Hassan
ಫೆ.15 ಮತ್ತು 16 ರಂದು ಅಡಿಬೈಲು ಗ್ರಾಮದ ಶ್ರಿ ರಂಗನಾಥಸ್ವಾಮಿ ಜಾತ್ರೆ
ಸತೀಶ್ ಚಿಕ್ಕಕಣಗಾಲು
ಆಲೂರು: ತಾಲೂಕಿನ ಎರಡು ಹೋಬಳಿಗಳ ಧಾರ್ಮಿಕ ಸಂಬಂಧ ಬೆಸೆಯುವ ಪುರಾಣ ಪ್ರಸಿದ್ಧ ಅಡಿಬೈಲು ಗ್ರಾಮದ ಶ್ರಿ ರಂಗನಾಥಸ್ವಾಮಿ ದೇವರ ಐತಿಹಾಸಿಕ ಜಾತ್ರೆ ಫೆ.೧೫ ಮತ್ತು ೧೬ ರಂದು ನಡೆಯಲಿದೆ.
ದೇವಸ್ಥಾನದಲ್ಲಿ ಫೆ.೮ ರಿಂದ ೧೭ ರವರೆಗೆ ಉತ್ಸವಗಳು ಮತ್ತು ಅನ್ನ ಸಂತರ್ಪಣೆ ನಡೆಯುತ್ತದೆ. ಇತಿಹಾಸ ಹೇಳುವಂತೆ ಒಬ್ಬ ಕೊರಮನು ಬುಟ್ಟಿ ಹೆಣೆಯಲು ಬಿದಿರು ತರಲು ಹೋಗಿದ್ದನು. ಬಿದಿರು ಮೆಣೆ (ಗುಂಪೊದಕ್ಕೆ) ಕತ್ತಿಯನ್ನು ಹೊಡೆಯುವಾಗ ಆಯತಪ್ಪಿ ಏಟು ಒಂದು ಬಂಡೆಗೆ ತಾಗುತ್ತದೆ. ಆ ಬಂಡೆಯಿಂದ ಒಂದು ಬದಿಯಲ್ಲಿ ಹಾಲು ಮತ್ತೊಂದು ಬದಿಯಲ್ಲಿ ರಕ್ತ ಬರುತ್ತದೆ ಇದರಿಂದ ಗಾಬರಿಯಾದ ಅವನು ಪ್ರಜ್ಞೆ ತಪ್ಪಿ ಬೀಳುವನು. ಮನೆಗೆ ವಾಪಾಸು ಬಾರದ ಈತನನ್ನು ಮನೆಯವರು ಹುಡುಕಿಕೊಂಡು ಹೋದರು. ಪ್ರಜ್ಞೆಬಂದ ವ್ಯಕ್ತಿಯು ನಡೆದ ವಿಷಯವನ್ನು ತಿಳಿಸುತ್ತಾನೆ.
ಸ್ಥಳವನ್ನು ಗಮನಿಸಿದಾಗ ಬ್ರಹ್ಮದೇವನ ವಿಗ್ರಹ ಪತ್ತೆಯಾಗುತ್ತದೆ.ಆ ಉದ್ಭವ ಮೂರ್ತಿಯನ್ನು ಪಾಳೆಗಾರರಿಂದ ರಕ್ಷಿಸಲೆಂದು ವಿಷ್ಣುವರ್ಧನ ರಾಜನು ದೇವಾಲಯವನ್ನು ನಿರ್ಮಾಣ ಮಾಡಿಸುತ್ತಾನೆ. ಹೊಯ್ಸಳ ದೊರೆ ವಿಷ್ಣುವರ್ಧನ ಜೈನ ಧರ್ಮದಿಂದ ವೈಷ್ಣವ ಧರ್ಮಕ್ಕೆ ಮತಾಂತರ ಹೊಂದಿದ್ದರಿಂದ ಬ್ರಹ್ಮದೇವನನ್ನು ರಂಗನಾಥನೆಂಬ ಹೆಸರಿನಿಂದ ಕರೆಯಲಾರಂಭಿಸಿದರು.
ಕೆಂಚಮ್ಮನ ಹೊಸಕೋಟೆ ಮತ್ತು ಕುಂದೂರು ಹೋಬಳಿಗೆ ಸೇರಿದ ಸುಮಾರು ೪೮ ಹಳ್ಳಿಗಳಿಗೆ ಸಂಬಂಧಿಸಿದ ಈ ಜಾತ್ರೆ ಸಂಕ್ರಾಂತಿ ಹಬ್ಬದ ದಿನದಂದು ಕುಂದೂರು ಹೋಬಳಿ ವ್ಯಾಪ್ತಿಗೊಳಪುಡುವ ಸುಮಾರು ೨೦ ಗ್ರಾಮಗಳಿಗೆ ಅಡ್ಡೆ ದೇವರು ಹೋಗುತ್ತದೆ. ಉತ್ಸವ ಮುಗಿದ ನಂತರ ಜಾತ್ರೆ ನಡೆಯುವ ಏಳು ದಿನಗಳ ಮೊದಲು ಬೆಟ್ಟದಲ್ಲಿರುವ ದೇವಾಲಯಕ್ಕೆ ಕರೆತರಲಾಗುತ್ತದೆ.
ಮೊದಲ ದಿನ ಶನಿವಾರ ದೊಡ್ಡ ಹರಿಸೇವೆ. ಭಾನುವಾರ, ಸೋಮವಾರ ಹಕ್ಕಿನ ಉತ್ಸವ ನಡೆಯುತ್ತದೆ. ಮಂಗಳವಾರ ಬಿಂದಿಗಮ್ಮ ಕಳಸ ಹೊರುವ ಪೂಜಾರಿಯವರಿಗೆ ತಲೆ ಬೋಳಿಸಿ, ಹಸೆ ಹಾಕಿ ಕಾಸೆ ವೇಷದೊಂದಿಗೆ ದೇವಾಲಯಕ್ಕೆ ಕಳುಹಿಸಿಕೊಡಲಾಗುತ್ತದೆ. ಇವರು ಜಾತ್ರಾ ಮಹೋತ್ಸವ ಮುಗಿಯುವವರೆಗೂ ಹಣ್ಣ-ಹಂಪಲು ಬಿಟ್ಟರೆ ಬೇರೆನನ್ನೂ ಸೇವಿಸದೆ ಪೂಜಾ ಕೈಂಕರ್ಯದಲ್ಲಿ ತೊಡಗುತ್ತಾರೆ. ಶ್ರೀ ರಂಗನಾಥಸ್ವಾಮಿಗೂ ಬಿಂದಿಗಮ್ಮನಿಗೂ ಮದುವೆ ಮಾಡಿ ಆ ವೈಭವವನ್ನು ಆನಂದಿಸುವುದು ಈ ಜಾತ್ರೆಯ ವಿಶೇಷವಾಗಿದೆ.
ದೇವಾಲಯದಲ್ಲಿ ಗುರುವಾರ ರಾತ್ರಿ ಬಿಂದಿಗಮ್ಮನವರಿಗೆ ಹಸೆ ಹಾಕುವ ವಿಶೇಷ ಪೂಜೆ ಇರುತ್ತದೆ. ಶುಕ್ರವಾರ ರಾತ್ರಿ ಗಂಡನ ಕಡೆ ಊರಾದ ಭರತೂರಿನ ಹೊಳೆ ದಡಕ್ಕೆ ಉತ್ಸವ ಮೂರ್ತಿಯೊಂದಿಗೆ ಬಿಂದಿಗಮ್ಮನವರನ್ನು ಕರೆ ತರಲಾಗುವುದು. ಶನಿವಾರ ಹೊಳೆ ದಡದಲ್ಲಿ ಜಾತ್ರೆ ನಡೆಯುತ್ತದೆ. ಸಂಜೆ ಬಿಂದಿಗಮ್ಮನವರನ್ನು ಗಂಡನ ಮನೆಗೆ ಅಂದರೆ ರಂಗನಾಥಸ್ವಾಮಿ ದೇವಾಲಯಕ್ಕೆ ಕಳುಹಿಸುವ ಸಂದರ್ಭ ನೋಡಲೇಬೇಕಾದುದು. ಕಳಸ ಹೊರಡುವ ಮುನ್ನ ಕುಂದೂರಿನ ಗ್ರಾಮಸ್ಥರನ್ನು ಭರತೂರು ಗ್ರಾಮಸ್ಥರು ಬರಮಾಡಿಕೊಂಡು ವಿಶೇಷ ಆತಿಥ್ಯ ನೀಡಿ ಗೌರವಿಸುತ್ತಾರೆ.
ಹೂವು ತುಳಸಿಯಿಂದ ಅಲಂಕೃತವಾದ ಹರಿವಾಣದಲ್ಲಿ ಬಿಂದಿಗಮ್ಮನವರ ಕಳಸವನ್ನು ತಲೆ ಬೋಳಿಸಿದ್ದ ಪೂಜಾರಿ ತಲೆ ಮೇಲೆ ಇಡಲಾಗುತ್ತದೆ. ಸ್ವಲ್ಪ ದೂರ ನಿಧಾನವಾಗಿ ನಡೆದು ಹೋಗುತ್ತಿದ್ದ ಕಳಸ ಹೊತ್ತವರು, ನಂತರದಲ್ಲಿ ತಲೆ ಮೇಲಿರುವ ಕಳಸವನ್ನು ಕೈಯಲ್ಲಿ ಹಿಡಿಯದೆ ಓಡಲು ಪ್ರಾರಂಭ ಮಾಡುತ್ತಾರೆ. ಹೊಳೆಯಿಂದ ಸುಮಾರು ೧೦ ಕಿ. ಮೀ. ದೂರದ ಗುಡ್ಡದ ಮೇಲಿರುವ ದೇವಸ್ಥಾನಕ್ಕೆ ಏಳು ಊರು ಬಾಗಿಲಗಳನ್ನು ದಾಟಿಕೊಂಡು ಕೇವಲ ಮುಕ್ಕಾಲು ಗಂಟೆಯಲ್ಲಿ ತಲುಪುತ್ತದೆ.
ಊರು ಬಾಗಿಲಲ್ಲಿ ಅಕ್ಕಿ ಹಸೆ ಬರೆದು ಹಣ ಹಾಕಿರುತ್ತಾರೆ. ಬಾಗಿಲು ದಾಟುವ ಸಂದರ್ಭದಲ್ಲಿ ಕಳಸ ಹೊತ್ತವರು ತನ್ನ ಗದ್ದದಿಂದ ನೆಲದ ಮೇಲಿಟ್ಟ ಹಣವನ್ನು ಮುಟ್ಟುತ್ತಾರೆೆ. ಕಳಸ ಮುಂದೆ ಹೋದ ಕೂಡಲೆ ನೆರೆದಿದ್ದವರು ಹಸೆ ಅಕ್ಕಿಯನ್ನು ಮುಗಿಬಿದ್ದು ತೆಗೆದುಕೊಳ್ಳುತ್ತಾರೆ. ಈ ಸಂದರ್ಭ ನೋಡಲು ಅತ್ಯಂತ ಕುತೂಹಲಕಾರಿಯಾಗಿರುತ್ತದೆ.
ಭಾನುವಾರ ಬೆಟ್ಟದ ಮೇಲೆ ಹಗಲು ಜಾತ್ರೆ ನಡೆಯುತ್ತದೆ. ಸೋಮವಾರ ಹೇಮಾವತಿ ನದಿ ನೀರಿನಿಂದ ಅಭಿಷೇಕದೊಂದಿಗೆ ಜಾತ್ರಾ ವಿಶೇಷ ಪೂಜಾ ಕಾರ್ಯಕ್ಕೆ ನಾಂದಿ ಹಾಡಲಾಗುತ್ತದೆ. ನಂತರ ಯುಗಾದಿ ಹಬ್ಬದ ಸಂದರ್ಭದಲ್ಲಿ ಭರತೂರು ಕಡೆಗೆ ಸೇರುವ ಸುಮಾರು ೧೦ ಗ್ರಾಮಗಳಲ್ಲಿ ಅಡ್ಡೆ ಉತ್ಸವ ನಡೆಯುತ್ತದೆ ಮುಜರಾಯಿ ಇಲಾಖೆಗೆ ಸೇರಿದ ಅಡಿಬೈಲು ಶ್ರೀ ರಂಗನಾಥಸ್ವಾಮಿ ದೇವರ ಜಾತ್ರೆ ಫೆ. ೧೫ ರಂದು ಭರತೂರು ಗ್ರಾಮ ಹೇಮಾವತಿ ಹಿನ್ನಿರು ಬದಿಯಲ್ಲಿ ಮತ್ತು ೧೬ ರಂದು ರಂಗನಬೆಟ್ಟದ ಮೇಲೆ ನಡೆಯುತ್ತದೆ ಆಲೂರಿನಿಂದ ೧೮ ಕಿ. ಮೀ. ಮಗ್ಗೆ-ರಾಯರಕೊಪ್ಪಲು ಮಾರ್ಗವಾಗಿ ಪ್ರತಿದಿನ ಸಾರಿಗೆ ಬಸ್ ವ್ಯವಸ್ಥೆ ಇರುತ್ತದೆ ಭಕ್ತರು ಸ್ವಚ್ಚತೆಯನ್ನು ಕಾಪಾಡಬೇಕು ಎನ್ನುತ್ತಾರೆ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಿ. ಉಮೇಶ್.
Hassan
ಗಾಂಜಾ ಅಮಲಿನಲ್ಲಿ ಯುವಕನೋರ್ವನ ಹ*ತ್ಯೆ: ಆರೋಪಿಯನ್ನು ಬಂಧಿಸಿದ ಪೊಲೀಸರು
ಹಾಸನ: ಗಾಂಜಾ ಅಮಲಿನಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿ ಶವನದ ಮುಂದೆಯೇ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ವಿಕೃತಿ ಮೆರೆದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಲೂರು ತಾಲೂಕು ದೊಡ್ಡಕಣಗಾಲು ಗ್ರಾಮದ ಆಟೋರಿಕ್ಷಾ ಚಾಲಕ ಉಲ್ಲಾಸ್ ಕ್ಯಾಟಿ(21) ಬಂಧಿತ ಆರೋಪಿ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಅವರು ಮಾತನಾಡಿ , ಬಂಧಿತ ಆರೋಪಿ ಹಾಗೂ ಕೊಲೆಯಾದ ಯುವಕ ಹೂವಿನಹಳ್ಳಿ ಗ್ರಾಮದ ಕೀರ್ತಿ (21) ಇಬ್ಬರೂ ಆಟೋ ಚಾಲಕರಾಗಿದ್ದು ಸ್ನೇಹಿತರಾಗಿದ್ದು ಡಿ. 8ರಂದು ಸಂಜೆ ಕ್ಷುಲ್ಲಕ ಕಾರಣಕ್ಕೆ ಕೀರ್ತಿಯೊಂದಿಗೆ ಜಗಳ ತೆಗೆದು ಉಲಾಸ್ ಹಾಗೂ ಇತರ ಆರೋಪಿಗಳು ಕೀರ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಬಳಿಕ ಬಂಧಿತ ಆರೋಪಿ ಉಲ್ಲಾಸ್ ಶವದ ಮುಂದೆಯೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ ಎಂದು ಮಾಹಿತಿ ನೀಡಿದ್ದಾರೆ.

ಡಿ. 9 ರಂದು ಬೆಳಗ್ಗೆ ಮೃತ ಕೀರ್ತಿ ಸಹೋದರ ಕಿರಣ್ ಅವರ ಮೊಬೈಲ್ಗೆ ಬಂದ ವೀಡಿಯೋ ನೋಡಿ ಕೂಡಲೇ ಹಾಸನ ನಗರ ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ತಿಳಿಸಿದ್ದರು. ಬಳಿಕ ನಗರ ಠಾಣೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಿಯಾಂಕ, ಪೊಲೀಸ್ ಹೆಡ್ ಕಾನ್ಸ್ಟೇಬಲ್ ಹರೀಶ್, ಸಿಬ್ಬಂದಿ ಲತೇಶ ಅವರೊಂದಿಗೆ ವಿಡಿಯೋದಲ್ಲಿದ್ದ ಜಾಗದ ಅಂದಾಜಿನಲ್ಲಿ ಚನ್ನಪಟ್ಟಣ ಮತ್ತು ಬಿಟ್ಟಗೌಡನಹಳ್ಳಿ ಜಂಕ್ಷನ್ ನಡುವಿನ ಪವನಪುತ್ರ ಕೋಳಿ ಫಾರಂ ಹಿಂಭಾಗದ ಖಾಲಿ ಜಾಗದ ಮುಳ್ಳು ಮತ್ತು ಗಿಡಗಳ ನಡುವೆ ಹುಡುಕುತ್ತಾ ಬಂದಾಗ ಕೀರ್ತಿ ಶವ ಪತ್ತೆಯಾಗಿದೆ.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಮುಖ ಆರೋಪಿ ಉಲ್ಲಾಸ್ನನ್ನು ಬಂಧಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ತಿಳಿಸಿದರು.
Hassan
ಡಿ. 11ರಿಂದ 14 ರವರೆಗೆ ಶ್ರೀ ಮೆಳೆಯಮ್ಮದೇವಿ, ಚಿಕ್ಕಮ್ಮದೇವಿ ಅದ್ದೂರಿ ಜಾತ್ರಾ ಮಹೋತ್ಸವ
ಅರಸೀಕೆರೆ: ನಗರದ ಶಿವಾಲಯ ಹಿಂಭಾಗದ ಶಿವಾಜಿ ಕಾಲೋನಿಯಲ್ಲಿರುವ ಶ್ರೀ ಮೆಳೆಯಮ್ಮದೇವಿ ಮತ್ತು ಚಿಕ್ಕಮ್ಮ ದೇವಿಯ ಜಾತ್ರಾ ಮಹೋತ್ಸವವನ್ನು ಡಿ. 11ರಿಂದ 14 ರವರೆಗೆ ಅದ್ದೂರಿಯಾಗಿ ನಡೆಸಲು ಸೇವಾ ಸಮಿತಿ ನಿರ್ಧರಿಸಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಶ್ರೀಮೆಳೆಯಮ್ಮ ದೇವಿ, ಶ್ರೀ ಚಿಕ್ಕಮ್ಮ ದೇವಿ, ಶ್ರೀ ದೂತರಾಯ ಮತ್ತು ಕೆಂಚರಾಯ ಸ್ವಾಮಿಯವರ 27ನೇ ವರ್ಷದ ಜಾತ್ರಾ ಮಹೋತ್ಸವವನ್ನು ಅರಸೀಕೆರೆ ಗ್ರಾಮ ದೇವತೆ ಶ್ರೀ ಕರಿಯಮ್ಮ ದೇವಿ, ಶ್ರೀ ಮಲ್ಲಿಗೆಮ್ಮ ದೇವಿ, ಶ್ರೀ ಆಲಘಟ್ಟದಮ್ಮದೇವಿ ಮತ್ತು ಕಿತ್ತನಕೆರೆಯ ಶ್ರೀ ಚೌಡೇಶ್ವರಿ ದೇವಿಯವರ ಸಮ್ಮುಖದಲ್ಲಿ ಹಲವು ಕಾರ್ಯಕ್ರಮಗಳು ನಡೆಯಲಿದೆ.

ಡಿ. 11ರಂದು ದೇವಸ್ಥಾನದಲ್ಲಿ ಧ್ವಜಾರೋಹಣ ನಂತರ ಮದುವಣಿಗೆ ಶಾಸ್ತ್ರ ಸಂಜೆ ಸಂಜೆ ಮೆರವಣಿಗೆ ನಡೆಯಲಿದೆ. ಡಿ.12 ರಂದು ಬಳುವನೇರಲು ಗ್ರಾಮದೇವತೆ ಉಡುಸಲಮ್ಮ ಶ್ರೀ ಚೌಡೇಶ್ವರಿ ದೇವಿ ಶ್ರೀ ಧೂತರಾಯ ಸ್ವಾಮಿಯ ವರ ಸಮ್ಮುಖದಲ್ಲಿ ಅಮ್ಮನವರ ಮೂಲ ದೇವಸ್ಥಾನದಲ್ಲಿ ಬೆಳಗ್ಗೆ 11ಕ್ಕೆ ಬನ್ನಿಮರ ಹತ್ತುವುದು ನಂತರ ಮಹಾ ಮಂಗಳಾರತಿ ಮಧ್ಯಾಹ್ನ 2ಕ್ಕೆ ಅಮ್ಮನವರ ಸಿಡಿ. ರಾತ್ರಿ 7ಕ್ಕೆ ತೇರಿನ ಬೀದಿಯಲ್ಲಿ ಉತ್ಸವ ಆರತಿಬಾನ ಹಮ್ಮಿಕೊಳ್ಳಲಾಗಿದೆ.

ಡಿ. 13 ರಂದು ಶಿವಾಲಯದ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಗಂಗಾ ಪೂಜೆ. ಸಂಜೆ ನಗರದ ಪ್ರಮುಖ ಬೀದಿಗಳಲ್ಲಿ ಗ್ರಾಮ ದೇವರುಗಳ ಮೆರವಣಿಗೆ ನಡೆಯಲಿದೆ. ಡಿ.14 ರಂದು ಮಧ್ಯಾಹ್ನ 12ಕ್ಕೆ ಮಹಾ ರಥೋತ್ಸವ ನಡೆಯಲಿದ್ದು, ಮಧ್ಯಾಹ್ನ 1:00 ಗಂಟೆಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀದೇವಿಯವರ ಕೃಪೆಗೆ ಪಾತ್ರರಬೇಕು. ಇನ್ನೂ ರಾತ್ರಿ 8 ಗಂಟೆಗೆ ಮಣೆವು ಹಮ್ಮಿಕೊಳ್ಳಲಾಗಿದೆ ಎಂದು ದೇಗುಲದ ಸೇವಾ ಸಮಿತಿ ತಿಳಿಸಿದೆ.
Hassan
ವಿಶ್ವ ಮಾನವ ಹಕ್ಕುಗಳು ಹುಟ್ಟಿನಿಂದಲೇ ದೊರೆಯುವ ಹಕ್ಕುಗಳು: ನ್ಯಾ.ದೇವರಾಜು
ಹಾಸನ: ಮಾನವನಿಗೆ ಅವನ ಹುಟ್ಟಿನಿಂದಲೇ ದೊರೆಯುವ ಹಕ್ಕುಗಳೆಂದರೇ ಬದುಕು, ಮಾತನಾಡುವುದು, ಧರ್ಮ, ಭಾಷೆ, ಉದ್ಯೋಗ ಇವುಗಳನ್ನು ಯಾರೂ ಮೊಟಕು ಮಾಡಬಾರದು. ಇವುಗಳನ್ನು ಕಾಪಾಡುವುದು ನಮ್ಮ ಸಂವಿಧಾನ ಮತ್ತು ಸಮಾಜದ ಜವಾಬ್ದಾರಿಯಾಗಿದೆ ಎಂದು ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ದೇವರಾಜು ತಿಳಿಸಿದರು.
ನಗರದ ಸಾಲಗಾಮ ರಸ್ತೆ ಬಳಿ ಇರುವ ಎಂ. ಕೃಷ್ಣ ಕಾನೂನು ಕಾಲೇಜು ಸಭಾಂಗಣದಲ್ಲಿ ನಾಗರಿಕ ಹಕ್ಕುಗಳ ಸಂರಕ್ಷಣ ಸಂಘ, ಜಿಲ್ಲಾ ಚಾಪ್ಟರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎಂ. ಕೃಷ್ಣ ಕಾನೂನು ಕಾಲೇಜು, ಸರ್ಕಾರಿ ಕಾನೂನು ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಭೂಮಿ ಮೇಲೆ ಜೀವಿಸುವ ಸ್ವಾತಂತ್ರ್ಯ, ಉದ್ಯೋಗ ಸೇರಿದಂತೆ ಇತರೆ ಮಾನವನ ಹಕ್ಕುಗಳಿವೆ. ಯಾರ ಹಕ್ಕುಗಳನ್ನು ಯಾರು ಮೊಟಕುಗೊಳಿಸಬಾರದು. ಮಾನವನ ಹಕ್ಕುಗಳು ಉಲ್ಲಂಘನೆಯಾದ ಪರಿಣಾಮ ಕಾನೂನುಗಳ ರಚನೆಯಾಗಿ ಜಾರಿಯಾಗುತ್ತಿದೆ. 1948ರಲ್ಲಿ ವಿಶ್ವ ಸಂಸ್ಥೆಯವರು ಮಾನವನ ಹಕ್ಕುಗಳ ಉಲ್ಲಂಘನೆ ಕುರಿತು ಡಿ.10 ದಿನವನ್ನು ವಿಶ್ವ ಮಾನವ ಹಕ್ಕುಗಳ ದಿನವನ್ನಾಗಿ ಘೋಷಣೆ ಮಾಡಿದೆ ಎಂದರು.
ವಿಶ್ವ ಮಾನವ ಹಕ್ಕುಗಳ ಮುಖ್ಯ ಉದ್ದೇಶ ಏನೆಂದರೆ ಪ್ರತಿಯೊಬ್ಬ ವ್ಯಕ್ತಿಗೂ ಅವರದೆಯಾದಂತಹ ಕಾನೂನಿನ ವ್ಯಾಪ್ತಿಯಾದಂತಹ ಜೀವನವನ್ನು ನಡೆಸುವುದು. ಮಾತನಾಡುವುದು ತನಗೆ ಸೂಕ್ತವಾದಂತಹ ಧರ್ಮ ಆಚರಣೆ ಮಾಡುವಂತಹ ಮತ್ತು ಸೂಕ್ತವಾದಂತಹ ಭಾಷೆಯಲ್ಲಿ ಮಾತನಾಡಲು, ಉದ್ಯೋಗ ಮಾಡುವುದು ಸೇರಿದಂತೆ ಪ್ರತಿಯೊಂದು ಹಕ್ಕುಗಳಿವೆ. ಯಾವುದೇ ವ್ಯಕ್ತಿಗೆ ಲಿಂಗದ ಆಧಾರದ ಮೇಲೆ ಇಲ್ಲವೇ ಧರ್ಮದ ಆಧಾರದ ಮೇಲೆ ಮತ್ತೆ ಇತರೆ ಯಾವುದೇ ಆಧಾರದ ಮೇಲೆ ತಾರತಮ್ಯ ಮಾಡಬಾರದು ಎಂದು ಹೇಳಿದರು.

ಇತಿಹಾಸ ನೋಡಿದರೇ ತಾರತಮ್ಯ ಎಂಬುದು ಮೊದಲಿನಿಂದಲೂ ನಡೆಯುತ್ತಿದೆ. ಸ್ವಾತಂತ್ರ್ಯದ ನಂತರ ಕೂಡ ತಾರತಮ್ಯವನ್ನು ಕಾಣುತ್ತಿದ್ದೇವೆ. ಒಂದು ಪುರುಷ ಮತ್ತು ಮಹಿಳೆಯರ ನಡುವೆ ತಾರತಮ್ಯ. ಲಿಂಗ ಶೋಷಣೆ, ಧರ್ಮ-ಧರ್ಮಗಳ ನಡುವೆ ವೈಮನಸ್ಸು, ಇನ್ನೊಂದು ಧರ್ಮವನ್ನು ದ್ವೇಷ ಮಾಡು, ಯಾವುದು ಕಡಿಮೆ ಹೆಚ್ಚು ಎಂದು ಯಾವ ಧರ್ಮವು ಹೇಳುವುದಿಲ್ಲ. ನಮ್ಮ ಅನುಕೂಲಕ್ಕೆ ತಕ್ಕಂತೆ ಧರ್ಮವನ್ನು ಪಾಲಿಸುತ್ತಿದ್ದೇವೆ ಎಂದು ಕಿವಿಮಾತು ಹೇಳಿದರು.
ಆದರೆ ಮತ್ತೊಂದು ಧರ್ಮದ ಬಗ್ಗೆ ಯಾವುದೇ ಕಾರಣಕ್ಕೂ ತಾರತಮ್ಯ ಮಾಡಬಾರದು. ಪ್ರತಿಯೊಬ್ಬರಿಗೂ ಸಹ ಉತ್ತಮವಾಗಿ ನಮ್ಮ ಸಂವಿಧಾನದ ವ್ಯಾಪ್ತಿಯಲ್ಲಿ ಗೌರವಯುತ ಜೀವನ ಮಾಡುವಂತಹ ಹಕ್ಕುಗಳಿದ್ದು, ಅದನ್ನು ಯಾರು ಮೊಟಕು ಮಾಡಬಾರದು. ಮೊಟಕು ಮಾಡುವುದನ್ನು ತಡೆಯುವುದಕ್ಕೆ ಇರುವುದು ಒಂದೇ ವರ್ಗ ಅದೇ ಮಾನವ ವರ್ಗ ಎಂದು ಸಲಹೆ ನೀಡಿದರು.

ಭವಿಷ್ಯದ ಕಾನೂನು ವಿದ್ಯಾರ್ಥಿಗಳು ಮಾನವ ಹಕ್ಕುಗಳ ರಕ್ಷಣೆಯಂತಹ ಕಾರ್ಯ ಮಾಡಬೇಕು. ನಾನು ಪೋಕ್ಸೊ ವಿಶೇಷ ಕೋರ್ಟಿನಲ್ಲಿ ಕೆಲಸ ಮಾಡಲಾಗುತ್ತಿದ್ದು, ಹದಿಹರೆಯದ ವಯಸ್ಸಿನಲ್ಲಿ ಆಕರ್ಷಣೆ ಆಗುವುದು ಸಹಜವಾಗಿದೆ. ಸಮಾಜವನ್ನು ಮುಂದೆ ಹೇಗೆ ಎದುರಿಸಬೇಕು ಬಗ್ಗೆ ಒಮ್ಮೆಲೆ ಯೋಚಿಸಬೇಕು. ನಾವು ಬಂದಿರುವುದ ಉದ್ದೇಶ ಏನು? ಗುರಿ ಬಗ್ಗೆ ಸಾಧಿಸುವ ಛಲ ನಿಮ್ಮೊಳಗೆ ಬೆಳೆಸಿಕೊಂಡು ಮುಂದಿನ ಭವಿಷ್ಯವನ್ನು ಉಜ್ವಲ ಮಾಡಿಕೊಳ್ಳಲು ಎಚ್ಚರಿಕೆಯಿಂದ ನೀವು ದಾಟಿದರೆ ಮಾತ್ರ ಜೀವನ ಉತ್ತಮವಾಗುತ್ತದೆ ಎಂದು ಹೇಳಿದರು.
ಎ.ಪಿ.ಸಿ.ಆರ್. ಜಿಲ್ಲಾ ಛಾಪರ್ಸ್ ಜಿಲ್ಲಾಧ್ಯಕ್ಷ ಅಬ್ದೂಲ್ ಹಮೀದ್ ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿ, ಸಮಾಜದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಮಾನವ ಗುಣ ಬೆಳೆಸಿಕೊಳ್ಳಬೇಕು. ಬದುಕಿದ್ದರೇ ಕಾನೂನು ಕಟ್ಟಲೆ, ಬದುಕೆ ಇಲ್ಲದಿದ್ದರೇ ಈ ಬಗ್ಗೆ ತಿಳಿಯಬೇಕು. ಪ್ರತಿ ಹಂತದಲ್ಲಿ ಮಾನವ ಹಕ್ಕುಗಳು ಅನ್ವಯಿಸುತ್ತದೆ. ಮಾನವ ಹಕ್ಕುಗಳನ್ನು ರಕ್ಷಣೆ ಮಾಡಬೇಕು. ಮಾನವ ಹಕ್ಕುಗಳ ರಕ್ಷಣೆ ಮಾಡುವ ಒಳ್ಳೆ ಕೆಲಸವನ್ನು ಕಾನೂನು ವಿದ್ಯಾರ್ಥಿಗಳಾಗಿ ಬೇರೆಯವರಿಗೆ ತಿಳಿಸಿ ಅನುಸರಿಸಬೇಕು. ಮಾನವ ಹಕ್ಕುಗಳು ಎಂದರೆ ಜೀವನಕ್ಕೆ ಬೇಕಾಗಿರುವ ಹಕ್ಕುಗಳಾಗಿದೆ. ಮನೆಯಲ್ಲಿ, ಶಾಲೆಯಿಂದಲೇ ಈ ಮಾನವ ಹಕ್ಕುಗಳು ಪ್ರಾರಂಭವಾಗುತ್ತದೆ ಎಂದರು.

ಸಮಾಜದಲ್ಲಿ ನಡೆಯುವ ದೌರ್ಜನ್ಯ ಎಲ್ಲಾ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಅದಕ್ಕಾಗಿ ಕಾನೂನು ರಚಿತವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಗೌರವ ಸದಸ್ಯ ಕಾರ್ಯದರ್ಶಿ ಜಿ.ಕೆ. ದಾಕ್ಷಾಯಿಣಿ, ಎಂ. ಕೃಷ್ಣ ಕಾನೂನು ಕಾಲೇಜು ಪ್ರಾಂಶುಪಾಲ ಡಾ. ವಿ. ಶ್ರೀನಿವಾಸ್, ಸರ್ಕಾರಿ ಕಾನೂನು ಕಾಲೇಜು ಪ್ರಾಂಶುಪಾಲರಾದ ಶೀನಾ ಥಾಮಸ್, ವಕೀಲ ಅನ್ಸದ್ ಪಾಳ್ಯ, ಪ್ರಬುದ್ಧ ಮನಸ್ಸು ಸಮಾಜ ಪ್ರಗತಿಪರ ಚಿಂತಕ ಹೆಚ್.ಕೆ. ವಿವೇಕಾನಂದ, ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಸ್. ಶರಣ್ಯ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಸಹನ ನೆರವೇರಿಸಿದರು, ಉಷಾ ಪ್ರಾರ್ಥಿಸಿದರು.
-
State18 hours agoIPL, ಟಿ-20 ವಿಶ್ವಕಪ್ ಕ್ರಿಕೆಟ್ ಸಂಬಂಧ ಸಿಎಂ, ಡಿಸಿಎಂರನ್ನು ಭೇಟಿ ಮಾಡಿದ ವೆಂಕಟೇಶ್ ಪ್ರಸಾದ್
-
Mandya20 hours agoಜಿಲ್ಲಾಧಿಕಾರಿಗಳಿಂದ ಗುತ್ತಲು ಕೆರೆಗೆ ಭೇಟಿ ಮತ್ತು ಪರಿಶೀಲನೆ
-
Mandya18 hours agoಕಾಳೇನಹಳ್ಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಡಿಸಿ ಭೇಟಿ
-
Chamarajanagar13 hours agoಮ.ಮ.ಬೆಟ್ಟದಲ್ಲಿ ಹುಂಡಿ ಹಣ ಎಣಿಕೆ: 28 ದಿನಗಳ ಅವಧಿಯಲ್ಲಿ 2.53 ಕೋಟಿ ರೂ. ಸಂಗ್ರಹ
-
Kodagu12 hours agoಪ್ರಧಾನಿ ಬಗ್ಗೆ ಅವಹೇಳನ – ಮಡಿಕೇರಿಯ ಮೂವರ ಬಂಧನ
-
State13 hours agoದ್ವೇಷ ಭಾಷಣ, ದ್ವೇಷ ಅಪರಾಧಗಳ ವಿಧೇಯಕ ಮಂಡಿಸಿದ ಡಾ.ಜಿ.ಪರಮೇಶ್ವರ್
-
Hassan16 hours agoಡಿ. 11ರಿಂದ 14 ರವರೆಗೆ ಶ್ರೀ ಮೆಳೆಯಮ್ಮದೇವಿ, ಚಿಕ್ಕಮ್ಮದೇವಿ ಅದ್ದೂರಿ ಜಾತ್ರಾ ಮಹೋತ್ಸವ
-
Hassan15 hours agoಗಾಂಜಾ ಅಮಲಿನಲ್ಲಿ ಯುವಕನೋರ್ವನ ಹ*ತ್ಯೆ: ಆರೋಪಿಯನ್ನು ಬಂಧಿಸಿದ ಪೊಲೀಸರು
