Connect with us

Hassan

ಹೊಳೆನರಸೀಪುರ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ಲೈನ್‌, ಫ್ಲಾಟ್‌ ಫಾರ್ಮ್ ವಿಸ್ತರಿಸಲು ಅಶ್ವಿನಿ ವೈಷ್ಣವ್‌ಗೆ ಶ್ರೇಯಸ್‌ ಮನವಿ

Published

on

ಹಾಸನ: ಸಂಸದ ಶ್ರೇಯಸ್ ಎಂ.  ಪಟೇಲ್ ಅವರು ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಹೊಳೆನರಸೀಪುರ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ಒಂದು ಲೈನ್, ಫ್ಲಾಟ್‌ ಫಾರ್ಮ್ ವಿಸ್ತರಿಸಲು ಹಾಗೂ ಗಜರಾಜ್ ಸಿಸ್ಟಮ್ ಅಳವಡಿಸುವಂತೆ ಪ್ರಸ್ತಾವನೆ ಸಲ್ಲಿಸಿದರು.

ಹೊಳೆನರಸೀಪುರದಲ್ಲಿ ಪ್ರಸ್ತುತ ಕೇವಲ ಎರಡು ರೈಲು ಹಳಿಗಳು ಮಾತ್ರ ಇದ್ದು, ಸಂಚಾರ ದಟ್ಟಣೆ ಹಾಗೂ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಫ್ಲಾಟ್‌ ಫಾರ್ಮ್ ವಿಸ್ತರಣೆ ಮತ್ತು ಸಂಬಂಧಿತ ಕಾಮಗಾರಿಗಳಿಗೆ ಅಗತ್ಯ ಭೂಮಿಯನ್ನು ರಾಜ್ಯ ಸರ್ಕಾರ ಪಿಡಬ್ಲ್ಯುಡಿ ಮೂಲಕ ರೈಲ್ವೆಗೆ ಹಸ್ತಾಂತರಿಸಲು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ, ಕನಿಷ್ಠ ಒಂದು ಹೆಚ್ಚುವರಿ ರೈಲು ಹಳಿ ನಿರ್ಮಾಣ ಹಾಗೂ ಪ್ಲಾಟ್‌ಫಾರ್ಮ್ ವಿಸ್ತರಣೆಗೆ ಅನುಮೋದನೆ ನೀಡುವಂತೆ ಮನವಿ ಮಾಡಿದರು.

ಜೊತೆಗೆ ಮಲೆನಾಡು ಭಾಗದಲ್ಲಿ ರೈಲು ಡಿಕ್ಕಿಯಿಂದ ಆನೆಗಳ ಸಾವು ಸಂಭವಿಸುತ್ತಿರುವ ಗಂಭೀರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಅಪಾಯಕಾರಿ ರೈಲು ಮಾರ್ಗಗಳಲ್ಲಿ “ಗಜರಾಜ್ ಸಿಸ್ಟಮ್” (ತಂತ್ರಜ್ಞಾನ ಆಧಾರಿತ ಆನೆ ಪತ್ತೆ ಮತ್ತು ಎಚ್ಚರಿಕೆ ವ್ಯವಸ್ಥೆ) ಅಳವಡಿಸುವಂತೆ ಮನವಿ ಮಾಡಿದರು.

ಹಾಸನ ಜಿಲ್ಲೆ ಪಶ್ಚಿಮ ಘಟ್ಟಗಳ ಪ್ರದೇಶವಾಗಿದ್ದು, ಇಲ್ಲಿ ಆನೆಗಳ ಸಹಜ ಸಂಚಾರ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ವನ್ಯಜೀವಿಗಳ ರಕ್ಷಣೆ ಮಾಡುವುದು ಅತ್ಯಗತ್ಯವಾಗಿದೆ. ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಆನೆಗಳ ರಕ್ಷಣೆ ಹಾಗೂ ಸುರಕ್ಷಿತ ರೈಲು ಸಂಚಾರಕ್ಕೆ ಸಹಕಾರಿ ಆಗಲಿದೆ.

Continue Reading

Hassan

ಕೇಂದ್ರ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧ್ಯಾರವರನ್ನು ಭೇಟಿಯಾಗಿ ಹಾಸನ ಜಿಲ್ಲೆಯ ಅಂಚೆ ಇಲಾಖೆ ಬಗ್ಗೆ ಚರ್ಚಿಸಿದ ಶ್ರೇಯಸ್‌

Published

on

ಹಾಸನ: ಸಂಸದ ಶ್ರೇಯಸ್ ಎಂ. ಪಟೇಲ್ ಅವರು ನವದೆಹಲಿಯಲ್ಲಿ ಇಂದು ಕೇಂದ್ರ ಸರ್ಕಾರದ ಸಂವಹನ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧ್ಯಾ ಅವರನ್ನು ಭೇಟಿಯಾಗಿ, ಹಾಸನ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ವಿಚಾರಗಳನ್ನು ಮಂಡಿಸಿದ್ದಾರೆ.

ಹಾಸನ ಅಂಚೆ ವಿಭಾಗದಲ್ಲಿ 17 ಖಾಲಿ ಜಾಗಗಳು ಲಭ್ಯವಿದ್ದರೂ ಅನೇಕ ಅಂಚೆ ಕಚೇರಿಗಳು ಇನ್ನೂ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ತಾಲ್ಲೂಕು ಕೇಂದ್ರವಾದ ಆಲೂರಿನಲ್ಲಿ ಅಂಚೆ ಕಚೇರಿ ಕಟ್ಟಡ ನಿರ್ಮಾಣ ಸೇರಿದಂತೆ, ಹಾಸನ (ಎನ್‌.ಆರ್‌.ಬಡಾವಣೆ), ಹರಳಹಳ್ಳಿ, ಬಾಗೂರು, ಗೊರೂರು, ರಾಮನಾಥಪುರ, ನುಗ್ಗೇಹಳ್ಳಿ, ಶಾಂತಿಗ್ರಾಮ, ಕಂದಲಿ, ದುದ್ದ, ಯಸಳೂರು, ಬಿಕ್ಕೋಡು, ಪಾಳ್ಯ, ಹಾನುಬಾಳು, ಹಗರೆ ಹಾಗೂ ಕೆ.ಹೊಸಕೋಟೆಗಳಲ್ಲಿ ಸಬ್‌ ಪೋಸ್ಟ್‌ ಕಚೇರಿ ಕಟ್ಟಡಗಳಿಗೆ ಅನುಮೋದನೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದರು.

ಇದೇ ವೇಳೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಹೆಚ್ಚುತ್ತಿರುವ ಮಾನವ–ಕಾಡಾನೆ ಸಂಘರ್ಷವನ್ನು ಗಮನದಲ್ಲಿಟ್ಟುಕೊಂಡು, ಸಾರ್ವಜನಿಕರ ಸುರಕ್ಷತೆಗೆ ಅಗತ್ಯವಾದ ಮೊಬೈಲ್ ನೆಟ್ವರ್ಕ್ ವ್ಯವಸ್ಥೆ ಕಲ್ಪಿಸುವಂತೆ ಕೋರಿದರು.

ಸಾರ್ವಜನಿಕ ಸುರಕ್ಷತೆ ಮತ್ತು ಪರಿಣಾಮಕಾರಿ ಆಡಳಿತದ ದೃಷ್ಟಿಯಿಂದ 4G ಸ್ಯಾಚುರೇಷನ್ ಯೋಜನೆಯಡಿ ಮೊಬೈಲ್ ದೂರಸಂಪರ್ಕ ಮೂಲಸೌಕರ್ಯ ಒದಗಿಸುವಂತೆ ಒತ್ತಾಯಿಸಿದ್ದು, ಬೇಲೂರು ತಾಲೂಕಿನ ದೊಡ್ಡಸಾಲಾವರ, ಹೊಳಲು, ಬ್ಯಾದನೆ, ಕನಹಳ್ಳಿ, ನೆರ್ಲಮಕ್ಕಿ, ಅಂಕಿಹಳ್ಳಿ, ಸಕಲೇಶಪುರ ತಾಲ್ಲೂಕಿನ ಈಚಲಬೀಡು, ಹಿರಿದನಹಳ್ಳಿ ಹಾಗೂ ಆಲೂರು ತಾಲ್ಲೂಕಿನ ಮಾದಿಹಳ್ಳಿ ಮತ್ತು ಹರಿಹಳ್ಳಿಯಲ್ಲಿ ಮೊಬೈಲ್ ಟವರ್ ಅಳವಡಿಸುವಂತೆ ಮನವಿ ಮಾಡಿದ್ದಾರೆ.

Continue Reading

Hassan

ಕ್ಷುಲ್ಲಕ ಕಾರಣಕ್ಕೆ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೇಲೆ‌ ಹಲ್ಲೆ

Published

on

ಹಾಸನ: ಬೇಲೂರು–ಹಾಸನ ಮುಖ್ಯರಸ್ತೆಯ ಹಗರೆ ಸಮೀಪ ರಸ್ತೆ ಸಂಚಾರ ವಿಚಾರವಾಗಿ ಆರಂಭವಾದ ಕ್ಷುಲ್ಲಕ ಗಲಾಟೆ ವಿಕೋಪಕ್ಕೆ ತಿರುಗಿ, ಕೆಎಸ್‌ಆರ್‌ಟಿಸಿ ಬಸ್‌ನ ಗಾಜುಗಳನ್ನು ದುಷ್ಕರ್ಮಿಗಳು ಪುಡಿ ಮಾಡಿರುವ ಘಟನೆ ಮಂಗಳವಾರ ನಡೆದಿದೆ.

ಬೇಲೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ್ನು ಹಗರೆ ಸಮೀಪ ಸುಮಾರು ಒಂದು ಕಿಲೋಮೀಟರ್ ದೂರದಲ್ಲೇ ಕಾರೊಂದರ ಚಾಲಕ ಹಾಗೂ ಆತನೊಂದಿಗೆ ಇದ್ದವರು ಅಡ್ಡಗಟ್ಟಿ, ಅನಗತ್ಯವಾಗಿ ರಸ್ತೆ ತಡೆದು ಗಲಾಟೆ ನಡೆಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಬಸ್ ಚಾಲಕನೊಂದಿಗೆ ಮಾತಿನ ಚಕಮಕಿ ನಡೆದು, ಏಕಾಏಕಿ ಆಕ್ರೋಶಗೊಂಡ ಗುಂಪು ಬಸ್‌ನ ಗಾಜುಗಳನ್ನು ಒಡೆದು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದೆ.

ಘಟನೆಯಿಂದ ಆತಂಕಕ್ಕೊಳಗಾದ ಪ್ರಯಾಣಿಕರು ಹಾಗೂ ಬಸ್ ಸಿಬ್ಬಂದಿ ತಕ್ಷಣವೇ ಬಸ್‌ನ್ನು ಹಗರೆ ಪೊಲೀಸ್ ಠಾಣೆಯ ಸಮೀಪಕ್ಕೆ ಕೊಂಡೊಯ್ದು ನಿಲ್ಲಿಸಿದ್ದಾರೆ. ಸದ್ಯ ಬಸ್ ಠಾಣೆಯ ಮುಂಭಾಗದಲ್ಲೇ ನಿಂತಿದ್ದು, ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಈ ಘಟನೆಯಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ತೀವ್ರ ಪರದಾಟ ಅನುಭವಿಸಿದ್ದು, ಸಾರ್ವಜನಿಕ ರಸ್ತೆಯಲ್ಲಿ ಈ ರೀತಿಯ ಅರಾಜಕತೆ ಪ್ರದರ್ಶಿಸಿ ಸರ್ಕಾರಿ ಬಸ್‌ಗೆ ಹಾನಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮಾಹಿತಿ ಪಡೆದ ಹಗರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Continue Reading

Hassan

ಹಾಸನ: ನೋಡನೋಡುತ್ತಿದ್ದಂತೆ ಹೊತ್ತಿ ಉರಿದ ಕಾರು – ಸಂಪೂರ್ಣ ಭಸ್ಮ

Published

on

ಹಾಸನ: ನಗರದ ಹೊರವಲಯದ ದೇವೇಗೌಡ ನಗರದಲ್ಲಿ ನಿನ್ನೆ ತಡರಾತ್ರಿ ನಿಲ್ಲಿಸಿದ್ದ ಕಾರೊಂದು ದಿಢೀರ್‌ ಬೆಂಕಿಗೆ ಆಹುತಿಯಾದ ಘಟನೆ ಸಂಭವಿಸಿದೆ.

ಮನೆಯ ಮುಂದೆ ನಿಲ್ಲಿಸಿದ್ದ ಸ್ಕೋಡಾ ಕಂಪನಿಯ KA-05 MA-7692 ನೋಂದಣಿ ಸಂಖ್ಯೆಯ ಕಾರು ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಅಪಾರ ಆಸ್ತಿ ನಷ್ಟ ಉಂಟಾಗಿದೆ.

ಕಾರು ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರೂ, ಅದಾಗಲೇ ಕಾರು ಸಂಪೂರ್ಣವಾಗಿ ಭಸ್ಮವಾಗಿತ್ತು.

ಘಟನೆಯ ಮಾಹಿತಿ ಪಡೆದ ಹಾಸನ ನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿಯಲು ತನಿಖೆ ಕೈಗೊಂಡಿದ್ದಾರೆ.


ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಇತರ ಕಾರಣಗಳಿಂದ ಬೆಂಕಿ ಹೊತ್ತಿಕೊಂಡಿರಬಹುದೆಂಬ ಅನುಮಾನ ವ್ಯಕ್ತವಾಗಿದ್ದು, ಹೆಚ್ಚಿನ ತನಿಖೆಯ ನಂತರವೇ ಸ್ಪಷ್ಟತೆ ದೊರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Continue Reading

Trending

error: Content is protected !!