Connect with us

Mandya

18 ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳು ಭದ್ರ: ಬಿಗಿ ಪೊಲೀಸ್ ಬಂದೋಬಸ್ತ್

Published

on

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಕ್ಷೇತ್ರದ ಎಲ್ಲಾ ಮತಗಟ್ಟೆಗಳ ಮತಯಂತ್ರಗಳು ಮಂಡ್ಯ ಜಿಲ್ಲಾ ಕೇಂದ್ರದ ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿನ ಭದ್ರತಾ ಕೊಠಡಿಗಳಲ್ಲಿ ಸುಭದ್ರವಾಗಿವೆ.

ಮತಯಂತ್ರಗಳನ್ನು ಇಟ್ಟಿರುವ ಕೊಠಡಿಗಳು ಸೇರಿದಂತೆ ಇಡೀ ಕಾಲೇಜಿಗೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಮತದಾನಕ್ಕೆ ಬಳಸಿದ ಎಲ್ಲ ವಿದ್ಯುನ್ಮಾನ ಮತಯಂತ್ರಗಳು, ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್, ವಿವಿಪ್ಯಾಟ್ ಹಾಗೂ ಎಲ್ಲ ಶಾಸನಬದ್ಧ ದಾಖಲೆಗಳನ್ನು ಜಿಪಿಎಸ್ ಅಳವಡಿಸಿದ ವಾಹನದ ಮೂಲಕ ಸೂಕ್ತ ಪೊಲೀಸ್ ಭದ್ರತೆಯೊಡನೆ ಮಂಡ್ಯ ಸರಕಾರಿ ಮಹಾವಿದ್ಯಾಲಯದ ಕಾಲೇಜಿಗೆ ಶುಕ್ರವಾರ ರಾತ್ರಿಯೇ ತರಲಾಯಿತು.

ಸ್ಟ್ರಾಂಗ್ ರೂಂಗಳಿಗೆ ಭದ್ರತೆ

ಶಾಂತಿಯುತವಾಗಿ ಮತದಾನ ಮುಗಿದಿದ್ದು ಎಲ್ಲ 2,076 ಮತಗಟ್ಟೆಗಳಿಂದಲೂ ವಿದ್ಯುನ್ಮಾನ ಮತಯಂತ್ರಗಳು ಮತ್ತು ಶಾಸನಬದ್ಧ ದಾಖಲೆಗಳನ್ನು ಜಿಲ್ಲಾ ಕೇಂದ್ರದಲ್ಲಿನ ಸ್ಟ್ರಾಂಗ್ ರೂಂಗಳಲ್ಲಿ ಇಟ್ಟು ಸೀಲ್ ಮಾಡಲಾಗಿದೆ. ಸಿಆರ್‌ಪಿಎಫ್ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸುರಕ್ಷತೆಯಲ್ಲಿ ಸ್ಟ್ರಾಂಗ್ ರೂಂಗಳ ಬಳಿ ಮೂರು ಹಂತದ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ರಾತ್ರಿಯಿಡೀ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹಾಗೂ ಎಲ್ಲ ಸಹಾಯಕ ಚುನಾವಣಾಧಿಕಾರಿಗಳು ಎಚ್ಚರವಿದ್ದು ಕರ್ತವ್ಯ ನಿರ್ವಹಿಸುವ ಮೂಲಕ ವಿದ್ಯುನ್ಮಾನ ಮತಯಂತ್ರಗಳು ಭದ್ರತಾ ಕೊಠಡಿ ಸೇರುವಂತೆ ಮಾಡಿದರು.

18 ಸ್ಟ್ರಾಂಗ್ ರೂಂ ಗಳು

ನಗರದ ಮಂಡ್ಯ ವಿವಿಯ ಕಾಮರ್ಸ್ ಬ್ಲಾಕ್‌ನ 18 ಕೊಠಡಿಗಳಲ್ಲಿ ಸ್ಥಾಪಿಸಿರುವ ಸ್ಟ್ರಾಂಗ್ ರೂಂ ಗಳಲ್ಲಿ ಎಲ್ಲ ವಿದ್ಯುನ್ಮಾನ ಮತಯಂತ್ರಗಳು ಇಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 2 ರಂತೆ ಸ್ಟ್ರಾಂಗ್ ರೂಂ ಗಳನ್ನು ಸ್ಥಾಪಿಸಲಾಗಿದೆ. ಇದಲ್ಲದೆ ಅಂಚೆ ಮತಗಳು ಹಾಗೂ ಶಾಸನಬದ್ಧ ದಾಖಲೆಗಳಿಗಾಗಿ ತಲಾ ಒಂದೊಂದು ಸ್ಟ್ರಾಂಗ್ ರೂಂ ತೆರೆಯಲಾಗಿದೆ.

ಒಂದು ವಿಧಾನಸಭಾ ಕ್ಷೇತ್ರಕ್ಕೆ 2 ಸ್ಟ್ರಾಂಗ್ ರೂಂ

ಸೀಲ್ ಮಾಡಿದ ಸ್ಟ್ರಾಂಗ್ ರೂಂಗಳನ್ನು ಪೊಲೀಸ್ ಇಲಾಖೆಯ ಸುಪರ್ದಿಗೆ ಪಡೆಯಲಾಗಿದೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಸ್ಟ್ರಾಂಗ್ ರೂಂಗಳಿಗೆ ಭದ್ರತೆ ಒದಗಿಸಿ, ಬಿಗಿ ಬಂದೋಬಸ್ತ್ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 2ರಂತೆ ಸ್ಟ್ರಾಂಗ್ ರೂಂಗಳನ್ನು ಮಾಡಲಾಗಿದೆ. ಇದರೊಂದಿಗೆ ಅಂಚೆ ಮತಗಳು, ಶಾಸನಬದ್ಧ ದಾಖಲೆಗಳಿಗಾಗಿ ಒಂದೊಂದು ಹೆಚ್ಚುವರಿ ಸ್ಟ್ರಾಂಗ್ ರೂಂ ಗಳನ್ನು ಸ್ಥಾಪಿಸಲಾಗಿದೆ ಎಂದು ಎಸ್ಪಿ ಎನ್.ಯತೀಶ್ ತಿಳಿಸಿದ್ದಾರೆ.

ವಿಧಾನಸಭಾ ಕ್ಷೇತ್ರವಾರು ಸ್ಥಾಪಿಸಿರುವ 16 ಭದ್ರತಾ ಕೊಠಡಿಯಲ್ಲಿ ಪ್ರತ್ಯೇಕವಾಗಿ ಎರಡು ಲಾಕ್ ಸಿಸ್ಟಂನಲ್ಲಿ ಸೀಲ್ ಮಾಡಿ, ಸುರಕ್ಷಿತವಾಗಿ ಇಡಲಾಗಿದೆ. ಸಿಆರ್‌ಪಿಎಫ್ ಮತ್ತು ಜಿಲ್ಲಾ ಪೊಲೀಸ್ ಸೇರಿದಂತೆ ರಕ್ಷಣಾ ಸಿಬ್ಬಂದಿ ವರ್ಗದವರಿಂದ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಎಲ್ಲ ಭದ್ರತಾ ಕೊಠಡಿಗಳ ಹೊರಭಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಭದ್ರತಾ ಕೊಠಡಿ ಸುರಕ್ಷತಾ ವ್ಯವಸ್ಥೆಯನ್ನು ವೀಕ್ಷಿಸಲು ಮತ ಎಣಿಕೆ ದಿನವಾದ ಜೂ.4 ರವರೆಗೆ ದಿನದ 24 ಗಂಟೆಗಳ ಕಾಲವೂ ಕಾರ‍್ಯನಿರ್ವಹಿಸಲು ಮೂರು ಪಾಳಿಯಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಮತಯಂತ್ರಗಳನ್ನು ಸಂಗ್ರಹ ಮಾಡಿ ಇಟ್ಟಿರುವ ಸರಕಾರಿ ಮಹಾವಿದ್ಯಾಲಯಕ್ಕೆ 24 ಗಂಟೆಗಳ ಭದ್ರತೆ ಒದಗಿಸಲಾಗಿದೆ.

ಸರ್ಕಲ್ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್‌ಗಳನ್ನು ಮೂರು ಪಾಳಿಯಲ್ಲಿ ಭದ್ರತೆ ಮೇಲ್ವಿಚಾರಣೆಗೆ ನಿಯೋಜನೆ ಮಾಡಲಾಗಿದೆ. ಕಾಲೇಜಿನ ಆವರಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಭದ್ರತಾ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದ್ದಾರೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜೂ.4ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ‍್ಯ ಆರಂಬವಾಗಲಿದ್ದು, ಅಲ್ಲಿಯವರೆಗೂ ಪೋಲೀಸ್ ಬಿಗಿ ಭದ್ರತೆಯನ್ನು ಮುಂದುವರೆಸಲಾಗುತ್ತದೆ.

Continue Reading
Click to comment

Leave a Reply

Your email address will not be published. Required fields are marked *

Mandya

ಶಾಲಾ ಜಾಗ ಖಾಸಗಿ ವ್ಯಕ್ತಿಯ ಹೆಸರಿಗೆ : ಬಿಇಓ ರಿಂದ ಸ್ಥಳ ಪರಿಶೀಲನೆ

Published

on

ಶ್ರೀರಂಗಪಟ್ಟಣ : ತಾಲೂಕಿನ ಹುಲಿಕೆರೆ ಗ್ರಾಮದ ಸರ್ವೆ ನಂ 101/16 ರ 1 ಎಕರೆ ಶಾಲಾ ಜಾಗವು ಖಾಸಗಿ ವ್ಯಕ್ತಿಯ ಹೆಸರಿಗೆ ವರ್ಗಾವಣೆಗೊಂಡಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು.

ಶಾಲಾ ಜಾಗವನ್ನು ಬದಲಾವಣೆ ಮಾಡಿ ಖಾಸಗಿ ವ್ಯಕ್ತಿ ಹೆಸರಿಗೆ ವರ್ಗಾಯಿಸಿರುವ ಕುರಿತು ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳ ಆದೇಶದನ್ವಯ ಕ್ಷೇತ್ರ ಶಿಕ್ಷಣಾಧಿಕಾರಿ ಗ್ರಾಮಕ್ಕೆ ತೆರಳಿ ಪರಿಶೀಲಿಸಿದರು.

1956 ರಲ್ಲಿ ಹುಲಿಕೆರೆ ಗ್ರಾಮದ ಪಟೇಲ್ ದಾಸೇಗೌಡ ಎಂಬುವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 1 ಎಕರೆ ಜಾಗವನ್ನು ನೀಡಿ ಖಾತೆ ಮಾಡಿಸಿದ್ದರು. 2022ರ ತನಕ ಈ ಜಾಗವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸರಿನಲ್ಲಿ ಖಾತೆ ಹೊಂದಿದ್ದು, 2023 ರಲ್ಲಿ ಏಕಾಏಕಿ ಖಾಸಗಿ ವ್ಯಕ್ತಿ ಹೆಸರಿಗೆ ಖಾತೆ ಮಾಡಲಾಗಿದೆ. ಈ ಕುರಿತು ಹುಲಿಕೆರೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದಾಖಲೆಗಳ ಸಮೇತ ದೂರು ನೀಡಿದ್ದು ದಾಖಲೆಗಳನ್ನು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಈ ಕುರಿತು ತನಿಖೆ ನಡೆಸಿ ಸ್ಥಳ ಪರಿಶೀಲನೆ ಮಾಡಿ ವರದಿ ನೀಡಲು ತಹಶೀಲ್ದಾರ್ ಗೆ ಆದೇಶ ಮಾಡಿದ್ದರು. ಈ ಹಿನ್ನಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ನೇತೃತ್ವದಲ್ಲಿ , ಭೂಪನ ಇಲಾಖೆಯ ಎ.ಡಿ.ಎಲ್ ಮೇಘಾ, ಕಂದಾಯ ಇಲಾಖೆಯ ರಾಜಸ್ವ ನೀರಿಕ್ಷಕ ಪ್ರಸನ್ನ ಒಳಗೊಂಡ ತಂಡ ಸ್ಥಳ ಪರಿಶೀಲನೆ ನಡೆಸಿ, ಸ್ಥಳಿಯರಿಂದ ಮಾಹಿತಿ ಸಂಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎ.ಡಿ.ಎಲ್.ಆರ್ ಮೇಘಾ ಈಗಲೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸರಲ್ಲಿ ಒಂದು ಎಕರೆ ಜಾಗದ ಖಾತೆ ಹೊಂದಿದೆ. ಆತಂಕ ಬೇಡ ಜಿಲ್ಲಾಧಿಕಾರಿಗಳ ಆದೇಶದಂತೆ ತಹಶೀಲ್ದಾರ್ ಮಾರ್ಗದರ್ಶನದಲ್ಲಿ ಸರ್ವೇ ನಡೆಸಿ ವರದಿ ನೀಡಲಾಗುತ್ತದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಮಾತನಾಡಿ, ಶಾಲೆಗೆ ಸೇರಿದ ಜಾಗ ಸರ್ಕಾರದ ಆಸ್ತಿಯಾಗಿದೆ. ಅತಿಕ್ರಮಣ ಹಾಗೂ ವರ್ಗಾವಣೆ ಕಾನೂನು ಬಾಹಿರವಾಗಿ ನಡೆಸಿದ್ದು, ಸರ್ವೇ ನಂತರ ತಿಳಿಯಲಿದೆ. ಈಗಿರುವ ಜಾಗದಲ್ಲಿ ಯಾರು ಅತಿಕ್ರಮ ಮಾಡದಂತೆ ಸೂಚಿಲಾಗುತ್ತದೆ ಎಂದರು.

ಹುಲಿಕರೆ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಚೆಲವರಾಜು, ಮುಖಂಡ ಶ್ರೀನಿವಾಸ ಅಧಿಕಾರಿಗಳಿಗೆ ದಾಖಲೆ ಸಮೇತ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಮಾಜಿ ಸದಸ್ಯೆ ರೇಶ್ಮಾಬಾನು ಸ್ಥಳಕ್ಕಾಗಮಿಸಿ ನಮ್ಮ ಮುಸ್ಲಿಂ ಸಮುದಾಯಕ್ಕೆ ಸೇರಿದ ಜಾಗ ಕೂಡ ಖಾಸಗಿ ವ್ಯಕ್ತಿಯ ಹೆಸರಿಗೆ ಮಾಡಿರುವುದು ಕಂಡು ಬಂದಿದೆ ಎಂದು ದೂರಿದರು.

ರಾಜ ಸ್ವ ನೀರಿಕ್ಷಕ ಪ್ರಸನ್ನ, ಗ್ರಾಮ ಲೆಕ್ಕಾಧಿಕಾರಿ ರಘು ಸೇರಿದಂತೆ, ಹುಲಿಕರೆ ಗ್ರಾಮಸ್ಥರು, ಮುಖಂಡರು ಇತರರು ಇದ್ದರು.

Continue Reading

Mandya

ಕಾನೂನಾತ್ಮಕ ಸಮಸ್ಯೆಗಳಿಗೆ ಸ್ಥಳದಲ್ಲಿ ಪರಿಹಾರದ ಭರವಸೆ : ಸಚಿವ ಎನ್. ಚಲುವರಾಯಸ್ವಾಮಿ

Published

on

ನಾಗಮಂಗಲ : ಜನಸಾಮಾನ್ಯರಿಗೆ ತಮ್ಮ ಸ್ಥಳದಲ್ಲಿ ಕಾನೂನಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ಜನಸ್ಪಂದನಾ ಕಾರ್ಯಕ್ರಮ ಸೂಕ್ತವಾಗಿದೆ ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ತಿಳಿಸಿದರು.

ತಾಲೂಕಿನ ದೇವಲಾಪುರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯೋಜನೆ ಮಾಡಿದ್ದ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರು ನಿಮ್ಮೂರಿನ ಸಮಸ್ಯೆಗಳನ್ನು ತಿಳಿಸಿದರೆ ಕಾನೂನಾತ್ಮಕವಾಗಿ ಸ್ಥಳದಲ್ಲೇ ಪರಿಹಾರ ನೀಡುವ ಜೊತೆಗೆ ನ್ಯಾಯ ದೊರಕಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಸಾಮಾಜಿಕ ಸಮಾನತೆ ನಿರ್ಮಾಣದ ಹಾದಿಯಲ್ಲಿ ಗ್ಯಾರಂಟಿ ಯೋಜನೆಗಳ ಅಭಿವೃದ್ಧಿ ಜನರ ಆರ್ಥಿಕ ಅಭಿವೃದ್ಧಿಗೆ ನೇರ ಪರಿಹಾರ ಒದಗಿಸುತ್ತಿದ್ದು, ಸರ್ಕಾರದ ಈ ಮಹತ್ವಕಾಂಕ್ಷೆ ಯೋಜನೆ ಬಡಜನರ ಆಶಾಕಿರಣವಾಗಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಸಚಿವರು ಭೀಮನಹಳ್ಳಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಆರ್.ನಂದಿನಿ, ತಹಸೀಲ್ದಾರ್ ಆದರ್ಶ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಮುಡ್ಲಿಗೌಡ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಸತೀಶ್. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್, ಸಚಿನ್ ಚೆಲುವರಾಯಸ್ವಾಮಿ, ಸುನಿಲ್, ಲಕ್ಷ್ಮಿಕಾಂತ್ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

Mandya

ಬಾಲ್ಯ ವಿವಾಹ ತಡೆಗಟ್ಟುವ ಕುರಿತು ಶಾಲಾ ಮಕ್ಕಳಿಗೆ ಅರಿವು

Published

on

ಶ್ರೀರಂಗಪಟ್ಟಣ : ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಈ ಬಗ್ಗೆ ಮಕ್ಕಳು ಪೋಷಕರಿಗೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚಿನ ಗಮನಹರಿಸಿದರೆ ತಾಲ್ಲೂಕಿನಲ್ಲಿ ನಡೆಯುವ ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಯಬಹುದಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ್ ಸಲಹೆ ನೀಡಿದರು.

ತಾಲೂಕಿನ ಬಲ್ಲೆನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಬಲ್ಲೆನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಆಯೋಜಿಸಿದ್ದ “ಬಾಲ್ಯ ವಿವಾಹ ತಡೆಗಟ್ಟುವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ” ಉದ್ದೇಶಿಸಿ ಮಾತನಾಡಿದರು.

ಬಾಲ್ಯ ವಿವಾಹ ಹಾಗೂ ಪೋಕ್ಸೋ ಪ್ರಕರಣಗಳು ತುಂಬಾ ಗಂಭೀರ ಸ್ವರೂಪದಾಗಿದ್ದು, ತಂದೆ, ತಾಯಿ, ಸಂಬಂಧಿಕರ ಅಭಿಪ್ರಾಯದ ಮೇರೆಗೆ ಬಾಲ್ಯ ವಿವಾಹ ನಡೆಯುತ್ತವೆ. ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಬಾಲ್ಯ ವಿವಾಹದಿಂದಾಗುವ ಗಂಭೀರ ಪರಿಣಾಮಗಳ ಬಗ್ಗೆ ಹಾಗೂ ಕಾಯ್ದೆ ಬಗ್ಗೆ ತಿಳುವಳಿಕೆ ನೀಡಿದಾಗ ಮಾತ್ರ ಬಾಲ್ಯ ವಿವಾಹ ತಡೆಗಟ್ಟಲು ಸಾಧ್ಯ. ಬಾಲ್ಯ ವಿವಾಹದಿಂದ ಹೆಣ್ಣು ಮಕ್ಕಳ ಮೇಲೆ ಮಾನಸಿಕವಾಗಿ ದೈಹಿಕವಾಗಿ ಗಂಭೀರ ಪರಿಣಾಮ ಬೀರಿ ಜೀವನ ಹಾಳಾಗುವಂತೆ ಮಾಡುತ್ತದೆ. ಇಂತಹ ಪ್ರಕರಣಗಳು ಕಂಡು ಬಂದರೆ 1098/112 ಸಹಾಯವಾಣಿ ಮೂಲಕ ವಿಷಯಗಳನ್ನು ಅಧಿಕಾರಿಗಳಿಗೆ ತಿಳಿಸಬೇಕು ಎಂದರು.

ಬಾಲ್ಯ ವಿವಾಹ ಕಂಡುಬಂದಲ್ಲಿ ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡುವವರು ಸೇರಿದಂತೆ ಮಗುವಿನ ಪೋಷಕರಿಗೆ,ಮಗುವಿನ ಜವಾಬ್ದಾರಿ ಹೊತ್ತವರಿಗೆ, ಭಾಗವಹಿಸಿದ ಇತರರ ವಿರುದ್ಧ ಪ್ರಕರಣ ದಾಖಲಿಸುತ್ತಾರೆ. ಆದ್ದರಿಂದ ಮಕ್ಕಳು ಬಾಲ್ಯ ವಿವಾಹಕ್ಕೆ ಒಳಗಾಗದೆ ಸಂಪೂರ್ಣ ಶಿಕ್ಷಣ ಪಡೆಯಬೇಕು.ಬಾಲ್ಯ ವಿವಾಹವಾದಲ್ಲಿ ಸಣ್ಣ ವಯಸ್ಸಿನಲ್ಲೇ ಗರ್ಭಿಣಿಯಾಗಿ ಕಡಿಮೆ ತೂಕದ ಮಗ ಮಗುವಿನ ಜನನ,ತಾಯಿ ಮರಣ, ಶಿಶು ಮರಣ, ಬುದ್ಧಿಮಾಂದ್ಯತೆ ಮಗು ಹುಟ್ಟುವ ಸಾಧ್ಯತೆ ಇದೆ. ಜೊತೆಗೆ ವಯಸ್ಸಿಗೆ ಮೀರಿದ ಜವಾಬ್ದಾರಿ ಹೊರಿಸಿದಂತಾಗುತ್ತದೆ. ದೈಹಿಕ ಬೆಳವಣಿಗೆಗೆ ಕುಂಠಿತವಾಗುತ್ತದೆ ಎಂದು ಹೇಳಿದರು.

ರಕ್ತ ಹೀನತೆ ಉಂಟಾಗಿ ಕಡಿಮೆ ತೂಕದ ಮಗುವಿನ ಜನನದ ಸಾಧ್ಯತೆ ಇದೆ ಹಾಗೆಯೇ ಗರ್ಭ ಚೀಲಕ್ಕೆ ಪೆಟ್ಟು ಬೀಳುವ ಕಾರಣ ಎಳೆಯ ವಯಸ್ಸಿನಲ್ಲಿ ಗರ್ಭಕೋಶ ತೆಗೆಯುವ ಸಂದರ್ಭ ಒದಗುತ್ತದೆ. ಎಳೆವಯಸ್ಸಿನಲ್ಲಿ ಮುಪ್ಪಾದಂತೆ ಕಾಣುತ್ತಾರೆ. ಭಯ ಭೀತ ವಾತಾವರಣದಲ್ಲಿ ಬದುಕುತ್ತಾರೆ ಹಾಗಾಗಿ ಎಲ್ಲರೂ ಸೇರಿ ಈ ಬಾಲ್ಯ ವಿವಾಹವನ್ನು ತಡೆಗಟ್ಟಿ ಬಾಲ್ಯ ವಿವಾಹ ಮುಕ್ತ ಶ್ರೀರಂಗಪಟ್ಟಣ ತಾಲೂಕನ್ನಾಗಿ ಘೋಷಿಸಲು ನಾವೆಲ್ಲರೂ ಸನ್ನದ್ಧರಾಗೋಣ ಎಂದರು.

ನಂತರ ಬಾಲ್ಯ ವಿವಾಹ ತಡೆ ಕುರಿತು ಮಕ್ಕಳಿಂದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಸೆಲ್ವಿ ಎಂ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪದ್ಮ,ಆಶಾ ಕಾರ್ಯಕರ್ತೆ ಸುಗುಣ ಹಾಗೂ ಸಹ ಶಿಕ್ಷಕರು, ಶಾಲಾ ಮಕ್ಕಳು ಇದ್ದರು.

Continue Reading

Trending

error: Content is protected !!