ಬೆಂಗಳೂರು: ರಾಜ್ಯ ಸರ್ಕಾರ ಸಮೀಕ್ಷೆ ಹೆಸರಲ್ಲಿ ಹಿಂದೂ ಧರ್ಮ ಒಡೆಯುವ, ಅವಹೇಳನ ಮಾಡುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಅಜೆಂಡಾದಲ್ಲೇ ಹಿಂದೂ ವಿರೋಧಿ ನೀತಿಯಿದೆ. ಹೊಸದಾಗಿ 52 ಜಾತಿಗಳನ್ನು ಸೇರಿಸಿ ಗೊಂದಲ ಮಾಡಿದ್ದರು. ಎಲ್ಲದರ ಮುಂದೆ ಕ್ರಿಶ್ಚಿಯನ್ ಹೆಸರು ತಂದಿದ್ದಾರೆ. ಹೊಸ ಜಾತಿಯನ್ನು ಸೃಷ್ಟಿಸಿದ್ದು ಹೇಗೆ? ಸಿದ್ದರಾಮಯ್ಯನವರಿಗೆ ಅಧಿಕಾರ ಹೋಗುವ ಆತಂಕ ಇರುವ ಕಾರಣ ಸೋನಿಯಾ ಗಾಂಧಿಯವರನ್ನು ಓಲೈಸಲು ಕ್ರಿಶ್ಚಿಯನ್ ಹೆಸರು ತಳುಕು ಹಾಕಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಆರ್ಥಿಕ ಸಮೀಕ್ಷೆ ಅಂದ ಮೇಲೆ ಜಾತಿ ಉಪ ಜಾತಿ ಇನ್ನೊಂದು ಜಾತಿ ಎಂದು ಯಾಕೆ ಕೇಳಲಾಗುತ್ತಿದೆ? ಸೋನಿಯಾ ಗಾಂಧಿ ಮಾರ್ಗದರ್ಶನ ಮೇರೆಗೆ ಈ ಜಾತಿ ಗಣತಿ ನಡೆಸಲಾಗುತ್ತಿದೆ. ತಮ್ಮ ಅಧಿಕಾರ ಉಳಿಸಿಕೊಳ್ಳಲು ಎಲ್ಲರನ್ನೂ ಸೋನಿಯಾ ಗಾಂಧಿ ಧರ್ಮಕ್ಕೆ ಸೇರಿಸಲು ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ಕಿಡಿಕಾರಿದರು.
ಬೆಂಗಳೂರಿನಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಿಗೆ ಸ್ಪಷ್ಟತೆಯೇ ಇಲ್ಲ. ಜಾತಿ ತೆಗೆದಿದ್ದೇವೆ ಎಂದರೆ, ಕೆಲವು ಉಳಿಸಿಕೊಂಡಿದ್ದೇವೆ ಎನ್ನುತ್ತಾರೆ. ತೆಗೆದಿರುವ ಜಾತಿಗಳ ಹೆಸರು ಹೇಳಿದರೂ ಬರೆದುಕೊಳ್ಳುತ್ತೇವೆ ಎಂದಿದ್ದಾರೆ. ಈ ಗೊಂದಲ ಯಾಕೆ ಮೂಡಿಸಬೇಕು. ವಿವಿಧ ಜಾತಿ ಸಮುದಾಯಗಳಿಗೆ ಸಮೀಕ್ಷೆಯಿಂದ ಅಪಮಾನ ಅಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವರಿಗೆ ಗೌರವ ಇದ್ದರೆ ಸಂಪುಟ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರಬೇಕು. ಸಮುದಾಯಗಳು, ಯಾವ ಕಾಂಗ್ರೆಸ್ ಸಚಿವರನ್ನು ಮತ್ತು ಶಾಸಕರನ್ನು ಕ್ಷಮಿಸುವುದಿಲ್ಲ. ಈ ಸಮೀಕ್ಷೆಯ ಹಿಂದೆ ಕ್ರೈಸ್ತ ಮಿಷನರಿಗಳ ಕೈವಾಡವಿದೆ ಎಂದು ದೂರಿದರು.
ಇನ್ನೆರಡು ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರಲಿದೆ. ನಂತರ ಅವರ ಈ ಸಮೀಕ್ಷೆಯನ್ನು ಕೇಳುವವರು ಯಾರೂ ಇರುವುದಿಲ್ಲ. ಈಗ ಸಿದ್ದರಾಮಯ್ಯ ಏನು ಮಾಡಲು ಹೊರಟಿದ್ದಾರೋ ಇದು ಅಧಿಕೃತ ಅಲ್ಲ. ಈ ಸಮೀಕ್ಷೆ ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. ಇದು ಇದು ಅಸಾಂವಿಧಾನಿಕ ಸಮೀಕ್ಷೆ ಎಂದು ವಾಗ್ದಾಳಿ ನಡೆಸಿದರು.
ಇದು ರಾಜಕಾರಣದ ಓಲೈಕೆಗಾಗಿ ಮಾಡುತ್ತಿರುವ ಸಮೀಕ್ಷೆಯಾಗಿದ್ದು ಈ ಸಮೀಕ್ಷೆಯಿಂದ ಯಾವುದೇ ಜಾತಿಗೂ ನ್ಯಾಯ ಸಿಗುವುದಿಲ್ಲ. ಲಿಂಗಾಯತ ಧರ್ಮ ಒಡೆಯುವ ಸಂಚು ಮಾಡಿದ್ದ ತಂಡವೇ ಈಗ ಹಿಂದೂ ಧರ್ಮ ಒಡೆಯಲು ಹೊರಟಿದೆ. ಇದು ಧರ್ಮ ಒಡೆಯುವ ಸಮೀಕ್ಷೆ ಎಂದು ಆರೋಪ ಮಾಡಿದರು.

ಕ್ರಿಶ್ಚಿಯನ್ನರ ಸಂಖ್ಯೆ ಹೆಚ್ಚಿಸಿ ಹಿಂದೂಗಳ ಸಂಖ್ಯೆ ಕಡಿಮೆ ಮಾಡಲು ಸರ್ಕಾರ ಹೊರಟಿದೆ. ಸಿದ್ದರಾಮಯ್ಯ, ಕಾಂಗ್ರೆಸ್ ಹೈಕಮಾಂಡ್ ಧರ್ಮ ಒಡೆಯಲು ರಾಜ್ಯವನ್ನು ಪ್ರಯೋಗ ಶಾಲೆಯಾಗಿ ಮಾಡಿಕೊಂಡಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಹೆಡ್ ಮಾಸ್ಟರ್. ಒಂದೊಂದೇ ರಾಜ್ಯದಲ್ಲಿ ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಗಣೇಶ ಹಬ್ಬದಲ್ಲಿ ನಿರ್ಬಂಧ ಹಾಕಿದ್ದರು. ಮುಂದಿನ ಸಲ ಗಣೇಶ ಹಬ್ಬವೇ ಇಲ್ಲ ಎನ್ನುತ್ತಾರೆ. ಹಿಂದೂಗಳ ಸಂಖ್ಯೆ ಕಡಿಮೆ ಮಾಡೋದು, ದೇವಸ್ಥಾನಗಳ ಮಲಿನ ಮಾಡೋದು, ಮತಾತಂತರ ಹೆಚ್ಚಿಸುವುದು ಈ ಮೂರು ಕಾಂಗ್ರೆಸ್ ಅಜೆಂಡಾ. ಹೆಡ್ ಲೈನ್ನಲ್ಲಿ ರಾಮಾಯಣ, ಒಳಗೆಲ್ಲ ಇಸ್ಲಾಂ ಬಗ್ಗೆ ಮಾಹಿತಿ ಈ ರೀತಿಯ ಸಮೀಕ್ಷೆ ಇದು ಎಂದು ಹೇಳಿದರು.
ಕಾಂತರಾಜ್ ಆಯೋಗಕ್ಕೆ 180 ಕೋಟಿ ರೂ. ನೀಡಿ ನುಂಗಿದ್ದೀರಿ. ಆ ಹಣ ಎಲ್ಲಿ ಹೋಯ್ತು? ಈಗ 425 ಕೋಟಿ ರೂ. ಖರ್ಚು ಮಾಡಲು ಹೊರಟಿದ್ದಾರೆ. ಯಾವ ಪುರುಷಾರ್ಥಕ್ಕೆ ಈ ಸಮೀಕ್ಷೆ ಎಂದು ಪ್ರಶ್ನಿಸಿದರು.