಾಖಲಾಗಿದ್ದು, 11 ಆರೋಪಿಗಳ ಪೈಕಿ ನಾಲ್ವರನ್ನು ಬಂಧಿಸಲಾಗಿದೆ.

ಜೊತೆಗೆ ಬಹುತೇಕ ಬಾರಿ ಒಂದು ಪಕ್ಷ ಮತ್ತೊಂದು ಪಕ್ಷಕ್ಕೆ ಅಥವಾ ಅಭ್ಯರ್ಥಿಯಿಂದ ಕಾರ್ಯಕರ್ತರ ಕೈಗೆ ಲಕ್ಷಾಂತರ ರೂಪಾಯಿ ಹಣ ವರ್ಗಾವಣೆಯಾಗುತ್ತೆ. ಈ ಅಕ್ರಮಗಳು ಜರುಗದಂತೆ ನೋಡಿಕೊಳ್ಳಲು, ವಾಹನಗಳಲ್ಲಿ ಸಾಗಿಸಲಾಗುವ ಹಣ, ಮದ್ಯ, ಒಡವೆಯನ್ನು ಅಧಿಕಾರಿಗಳು ಸೀಜ್ ಮಾಡುತ್ತಾರೆ. ಅಲ್ಲದೆ ಚುನಾವಣೆಯಲ್ಲಿ ಕಪ್ಪು ಹಣವನ್ನು ಬಳಸಲಾಗುತ್ತೆ. ಹೀಗಾಗಿ ಅಧಿಕಾರಿಗಳು ಹದ್ದಿನ ಕಣ್ಣಿಡುತ್ತಾರೆ.

ರಾಜ್ಯದಲ್ಲಿ ಈವರೆಗೆ 355 ಕೋಟಿ ರೂ. ಮೌಲ್ಯದ ಸ್ವತ್ತು ಜಪ್ತಿ

ಸದ್ಯ ಲೋಕಸಭಾ ಚುನಾವಣೆ ಹಿನ್ನೆಲೆ ಅಕ್ರಮ ತಡೆಗಟ್ಟಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಕರ್ನಾಟಕದಲ್ಲಿ ಏಪ್ರಿಲ್ 14ರ ವರೆಗೆ 345 ಕೋಟಿ ರೂ. ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ. ಪ್ರಸಕ್ತ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಮಾ.16ರಿಂದ ಏಪ್ರಿಲ್ 14ರ ವರೆಗೆ ಕ್ಷಿಪ್ರ ಪಡೆಗಳು, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಆದಾಯ ತೆರಿಗೆ, ಅಬಕಾರಿ ಅಧಿಕಾರಿಗಳು ರಾಜ್ಯದಲ್ಲಿ ಒಟ್ಟು 355.78 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ಪೈಕಿ ಶೇ.49ರಷ್ಟು ಸ್ವತ್ತುಗಳನ್ನು ಸೂಕ್ತ ದಾಖಲೆ ಪತ್ರ ಆಧರಿಸಿ ವಾರಸುದಾರರಿಗೆ ಹಿಂತಿರುಗಿಸಲಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದರು. ಈವರೆಗೂ ನಡೆದಿರುವ 17 ಲೋಕಸಭಾ ಚುನಾವಣಾ ಇತಿಹಾಸದಲ್ಲೇ ಇಷ್ಟು ದೊಡ್ಡ ಪ್ರಮಾಣದ ನಗದು, ಮದ್ಯ, ಡ್ರಗ್ಸ್ ಪತ್ತೆಯಾಗಿರಲಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

ನಗದು, ಮದ್ಯ, ಡ್ರಗ್ಸ್, ಬೆಲೆ ಬಾಳುವ ಲೋಹ, ಉಚಿತ ಉಡುಗೊರೆಗಳನ್ನು ವಶಪಡಿಸಿಕೊಂಡಿರುವ ಪ್ರಕರಣಗಳಿಗೆ ಸಂಬಂಸಿದಂತೆ 1707 ಎಫ್‍ಐಆರ್​ಗಳು ದಾಖಲಾಗಿವೆ. ಅಬಕಾರಿ ಇಲಾಖೆ ಘೋರ ಅಪರಾಧ ಅಡಿಯಲ್ಲಿ 2,200 ಪ್ರಕರಣಗಳನ್ನು ದಾಖಲಿಸಿದೆ. ಪರವಾನಗಿ ಉಲ್ಲಂಘನೆ ಅಡಿಯಲ್ಲಿ 2,828 ಪುಕರಣ ದಾಖಲಿಸಿದೆ. NDPS ಅಡಿಯಲ್ಲಿ 125 ಪ್ರಕರಣಗಳನ್ನು ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಸೆಕ್ಷನ್ 15(a) ಅಡಿಯಲ್ಲಿ 15,013 ಪ್ರಕರಣಗಳನ್ನು ದಾಖಲಿಸಿದೆ. ಮತ್ತು 1,349 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಬಕಾರಿ ಇಲಾಖೆಯವರು 23,46,000 ರೂ. ಮೌಲ್ಯದ 1,150 ಕೇಸ್ ಪೆಟ್ಟಿಗೆಗಳ ಮದ್ಯವನ್ನು (8,970 Itrs ಬಿಯರ್) KSBCL Depo, ಕೊತ್ತೂರು, ಕಮ್ಮಸಂದ್ರ ಗ್ರಾಮ, ವಿರ್ಗೊ ನಗರ ಅಂಚೆ, ಬೀದರಹಳ್ಳಿ ಹೋಬಳಿ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ, ಬೆಂಗಳೂರು ನಗರ ಜಿಲ್ಲೆ, ಇಲ್ಲಿ ವಶಪಡಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆಯವರು 49,88,275 ರೂ. ಮೌಲ್ಯದ 1,150 ಕೇಸ್ ಪೆಟ್ಟಿಗೆಗಳ ಮದ್ಯವನ್ನು (9,108 Itrs ಬಿಯರ್) KSBCL Depo-1, ಕೆ.ಜಿ ಹಳ್ಳಿ, ನಿವೇಶನ ಸಂಖ್ಯೆ.76,77 ಮತ್ತು 78, ಕಾಡುಗೊಂಡನಹಳ್ಳಿ, ಕಸಬಾ ಹೋಬಳಿ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ, ಬೆಂಗಳೂರು ನಗರ ಜಿಲ್ಲೆ ಇಲ್ಲಿ ವಶಪಡಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆಯವರು ರೂ.46,14,064/- ಮೌಲ್ಯದ 13,800 Itrs ಬಿಯರ್‌ನು, KSBCL Depo-2, ಕೆ.ಜಿ ಹಳ್ಳಿ, ನಿವೇಶನ ಸಂಖ್ಯೆ.76,77 ಮತ್ತು 78, ಕಾಡುಗೊಂಡನಹಳ್ಳಿ, ಕಸಬಾ ಹೋಬಳಿ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ, ಬೆಂಗಳೂರು ನಗರ ಜಿಲ್ಲೆ,ಇಲ್ಲಿ ವಶಪಡಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆಯವರು ರೂ.89,25,507/- ಮೌಲ್ಯದ 1,186.200 Itrs(IML) ಮದ್ಯವನ್ನು, KSBCL Depo-2, ಕೆ.ಜಿ ಹಳ್ಳಿ, ನಿವೇಶನ ಸಂಖ್ಯೆ.76,77 ಮತ್ತು 78, ಕಾಡುಗೊಂಡನಹಳ್ಳಿ, ಕಸಬಾ ಹೋಬಳಿ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ, ಬೆಂಗಳೂರು ನಗರ ಜಿಲ್ಲೆ,ಇಲ್ಲಿ ವಶಪಡಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆಯವರು ರೂ.55,62,739/- ಮೌಲ್ಯದ 7386.120 Itrs((ML) ಮದ್ಯವನ್ನು, KSBCL Depo ದೊಡ್ಡಕಮ್ಮನಹಳ್ಳಿ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ, ಬೆಂಗಳೂರು ನಗರ ಜಿಲ್ಲೆ ಬೆಂಗಳೂರು ಇಲ್ಲಿ ವಶಪಡಿಸಿಕೊಂಡಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಜಪ್ತಿ ಮಾಡಲಾದ ಹಣ ಎಲ್ಲಿಗೆ ಹೋಗುತ್ತೆ?

ಈ ಹಿಂದೆ ಹೇಳಿದಂತೆ ಚುನಾವಣಾ ದಿನಾಂಕ ಮತ್ತು ಅಭ್ಯರ್ಥಿಯ ಘೋಷಣೆಯಾಗುತ್ತಿದ್ದಂತೆ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಪ್ರಚಾರ ಆರಂಭಿಸುತ್ತಾರೆ. ಹತ್ತಾರು ಬಾರಿ ಸಭೆ, ಸಮಾಲೋಚನೆಗಳನ್ನು ನಡೆಸುತ್ತಾರೆ. ರ್‍ಯಾಲಿಗಳು, ಮತದಾರರಿಗಾಗಿ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಇಂತಹ ಸಮಯದಲ್ಲಿ ಅಕ್ರಮ ನಗದು, ಚಿನ್ನ, ಮದ್ಯ ಮತ್ತು ಕಪ್ಪು ಹಣ ಸಾಗಿಸಲಾಗುತ್ತೆ. ಹೀಗಾಗಿ ಪೊಲೀಸರು ಚುನಾವಣಾ ಸಮಯದಲ್ಲಿ ಹೈ ಅಲರ್ಟ್ ಆಗುತ್ತಾರೆ. ಅನುಮಾನ ಬರುವ ವಾಹನಗಳು ಹಾಗೂ ಜನರನ್ನು ನಿಲ್ಲಿಸಿ ತಪಾಸಣೆ ನಡೆಸಿ ವಿಚಾರಣೆ ನಡೆಸುತ್ತಾರೆ.

ಇನ್ನು ಮಾಹಿತಿಗಳ ಪ್ರಕಾರ ಚುನಾವಣೆ ಸಂದರ್ಭದಲ್ಲಿ ಜಪ್ತಿ ಮಾಡಲಾದ ಮದ್ಯವನ್ನು ಒಂದು ಕಡೆ ಶೇಖರಿಸಿ ಇಟ್ಟು ಕೊನೆಗೆ ಅಷ್ಟನ್ನೂ ನಾಶಮಾಡಲಾಗುತ್ತದೆ. ರೋಡ್ ರೋಲರ್‌ನಿಂದ ಪುಡಿಮಾಡಿ ನಾಶಪಡಿಸಲಾಗುತ್ತೆ. ಅಮೆಜಾನ್ ಪ್ರೈಮ್​ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಪೋಚರ್ ಸರಣಿಯಲ್ಲೂ ಕೂಡ ಅರಣ್ಯ ಅಧಿಕಾರಿಗಳು ಕೇರಳದಲ್ಲಿ ಆದ ಆನೆಯ ದಂತ ಕಳ್ಳಸಾಗಣಿಕೆ ಪ್ರಕರಣವನ್ನು ಭೇದಿಸಿ ಕೊನೆಗೆ ವಶ ಪಡಿಸಿಕೊಂಡ ದಂತವನ್ನು ನಾಶಪಡಿಸುವುದಾಗಿ ಘೋಷಿಸುತ್ತಾರೆ. ಅದೇ ರೀತಿ ಚುನಾವಣೆ ವೇಳೆ ವಶಕ್ಕೆ ಪಡೆದ ಮದ್ಯವನ್ನು ನಾಶ ಮಾಡಲಾಗುತ್ತೆ. ಇನ್ನು ನಗದು, ಆಭರಣದ ವಿಷಯಕ್ಕೆ ಬಂದರೆ ಮೊದಲಿಗೆ ಪೊಲೀಸರೇ ತಮ್ಮ ವ್ಯಾಪ್ತಿಯಲ್ಲಿ ಜಪ್ತಿಯಾದ ಹಣದ ಬಗ್ಗೆ ವಿಚಾರಣೆ ನಡೆಸುತ್ತಾರೆ. ಹಣದ ಮೂಲ ಯಾವುದು, ಅದು ಕಪ್ಪು ಹಣವೇ ಎಂದು ತನಿಖೆಗೆ ಇಳಿಯುತ್ತಾರೆ. ಹಣದ ಮೊತ್ತ ಹೆಚ್ಚಿದ್ದರೆ ಅದು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗುತ್ತದೆ.

ಚುನಾವಣೆ ವೇಳೆ ವಶ ಪಡಿಸಿಕೊಂಡ ಹಣ ವಾಪಸ್ ಪಡೆಯಬಹುದಾ?

ಚುನಾವಣೆ ಸಂದರ್ಭದಲ್ಲಿ ಪೊಲೀಸರು, ಅಧಿಕಾರಿಗಳು ವಶಕ್ಕೆ ಪಡೆದ ನಗದು, ಆಭರಣಗಳನ್ನು ಕ್ಲೈಮ್ ಮಾಡಿಕೊಳ್ಳಬಹುದು. ಆದರೆ ಆ ಹಣ ತನ್ನದು ಎಂದು ಸಾಬೀತುಪಡಿಸಬೇಕಾಗುತ್ತೆ. ಮೊದಲಿಗೆ ಹಣ ಅಥವಾ ಒಡವೆ ಜಪ್ತಿ ಮಾಡಿ, ಅದನ್ನು ಆಧಾರವಿಲ್ಲದ ಹಣ ಎಂದು ಕೇಸ್ ಹಾಕಲಾಗುತ್ತೆ. ಎಫ್​ಐಆರ್ ದಾಖಲಾಗುತ್ತೆ. ಹೀಗಾಗಿ ಈ ಪ್ರಕರಣ ಕೋಟಿಗೆ ಹೋಗುತ್ತೆ. ಬಳಿಕ ವ್ಯಕ್ತಿ ಆ ಹಣಕ್ಕೆ ಅಥವಾ ಆ ಒಡವೆಗೆ ಸರಿಯಾದ ಆಧಾರವನ್ನು ಸಲ್ಲಿಸಿ ಇದು ಅಕ್ರಮವಾಗಿ ಗಳಿಸಿದಲ್ಲ, ಅಥವಾ ಯಾವ ಪಕ್ಷದ ಹಣವೂ ಅಲ್ಲ ಎಂದು ಸಂಪೂರ್ಣ ಮಾಹಿತಿಯನ್ನು ಪುರಾವೆಯಾಗಿ ಸಲ್ಲಿಸಿದ ನಂತರ ಹಣ, ಒಡವೆಯನ್ನು ಇಲಾಖೆ ಹಿಂತಿರುಗಿಸುತ್ತದೆ. ಸುಮಾರು ಒಂದು ವಾರಗಳ ಕಾಲ ಕೋರ್ಟ್​ನಲ್ಲಿ ಚರ್ಚೆ, ದಾಖಲೆಗಳ ಪರಿಶೀಲನೆ ಬಳಿಕ ನಿಮ್ಮ ವಸ್ತುಗಳು ನಿಮ್ಮ ಕೈ ಸೇರುತ್ತವೆ. ಆದರೆ ಮುಟ್ಟುಗೋಲು ಹಾಕಿಕೊಂಡ ಹಣವನ್ನು ಯಾರೂ ಕ್ಲೇಮ್ ಮಾಡದಿದ್ದಲ್ಲಿ ಅದು ಸರ್ಕಾರದ ಖಜಾನೆಗೆ ಜಮೆಯಾಗುತ್ತದೆ. ವ್ಯಕ್ತಿಯು ಸಂಪೂರ್ಣ ಮಾಹಿತಿಯನ್ನು ಪುರಾವೆಯಾಗಿ ಪ್ರಸ್ತುತಪಡಿಸಿದರೆ ಮಾತ್ರ ಹಣವನ್ನು ಹಿಂತಿರುಗಿಸಲಾಗುತ್ತದೆ. ಪುರಾವೆಗಾಗಿ, ಎಟಿಎಂ ವಹಿವಾಟು, ಬ್ಯಾಂಕ್ ರಸೀದಿ ಮತ್ತು ಪಾಸ್‌ಬುಕ್‌ನಲ್ಲಿ ನಿಖರ ಮಾಹಿತಿಯನ್ನು ಹೊಂದಿರಬೇಕು. ಲೋಕಸಭಾ, ವಿಧಾನಸಭಾ ಯಾವುದೇ ಚುನಾವಣೆಯಾದರೂ ಇದೇ ನಿಯಮ ಅನ್ವಯವಾಗುತ್ತದೆ.

Continue Reading
Click to comment

Leave a Reply

Your email address will not be published. Required fields are marked *

Special

ಸಾಂದೀಪನಿ ಶಿಷ್ಯವೇತನ ಯೋಜನೆ 2025-26| 1.15 ರೂ. ಲಕ್ಷವರೆಗೆ ಸಹಾಯಧನ : ಅರ್ಜಿ ಆಹ್ವಾನ

Published

on

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ 2025–26ನೇ ಸಾಲಿನ ಸಾಂದೀಪನಿ ಶಿಷ್ಯವೇತನ ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಸುಗಮಗೊಳಿಸಿ ನಿರ್ವಹಣಾ ವೆಚ್ಚದ ಬಾಧೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆ ಪ್ರತಿ ವರ್ಷ ಜಾರಿಗೆ ಬರುತ್ತಿದೆ.

ಸಹಾಯಧನದ ವಿವರ:
* PUC, ಡಿಪ್ಲೋಮಾ ಮತ್ತು ಸಾಮಾನ್ಯ ಪದವಿ ವಿದ್ಯಾರ್ಥಿಗಳಿಗೆ ತಿಂಗಳಿಗೆ ₹1,500 × 10 ತಿಂಗಳು = ₹15,000 ವರ್ಷಕ್ಕೆ
* ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆದವರಿಗೆ ಗರಿಷ್ಠ ₹1 ರಿಂದ ₹1.5 ಲಕ್ಷದವರೆಗೆ ಸಹಾಯ

ಯಾರು ಅರ್ಹರು?:
* ಕರ್ನಾಟಕದ ನಿವಾಸಿ ಹಾಗೂ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು
* ಕುಟುಂಬದ ವಾರ್ಷಿಕ ಆದಾಯ ₹8 ಲಕ್ಷಕ್ಕಿಂತ ಕಡಿಮೆ
* ಹಿಂದಿನ ವರ್ಷ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು
* ಒಂದೇ ಕುಟುಂಬದಲ್ಲಿ ಗಂಡು ಮಕ್ಕಳಿಗೆ ಎರಡು ಮಂದಿಗೆ ಮಾತ್ರ ಶಿಷ್ಯವೇತನ; ಹೆಣ್ಣುಮಕ್ಕಳಿಗೆ ಮಿತಿ ಇಲ್ಲ

ಅಗತ್ಯ ದಾಖಲೆಗಳು
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ಆಧಾರ್ ಕಾರ್ಡ್
* ಹಿಂದಿನ ತರಗತಿಯ ಅಂಕಪಟ್ಟಿ
* ಕಾಲೇಜಿನ ಅಧ್ಯಯನ ಪ್ರಮಾಣ ಪತ್ರ
* ಶುಲ್ಕ ಪಾವತಿ ರಸೀದಿ
* ಬ್ಯಾಂಕ್ ಪಾಸ್‌ಬುಕ್ ನಕಲು

ಅರ್ಜಿ ಸಲ್ಲಿಸುವ ವಿಧಾನ
* ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನಂತರ ಹೊಸ ಖಾತೆ ತೆರೆಯಿರಿ ಅಥವಾ ಲಾಗಿನ್ ಆಗಿ
* ಅಗತ್ಯ ಮಾಹಿತಿ ಹಾಗೂ ದಾಖಲೆಗಳನ್ನು ತುಂಬಿ ಅರ್ಜಿಯನ್ನು ಪೂರ್ಣಗೊಳಿಸಬೇಕು.

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 28 ಫೆಬ್ರವರಿ 2026

ಅಧಿಕೃತ ವೆಬ್‌ಸೈಟ್‌:
•https://ssp.postmatric.karnataka.gov.in
•ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ: kbrahman.org

ಸಾಂದೀಪನಿ ಶಿಷ್ಯವೇತನ ಯೋಜನೆ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳಿಗೆ ಮಹತ್ತರ ಅವಕಾಶ. ಶುಲ್ಕ ಮರುಪಾವತಿ ಮತ್ತು ನಿರ್ವಹಣಾ ಭತ್ಯೆ ಸೇರಿ 1.15 ರೂ.ಲಕ್ಷವರೆಗೆ ನೆರವು ದೊರೆಯುವುದರಿಂದ ಉನ್ನತ ಶಿಕ್ಷಣದ ಬಾಧೆ ಬಹಳ ಮಟ್ಟಿಗೆ ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ.

Continue Reading

Special

14.21 ಲಕ್ಷ ರೈತರಿಗೆ ಬೆಳೆ ಹಾನಿ ಪರಿಹಾರ ವಿತರಣೆ: ರಾಜ್ಯ ಸರ್ಕಾರದ ಮಹತ್ವದ ಘೋಷಣೆ

Published

on

ರಾಜ್ಯದಲ್ಲಿ ಹಲವಾರು ಜಿಲ್ಲೆಗಳಲ್ಲಿ ಸಂಭವಿಸಿದ ಅತಿಯಾದ ಮಳೆ ಬಿರುಗಾಳಿ ಬರ ಪರಿಸ್ಥಿತಿಯಿಂದಾಗಿ ರೈತರು ಎದುರಿಸಿದ ಆರ್ಥಿಕ ನಷ್ಟಕ್ಕೆ ಪರಿಹಾರ ನೀಡಲು ಸರ್ಕಾರ ದೊಡ್ಡ ಮಟ್ಟದ ಕ್ರಮ ಕೈಗೊಂಡಿದೆ. ಕೃಷಿ ಮತ್ತು ಆದಾಯ ನಷ್ಟಕ್ಕೆ ಒಳಗಾದ 14.21 ಲಕ್ಷ ರೈತರಿಗೆ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಪರಿಹಾರಕ್ಕೆ ಮುಖ್ಯ ಕಾರಣ:
* ಬೆಳೆ ನಾಶ
* ಮಣ್ಣು ಕೊಚ್ಚಿ ಹೋಗುವುದು
* ನೀರಿನ ಕೊರತೆ
* ಅತಿಯಾದ ಮಳೆಯ ಪರಿಣಾಮದ ಹಾವಳಿ
ಇವುಗಳಿಂದ ರೈತರಿಗೆ ದೊಡ್ಡ ಮಟ್ಟದ ಹಾನಿ ಸಂಭವಿಸಿತ್ತು.

ಪರಿಹಾರ ಪಡೆಯಲು ಅರ್ಹರು:
•ಸಂಬಂಧಿತ ತಾಲೂಕಿನಲ್ಲಿ ನೈಜವಾಗಿ ಬೆಳೆ ಹಾನಿ ದೃಢಪಟ್ಟ ರೈತರು
•FRUITS / e-Kshana / Parihara ಪೋರ್ಟ್‌ಲಲ್ಲಿ ನೋಂದಣಿ ಹೊಂದಿರುವವರು
•ಭೂಮಿ ಹೊಂದಿರುವ ರೈತರು

ಸಚಿವರ ಹೇಳಿಕೆ:
ಕಂದಾಯ ಸಚಿವರು ತಿಳಿಸಿದಂತೆ “ರೈತರು ಸಂಕಷ್ಟದಲ್ಲಿರುವಾಗ ಸರ್ಕಾರ ಕೈಕಟ್ಟಿ ಕೂತಿರುವುದಿಲ್ಲ. ಶೀಘ್ರವಾದ ಪರಿಹಾರ ವಿತರಣೆಯ ಮೂಲಕ ಕೃಷಿಕ ಕುಟುಂಬಗಳಿಗೆ ನೆರವಾಗಿ ಅವರ ಜೀವನೋಪಾಯವನ್ನು ಬಲಪಡಿಸುವುದು ನಮ್ಮ ಧ್ಯೇಯ.”

ಯಾವ ದಾಖಲೆಗಳನ್ನು ಪರಿಶೀಲಿಸಲಾಗುವುದು?
•RTC / ಭೂ ಹಕ್ಕಿನ ದಾಖಲೆ
•ಬೆಳೆ ನಾಶದ ಪಂಚನಾಮಾ
•FRUITS ID
•ಬ್ಯಾಂಕ್ ಖಾತೆ ಮಾಹಿತಿಗಳು

ಪರಿಹಾರ ಪಡೆಯಲು ರೈತರು ಏನು ಮಾಡಬೇಕು?
•ರೈತರು ಯಾವುದೇ ಹೊಸ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.
* ತಮ್ಮ FRUITS ಪೋರ್ಟಲ್ ವಿವರಗಳನ್ನು ಪರಿಶೀಲಿಸಬೇಕು
* ಬ್ಯಾಂಕ್ ಖಾತೆ ಆಧಾರ್–DBT ಲಿಂಕ್ ಇದ್ದರೆ ಹಣ ನೇರವಾಗಿ ಜಮೆಯಾಗುತ್ತದೆ
* ಮೊತ್ತ ಜಮೆಯಾದ ನಂತರ SMS ಮೂಲಕ ಮಾಹಿತಿ ಬರುತ್ತದೆ

ಅಧಿಕೃತ ವೆಬ್‌ಸೈಟ್‌:
•FRUITS ಪೋರ್ಟಲ್:
https://fruits.karnataka.gov.in
•ಕೃಷಿ ಸಂಬಂಧಿತ ಮಾಹಿತಿ: https://raitamitra.karnataka.gov.in

ರಾಜ್ಯ ಸರ್ಕಾರದ ಈ ಹೆಜ್ಜೆ ಬೆಳೆ ನಷ್ಟದಿಂದ ಬೇಸತ್ತುಬಿಟ್ಟ ರೈತರಿಗೆ ಧೈರ್ಯ ತುಂಬುವಂತದ್ದಾಗಿದೆ. ರೈತ ಕುಟುಂಬಗಳು ಸಂಕಷ್ಟದಿಂದ ಹೊರಬರಲು ಇದು ಪ್ರಮುಖ ನೆರವಿನ ಕೈ ಆಗಿದೆ ಎಂದು ಹೇಳಬಹುದು.

Continue Reading

State

ದ್ವೇಷ ಭಾಷಣ, ದ್ವೇಷ ಅಪರಾಧಗಳ ವಿಧೇಯಕ ಮಂಡಿಸಿದ ಡಾ.ಜಿ.ಪರಮೇಶ್ವರ್

Published

on

ಬೆಳಗಾವಿ: ವಿಧಾನಸಭೆಯಲ್ಲಿ ಇಂದು ಕರ್ನಾಟಕ ದ್ವೇಷ ಭಾಷಣ  ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಬೆಳಗಾವಿಯ ಸುವರ್ಣಸೌಧದಲ್ಲಿ ಇಂದು  ವಿಧೇಯಕ ಮಂಡಿಸಿದ ಅವರು, ದ್ವೇಷ ಭಾಷಣ, ದ್ವೇಷ ಅಪರಾಧಗಳಿಗೆ ಕನಿಷ್ಠ 1 ವರ್ಷ, ಗರಿಷ್ಠ 7 ವರ್ಷದವರೆಗೆ ಜೈಲು, 50 ಸಾವಿರ ರೂ. ದಂಡ ಹಾಕುವ ವಿಧೇಯಕ ಇದಾಗಿದ್ದು, ದ್ವೇಷ ಭಾಷಣಗಳಿಗೆ ನೋಂದಾಯಿತ ಅಥವಾ ನೋಂದಾಯಿತವಲ್ಲದ ಸಂಘ ಸಂಸ್ಥೆಗಳೂ ಹೊಣೆಗಾರರಾಗಿರುತ್ತಾರೆ ಎಂದು ವಿಧೇಯಕದಲ್ಲಿ ಕಾನೂನು ತರಲಾಗಿದೆ ಎಂದು ಮಾಹಿತಿ ನೀಡಿದರು.

ಆದರೆ ಬಿಜೆಪಿ ಅದನ್ನು ವಿರೋಧಿಸಿದೆ. ಈಗಾಗಲೇ ಸಾಕಷ್ಟು ವಿವಾದ ಸೃಷ್ಟಿಸಿರುವ ವಿಧೇಯಕ ಬೇಡವೇ ಬೇಡ, ಅಂಗೀಕಾರ ಪ್ರಕ್ರಿಯೆ ವೇಳೆ ಮತಕ್ಕೆ ಹಾಕಬೇಕೆಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಆಗ್ರಹಿಸಿದರು.

ಇನ್ನು ದ್ವೇಷ ಭಾಷಣ ನಿಯಂತ್ರಣ ವಿಧೇಯಕ ಮಂಡನೆ ವೇಳೆ ವಿಧಾನಸಭೆಯಲ್ಲಿ ಮೈಕ್ ಕೈ ಕೊಟ್ಟು ಕಲಾಪ ಮುಂದೂಡಿದ ಘಟನೆಯೂ ನಡೆಯಿತು. ನಂತರ ಮೈಕ್ ಸರಿಪಡಿಸಿ ಕಲಾಪ ಪುನಃ ಪ್ರಾರಂಭಿಸಿ ಪರಮೇಶ್ವರ್ ವಿಧೇಯಕ ಮಂಡಿಸಿದರು.

ವಿಧೇಯಕದಲ್ಲಿ ಏನಿದೆ?

1. ದ್ವೇಷ ಭಾಷಣ ಪ್ರಸರಣೆ, ಪ್ರಕಟಣೆ, ಪ್ರಚಾರ ತಡೆಯಲು ವಿಧೇಯಕ.
2.  ನಿರ್ದಿಷ್ಟ ವ್ಯಕ್ತಿ, ಸಮೂಹ, ಸಂಸ್ಥೆಗಳ ವಿರುದ್ಧ ದ್ವೇಷ ಹುಟ್ಟಿಸುವ ಅಪರಾಧಗಳ ತಡೆಗೆ ವಿಧೇಯಕ.
3. ಮೊದಲ ಬಾರಿಗೆ ದ್ವೇಷ ಭಾಷಣ, ದ್ವೇಷ ಅಪರಾಧಗಳಿಗೆ ಕನಿಷ್ಠ 1 ವರ್ಷ, ಗರಿಷ್ಠ 7 ವರ್ಷದವರೆಗೆ ಜೈಲು, 50 ಸಾವಿರ ರೂ. ದಂಡ.
4. ಅಪರಾಧ ಪುನರಾವರ್ತನೆ ಆದರೆ ಕನಿಷ್ಠ 2 ವರ್ಷದಿಂದ ಗರಿಷ್ಠ 10 ವರ್ಷದವರೆಗೆ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ.
5. ದ್ವೇಷ ಭಾಷಣ ಮಾಡಿ ಕೇಸ್ ಬಿದ್ದರೆ ಅದು ಜಾಮೀನು ರಹಿತ ಪ್ರಕರಣ.
6.  ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ಮೂಲಕ ದ್ವೇಷ ಭಾಷಣಗಳ ವಿಚಾರಣೆ ಮಾಡಬೇಕು.
7. ದ್ವೇಷ ಭಾಷಣಗಳ ಪ್ರಕರಣಗಳನ್ನು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅಥವಾ ಉಪಪೊಲೀಸ್ ವರಿಷ್ಠಾಧಿಕಾರಿ ದರ್ಜೆಗಿಂತ ಕಡಿಮೆ ಇಲ್ಲದ ಯಾರೇ ಪೊಲೀಸ್ ಅಧಿಕಾರಿಯು ಮಾಹಿತಿ ಸ್ವೀಕರಿಸಿದರೆ ವಿಚಾರಣೆ ಮಾಡಿ ಕಾಯ್ದೆಯಡಿ ಕ್ರಮ ಕೈಗೊಳ್ಳಬಹುದು.
8. ಈ ಕಾಯ್ದೆಯಡಿ ದ್ವೇಷ ಭಾಷಣಗಳಿಗೆ ನೋಂದಾಯಿತ ಅಥವಾ ನೋಂದಾಯಿತವಲ್ಲದ ಸಂಘ ಸಂಸ್ಥೆಗಳೂ ಹೊಣೆಗಾರರಾಗಿರುತ್ತಾರೆ.
9. ದ್ವೇಷ ಭಾಷಣಗಳ ಕಂಟೆಂಟ್‌ಗಳನ್ನು ಡೊಮೈನ್‌ನಿಂದ ಬ್ಲಾಕ್ ಮಾಡುವ ಅಥವಾ ತೆಗೆದು ಹಾಕುವ ಅಧಿಕಾರವೂ ಗೊತ್ತುಪಡಿಸಿದ ಅಧಿಕಾರಿಗಳಿಗೆ ವಿಧೇಯಕ ನೀಡಿದೆ.

Continue Reading

Trending

error: Content is protected !!