Connect with us

Mandya

ಕೋಮು ಗಲಭೆ ಜಿಲ್ಲೆಯಲ್ಲಿ ಮರುಕಳಿಸದಂತೆ ಎಚ್ಚರಿಕೆ ವಹಿಸಿ: ಎನ್. ಚಲುವರಾಯಸ್ವಾಮಿ

Published

on

ಮದ್ದೂರು: ಕೋಮು ಗಲಭೆ ಚಿಕ್ಕದಾಗಿರಲಿ ದೊಡ್ಡದಾಗಿರಲಿ ಅದು ಜಿಲ್ಲೆಗೆ ಕಳಂಕ. ಅಧಿಕಾರಿಗಳು ಜಿಲ್ಲೆಯಲ್ಲಿ ಕೋಮು ಗಲಭೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು.

ಅವರು ಇಂದು ಮದ್ದೂರು ತಾಲ್ಲೂಕಿನಲ್ಲಿ ಆಯೋಜಿಸಲಾಗಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾಳೆ ಮದ್ದೂರು ತಾಲ್ಲೂಕಿನಲ್ಲಿ ನಡೆಯಲಿರುವ ಸಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಶಾಂತಿಯುತವಾಗಿ ಭಾಗವಹಿಸಬೇಕು ಹಾಗೂ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಮಾಡಲಾಗಿದೆ ಎಂದರು.

ಪೊಲೀಸ್ ಇಲಾಖೆ ವತಿಯಿಂದ ದೊಡ್ಡ, ದೊಡ್ಡ ಗಲಭೆಗಳನ್ನು ನಿಯಂತ್ರಿಸಲಾಗಿದೆ ಹಾಗೂ ಪಾರದರ್ಶಕವಾಗಿ ತನಿಖೆ ನಡೆಸಲಾಗಿದೆ. ಮದ್ದೂರು ತಾಲ್ಲೂಕಿನ ನಡೆದಿರುವ ಗಲಭೆಗೆ ಕಾರಣವಾಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಶಾಂತಿ ಕದಡುವ ಕಿಡಿಗೇಡಿಗಳು ನಿಮ್ಮ ಸುತ್ತ ಮುತ್ತಲೇ ಇರುತ್ತಾರೆ. ಸಾರ್ವಜನಿಕರು ಹಾಗೂ ಮುಖಂಡರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಎಂದು ಕಿವಿಮಾತು ಹೇಳಿದರು.

ಹಿಂದೂ, ಮುಸ್ಲಿಂ ಸಮುದಾಯದವರು ಸಮಾಜದಲ್ಲಿ ಒಟ್ಟಿಗೆ ಬಾಳಬೇಕು, ಕೆಲವು ಕಿಡಿಗೇಡಿಗಳು ನಡೆಸುವ ಕೃತ್ಯಕ್ಕೆ ಜೀವನ ನಡೆಸುವುದು ಕಷ್ಟಕರವಾಗಿರುತ್ತದೆ. ವಿವಿಧ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ನಡೆಯುವ ಮೆರವಣಿಗೆಗಳಲ್ಲಿ ತಾಳ್ಮೆಯಿಂದ ವರ್ತಿಸಿ ಎಂದರು.

ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಮಾತನಾಡಿ ಸ್ವಾತಂತ್ರ್ಯ ಹೋರಾಟಕ್ಕೆ ಹೆಸರುವಾಸಿಯಾಗಿರುವ ಮದ್ದೂರು ತಾಲ್ಲೂಕಿನಲ್ಲಿ ಕೋಮು ಗಲಭೆಗಳು ಬೇಡ. ಸರ್ಕಾರ ಜಿಲ್ಲೆಗೆ ಸಕ್ಕರೆ ಕಾರ್ಖಾನೆ ಅಭಿವೃದ್ಧಿ ಸೇರಿದಂತೆ ನಾಲೆಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಸಾರ್ವಜನಿಕರು ಸರ್ಕಾರದೊಂದಿಗೆ ಕೈ ಜೋಡಿಸಿ ಎಂದರು.

ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಅವರು ಮಾತನಾಡಿ, ರಾಜ್ಯದಲ್ಲಿ 77 ಸಾವಿರ ಗಣೇಶ ಮೂರ್ತಿಗಳು ಹಾಗೂ .ಮಂಡ್ಯದಲ್ಲಿ 3,700 ಗಣೇಶ ಪ್ರತಿಷ್ಠಾಪನೆ ಆಗಿದೆ.
ಎಲ್ಲೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಕಿಡಿಗೇಡಿಗಳು ಎಸಗಿರುವ ಅಹಿತಕರ ಘಟನೆಯನ್ನು ದೊಡ್ಡದಾಗಿ ಬಿಂಬಿಸಿ ಶಾಂತಿ ಕದಡುವುದು ಬೇಡ. ತಪ್ಪಿತಸ್ಥರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದರು

ಶಾಸಕ ಉದಯ್ ಅವರು ತಾಲ್ಲೂಕಿನ ಅಭಿವೃದ್ಧಿಗೆ 1,300 ಕೋಟಿ ರೂ. ಅನುದಾನ ತಂದಿದ್ದಾರೆ. ಬಹಳ ವರ್ಷಗಳಿಂದ ತಾಲ್ಲೂಕಿನಲ್ಲಿ ಅಭಿವೃದ್ಧಿ ಆಗಿರಲಿಲ್ಲ.
ಸಚಿವ ಚಲುವರಾಯಸ್ವಾಮಿ ಹಾಗೂ ಶಾಸಕ ಉದಯ್ ಅಭಿವೃದ್ಧಿ ಮಾಡುತ್ತಿದ್ದಾರೆ.
ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡಬೇಡಿ ಎಂದರು.

ಜಿಲ್ಲಾಧಿಕಾರಿ ಡಾ ಕುಮಾರ ಅವರು ಮದ್ದೂರಿನಲ್ಲಿ ನಡೆದ ಘಟನೆಯಿಂದಾಗಿ ಬೇಸರವಾಗಿದೆ. ಗಣೇಶ ಹಬ್ಬದ ಮುಂಚಿತವಾಗಿಯೇ ಎಲ್ಲಾ ಧರ್ಮದ ಮುಖಂಡರುಗಳೊಂದಿಗೆ ಸಭೆ ಕರೆದು ವ್ಯವಸ್ಥಿತವಾಗಿ ಹಬ್ಬವನ್ನು ಆಚರಿಸಲು ಸೂಚಿಸಲಾಗಿತ್ತು. ವಿವಿಧತೆಯಲ್ಲಿ ಏಕತೆ ಎಂದು ಕೇವಲ ಮಾತಿನಲ್ಲಿ ಹೇಳಿದರೆ ಸಾಲದು ಅದನ್ನು ಅನುಸರಿಸಬೇಕು. ನಾವೆಲ್ಲರೂ ಸಹ ಸೌಹಾರ್ದತೆಯಿಂದ ಬದುಕಬೇಕು. ಧಾರ್ಮಿಕ ಭಾವನೆಗೆ ದಕ್ಕೆ ತರುವಂತಹ ಕೆಲಸ ಯಾರು ಮಾಡಬಾರದು ಹೇಳಿದರು.

ಸಮಾಜದಲ್ಲಿ ಸಾಮರಸ್ಯವನ್ನು ಕಾಪಾಡುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ, ಈ ಘಟನೆಗೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಧರ್ಮ-ಧರ್ಮಗಳ ನಡುವೆ ಬೆಂಕಿ ಹಚ್ಚುವರಿಗೆ ಕಾನೂನು ಪಾಠ ಕಲಿಸುತ್ತದೆ. ನಮ್ಮ ಮಕ್ಕಳು ದಾರಿ ತಪ್ಪಿದ್ದಾರೆ ಎಂದರೆ ಅದರ ಜವಾಬ್ದಾರಿಯನ್ನು ನಾವು ಹೊರಬೇಕು ಮಕ್ಕಳಿಗೆ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವ ಕೆಲಸಗಳಲ್ಕಿ ಹಾಗೂ ಕೋಮು ಗಲಭೆಗಳಲ್ಲಿ ಭಾಗವಹಿಸದಂತೆ ತಿಳಿ ಹೇಳಿ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ ಸಿ‌ ಸಿ ಟಿ ವಿ ಹಾಗೂ ತಂತ್ರಜ್ಞಾನದ ಸಹಾಯದಿಂದ ಘಟನೆಗೆ ಕಾರಣರಾದವರನ್ನು ಬಂಧಿಸಲಾಗಿದೆ. ಘಟನೆ ಆಕಸ್ಮಿಕವೋ ಅಥವಾ ಪೂರ್ವನಿಯೋಜಿತವೂ ಎಂದು ತನಿಖೆ ನಡೆಸಲಾಗುವುದು. ಸಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಪಸರಿಸುವ ಮೂಲಕ ಸಮಾಜದ ಶಾಂತಿಯನ್ನು ಕದಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜಾರಿಗೊಳಿಸಲಾಗುವುದು ಎಂದು ಎಚ್ಚರಿಸಿದರು.

ನಾಳೆ ಸಾಮೂಹಿಕ ಗಣೇಶ ವಿಗ್ರಹ ವಿಸರ್ಜನೆ ಆಯೋಜಿಸಲಾಗಿದೆ ಪೊಲೀಸ್ ಇಲಾಖೆ ಇದಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಿಶೇಷ ಟಾಸ್ಕ್ ಫೋರ್ಸ್ ತಂಡಗಳನ್ನು ರಚಿಸಲಾಗಿದೆ. ಮದ್ದೂರು ನಗರದಲ್ಲಿ ಶಾಂತಿ ಕಾಪಾಡಲು ಸಿದ್ದರಿದ್ದೇವೆ ಪೊಲೀಸ್ ಇಲಾಖೆ ನಿಮ್ಮ ಜೋತೆ ಇದೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಕೆ.ಆರ್, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.

Continue Reading

Mandya

ವಿವಿಧ ಹಿಂದೂಪರ ಸಂಘಟನೆಗಳು ಕರೆ : ವ್ಯಾಪಾರ ವಹಿವಾಟು ಸ್ಥಗಿತ

Published

on

ಮದ್ದೂರು: ಪಟ್ಟಣದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲುತೂರಾಟ ಘಟನೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರ ಲಾಠಿಚಾರ್ಜ್ ಖಂಡಿಸಿ ಇಂದು ವಿವಿಧ ಸಂಘಟನೆಗಳು ಕರೆ ನೀಡಿದ್ದ ಮದ್ದೂರು ಬಂದ್ ಯಶಸ್ವಿಯಾಗಿದೆ.
ವಿವಿಧ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ಗೆ ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಅಂಗಡಿ ಬಾಗಿಲುಗಳನ್ನು ಮುಚ್ಚಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬಂದ್ ಗೆ ಬೆಂಬಲಿಸಿದ್ದಾರೆ.
ಬಿಗಿ ಪೊಲೀಸ್ ಬಂದೂಬಸ್ತ್:

ಗಣೇಶ ವಿಸರ್ಜನೆಯ ಗಲಾಟೆ ಹಾಗೂ ಇಂದಿನ ಬಂದ್ ನಿಂದಾಗಿ ಪೂರ್ವ ನಿಯೋಜಿತವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡೆ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಅನ್ನ ಪಟ್ಟಣದಾದ್ಯಂತ ಕೈಗೊಳ್ಳಲಾಗಿದೆ.
ನಾಲ್ವರು ಹೆಚ್ಚುವರಿ ಎಸ್ಪಿ ಗಳು 15 ಡಿವೈಎಸ್ಪಿ ಗಳು 35 ಇನ್ಸ್ಪೆಕ್ಟರ್ಗಳು 80 ಪಿಎಸ್ಐ ಗಳು 10 ಡಿಎಆರ್ ಕಡೆ 15 ಕೆ ಎಸ್ ಆರ್ ಪಿ ಸೇರಿ 1500ಕ್ಕೂ ಹೆಚ್ಚು ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದು ಪಟ್ಟಣದಂತ ಯಾವುದೇ ಆಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮವಹಿಸಿದ್ದಾರೆ .

Continue Reading

Mandya

ಮದ್ದೂರು ಪಟ್ಟಣದ ಉದ್ವಿಗ್ನ ಸ್ಥಿತಿಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ : ಟಿ.ಎಲ್.ಕೃಷ್ಣೇಗೌಡ

Published

on

ಮಂಡ್ಯ: ಮದ್ದೂರು ಪಟ್ಟಣದ ಉದ್ವಿಗ್ನ ಸ್ಥಿತಿಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ರಾಜ್ಯ ಸರಕಾರಕ್ಕೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲು ಪಿತೂರಿ ನಡೆಸಿದವರನ್ನು ಜಿಲ್ಲಾಡಳಿತ ಕಂಡು ಹಿಡಿಯಬೇಕು. ಉದ್ವಿಗ್ನ ಸ್ಥಿತಿಯನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳಲು ಮುಂದಾಗಿದೆ. ಜಿಲ್ಲೆಯ ಜನತೆ ಕೋಮುವಾದಕ್ಕೆ ಬಲಿಯಾಗದೇ ಶಾಂತಿ, ಸೌಹಾರ್ದತೆ ಕಾಪಾಡಿಕೊಳ್ಳಬೇಕೆಂದು ಹೇಳಿದರು.

ಕಲ್ಲು ತೂರಾಟದಿಂದ ಮದ್ದೂರು ಪಟ್ಟಣದಲ್ಲಿ ಉಂಟಾದ ಉದ್ವಿಗ್ನತೆ ಕೋಮುಗಳ ನಡುವಿನ ಸೌಹಾರ್ದತೆಗೆ ಧಕ್ಕೆ ತಂದೊಡ್ಡಿದೆ. ಇದನ್ನು ಕೆಲ ಶಕ್ತಿಗಳು ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ. ಇವೆಲ್ಲವೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ನಿರ್ಲಕ್ಷ್ಯತೆಯನ್ನು ತೋರುತ್ತಿದೆ ಎಂದು ಆರೋಪಿಸಿದರು.

ಯಾವುದೇ ಗಲಭೆಯಾಗದಂತೆ ಕ್ರಮ ವಹಿಸಬೇಕಾದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ನಿರ್ಲಕ್ಷ್ಯ ತೋರಿದ ಹಿನ್ನಲೆ ಉದ್ವಿಗ್ನತೆ ಸೃಷ್ಠಿಯಾಗಿದೆ. ಈ ಸಂದರ್ಭವನ್ನು ಬಿಜೆಪಿ ಮಂಡ್ಯ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ನೆಲೆ ಕಾಣಲು ಬಳಸಿಕೊಳ್ಳುತ್ತಿದೆ. ಸರಕಾರ ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಘಟನೆಗೆ ಹೊಣೆ ಮಾಡಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ನಾಗಮಂಗಲ, ಶ್ರೀರಂಗಪಟ್ಟಣ, ಕೆರಗೋಡು ಹೀಗೆ ಗಲಭೆಗಳ ಲಾಭದ ಮೂಲಕ ಬಿಜೆಪಿ ಜಿಲ್ಲೆಯಲ್ಲಿ ನೆಲೆ ಕಂಡುಕೊಳ್ಳಲು ಮುಂದಾಗಿದೆ. ಈ ನಿಟ್ಟಿನಲ್ಲಿ ಇದೀಗ ಮದ್ದೂರಿನ ಪ್ರಕರಣದ ಲಾಭ ಪಡೆಯಲು ಮುಂದಾಗಿ ಪ್ರತಿಭಟನೆ ಹಾಗೂ ಧಾರ್ಮಿಕ ಭಾವನೆಗಳನ್ನು ಭಿತ್ತಿ ಗಲಭೆ ಸೃಷ್ಠಿಸುತ್ತಿದೆ. ಬಿಜೆಪಿಯ ಈ ಕ್ಷುಲ್ಲಕ ರಾಜಕಾರಣಕ್ಕೆ ಜಿಲ್ಲೆಯ ಜನತೆ ಬಲಿಯಾಗಬಾರದು ಎಂದು ಮನವಿ ಮಾಡಿದರು.

ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಹೆಚ್.ಡಿ.ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಜಾತ್ಯಾತೀತತೆಯನ್ನು ಮರೆತಿದೆ. ನಿಖಿಲ್ ಕುಮಾರಸ್ವಾಮಿ ಸನಾತನಿಗಳಿಗಿಂತಲೂ ಹೆಚ್ಚಿನವರಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಮುಂದುವರೆದಲ್ಲಿ ಜೆಡಿಎಸ್ ಸಹವಾಸದಿಂತ ಜೆಡಿಎಸ್ ನಿರ್ನಾಮವಾಗಲಿದೆ ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಸಿಪಿಐ(ಎಂ) ಜಿಲ್ಲಾ ಕರ‍್ಯಕಾರಣಿ ಸದಸ್ಯರಾದ ಸಿ.ಕುಮಾರಿ, ಬಿ.ಹನುಮೇಶ್, ಸುಶೀಲ, ಚಂದ್ರು ಹಾಜರಿದ್ದರು.

Continue Reading

Mandya

ಮದ್ದೂರು ಕಲ್ಲು ತೂರಾಟ| ತಪ್ಪಿತಸ್ಥರ ಮೇಲೆ ಗೂಂಡಾ ಆಕ್ಟ್ ನಂತಹ ಕಠಿಣ ಕ್ರಮವನ್ನು ಕೈಗೊಳ್ಳಬೇಕು: ಹಿಂದೂ ಜನಜಾಗೃತಿ ಸಮಿತಿ 

Published

on

ಮಂಡ್ಯ: ಜಿಲ್ಲೆಯ ಮದ್ದೂರಿನ ತಾಲೂಕಿನ ರಹೀಮ್ ನಗರದ ಗಣೇಶೋತ್ಸವ ಮೆರವಣಿಗೆ ವೇಳೆ ಮತಾಂಧರಿಂದ ಕಲ್ಲು ತೂರಾಟ ಮಾಡಿದ್ದು, ತಪ್ಪಿತಸ್ಥರ ಮೇಲೆ ಗೂಂಡಾ ಆಕ್ಟ್ ನಂತಹ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ್‌ ಗೌಡ ಅವರು, ಭಾನುವಾರ (ಸೆಪ್ಟೆಂಬರ್. 7) ರಾತ್ರಿ ಚೆನ್ನೇಗೌಡ ಬಡಾವಣೆಯ ನಿವಾಸಿಗಳ ಗಣೇಶೋತ್ಸವ ಮೆರವಣಿಗೆಯು ಮಸೀದಿ ಬಳಿ ಬಂದಾಗ ಏಕಾಏಕಿ ಲೈಟ್ ಆಫ್ ಮಾಡಿ ಗಣಪತಿ ಮೆರವಣಿಗೆ ಮೇಲೆ ಮಸೀದಿಯಿಂದ ಕಲ್ಲು ತೂರಾಟ‌ ಮಾಡಲಾಗಿದೆ. ಮತಾಂಧರ ಈ ನಡೆಯನ್ನು ನೋಡಿದಾಗ ಈ ದಾಳಿ ಸಂಪೂರ್ಣ ಪೂರ್ವ ನಿಯೋಜಿತವಾಗಿದ್ದು ಗಲಭೆ ಸೃಷ್ಠಿಸಲೆಂದೇ ಈ ಷಡ್ಯಂತ್ರವನ್ನು ರೂಪಿಸಿದ್ದಾರೆ. ಈ ಘಟನೆಯನ್ನು ಹಿಂದೂ ಜನಜಾಗೃತಿ ಸಮಿತಿ ತೀವ್ರವಾಗಿ ಖಂಡಿಸುತ್ತದೆ.

ಕಳೆದ ವರ್ಷ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಸಂಭವಿಸಿದ್ದ ಗಲಭೆಯಲ್ಲಿ ಕಲ್ಲು ತೂರಾಟ ಮತ್ತು ಪೆಟ್ರೋಲ್ ಬಾಂಬ್ ಗಳನ್ನು ಹಿಂದೂ ಅಂಗಡಿಗಳ ಮೇಲೆ ಹಾಕಿ ಕೋಟ್ಯಾಂತರ ರೂಪಾಯಿ ನಷ್ಟ ಮಾಡಿರುವ ಕಹಿ ಘಟನೆಯ ನೆನಪುಗಳು ಇರುವಾಗಲೇ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಎಲ್ಲಾ ಗಣೇಶ ಮಂಡಳಿಯು ಸುರಕ್ಷತಾ ಭದ್ರತೆಯನ್ನು ಒದಗಿಸಲು ಮನವಿ ಮಾಡಿದ ನಂತರವೂ ಹಿಂದೂ ಗಣೇಶೋತ್ಸವದ ಮೆರವಣಿಗೆಯ ಮೇಲೆ ಮಾರಣಾಂತಿಕ ಆಕ್ರಮಣವಾಗಿರುವುದು ಅತ್ಯಂತ ಖಂಡನೀಯವಿದೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಏನಾಗಿದೆ ? ಸಾರ್ವಜನಿಕ ಗಣೇಶೋತ್ಸವ, ನವರಾತ್ರಿ, ರಾಮನವಮಿ, ಹನುಮಾನ್ ಜಯಂತಿ ಪ್ರತಿಯೊಂದು ಮೆರವಣಿಗೆ ಮೇಲೆಯೂ ಕಲ್ಲು ತೂರಾಟ ಆಗುತ್ತಿದೆ. ಇದರಿಂದ ಗಮನಕ್ಕೆ ಬರುವುದೇನೆಂದರೆ ಅಲ್ಪಸಂಖ್ಯಾತರ ಓಲೈಕೆ ನೀತಿಯಿಂದಾಗಿ ಬಹು ಸಂಖ್ಯಾತ ಹಿಂದೂಗಳ ಮೇಲೆ ಮಾರಣಾಂತಿಕ ಅಕ್ರಮಗಳಾಗುತ್ತಿದೆ. ಆದುದರಿಂದ ರಾಜ್ಯ ಸರ್ಕಾರವು ಈ ಕೃತ್ಯಕ್ಕೆ ಕಾರಣಕರ್ತರಾದವರ ಮೇಲೆ ಕೂಡಲೇ ಕ್ರಮಕೈಗೊಳ್ಳಬೇಕು ಮತ್ತು ರಾಜ್ಯಾದ್ಯಂತ ಇನ್ನೂ ಅನೇಕ ಜಿಲ್ಲೆಗಳಲ್ಲಿ ಗಣೇಶ ವಿಸರ್ಜನೆ ಬಾಕಿ ಇದ್ದು ಎಲ್ಲ ಜಿಲ್ಲೆಗಳಲ್ಲಿ ಪೊಲೀಸ್ ಇಲಾಖೆ ಇಂತಹ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಬೇಕೆಂದು ಸಮಿತಿಯು ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.

Continue Reading

Trending

error: Content is protected !!