Chamarajanagar
ಮದುವೆಗೆ ಆಗಮಿಸುತ್ತಿದ್ದ ವರನ ಮೇಲೆ ಚಾಕು ದಾಳಿ: ಮೂವರು ಆರೋಪಿಗಳ ಬಂಧನ
ಕೊಳ್ಳೇಗಾಲ: ಪಟ್ಟಣದಲ್ಲಿ ಮದುವೆಗೆ ಆಗಮಿಸುತ್ತಿದ್ದ ವರನ ಮೇಲೆ ಚಾಕು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಜ.29 ರಂದು ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪಕ್ಕೆ ತೆರಳುತ್ತಿದ್ದ ವೇಳೆ, ವರ ರವೀಶ್ ಅವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬರು ಚಾಕುವಿನಿಂದ ದಾಳಿ ನಡೆಸಿ ಎಡ ತೋಳಿಗೆ ಗಾಯಗೊಳಿಸಿದ್ದರು.
ಈ ಕುರಿತು ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ತನಿಖೆ ನಡೆಸಲಾಯಿತು. ತನಿಖೆಯ ವೇಳೆ ವರನನ್ನು ಕೊಲೆ ಮಾಡಲು ಯತ್ನಿಸಿದ ಪ್ರಮುಖ ಆರೋಪಿಗಳಾದ ದರ್ಶನ್ ಮತ್ತು ಮಿಥುನ್ ಅವರನ್ನು ಇಂದು ಬಂಧಿಸಲಾಗಿದೆ. ಜೊತೆಗೆ, ಕೃತ್ಯದಲ್ಲಿ ವರನೊಂದಿಗೆ ಮದುವೆ ನಿಶ್ಚಯವಾಗಿದ್ದ ವಧುವೂ ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು, ಆಕೆಯನ್ನೂ ದಸ್ತಗಿರಿ ಮಾಡಲಾಗಿದೆ.

ಆರೋಪಿಗಳು ಬಳಸಿದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಬಂಧಿತ ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜ್ ಶ್ಲಾಘಿಸಿದ್ದಾರೆ.
Chamarajanagar
ವಿಕಸಿತ ಭಾರತದ ಕನಸಿಗೆ ಪೂರಕವಾದ ಕೇಂದ್ರ ಬಜೆಟ್ : ಮೂಡ್ನಾಕೂಡು ಪ್ರಕಾಶ್
ಚಾಮರಾಜನಗರ: ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ದೇಶದ ಆರ್ಥಿಕ ಪ್ರಗತಿಗೆ ವೇಗ ನೀಡುವ ಜೊತೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುವ ದೃಢ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್ ಹೇಳಿದರು.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೃಷಿ, ಕೈಗಾರಿಕೆ, ಆರೋಗ್ಯ ಹಾಗೂ ವಿವಿಧ ಕ್ಷೇತ್ರಗಳಿಗೆ ಸಮರ್ಪಕ ಒತ್ತು ನೀಡಲಾಗಿದ್ದು, ಸಮಗ್ರ ಅಭಿವೃದ್ಧಿಗೆ ಪೂರಕವಾದ ಬಜೆಟ್ ಇದಾಗಿದೆ. ವಿಶೇಷವಾಗಿ ಏಳು ಅಪರೂಪದ ರೋಗಗಳ ಔಷಧಿಗಳ ದರ ಕಡಿತಗೊಳಿಸಿರುವುದು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ದೊಡ್ಡ ವರದಾನವಾಗಿದೆ ಎಂದು ಹೇಳಿದರು.

ರೈತರ ಆದಾಯ ವೃದ್ಧಿ, ಉದ್ಯೋಗ ಸೃಷ್ಟಿ, ಯುವಜನತೆ ಮತ್ತು ಮಹಿಳಾ ಸಬಲೀಕರಣ, ಮೂಲಸೌಕರ್ಯ ಅಭಿವೃದ್ಧಿಗೆ ನೀಡಿರುವ ಆದ್ಯತೆಗಳು ‘ವಿಕಸಿತ ಭಾರತ’ ಎಂಬ ಗುರಿ ಸಾಧನೆಗೆ ನೆರವಾಗಲಿವೆ. ಎಲ್ಲ ವರ್ಗದ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾದ ಈ ಬಜೆಟ್ ದೇಶದ ಭವಿಷ್ಯಕ್ಕೆ ದಿಕ್ಕು ತೋರಿಸುವ ಅತ್ಯುತ್ತಮ ಬಜೆಟ್ ಆಗಿದೆ ಎಂದು ಅಭಿಪ್ರಾಯಪಟ್ಟರು.
Chamarajanagar
ಕೇಂದ್ರ ಬಜೆಟ್ ನಲ್ಲಿ ಜಿಲ್ಲೆಯ ರೈತರು, ಜನಸಾಮನ್ಯರಿಗೆ ದೊಡ್ಡ ವಂಚನೆ: ಸಂಸದ ಸುನೀಲ್ ಬೋಸ್ ಟೀಕೆ
ಚಾಮರಾಜನಗರ: ಕೇಂದ್ರ ಸರ್ಕಾರದ ಪ್ರಸಕ್ತ ಬಜೆಟ್ ಜಿಲ್ಲೆಯ ರೈತರಿಗೆ ಹಾಗೂ ಜನಸಾಮಾನ್ಯರಿಗೆ ದೊಡ್ಡ ವಂಚನೆ ಎಸಗಿದೆ ಎಂದು ಸಂಸದ ಸುನೀಲ್ ಬೋಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಜೆಟ್ನ ವೈಫಲ್ಯಗಳನ್ನು ಹೀಗೆ ಪಟ್ಟಿ ಮಾಡಿದ್ದಾರೆ.
ಕೃಷಿ ನಿರ್ಲಕ್ಷ್ಯ: ಜಿಲ್ಲೆಯ ಅರಿಶಿಣ ಬೆಳೆಗೆ ಸಂಸ್ಕರಣಾ ಘಟಕ ಹಾಗೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವಲ್ಲಿ ಕೇಂದ್ರ ವಿಫಲವಾಗಿದೆ. ಅರಿಶಿನ ಮಂಡಳಿ ವ್ಯಾಪ್ತಿಗೆ ಜಿಲ್ಲೆಯನ್ನು ಸೇರಿಸಬೇಕೆಂಬ ಬೇಡಿಕೆಯನ್ನು ಕಡೆಗಣಿಸಲಾಗಿದೆ.
ರೈಲ್ವೆ ಹಾಗೂ ಹೆದ್ದಾರಿ: ಚಾಮರಾಜನಗರ-ಹೆಜ್ಜಾಲ ರೈಲ್ವೆ ಯೋಜನೆಗೆ ಶೇ.100% ಅನುದಾನ ಮಂಜೂರು ಮಾಡದಿರುವುದು ಹಾಗೂ ಚಾಮರಾಜನಗರ-ಗುಂಡ್ಲುಪೇಟೆ, ಮೈಸೂರು-ಹೆಚ್.ಡಿ. ಕೋಟೆ ಹೆದ್ದಾರಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ತಿರಸ್ಕರಿಸಿರುವುದು ಖಂಡನೀಯ.
ಸಾಮಾಜಿಕ ಅನ್ಯಾಯ: ಬಜೆಟ್ನಲ್ಲಿ ಸಾಮಾಜಿಕ ನ್ಯಾಯ ಕ್ಷೇತ್ರಕ್ಕೆ ಶೇ 1% ಕ್ಕಿಂತಲೂ ಕಡಿಮೆ ಅನುದಾನ ನೀಡಿರುವುದು ಅಂಬೇಡ್ಕರ್ ಆಶಯಗಳಿಗೆ ವಿರುದ್ಧವಾಗಿದೆ. ಇದು ಶೋಷಿತರ ಬಗ್ಗೆ ಕೇಂದ್ರಕ್ಕಿರುವ ತಾತ್ಸಾರಕ್ಕೆ ಸಾಕ್ಷಿ.
ಜನವಿರೋಧಿ ಧೋರಣೆ: ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಅನುದಾನ ನೀಡದೆ ಈ ಬಜೆಟ್ ‘ಉಳ್ಳವರ ಪರ’ವಾಗಿ ನಿಂತಿದೆ. ರಾಜ್ಯದ ಕೇಂದ್ರ ಸಚಿವರು ಕರ್ನಾಟಕಕ್ಕೆ ನ್ಯಾಯ ಕೊಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.
ಒಟ್ಟಾರೆಯಾಗಿ ಈ ಬಜೆಟ್ ಬಡವರ ವಿರೋಧಿಯಾಗಿದ್ದು, ಅಭಿವೃದ್ಧಿಯನ್ನು ಕುಂಠಿತಗೊಳಿಸಿದೆ ಎಂದು ಸಂಸದ ಸುನೀಲ್ ಬೋಸ್ ಟೀಕಿಸಿದ್ದಾರೆ.
Chamarajanagar
ಕೇಂದ್ರ ಬಜೆಟ್ ಉಳ್ಳವರ ಪರವಾಗಿದೆ: ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಎನ್. ನಾಗಯ್ಯ
ಚಾಮರಾಜನಗರ: ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿದ 2026 -27 ನೇ ಸಾಲಿನ ಬಜೆಟ್ ಉಳ್ಳವರು, ಶ್ರೀಮಂತ ಉದ್ಯಮಿಗಳ ಪರವಾಗಿದೆಯೇ ವಿನಃ ಬಡತನ ಮತ್ತು ನಿರುದ್ಯೋಗ ಸಮಸ್ಯೆ ತೊಡೆದು ಹಾಕುವ ಬಜೆಟ್ ಆಗಿಲ್ಲದಿರುವುದು ವಿಷಾದನೀಯ ಎಂದು ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಎನ್. ನಾಗಯ್ಯ ಬಜೆಟ್ ಗೆ ವಿರೋಧ ವ್ಯಕ್ತಪಡಿಸಿದರು.
ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ ಅವರು, ವಿದೇಶಿ ಬಂಡವಾಳ ಹೂಡಿಕೆಗೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡುವ ಮೂಲಕ ದೇಶೀಯ ಬಂಡವಾಳವು ವಿದೇಶಿ ಕಂಪನಿಗಳ ಮೂಲಕ ಹರಿದುಬರುವ ವಾಮಾಮಾರ್ಗಕ್ಕೆ ಪರವಾನಿಗೆ ನೀಡುತ್ತಾ, ಉಳ್ಳವರು ಮತ್ತು ಶ್ರೀಮಂತ ಬಂಡವಾಳಶಾಹಿಗೆ ಮನ್ನಣೆ ನೀಡಲಾಗಿದೆ ಹಾಗೂ ತಮಿಳುನಾಡು ಪಶ್ಚಿಮಬಂಗಾಳ ಮುಂತಾದ ರಾಜ್ಯಗಳ ಬಗ್ಗೆ ಕಾಳಜಿವಹಿಸಿ ಚುನಾವಣಾ ಗಿಮಿಕ್ ಮುಂದುವರೆಸಿದೆ ಎಂದು ದೂರಿದರು.

ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಯಾವುದೇ ಹಣಕಾಸು ಯೋಜನೆ ನೀಡಿಲ್ಲ. ಬಹಳ ಮುಖ್ಯವಾಗಿ ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಯಾವುದೇ ಯೋಜನೆ ರೂಪಿಸದೇ ಕೇವಲ ಉತ್ತರ ಭಾರತದ ರಾಜ್ಯಗಳ ಪರವಾದ ಬಜೆಟ್ ಮಂಡಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕನ್ನಡಿಗರಿಗೆ ದ್ರೋಹ ಬಗೆದಿದ್ದಾರೆ ಎಂದರು.
ಗ್ರಾಮೀಣ ಭಾಗದ ಜನರು, ರೈತರು, ಕೃಷಿ ಕಾರ್ಮಿಕರ ಆರ್ಥಿಕ ಅಭಿವೃದ್ಧಿ ಆಗದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಒಟ್ಟಾರೆ ಕೇಂದ್ರ ಬಜೆಟ್ ಜನಸಾಮಾನ್ಯರ ವಿರೋಧಿ ಬಜೆಟ್ ಆಗಿದೆ ಎಂದು ಹೇಳಿದರು.
-
Manglore2 hours agoಜಿ.ಎಲ್. ಟ್ರೋಫಿ-2026: ಜಿ.ಎಲ್. ಹಾಸನ ತಂಡ ಚಾಂಪಿಯನ್
-
Cinema22 hours ago17 ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದ ಕನ್ನಡ ಚಿತ್ರ ಸ್ಪರ್ಧಾ ವಿಭಾಗದಲ್ಲಿ ಬಡಿಗೇರ್ ದೇವೇಂದ್ರ ನಿರ್ದೇಶನದ “ವನ್ಯಾ” ಚಿತ್ರ ಪ್ರದರ್ಶನ
-
Hassan3 hours agoಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ : ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂಸದ ಶ್ರೇಯಸ್ ಪಟೇಲ್
-
Hassan3 hours agoಮಾಧ್ಯಮ ಸ್ವಾತಂತ್ರ್ಯ ಸದ್ಬಳಕೆಯಾಗಲಿ: ಎಎಸ್ಪಿ ತಮ್ಮಯ್ಯ
-
National4 hours ago17ನೇ ಬೆಂಗಳೂರು ಚಿತ್ರೋತ್ಸವದಲ್ಲಿ ತಾಯಿ-ಮಗನ ಸಂಬಂಧದ ʼಅಮ್ಮಂಗೆ ಹೇಳ್ಬೇಡʼ ಚಿತ್ರ ಪ್ರದರ್ಶನ
-
State5 hours agoಸಿಎಂ ಹೌದು ಹುಲಿಯಾ ಆಗಿಲ್ಲ, ಹೌದು ಇಲಿಯಾ ಆಗಿದ್ದಾರೆ: ಆರ್.ಅಶೋಕ್
-
Mandya7 hours agoಎಂ. ಅಂಕೇಗೌಡರ ಪುಸ್ತಕ ಪ್ರೀತಿ ಇಂದಿನ ಯುವ ಪೀಳಿಗೆಗೆ ಮಾದರಿ : ಡಾ.ಮಾನಸ
-
Special23 hours agoಸಮುದಾಯ ಭವನ ನಿರ್ಮಾಣಕ್ಕೆ 20 ಲಕ್ಷ ರೂ. ಅನುದಾನ – ನಿಮ್ಮ ಹಳ್ಳಿಗೂ ಅವಕಾಶ!
