Mysore
65 ಕೋಟಿ ವೆಚ್ಚದಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣ: ಶಾಸಕ ಡಿ.ರವಿಶಂಕರ್ ಭರವಸೆ
ವರದಿ: ಎಸ್ ಬಿ ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ: 65 ಕೋಟಿ ರೂಗಳ ವೆಚ್ಚದಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆ ಮಾಡಲಾಗುವುದು ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಡಯಾಲಿಸಿಸ್ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಇದು ಕೇಂದ್ರ ಬಿಂದುವಾಗಿರುವ ಕಾರಣ ಮಹಿಳೆಯರೇ ಜಾಸ್ತಿ ಆಸ್ಪತ್ರೆಗೆ ಬರುತ್ತಾರೆ. ಹಾಗಾಗಿ ಅನುಕೂಲಕ್ಕಾಗಿ ಹೆಚ್ಚಾಗಿ ವೈದ್ಯರುಗಳ ನೇಮಕ ಮಾಡಿ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ತೆರೆಯಲಾಗುವುದು. ಹಲವು ರೀತಿಯ ಸಮಸ್ಯೆಗಳು ಈ ಆಸ್ಪತ್ರೆಯಲ್ಲಿ ಇವೆ, ಅರೋಗ್ಯ ಸಚಿವರಿಗೆ ಮನವಿ ಮಾಡಿ ಸಮಸ್ಯೆ ಬಗ್ಗೆ ಹರಿಸಲಾಗುವುದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳ ಸಭೆ ಕರೆದು ಈ ನೂತನ ತಾಲೂಕಿಗೆ ಬೇಕಾಗಿರುವ, ತಾಲೂಕು ಪಂಚಾಯತಿ ಕಟ್ಟಡ, ಮಿನಿ ವಿಧಾನಸೌಧ ಸೇರಿದಂತೆ ಎಲ್ಲಾ ರೀತಿಯ ಕಟ್ಟಡಗಳನ್ನು ನಿರ್ಮಿಸಲು ಸೂಚನೆ ನೀಡಿದ್ದಾರೆ. ಈ ತಾಲೂಕಿನ ಸಂಪೂರ್ಣ ಜವಾಬ್ದಾರಿ ನನ್ನ ಮೇಲೆ ಇದೆ ನಾನು ಹಂತ ಹಂತವಾಗಿ ಏನೇ ಸಮಸ್ಯೆಗಳಿದ್ದರೂ ಬಗೆಹರಿಸುತ್ತೇನೆ ಇದು ಶತಸಿದ್ದ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿಹೆಚ್ಓ ಡಾ.ಕುಮಾರಸ್ವಾಮಿ, ಟಿಹೆಚ್ಓ ಡಾ.ನಟರಾಜ್, ತಹಶೀಲ್ದಾರ್ ನರಗುಂದ, ತಾಲೂಕು ಪಂಚಾಯತಿ ಇಓ ರವಿಕುಮಾರ್, ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಶೋಕ್, ತಜ್ಞ ವೈದ್ಯ ಡಾ.ಮಂಜುನಾಥ್, ಡಾ.ಕೀರ್ತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಉದಯಶಂಕರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಎಲ್.ಎಂ.ಸಣ್ಣಪ್ಪ, ಮಂಜೇಗೌಡ, ಬಸವರಾಜು, ಅಶ್ವಿನಿ, ದಿನೇಶ್, ಗೋಪಾಲ, ಗ್ರಾ.ಪಂ ಅಧ್ಯಕ್ಷ ಸುವರ್ಣ, ಉಪಾಧ್ಯಕ್ಷ ಶಶಿಕಲಾ, ಸಿಡಿಸಿ ಅಧ್ಯಕ್ಷರಾದ ಅಪ್ಪು ಶ್ರೀನಿವಾಸ್, ಎಸ್.ಎಮ್.ಪರೀಕ್ಷಿತ್, ಸಂತೋಷ, ಸಯ್ಯದ್, ಸೌಕತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Mysore
ವಿ. ಶ್ರೀನಿವಾಸ್ ಪ್ರಸಾದ್ ರವರು 50 ವರ್ಷಗಳ ಕಾಲ ರಾಜಕಾರಣ ಮಾಡಿದ ಪ್ರಬುದ್ಧ ರಾಜಕಾರಣಿ
ವರದಿ: ಮಹದೇವಸ್ವಾಮಿ
ನಂಜನಗೂಡು: ಮೈಸೂರು ಮತ್ತು ಚಾಮರಾಜನಗರ ಭಾಗಗಳಲ್ಲಿ ದಿ.ವಿ. ಶ್ರೀನಿವಾಸ್ ಪ್ರಸಾದ್ ರವರು ಸತತ 50 ವರ್ಷಗಳ ಕಾಲ ರಾಜಕಾರಣ ಮಾಡಿ ಪ್ರಬುದ್ಧ ರಾಜಕಾರಣಿಯಾಗಿದ್ದಾರೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಬಣ್ಣಿಸಿದರು.
ನಂಜನಗೂಡು ನಗರದ ಜೆಎಸ್ಎಸ್ ಮಂಗಳ ಮಂಟಪದಲ್ಲಿ ವಿ.ಶ್ರೀನಿವಾಸ ಪ್ರಸಾದ್ ರವರ ಅಭಿಮಾನಿಗಳ ಬಳಗ ನಂಜನಗೂಡು ವತಿಯಿಂದ ಸ್ವಾಭಿಮಾನಿ ಸಂಪದ ಎಂಬ ಶೀರ್ಷಿಕೆಯಲ್ಲಿ 78ನೇ ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಜ್ಯೋತಿ ಬೆಳಗಿಸಿ, ಶ್ರೀನಿವಾಸ್ ಪ್ರಸಾದ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿ ಮಾತನಾಡಿದರು.

ಶ್ರೀನಿವಾಸ್ ಪ್ರಸಾದ್ ರವರು ದೇಶದಲ್ಲಿ ಹಲವು ನಾಯಕರ ಜೊತೆ ಒಡನಾಟ ಇಟ್ಟುಕೊಂಡಿದ್ದರು. ಅಂಬೇಡ್ಕರ್ ರವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸುತ್ತಿದ್ದರು. ಅವರ ಮನಸ್ಸಿನ ತುಡಿತವನ್ನು ಹೇಳಿಕೊಳ್ಳುತ್ತಿದ್ದರು ಎಂದರು.
ನೇರವಾಗಿ ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದ್ದರು. ಎಲ್ಲಾ ಪಕ್ಷಗಳ ರಾಜಕಾರಣಿಗಳ ಜೊತೆಯಲ್ಲಿ ಸಂಬಂಧವನ್ನು ಹೊಂದಿಕೊಂಡಿದ್ದರು.
ಸಮಯಕ್ಕೆ ಸರಿಯಾಗಿ ರಾಜಕೀಯವನ್ನು ವಿಶ್ಲೇಷಣೆ ಮಾಡುತ್ತಿದ್ದರು. ರಾಜಕೀಯ ವ್ಯವಸ್ಥೆಯಲ್ಲಿ ಯಾವ ಸಮಾಜದಲ್ಲಿಯೂ ತಲ್ಲಣಗಳು ಬರಬಾರದು ಎನ್ನುತ್ತಿದ್ದರು . ಲೋಕಸಭಾ ಸದಸ್ಯರಾಗಿ ಶಾಸಕರಾಗಿ, ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ತತ್ವ ಬದ್ಧ ರಾಜಕಾರಣಿಯಾಗಿ ಸ್ವಾಭಿಮಾನಕ್ಕೆ ಧಕ್ಕೆ ಮಾಡದ ರೀತಿಯಲ್ಲಿ ವ್ಯಕ್ತಿತ್ವವನ್ನು ಅಳವಡಿಸಿಕೊಂಡಿದ್ದರು.ಅವರ ಕ್ಷೇತ್ರದಲ್ಲಿ ಯಾವುದೇ ಕೋಮು ಗಲಭೆ ನಡೆಯದಂತೆ ಎಚ್ಚರವಹಿಸಿಕೊಂಡಿದ್ದರು. ಇಂತಹ ಅಪರೂಪದ ರಾಜಕಾರಣಿ ಸಿಗುವುದು ಬಲು ಅಪರೂಪ. ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಶ್ರೀನಿವಾಸ್ ಪ್ರಸಾದ್ ರವರ ಕೊಡುಗೆ ಅಪಾರವಾಗಿದೆ ಎಂದು ಸ್ಮರಿಸಿದರು.
ಬಳಿಕ ಮಾಜಿ ಸಚಿವ ಶ್ರೀರಾಮುಲು ಮಾತನಾಡಿ, ರಾಜ್ಯ ಮತ್ತು ದೇಶದ ರಾಜಕಾರಣದಲ್ಲಿ ಯಾವುದೇ ಕಪ್ಪು ಚುಕ್ಕಿ ಇಲ್ಲದೆ ಸುದೀರ್ಘವಾಗಿ ಐವತ್ತು ವರ್ಷಗಳ ಕಾಲ ರಾಜಕಾರಣ ಮಾಡುವುದು ಎಂದರೆ ಅದು ಸುಲಭದ ಮಾತಲ್ಲ. ಅವರು ಮಾಡಿರುವ ಕೆಲಸ ಕಾರ್ಯಗಳು ಶಾಶ್ವತವಾಗಿ ಉಳಿದಿದೆ ಎಂದರು.

ಬುದ್ಧ, ಬಸವ ಅಂಬೇಡ್ಕರ್ ಚಿಂತನೆಯ ಹಾದಿಯಲ್ಲಿ ಜನರನ್ನ ಜಾಗೃತಿಗೊಳಿಸುತ್ತಿದ್ದ ಏಕೈಕ ನಾಯಕ ಪ್ರಸಾದ್ ರವರು. ರಾಜ್ಯ ಮತ್ತು ಕೇಂದ್ರದಲ್ಲಿ ಸಂಸದರಾಗಿ ಸಚಿವರಾಗಿ ಶಾಸಕರಾಗಿ ಜನಸೇವೆ ಮಾಡಿದ್ದಾರೆ. ತುಂಬಾ ಗಂಭೀರವಾಗಿ ಮಾತನಾಡುತ್ತಿರುವುದನ್ನು ಮತ್ತೊಮ್ಮೆ ಕೇಳಬೇಕು ಎನಿಸುವ ಹಂಬಲ ಇರುತ್ತಿತ್ತು. ರಾಜ್ಯದ ಮುಖ್ಯಮಂತ್ರಿಯಾಗಬೇಕಿತ್ತು. ಕೆಲವರ ಪಿತೂರಿಯಿಂದ ಮುಖ್ಯಮಂತ್ರಿಯ ಅವಕಾಶದಿಂದ ವಂಚಿತವರಾದರು. ಈ ಕ್ಷೇತ್ರದ ಜನರು ಅವರ ನೆನಪಿಗಾಗಿ ಅವರ ಅಳಿಯ ಹರ್ಷವರ್ಧನ್ ರವರಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿ ಕೊಡಬೇಕು. ಸೂರ್ಯ ಚಂದ್ರರು ಇರುವ ತನಕ ಅವರ ಹೆಸರು ಉಳಿಯುತ್ತದೆ ಎಂದರು.
ಮಾಜಿ ಸಚಿವ ಪಿಜಿ ಆರ್ ಸಿಂಧ್ಯಾ ಮಾತನಾಡಿ, ನಾನು 17 ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದಂತಹ ಸಂದರ್ಭದಲ್ಲಿ ತಾಯಿಯ ಸ್ಥಾನದಲ್ಲಿ ನಿಂತು ನನ್ನನ್ನು ಹಾರೈಕೆ ಮಾಡಿದ ಆತ್ಮೀಯ ಸ್ನೇಹಿತ ಪ್ರಸಾದ್. ಕೇಂದ್ರ ಮತ್ತು ರಾಜ್ಯದಲ್ಲಿ ವಿವಿಧ ಪಕ್ಷಗಳಲ್ಲಿ ಗೆಲುವು ಮತ್ತು ಸೋಲನ್ನು ಕಂಡು ನಿರಂತರವಾಗಿ ಒಡನಾಟ ಉಳಿಸಿಕೊಂಡು ಸಾಕಷ್ಟು ವಿಚಾರಗಳನ್ನು ವಿನಿಮಯ ಮಾಡಿಕೊಂಡು ಬಂದಿದ್ದೇವೆ. ಶ್ರೀನಿವಾಸ್ ಪ್ರಸಾದ್ ರವರ ಜೊತೆ ನಾನು ಉತ್ತಮ ರೀತಿಯಲ್ಲಿ ರಾಜಕಾರಣ ಮಾಡಿಕೊಂಡು ಬಂದ ದೆಸೆಯಿಂದ ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿ ಬರಮಾಡಿಕೊಂಡಿದ್ದೀರಿ. ಪ್ರಸಾದ್ ರವರ ರಾಜಕಾರಣದ ನೆನಪುಗಳು ಜೀವಂತವಿರುತ್ತವೆ ಎಂದು ಹೇಳಿದರು.

ಮಾಜಿ ಶಾಸಕ ಬಿ. ಹರ್ಷವರ್ಧನ್ ಮಾತನಾಡಿ, ನಮ್ಮ ಮಾವ ಶ್ರೀನಿವಾಸ್ ಪ್ರಸಾದ್ ರವರು ಚಾಮರಾಜನಗರ ಮತ್ತು ಲೋಕಸಭಾ ಕ್ಷೇತ್ರಗಳಲ್ಲಿ ಹಲವಾರು ಪಕ್ಷಗಳಲ್ಲಿ ಗೆಲುವು ಸಾಧಿಸಿ ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಉಳಿಯುವ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಅವರ ಹಾದಿಯಲ್ಲಿ ನಾನು ಕೂಡ ಐದು ವರ್ಷಗಳ ಕಾಲ ಶಾಸಕನಾಗಿ ಬರೋಬರಿ 900 ಕೋಟಿ ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ. ನನ್ನ ಅವಧಿಯ ಕೆಲವು ಕಾಮಗಾರಿಗಳಿಗೆ ಇನ್ನೂ ಕೂಡ ಗುದ್ದಲಿ ಪೂಜೆ ಕಾರ್ಯಗಳು ನಡೆಯುತ್ತಿವೆ. ಆ ಕಾರ್ಯಕ್ರಮಗಳಿಗೆ ನನ್ನನ್ನು ಕೂಡ ಆಹ್ವಾನಿಸುತ್ತಿದ್ದಾರೆ. ಆದರೆ, ನಾನು ಸ್ವಾಭಿಮಾನ ಇರುವ ವ್ಯಕ್ತಿ. ನಾನೇಕೆ ಹೋಗಲಿ ಎಂದು ಹಿಂದೇಟು ಹಾಕಿದ್ದೇನೆ. ನುಗು ಏತ ನೀರಾವರಿ ಸೇರಿದಂತೆ ಶಾಶ್ವತ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ. ಮುಂಬರುವ ದಿನಗಳಲ್ಲಿ ಕ್ಷೇತ್ರದ ಜನ ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆ ಮತ್ತು ವಿಶ್ವಾಸ ಇದೆ ಎಂದರು.
ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ಹಿರಿಯ ಸಾಹಿತಿ ಪ್ರೊ. ಕಾಳೇಗೌಡ ನಾಗವಾರ, ಶ್ರೀನಿವಾಸ್ ಪ್ರಸಾದ್ ರವರ ಧರ್ಮಪತ್ನಿ ಭಾಗ್ಯಲಕ್ಷ್ಮೀ, ಮಾಜಿ ಶಾಸಕ ಬಿ. ಹರ್ಷವರ್ಧನ್, ಬಿಜೆಪಿ ಮಂಡಲ ಅಧ್ಯಕ್ಷ ಕೆಂಡಗಣ್ಣಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಕುಂಬ್ರಹಳ್ಳಿ ಸುಬ್ಬಣ್ಣ, ಮಾಜಿ ತಾ.ಪಂ ಸದಸ್ಯ ಬದನವಾಳು ರಾಮು, ಹೆಮ್ಮರಗಾಲ ಸೋಮಣ್ಣ, ಬಿಜೆಪಿ ಪಕ್ಷದ ನಗರಾಧ್ಯಕ್ಷ ಸಿದ್ದರಾಜು, ಸೇರಿದಂತೆ ವಿ.ಶ್ರೀನಿವಾಸ್ ಪ್ರಸಾದ್ ರವರ ಅಭಿಮಾನಿಗಳ ಬಳಗದ ಪದಾಧಿಕಾರಿಗಳು ಬಿಜೆಪಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.
ಮತ್ತೊಮ್ಮೆ ಅವಕಾಶ ಕೊಡಿ
ದಿ.ವಿ.ಶ್ರೀನಿವಾಸ್ ಪ್ರಸಾದ್ ರವರ ಪತ್ನಿ ಭಾಗ್ಯಲಕ್ಷ್ಮೀ ರವರು ಮಾತನಾಡಿ,
ಚಾಮರಾಜನಗರ ಲೋಕಸಭಾ ಕ್ಷೇತ್ರ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರಗಳಲ್ಲಿ ಪತಿಯವರಾದ ಶ್ರೀನಿವಾಸ್ ಪ್ರಸಾದ್ ರವರು ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಎಲ್ಲ ವರ್ಗದ ಜನರ ಏಳಿಗೆಗೆ ಸುದೀರ್ಘವಾಗಿ ಐವತ್ತು ವರ್ಷಗಳ ಕಾಲ ನಿಮ್ಮಗಳ ಸೇವೆ ಮಾಡಿದ್ದಾರೆ. ನಮ್ಮ ಕುಟುಂಬದಿಂದ ನಿಮ್ಮ ಸೇವೆಗಳನ್ನು ಮಾಡಲು ನಮ್ಮ ಅಳಿಯ ಬಿ.ಹರ್ಷವರ್ಧನ್ ರವರಿಗೆ ನಂಜನಗೂಡು ಕ್ಷೇತ್ರದಿಂದ ಮತ್ತೊಮ್ಮೆ ಅವಕಾಶ ಕಲ್ಪಿಸಿಕೊಡಿ ಶ್ರೀನಿವಾಸ ಪ್ರಸಾದ್ ರವರ ಹೆಸರು ಶಾಶ್ವತವಾಗಿ ಉಳಿಯಲು ಅವಕಾಶ ಮಾಡಿಕೊಡಿ ಎಂದು ಶ್ರೀನಿವಾಸ್ ಪ್ರಸಾದ್ ರವರ ಧರ್ಮಪತ್ನಿ ಭಾಗ್ಯಲಕ್ಷ್ಮೀ ರವರು ನೆರೆದಿದ್ದ ಶ್ರೀನಿವಾಸ್ ಪ್ರಸಾದ್ ರವರ ಅಭಿಮಾನಿಗಳಲ್ಲಿ ಕೇಳಿಕೊಂಡರು.
Mysore
ನಂಜನಗೂಡು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದೆ: ಶಾಸಕ ದರ್ಶನ್ ಧ್ರುವನಾರಾಯಣ್
ವರದಿ: ಮಹದೇವಸ್ವಾಮಿ ಪಟೇಲ್
ನಂಜನಗೂಡು: ತಾಲೂಕು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಲಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.
ನಂಜನಗೂಡು ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಉದ್ಘಾಟನಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಮಾತನಾಡಿದರು.

ನಂಜನಗೂಡು ಶೈಕ್ಷಣಿಕವಾಗಿ ಧಾರ್ಮಿಕವಾಗಿ ಬಹಳ ಮುಂದೆ ಸಾಗುತ್ತಿದೆ.
ತಾಲ್ಲೂಕಿಗೆ ದೇಶದ ಪ್ರತಿಷ್ಠಿತ ಸರ್ಕಾರಿ ಶಾಲಾ ಕಾಲೇಜುಗಳು ಬರಲಿದೆ. ನಮ್ಮ ಮಕ್ಕಳ ಭವಿಷ್ಯ ಉತ್ತಮವಾಗಲಿದೆ.
ಪಿಯು ಕಾಲೇಜಿಗೆ ಸರ್ಕಾರದಿಂದ 1 ಕೋಟಿ ರೂ.ಗೂ ಅಧಿಕ ಹಣವನ್ನು ಅಭಿವೃದ್ಧಿ ಪಡಿಸಲು ನೀಡಿದ್ದೇವೆ. ನಮ್ಮ ತಂದೆ ಧ್ರುವನಾರಾಯಣ್ ರವರ ಎಜುಕೇಷನ್ ಟ್ರಸ್ಟ್ ವತಿಯಿಂದ ಸಿಇಟಿ ಮತ್ತು ನೀಟ್ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿಗಳನ್ನು ನೀಡಲಾಗಿತ್ತು. ಈ ತರಬೇತಿ ಪಡೆದ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಮುಂದಿನ ವಿದ್ಯಾಭ್ಯಾಸಕ್ಕೆ ಮುಂದಾಗಿದ್ದಾರೆ. ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿರುವ ವಿದ್ಯಾರ್ಥಿಗಳಿಗೆ ಸಿಇಟಿ ಮತ್ತು ನೀಟ್ ಮಾದರಿಯಲ್ಲಿ ವಿಶೇಷ ತರಗತಿಗಳನ್ನು ನಡೆಸಲು ಮುಂದಿನ ದಿನಗಳಲ್ಲಿ ಚಿಂತನೆ ನಡೆಸಲಾಗುವುದು ಎಂದರು.

ಆಧ್ಯಾತ್ಮಿಕ ಚಿಂತಕ ಶಂಕರ್ ದೇವನೂರು ಮಾತನಾಡಿ, ಇತ್ತಿಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಕಲಿಕೆಯಿಂದ ದೂರ ಉಳಿಯುತ್ತಿದ್ದಾರೆ. ಅವರ ಆಸಕ್ತಿ ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳು ಮೊಬೈಲ್ ಬಳಕೆಯಲ್ಲಿ ತಲ್ಲಿನ ರಾಗಿದ್ದಾರೆ. ಅವರನ್ನು ಪಠ್ಯ ಪುಸ್ತಕಗಳ ಕಡೆ ಕರೆ ತರುವುದು ನಮ್ಮ ಕರ್ತವ್ಯವಾಗಿದೆ. ಮೊಬೈಲ್ ಬಳಕೆ ಮಾಡುತ್ತಿರುವುದು ಯುವ ಜನಾಂಗದಲ್ಲಿ ಅತಿಯಾಗಿ ಕಂಡುಬರುತ್ತಿದೆ ಇದು ಆತಂಕಕಾರಿಯಾಗಿದೆ. ವಿದ್ಯಾರ್ಥಿಗಳು ಮೊಬೈಲ್ ವ್ಯಾಮೋಹವನ್ನು ಬಿಟ್ಟು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಹನುಮಂತರಾವ್, ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿ, ಆಧ್ಯಾತ್ಮಿಕ ಚಿಂತಕ ಶಂಕರ್ ದೇವನೂರು, ಅನುಸೂಯ ಶಂಕರ್ ದೇವನೂರು, ಕವಯತ್ರಿ ಭವಾನಿ ಲೋಕೇಶ್, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕುರಹಟ್ಟಿ ಮಹೇಶ್, ಪ್ರಾಂಶುಪಾಲರಾದ ಚಂದ್ರಶೇಖರ್ ಬಾಬು, ಕ್ರೀಡಾ ಚಟುವಟಿಕೆಗಳ ಕಾರ್ಯದರ್ಶಿ ನಟರಾಜು, ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ ಅಧಿಕಾರಿ ರಾಘವೇಂದ್ರ, ಉಪನ್ಯಾಸಕರಾದ ಮಹದೇವಯ್ಯ , ಶಿವಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
Mysore
ಮೊಬೈಲ್ ಬಳಕೆಯಿಂದ ಕ್ರೀಡಾ ಪಟುಗಳ ಸಂಖ್ಯೆ ಕ್ಷೀಣ: ಬಿಇಒ ಕೃಷ್ಣಪ್ಪ ವಿಷಾದ
ವರದಿ: ಎಸ್. ಬಿ.ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ : ಮೊಬೈಲ್ ಬಳಕೆಯ ವ್ಯಾಮೋಹದಿಂದ ಕ್ರೀಡೆಗಳ ಬಗ್ಗೆ ಸಾಕಷ್ಟು ಕ್ರೀಡಾಪಟುಗಳು ನಿರಾಶಕ್ತಿ ವಹಿಸುತ್ತಿರುವ ಪರಿಣಾಮವಾಗಿ ಪ್ರತಿಭಾವಂತ ಕ್ರೀಡಾಪಟುಗಳ ಸಂಖ್ಯೆ ಕ್ಷೀಣಗೊಳ್ಳುತ್ತಿದೆ ಎಂದು ಕೆ.ಅರ್.ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ವಿಷಾದ ವ್ಯಕ್ತಪಡಿಸಿದರು.
ಸಾಲಿಗ್ರಾಮ ತಾಲೂಕಿನ ಸಕ್ಕರೆ ಗ್ರಾಮದಲ್ಲಿ ನಡೆದ ಚುಂಚನಕಟ್ಟೆ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ವಾರ್ಷಿಕ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶಗಳ ಶಾಲಾ-ಕಾಲೇಜುಗಳಲ್ಲಿ ಪಠ್ಯ ಶಿಕ್ಷಣದ ಜತೆಯಲ್ಲೆ ಕ್ರೀಡೆ, ಸಾಹಿತ್ಯ ಮತ್ತು ಕಲೆ-ಸಾಂಸ್ಕೃತಿಕ ಇನ್ನಿತರ ಪಠ್ಯೇತರ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳಿಗೆ ಪೋಷಕರು ಮತ್ತು ಶಿಕ್ಷಕರು ಪ್ರೋತ್ಸಾಹಿಸುತ್ತಿರುವುದು ಉತ್ತಮವಾದ ಬೆಳವಣಿಗೆ ಎಂದರು.
ವಿದ್ಯಾರ್ಥಿಗಳ ದೈನಂದಿನ ಓದಿನಲ್ಲಿ ಕ್ರೀಡೆಯೂ ಸಹ ಒಂದು ಅಂಗವಾಗಿದೆ, ಪ್ರತಿಯೊಬ್ಬ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ತರ ತಿರುವು ಕೊಡುವ ಪ್ರಮುಖ ಕ್ಷೇತ್ರ ಕ್ರೀಡೆಯಾಗಿದೆ. ಕ್ರೀಡೆ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನ ಉತ್ತಮ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಗಿದ್ದು, ಒಂದಲ್ಲ ಒಂದು ಕ್ರೀಡೆಯಲ್ಲಿ ಸ್ಪರ್ಧೆ ಮಾಡಿ ದೈಹಿಕ, ಹಾಗೂ ಮಾನಸಿಕವಾಗಿ ಸದೃಢರಾಗಿ ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗಲಿದೆ ಎಂದು ಹೇಳಿದರು.

ಕ್ರೀಡಾಕೂಟದಲ್ಲಿ 27 ಶಾಲೆಯ ಕ್ರೀಡಾಪಟುಗಳು ಭಾಗವಹಿಸಿದ್ದರು.
ನಂತರ ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಪ್ರಾಂಶುಪಾಲ ಸುರೇಶ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸ್ವಾಮೀಗೌಡ, ದೈಹಿಕ ಪರಿವೀಕ್ಷಕ ಕುಮಾರಸ್ವಾಮಿ, ಮುಖ್ಯ ಶಿಕ್ಷಕ ಕರ್ತಾಲ್ ಕುಮಾರ್,.ಸಿ.ಓ ಪೂರ್ಣಿಮಾ, ಕುಸುಮ, ಸಿ.ಅರ್.ಪಿ.ಗಳಾದ, ನಂದಿನಿ, ನರ್ತನಾ, ಶಿಕ್ಷಕರಾದ ಸ್ವಾಮಿ, ಪ್ರಭು, ರವೀಂದ್ರ, ಲೋಕೇಶ್, ಶ್ರೀನಿವಾಸ್, ಸವಿತಾ, ದೀಪ,ಕೌಶಲ್ಯ, ಲಕ್ಷ್ಮಣೇಗೌಡ,ಪವಿತ್ರ, ಜಗದೀಶ್, ಮಂಜುಳಾ, , ದೈಹಿಕ ಶಿಕ್ಷಕರಾದ ಮಹೇಶ್ ಬಳಿಗಾರ್, ಬೈರನಾಯಕ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ .ಭರತ್, ಸದಸ್ಯ ಲೋಕೇಶ್, ಕುಮಾರಸ್ವಾಮಿ, ರಾಮಸ್ವಾಮಿ, ಸೇರಿದಂತೆ ಮತ್ತಿತರರು ಹಾಜರಿದ್ದರು.
-
Hassan20 hours agoಹುಡಾ ಅಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ ಸಮುದಾಯದ ಮುಖಂಡರಿಂದ ಪ್ರತಿಭಟನೆ: ಪಕ್ಷಗೋಸ್ಕರ ಕೆಲಸ ಮಾಡಿದವರಿಗೆ ಸ್ಥಾನ ನೀಡುವಂತೆ ಕಯುಮ್ ಆಗ್ರಹ
-
Hassan22 hours agoನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಸೈಯದ್ ತಾಜಿಂ ಬೃಹತ್ ಪ್ರತಿಭಟನೆ.
-
Hassan23 hours agoಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರ
-
Kodagu18 hours agoಸಂತ್ರಸ್ತರ ಕಾಳಜಿ ಕೇಂದ್ರಕ್ಕೆ ಶಾಸಕ ಡಾ. ಮಂತರ್ ಗೌಡ ಭೇಟಿ
-
Manglore19 hours agoಧರ್ಮಸ್ಥಳ ಪ್ರಕರಣ- ಕಾಡಿನಲ್ಲಿ ಶೋಧನೆ ನಡೆಸಿ ತೆರಳಿದ ಎಸ್ಐಟಿ ತಂಡ
-
Hassan21 hours agoಹಾಲುವಾಗಿಲು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸ್ವರೂಪ್ ಪ್ರಕಾಶ್ ಗುದ್ದಲಿ ಪೂಜೆ
-
Hassan18 hours agoಹಾಸನ: ದುರ್ನಾಥ ಬೀರುತ್ತಿರುವ ರಜತಾ ಕಾಂಪ್ಲೆಕ್ಸ್ ಹಿಂಭಾಗದ ರಸ್ತೆ
-
Mysore19 hours agoಪುರಸಭೆ ವಂಚನೆ ಪ್ರಕರಣ: ಸಿಐಡಿ ತನಿಖೆಯಾಗಬೇಕೆಂದು ಆಗ್ರಹಿಸಿದ ಡಾ. ಎ. ಎಸ್.ಚಂದ್ರಶೇಖರ್
