Mandya
ಹೈ ಮಾಕ್ಸ್ ಕಾಮಾಗಾರಿಗೆ ಅವರು ಚಾಲನೆ
ಶ್ರೀರಂಗಪಟ್ಟಣ : ಹಂತ, ಹಂತವಾಗಿ ಅಗತ್ಯ ಮೂಲ ಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಪುರಸಭೆ ಸದಸ್ಯ ಎಸ್.ಪ್ರಕಾಶ್ ಹೇಳಿದರು.
ಪಟ್ಟಣದ ೧೦ನೇ ವಾರ್ಡ್ ನ ಗಾಂಧಿನಗರದಲ್ಲಿ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದ ಅನುದಾನದಲ್ಲಿ ೭ ಕಡೆಗಳಲ್ಲಿ ನಿರ್ಮಿಸುತ್ತಿರುವ ಹೈ ಮಾಕ್ಸ್ ಕಾಮಾಗಾರಿಗೆ ಅವರು ಚಾಲನೆ ನೀಡಿ ನಂತರ ಮಾತನಾಡಿದರು.
ನನ್ನ ವಾರ್ಡ್ ಗೆ ಸಂಬಂಧಿಸಿದಂತೆ ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಮೂಲ ಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಸ್ಥಳೀಯ ನಿವಾಸಿಗಳು ಹಲವು ವರ್ಷಗಳಿಂದ ಹೈ ಮಾಕ್ಸ್ ದೀಪಕ್ಕೆ ಬೇಡಿಕೆ ಇಟ್ಟಿದ್ದರು ಅದು ಸಹ ಇಂದು ನೆರವೇರಿದೆ. ಉಳಿದಂತೆ ಆದ್ಯತೆ ಮೇರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಅವರು ತಿಳಿಸಿದರು.
ಈ ವೇಳೆ ಯಜಮಾನ್ ಸುಬ್ಬಣ್ಣ, ಅಶೋಕ್, ಹರೀಶ್, ಸತೀಶ್, ಕುಮಾರ್, ರಾಣಿ, ನಾಗಮಣಿ ಸೇರಿದಂತೆ ಇತರರು ಇದ್ದರು.
Mandya
SSLC ಪರೀಕ್ಷಾ ಫಲಿತಾಂಶ ಹೆಚ್ಚಿಸಲು ಕಾರ್ಯೋನ್ಮುಖರಾಗಲು ಸೂಚಿಸಿದ ಕೆ.ಆರ್.ನಂದಿನಿ
ಮಂಡ್ಯ: ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಉತ್ತಮಗೊಳಿಸುವ ಸಂಬಂಧ 56 ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಸದರಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿ ಫಲಿತಾಂಶ ಉತ್ತಮಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಜಿ.ಪಂ. ಸಿಇಓ ಕೆ.ಆರ್. ನಂದಿನಿ ಸೂಚಿಸಿದರು.
ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಉತ್ತಮಗೊಳಿಸುವ ಸಂಬಂಧ ಸಿಇಓ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನೋಡಲ್ ಅಧಿಕಾರಿಗಳು ತಮಗೆ ವಹಿಸಲಾಗಿರುವ ಶಾಲೆಗಳಿಗೆ ಡಿ. 20 ರೊಳಗಾಗಿ ಭೇಟಿ ನೀಡಿ ಶಾಲೆಯಲ್ಲಿನ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಡಿಡಿಪಿಐ ಅವರಿಗೆ ಸಲ್ಲಿಸಬೇಕು ಎಂದು ತಿಳಿಸಿದರು.

ಕೆಲವು ಶಾಲೆಗಳಲ್ಲಿ ಪಠ್ಯಗಳನ್ನು ಸರಿಯಾಗಿ ಭೋದಿಸುತ್ತಿಲ್ಲ, ಕೆಲವು ಶಿಕ್ಷಕರು ಆನೇಕ ಕಾರಣಗಳನ್ನು ನೀಡಿ ತರಗತಿಗಳನ್ನು ತೆಗೆದುಕೊಳ್ಳುತ್ತಿಲ್ಲ. ಯಾವುದೇ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುತ್ತಿಲ್ಲ ಹಾಗೂ ಮಾದರಿ ಪರೀಕ್ಷೆಗಳನ್ನು ನಡೆಸಿ ಪರೀಕ್ಷೆಗೆ ಸಜ್ಜುಗೊಳಿಸಲು ಪ್ರಯತ್ನಿಸುತ್ತಿಲ್ಲ ಎಂಬ ಬಗ್ಗೆ ಆನೇಕ ದೂರುಗಳು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಈ ಬಗ್ಗೆ ಶಾಲೆಗಳಿಗೆ ಭೇಟಿ ನೀಡಿ ಸ್ವತಃ ಪರಿಶೀಲಿಸಿ ಖಚಿತಪಡಿಸಿಕೊಂಡು ಸಮಸ್ಯೆಗಳನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಮಾದರಿ ಪರೀಕ್ಷೆಗಳನ್ನು ಮಾಡಲು ಕರೆ: ಜಿಲ್ಲೆಯ ಎಲ್ಲಾ 253 ಹೈಸ್ಕೂಲ್ ಗಳಲ್ಲಿಯೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಮಾದರಿ ಪರೀಕ್ಷೆಗಳನ್ನು ಮಾಡಬೇಕು. ಸದರಿ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ಅಂತರ ತಾಲೂಕು ಶಿಕ್ಷಕರಿಂದ ಮೌಲ್ಯಮಾಪನ ಮಾಡಿಸಲು ಜಿ.ಪಂ. ಸಿಇಓ ಸೂಚಿಸಿದರು.

ಸದರಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ವಿಶೇಷ ಗಮನ ನೀಡಿ ಯಾವ ವಿಷಯಗಳಲ್ಲಿ ದುರ್ಬಲರಾಗಿದ್ದಾರೆ ಎಂಬ ಬಗ್ಗೆ ಪರಿಶೀಲಿಸಿ ಸದರಿ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಿ ಪುನಾರಾವರ್ತನೆ ಮತ್ತು ವಿಶೇಷ ತರಗತಿಗಳ ಮೂಲಕ ವಿಷಯವನ್ನು ಮನದಟ್ಟು ಮಾಡಿಸಲು ಪ್ರಯತ್ನಿಸಬೇಕು.
ಕಳೆದ ಸಾಲಿನಲ್ಲಿ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳಿಗೆ ಹೆಚ್ಚಿನ ಆದ್ಯತೆ ನೀಡಿ
ನೋಡಲ್ ಅಧಿಕಾರಿಗಳು ತಮಗೆ ನೀಡಲಾಗಿರುವ 6ರಿಂದ 8 ಶಾಲೆಗಳ ಪೈಕಿ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳಿಗೆ ಆದ್ಯತೆ ನೀಡಿ ಆಗಿಂದಾಗ್ಗೆ ಭೇಟಿ ನೀಡಿ ಪರಿಶೀಲಿಸಿ ವಿದ್ಯಾರ್ಥಿಗಳ ಕಲಿಕೆಯ ಮಟ್ಟದಲ್ಲಿನ ಬದಲಾವಣೆ, ಶಿಕ್ಷಕರು ವೇಳಾಪಟ್ಟಿಯಂತೆ ತರಗತಿಗಳನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ, ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುತ್ತಿರುವ ಬಗ್ಗೆ, ಮಾದರಿ ಪರೀಕ್ಷೆಗಳನ್ನು ನಡೆಸುತ್ತಿರುವ ಬಗ್ಗೆ ಪರಿಶೀಲಿಸಬೇಕು ಎಂದು ಸೂಚಿಸಿದರು.
ವಿದ್ಯಾರ್ಥಿಗಳಿಗೆ ಆತ್ಮ ಸ್ಥೈರ್ಯ ತುಂಬಬೇಕು, ಓದಿನಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಪೋಷಕರೊಂದಿಗೆ ಚರ್ಚಿಸಿ ಮನೆಯಲ್ಲಿಯೂ ಓದಲು ಉತ್ತಮ ವಾತಾವರಣ ನಿರ್ಮಾಣ ಮಾಡುವಂತೆ ತಿಳಿಸಬೇಕು, ವಿದ್ಯಾರ್ಥಿಗಳೊಂದಿಗೆ ವೈಯಕ್ತಿಕವಾಗಿ ಚರ್ಚಿಸಿ ಯಾವುದಾದರೂ ವಿಷಯಗಳಲ್ಲಿ ಸಮಸ್ಯೆ ಇದಯೇ ಎಂಬ ಬಗ್ಗೆ ತಿಳಿಯಬೇಕು ಎಂದು ತಿಳಿಸಿದರು.

ಶಿಕ್ಷಕರು ಜವಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ: ಪ್ರತಿಯೊಬ್ಬ ವ್ಯಕ್ತಿಯು ತಾನು ಎಷ್ಟೇ ಎತ್ತರಕ್ಕೆ ಬೆಳೆದರೂ ತನಗೆ ಪಾಠ ಕಲಿಸಿದ ಗುರುವನ್ನು ಮರೆಯುವುದಿಲ್ಲ ಹಾಗೂ ಬಹಳ ಗೌರವದಿಂದ ಕಾಣುತ್ತಾನೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಜೀವನ ಶಿಕ್ಷಕರ ಪಾತ್ರ ಬಹಳ ಪ್ರಮುಖವಾದುದಾಗಿದೆ. ಆದ್ದರಿಂದ ಎಲ್ಲಾ ಶಿಕ್ಷಕರು ತಮ್ಮ ಜವಬ್ದಾರಿಯನ್ನು ಅರಿತು ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು.
ಎಸ್.ಎಸ್.ಎಲ್.ಸಿ. ಎನ್ನುವುದು ವಿದ್ಯಾರ್ಥಿಯ ಜೀವನದಲ್ಲಿ ಪ್ರಮುಖವಾದ ಘಟ್ಟವಾಗಿದ್ದು, ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ಬಹುತೇಕ ವಿದ್ಯಾರ್ಥಿಗಳ ಶಿಕ್ಷಣ ಅಂತಿಮಗೊಳ್ಳುತ್ತದೆ. ಅದರಲ್ಲಿಯೂ ಹೆಣ್ಣುಮಕ್ಕಳು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅನುತ್ತೀರ್ಣರಾದಲ್ಲಿ ಮತ್ತೊಮ್ಮೆ ಶಿಕ್ಷಣ ಮುಂದುವರೆಸುವುದು ಕಷ್ಟಸಾಧ್ಯದ್ದಾಗಿರುತ್ತದೆ. ಆ ಹಿನ್ನೆಲೆಯಲ್ಲಿ ಶಿಕ್ಷಕರು ತಮ್ಮ ಜವಬ್ದಾರಿಯನ್ನು ಅರಿತು ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.

ವಾಟ್ಸಪ್ ಗುಂಪು ರಚಿಸಿ ಜಿ.ಪಂ. ಕಚೇರಿಯಿಂದ ಮೇಲ್ವಿಚಾರಣೆ:
ನೋಡಲ್ ಅಧಿಕಾರಿಗಳು, ಬಿಇಓ ಗಳು, ಡಿಡಿಪಿಐ ಸೇರಿದಂತೆ ಇತರೆ ಅಧಿಕಾರಿಗಳ ವಾಟ್ಸಪ್ ಗುಂಪು ಸೃಜಿಸಿ ಜಿ.ಪಂ. ಕಚೇರಿಯಿಂದ ಮೇಲ್ವಿಚಾರಣೆ ನಡೆಸಲು ಉದ್ದೇಶಿಸಲಾಗಿದ್ದು, ಇಂದಿನಿಂದಲೇ ಎಲ್ಲಾ ನೋಡಲ್ ಅಧಿಕಾರಿಗಳು ಕಾರ್ಯಪವೃತ್ತರಾಗಿ ಶಾಲಾ ಭೇಟಿಯ ಛಾಯಾಚಿತ್ರಗಳು, ಫಲಿತಾಂಶ ಉತ್ತಮಗೊಳಿಸಲು ಸಲಹೆಗಳು, ಫಲಿತಾಂಶ ಉತ್ತಮಗೊಳಿಸಲು ಹಮ್ಮಿಕೊಳ್ಳಲಾಗಿರುವ ಕಾರ್ಯತಂತ್ರಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಸೂಚಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಡಿಡಿಪಿಐ ಲೋಕೇಶ್ ಜಿ., ಡಯಟ್ ಪ್ರಾಂಶುಪಾಲರಾದ ಯೋಗೇಶ್, ಜಿಲ್ಲಾ ಪಂಚಾಯತ್ ನ ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ) ಚಂದ್ರು, ಜಿಲ್ಲೆಯ ಎಲ್ಲಾ ಬಿಇಓ ಗಳು, ಬಿ.ಆರ್.ಸಿ. & ಸಿ.ಆರ್.ಸಿ. ಗಳು ಸೇರಿದಂತೆ ಇತರರು ಹಾಜರಿದ್ದರು.
ಮಿಷನ್ 90 ಗೆ ಚಾಲನೆ: ಪರೀಕ್ಷೆ ಆರಂಭವಾಗಲೂ ಇನ್ನೂ 92 ದಿನಗಳು ಬಾಕಿ ಇದ್ದು, ಎಲ್ಲಾ ದಿನಗಳಲ್ಲಿಯೂ ಎಸ್.ಎಸ್.ಎಲ್.ಸಿ. ಫಲಿತಾಂಶ ಉತ್ತಮಗೊಳಿಸಲು ಶಿಕ್ಷಣ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು, ಸಿಬ್ಬಂದಿಗಳು, ಶಿಕ್ಷಕರು ಕಾರ್ಯಪವೃತ್ತರಾಗಬೇಕು. ನಾಳೆಯಿಂದ 3 ದಿನಗಳ ಕಾಲ ಅಂದರೆ ಗುರುವಾರ, ಶುಕ್ರವಾರ ಮತ್ತು ಶನಿವಾರ ಗಳಂದು ಪ್ರತಿ ದಿನ 2 ವಿಷಯಗಳಂತೆ ಪರೀಕ್ಷೆ ಹಮ್ಮಿಕೊಳ್ಳಬೇಕು. ಪ್ರಶ್ನೆ ಪತ್ರಿಕೆಯನ್ನು ಜಿಲ್ಲಾ ಹಂತದಿಂದ ನೀಡಬೇಕು. ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಬೇಕು. ಉತ್ತರ ಪತ್ರಿಕೆಗಳನ್ನು ಬೇರೆ ತಾಲ್ಲೂಕಿನ ಶಿಕ್ಷಕರಿಂದ ಮೌಲ್ಯಮಾಪನ ನಡೆಸಬೇಕು. ಶೇಕಡ 50ಕ್ಕಿಂತ ಕಡಿಮೆ ಅಂಕ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಗಮನ ನೀಡಬೇಕು.

ರಾಜ್ಯ ಕಚೇರಿಯಿಂದ ನೀಡಲಾಗಿರುವ Student Corner ನಲ್ಲಿ ಲಭ್ಯವಿರುವ ನೀಲಿ ನಕ್ಷೆ ಯಂತೆ ಎಲ್ಲಾ ಆರು ವಿಷಯಗಳಿಗೆ 2 ದಿನ ಪಾಠ 3ನೇ ದಿನ ಕಿರು ಪರೀಕ್ಷೆ ನಡೆಸಬೇಕು. Student Corner ನಲ್ಲಿ ಲಭ್ಯವಿರುವ ಪ್ರಶ್ನೆಗಳ ಪೈಕಿ ಪ್ರಶ್ನೆಗಳ ಅಂಕಗಳ ಆಧಾರದಲ್ಲಿ ಪ್ರತ್ಯೇಕ ಬುಕ್ ಲೆಟ್ ಸಿದ್ದಪಡಿಸಿ ಎಲ್ಲಾ ಶಾಲೆಗಳಿಗೆ ವಿತರಿಸಬೇಕು. ಈ ಜವಬ್ದಾರಿಯನ್ನು ಡಯಟ್ ಪ್ರಾಂಶುಪಾಲರು ವಹಿಸಿಕೊಳ್ಳಬೇಕು.
ಅನುದಾನಿತ ಮತ್ತು ಖಾಸಗಿ ಶಾಲೆಗಳ ಫಲಿತಾಂಶ ಹೆಚ್ಚಿಸಲು ಕ್ರಿಯಾ ಯೋಜನೆ ಸಿದ್ದಪಡಿಸಿ: ಈ ಸಭೆಗೆ ಅನುಪಾಲನಾ ಸಭೆಯನ್ನು 15 ದಿನಗಳ ನಂತರ ಏರ್ಪಡಿಸಲಾಗುತ್ತಿದ್ದು, ಸದರಿ ಸಭೆಗೆ ಅನುದಾನಿತ ಮತ್ತು ಖಾಸಗಿ ಶಾಲೆಗಳ ಫಲಿತಾಂಶ ಹೆಚ್ಚಿಸುವ ಸಂಬಂಧ ಕ್ರಿಯಾ ಯೋಜನೆಯೊಂದಿಗೆ ಬರುವಂತೆ ನೋಡಲ್ ಅಧಿಕಾರಿಗಳು ಮತ್ತು ಡಿಡಿಪಿಐ ರವರಿಗೆ ತಿಳಿಸಿದರು.
Mandya
ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಕಡ್ಡಾಯ : ತಹಸೀಲ್ದಾರ್ ಜಿ.ಆದರ್ಶ
ನಾಗಮಂಗಲ: ಡಿ. 21ರಿಂದ 24ರ ವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ಐದು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ನೀಡುವಂತೆ ನಾಗಮಂಗಲ ತಹಸೀಲ್ದಾರ್ ಜಿ.ಆದರ್ಶ ಅವರು ತಾಲೂಕ್ ಅರೋಗ್ಯ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಟಿಎಚ್ಓ ಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಪಲ್ಸ್ ಪೋಲಿಯೋ ಕಾರ್ಯ ಪಡೆ ಸಮಿತಿ ಸಭೆಯಲ್ಲಿ ಮಾತನಾಡುತ್ತಾ, ಪುರಸಭೆ ಕಸ ವಿಲೇವಾರಿ ವಾಹನಗಳಲ್ಲಿ ಪೋಲಿಯೋ ಲಸಿಕ ಕಾರ್ಯಕ್ರಮದ ಕುರಿತು ಆಡಿಯೋ ಮುಖಾಂತರ ವ್ಯಾಪಕ ಪ್ರಚಾರ ಕೈಗೊಳ್ಳಿ. ಹಾಗೂ ಪ್ರಮುಖ ಸ್ಥಳಗಳದ ಬಸ್ ನಿಲ್ದಾಣ ಮಿನಿವಿಧಾನಸೌಧ ಮುಂಭಾಗ, ಬೆಳ್ಳೂರು ಪಟ್ಟಣ ಪಂಚಾಯಿತಿ ವ್ಯಾಪ್ತಿ ಸೇರಿದಂತೆ ಟೋಲ್ ಗಳಲ್ಲಿ ಪ್ರಚಾರ ಕೈಗೊಳ್ಳುವಂತೆ ಹಾಗೂ ಹೆಚ್ಚಿನ ನೆರವು ನೀಡುವಂತೆ ಕೋರಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ನಾರಾಯಣ್ ಮಾತನಾಡಿ, ಪಲ್ಸ್ ಪೋಲಿಯೋ ಹನಿ ನೀಡಲು ತಾಲೂಕಿನ ಒಟ್ಟು 151 ತಂಡ ಮಾಡಿಕೊಂಡಿದ್ದೇವೆ. ಹಾಗೂ 71 ಬೂತುಗಳಿವೆ ಗ್ರಾಮೀಣ ಭಾಗದಲ್ಲಿ 6625 ಮಕ್ಕಳು ನಗರ ಪ್ರದೇಶದಲ್ಲಿ 1744 ಮಕ್ಕಳು ಒಟ್ಟು 8369 ಮಕ್ಕಳು ಇರಲಿದ್ದಾರೆ.
ಪಟ್ಟಣದಲ್ಲಿ ಐದು ಬೂತ್ ಮಾಡಿಕೊಂಡಿದ್ದು, ಅದರಲ್ಲಿ ತಾಲೂಕು ಕಚೇರಿ ಹಾಗೂ ಬಸ್ ಸ್ಟ್ಯಾಂಡ್ ಬಳಿ ಮುಖ್ಯವಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಎ ಆರ್ ಟಿ ಓ ಹೊನ್ನೇಗೌಡ, ಎಲ್ಲಾ ಹೋಬಳಿಯ ವೈದ್ಯರುಗಳು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
Mandya
ಜಿಲ್ಲಾ ಕುರುಬರ ಸಂಘದ ಆಡಳಿತ ಮಂಡಳಿಯ ಚುನಾವಣೆಗೆ ಒತ್ತಾಯಿಸಿದ ಸಿ.ಟಿ.ಬೀರೇಶ್
ಮಂಡ್ಯ: ಜಿಲ್ಲಾ ಕುರುಬರ ಸಂಘದ ಆಡಳಿತ ಮಂಡಳಿಯ ಅಧಿಕಾರಾವಧಿ ಫೆಬ್ರವರಿ ತಿಂಗಳಿಗೆ ಮುಗಿಯಲಿದ್ದು, ಮುಂದಿನ ಅವಧಿಗೆ ಚುನಾವಣೆ ನಡೆಸಬೇಕು ಎಂದು ಸಂಘದ ಅಧ್ಯಕ್ಷ ಆಕಾಂಕ್ಷಿತ ಸದಸ್ಯ ಸಿ.ಟಿ.ಬೀರೇಶ್ ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಡಿ.28 ರಂದು ಸಂಘದ ಸರ್ವ ಸದಸ್ಯರ ಮಹಾಸಭೆಯ ಸಲುವಾಗಿ ಆಹ್ವಾನ ಹೊರಡಿಸಿರುವ ಸಂಘವು ಮುಂದಿನ ಅವಧಿಗೆ ಹಾಲಿ ಆಡಳಿತ ಮಂಡಳಿಯನ್ನೇ ಮುಂದುವರೆಸುವ ಸಂಬಂಧ ಚರ್ಚೆ ಮಾಡುವುದಾಗಿ ತಿಳಿಸಿದೆ ಎಂದರು.

ಹಾಲಿ ಆಡಳಿತ ಮಂಡಳಿ ಅಧಿಕಾರ ವಹಿಸಿದ್ದಾಗಿನಿಂದ ಸಂಘದ ಸದಸ್ಯತ್ವ ನೋಂದಣಿಗೆ ಅವಕಾಶ ನೀಡಲಾಗಿರಲಿಲ್ಲ. ಒತ್ತಾಯದ ಮೇರೆಗೆ ಮಂಡಳಿಯ ನಿರ್ದೇಶಕರಿಗೆ ಮಾತ್ರ ಸದಸ್ಯತ್ವದ ಅರ್ಜಿ ನೀಡಿ ನೋಂದಣಿಗೆ ಅವಕಾಶ ಮಾಡಿಕೊಡಲಾಯಿತು. ತೀವ್ರ ವಿರೋಧ ವ್ಯಕ್ತವಾದ ನಂತರ ಸ್ವತಂತ್ರವಾಗಿ ಸದಸ್ಯತ್ವ ನೋಂದಣಿ ಮಾಡಲಾಯಿತು ಎಂದು ಆರೋಪಿಸಿದರು.
ಸಹಕಾರ ತತ್ವ, ಸಂಘ ಸಂಸ್ಥೆಗಳ ನಿಯಮದಡಿ 5 ವರ್ಷಕ್ಕೊಮ್ಮೆ ಚುನಾವಣೆ ನಡೆಸಿ ಆಯ್ಕೆಯಾದ ಪ್ರತಿನಿಧಿಗಳ ಮೂಲಕ ಕಾರ್ಯಕಾರಿ ಮಂಡಳಿಯ ರಚನೆಯಾಗಬೇಕು. ಸರ್ವ ಸದಸ್ಯೆ ಮಹಾಸಭೆಯ ಆಹ್ವಾನದಲ್ಲಿ ಉಲ್ಲೇಖಿಸಲಾಗಿರುವ ಚರ್ಚೆ ವಿಷಯ ಅಪ್ರಸ್ತುತವಾಗಿದೆ. ಆದ್ದರಿಂದ ಸಂಘದ ಸದಸ್ಯರು ಸಭೆಯಲ್ಲಿ ಹಾಲಿ ಆಡಳಿತ ಮಂಡಳಿ ಮುಂದುವರೆಯಲು ಅವಕಾಶ ನೀಡದೇ ಚುನಾವಣೆಗೆ ಆಗ್ರಹಿಸುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಸದಸ್ಯರಾದ ಬಸವರಾಜು, ಎಂ.ಲೋಕೇಶ್ ಇದ್ದರು.
-
Chamarajanagar13 hours agoನಾಳೆ ರಂಗವಾಹಿನಿ ಜಾನಪದ ಕಾಲೇಜು ಉದ್ಘಾಟನೆ ಕಾರ್ಯಕ್ರಮ
-
Chikmagalur20 hours agoಬೆಳ್ಳಿ ಪದಕ ಪಡೆದ ಹೆಡ್ ಕಾನ್ಸ್ ಟೇಬಲ್ ಗಿರೀಶ್ ಟಿ ಎಸ್ ರವರಿಗೆ ಅಭಿನಂದನೆ ಸಲ್ಲಿಸಿದ ಚಿಕ್ಕಮಗಳೂರು ಜಿಲ್ಲಾ ಪೊಲೀಸ್
-
State15 hours agoರಾಜ್ಯ ಸರ್ಕಾರದಿಂದ 15 ವರ್ಷ ಮೀರಿದ ವಾಹನಗಳ ಸ್ಕ್ರ್ಯಾಪ್ ಅನುಮೋದನೆ: ರಾಮಲಿಂಗಾರೆಡ್ಡಿ
-
Chikmagalur12 hours agoಡಿ.20 ರಿಂದ ಜ.6ರವರೆಗೆ ಜಿಲ್ಲೆಯಲ್ಲಿ ಹೆಲಿಟೂರಿಸಂ ಚಟುವಟಿಕೆ
-
Mandya11 hours agoSSLC ಪರೀಕ್ಷಾ ಫಲಿತಾಂಶ ಹೆಚ್ಚಿಸಲು ಕಾರ್ಯೋನ್ಮುಖರಾಗಲು ಸೂಚಿಸಿದ ಕೆ.ಆರ್.ನಂದಿನಿ
-
Hassan19 hours agoಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕನ ಬ್ರೈನ್ ಡೆಡ್ : ಅಂಗಾಂಗಗಳನ್ನು ದಾನ ಮಾಡಿದ ಪೋಷಕರು
-
State11 hours agoಗೃಹಲಕ್ಷ್ಮೀ ಯೋಜನೆಯಲ್ಲಿ ಮೋಸ: ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಸಿ.ಟಿ.ರವಿ
-
Hassan10 hours agoಪೊಲೀಸರ ಭರ್ಜರಿ ಕಾರ್ಯಚರಣೆ: ಮಟ್ಕಾ ಆಡುತ್ತಿದ್ದ 17 ಮಂದಿ ಬಂಧನ
