Chamarajanagar
ಬೈಕ್ ಡಿಕ್ಕಿ: ಮಹಿಳೆ ಸಾ*ವು
ಹನೂರು: ಮಹಿಳೆಯೊಬ್ಬರಿಗೆ ಬೈಕ್ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ತಾಲೂಕಿನ ಹಳೇ ಮಾರ್ಟಳ್ಳಿಯಲ್ಲಿ ಸಂಭವಿಸಿದೆ.
ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಹಳೆ ಮಾರ್ಟಳ್ಳಿ ಗ್ರಾಮದ ಮಾಜಿ ಸ್ಯೆನಿಕರಾದ ಕಸ್ಪಾರ್ ರವರ ಪುತ್ರಿ ಜೂಲಿ (40) ಎಂಬ ಮಹಿಳೆ ಮೃತಪಟ್ಟ ದುರ್ದೈವಿ.

ಗ್ರಾಮದ ಚರ್ಚ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಮುಗಿಸಿ ರಸ್ತೆ ಮೂಲಕ ನಡೆದುಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಬೈಕ್ವೊಂದು ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯುವಾಗ, ಜೂಲಿ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
Chamarajanagar
ಹುಲಿ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಆರ್.ಕೆ. ಮಧು
ಗುಂಡ್ಲುಪೇಟೆ : ಜು.30-ಹುಲಿ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ವನ್ಯಜೀವಿ ಛಾಯಾಗ್ರಾಹಕ ಆರ್.ಕೆ. ಮಧು ಹೇಳಿದರು.
ತಾಲೂಕಿನ ಕಬ್ಬಳ್ಳಿಯ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ವಿಶ್ವ ಹುಲಿ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 159 ಹುಲಿಗಳಿದ್ದು, ಅವುಗಳ ಸಂರಕ್ಷಣೆ ಅರಣ್ಯ ಇಲಾಖೆಯ ಜತೆಗೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಹುಲಿಗಳು ಹೆಚ್ಚಾಗಿ ನಾಡಿನತ್ತ ಬರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರು ಆತಂಕಕ್ಕೊಳಗಾಗದೆ ಎಚ್ಚರಿಕೆಯಿಂದ ವರ್ತಿಸಿ, ಅರಣ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು.
ಪ್ರಪಂಚದಲ್ಲಿ ಒಟ್ಟು ಒಂಬತ್ತು ವಿಧದ ಹುಲಿಗಳಿದ್ದರೂ, ಪರಿಸರದ ಏರುಪೇರು ಹಾಗೂ ಕಳ್ಳಬೇಟೆಯಿಂದ ಜಾವನ್, ಬಾಲಿ ಮತ್ತು ಕ್ಯಾಸ್ಪಿಯನ್ ಹುಲಿಗಳು ಅಳಿವಿನಂಚಿಗೆ ತಲುಪಿ ಈಗ ನಾಮಾವಶೇಷವಾಗಿವೆ. ಪ್ರಸ್ತುತ ರಾಯಲ್ ಬೆಂಗಾಲ್, ಸೈಬೀರಿಯನ್, ಮಲಯನ್, ಸುಮಾತ್ರನ್, ಇಂಡೋಚೈನಾ ಹಾಗೂ ಸೌತ್ ಚೈನಾ ಸೇರಿ ಆರು ಪ್ರಭೇದಗಳ ಹುಲಿಗಳು ಮಾತ್ರ ಉಳಿದಿವೆ. ವಿಶ್ವದಾದ್ಯಂತ ಸುಮಾರು 5,500 ಹುಲಿಗಳಿದ್ದು, ಭಾರತದಲ್ಲಿ 3,682 ಹಾಗೂ ಕರ್ನಾಟಕದಲ್ಲಿ 563 ಹುಲಿಗಳಿದ್ದು, ಹುಲಿಗಳ ಸಂಖ್ಯೆಯಲ್ಲಿ ರಾಜ್ಯವು ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದರು.

ಶಾಲೆಯ ಮುಖ್ಯ ಶಿಕ್ಷಕ ನಾಗರಾಜ ಶರ್ಮ ಮಾತನಾಡಿ, ಕಾಡುಗಳ ನಾಶ ಮತ್ತು ಆವಾಸಸ್ಥಾನದ ಕೊರತೆಯಿಂದ ಮಾನವ–ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ಪರಿಸರ ಸಂರಕ್ಷಣೆ ಮೂಲಕವೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದ್ದು, ವಿದ್ಯಾರ್ಥಿಗಳು ಪರಿಸರ ಪ್ರೇಮ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇಕೋ ಕ್ಲಬ್ ಸಂಚಾಲಕ ಯೋಗೀಶ್ ಮಾತನಾಡಿ, ಹುಲಿಗಳು ಕಾಡಿನ ಪರಿಸರ ಸಮತೋಲನ ಕಾಪಾಡುವ ಪ್ರಮುಖ ಪ್ರಾಣಿಗಳಾಗಿವೆ. ಅರಣ್ಯ ಮತ್ತು ವನ್ಯಜೀವಿ ಕಾರಿಡಾರ್ಗಳ ನಾಶದಿಂದ ಅವು ನಾಡಿನತ್ತ ಬರುತ್ತಿದ್ದು, ಪರಿಸರ ಸಂರಕ್ಷಣೆಯ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
Chamarajanagar
ಬಂಡೀಪುರ ಕಾಡಂಚಿನ ಬುಡಕಟ್ಟು ಜನರೊಂದಿಗೆ ಹುಟ್ಟುಹಬ್ಬ ಆಚರಣೆ
ಗುಂಡ್ಲುಪೇಟೆ : ಜು.30: ತಾಲೂಕಿನ ಬಂಡೀಪುರ ಕಾಡಂಚಿನ ಗುಡ್ಡೆಕೆರೆ ಹಾಡಿಯ ಬುಡಕಟ್ಟು ಜನರಿಗೆ ಹೊದಿಕೆ ಹಾಗೂ ಬಟ್ಟೆಗಳನ್ನು ವಿತರಿಸುವ ಮೂಲಕ ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ ರಾಜ್ಯ ಉಪಾಧ್ಯಕ್ಷ ಹಾಗೂ ವಕೀಲ ಉಮೇಶ್ ಅವರು ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಗುಡ್ಡೆಕೆರೆ ಹಾಡಿಯ ನಿವಾಸಿಗಳೊಂದಿಗೆ ಸಂವಾದ ನಡೆಸಿದ ಅವರು, ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದರು. ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆ ಕುರಿತು ಗ್ರಾಮಸ್ಥರು ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ವಕೀಲ ಉಮೇಶ್, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ, ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ ಚಾಮರಾಜನಗರ ಜಿಲ್ಲಾಧ್ಯಕ್ಷ ನಾಗೇಂದ್ರ ಮಾತನಾಡಿ, ಪ್ರತಿ ವರ್ಷವೂ ಬಡವರ ನಡುವೆ ಹುಟ್ಟುಹಬ್ಬ ಆಚರಿಸಿ ಅನ್ನದಾನ ಹಾಗೂ ವಿವಿಧ ಸೇವಾ ಕಾರ್ಯಗಳನ್ನು ನಡೆಸುತ್ತಿರುವ ಉಮೇಶ್ ಅವರ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ.
ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಬದುಕಿನಲ್ಲಿ ಸಂತಸ ಮೂಡಿಸುವ ಇಂತಹ ಸೇವಾ ಚಟುವಟಿಕೆಗಳಿಗೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಪಾಪಣ್ಣ, ರಾಜೇಂದ್ರ, ಕ್ರೇಜಿ ನಾಗರಾಜು, ಗೋವಿನಾಯಕ್, ಬುಡಕಟ್ಟು ಸಮುದಾಯದ ಪುಟ್ಟಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Chamarajanagar
ವಸ್ತುನಿಷ್ಠ ವರದಿಗಳಿಗೆ ಆದ್ಯತೆ ನೀಡಿ : ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ
ಚಾಮರಾಜನಗರ: ಮಾಧ್ಯಮದ ಪಾತ್ರ ಕೇವಲ ಸಮಾಜ ಹಾಗೂ ಆಡಳಿತದಲ್ಲಿರುವ ಲೋಪದೋಷಗಳನ್ನು ಸರಿಪಡಿಸುವುದು ಮಾತ್ರವಲ್ಲ, ಬದಲಾಗಿ ಜನರನ್ನು ಜಾಗೃತಗೊಳಿಸುವಲ್ಲಿಯೂ ಮಾಧ್ಯಮದ ಪಾತ್ರ ಮಹತ್ತರವಾಗಿದೆ. ಮಾಧ್ಯಮದವರು ಸತ್ಯಾಸತ್ಯತೆಗೆ ಆದ್ಯತೆ ನೀಡಿ, ವಸ್ತುನಿಷ್ಠ ವರದಿಗಳನ್ನು ಪ್ರಚುರಪಡಿಸಬೇಕು ಎಂದು ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆಡಿಪಿ ಸಭಾಂಗಣದಲ್ಲಿ ಭಾರತ ಸರ್ಕಾರದ ವಾರ್ತಾ ಶಾಖೆ, ಬೆಂಗಳೂರು (ಪಿಐಬಿ) ವತಿಯಿಂದ ಚಾಮರಾಜನಗರದಲ್ಲಿಂದು ಕೇಂದ್ರ ಸರ್ಕಾರದ 12 ವರ್ಷಗಳ ಕಾರ್ಯ ಸಾಧನೆಗಳು ಹಾಗೂ ನಶಮುಕ್ತ ಭಾರತ ಅಭಿಯಾನದ ಕುರಿತ ಆಯೋಜಿಸಲಾಗಿದ್ದ ‘ವಾರ್ತಾಲಾಪ’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ ಮಾತನಾಡಿ, ಮಾಧ್ಯಮ ಮಿತ್ರರಿಗೆ ಇಲಾಖೆಗಳ ಕುರಿತು ಪೂರಕ ಮಾಹಿತಿ ಇರುತ್ತದೆ. ಇವುಗಳ ಸತ್ಯಾಸತ್ಯತೆಯನ್ನು ಅರಿತು ವರದಿ ಮಾಡಿದಾಗ ತಳಮಟ್ಟದ ಜನರಿಗೆ ಮಾಹಿತಿ ಲಭ್ಯವಾಗುತ್ತದೆ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಶ್ರೀರೂಪ ಮಾತನಾಡಿ, ಚಾಮರಾಜನಗರದಲ್ಲಿ ವಾರ್ತಾಲಾಪ ಕಾರ್ಯಾಗಾರ ಆಯೋಜಿಸಿದ್ದು ಬಹಳ ಸೂಕ್ತವಾಗಿದೆ. ವೇಗವಾಗಿ ಮಾಹಿತಿಗಳು ಹರಿದಾಡುತ್ತಿರುವ ಇಂದಿನ ಯುಗದಲ್ಲಿ ಮಾಧ್ಯಮದವರು ಸತ್ಯವನ್ನು ಪರಾಮರ್ಶಿಸಿ, ಸಮಾಜದ ಕಟ್ಟಕಡೆಯ ವ್ಯಕ್ತಿಯೂ ತನ್ನ ಧ್ವನಿಯನ್ನು ತಲುಪಿಸುವಂತೆ ಮಾಡಬೇಕು. ಜಿಲ್ಲೆಯಲ್ಲಿ ಉತ್ತಮ ಆಡಳಿತ ನಡೆಸುವಲ್ಲಿ ಮಾಧ್ಯಮದ ಸಹಕಾರವೂ ಅತ್ಯಂತ ಅವಶ್ಯ ಎಂದು ಹೇಳಿದರು.

ಭಾರತ ಸರ್ಕಾರದ ವಾರ್ತಾ ಶಾಖೆಯ ಹೆಚ್ಚುವರಿ ಮಹಾನಿರ್ದೇಶಕ ಎಸ್.ಜಿ. ರವೀಂದ್ರ ವಾರ್ತಾಲಾಪ ಕಾರ್ಯಾಗಾರದ ಆಶಯ ನುಡಿಗಳನ್ನಾಡಿ ಕೇಂದ್ರ ಸರ್ಕಾರದ ಯೋಜನೆಗಳು ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಪ್ರಗತಿಯ ಕುರಿತು ಮಾಹಿತಿ ನೀಡುವ ಕಾರ್ಯಾಗಾರವೇ ವಾರ್ತಾಲಾಪ. ಪ್ರಸ್ತುತ ಕೇಂದ್ರ ಸರ್ಕಾರವು 12 ವರ್ಷಗಳ ಸಾಧನೆಗಳ ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, 2047ರ ವಿಕಸಿತ ಭಾರತ ಧ್ಯೇಯವನ್ನು ಸಾಧಿಸಲು ಕೃಷಿಕರು, ಹಿಂದುಳಿದ ವರ್ಗ, ಮಹಿಳೆ ಹಾಗೂ ಯುವಜನರನ್ನು ಕೇಂದ್ರಿಕೃತವಾಗಿಸಿ, ಅನೇಕ ಯೋಜನೆಗಳನ್ನು ರೂಪಿಸಿ, ಜಾರಿಗೆ ತಂದಿದೆ. ಪ್ರಸ್ತುತ ದೇಶಾದ್ಯಂತ ನಶಾಮುಕ್ತ ಭಾರತ ವಿಶೇಷ ಅಭಿಯಾನವೂ ಸಹ ನಡೆಯುತ್ತಿದೆ. ಜಿಲ್ಲೆಯ ಯೋಜನೆಗಳ ಅನುಷ್ಠಾನದ ಬಗ್ಗೆ ಮತ್ತಷ್ಟು ಪ್ರಚಾರ ಮಾಡಬೇಕು ಎಂದರು.
ಈ ಕಾರ್ಯಾಗಾರದಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಚಂದ್ರು, ಜಿಪಂ ಸಿಇಒ ಮೋನಾರೋತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎ. ರಮೇಶ್ ಸೇರಿದಂತೆ ಇತರರಿದ್ದರು.
ಮಾದಕ ವಸ್ತು ತಡೆಗೆ ರೈಸ್ ಯೋಜನೆ:
ವಾರ್ತಾಲಾಪದ ಗೋಷ್ಠಿಯಲ್ಲಿ ನಶಾಮುಕ್ತ ಭಾರತ ಅಭಿಯಾನದ ಕುರಿತು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್ ಮಾತನಾಡಿ, ಮಾದಕ ವಸ್ತುಗಳ ಬಳಕೆಯನ್ನು ತಡೆಗಟ್ಟಲು ‘ರೈಸ್’ ಎಂಬ ಯೋಜನೆ ರೂಪಿಸಲಾಗಿದೆ. ರೆಫ್ಯೂಸ್-ಇನ್ಫಾರ್ಮ್-ಸಪೋರ್ಟ್ ಎಂಪವರಮೆಂಟ್ ಎಂಬುದು ಇದರ ಅರ್ಥ. ಮಾದಕ ವಸ್ತುಗಳನ್ನು ತ್ಯಜಿಸುವುದು, ಅದರ ಬಳಕೆಯಾಗುತ್ತಿರುವ ಬಗ್ಗೆ ಮಾಹಿತಿ ನೀಡುವುದು, ಅಭಿಯಾನಕ್ಕೆ ಬೆಂಬಲ ನೀಡುವುದು ಹಾಗೂ ವ್ಯಸನಿಗಳನ್ನು ಮುಖ್ಯವಾಹಿನಿಗೆ ತರಲು ಅವರನ್ನು ಸಬಲೀಕರಿಸುವುದು ಈ ಯೋಜನೆಯ ಮುಖ್ಯ ಉದ್ದೇಶ ಎಂದರು.

ಉಚಿತ ಸಹಾಯವಾಣಿ ಸಂಖ್ಯೆ 1908 ಯನ್ನು ಇದಕ್ಕಾಗಿ ಮೀಸಲಿಡಲಾಗಿದೆ. 18 ರಿಂದ 35 ವರ್ಷಗಳ ಯುವಜನರನ್ನು ವ್ಯಸನಗಳಿಂದ ದೂರವಿರಿಸಲು ಹಾಗೂ ವ್ಯಸನಕ್ಕೆ ತುತ್ತಾದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ‘ಸನ್ಮಿತ್ರ’ ಎಂಬ ಆಪ್ತಸಮಾಲೋಚನೆ ಕಾರ್ಯವನ್ನು ಸಹ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಬುಡಕಟ್ಟು ಸಮುದಾಯಗಳ ಸಬಲೀಕರಣದ ಕುರಿತು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಬಿಂಧ್ಯಾ ಹೆಚ್.ಎಸ್. ಮಾತನಾಡಿ, ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡಗಳಿಗಾಗಿ ಅನುಷ್ಠಾನಗೊಂಡಿರುವ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಶಿಕ್ಷಣ, ಮೂಲಸೌಕರ್ಯ, ಆರೋಗ್ಯ ಸೇರಿದಂತೆ ಬುಡಕಟ್ಟು ಸಮುದಾಯಗಳ ಸಮಗ್ರ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರವು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಬುಡಕಟ್ಟು ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಕೇಂದ್ರ ಸರ್ಕಾರವು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಮಹಿಳೆ ಮತ್ತು ಮಕ್ಕಳ ಸಶಕ್ತೀಕರಣದ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾ ಅಧಿಕಾರಿ ಮಂಜುಳಾ ಬಿ. ಸಮೃದ್ಧ ರಾಷ್ಟ್ರಕ್ಕಾಗಿ ರೈತ ಕಾರ್ಯಕ್ರಮಗಳ ಕುರಿತು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಬಾನುಪ್ರಕಾಶ್ ಯು.ಹೆಚ್., ಆರ್ಥಿಕ ಸೇರ್ಪಡೆಯ ಕುರಿತು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ನ ವ್ಯವಸ್ಥಾಪಕಿ ಸುರೇಖಾ ಎಂ. ಮಾಹಿತಿ ಹಂಚಿಕೊಂಡರು.
-
Hassan5 hours agoರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ: ರೈತರ ಸಂಕಷ್ಟಕ್ಕೆ ಸ್ಪಂದಿಸಲು ಆಗ್ರಹ
-
Hassan21 hours agoಅಮ್ಮನ ದರ್ಶನಕ್ಕೆ ಬಂದವರಿಗೆ ಕೃತಜ್ಞತೆ ಅರ್ಪಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ : ಜನಸಾಗರವನ್ನು ಕಂಡು ಗದ್ಗದಿತರಾದ ಕುಮಾರಸ್ವಾಮಿ
-
Mysore9 hours agoಮೂರನೇ ಆಷಾಢ ಶುಕ್ರವಾರ: ಚಾಮುಂಡಿ ಬೆಟ್ಟದಲ್ಲಿ ಭಕ್ತರ ಸಾಗರ; ಗಿಳಿ ಹಸಿರು ಸೀರೆಯಲ್ಲಿ ಲಕ್ಷ್ಮೀ ಅಲಂಕಾರ
-
Kodagu6 hours agoಹಿಟ್ ಅಂಡ್ ರನ್: ಬೈಕ್ಗೆ ಕಾರು ಡಿಕ್ಕಿ, ಸವಾರ ಸಾ*ವು
-
Politics2 hours agoರಾಜ್ಯದ ಹಿತ ಕಾಪಾಡಲು ಸರ್ಕಾರ ಬದ್ಧ, ಕರ್ನಾಟಕ ಬಂದ್ ಕೈಬಿಡಿ: ಕನ್ನಡಪರ ಸಂಘಟನೆಗಳಿಗೆ ಡಿಕೆಶಿ ಮನವಿ
-
Mysore8 hours agoತಮಿಳುನಾಡಿಗೆ ನೀರು ಬಿಟ್ಟು ಈಗ ಸರ್ವಪಕ್ಷ ಸಭೆ ಏಕೆ?; ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ: ಬಿ.ವೈ. ವಿಜಯೇಂದ್ರ ಆಗ್ರಹ
-
Politics2 hours agoಕಾವೇರಿ ವಿವಾದ: ಆ. 13ರಂದು ಅಖಂಡ ಕರ್ನಾಟಕ ಬಂದ್ಗೆ ಕರೆ
-
Kodagu24 minutes agoಕೊಡಗಿನಲ್ಲಿ ಭಾರಿ ಗಾಳಿ ಮಳೆ: ಮಡಿಕೇರಿ & ಸೋಮವಾರಪೇಟೆ ತಾಲ್ಲೂಕಿನ ಶಾಲೆಗಳಿಗೆ ನಾಳೆ ರಜೆ ಘೋಷಣೆ
