Hassan
ಡಾ. ಗೋಪಾಲೇಗೌಡ ಮರ್ಕುಲಿ ಕೆ.ಪಿ.ಸಿ.ಸಿ ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷರಾಗಿ ನೇಮಕ
 
																								
												
												
											ಹಾಸನ: ಕೆ.ಪಿ.ಸಿ.ಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ರವರ ಆದೇಶದ ಮೇರೆಗೆ ಹಾಗೂ ಮಾಜಿ ಸಚಿವರು, ಎಐಸಿಸಿ ಸದಸ್ಯರಾದ ಸನ್ಮಾನ್ಯ ಶ್ರೀ ಗಂಡಸಿ ಶಿವರಾಮು ರವರ ಶಿಫಾರಸ್ಸಿನಂತೆ, ಹಾಸನ ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕ ಡಾ. ಗೋಪಾಲೇಗೌಡ ಮರ್ಕುಲಿ ಅವರನ್ನು ಕೆ.ಪಿ.ಸಿ.ಸಿ ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾ. ಗೋಪಾಲೇಗೌಡ ಮರ್ಕುಲಿ ಅವರು ಹೇಳಿದರು.
“ನನಗೆ ನೀಡಲಾದ ಈ ಹೊಸ ಹೊಣೆಗಾರಿಕೆ ಪಕ್ಷದ ಮೇಲಿನ ವಿಶ್ವಾಸದ ಸೂಚಕವಾಗಿದೆ. ಕಾರ್ಮಿಕ ವರ್ಗದ ಹಿತಾಸಕ್ತಿಗಾಗಿ ಹೋರಾಡುವುದೇ ನನ್ನ ಪ್ರಮುಖ ಆದ್ಯತೆ. ರಾಜ್ಯ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾರ್ಗದರ್ಶನದಲ್ಲಿ, ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರ ಸಹಕಾರದೊಂದಿಗೆ ಸಂಘಟನೆ ಬಲಪಡಿಸಲು ಶ್ರಮಿಸುತ್ತೇನೆ. ಕಾರ್ಮಿಕರ ಏಳಿಗೆಗೆ ಹಾಗೂ ಅವರ ಹಕ್ಕುಗಳ ಸಂರಕ್ಷಣೆಗೆ ನಾನು ಬದ್ಧನಾಗಿದ್ದೇನೆ. ಪಕ್ಷದ ತತ್ವ, ನೀತಿ ಹಾಗೂ ಆದರ್ಶಗಳನ್ನು ನೆಲೆಗೊಳಿಸುವ ಕಾರ್ಯದಲ್ಲಿ ಸದಾ ಮುಂಚೂಣಿಯಲ್ಲಿ ಇರುತ್ತೇನೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭ ಕಾಂಗ್ರೆಸ್ ನಾಯಕರಾದ ಹಲವರು ಉಪಸ್ಥಿತರಿದ್ದರು.
Hassan
ಹಾಸನ: ಸಾಹಸಸಿಂಹ ವಿಷ್ಣುವರ್ಧನ್ಗೆ ಕರ್ನಾಟಕ ರತ್ನ ಪ್ರಶಸ್ತಿ ಅಭಿಮಾನಿಗಳ ಸಂಭ್ರಮ
 
														ಹಾಸನ: ರಾಜ್ಯ ಸರ್ಕಾರದಿಂದ ಕನ್ನಡದ ಅಪರೂಪದ ನಟ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರಿಗೆ ಅತ್ಯುನ್ನತ ನಾಗರಿಕ ಗೌರವವಾದ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಹಾಸನ ನಗರದಲ್ಲಿ ಅಭಿಮಾನಿಗಳ ಸಂಭ್ರಮ ಅಬ್ಬರಿಸಿತು.
ನಗರದ ಸಾಲಗಾಮೆ ರಸ್ತೆಯ ಸರಸ್ವತಿ ದೇವಾಲಯ ವೃತ್ತದ ಬಳಿಯ ವಿಷ್ಣುವರ್ಧನ್ ಪ್ರತಿಮೆ ಮುಂದೆ ವಿಷ್ಣುಸೇನಾ ಸಂಘಟನೆಯ ಅಭಿಮಾನಿಗಳು ಸೇರುತ್ತ, ಪುಷ್ಪಾರ್ಚನೆ ಸಲ್ಲಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತೋಷ ವ್ಯಕ್ತಪಡಿಸಿದರು.

ವಿಷ್ಣುಸೇನಾ ಜಿಲ್ಲಾ ಅಧ್ಯಕ್ಷ ಮಹಂತೇಶ್ ಮಾತನಾಡಿ, “ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿರುವುದು ಇಡೀ ರಾಜ್ಯದ ಅಭಿಮಾನಿಗಳಿಗೆ ಹಬ್ಬದ ಕ್ಷಣವಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಸಾಹಸಸಿಂಹರ ಪ್ರತಿಯೊಂದು ಚಿತ್ರವೂ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದೆ. ಬೆಂಗಳೂರಿನಲ್ಲಿ ೧೦ ಗುಂಟೆ ಜಾಗ ನೀಡುವುದಾಗಿ ಸರ್ಕಾರ ಹೇಳಿರುವುದು ಹರ್ಷದ ವಿಚಾರ. ಅದರ ಪೂರ್ಣತೆಗೆ ಎಲ್ಲ ಅಭಿಮಾನಿಗಳು ಒಗ್ಗಟ್ಟಾಗಿ ಹೋರಾಡೋಣ” ಎಂದು ಹೇಳಿದರು.

ಕಲಾವಿದರ ಸಂಘದ ಅಧ್ಯಕ್ಷ ಕುಮಾರ್ ಮಾತನಾಡಿ, ವಿಷ್ಣುವರ್ಧನ್ ಎಂದರೆ ಸಂಸ್ಕಾರದ ವ್ಯಕ್ತಿತ್ವ. ಪರದೆ ಮೇಲೆ ಹೇಗೆ ಯಜಮಾನನಾಗಿ, ಕರುಣಾಮಯಿಯಾಗಿ, ಕರ್ಣನಾಗಿ ನಟಿಸಿದ್ದಾರೋ, ನಿಜ ಜೀವನದಲ್ಲಿಯೂ ಅದೇ ರೀತಿಯ ಸಜ್ಜನಿಕೆಯ ಬದುಕು ನಡೆಸಿದರು. ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವವಾದ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ವಿಷ್ಣುಸೇನಾ ಮುಂದಿನ ದಿನಗಳಲ್ಲಿ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲಿ, ಅವರ ಸ್ಮರಣೆ ಚಿರಶಾಶ್ವತವಾಗಿರಲಿ” ಎಂದು ಹರ್ಷ ವ್ಯಕ್ತಪಡಿಸಿದರು.
ಅಡಿಗಲ್ಲ ಚಂದ್ರು ಮಾತನಾಡಿ, ನಟಿಸಿದಂತೆ ಇನ್ನೂ ಯಾರೂ ನಟಿಸಿಲ್ಲ. ಎಲ್ಲಾ ಪಾತ್ರಗಳಲ್ಲೂ ಜೀವ ತುಂಬಿದವರು. ಅಪಾರ ಹೃದಯವಂತರು. ಕರ್ನಾಟಕ ರತ್ನ ಪ್ರಶಸ್ತಿ ಸಿಕ್ಕಿರುವುದು ರಾಜ್ಯಕ್ಕೆ ಗೌರವದ ವಿಷಯ. ಈ ನಿರ್ಧಾರಕ್ಕೆ ಸರ್ಕಾರಕ್ಕೆ ಧನ್ಯವಾದಗಳು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಷ್ಣುಸೇನೆಯ ಹಿರಿಯ ಕಲಾವಿದರು ಯಲಗುಂದ ಶಾಂತಕುಮಾರ್, ರಘು ನಂದನ್, ತಮ್ಲಾಪುರ ಗಣೇಶ್, ಸುಧಾಕರ್, ಸಮಾಜಸೇವಕ ವಿಜಯಕುಮಾರ್ ಹಾಗೂ ಹಲವಾರು ಅಭಿಮಾನಿಗಳು ಉಪಸ್ಥಿತರಿದ್ದು, “ವಿಷ್ಣುವರ್ಧನ್ ನಮ್ಮ ಹೃದಯಗಳಲ್ಲಿ ಸದಾ ಜೀವಂತ. ಸರ್ಕಾರದ ಈ ನಿರ್ಧಾರ ಅಭಿಮಾನಿಗಳಿಗೆ ಆನಂದದ ಹಬ್ಬ” ಎಂದು ಘೋಷಿಸಿದರು.
Hassan
ಸೆ. 15ಕ್ಕೆ ಒಕ್ಕಲಿಗ ಧರ್ಮ ಮಹಾಸಭಾ
 
														ಹಾಸನ: ಇದೇ ತಿಂಗಳ ಸೆಪ್ಟೆಂಬರ್ 15ರ ಸೋಮವಾರ ಬೆಳಗ್ಗೆ 11 ಗಂಟೆಗೆ ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಒಕ್ಕಲಿಗ ಧರ್ಮ ಮಹಾಸಭಾ ಹಾಸನ ಘಟಕದ ಉದ್ಘಾಟನೆ ಹಾಗೂ ಜನಗಣತಿ ಒಕ್ಕಲಿಗರ ಜಾಗೃತ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕಲಿಗ ಮಹಿಳಾ ಸಂಘದ ಭಾರತಿ ಅವರು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕುಣಿಗಲ್ ತಾಲೂಕು ಕಸಬಾ ಹೋಬಳಿ ಕಿತ್ತಮಂಗಲ ಅರೆ ಶಂಕರ ಮಠದ ಮಠಾಧೀಶರಾದ ಶ್ರೀ ಸಿದ್ದರಾಮಯ್ಯ ಚೈತನ್ಯ ಮಹಾ ಸ್ವಾಮೀಜಿ ಯವರು ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಸಂಸದರಾದ ಶ್ರೇಯಸ್ ಪಟೇಲ್, ಶಾಸಕರಾದ ಸ್ವರೂಪ ಪ್ರಕಾಶ್, ಮಾಜಿ ಶಾಸಕರಾದ ಪ್ರೀತಮ್ ಗೌಡ, ಹಾಸನ ಮಹಾನಗರ ಪಾಲಿಕೆಯ ಮೇಯರ್ ಹೇಮಲತಾ,

ಜಿಲ್ಲಾಧಿಕಾರಿಗಳಾದ ಕೆ ಎಸ್ ಲತಾ ಕುಮಾರಿ, ಎಸ್ ಪಿ ಮೊಹಮ್ಮದ್ ಸುಜಿತ, ತಹಸಿಲ್ದಾರ್ ಗೀತಾ, ಪೌರಾಯುಕ್ತಾರಾದ ಕೃಷ್ಣಮೂರ್ತಿ, ಸಮಾಜ ಸೇವಕರಾದ ಲಕ್ಷ್ಮಣ್ ಗೌಡ, ಕಾಂಗ್ರೆಸ್ ಮುಖಂಡರಾದ ದೇವರಾಜೇಗೌಡರು ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮಕ್ಕೆ ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಈ ಮೂಲಕ ಮನವಿ ಮಾಡುತ್ತಿದ್ದೇನೆ ಎಂದರು. ಜೊತೆಗೆ ಕಾರ್ಯಕ್ರಮದ ದಿನ ಮಾಧ್ಯಮ ಮಿತ್ರರು ಕೂಡ ಆಗಮಿಸಿ ವರದಿ ಮಾಡುವ ಮೂಲಕ ನಮಗೆ ಪ್ರೋತ್ಸಾಹ ನೀಡಬೇಕು ಎಂದು ತಮ್ಮಲ್ಲಿ ಕಳಕಳಿಯ ಮನವಿಯನ್ನು ಮಾಡಿದರು.
ಸುದ್ದಿಗೋಷ್ಠಿಯಲ್ಲಿ ದೇವರಾಜ್, ರಂಗಸ್ವಾಮಿ,ಶ್ರೀನಿವಾಸ್, ನಾಗಲಕ್ಷ್ಮಿ ಉಪಸ್ಥಿತರಿದ್ದರು.
Hassan
ಹಣದ ಆಮಿಷಕ್ಕೆ ಬಲಿಯಾದ ಸರ್ವೆಯರ್, ತೋಟದ ಪೋಡಿ ಸ್ಕೆಚ್ನಲ್ಲಿ ಅಕ್ರಮ ಆರೋಪ : ನ್ಯಾಯ ಕೊಡಿಸುವಂತೆ ಹೆಚ್.ಎನ್. ಬೋಜೇಗೌಡ ಮನವಿ
 
														ಹಾಸನ: ಸಕಲೇಶಪುರ ತಾಲ್ಲೂಕಿನ ಯಸಳೂರು ಹೋಬಳಿ ಗೊದ್ದು ಗ್ರಾಮದಲ್ಲಿ ತೋಟದ ಭೂಮಿ ಸರ್ವೆ ಪ್ರಕ್ರಿಯೆಯಲ್ಲಿ ಸರ್ವೆಯರ್ ಹಣದ ಆಮಿಷಕ್ಕೆ ಒಳಗಾಗಿ ಸುಳ್ಳು ಸ್ಕೆಚ್ ಸಿದ್ಧಪಡಿಸಿರುವುದರಿಂದ ನ್ಯಾಯಾಲಯಕ್ಕೂ ತಪ್ಪು ಮಾಹಿತಿ ನೀಡಲಾಗಿದೆ ಎಂದು ತೋಟ ಮಾಲೀಕರಾದ ಹೆಚ್.ಎನ್. ಬೋಜೇಗೌಡ ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ಹಾಸನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, “ಸರ್ವೆ ನಂ. ೯೩/೨ರಲ್ಲಿ ನನಗೆ ೪.೩೮ ಗುಂಟೆ ತೋಟವಿದೆ. ನನ್ನ ಚಿಕ್ಕಪ್ಪ ಜಿ.ಆರ್. ಮಲ್ಲೇಶ್ ಅವರು ಇದನ್ನು ಒತ್ತುವರಿ ಮಾಡಿಕೊಂಡಿದ್ದು, ಈ ಕುರಿತು ಸಕಲೇಶಪುರ ಸಿವಿಲ್ ಹಿರಿಯ ನ್ಯಾಯಾಲಯದಲ್ಲಿ ದಾವೆ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದ ಆದೇಶದಂತೆ ಸಕಲೇಶಪುರ ಭೂಮಾಪನ ಕಚೇರಿಯಿಂದ ಮನು ಎಂಬ ಸರ್ವೆಯರ್ ತೋಟಕ್ಕೆ ಬಂದು ಮೂಲ ಟಿಪ್ಪಣಿಯಂತೆ ಸರ್ವೆ ಮಾಡುವುದಾಗಿ ಹೇಳಿದ್ದ. ಆದರೆ ಬಳಿಕ ಮಲ್ಲೇಶ್ ಹಾಗೂ ಅವರ ಮಗ ಸಂತೋಷ್ ಇವರ ಒತ್ತಾಯಕ್ಕೆ ಮಣಿದು ಸುಳ್ಳು ಹೇಳಿ ತೋಟದ ಮೂಲ ಸ್ಕೆಚ್ ಇಲ್ಲವೆಂದು ಹೇಳಿ ತಪ್ಪು ವರದಿ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು ಆರೋಪಿಸಿದರು. ಇದರಿಂದ ಕೇವಲ ನಮ್ಮ ಕುಟುಂಬಕ್ಕೆ ಮಾತ್ರವಲ್ಲ, ನ್ಯಾಯಾಲಯದ ಗೌರವಕ್ಕೂ ಧಕ್ಕೆ ತಲುಪಿದೆ. ಸುಮಾರು ಹದಿನೈದು ವರ್ಷಗಳ ಹಿಂದೆ ಮೂಲ ಟಿಪ್ಪಣಿಯಂತೆ ಸರ್ವೆ ನಡೆಸಿ, ಎಲ್ಲಾ ಅಣ್ಣತಮ್ಮಂದಿರ ಒಪ್ಪಿಗೆಯೊಂದಿಗೆ ಕಾನೂನುಬದ್ಧ ದಾಖಲೆಗಳೂ ಸಿದ್ಧವಾಗಿದ್ದವು. ಆದರೆ ಇದೀಗ ಅದನ್ನೇ ನಿರ್ಲಕ್ಷಿಸಿ ಹೊಸ ಸುಳ್ಳು ಸ್ಕೆಚ್ ತಯಾರಿಸಿ ನ್ಯಾಯಾಲಯಕ್ಕೂ ಸಲ್ಲಿಸುವ ಮೂಲಕ ನಮಗೆ ಅಪಾರ ಮಾನಸಿಕ ಕಿರುಕುಳ ಹಾಗೂ ಆರ್ಥಿಕ ಹಾನಿ ಉಂಟಾಗಿದೆ. ಕಳೆದ ಹತ್ತು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ, ಆದರೆ ಅಧಿಕಾರಿಗಳ ಅಕ್ರಮದಿಂದ ನಮ್ಮ ಪರಿಶ್ರಮ ವ್ಯರ್ಥವಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಸರ್ವೆಯರ್ ಮನು ಹಾಗೂ ನಂತರ ನೇಮಿಸಲ್ಪಟ್ಟ ಪುನಿತ್ ಇಬ್ಬರೂ ಮಲ್ಲೇಶ್ ಹಾಗೂ ಅವರ ಮಗ ಸಂತೋಷ್ ಅವರ ಒತ್ತಾಯಕ್ಕೆ ತಲೆಬಾಗಿದ್ದು, ಸತ್ಯವನ್ನು ಬದಲಾಯಿಸಿ ನ್ಯಾಯಾಲಯಕ್ಕೆ ತಪ್ಪು ವರದಿ ನೀಡಿದ್ದಾರೆ. ಇದರಿಂದ ನಮ್ಮ ಹಕ್ಕು ಕಳೆದುಹೋಗುವಂತಾಗಿದೆ. ಸರ್ಕಾರದ ಮೂಲ ದಾಖಲೆಗಳೇ ಇದನ್ನು ಸಾಬೀತು ಮಾಡುತ್ತವೆ. ಆದ್ದರಿಂದ ಇಂತಹ ತಪ್ಪು ಸ್ಕೆಚ್ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸುಳ್ಳು ವರದಿ ಸಲ್ಲಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು, ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಬೋಜೇಗೌಡ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬೋಜೇಗೌಡರ ಪತ್ನಿ ಜ್ಯೋತಿ, ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.
- 
																	   Hassan5 hours ago Hassan5 hours agoರೈಲ್ವೆ ಇಲಾಖೆಯಿಂದ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಸಂಸದ ಶ್ರೇಯಸ್ ಪಟೇಲ್ ಭೇಟಿ 
- 
																	   Chamarajanagar20 hours ago Chamarajanagar20 hours agoಚಾಮರಾಜನಗರ ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರ ಮುಂದುವರೆಸಲು ಸಂಸದ ಸುನೀಲ್ ಬೋಸ್ ಮಾಡಿದ ಮನವಿಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ 
- 
																	   Mandya4 hours ago Mandya4 hours agoಶ್ರೀರಂಗಪಟ್ಟಣ ದಸರಾ ಲೋಗೋ ಬಿಡುಗಡೆ 
- 
																	   Manglore45 minutes ago Manglore45 minutes agoಜಿಲ್ಲಾಮಟ್ಟದ ಖೋ-ಖೋ ಪಂದ್ಯಾವಳಿ: ವಿವೇಕಾನಂದ ಪ.ಪೂ.ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ 
- 
																	   Manglore23 hours ago Manglore23 hours agoವಿದ್ಯಾಭಾರತಿ ರಾಜ್ಯ ಮತ್ತು ಪ್ರಾಂತಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ: ವಿವೇಕಾನಂದ ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯರು ರಾಷ್ಟ್ರಮಟ್ಟಕ್ಕೆ ಆಯ್ಕೆ 
- 
																	   Hassan1 hour ago Hassan1 hour agoಹಾಸನ: ಸಾಹಸಸಿಂಹ ವಿಷ್ಣುವರ್ಧನ್ಗೆ ಕರ್ನಾಟಕ ರತ್ನ ಪ್ರಶಸ್ತಿ ಅಭಿಮಾನಿಗಳ ಸಂಭ್ರಮ 
- 
																	   Hassan5 hours ago Hassan5 hours agoತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಥ್ರೋ ಬಾಲ್ ನಲ್ಲಿ ಪ್ರಥಮ ಸ್ಥಾನ 
- 
																	   Hassan4 hours ago Hassan4 hours agoಮದ್ದೂರು ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಗಲಾಟೆ ಕೇಸ್: ಇನ್ಸ್ ಪೆಕ್ಟರ್ ಶಿವಕುಮಾರ್ ಸಸ್ಪೆಂಡ್ 

 
											 
											 
											 
											 
											