Chikmagalur
ಚೆನ್ನಮ್ಮ ನಿಧನಕ್ಕೆ ಕಂಬನಿ ಮಿಡಿದ ವೈಎಸ್ವಿ ದತ್ತ:
ಚಿಕ್ಕಮಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನಕ್ಕೆ ಅವರ ಕುಟುಂಬದ ಆಪ್ತ, ಮಾಜಿ ಶಾಸಕ ವೈಎಸ್ವಿ ದತ್ತ ತೀವ್ರ ಕಂಬನಿ ಮಿಡಿದಿದ್ದಾರೆ. ಕಡೂರಿನಲ್ಲಿ ಮಾಧ್ಯಮಗಳೊಂದಿಗೆ ಭಾವುಕರಾಗಿ ಮಾತನಾಡಿದ ಅವರು, ಚೆನ್ನಮ್ಮ ಅವರ ಮುಗ್ಧತೆ, ದಾಂಪತ್ಯ ಮತ್ತು ಅವರ ಧಾರ್ಮಿಕ ಬದುಕಿನ ಹಲವು ರೋಚಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಚೆನ್ನಮ್ಮ ಅವರ ಸಾವಿನ ಕುರಿತು ಜ್ಯೋತಿಷಿಗಳು ಈ ಹಿಂದೆ ನುಡಿದಿದ್ದ ಭವಿಷ್ಯವೊಂದು ಈಗ ನಿಜವಾಗಿರುವ ಮಾಹಿತಿ ನೀಡಿದ್ದಾರೆ.
ಚೆನ್ನಮ್ಮ ಅವರ ನಿಧನದ ಕುರಿತು ಮಾತನಾಡುತ್ತಾ ವೈ.ಎಸ್.ವಿ. ದತ್ತ ಅವರು, ಚೆನ್ನಮ್ಮನವರಿಗೆ ಮುತ್ತೈದೆ ಸಾವು ಬರಲಿದೆ ಎಂದು ಹಿಂದೆ ಜ್ಯೋತಿಷಿಗಳು ಭವಿಷ್ಯ ನುಡಿದಿದ್ದರು.ಇಂದು ಅದೇ ರೀತಿ ದೇವೇಗೌಡರ ಸಮ್ಮುಖದಲ್ಲೇ ಅವರು ಮುತ್ತೈದೆಯಾಗಿಯೇ ಕಣ್ಣು ಮುಚ್ಚಿದ್ದಾರೆ. ಜ್ಯೋತಿಷಿಗಳು ಅಂದು ಹೇಳಿದ್ದ ಮಾತು ಇಂದು ಅಕ್ಷರಶಃ ನಿಜವಾಗಿದೆ ಎಂದಿದ್ದಾರೆ. ಅಲ್ಲದೆ ಶನಿವಾರ ಮಧ್ಯಾಹ್ನ ತಾವೇ ಖುದ್ದಾಗಿ ದೇವೇಗೌಡರನ್ನು ಭೇಟಿಯಾದಾಗ, ಸಂಜೆ ಹೊತ್ತಿಗೆ ಚೆನ್ನಮ್ಮನವರ ಆರೋಗ್ಯ ಸರಿಯಾಗಬಹುದು ಎಂದು ಗೌಡರು ಆಶಾಭಾವನೆ ವ್ಯಕ್ತಪಡಿಸಿದ್ದರು ಎಂದಿದ್ದಾರೆ.

ಚೆನ್ನಮ್ಮ ಅವರೊಂದಿಗಿನ ತಮ್ಮ ಒಡನಾಟವನ್ನು ನೆನೆದ ದತ್ತ, ಅವರ ನಿಧನದಿಂದ ನನಗೆ ನನ್ನ ಸ್ವಂತ ತಾಯಿಯನ್ನೇ ಕಳೆದುಕೊಂಡಷ್ಟು ದುಃಖವಾಗಿದೆ. ನಾನು ಒಂದೆರಡು ತಿಂಗಳು ಬೆಂಗಳೂರಿನ ಅವರ ಮನೆಗೆ ಹೋಗದಿದ್ದರೆ ಸಾಕು, ತಾವೇ ಖುದ್ದಾಗಿ ಫೋನ್ ಮಾಡಿ ಮನೆಗೆ ಬರಲು ಹೇಳುತ್ತಿದ್ದರು. ಮನೆಗೆ ಹೋದ ತಕ್ಷಣ ‘ಯಾಕೋ ಇಷ್ಟು ದಿನ ಬರಲಿಲ್ಲ?’ ಎಂದು ಪ್ರೀತಿಯಿಂದಲೇ ಗದರುತ್ತಿದ್ದರು. ಕೆಲವೊಮ್ಮೆ ‘ಗೌಡರಿಗೆ ಜ್ವರ ಬಂದಿದೆ, ಸ್ವಲ್ಪ ಮಂಕಾಗಿದ್ದಾರೆ. ನೀನು ಬಂದರೆ ಅವರು ಹುಷಾರಾಗುತ್ತಾರೆ, ತಕ್ಷಣ ಬಾ’ ಎಂದು ನನ್ನನ್ನು ಕರೆಯುತ್ತಿದ್ದರು” ಎಂದಿದ್ದಾರೆ.
ರಾಜಕೀಯದಲ್ಲಿ ಎಚ್.ಡಿ. ದೇವೇಗೌಡರನ್ನು ಹೆದರಿಸಲು ಯಾರಿಂದಲೂ ಸಾಧ್ಯವಿರಲಿಲ್ಲ. ಆದರೆ, ಮನೆಯಲ್ಲಿ ಮಾತ್ರ ಹಬ್ಬ ಹರಿದಿನ ಬಂದರೆ ಸಾಕು, ಗೌಡರು ಚೆನ್ನಮ್ಮನವರ ಜೊತೆ ಮೌನವಾಗಿ ಉಪವಾಸ ಕೂರಬೇಕಿತ್ತು. ಅಷ್ಟರಮಟ್ಟಿಗೆ ಗೌಡರ ಮೇಲೆ ಅವರಿಗೆ ಅಧಿಕಾರವಿತ್ತು. ಚೆನ್ನಮ್ಮನವರ ಇಡೀ ಜಗತ್ತೇ ದೇವೇಗೌಡರಾಗಿದ್ದರು. ಸದಾ ಪೂಜೆ, ಪುನಸ್ಕಾರ, ಉಪವಾಸ ಎಂದು ಕಳೆಯುತ್ತಿದ್ದ ಅಪ್ಪಟ ದೈವಭಕ್ತೆ ಅವರಾಗಿದ್ದರು. ದೇವಸ್ಥಾನಗಳಲ್ಲಿ ಅರ್ಚನೆ ಮಾಡಿಸುವಾಗ ಇಡೀ ದೊಡ್ಡಮನೆ ಕುಟುಂಬದ ಎಲ್ಲ ಸದಸ್ಯರ ರಾಶಿ, ನಕ್ಷತ್ರ, ಕುಲ ಮತ್ತು ಗೋತ್ರಗಳನ್ನು ಪಟಪಟನೆ ಹೇಳುತ್ತಿದ್ದರು. ಅದನ್ನು ಕೇಳಿ ದೇವಸ್ಥಾನದ ಅರ್ಚಕರೆ ಅಚ್ಚರಿಪಡುತ್ತಿದ್ದರು ಎಂದು ದತ್ತ ನೆನಪಿಸಿಕೊಂಡಿದ್ದಾರೆ.

ಮಾಜಿ ಪ್ರಧಾನಿ ಪತ್ನಿಯಾಗಿದ್ದರೂ ಅವರಲ್ಲಿ ಲವಲೇಶವೂ ಹಮ್ಮು-ಬಿಮ್ಮು ಇರಲಿಲ್ಲ ಎಂದ ದತ್ತ, ಅವರ ಸರಳತೆಗೆ ಸಾಕ್ಷಿಯಾದ ಘಟನೆಯೊಂದನ್ನು ನೆನಪಿಸಿಕೊಂಡರು. 1983ರಲ್ಲಿ ದೇವೇಗೌಡರು ಮಂತ್ರಿಯಾದಾಗ ಬೆಂಗಳೂರಿನಲ್ಲಿ ಸರ್ಕಾರಿ ಬಂಗಲೆ ಸಿಕ್ಕಿತ್ತು. ಹಾಸನದಿಂದ ಬರುವಾಗ ಚೆನ್ನಮ್ಮನವರು ತಮ್ಮ ನೆಚ್ಚಿನ ಹಸುಗಳನ್ನೂ ಬೆಂಗಳೂರಿಗೆ ತಂದಿದ್ದರು. ಅಷ್ಟೇ ಅಲ್ಲ, ಆ ಐಷಾರಾಮಿ ಸರ್ಕಾರಿ ಬಂಗಲೆಯ ಹಿಂಭಾಗದಲ್ಲೇ ಕೊಟ್ಟಿಗೆ ಕಟ್ಟಿಸಿ ಹಸುಗಳನ್ನು ಸಾಕಿದ್ದರು. ಬಟ್ಟೆ, ಸೀರೆ, ಒಡವೆಗಳ ಮೇಲೆ ಅವರಿಗೆ ಯಾವುದೇ ವ್ಯಾಮೋಹವಿರಲಿಲ್ಲ. ಅವರು ಕೊನೆವರೆಗೂ ಅಪ್ಪಟ ಹಳ್ಳಿ ಹೆಣ್ಣುಮಗಳಾಗಿಯೇ ಬದುಕಿದರು ಎಂದಿದ್ದಾರೆ.
ಒಮ್ಮೆ ದೇವೇಗೌಡರು ತಮಗೆ ನಜೀರ್ ಸಾಬ್ ಅವರ ಮನೆಯ ಪಾಯಸ ತುಂಬಾ ಇಷ್ಟ ಎಂದು ಹೇಳಿದ್ದರಂತೆ. ಇದನ್ನು ನೆನಪಿನಲ್ಲಿಟ್ಟುಕೊಂಡ ಚೆನ್ನಮ್ಮನವರು, ನಜೀರ್ ಸಾಬ್ ಅವರ ಮನೆಯ ಅಡುಗೆ ಭಟ್ಟನನ್ನು ತಮ್ಮ ಮನೆಗೆ ಕರೆಸಿಕೊಂಡು, ಅವರಿಂದ ಪಾಯಸ ಮಾಡುವುದನ್ನು ಕಲಿತು ಸ್ವತಃ ತಾವೇ ತಯಾರಿಸಿ ದೇವೇಗೌಡರಿಗೆ ಬಡಿಸಿದ್ದರು! ಇನ್ನು ತಮ್ಮ ಮೇಲಿದ್ದ ಪ್ರೀತಿಯನ್ನು ನೆನೆದ ದತ್ತ, ನನ್ನ ಮಗಳ ಮದುವೆಗೆ ಬರಲು ಅವರಿಗೆ ಸಾಧ್ಯವಾಗಿರಲಿಲ್ಲ. ಆ ಬೇಸರದಲ್ಲೇ ಒಂದು ದಿನ ಬೆಂಗಳೂರಿನಲ್ಲಿ ಯಾರಿಗೂ ಹೇಳದೆ, ಕೇವಲ ಡ್ರೈವರ್ ಕರ್ಕೊಂಡು ಸೀದಾ ಕಡೂರಿನಲ್ಲಿದ್ದ ನಮ್ಮ ಮನೆಗೆ ಬಂದು ಸರ್ಪ್ರೈಸ್ ನೀಡಿದ್ದರು” ಎಂದು ಚೆನ್ನಮ್ಮ ಅವರ ಅಪರೂಪದ ಗುಣಗಳನ್ನು ವೈ.ಎಸ್.ವಿ. ದತ್ತ ಕೊಂಡಾಡಿದ್ದಾರೆ.
Chikmagalur
ನಾರಾಯಣಮೂರ್ತಿ ದಂಪತಿ ಹೆಸರಲ್ಲಿ ವಂಚನೆ: ಆನ್ಲೈನ್ ಟ್ರೇಡಿಂಗ್ ನಂಬಿ ₹14.6 ಲಕ್ಷ ಕಳೆದುಕೊಂಡ ಚಿಕ್ಕಮಗಳೂರು ವ್ಯಕ್ತಿ!
ಚಿಕ್ಕಮಗಳೂರು: ಸೈಬರ್ ಕ್ರೈಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಆನ್ಲೈನ್ ಹೂಡಿಕೆ ವಂಚನೆ ಬೆಳಕಿಗೆ ಬಂದಿದ್ದು, ಪ್ರತಿಷ್ಠಿತ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರ ಹೆಸರನ್ನು ಬಳಸಿಕೊಂಡು ಸಾರ್ವಜನಿಕರನ್ನು ನಂಬಿಸಿ ಲಕ್ಷಾಂತರ ರೂಪಾಯಿ ದೋಚಲಾಗಿದೆ. ಫೇಸ್ಬುಕ್ನಲ್ಲಿ ಈ ದಂಪತಿಯು ಟ್ರೇಡಿಂಗ್ ಬಗ್ಗೆ ಭಾಷಣ ಮಾಡುತ್ತಿರುವಂತೆ ಬಿಂಬಿಸಲಾಗಿದ್ದ ನಕಲಿ ಜಾಹೀರಾತು ಲಿಂಕ್ ಅನ್ನು ಕ್ಲಿಕ್ ಮಾಡಿದ ವ್ಯಕ್ತಿಯೊಬ್ಬರು ಬರೋಬ್ಬರಿ ₹14,67,241 ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ಆಪ್ ಓಪನ್ ಆಗಿದ್ದು, ತದನಂತರ ವರುಣ್ ಖನ್ನಾ ಎಂಬ ಹೆಸರಿನಲ್ಲಿ ಕರೆ ಮಾಡಿದ ವಂಚಕರು, ಬ್ಯಾಂಕ್ ಎಫ್ಡಿಗಿಂತಲೂ ಮೂರು ಪಟ್ಟು ಹೆಚ್ಚಿನ ಲಾಭಾಂಶ ನೀಡುವುದಾಗಿ ಆಮಿಷ ಒಡ್ಡಿದ್ದಾರೆ.
ಆರಂಭದಲ್ಲಿ ರಿಜಿಸ್ಟ್ರೇಷನ್ ಶುಲ್ಕವಾಗಿ ₹26,600 ಪಾವತಿಸಿಕೊಂಡ ವಂಚಕರು, ನಂತರ ಹಂತ ಹಂತವಾಗಿ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ್ದಾರೆ. ಇದನ್ನು ನಿಜವೆಂದು ನಂಬಿದ ಸಂತ್ರಸ್ತರು VIXO ಟ್ರೇಡರ್ಸ್ ಹಾಗೂ QUATINO FX ಕಂಪನಿಗಳ ವಿವಿಧ ಖಾತೆಗಳಿಗೆ ಆರ್ಟಿಜಿಎಸ್ ಮತ್ತು ಯುಪಿಐ ಮೂಲಕ ಬರೋಬ್ಬರಿ 14.67 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ವರ್ಗಾವಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಹಣವನ್ನು ಯುಕೆಯ ಚಿನ್ನದ ಬಾಂಡ್ಗಳಲ್ಲಿ ಹೂಡಿಕೆ ಮಾಡಿದರೆ ಇನ್ನೂ ಹೆಚ್ಚಿನ ಲಾಭ ಬರುತ್ತದೆ ಎಂದು ನಂಬಿಸಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಂತ್ರಸ್ತರು ಅನುಮಾನಗೊಂಡು ಹೂಡಿಕೆ ಮಾಡಿದ ಹಣವನ್ನು ವಾಪಸ್ ಕೇಳಿದಾಗ, ಕಂಪನಿಯು ನಷ್ಟದಲ್ಲಿದೆ ಎಂದು ಹೇಳಿ ವಂಚನೆ ಎಸಗಿದ್ದಾರೆ. ಇಷ್ಟಾದರೂ ರಾಣಾ ಪ್ರತಾಪ್ ಎಂಬ ವ್ಯಕ್ತಿಯು ಮೊಬೈಲ್ನಿಂದ ಕರೆ ಮಾಡಿ ಇನ್ನೂ ಹೆಚ್ಚಿನ ಹಣ ಹಾಕುವಂತೆ ಬೆದರಿಕೆ ಹಾಕುತ್ತಿದ್ದಾನೆ ಎನ್ನಲಾಗಿದೆ. ಸದ್ಯ ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Chikmagalur
ಕೌಟುಂಬಿಕ ದೌರ್ಜನ್ಯ ಮಾನಸಿಕ ದೈಹಿಕ ವರದಕ್ಷಿಣೆ ಕಿರುಕುಳ ಪ್ರಕರಣ ಮಹಿಳಾ ಪೊಲೀಸ್ ಠಾಣೆ:
ಚಿಕ್ಕಮಗಳೂರು : ದಿನಾಂಕ 19/07/2026 ರಂದು ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಢಿದ ಸಾರಾಂಶವೇನೆಂಧರೆ ನಾನು ಈಗ್ಗೆ 02 ವರ್ಷಗಳ ಹಿಂದೆ ನಮ್ಮ ಸಂಬಂಧಿಕರಾದ ಸುಹಿಲ್ ತಾಜ್ ಮತ್ತು ರಿಯಾಜ್ ರವರುಗಳು ಮತ್ತು ತಂದೆ ಅಕ್ರಂ ಪಾಷ ಮತ್ತು ತಾಯಿ ರೇಷ್ಮಾ ತಾಜ್ ರವರುಗಳು ಸೇರಿ ನನ್ನ ವಿವಾಹ ಮಾಡಲು, ಚಿಕ್ಕಮಗಳೂರು ನಗರದ ಉಪ್ಪಳ್ಳಿ ವಾಸಿ ಅಬ್ದುಲ್ ವಾಹಬ್ ಅವರ ಮಗ ಸೈಯದ್ ಮಹಮ್ಮದ್ ಸಾದಿಖ್ ರವರನ್ನು ಅವರ ಸಂಬಂಧಿಕರಾದ ಸೈದಾ ಫಿರ್ದೋಸ್ ಮತ್ತು ಅವರ ಗಂಡ ಸೈಯದ್ ರಾಝಿಖ್ ಹಾಗೂ ನನ್ನ ಗಂಡನ ತಂದೆ ಸೈಯದ್ ಅಬ್ಬುಲ್ ವಹಾಬ್, ಅವರ ತಾಯಿ ಐಶಾ ಸಿದ್ದಿಖಾ ರವರುಗಳ ಸಮಕ್ಷಮ ಮದುವೆ ಮಾತುಕತೆ ಮಾಡಿ ಇವರುಗಳೆಲ್ಲರ ಒಪ್ಪಿಗೆಯಂತೆ, ನನ್ನ ಮದುವೆಯನ್ನು ದಿನಾಂಕ:-25.08.2024 ರಂದು ಚಿಕ್ಕಮಗಳೂರು ನಗರದ ಪುರ್ಖನಿಯಾ ಶಾಧಿಮಹಲ್ ನಲ್ಲಿ ನನಗೆ ಸುಮಾರು 100 ಗ್ರಾಂ ಚಿನ್ನಾಭರಣಗಳನ್ನು ಮಾಡಿಸಿ ಮತ್ತು ನನ್ನ ಗಂಡನಿಗೂ ಸಹ ಮದುವೆ ಸಂದರ್ಭದಲ್ಲಿ 30 ಗ್ರಾಂ ಚಿನ್ನಾಭರಣಗಳನ್ನು ಹಾಗೂ 2,00,000 ಲಕ್ಷ ಹಣವನ್ನು ವರದಕ್ಷಿಣೆಯಾಗಿ ನೀಡಿ ಅದ್ದೂರಿಯಾಗಿ ವಿವಾಹ ಮಾಡಿಕೊಟ್ಟಿರುತ್ತಾರೆ.

ನನ್ನ ಗಂಡ ಮದುವೆಗೂ ಮೊದಲೇ ದುಬೈನಲ್ಲಿ ಬ್ಯಾಂಕಿಂಗ್ ಕೆಲಸ ಮಾಡಿಕೊಂಡಿದ್ದು, ಅಲ್ಲಿ ನನ್ನ ಗಂಡನ ಅಕ್ಕ ಸೈದಾ ಫಿರ್ದೋಸ್, ಭಾವ ಸೈಯದ್ ರಾಝಿಖ್ ರವರು ಸಹ ಕೆಲಸ ಮಾಡಿಕೊಂಡಿರುತ್ತಾರೆ. ಮದುವೆಯಾದ ನಂತರ ನನ್ನನ್ನು ಸಹ ದುಬೈಗೆ ಕರೆದುಕೊಂಡು ಹೋಗಿ ನನಗೂ ಕೆಲಸಕ್ಕೆ ಸೇರಿಸುತ್ತೇನೆಂದು ಹೇಳಿರುತ್ತಾರೆ. ನಾನು ಮದುವೆಯಾದ 22 ದಿನಗಳವರೆಗೆ ನನ್ನ ಗಂಡನ ಮನೆ ಚಿಕ್ಕಮಗಳೂರು ನಗರದ ವಿಜಯಪುರ ನೂರಾನಿ ಮಸೀದಿ ಹತ್ತಿರ ಇರುವ ಮನೆಯಲ್ಲಿ ನನ್ನ ಗಂಡ ಸೈಯದ್ ಮೊಹಮ್ಮದ್ ಸಾದಿಖ್ ಮಾವ-ಅಬ್ಬುಲ್ ವಾಹಬ್ ಅತ್ತೆ ಐಶಾ ಸಿದ್ದಿಖಾ ಮತ್ತು ನನ್ನ ಗಂಡನ ಅಕ್ಕ ಸೈದಾ ಫರ್ದೋಸ್ ಹಾಗೂ ಇವಳ ಗಂಡ ಸೈಯದ್ ರಾಝಿಖ್ ರವರೊಂದಿಗೆ ವಾಸವಾಗಿದ್ದೆನು ಮದುವೆಯಾದ ಒಂದು ವಾರಗಳವರೆಗೆ ನನ್ನನ್ನು ಚನ್ನಾಗಿ ನೋಡಿಕೊಂಡರು ನಂತರ ನನ್ನ ಗಂಡ ನಾನು ದುಬೈಗೆ ಹೋಗಬೇಕು ಅಲ್ಲಿ ಬೇರೆ ಮನೆ ಮಾಡಬೇಕು ನಿನ್ನನ್ನು ಕರೆದುಕೊಂಡು ಹೋಗಬೇಕು ನಿಮ್ಮ ತಂದೆಯಿಂದ ನನಗೆ 10 ಲಕ್ಷ ಹಣ ವರದಕ್ಷಿಣೆ ಕೊಡಿಸು ಎಂದು ಕೇಳಿದರು ನಾನು ಈ ವಿಷಯವನ್ನು ನನ್ನ ಅತ್ತೆ, ಮಾವ ಮತ್ತು ನನ್ನ ಗಂಡನ ಅಕ್ಕ ಮತ್ತು ಭಾವ ರವರಿಗೆ ತಿಳಿಸಿದೆನ್ನು ಅವರು ಸಹ ನೀನು ನಿಮ್ಮ ತಂದೆಗೆ ಒಬ್ಬಳೇ ಮಗಳು ಇರುತ್ತೀಯಾ ನಿನ್ನ ಗಂಡ ಕೇಳಿದ ಹಣವನ್ನು ತಂದೆ ಮನೆಯಿಂದ ತಂದುಕೊಡು ಎಂದು ಹೇಳಿದರು.

ನಾನು ನಮ್ಮ ತಂದೆ ಈಗಾಗಲೇ ವರದಕ್ಷಿಣೆ ಕೊಟ್ಟು ಸುಮಾರು 2500000/- ಲಕ್ಷ ಹಣ ಖರ್ಚು ಮಾಡಿ ಮದುವೆ ಮಾಡಿದಾರೆ ನಾನು ಹೇಗೇ ಕೇಳಲಿ ಎಂದು ಹೇಳಿದೆನು ಆಗ ಎಲ್ಲರು ನೀನು ಹಣ ತರದಿದ್ದರೆ ನಿಮ್ಮ ತಂದೆ ಮನೆಗೆ ಹೋಗು ಎಂದು ಜಗಳ ಮಾಡಿ ಮಾನಸಿಕವಾಗಿ ಹಿಂಸೆ ನೀಡಿರುತ್ತಾರೆ. ಮತ್ತು ಆ ದಿನ ನನಗೆ ಊಟ ಸಹ ಕೊಡದೆ ತೊಂದರೆ ನೀಡಿರುತ್ತಾರೆ.ನಾನು ಈ ವಿಷಯವನ್ನು ನಮ್ಮ ತಂದೆ-ತಾಯಿಗೆ ಹೇಳಿದಾಗ ಸಂಸಾರದ ವಿಚಾರ ಹೇಗಾದರು ಮಾಡಿ ಅನುಸರಿಸಿಕೊಂಡು ಹೋಗು ಎಂದು ಹೇಳಿದರು. ಒಂದು ವಾರದ ನಂತರ ನನ್ನ ಗಂಡ ಮತ್ತು ನನ್ನ ಗಂಡನ ಅಕ್ಕ ಮತ್ತು ಆಕೆಯ ಗಂಡ ದುಬೈಗೆ ಹೋಗಿರುತ್ತಾರೆ. ಹೋಗುವಾಗ ನೀನು ನಿಮ್ಮ ತಂದೆಯಿಂದ ಹಣ ತೆಗೆದುಕೊಂಡು ಮೇಲೆ ನಮಗೆ ತಿಳಿಸು ನಾನು ನಿನಗೆ ದುಬೈಗೆ ಬರಲು ಹೇಳುತ್ತೇನೆ ಎಂದು ಹೇಳಿ ಹೋಗಿರುತ್ತಾರೆ. ನಾನು ನನ್ನ ಗಂಡನ ಮನೆಯಲ್ಲಿಯೇ 06 ತಿಂಗಳು ನಮ್ಮ ಅತ್ತೆ ಮಾವನ ಜೋತೆ ವಾಸವಾಗಿರುತ್ತೇನೆ. ಆ ಸಮಯದಲ್ಲಿ ನಮ್ಮ ಅತ್ತೆ ನನ್ನೊಂದಿಗೆ ಗಲಾಟೆ ಮಾಡಿ ಕೈಯಿಂದ ಹೊಡೆದಿರುತ್ತಾರೆ. ನನ್ನ ಗಂಡ ನನಗೆ ಯಾವುದೇ ಖರ್ಚು ನೋಡಿಕೊಂಡಿರುವುದಿಲ್ಲ. 2025 ನೇ ಜನವರಿ ತಿಂಗಳಿನಲ್ಲಿ ನಾನು ನಮ್ಮ ತಂದೆಯಿಂದ ಸ್ವಲ್ಪ ಹಣ ಪಡೆದುಕೊಂಡು ನನ್ನ ಗಂಡ ಇರುವ ಜಾಗಕ್ಕೆ ದುಬೈಗೆ ಹೋಗಿರುತ್ತೇನೆ. ದುಬೈನಲ್ಲಿ ನನ್ನ ಗಂಡನ ಅಕ್ಕನ ಮನೆಯಲ್ಲಿ 03 ತಿಂಗಳು ವಾಸವಿರುತ್ತೇನೆ. ಮದುವೆಯ ಸಮಯದಲ್ಲಿ ನನ್ನನ್ನು ದುಬೈಯಲ್ಲಿ ಕೆಲಸಕ್ಕೆ ಸೇರಿಸುತ್ತೇನೆಂದು ನನ್ನ ಗಂಡ ಮತ್ತು ಅವರ ಕುಟುಂಬದವರು ಹೇಳಿದ್ದು, ನಾನು ನನ್ನನ್ನು ಕೆಲಸಕ್ಕೆ ಸೇರಿಸಿ ಎಂದು ಕೇಳಿದಾಗ ನಿನಗೆ ಯಾವ ಕೆಲಸಕ್ಕೂ ಸೇರಿಸುವುದಿಲ್ಲ ನೀನು ನಾವು ಹೇಳಿದ ಹಾಗೆ ವರದಕ್ಷಿಣೆ ತಂದಿಲ್ಲ ಎಂದು ಹೇಳಿ ವಾಪಸ್ಸ್ ಭಾರತಕ್ಕೆ ಕಳುಹಿಸಿರುತ್ತಾರೆ.
ನಾನು ಭಾರತಕ್ಕೆ ಬಂದು ನನ್ನ ಗಂಡನ ಮನೆಗೆ ಹೋಗಿರುತ್ತೇನೆ. ನನ್ನ ಅತ್ತೆ ಮಾವ ಆ ಸಮಯದಲ್ಲಿ ನನ್ನೊಂದಿಗೆ ಜಗಳ ಮಾಡಿ ನಿಮ್ಮ ತಂದೆ ಮನೆಯಿಂದ ವರದಕ್ಷಿಣೆ ಹಣ ತೆಗೆದುಕೊಂಡು ಬಾ ಎಂದು ಬೈದು ಮಾನಸಿಕವಾಗಿ ಹಿಂಸೆ ನೀಡಿ ನನಗೆ ಊಟ, ತಿಂಡಿ ಮಾಡಲು ಸಹ ಬಿಡುತ್ತಿರಲ್ಲಿಲ್ಲ. ಇದರಿಂದ ಮನ ನೊಂದ ನಾನು ಮತ್ತೆ ಈ ವಿಷಯವನ್ನು ನನ್ನ ಗಂಡನಿಗೆ ಮತ್ತು ಅವರ ಅಕ್ಕ ಭಾವ ನಿಗೆ ತಿಳಿಸಿದಾಗ ನೀನು ನಾವು ಮೊದಲೇ ಹೇಳಿದ ಹಾಗೆ 10 ಲಕ್ಷ ಹಣ ತೆಗೆದುಕೊಂಡು ಬಂದು ನಮ್ಮ ಮನೆಯಲ್ಲಿ ಇರು ಇಲ್ಲವಾದಲ್ಲಿ ಮನೆ ಖಾಲಿ ಮಾಡಿ ಎಲ್ಲಿಯಾದರೂ ಹೋಗು ಎಂದು ಹೇಳಿದರು ನಾನು ಅನಿವಾರ್ಯವಾಗಿ ನಮ್ಮ ತಂದೆ ಮನೆ ಹೋಗಿರುತ್ತೇನೆ. ಸುಮಾರು ಒಂದುವರೆ ವರ್ಷಗಳಾದರು ಸಹಃ ನನ್ನ ಗಂಡ ನನಗೆ ಸರಿಯಾಗಿ ಫೋನ್ ಮಾಡಿ ಮಾತನಾಡಿಸಿರುವುದಿಲ್ಲ ಮತ್ತು ನಾನು ಫೋನ್ ಮಾಡಿದರು ಕರೆ ಸ್ವೀಕರಿಸದೆ ಮತ್ತು ಕೆಲವೊಂದು ಸಮಯ ಸ್ವೀಕರಿಸಿ ಸರಿಯಾಗಿ ಮಾತನಾಡದೇ ಉಡಫೆಯಿಂದ ವರ್ತಿಸುತ್ತಿದ್ದರು.

ನನಗೆ ಯಾವುದೇ ಹಣವನ್ನು ಜೀವನಕ್ಕೆ ನೀಡಿರುವುದಿಲ್ಲ ನನ್ನ ತಂದೆ ತಾಯಿಗಳೇ ನನ್ನನ್ನು ನೋಡಿಕೊಂಡಿರುತ್ತಾರೆ.ಈಗ್ಗೆ ಸುಮಾರು 03 ತಿಂಗಳ ಹಿಂದೆ ನನ್ನ ಗಂಡ ದುಬೈಯಿಂದ ಚಿಕ್ಕಮಗಳೂರಿಗೆ ಬಂದಿದ್ದು ವಿಚಾರ ತಿಳಿದ ನಾನು ಅವರ ಮನೆಯ ಹತ್ತಿರ ಹೋದಾಗ ನನ್ನ ಗಂಡ ಮತ್ತು ನಮ್ಮ ಅತ್ತೆ-ಮಾವ ರವರುಗಳು ನೀನು ನಾವು ಹೇಳಿದ ವರದಕ್ಷಿಣೆ ಹಣ ತೆಗೆದು ಕೊಂಡು ನಮ್ಮ ಮನೆಗೆ ಬಾ ಇಲ್ಲವಾದರೆ, ಮನೆಗೆ ಬರಬೇಡ ಹೋಗು ಎಂದು ಬೈದು ಕಳುಹಿಸಿರುತ್ತಾರೆ. ಇಂದಲ್ಲ ನಾಳೆ ನನ್ನ ಗಂಡನ ಕುಟುಂಬದವರು ಸರಿಯಾಗಬಹುದೆಂದು ನಾನು ಪುನಃ ನಮ್ಮ ತಂದೆ ಮನೆಗೆ ಬಂದು ಮನೆಯಲ್ಲಿ ವಿಚಾರ ತಿಳಿಸಿ ಅವರ ಜೋತೆಯೇ ವಾಸವಿದ್ದೆನು, 03 ತಿಂಗಳಾದರು ನನ್ನ ಗಂಡ ನನ್ನೊಂದಿಗೆ ಯಾವುದೇ ರೀತಿಯ ಜವಬ್ದಾರಿ ತೆಗೆದು ಕೊಳ್ಳದೆ ಇದ್ದರಿಂದ ಮಹಿಳಾ ಪೊಲೀಸ್ ಠಾಣೆಯಲ್ಲಿ ನನ್ನ ಗಂಡ, ಅತ್ತೆ, ಮಾವ ಮತ್ತು ನನ್ನ ಗಂಡನ ಅಕ್ಕ ಮತ್ತು ಭಾವ ನ ವಿರುದ್ದ ದೂರು ನಿಡಿರುತ್ತೇನೆ ನಂತರ ಪೊಲೀಸರು ಮತ್ತು ನಮ್ಮ ಮತ್ತು ಅವರ ಕುಟುಂಬದವರನ್ನು ಕರೆಸಿ ವಿಚಾರ ಮಾಡಿ ನನ್ನ ಗಂಡನಿಗೆ ತಿಳುವಳಿಕೆ ಹೇಳಿ ಹೆಂಡತಿಯನ್ನು ಸರಿಯಾಗಿ ನೊಡಿಕೊಳ್ಳುವಂತೆ ತಿಳಿಸಿದ್ದು ನಂತರ ನನ್ನ ಗಂಡ ನನ್ನ ಜೋತೆ ನಮ್ಮ ತಂದೆ ಮನೆಗೆ ಬಂದು 03 ದಿನಗಳ ಕಾಲ ಇದ್ದು, ಆ ಸಮಯದಲ್ಲಿಯೂ ಸಹ ನಮ್ಮ ಮನೆಯಲ್ಲಿ ಊಟ ಮಾಡಿರುವುದಿಲ್ಲ ಮತ್ತು ನನ್ನೊಂದಿಗೆ ಸಾಂಸಾರಿಕ ಜೀವನ ಮಾಡಿರುವುದಿಲ್ಲ ನಾನು ಸಾಂಸಾರಿಕ ಜೀವನವನ್ನು ನನ್ನೊಂದಿಗೆ ನಡೆಸಿ ಕೊಂಡು ಹೋಗಿ ಎಂದು ವಿನಯವಾಗಿ ಕೇಳಿದಾಗ ನಾನು ಮತ್ತು ನಮ್ಮ ಕುಟುಂಬದವರು ತೀರ್ಮಾನ ಮಾಡಿದೇವೆ ನನಗೆ ಯಾವುದೇ ಕೆಲಸ ಇಲ್ಲ ಮತ್ತೆ ನಾನು ದುಬೈಗೆ ಹೋಗುವುದಿಲ್ಲ ಮತ್ತು ನನಗೆ ಸಾಲ ಇದೆ. ಎಲ್ಲಾವೂ ಸರಿಯಾಗ ಬೇಕಾದರೆ ನೀನು ನಿಮ್ಮ ತಂದೆಯ ಬಳಿ ಕೇಳಿ 50 ಲಕ್ಷ ಹಣ ಕೊಡಿಸು. ಕೇಳಿದ ಹಣ ಕೊಟ್ಟರೆ ನಿನ್ನೊಂದಿಗೆ ಸಾಂಸಾರಿಕ ಜೀವನ ಮಾಡುತ್ತೇನೆ ಇಲ್ಲವಾದಲ್ಲಿ ನನಗೆ ನಿನ್ನೊಂದಿಗೆ ಜೀವನ ಮಾಡಲು ಇಷ್ಟ ಇರುವುದಿಲ್ಲ ಎಂದು ಹೇಳಿ ಹೋಗಿರುತ್ತಾನೆ.

ಆದ್ದರಿಂದ ನನಗೆ ವರದಕ್ಷಿಣೆ ಕಿರುಕುಳ ನೀಡಿ ಹಾಗೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿರುವ ನನ್ನ ಗಂಡ ಸೈಯದ್ ಮೊಹಮ್ಮದ್ ಸಾದಿಖ್ ಮಾವ-ಅಬ್ಬುಲ್ ವಾಹಬ್ ಅತ್ತೆ ಐಶಾ ಸಿದ್ದಿಖಾ ಮತ್ತು ನನ್ನ ಗಂಡನ ಅಕ್ಕ ಸೈದಾ ಫರ್ದೋಸ್ ಹಾಗೂ ಇವಳ ಗಂಡ ಸೈಯದ್ ರಾಝಿಖ್ ರವರುಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ನನಗೆ ನ್ಯಾಯ ಕೊಡಿಸಬೇಕೆಂದು ಕೇಳಿಕೊಳ್ಳುತ್ತೇನೆ.ಇತ್ಯಾದಿ
Chikmagalur
ಆನ್ಲೈನ್ ಟ್ರೇಡಿಂಗ್ ಹೆಸರಿನಲ್ಲಿ ₹14.67 ಲಕ್ಷ ವಂಚನೆ: ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲು
ಚಿಕ್ಕಮಗಳೂರು: ಆನ್ಲೈನ್ ಟ್ರೇಡಿಂಗ್ನಲ್ಲಿ ಅಧಿಕ ಲಾಭ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹14.67 ಲಕ್ಷ ಹಣ ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಫಿರ್ಯಾದುದಾರರು 2025ರ ಸೆಪ್ಟೆಂಬರ್ 18ರಂದು ಫೇಸ್ಬುಕ್ ವೀಕ್ಷಿಸುತ್ತಿದ್ದ ವೇಳೆ ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಹೆಸರಿನಲ್ಲಿ ಟ್ರೇಡಿಂಗ್ ಕುರಿತು ಜಾಹೀರಾತು ಕಂಡು ಅದರಲ್ಲಿದ್ದ ಲಿಂಕ್ ಅನ್ನು ಕ್ಲಿಕ್ ಮಾಡಿದ್ದಾರೆ. ಬಳಿಕ ತೆರೆದ ಅಪ್ಲಿಕೇಶನ್ ಮೂಲಕ ಟ್ರೇಡಿಂಗ್ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ನಂಬಿಸಲಾಗಿದೆ.

ಮೊದಲ ಹಂತದಲ್ಲಿ 200 ಡಾಲರ್ ನೋಂದಣಿ ಶುಲ್ಕ ಸೇರಿದಂತೆ ₹26,600 ಪಾವತಿಸಿದ ಬಳಿಕ, ವಿದೇಶಿ ಮೊಬೈಲ್ ಸಂಖ್ಯೆಗಳ ಮೂಲಕ ಕರೆ ಮಾಡಿದ ವರುಣ್ ಖನ್ನಾ ಎಂಬ ವ್ಯಕ್ತಿ, ಬ್ಯಾಂಕ್ ಠೇವಣಿಗಿಂತ ತಮ್ಮ ಸಂಸ್ಥೆಯಲ್ಲಿ ಹೂಡಿಕೆ ಮಾಡಿದರೆ ಪ್ರತೀ ತಿಂಗಳು ಹೆಚ್ಚಿನ ಲಾಭ ನೀಡುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ಫಿರ್ಯಾದುದಾರರು ಆರಂಭದಲ್ಲಿ ₹25,000 ಹಾಗೂ ನಂತರ ಆರ್ಟಿಜಿಎಸ್ ಮೂಲಕ ₹6 ಲಕ್ಷ ಸೇರಿದಂತೆ ವಿವಿಧ ಹಂತಗಳಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿದ್ದಾರೆ.
ಬಳಿಕ ಯುಕೆಯಲ್ಲಿ ಚಿನ್ನದ ಬಾಂಡ್ಗಳಲ್ಲಿ ಹೂಡಿಕೆ ಮಾಡಿದರೆ ಇನ್ನಷ್ಟು ಲಾಭ ಸಿಗುತ್ತದೆ ಎಂದು ಹೇಳಿ ಮತ್ತಷ್ಟು ₹5 ಲಕ್ಷ ಹೂಡಿಕೆ ಮಾಡುವಂತೆ ಒತ್ತಾಯಿಸಲಾಗಿದೆ. ಹಣವಿಲ್ಲ ಎಂದು ತಿಳಿಸಿದಾಗ, ವಿವಿಧ ಖಾತೆಗಳಿಂದ ₹5,94,085 ಫಿರ್ಯಾದುದಾರರ ಖಾತೆಗೆ ಜಮೆ ಮಾಡಿ ಅದನ್ನೂ ಮತ್ತೆ ತಾವು ಸೂಚಿಸಿದ ಖಾತೆಗಳಿಗೆ ಹೂಡಿಕೆ ಮಾಡುವಂತೆ ಮಾಡಲಾಗಿದೆ.
ನಂತರ ಟ್ರೇಡಿಂಗ್ನಲ್ಲಿ ನಷ್ಟವಾಗಿದೆ ಎಂದು ಹೇಳಿ ಹಣವನ್ನು ಹಿಂದಿರುಗಿಸದೇ ಸತಾಯಿಸಿದ್ದಾರೆ. ಅನುಮಾನಗೊಂಡ ಫಿರ್ಯಾದುದಾರರು ಸ್ನೇಹಿತರೊಂದಿಗೆ ವಿಚಾರಿಸಿದಾಗ ತಾವು ವಂಚನೆಗೆ ಒಳಗಾಗಿರುವುದು ತಿಳಿದುಬಂದಿದೆ.

ಒಟ್ಟಾರೆ VIXO Traders ಹಾಗೂ QUATINO FX 727283 ಎಂಬ ಹೆಸರಿನ ಕಂಪನಿಗಳಲ್ಲಿ ಹೂಡಿಕೆ ಮಾಡುವಂತೆ ನಂಬಿಸಿ ಒಟ್ಟು ₹14,67,241 ಹಣ ಪಡೆದು ವಂಚಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ, ರಾಣಾ ಪ್ರತಾಪ್ ಎಂಬ ವ್ಯಕ್ತಿ ಮೊಬೈಲ್ ಮೂಲಕ ಕರೆ ಮಾಡಿ ಇನ್ನಷ್ಟು ಹಣ ಹೂಡಿಕೆ ಮಾಡುವಂತೆ ಒತ್ತಾಯಿಸುತ್ತಿರುವುದಾಗಿಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಚಿಕ್ಕಮಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 40/2026ರಡಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(C), 66(D) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(4) ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
-
State5 hours agoಚೆನ್ನಮ್ಮ ಅಂತ್ಯಕ್ರಿಯೆ: ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಲು ಪ್ರಜ್ವಲ್ ರೇವಣ್ಣಗೆ ಅನುಮತಿ
-
Hassan19 hours agoಚೆನ್ನಮ್ಮ ಅಂತ್ಯಕ್ರಿಯೆ: ಹಾಸನದಲ್ಲಿ 5 ತಾತ್ಕಾಲಿಕ ಹೆಲಿಪ್ಯಾಡ್ಗಳ ನಿರ್ಮಾಣ
-
Chamarajanagar24 hours agoಅಕ್ರಮ ಮದ್ಯ ಸಾಗಾಟ: ಬೈಕ್, ಮಾಲು ಸಮೇತ ಆರೋಪಿ ಬಂಧನ
-
National4 hours agoಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭ
-
Chikmagalur18 hours agoಆನ್ಲೈನ್ ಟ್ರೇಡಿಂಗ್ ಹೆಸರಿನಲ್ಲಿ ₹14.67 ಲಕ್ಷ ವಂಚನೆ: ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲು
-
Kodagu22 hours agoಭಾಗಮಂಡಲ ಮೇಲ್ಸೇತುವೆ ಮತ್ತು ಸುತ್ತಲಿನ ಅಭಿವೃದ್ಧಿಗೆ 3 ಕೋಟಿ ಅನುದಾನ
-
Kodagu17 hours ago“ಭಾಗಮಂಡಲ ಕಾಮಗಾರಿಗೆ ₹3 ಕೋಟಿ: ಪೊನ್ನಣ್ಣ ಕೋರಿಕೆಗೆ ಅನುದಾನ”
-
Hassan2 hours agoನೀಟ್–ಜೆಇಇ ಫಲಿತಾಂಶದಲ್ಲಿ ಹೊಸ ಇತಿಹಾಸ ಬರೆದ ಪಾಠಶಾಲಾ ನೀಟ್ ಅಕಾಡೆಮಿ
