Connect with us

Kodagu

ಶನಿವಾರಸಂತೆ – ಡಿ.10ಕ್ಕೆ ವಿದ್ಯುತ್ ವ್ಯತ್ಯಯ

Published

on

ಮಡಿಕೇರಿ : 66/11 ಕೆ.ವಿ ಶನಿವಾರಸಂತೆ ಮತ್ತು 66/11 ಕೆವಿ ಮಲ್ಲಿಪಟ್ಟಣ ವಿದ್ಯುತ್ ವಿತರಣಾ ಉಪ ಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ಅವಧಿಯ ನಿರ್ವಹಣೆ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿಂದ ಈ ಉಪ ಕೇಂದ್ರದಿಂದ ಹೊರಹೊಮ್ಮುವ ಎಲ್ಲಾ ಮಾರ್ಗಗಳಲ್ಲ್ಲಿ ಡಿಸೆಂಬರ್, 10 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಶನಿವಾರಸಂತೆ ಶಾಖೆಯ ಶನಿವಾರಸಂತೆ ಪಟ್ಟಣ, ಅಪ್ಪ್ಡಶೆಟ್ಟಳ್ಳಿ, ಮಾದ್ರೆ, ಚಿಕ್ಕಕೊಳತ್ತೂರು, ದುಂಡಳ್ಳಿ, ಬೆಂಬಳೂರು, ಬಿಳಹ, ಹಂಡ್ಲಿ, ಕಿತ್ತೂರು, ಸಂಪಿಗೆದಳ, ಮಾದ್ರದಳ್ಳಿ, ಮಣಗಲಿ, ಗೌಡಳ್ಳಿ, ಬೀಟಿಕಟ್ಟೆ, ಶುಂಠಿ, ಶಾಂತ್ವೇರಿ, ಬಸವನಕೊಪ್ಪ, ಕೊಡ್ಲಿಪೇಟೆ ಶಾಖೆಯ ಮುಳ್ಳೂರು, ಗೋಪಾಲಪುರ, ಜಾಗೇನಹಳ್ಳಿ, ನಿಡ್ತ, ಚೌಡೇನಹಳ್ಳಿ, ದೊಡ್ಡಳ್ಳಿ, ಹರೆಹೊಸೂರು, ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬೆಸೂರು ಪಂಚಾಯಿತಿ, ನೀರುಗುಂದ, ನಿಲುವಾಗಿಲು, ದೊಡ್ಡಭಂಡಾರ, ಬ್ಯಾಡಗೊಟ್ಟ, ಕೊಡ್ಲಿಪೇಟೆ ಟೌನ್, ಅವರದಾಳು, ಬೆಂಬಳೂರು, ದೊಡ್ಡಕೊಡ್ಲಿ, ಕ್ಯಾತೆ, ದೊಡ್ಡಕುಂದಾ, ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

 

ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

Continue Reading

Kodagu

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಕರ್ತರಿಗೆ ವಿಮೆ ಸೌಲಭ್ಯ

Published

on

ಮಡಿಕೇರಿ: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ವಿಮೆ ಸೌಲಭ್ಯ ಕಲ್ಪಿಸುವ ಕಾರ್ಯಕ್ರಮಕ್ಕೆ ರಿಪಬ್ಲಿಕ್ ಟಿವಿ ನೆಟ್‌ವರ್ಕ್ ಹಾಗೂ ಹೆಡ್ ಇಂಟರ್ ನ್ಯಾಷನಲ್ ಬಿಸಿನೆಸ್ ಸಂಸ್ಥೆ ಅಧ್ಯಕ್ಷ ಚೇರಂಡ ಕಿಶನ್ ಮಾದಪ್ಪ ಚಾಲನೆ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ವಿಮೆ ಕಾರ್ಡ್ ಹಸ್ತಾಂತರಿಸಿ ಮಾತನಾಡಿದ ಕಿಶನ್ ಮಾದಪ್ಪ ಅವರು, ಸಮಾಜಕ್ಕಾಗಿ ದುಡಿಯುವ ಪತ್ರಕರ್ತರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪತ್ರಕರ್ತರ ಸಂಕಷ್ಟಗಳಿಗೆ ವೈಯಕ್ತಿಕವಾಗಿಯು ಸ್ಪಂದಿಸುವುದಾಗಿ ಭರವಸೆ ನೀಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾ ರಂಗವನ್ನು ಸರಕಾರ ನಿರ್ಲ್ಯಕ್ಷಿಸುತ್ತ ಬಂದಿದೆ. ಸರಕಾರಗಳು ಪತ್ರಕರ್ತರ ಪರ ಚಿಂತನೆ ಮಾಡಿ ಅವರಿಗೆ ಶಕ್ತಿ ತುಂಬಿ ಭದ್ರತೆ ನೀಡುವ ಜವಾಬ್ದಾರಿ ಹೊಂದಿರಬೇಕು. ಜನರಿಗೆ ಸರಕಾರದ ವೈಫಲ್ಯ ಕಂಡುಬಂದಲ್ಲಿ ಬದಲಿಸುವ ಶಕ್ತಿಯಿದೆ. ಈ ವೈಫಲ್ಯಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಧ್ಯಮ ಕ್ಷೇತ್ರ ಮಾಡುತ್ತಿದೆ. ಜನರು ಕಾರ್ಯಾಂಗ ಹಾಗೂ ಶಾಸಕಾಂಗದ ಮೇಲೆ ಭ್ರಮನಿರಸನ ಹೊಂದಿದ್ದಾರೆ. ವ್ಯವಸ್ಥೆ ಮೇಲೆ ನಂಬಿಕೆ ಬರಬೇಕಾದರೆ ಪತ್ರಿಕಾಂಗ, ನ್ಯಾಯಾಂಗದಿಂದ ಮಾತ್ರ ಸಾಧ್ಯ ಎಂಬ ಮನಸ್ಥಿತಿಗೆ ತಲುಪಿದ್ದಾರೆ. ಕಠಿಣ ಪರಿಸ್ಥಿತಿಯಲ್ಲಿ ಪತ್ರಕರ್ತರು ಪ್ರಾಣ ಒತ್ತೆಯಿಟ್ಟು ಕಾರ್ಯನಿರ್ವಹಿಸುತ್ತಾರೆ. ಪ್ರಜಾಪ್ರಭುತ್ವದ ಮುಖ್ಯಭೂಮಿಕೆಯಲ್ಲಿರುವ ಪತ್ರಕರ್ತರಿಗೆ ಸೂಕ್ತ ಭದ್ರತೆ ಇಲ್ಲದಿರುವುದು ವಿಪರ್ಯಾಸ ಎಂದು ವಿಷಾದಿಸಿದರು.


ವಾರ್ತಾ ಮತ್ತು ಪ್ರಚಾರ ಇಲಾಖೆ ಕೇವಲ ಜಾಹೀರಾತು ನೀಡಲು ಮೀಸಲಾಗಬಾರದು. ಮಾಧ್ಯಮದ ಭದ್ರತೆಗೆ ಮುಕ್ತ ವಾತಾವರಣ ಸೃಷ್ಟಿಯಾಗಬೇಕು. ಈ ನಿಟ್ಟಿನಲ್ಲಿ ಆಯೋಗ ರಚನೆಯಾಗಬೇಕು. ವ್ಯವಸ್ಥೆಯನ್ನು ವರದಿಗಾರಿಕೆ ಮೂಲಕ ಪ್ರಶ್ನಿಸಿದರೆ ಮೊಕದ್ದಮೆ ಭಯ ಪತ್ರಕರ್ತರನ್ನು ಕಾಡುತ್ತದೆ. ಇದನ್ನು ತಪ್ಪಿಸಲು ಕಾನೂನು ರೂಪಿಸಬೇಕಾದ ಅಗತ್ಯತೆ ಇದೆ. ರಾಜಕೀಯ ಪಕ್ಷಗಳು ಪತ್ರಕರ್ತರಿಗೆ ಮಹತ್ವ ನೀಡಬೇಕು ಚಿಂತಕರ ಚಾವಡಿ ಎಂದು ಕರೆಸಿಕೊಳ್ಳುವ ವಿಧಾನಪರಿಷತ್ತು ಹಾಗೂ ರಾಜ್ಯಸಭೆಗಳಲ್ಲಿ ಪತ್ರಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳನ್ನಾಗಿ ಮಾಡಬೇಕು. ಸರಕಾರಗಳ ಮುಂಗAಡ ಪತ್ರದಲ್ಲಿ ಪತ್ರಕರ್ತರಿಗೆ ಸೌಲಭ್ಯ ಘೋಷಣೆಯಾಗಬೇಕು ಎಂದು ಸಂಕೇತ್ ಒತ್ತಾಯಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಪತ್ರಕರ್ತರು ಭಯ ಮುಕ್ತವಾಗಿ ಕಾರ್ಯನಿರ್ವಹಿಸಲು ವಿಮೆ ಅಭಯ ನೀಡುತ್ತದೆ. ಮಾಧ್ಯಮ ಕ್ಷೇತ್ರಕ್ಕೆ ಗುಣಮಟ್ಟದ ಪತ್ರಕರ್ತರು ಬರಬೇಕು. ಸಮಾಜಕ್ಕೆ ಇಂದಿಗೂ ಮಾಧ್ಯಮದ ಮೇಲೆ ನಂಬಿಕೆ ಇದ್ದು, ಅದನ್ನು ಉಳಿಸುವ ಕೆಲಸವಾಗಬೇಕೆಂದು ಕರೆ ನೀಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಸವಿತಾ ರೈ ಮಾತನಾಡಿ, ಪತ್ರಕರ್ತರು ಸಂಕಷ್ಟ ಸ್ಥಿತಿಯಲ್ಲಿದ್ದು, ಈ ವಿಮೆ ಸೌಲಭ್ಯ ಅಭಯ ನೀಡುತ್ತದೆ ಎಂದು ಹೇಳಿದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ, ಜಿಲ್ಲೆಯ ಪತ್ರಕರ್ತರು ಆರ್ಥಿಕ ಸಂಕಷ್ಟದಲ್ಲಿದ್ದು, ಆರೋಗ್ಯ ಸಮಸ್ಯೆ ಎದುರಾದಾಗ ಸಂಘದಿಂದ ಗರಿಷ್ಠ ರೂ. 10 ಸಾವಿರ ಹಣ ಮಾತ್ರ ನೀಡಲು ಸಾಧ್ಯವಿದೆ. ಈ ಹಿನ್ನೆಲೆ ಪತ್ರಕರ್ತರಿಗಾಗಿ ವಿಮೆ ಮಾಡಿಸಲು ಮುಂದಾಗಿದ್ದೇವೆ. ವಾರ್ಷಿಕ ರೂ. 550 ಮೌಲ್ಯದ ವಿಮೆಯನ್ನು ಸಂಘದ ಸದಸ್ಯರಿಗಾಗಿ ಅಂಚೆ ಕಚೇರಿ ಮೂಲಕ ಮಾಡಿಸಲಾಗಿದೆ. ಅಪಘಾತದಿಂದ ಜೀವ ಕಳೆದುಕೊಂಡರೆ ಅಥವಾ ಅಂಗ ವೈಕಲ್ಯ ಉಂಟಾದಲ್ಲಿ ರೂ. 10 ಲಕ್ಷ, ಚಿಕಿತ್ಸೆಗಾಗಿ ರೂ. 1 ಲಕ್ಷದ ತನಕ ಹಣ ವಿಮೆ ಮೂಲಕ ಸಂದಾಯವಾಗಲಿದೆ ಎಂದರು.

ಅಂಚೆ ಇಲಾಖೆ ಶಾಖಾ ವ್ಯವಸ್ಥಾಪಕ ಬಬಿನ್ ಹಾಗೂ ಅಧಿಕಾರಿ ಅಶೋಕ್ ವಿಮೆ ಸೌಲಭ್ಯದ ಕುರಿತು ಮಾಹಿತಿ ಒದಗಿಸಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ವಿಮೆ ಸೌಲಭ್ಯ ಕಲ್ಪಿಸಲು ಆರ್ಥಿಕ ನೆರವು ನೀಡಿದ ಚೇರಂಡ ಕಿಶನ್ ಮಾದಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲೆಯ ವಿವಿಧೆಡೆಗಳ ಪತ್ರಕರ್ತರಿಗೆ ವಿಮೆ ಸೌಲಭ್ಯ ಮಾಡಿಸಲಾಯಿತು.

ಸದಸ್ಯ ಕುಡೆಕಲ್ಲು ಗಣೇಶ್ ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಹೆಚ್.ಜೆ. ರಾಕೇಶ್ ಸ್ವಾಗತಿಸಿ, ಖಜಾಂಚಿ ಸುನಿಲ್ ಪೊನ್ನೇಟಿ ನಿರೂಪಿಸಿ, ನಿರ್ದೇಶಕ ಪ್ರಭುದೇವ್ ವಂದಿಸಿದರು. ನಿರ್ದೇಶಕ ಜಿ.ಆರ್ ಪ್ರಜ್ವಲ್ ವ್ಯಕ್ತಿ ಪರಿಚಯ ಮಾಡಿದರು.

Continue Reading

Kodagu

ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಯಶಸ್ವಿಯಾಗಿ ಜರುಗಿದ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಕೋರ್ಸ್

Published

on

ವಿರಾಜಪೇಟೆ : ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ಅಂತಿಮ ಪದವಿ ತರಗತಿ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಇನ್ಫೋಸಿಸ್ ಕಂಪೆನಿಯ ವತಿಯಿಂದ 15 ದಿವಸಗಳ ಕಾಲ ಸರ್ಟಿಫಿಕೇಟ್ ಕೋರ್ಸ್ ಅನ್ನು ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಇನ್ಫೋಸಿಸ್ ಕಂಪನಿಯ ಸಿಎಸ್ಆರ್ ಚಟುವಟಿಕೆಯ ಅನ್ವಯ ಈ ಕೋರ್ಸ್ ಅನ್ನು ಆಯೋಜಿಸಲಾಗಿತ್ತು.

ಈ ಸರ್ಟಿಫಿಕೇಟ್ ಕೋರ್ಸ್ ಗೆ ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕ ರೆ. ಫಾ. ಮದಲೈ ಮುತ್ತು ರವರು ಚಾಲನೆಯನ್ನು ನೀಡಿದರು. ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಕಾರ್ಯಕ್ರಮದ ಸ್ವರೂಪದ ಬಗ್ಗೆ ಮಾತನಾಡಿದರು.

15 ದಿವಸಗಳ ಕಾಲ ಜರುಗಿದ ಈ ಸರ್ಟಿಫಿಕೇಟ್ ಕೋರ್ಸ್ ನಲ್ಲಿ ಇನ್ಫೋಸಿಸ್ ಕಂಪನಿಯ ತರಬೇತುದಾರರಾದ ನಳಿನಿ ಬಸವರಾಜ್ ಹಾಗೂ ವಿನೋದ್ ಮರಿ ರಾಜನ್ ರವರು ವಿದ್ಯಾರ್ಥಿಗಳಿಗೆ ಸಂವಹನದ ವಿಧಾನ, ಭಾಷೆ ಹಾಗೂ ಸಾಫ್ಟ್ ಸ್ಕಿಲ್ಸ್, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ರೆಸ್ಯುಮ್ ಅನ್ನು ತಯಾರಿಸುವ ಬಗ್ಗೆ, ಸಂದರ್ಶನವನ್ನು ಎದುರಿಸುವ ಬಗ್ಗೆ ತರಬೇತಿಯನ್ನು ನೀಡಿದರು.

ಜೊತೆಗೆ ವಿದ್ಯಾರ್ಥಿಗಳಿಗೆ ಗುಂಪು ಚಟುವಟಿಕೆಗಳನ್ನು ನೀಡುವುದರ ಮೂಲಕ ಸಂವಹನ, ಕೌಶಲ್ಯ ವೃದ್ಧಿಗೆ ತರಬೇತಿಗೊಳಿಸಿದರು. ಮಾದರಿ ಸಂದರ್ಶನವನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಸಂದರ್ಶನವನ್ನು ಎದುರಿಸುವ ಬಗೆ, ತಯಾರಿ ಮಾಡಿಕೊಳ್ಳುವ ಕುರಿತು ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆಗಳು ಹಾಗೂ ವೃತ್ತಿಪರ ಅಭಿವೃದ್ಧಿ ಚಟುವಟಿಕೆಗಳು ಈ ಸರ್ಟಿಫಿಕೇಟ್ ಕೋರ್ಸ್ ನ ಮುಖ್ಯ ಕೇಂದ್ರ ಬಿಂದುಗಳಾಗಿದ್ದವು. ಈ ಕೋರ್ಸ್ ನಲ್ಲಿ ಪದವಿ ಕಾಲೇಜಿನ ಅಂತಿಮ ತರಗತಿಯ ಬಿಕಾಂ, ಬಿಬಿಎ, ಬಿಸಿಎ, ಹಾಗೂ ಬಿಎಸ್ಸಿ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮೈಸೂರು ಇನ್ಫೋಸಿಸ್ ಕ್ಯಾಂಪಸ್ ಗೆ ಭೇಟಿ ನೀಡಿದ ವಿದ್ಯಾರ್ಥಿಗಳು:

ಕಾಲೇಜಿನಲ್ಲಿ ಸರ್ಟಿಫಿಕೇಟ್ ಕೋರ್ಸ್ ಮುಕ್ತಾಯಗೊಂಡ ಬಳಿಕ ಅಂತಿಮ ಪದವಿಯ ವಿದ್ಯಾರ್ಥಿಗಳು ಉಪನ್ಯಾಸಕರನ್ನು ಒಳಗೊಂಡು ಮೈಸೂರಿನ ಇನ್ಫೋಸಿಸ್ ಕಾರ್ಪೊರೇಟ್ ತರಬೇತಿ ಕ್ಯಾಂಪಸ್ ಗೆ ಭೇಟಿ ನೀಡಿದರು.

ವಿವಿಧಡೆಗಳಿಂದ ಆಗಮಿಸಿದ 900ಕ್ಕೂ ಅಧಿಕ ವಿದ್ಯಾರ್ಥಿಗಳು ಒಂದೆಡೆಯಲ್ಲಿ ಸೇರುವ ಮೂಲಕ ವಿದ್ಯಾರ್ಥಿ ಸಂಪರ್ಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇನ್ಫೋಸಿಸ್ ಕಾರ್ಪೊರೇಟ್ ಸಂಸ್ಥೆಯ ಸೆಲ್ವಪತಿ ಹಾಗೂ ಪವಿತ್ರ ರವರು ವಿದ್ಯಾರ್ಥಿಗಳಿಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಉದ್ಯೋಗ ಹಾಗೂ ಕೌಶಲ ಅಭಿವೃದ್ಧಿ, ಉದ್ಯೋಗ ಅವಕಾಶಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.

ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಪರಸ್ಪರ ಚರ್ಚೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಸೆಂಟ್ ಆನ್ಸ್ ಪದವಿ ಕಾಲೇಜಿನ ಉಪನ್ಯಾಸಕರುಗಳಾದ ಸಜೀರ, ಸುನಿತಾ, ನಿರ್ಮಲ, ಶಿಲ್ಪ, ಮುತ್ತಮ್ಮ, ನಮ್ರತಾ ಹಾಗೂ ಬಿನ್ಸಿ ಉಪಸ್ಥಿತರಿದ್ದರು.

Continue Reading

Kodagu

ಸಂವಿಧಾನದ ರಕ್ಷಣೆ ನಮ್ಮೆಲ್ಲರ ಹೊಣೆ : ಗಾಯತ್ರಿ ನರಸಿಂಹ

Published

on

ಮಡಿಕೇರಿ: ಪ್ರೊ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ೬೯ನೇ ಪರಿನಿರ್ವಾಣ ದಿನಾಚರಣೆ ವಿರಾಜಪೇಟೆಯಲ್ಲಿ ನಡೆಯಿತು.

ಡಾ.ಬಿ.ಆರ್‌.ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ ಅವರು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಮೇಣದ ಬತ್ತಿಗಳನ್ನು ಹಚ್ಚಿ ಗೌರವ ನಮನ ಸಲ್ಲಿಸಿದರು.


ನಂತರ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಸಂದೇಶಗಳಾದ ಶಿಕ್ಷಣ, ಸಂಘಟನೆ ಮತ್ತು ಹೋರಾಟವು ನಮ್ಮ ಗುರಿಯಾಗಬೇಕು. ಅವರ ಹೋರಾಟದ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು, ಸಂವಿಧಾನದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.

ವಿಶ್ವ ಮಾನವ ಡಾ.ಅಂಬೇಡ್ಕರ್ ಪರಿನಿರ್ವಾಣ 1956 ಡಿಸೆಂಬರ್ 6 ರಂದು ದೆಹಲಿಯಲ್ಲಿ ಆಯಿತು. ಪರಿನಿರ್ವಾಣ ಎಂದರೆ ಬೌದ್ಧ ಧರ್ಮದಲ್ಲಿ “ಸಂಪೂರ್ಣ ಮೋಕ್ಷ” ಎಂದರ್ಥ ಎಂದು ವಿವರಿಸಿದರು,

ದಲಿತ ಸಂಘರ್ಷ ಸಮಿತಿಯ ಸದಸ್ಯರಾದ ವೈ.ಬಿ.ಗಣೇಶ್, ಲವ, ಗಣೇಶ್, ಜಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದರು.

Continue Reading

Trending

error: Content is protected !!