National - International
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ವಿಶ್ವಕಪ್ ಕ್ರಿಕೆಟ್ ಟೂರ್ನಿಯಿಂದ ಹೊರಬಿದ್ದಿದ್ದಾರೆ

ಕೋಲ್ಕತ್ತ : ಪಾದದ ಗಾಯದಿಂದಾಗಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ವಿಶ್ವಕಪ್ ಕ್ರಿಕೆಟ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಕನ್ನಡಿಗ, ವೇಗಿ ಪ್ರಸಿದ್ಧ ಕೃಷ್ಣ ಅವರಿಗೆ ತಂಡಕ್ಕೆ ಸೇರ್ಪಡೆ ಮಾಡಲಾಗಿದೆ.
ಪುಣೆಯಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪಾಂಡ್ಯ ಅವರ ಕಾಲು ಉಳುಕಿ ಗಾಯವಾಗಿತ್ತು. ಆದರೆ, ನಂತರ ಚಿಕಿತ್ಸೆಯಲ್ಲಿ ಅವರು ಪೂರ್ಣ ಚೇತರಿಸಿಕೊಂಡಿಲ್ಲ. ಪಾದದಲ್ಲಿ ಉರಿಯೂತ ಕಡಿಮೆಯಾಗದ ಕಾರಣ ಅವರಿಗೆ ದೀರ್ಘ ವಿಶ್ರಾಂತಿಗಾಗಿ ವೈದ್ಯರು ಸಲಹೆ ನೀಡಿದ್ದಾರೆ.
17 ಏಕದಿನ ಪಂದ್ಯಗಳನ್ನು ಆಡಿರುವ ಪ್ರಸಿದ್ಧ ಅವರನ್ನು ತಂಡಕ್ಕೆ ಸೇರಿಸಲಾಗಿದೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
‘ಈ ಪರಿಸ್ಥಿತಿಯನ್ನು ಅರಗಿಸಿಕೊಳ್ಳುವುದು ಬಹಳ ಕಷ್ಟವಾಗುತ್ತಿದೆ. ವಿಶ್ವಕಪ್ ಟೂರ್ನಿಯಿಂದ ಹೊರಗುಳಿಯುವುದರಿಂದ ಮನಸ್ಸಿಗೆ ಬಹಳ ನೋವಾಗಿದೆ. ಆದರೆ ನಮ್ಮ ತಂಡದ ಗೆಲುವಿಗಾಗಿ ಸದಾ ಆಶಿಸುತ್ತೇನೆ. ತಂಡದ ಎಲ್ಲರೂ ನನ್ನ ಮೇಲೆ ತೋರಿರುವ ಪ್ರೀತಿ, ವಿಶ್ವಾಸ ಮತ್ತು ಸ್ನೇಹ ಅಮೂಲ್ಯವಾದದ್ದು. ಅವರೆಲ್ಲರಿಗೂ ಕೃತಜ್ಞತೆಗಳು’ ಎಂದು ಹಾರ್ದಿಕ್ ‘ಎಕ್ಸ್’ ಖಾತೆಯಲ್ಲಿ ಸಂದೇಶ ಹಾಕಿದ್ದಾರೆ.
National - International
ಹಣಕಾಸು ವಂಚನೆಯಲ್ಲಿ ಭಾಗಿಯಾಗಿದ್ದ 70 ಲಕ್ಷ ಮೊಬೈಲ್ ಸಂಪರ್ಕ ಕಡಿತ

ಡಿಜಿಟಲ್ ವಂಚನೆಗಳನ್ನು ಪರಿಶೀಲಿಸಲು, ಸೈಬರ್ ಅಪರಾಧ ಅಥವಾ ಹಣಕಾಸು ವಂಚನೆಗಳಲ್ಲಿ ಭಾಗಿಯಾಗಿರುವ 70 ಲಕ್ಷ ಮೊಬೈಲ್ ಸಂಖ್ಯೆಗಳನ್ನು ಸರ್ಕಾರ ಕಡಿತಗೊಳಿಸಿದೆ ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ವಿವೇಕ್ ಜೋಶಿ ಹೇಳಿದ್ದಾರೆ.
ಹಣಕಾಸು ಸೈಬರ್ ಭದ್ರತೆ ಮತ್ತು ಹೆಚ್ಚುತ್ತಿರುವ ಡಿಜಿಟಲ್ ಪಾವತಿ ವಂಚನೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಈ ನಿಟ್ಟಿನಲ್ಲಿ ವ್ಯವಸ್ಥೆ ಮತ್ತು ಪ್ರಕ್ರಿಯೆಗಳನ್ನು ಬಲಪಡಿಸಲು ಬ್ಯಾಂಕುಗಳನ್ನು ಕೇಳಲಾಗಿದೆ ಎಂದು ಹೇಳಿದರು. ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್ಫಾರ್ಮ್ಗಳ ಮೂಲಕ ವರದಿಯಾದ ಸೈಬರ್ ಅಪರಾಧ / ಆರ್ಥಿಕ ವಂಚನೆಗಳಲ್ಲಿ ಭಾಗಿಯಾಗಿರುವ 70 ಲಕ್ಷ ಮೊಬೈಲ್ ಸಂಪರ್ಕಗಳನ್ನು ಇಲ್ಲಿಯವರೆಗೆ ಕಡಿತಗೊಳಿಸಲಾಗಿದೆ ಎಂದಿದ್ದಾರೆ.
ಸುಮಾರು 900 ಕೋಟಿ ರೂ.ಗಳ ವಂಚನೆಗೊಳಗಾದ ಹಣವನ್ನು ಉಳಿಸಲಾಗಿದ್ದು, 3.5 ಲಕ್ಷ ಸಂತ್ರಸ್ತರಿಗೆ ಪ್ರಯೋಜನವಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಇತ್ತೀಚೆಗೆ ವರದಿಯಾದ ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (ಎಇಪಿಎಸ್) ವಂಚನೆಗೆ ಸಂಬಂಧಿಸಿದಂತೆ, ಈ ವಿಷಯವನ್ನು ಪರಿಶೀಲಿಸಲು ಮತ್ತು ಡೇಟಾ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರಾಜ್ಯಗಳನ್ನು ಕೇಳಲಾಗಿದೆ ಎಂದು ಅವರು ಹೇಳಿದರು.
National - International
ಉತ್ತರಕಾಶಿ ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಕಾರ್ಮಿಕರ ರಕ್ಷಣೆ : 17 ದಿನಗಳ ಕಾರ್ಯಾಚರಣೆ ಯಶಸ್ವಿ

ಕಳೆದ 17 ದಿನಗಳಿಂದ ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾದ ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ಇಂದು (ನ.28) ಸಂಜೆ 8 ಗಂಟೆ ಸುಮಾರಿಗೆ ಯಶಸ್ವಿಯಾಗಿ ರಕ್ಷಿಸಲಾಗಿದೆ; ಸ್ಟ್ರೆಚರ್ ಮೂಲಕ ಒಬ್ಬೊಬ್ಬರನ್ನೇ ಕರೆತರಲಾಗುತ್ತಿದೆ.
ಭಾರತೀಯ ಸೇನೆಯ ಸುರಂಗ ತಜ್ಞರ ತಂಡ, ಅಂತಾರಾಷ್ಟ್ರೀಯ ಸುರಂಗ ತಜ್ಞರು ಹಾಗೂ ರಾಷ್ಟ್ರೀಯ ವಿಪತ್ತು ಕಾರ್ಯನಿರ್ವಹಣಾ ಪಡೆಯ (ಎನ್ಡಿಆರ್ಎಫ್) ಕಾರ್ಯಾಚರಣೆಯಲ್ಲಿ ಸುರಂಗದಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರನ್ನು ಯಶ್ವಸಿಯಾಗಿ ರಕ್ಷಿಸಲಾಗಿದೆ. 41 ಕಾರ್ಮಿಕರ ರಕ್ಷಣೆಗೆ ಯಂತ್ರ ಬಳಸದೆ 6 ಮಂದಿ ರ್ಯಾಟ್ ಹೋಲ್ ಮೈನರ್ಗಳು (ಒಬ್ಬ ವ್ಯಕ್ತಿಗಷ್ಟೇ ಹೋಗಿ ಬರಲು ಸಾಧ್ಯವಾಗುವಂಥ ಕಿರಿದಾದ
ಗುಂಡಿಗಳನ್ನು ಅಗೆಯುವವರು) ಸುರಂಗ ಕೊರೆಯುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಇದರ ಜೊತೆಗೆ ಏಕಕಾಲದಲ್ಲಿ, ಸುರಂಗದ ಮೇಲಿನಿಂದ ಲಂಬ ಕೊರೆಯುವಿಕೆಯನ್ನೂ ಮುಂದುವರಿಸಲಾಗಿತ್ತು.
ಆರೋಗ್ಯದ ಹಿತದೃಷ್ಟಿಯಿಂದ ಸುರಂಗದಿಂದ ಹೊರಬಂದ ಎಲ್ಲ ಕಾರ್ಮಿಕರನ್ನು ಏರ್ ಲಿಫ್ಟ್ ಮಾಡಿ ಚಿನ್ಯಾಲಿಸೌರ್ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಚಾರ್ಧಾಮ್ ಸರ್ವಋತು ರಸ್ತೆ ಯೋಜನೆಯಡಿ ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾದಲ್ಲಿ ನಿರ್ಮಿಸುತ್ತಿರುವ ಸುರಂಗದ ಕೆಲಭಾಗಗಳು ಕಳೆದ ಶನಿವಾರ (ನ.12) ಕುಸಿದು, 41 ಕಾರ್ಮಿ ಕರು ಸಿಲುಕಿಕೊಂಡಿದ್ದರು.
ವಾಕಿಟಾಕಿ, ರೇಡಿಯೊ ಮೂಲಕ ಕಾರ್ಮಿಕರೊಂದಿಗೆ ಸಂವಹನ ನಡೆಸಲಾಗುತ್ತಿದ್ದು, ನಿರಂತರವಾಗಿ ವಿದ್ಯುತ್, ಆಮ್ಲಜನಕ, ಆಹಾರ, ನೀರು ಪೂರೈಸಲಾಗುತ್ತಿತ್ತು.
ಕಾರ್ಮಿಕರಿಗೆ ಸಾಕಷ್ಟು ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ತಲುಪಿಸುವ ಉದ್ದೇಶದಿಂದ ಸುರಂಗದಲ್ಲಿ ಕಳೆದ 17 ದಿನಗಳಿಂದ ಅವಶೇಷಗಳ ನಡುವೆ 39 ಮೀಟರ್ (128 ಅಡಿ) ದೂರ ಕೊರೆಯಲಾಗಿತ್ತು.
ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಗಾಗಿ ವಾಯುಪಡೆ ಮೂಲಕ ದೆಹಲಿಯಿಂದ ರಂಧ್ರ ಕೊರೆಯುವ ವಿಶೇಷ ಯಂತ್ರವನ್ನು ಗುರುವಾರ (ನ.16) ತರಲಾಗಿತ್ತು. ಈ ಯಂತ್ರದ ಮೂಲಕ ಸುರಂಗದಲ್ಲಿ ರಂಧ್ರ ಕೊರೆಯುವ ಕಾರ್ಯಾಚರಣೆಗೆ ಚಾಲನೆ ನೀಡಲಾಗಿತ್ತು.
ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ವಿಫಲವಾಗಿದ್ದರಿಂದ ಭಾರತೀಯ ವಾಯುಪಡೆಯು ಗುರುವಾರ ಸಿ–130 ಹರ್ಕ್ಯುಲಸ್ ಸಾಗಣೆ ವಿಮಾನಗಳ ಮೂಲಕ ಹೊಸ ಯಂತ್ರವನ್ನು ದೆಹಲಿಯಿಂದ ಉತ್ತರಕಾಶಿಗೆ ಸಾಗಿಸಿತ್ತು.
ಈ ಯಂತ್ರ ಅಮೆರಿಕದಲ್ಲಿ ತಯಾರಾಗಿತ್ತು. ರಕ್ಷಣಾ ಕಾರ್ಯಾಚರಣೆಗೆ ಅಂತಾರಾಷ್ಟ್ರೀಯ ಸುರಂಗ ತಜ್ಞರನ್ನು ಕರೆಸಲಾಗಿತ್ತು. ಅಮೆರಿಕ ಯಂತ್ರವೂ ಕೂಡ ವಿಫಲವಾಗಿತ್ತು. ಅಲ್ಲದೆ ಸುರಂಗ ಕೊರೆಯುವ ಅಗರ್ ಯಂತ್ರದ ಬ್ಲೇಡುಗಳು ಮುರಿದು ಅವಶೇಷಗಳಡಿ ಸಿಲುಕಿಕೊಂಡಿತ್ತು. ಇದಕ್ಕಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗಿರುವ ಅವಶೇಷಗಳನ್ನು ಕೊರೆಯಲು ಹೈದರಾಬಾದ್ನಿಂದ ಪ್ಲಾಸ್ಮಾ ಕಟ್ಟರ್ ಯಂತ್ರವನ್ನು ತರಲಾಗಿತ್ತು.
ರ್ಯಾಟ್ ಹೋಲ್ ಮೈನರ್ಗಳಿಂದ ಕೈಯಿಂದ ಕೊರೆತ
6 ಮಂದಿ ರ್ಯಾಟ್ ಹೋಲ್ ಮೈನರ್ಗಳ (ಒಬ್ಬ ವ್ಯಕ್ತಿಗಷ್ಟೇ ಹೋಗಿ ಬರಲು ಸಾಧ್ಯವಾಗುವಂಥ ಕಿರಿದಾದ
ಗುಂಡಿಗಳನ್ನು ಅಗೆಯುವವರು) ತಂಡವು ಸೋಮವಾರ ಸ್ಥಳಕ್ಕೆ ಆಗಮಿಸಿತ್ತು. ಈ ತಂಡದ ಪ್ರತಿ ಸದಸ್ಯನು ಒಂದು ಬಾರಿಗೆ ಒಬ್ಬನಂತೆ ಸುರಂಗದ ಅವಶೇಷಗಳ ಒಳಗೆ ತೂರಿಸಲಾಗಿರುವ 800 ಎಂಎಂ ವ್ಯಾಸದ ಪೈಪಿನೊಳಗೆ ಹೋಗಿ, ಸನಿಕೆಯ ಮೂಲಕ ಕೈಯಿಂದಲೇ ಅಗೆದಿದ್ದರು. ಇದು ಅತ್ಯಂತ ನಿಧಾನ ಹಾಗೂ ಕಷ್ಟಕರ ಕೆಲಸವಾಗಿದ್ದರೂ, ಕಾರ್ಮಿಕರನ್ನು ತಲುಪಲು ಬಾಕಿಯುಳಿದ ಕೇವಲ 10-12 ಮೀಟರ್ ದೂರವಿರುವ ಕಾರಣ, ಇದುವೇ ಸದ್ಯಕ್ಕಿರುವ ಉತ್ತಮ ಆಯ್ಕೆ ಎಂದು ತಜ್ಞರು ತಿಳಿಸಿದ್ದರು.
ಈ ಯಂತ್ರದಿಂದ ಸುರಂಗದಲ್ಲಿ ಅಡ್ಡಿಯುಂಟಾಗಿರುವ ಕಲ್ಲುಮಣ್ಣುಗಳನ್ನು ಹೊರತೆಗೆಯಲು ಹಾಗೂ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವ ಸುರಂಗ ಕೊರೆಯುವ ಆಗರ್ ಯಂತ್ರದ ಬ್ಲೇಡ್ಗಳನ್ನು ಹೊರತೆಗೆಯಲು ಪ್ಲಾಸ್ಮಾ ಕಟ್ಟರ್ ಯಂತ್ರ ಸಹಾಯ ಮಾಡಿತ್ತು.
ಸುರಂಗ ಕುಸಿದಿದ್ದು ಹೇಗೆ?
4.5 ಕಿಮೀ-ಸುರಂಗವು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಚಾರ್ ಧಾಮ್ ಯೋಜನೆಯ ಭಾಗವಾಗಿದ್ದು, ಉತ್ತರಾಖಂಡದ ನಾಲ್ಕು ಪ್ರಮುಖ ಹಿಂದೂ ಪುಣ್ಯಕ್ಷೇತ್ರಗಳಾದ ಬದರಿನಾಥ್, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ ನಡುವೆ ಎಲ್ಲ ಹವಾಮಾನ ಸಂದರ್ಭದಲ್ಲಿ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಸಿಲ್ಕ್ಯಾರಾ ಸುರಂಗ ಎಂದೂ ಕರೆಯಲ್ಪಡುವ ಈ ಸುರಂಗವು ಉತ್ತರಕಾಶಿ ಜಿಲ್ಲೆಯ ಸಿಲ್ಯಾರಾ ಮತ್ತು ದಂಡಲ್ಗಾಂವ್ ಅನ್ನು ಸಂಪರ್ಕಿಸುವ ಮಾರ್ಗದಲ್ಲಿದೆ.
ಇದು ದ್ವಿಪಥ ಸುರಂಗ ಮತ್ತು ಚಾರ್ ಧಾಮ್ ಯೋಜನೆಯಡಿಯಲ್ಲಿನ ಅತಿ ಉದ್ದದ ಸುರಂಗ ಮಾರ್ಗವಾಗಿದೆ. ಸಿಲ್ಕ್ಯಾರ ಕಡೆಯಿಂದ ಸುಮಾರು 2.4 ಕಿ.ಮೀ ಮತ್ತು ಇನ್ನೊಂದು ಬದಿಯಿಂದ 1.75 ಕಿ.ಮೀ ಮೂಲಕ ಸುರಂಗವನ್ನು ನಿರ್ಮಿಸಲಾಗುತ್ತಿದೆ. ಸುರಂಗವು ಪೂರ್ಣಗೊಂಡ ನಂತರ, ಒಂದು ಗಂಟೆಯ ಪ್ರಯಾಣದ ಸಮಯವನ್ನು ಕಡಿತಗೊಳಿಸುವ ನಿರೀಕ್ಷೆಯಿದೆ. ಸುರಂಗವನ್ನು ನಿರ್ಮಿಸುವ ಯೋಜನೆಯನ್ನು ಹೈದರಾಬಾದ್ ಮೂಲದ ನವಯುಗ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್ ನಡೆಸುತ್ತಿದೆ.
ನವೆಂಬರ್ 12 ರಂದು, ಸಿಲ್ಕ್ಯಾರಾ ಕಡೆಯಿಂದ 205 ಮತ್ತು 260 ಮೀಟರ್ ನಡುವಿನ ಸುರಂಗದ ಒಂದು ಭಾಗ ಕುಸಿದಿದೆ. 260 ಮೀಟರ್ಗಳ ಗಡಿಯಿಂದ ದೂರವಿದ್ದ ಕಾರ್ಮಿಕರು ಸುರಂಗದಲ್ಲಿ ಸಿಲುಕಿಕೊಂಡಿದ್ದರು. ಅದೃಷ್ಟವಶಾತ್, ಅವರು ಸಿಲುಕಿದ್ದ ಸುರಂಗದ ಭಾಗವು ವಿದ್ಯುತ್ ಮತ್ತು ನೀರಿನ ಪೂರೈಕೆಯನ್ನು ಹೊಂದಿದೆ. ಯಾವ ಕಾರಣಕ್ಕೆ ಸುರಂಗ ಕುಸಿಯಿತು ಎಂಬ ವಿವರವನ್ನು ಅಧಿಕಾರಿಗಳು ತಿಳಿಸಿಲ್ಲ. ಆದರೆ ಸುರಂಗ ನಿರ್ಮಿಸುವ ಬೆಟ್ಟದ ಪ್ರದೇಶ ಸುರಂಗ ನಿರ್ಮಾಣಕ್ಕೆ ಯೋಗ್ಯವಿಲ್ಲ ಎಂದು ಭೂವಿಜ್ಞಾನಿಗಳು, ಪರಿಸರವಾದಿಗಳು ಹಲವಾರು ವರ್ಷಗಳಿಂದ ಎಚ್ಚರಿಕೆ ನೀಡುತ್ತಲೇ ಬಂದಿದ್ದರು.
National - International
6ನೇ ಬಾರಿಗೆ ಆಸೀಸ್ ಚಾಂಪಿಯನ್

ಟೀಮ್ ಇಂಡಿಯಾ ನೀಡಿದ್ದ 241 ರನ್ಗಳನ್ನು ಬೆನ್ನತ್ತಿದ ಆಸೀಸ್, 47 ರನ್ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತ್ತಾದರೂ, ಬಳಿಕ ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ಸಮಯೋಚಿತ ಆಟದಿಂದ 43 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಆ ಮೂಲಕ ಟೀಮ್ ಇಂಡಿಯಾ ಮೂರನೇ ಬಾರಿಗೆ ಚಾಂಪಿಯನ್ ಆಗಬೇಕೆಂಬ ಕೋಟ್ಯಂತರ ಭಾರತೀಯರ ಕನಸು ನುಚ್ಚು ನೂರಾಗಿದೆ.
ಆಸೀಸ್ ಪರ ಬ್ಯಾಟಿಂಗ್ನಲ್ಲಿ ಟ್ರಾವಿಸ್ ಹೆಡ್ ಹಾಗೂ ಲಾಬೂಶೈನ್ ಅವರು ನಡೆದ 192 ರನ್ಗಳ ಬೃಹತ್ ಜೊತೆಯಾಟದ ಪರಿಣಾಮ ಟೀಮ್ ಇಂಡಿಯಾ ಸೋಲನುಭವಿಸಿತು. ಟ್ರಾವಿಸ್ ಹೆಡ್ ಶತಕ(137) ಬಾರಿಸಿ ಮಿಂಚಿದರೆ, ಲಾಬೂಶೈನ್ ಔಟಾಗದೆ 58 ರನ್ ದಾಖಲಿಸಿದರು. ಈ ಜೋಡಿ 4ನೇ ವಿಕೆಟ್ಗೆ 192 ರನ್ಗಳ ಜೊತೆಯಾಟ ನಡೆಸಿ, ಆಸ್ಟ್ರೇಲಿಯಾವನ್ನು ವಿಜಯದ ಕಡೆಗೆ ತೆಗೆದುಕೊಂಡು ಹೋದರು.
6ನೇ ಬಾರಿಗೆ ಆಸೀಸ್ ಚಾಂಪಿಯನ್
ಈ ಪ್ರಶಸ್ತಿಯ ಮೂಲಕ ಆಸ್ಟ್ರೇಲಿಯಾ ತಂಡ 6ನೇ ಬಾರಿಗೆ ಚಾಂಪಿಯನ್ ಆಗಿದೆ. ಈ ಮೊದಲು 1987, 1999, 2003, 2007 ಹಾಗೂ 2015ರಲ್ಲಿ ಚಾಂಪಿಯನ್ ಆಗಿತ್ತು.
ವಿಶ್ವಕಪ್ ಟೂರ್ನಿಯುದ್ಧಕ್ಕೂ ಉತ್ತಮ ಪ್ರದರ್ಶನ ತೋರಿದ್ದ ಟೀಮ್ ಇಂಡಿಯಾ, ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ನೀರಸ ಪ್ರದರ್ಶನ ತೋರಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ, ಆಸೀಸ್ನ ಉತ್ತಮ ಕ್ಷೇತ್ರ ರಕ್ಷಣೆ ಹಾಗೂ ಅತ್ಯುತ್ತಮ ಬೌಲಿಂಗ್ನಿಂದ 50 ಓವರ್ಗಳಲ್ಲಿ ಆಲೌಟ್ ಆಗಿ 240 ರನ್ ಗಳಿಸಿ ಆಸ್ಟ್ರೇಲಿಯಾಗೆ ಸಾಧಾರಣ ಗುರಿ ನೀಡಿತ್ತು.
ಅಹಮದಾಬಾದ್ನ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಭಾರತವನ್ನು ಬ್ಯಾಟಿಂಗ್ ಆಹ್ವಾನಿಸಿದ್ದರು.
ಆರಂಭದಲ್ಲಿ ಮೇಲುಗೈ ಸಾಧಿಸಿದ್ದ ಟೀಮ್ ಇಂಡಿಯಾ ಬೌಲರ್ಗಳು
ಬುಮ್ರಾ ಎಸೆದ ಮೊದಲ ಓವರ್ನಲ್ಲೇ ಆಸೀಸ್ನ ಆರಂಭಿಕ ಬ್ಯಾಟರ್ಗಳು 15 ರನ್ಗಳನ್ನು ಬಾಚುವ ಮೂಲಕ ಸ್ಫೋಟಕ ಆರಂಭದ ಮುನ್ಸೂಚನೆ ನೀಡಿದರು. ಆದರೆ ಇದಕ್ಕೆ 2ನೇ ಓವರ್ ಎಸೆದ ಸೆಮಿಫೈನಲ್ ಪಂದ್ಯದ ಹೀರೋ ಮೊಹಮ್ಮದ್ ಶಮಿ ಅವಕಾಶ ನೀಡಲಿಲ್ಲ.
ಮೊಹಮ್ಮದ್ ಶಮಿ ಎಸೆದ 2ನೇ ಓವರ್ನ 2ನೇ ಎಸೆತದಲ್ಲಿ ಸ್ಲಿಪ್ನಲ್ಲಿದ್ದ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡುವ ಮೂಲಕ ಡೇವಿಡ್ ವಾರ್ನರ್ 7 ರನ್ ಬಾರಿಸಿ ಔಟಾದರೆ, ಜಸ್ಪ್ರೀತ್ ಬುಮ್ರಾ ಎಸೆದ 5ನೇ ಓವರ್ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್ ಕೆಎಲ್ ರಾಹುಲ್ಗೆ ಕ್ಯಾಚ್ ನೀಡಿ 15 ಎಸೆತಗಳಲ್ಲಿ 15 ರನ್ ಬಾರಿಸಿದ್ದ ಮಿಚೆಲ್ ಮಾರ್ಷ್ ಔಟಾದರು.
ಆ ಬಳಿಕ ಜಸ್ಪ್ರೀತ್ ಬುಮ್ರಾ ಎಸೆದ 7ನೇ ಓವರ್ನ 4ನೇ ಎಸೆತದಲ್ಲಿ ಆಕರ್ಷಕ ಸ್ಟ್ರೈಡ್ ಡ್ರೈವ್ ಫೋರ್ ಬಾರಿಸಿದ ಸ್ಟೀವ್ ಸ್ಮಿತ್, ಕೊನೆಯ ಎಸೆತದಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದು, 4 ರನ್ ಗಳಿಸಿದ್ದ ಸ್ಟೀವ್ ಸ್ಮಿತ್ ನಿರ್ಗಮಿಸಿದರು. ಆ ಮೂಲಕ ಟೀಮ್ ಇಂಡಿಯಾಗೆ ಜಸ್ಪ್ರೀತ್ ಬುಮ್ರಾ ಮೂರನೇ ಯಶಸ್ಸು ತಂದುಕೊಟ್ಟರು.
ಸ್ಟೀವ್ ಸ್ಮಿತ್ ಎಲ್ಬಿಡಬ್ಲ್ಯೂ ನಿಜವಾಗಿಯೂ ಔಟ್ ಅಲ್ಲ. ರಿವೀವ್ಯೂ ತೆಗೆಯುವ ಅವಕಾಶವಿದ್ದರೂ ಅದನ್ನು ಬಳಸಿಕೊಳ್ಳದೇ, ನೇರವಾಗಿ ಪೆವಿಲಿಯನ್ ಕಡೆಗೆ ತೆರಳಿದರು.
-
Hassan1 month ago
ಮಲಗಿದಲ್ಲಿಯೇ ವ್ಯಕ್ತಿ ಸಾವು
-
Mysore1 month ago
KSRTC BUS – ಚಲಿಸುವಾಗ ನಿಯಂತ್ರಣ ತಪ್ಪಿ ಅಪಘಾತ
-
Crime3 weeks ago
ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
Hassan3 months ago
ಹಾಸನ-ಅರ್ಧ ಗಂಟೆಯಲ್ಲಿ 1 ಲೀಟರ್ ಮದ್ಯ ಕುಡಿಯುವ ಚಾಲೆಂಜ್- ಓರ್ವ ಸಾವು
-
Hassan1 week ago
ಜಿಲ್ಲಾಧಿಕಾರಿ ಕಛೇರಿ ಎಸ್ಡಿಎ ಆತ್ಮಹತ್ಯೆ
-
Mysore1 month ago
ಮಾಂಗಲ್ಯ ಸರ ಅಪಹರಣ, ಪೊಲೀಸ್ ವತಿಯಿಂದ ತಪಾಸಣೆ
-
Hassan2 hours ago
ಕಾಡಾನೆ ದಾಳಿಗೆ ಮೈಸೂರು ದಸರೆಯಲ್ಲಿ ಅಂಬಾರಿ ಹೊತ್ತು ಆನೆ ಅರ್ಜುನ ಬಲಿ
-
Mysore6 days ago
ಗೃಹಲಕ್ಷ್ಮಿ : 1,18,000 ರೂಪಾಯಿ ಹಣ ನಾಡದೇವತೆ ತಾಯಿ ಚಾಮುಂಡೇಶ್ವ ದೇಗುಲಕ್ಕೆ ಅರ್ಪಿಸಿದ ಲಕ್ಷ್ಮೀ ಹೆಬ್ಬಾಳ್ಕರ್.