Connect with us

Hassan

ಇನ್ನು 15 ದಿನದಲ್ಲಿ ಎಲ್ಲಾ ಶಾಸಕರ ಜೊತೆ ವಿವಿ ಉಳಿಸಿ ಹೋರಾಟ ಸಮಿತಿಯಿಂದ ಸಿಎಂ ಭೇಟಿ: ಸಂಸದ ಶ್ರೇಯಸ್ ಪಟೇಲ್

Published

on

ಹಾಸನ: ಪಕ್ಷ ಭೇದ ಮರೆತು ಪ್ರಾಮಾಣಿಕವಾಗಿ ನಿಮ್ಮ ಜೊತೆ ಹಾಸನ ವಿವಿ ಉಳಿಸುವ ಕೆಲಸವನ್ನು ಮಾಡಲಾಗುವುದು. ಎಲ್ಲಾ ಶಾಸಕರ ಒಟ್ಟುಗೂಡಿ, ನಮ್ಮ ಜೊತೆ ಸಮಿತಿಯಿಂದ 15 ಜನರ ತಂಡ ಈ ವಾರದಲ್ಲಿ ದಿನ ನಿಗಧಿ ಮಾಡಿ ಸಿಎಂ, ಡಿಸಿಎಂ ಹಾಗೂ ಸಚಿವರನ್ನು ಭೇಟಿ ಮಾಡುವ ಕೆಲಸ ಮಾಡಿ ಗಮನ ಸೆಳೆಯಲಾಗುವುದು ಎಂದು ಸಂಸದ ಶ್ರೇಯಸ್. ಎಂ. ಪಟೇಲ್ ಭರವಸೆ ನೀಡಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಾಸನ ವಿಶ್ವವಿದ್ಯಾಲಯ ಉಳಿಸಿ ಬೆಳೆಸಲು ಭಾನುವಾರ ಕರೆಯಲಾಗಿದ್ದ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಸದ ಶ್ರೇಯಸ್.ಎಂ. ಪಟೇಲ್ ಮಾತನಾಡಿ, ವಿಶ್ವ ವಿದ್ಯಾಲಯದ ಕುರಿತು ದುಂಡು ಮೇಜಿನ ಸಭೆಯಲ್ಲಿ ಮೌಲ್ಯಾಧರಿತ ಚರ್ಚೆಗಳು ನಡೆದಿದ್ದು, ಅಭಿವೃದ್ಧಿ ಮತ್ತು ಯೋಗಕ್ಷೇಮ ಬಂದಾಗ ಪಕ್ಷ ಮರೆತು ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಬೇಕಾಗುತ್ತದೆ. ಎಲ್ಲಾರ ಪರ ನಿಂತು ಕೊಳ್ಳುವ ಕೆಲಸ ಮಾಡಲಾಗುವುದು ಎಂದರು.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಲಾಗುವುದು. ಸಮಿತಿ ವರದಿ ಕೂಡ ಇಲ್ಲಿವರೆಗೂ ಬಂದಿರುವುದಿಲ್ಲ. ವಿಶ್ವವಿದ್ಯಾಲಯವನ್ನು ಮುಚ್ಚುವ ನಿರ್ಧಾರವನ್ನು ಇಲ್ಲಿವರೆಗೂ ತೆಗೆದುಕೊಂಡಿರುವುದಿಲ್ಲ. ಯಾರು ಗಾಬರಿ ಪಡಬಾರದೆಂದು ಶಿಕ್ಷಣ ಸಚಿವರು ಹೇಳಿದ್ದು, ಈಗ ಅಧಿವೇಶನ ನಡೆಯುತ್ತಿರುವುದರಿಂದ ಎಲ್ಲಾ ಶಾಸಕರು ಒಳಗೊಂಡಂತೆ ಸಮಿತಿ ರಚಿಸಿ ಸಿಎಂ, ಡಿಸಿಎಂ ಹಾಗೂ ಸಚಿವರನ್ನು ಭೇಟಿ ಮಾಡಿ ಆಗಬಹುದಾದಂತಹ ಬೇಡಿಕೆಯನ್ನು ಮುಂದಿಟ್ಟು ಮನವಿಯನ್ನು ಮಾಡೋಣ ಎಂದರು.

ಶಾಸಕ ಎ. ಮಂಜು ಮಾತನಾಡಿ, ವಿಶ್ವವಿದ್ಯಾಲಯ ಇಲ್ಲೆ ಉಳಿಸುವ ನಿಟ್ಟಿನಲ್ಲಿ ಆಗಬೇಕಾದ ಕೆಲಸ ತಡವಾಗಿದೆ ಎಂಬುದು ನನ್ನ ಭಾವನೆ. ಕಾಲೇಜುಗಳನ್ನು ಯಾವ ಸರಕಾರ ಬಂದರೂ ಮುಚ್ಚುವುದಕ್ಕೆ ಆಗುವುದಿಲ್ಲ. ಆದರೇ ವಿಲೀನಗೊಳಿಸಲಾಗುತ್ತದೆ. ಹಳ್ಳಿ ಸೇರಿದಂತೆ ಎಲ್ಲಾ ಮಕ್ಕಳಿಗೂ ವಿಧ್ಯೆ ಸಿಗಬೇಕಾದರೇ ವಿವಿಗಳು ಆಯಾ ಜಿಲ್ಲೆ ಇರಬೇಕು. ಆಗ ಮಾತ್ರ ಹೆಚ್ಚಿನ ಅವಕಾಶಗಳು ದೊರೆಯುತ್ತದೆ. ವಿಶ್ವವಿದ್ಯಾಲಯದ ಅಭಿವೃದ್ಧಿ ಆಗಬೇಕು. ಹೆಚ್ಚಿನ ಹೋರಾಟಕ್ಕೆ ಮುಂದಾದ ಜಿಲ್ಲೆ ಇದ್ದರೇ ಹಾಸನ. ಈ ಹೋರಾಟದಲ್ಲಿ ಯಾವ ರಾಜಕಾರಣ ಆಗಬಾರದು. ವಿವಿ ರಾಜ್ಯ ಸರಕಾರದಿಂದ ಮಾತ್ರ ನಡೆಯುವುದಿಲ್ಲ. ಕೇಂದ್ರದ ಯುಜಿಸಿ ಸ್ಕೇಲ್ ಕೂಡ ಇದೆ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಚ್.ಎಲ್. ಮಲ್ಲೇಶ್ ಗೌಡ ಮಾತನಾಡಿ, ವಿದ್ಯಾರ್ಥಿಗಳ ಮೊದಲ ಆಯ್ಕೆ ಸರಕಾರ ಶಿಕ್ಷಣ ಸಂಸ್ಥೆಗಳು. ಇಂಜಿನಿಯರ್, ವೈದ್ಯಕೀಯ ಯಾವುದೇ ಆಗಿರಲಿ ಸರಕಾರಿ ಸಂಸ್ಥೆಗಳಿಗೆ ಬರಲು ಮುಂದಾಗುತ್ತಾರೆ. ಸೀಟು ಇಲ್ಲದಾಗ ಅನಿವಾರ್ಯವಾಗಿ ಖಾಸಗೀ ಕಡೆ ಹೋಗುತ್ತಾರೆ. ಏನಾದರೂ ಈ ರೀತಿ ತಾತ್ಸರ ಮಾಡಿದರೇ ಮುಂದಿನ ದಿನಗಳಲ್ಲಿ ಖಾಸಗೀ ಶಿಕ್ಷಣ ಸಂಸ್ಥೆಯವರು ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಮುಂದಾದರೇ ಆ ಖಾಸಗೀಯವರು ಮಾಡಿದ ನಿರ್ಣಯದಂತೆ ಉನ್ನತ ಶಿಕ್ಷಣ ಸಾಗುತ್ತದೆ ಎಂದು ಎಚ್ಚರಿಸಿದರು.

ಇದರಿಂದ ಯಾವ ಯಾವ ಸಂಸ್ಥೆ ಯಾವ ಯಾವ ಮೌಲ್ಯವನ್ನು ಭಿತ್ತಬಹುದು. ಸರಕಾರದವರು ಹೀಗೆ ಮುಂದುವರೆದರೇ ಬಂಡವಾಳ ಶಾಹಿಗಳು ತಮಗೆ ಬೇಕಾದ ಮೌಲ್ಯಗಳನ್ನು ಯುವ ತಲೆಮಾರಿಗೆ ಬಿತ್ತುತ್ತಾರೆ. ಇದುಉನ್ನತ ಶಿಕ್ಷಣದ ದೊಡ್ಡ ದುರಂತದ ಸಂಗತಿ ಆಗಿತು ಎಂದು ಬೇಸರವ್ಯಕ್ತಪಡಿಸಿದರು.

ಹಸಿರುಭೂಮಿ ಪ್ರತಿಷ್ಠಾನದ ಬಿ.ಕೆ. ಮಂಜುನಾಥ್ ಮಾತನಾಡಿ, ಸರಕಾರದಲ್ಲಿ ಗೊಂದಲವಿದ್ದು, ಜನರಲ್ಲಿ ವಿಶ್ವವಿದ್ಯಾಲಯ ಉಳಿಯುತ್ತದೆಯೂ ಇಲ್ಲವೊ ಎಂಬುದು ಬೇರೂರಿದೆ. ಈ ಕಮಿಟಿ ಶಾಸಕರು. ಸಂಸದರು ಎಲ್ಲಾ ಸೇರಿ ಸಭೆ ಮಾಡಿ ದೃಢವಾದ ನಿಲುವು ತೆಗೆದುಕೊಂಡರೇ ಖಂಡಿತ ಸರಕಾರ ಒಪ್ಪಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಹಾಸನ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯ ಡಾ. ವೈ.ಎಸ್. ವೀರಭದ್ರಪ್ಪ, ಆರ್.ಪಿ. ವೆಂಕಟೇಶ್ ಮೂರ್ತಿ, ಧರ್ಮೇಶ್, ಹೆಚ್.ಕೆ. ಸಂದೇಶ್, ಹುಡಾ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ, ಹೆಚ್.ಪಿ. ಮೋಹನ್, ಹಿರಿಯ ಪತ್ರಕರ್ತ ವೆಂಕಟೇಶ್, ಹೆಚ್.ಆರ್. ನವೀನ್ ಕುಮಾರ್, ಎಂ.ಜಿ. ಪೃಥ್ವಿ, ಸಾಹಿತಿ ರೂಪ ಹಾಸನ್, ತಾರಾಚಂದನ್, ರಮೇಶ್, ಎಣ.ಬಿ. ಪುಷ್ಪ, ಸಮೀರ್ ಅಹಮದ್ ಇತರರು ಉಪಸ್ಥಿತರಿದ್ದರು.

Continue Reading

Hassan

ಜನತೆಯ ಪ್ರೀತಿಗೆ ಮನಸೋತ ಡಿಸಿ ಕೆ.ಎಸ್‌. ಲತಾ ಕುಮಾರಿ

Published

on

ಅರಸೀಕೆರೆ: ತಾಲೂಕಿನ ಬೆಂಡೆಕೆರೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಸರ್ವಿಸ್ ರಸ್ತೆಯ ಭೂಮಿಯ ವಿಚಾರವಾಗಿ ಚರ್ಚಿಸಲು ಮೊದಲನೇ ಬಾರಿ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರನ್ನು ಗ್ರಾಮಸ್ಥರು ಉನ್ನತ ಸ್ಥಾನದಲ್ಲಿರುವ ಅಧಿಕಾರಿ ಎನ್ನದೆ ತಮ್ಮ ಊರಿನ ಮನೆಮಗಳು ಎಂದು ಅವರನ್ನು ಪ್ರೀತಿ ವಿಶ್ವಾಸದಿಂದ ಸಾಂಪ್ರದಾಯಕವಾಗಿ ಸತ್ಕರಿಸಿ ಗೌರವಿಸಿದರು.‌


ಗ್ರಾಮಕ್ಕೆ ಮೊದಲನೇ ಬಾರಿ ಭೇಟಿ ನೀಡಿದಾಗ ಜಿಲ್ಲಾಧಿಕಾರಿ ಅವರು ನಮ್ಮ ಸಮಸ್ಯೆಯನ್ನು ಸಂಪೂರ್ಣವಾಗಿ ತಾಳ್ಮೆಯಿಂದ ಕೇಳಿ ಪರಿಹರಿಸುವ ಭರವಸೆಯನ್ನು ನೀಡಿದ್ದರು. ಈ ತರಹದ ಅಧಿಕಾರಿಗಳು ಪ್ರತಿಯೊಂದು ಜಿಲ್ಲೆಗಳಲ್ಲಿ ಇದ್ದರೆ ರೈತರ ಸಮಸ್ಯೆ ಹಾಗೂ ಸಾರ್ವಜನಿಕರ ಸಮಸ್ಯೆ ಬಗೆ ಹರಿಯಲಿದೆ ಎಂದು ಊರಿನ ಮಹಿಳೆಯು ಜಿಲ್ಲಾಧಿಕಾರಿಯವರ ಕಾರ್ಯವನ್ನು ಕೊಂಡಾಡಿದರು.

ಎಂಟು ವರ್ಷಗಳಿಂದ ಇತ್ಯರ್ಥವಾಗದ ಸಮಸ್ಯೆಯನ್ನು ಅವರು ಗ್ರಾಮಕ್ಕೆ ಭೇಟಿ ನೀಡಿ ಕಾನೂನು ಪ್ರಕಾರವಾಗಿ ತಾಳ್ಮೆಯಿಂದ ಅಧಿಕಾರಿಗಳ ಜೊತೆ ಚರ್ಚಿಸಿ ಇತ್ಯರ್ಥಪಡಿಸಿದ್ದರು.


ಈ ಸಂದರ್ಭದಲ್ಲಿ ಗ್ರಾಮದ ಜನರು ಜಿಲ್ಲಾಧಿಕಾರಿಯವರ ಜೊತೆ ಪ್ರೀತಿ ವಿಶ್ವಾಸದಿಂದ ಅಧಿಕಾರಿ ಎನ್ನದೆ ನಡೆದುಕೊಂಡ ರೀತಿಗೆ ಮನಸೋತ ಜಿಲ್ಲಾಧಿಕಾರಿಯವರು ಬೆಂಡೆಕೆರೆ ಗ್ರಾಮದ ಜನತೆಗೆ ಪತ್ರಿಕಾ ಮಾಧ್ಯಮದವರ ಮೂಲಕ ಕೃತಜ್ಞತೆ ಸಲ್ಲಿಸಿದರು.

Continue Reading

Hassan

ಅದ್ದೂರಿಯಾಗಿ ಜರುಗಿದ 18ನೇ ವರ್ಷದ ಶ್ರೀ ಉದ್ಭವ ಶನೈಶ್ಚರ ಸ್ವಾಮಿಯ ಜಾತ್ರಾ ಮಹೋತ್ಸವ

Published

on

ಆಲೂರು: ತಾಲೂಕಿನ ಕೆ. ಕಾಟೀಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಶ್ರೀ ಉದ್ಭವ ಶನೈಶ್ಚರ ಸ್ವಾಮಿಯ 18ನೇ ವರ್ಷದ ಜಾತ್ರಾ ಮಹೋತ್ಸವವೂ ಅತ್ಯಂತ ವೈಭವದಿಂದ ಜರುಗಿತು. ಈ ಸಂಭ್ರಮದ ನಡುವೆ ಗ್ರಾಮದ ಯುವಕರು ಜಾತಿ-ಮತದ ಭೇದ ಮರೆತು ಒಗ್ಗಟ್ಟಿನ ಪ್ರದರ್ಶನ ನೀಡುವ ಮೂಲಕ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ.

​ವೈಭವದ ರಥೋತ್ಸವ ಮತ್ತು ಸಾಂಸ್ಕೃತಿಕ ಮೆರುಗು

ಫೆ.6 ರಿಂದ 7 ರವರೆಗೆ ನಡೆದ ಈ ಜಾತ್ರಾ ಮಹೋತ್ಸವದಲ್ಲಿ ವಿಶೇಷವಾಗಿ ಗ್ರಾಮದ ದೇವತೆಗಳನ್ನು ಚಿನ್ನ ಹಾಗೂ ಬೆಳ್ಳಿಯ ರಥಗಳ ಮೂಲಕ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ವೀರಗಾಸೆ, ಡೋಲು ಕುಣಿತದಂತಹ ಜಾನಪದ ಕಲಾತಂಡಗಳು ಮೆರವಣಿಗೆಗೆ ವಿಶೇಷ ಕಳೆ ತಂದವು. ಭಕ್ತಾದಿಗಳು ಸಾಗರೋಪಾದಿಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.


​ಸೌಹಾರ್ದತೆಯ ಸಂದೇಶ ಸಾರಿದ ಕ್ರಿಕೆಟ್ ಪಂದ್ಯಾವಳಿ

ಜಾತ್ರೆಯ ಮರುದಿನವಾದ ಭಾನುವಾರ , ಗ್ರಾಮದ ಯುವಕರು ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯು ಎಲ್ಲರ ಗಮನ ಸೆಳೆಯಿತು. “ನಾವೆಲ್ಲರೂ ಒಂದೇ” ಎಂಬ ಉದಾತ್ತ ಉದ್ದೇಶದೊಂದಿಗೆ ಗ್ರಾಮದ ಎಲ್ಲಾ ವರ್ಗದ ಯುವಕರು ಯಾವುದೇ ಭೇದ-ಭಾವವಿಲ್ಲದೆ ಕ್ರೀಡೆಯಲ್ಲಿ ಪಾಲ್ಗೊಂಡಿದ್ದರು. ಕ್ರೀಡೆಯ ಮೂಲಕ ಸಮಾಜದಲ್ಲಿ ಭಾವೈಕ್ಯತೆಯನ್ನು ಬೆಳೆಸಬಹುದು ಎಂಬುದನ್ನು ಈ ಯುವಕರು ಸಾಬೀತುಪಡಿಸಿದರು.

ಪ್ರಮುಖ ಸಹಕಾರ

ಈ ಕಾರ್ಯಕ್ರಮದ ಯಶಸ್ಸಿನ ಹಿಂದೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಯೋಗೀಶ್ ಅವರ ಮಾರ್ಗದರ್ಶನ ಹಾಗೂ ಪ್ರಧಾನ ಅರ್ಚಕರಾದ ರವಿ ಸ್ವಾಮಿ ಅವರ ಆಶೀರ್ವಾದವಿತ್ತು.

ಯುವಶಕ್ತಿಯ ಸಂಘಟನೆ:

ಗ್ರಾಮದ ಯುವಕರಾದ ಕೆ.ಡಿ.ರವಿ, ಪ್ರಸನ್ನ, ಸೋಮ, ಪ್ರತಾಪ್, ಸುನಿಲ್, ಶ್ರೀಧರ, ಮದನ್, ಮನು (ಭಾಷಾ), ಚಂದನ್, ಮನು ಉಗನೆ, ಗಿರೀಶ್, ಕೆ.ಟಿ. ಮಂಜುನಾಥ್  ಹಾಗೂ ಇನ್ನಿತರ ಯುವಕರು ಹಗಲಿರುಳು ಶ್ರಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

​ಗ್ರಾಮದ ಹಿರಿಯರು ಯುವಕರ ಈ ಉತ್ಸಾಹ ಮತ್ತು ಒಗ್ಗಟ್ಟನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೆ. ಕಾಟೀಹಳ್ಳಿಯ ಈ ಮಾದರಿ ಕಾರ್ಯ ಇತರ ಗ್ರಾಮಗಳಿಗೂ ಸ್ಫೂರ್ತಿಯಾಗಲಿ ಎಂದು ಹಾರೈಸಿದ್ದಾರೆ

Continue Reading

Hassan

ಆರ್‌ಟಿಐ ಕಾರ್ಯಕರ್ತನ ಮೇಲೆ ಗ್ರಾ.ಪ. ಮಾಜಿ ಸದಸ್ಯನಿಂದಲೇ ಹಲ್ಲೆ ಆರೋಪ

Published

on

ಹಾಸನ: ಹಸು ಮಾರಾಟ ಮಾಡಿ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ದಾಖಲೆಗಳನ್ನು ಪಡೆದುಕೊಂಡು ರಾಜ್ಯದ ಗಮನ ಸೆಳೆದಿದ್ದ ರೈತನ ಮೇಲೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯನೇ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರೈತ ರವಿ ಎಂಬವರು ಜಿತೇನಹಳ್ಳಿ ಗ್ರಾಮದ ಮಾಜಿ ಗ್ರಾ.ಪಂ. ಸದಸ್ಯ ಆನಂದ್ ವಿರುದ್ಧ ಹಲ್ಲೆ ಆರೋಪ ಮಾಡಿದ್ದಾರೆ.

ನವೆಂಬರ್ ತಿಂಗಳಲ್ಲಿ ಕಾಳೇನಹಳ್ಳಿ ಗ್ರಾಮ ಪಂಚಾಯಿತಿಯಿಂದ ಬರೊಬ್ಬರಿ 16,370 ಪುಟಗಳ ದಾಖಲೆಗಳನ್ನು ಆರ್‌ಟಿಐ ಅಡಿಯಲ್ಲಿ ಪಡೆದಿದ್ದ ರವಿ, ಇದಕ್ಕಾಗಿ 32,340 ರೂ. ಶುಲ್ಕವನ್ನು ಪಾವತಿಸಿದ್ದರು. ದಾಖಲೆಗಳ ಜೆರಾಕ್ಸ್‌ಗೆ ಹಣ ಹೊಂದಿಸಲು ತನ್ನ ಹಸುವನ್ನು ಮಾರಾಟ ಮಾಡಿದ್ದರು. ಅಲ್ಲದೆ
ಗ್ರಾಮ ಪಂಚಾಯಿತಿಗೆ ತೆರಳಿ, ಎತ್ತಿನಗಾಡಿಯಲ್ಲಿ ದಾಖಲೆಗಳನ್ನು ಸಾಗಿಸಿಕೊಂಡು ಬಂದಿದ್ದ ರವಿ, ಪಡೆದ ದಾಖಲೆಗಳ ಆಧಾರದ ಮೇಲೆ ಅನುದಾನ ದುರುಪಯೋಗ ಆರೋಪಿಸಿ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಈ ದೂರು ದಾಖಲಾಗಿದ ಬಳಿಕವೇ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ರವಿ ಆರೋಪಿಸಿದ್ದಾರೆ.

ದಿನಸಿ ಸಾಮಾನು ಖರೀದಿಗೆ ತೆರಳಿದ್ದ ವೇಳೆ ತನ್ನ ಮೇಲೆ ಹಲ್ಲೆ ನಡೆದಿದ್ದು, ಈ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಹಲ್ಲೆಯಿಂದ ಗಾಯಗೊಂಡಿರುವ ರವಿ ಸದ್ಯ ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Continue Reading

Trending

error: Content is protected !!