Hassan
ಆರ್ಟಿಐ ಕಾರ್ಯಕರ್ತನ ಮೇಲೆ ಗ್ರಾ.ಪ. ಮಾಜಿ ಸದಸ್ಯನಿಂದಲೇ ಹಲ್ಲೆ ಆರೋಪ
ಹಾಸನ: ಹಸು ಮಾರಾಟ ಮಾಡಿ ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿಯಲ್ಲಿ ದಾಖಲೆಗಳನ್ನು ಪಡೆದುಕೊಂಡು ರಾಜ್ಯದ ಗಮನ ಸೆಳೆದಿದ್ದ ರೈತನ ಮೇಲೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯನೇ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರೈತ ರವಿ ಎಂಬವರು ಜಿತೇನಹಳ್ಳಿ ಗ್ರಾಮದ ಮಾಜಿ ಗ್ರಾ.ಪಂ. ಸದಸ್ಯ ಆನಂದ್ ವಿರುದ್ಧ ಹಲ್ಲೆ ಆರೋಪ ಮಾಡಿದ್ದಾರೆ.

ನವೆಂಬರ್ ತಿಂಗಳಲ್ಲಿ ಕಾಳೇನಹಳ್ಳಿ ಗ್ರಾಮ ಪಂಚಾಯಿತಿಯಿಂದ ಬರೊಬ್ಬರಿ 16,370 ಪುಟಗಳ ದಾಖಲೆಗಳನ್ನು ಆರ್ಟಿಐ ಅಡಿಯಲ್ಲಿ ಪಡೆದಿದ್ದ ರವಿ, ಇದಕ್ಕಾಗಿ 32,340 ರೂ. ಶುಲ್ಕವನ್ನು ಪಾವತಿಸಿದ್ದರು. ದಾಖಲೆಗಳ ಜೆರಾಕ್ಸ್ಗೆ ಹಣ ಹೊಂದಿಸಲು ತನ್ನ ಹಸುವನ್ನು ಮಾರಾಟ ಮಾಡಿದ್ದರು. ಅಲ್ಲದೆ
ಗ್ರಾಮ ಪಂಚಾಯಿತಿಗೆ ತೆರಳಿ, ಎತ್ತಿನಗಾಡಿಯಲ್ಲಿ ದಾಖಲೆಗಳನ್ನು ಸಾಗಿಸಿಕೊಂಡು ಬಂದಿದ್ದ ರವಿ, ಪಡೆದ ದಾಖಲೆಗಳ ಆಧಾರದ ಮೇಲೆ ಅನುದಾನ ದುರುಪಯೋಗ ಆರೋಪಿಸಿ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಈ ದೂರು ದಾಖಲಾಗಿದ ಬಳಿಕವೇ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ರವಿ ಆರೋಪಿಸಿದ್ದಾರೆ.
ದಿನಸಿ ಸಾಮಾನು ಖರೀದಿಗೆ ತೆರಳಿದ್ದ ವೇಳೆ ತನ್ನ ಮೇಲೆ ಹಲ್ಲೆ ನಡೆದಿದ್ದು, ಈ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಹಲ್ಲೆಯಿಂದ ಗಾಯಗೊಂಡಿರುವ ರವಿ ಸದ್ಯ ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
Hassan
ಯಾರದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ: ಬೀದಿ ದೀಪ ಸಂಪರ್ಕ ಕಡಿತದಿಂದ ನಿವಾಸಿಗಳ ಪರದಾಟ
ಹಾಸನ: ನಗರದಲ್ಲಿ ಮಹಾನಗರ ಪಾಲಿಕೆ ವಿದ್ಯುತ್ ಬಿಲ್ ಪಾವತಿಸದ ಕಾರಣ ಬೀದಿ ದೀಪಗಳ ವಿದ್ಯುತ್ ಸಂಪರ್ಕವನ್ನು ಸೆಸ್ಕ್ ಸಿಬ್ಬಂದಿ ಕಡಿತಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ನಗರದ ಸಾಲಗಾಮೆ ರಸ್ತೆಯಲ್ಲಿರುವ ಮಹಾಲಕ್ಷ್ಮಿ ಲೇಔಟ್ನಲ್ಲಿ ಈ ಸಮಸ್ಯೆ ಉಂಟಾಗಿದ್ದು, ಬೀದಿ ದೀಪಗಳು ಬೆಳಗದ ಕಾರಣ ಇಡೀ ಬಡಾವಣೆ ಕತ್ತಲಲ್ಲಿ ಮುಳುಗಿದೆ. ಇದರಿಂದ ರಾತ್ರಿ ವೇಳೆ ಓಡಾಟ ನಡೆಸಲು ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಬಿಲ್ ಬಾಕಿ ಉಳಿದಿರುವುದನ್ನು ಕಾರಣವಾಗಿ ನೀಡಿ ಸೆಸ್ಕ್ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ನಿವಾಸಿಗಳು ಪ್ರಶ್ನಿಸಿದಾಗ, ಮಹಾನಗರ ಪಾಲಿಕೆಯಿಂದ ಬಾಕಿ ಬಿಲ್ ಪಾವತಿಯಾಗಿಲ್ಲ; ಇಲ್ಲವೇ ಬಡಾವಣೆ ನಿರ್ಮಿಸಿದವರು ಬಿಲ್ ಪಾವತಿಸಬೇಕು ಎಂದು ಸೆಸ್ಕ್ ಅಧಿಕಾರಿಗಳು ತಿಳಿಸಿರುವುದಾಗಿ ಆರೋಪಿಸಲಾಗಿದೆ.
ಆದರೆ, ತಮ್ಮದಲ್ಲದ ತಪ್ಪಿಗೆ ಸಾಮಾನ್ಯ ನಿವಾಸಿಗಳೇ ಸಂಕಷ್ಟ ಅನುಭವಿಸುತ್ತಿದ್ದು, ಕತ್ತಲಿನ ವಾತಾವರಣದಿಂದ ಭದ್ರತಾ ಆತಂಕವೂ ಹೆಚ್ಚಾಗಿದೆ. ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಮಕ್ಕಳು ರಾತ್ರಿ ವೇಳೆಯಲ್ಲಿ ಓಡಾಡಲು ಭಯಪಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿ, ಬೀದಿ ದೀಪಗಳ ವಿದ್ಯುತ್ ಸಂಪರ್ಕವನ್ನು ಪುನಃ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Hassan
KCET ಫಲಿತಾಂಶ ಪ್ರಕಟ: HKSನ ಯಜತ್ ಗೌಡ ಜಿಲ್ಲೆಗೆ ಪ್ರಥಮ
ಹಾಸನ: ಏಪ್ರಿಲ್ 23 ಮತ್ತು 24 ರಂದು ನಡೆದ ಕೆ.ಸಿ.ಇ.ಟಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ಹೆಚ್. ಕೆ. ಎಸ್. ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮೊದಲ ಪ್ರಯತ್ನದಲ್ಲೇ ಅತ್ಯದ್ಭುತ ಸಾಧನೆ ಗೈದಿದ್ದಾರೆ.
ಪ್ರಸ್ತುತ ಇಂಜಿನಿಯರಿಂಗ್, ಕೃಷಿ ವಿಜ್ಞಾನ, ನರ್ಸಿಂಗ್, ನ್ಯಾಚುರೋಪತಿ, ಫಾರ್ಮಸಿ ಮತ್ತು ಪಶು ವೈದ್ಯಕೀಯ ಸೇರಿದಂತೆ ಹಲವು ಕೋರ್ಸ್ ಗಳಿಗೆ ಸೇರಲು ನಡೆಯುವ ರಾಜ್ಯ ಮಟ್ಟದ ಪ್ರವೇಶ ಪರೀಕ್ಷೆಗೆ ಹೆಚ್. ಕೆ. ಎಸ್ ವಿದ್ಯಾ ಸಂಸ್ಥೆಯು ಅತ್ಯುತ್ತಮ ತರಬೇತಿ ನೀಡುತ್ತಿದೆ.

ವಿದ್ಯಾರ್ಥಿಯಾದ ಯಜತ್ ಗೌಡ ಎಸ್ ಪಿ ಎಂಜಿನಿಯರಿಂಗ್ ವಿಭಾಗದಲ್ಲಿ 526 ನೇ ರ್ಯಾಂಕ್, ಬಿ ಫಾರ್ಮ ಡಿ ಫಾರ್ಮ 1559 ನೇ ರ್ಯಾಂಕ್ ಪಡೆದು ಹಾಸನ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡು ಅಮೋಘ ಸಾಧನೆಗೈದಿದ್ದಾರೆ. ಉಳಿದಂತೆ ವಿಶ್ವೇಶ್ ಎನ್ ಹೆಚ್ ಇಂಜಿನಿಯರಿಂಗ್ ವಿಭಾಗದಲ್ಲಿ 817ನೇ ರ್ಯಾಂಕ್, ಪ್ರಣವ್ ಹರ್ಷ ಚಿಂತಲ್ ಇಂಜಿನಿಯರಿಂಗ್ 1420 ನೇ ರ್ಯಾಂಕ್, ಸೃಜನ ಎಸ್(ಕೃಷಿ ವಿಭಾಗದಲ್ಲಿ 345 ನೇ ರ್ಯಾಂಕ್, ನ್ಯಾಚುರೋಪತಿ 686 ನೇ ರ್ಯಾಂಕ್, ಪಶು ವೈದ್ಯಕೀಯ 1180 ನೇ ರ್ಯಾಂಕ್, ನರ್ಸಿಂಗ್ 1184ನೇ ರ್ಯಾಂಕ್, ಎಂಜಿನಿಯರಿಂಗ್ 1799ನೇ ರ್ಯಾಂಕ್, ಬಿ ಫಾರ್ಮ 1609 ಮತ್ತು ಡಿ ಫಾರ್ಮ 1215 ನೇ ರ್ಯಾಂಕ್), ಆರ್ಯ ವಿ (ಕೃಷಿ ವಿಭಾಗದಲ್ಲಿ 269ನೇ ರ್ಯಾಂಕ್, ನ್ಯಾಚುರೋಪತಿ 736ನೇ ರ್ಯಾಂಕ್, ಪಶು ವೈದ್ಯಕೀಯ 1119ನೇ ರ್ಯಾಂಕ್, ಬಿ ಫಾರ್ಮ 1753ನೇ ರ್ಯಾಂಕ್, ಡಿ ಫಾರ್ಮ 2007 ನೇ ರ್ಯಾಂಕ್, ಇಂಜಿನಿಯರಿಂಗ್ 1518 ನೇ ರ್ಯಾಂಕ್), ಸೃಷ್ಟಿ ಎಚ್ ಎಸ್ ನ್ಯಾಚುರೋಪಥಿ 856 ನೇ ರ್ಯಾಂಕ್, ಶ್ರೀ ಲಕ್ಷ್ಮಿ (ಕೃಷಿ ವಿಭಾಗದಲ್ಲಿ 553 ನೇ ರ್ಯಾಂಕ್, ನ್ಯಾಚುರೋಪತಿ 1700 ನೇ ರ್ಯಾಂಕ್, ನರ್ಸಿಂಗ್ 2413 ನೇ ರ್ಯಾಂಕ್), ಸೈಯಮ್ ಕೊಥಾರಿ ಕೃಷಿ ವಿಭಾಗದಲ್ಲಿ 1765 ನೇ ರ್ಯಾಂಕ್, ಶ್ರೀತನ್ ಗೌಡ ಪಶು ವೈದ್ಯಕೀಯ 2236 ನೇ ರ್ಯಾಂಕ್, ಇಶಾಂತ್ ಆರ್ ಡಿ ಫಾರ್ಮ 1392 ನೇ ರ್ಯಾಂಕ್ ಪಡೆದು ಹಲವು ವಿದ್ಯಾರ್ಥಿಗಳು ಅತ್ಯುತ್ತಮ ರ್ಯಾಂಕ್ಗಳೊಂದಿಗೆ ಉತ್ತೀರ್ಣರಾಗಿದ್ದು 1000 ದೊಳಗೆ 08 ವಿದ್ಯಾರ್ಥಿಗಳು, 5000 ದೊಳಗೆ 64 ವಿದ್ಯಾರ್ಥಿಗಳು 10000 ದೊಳಗೆ 120 ವಿದ್ಯಾರ್ಥಿಗಳು ಅತ್ಯುತ್ತಮ ರ್ಯಾಂಕ್ಗಳೊಂದಿಗೆ ಉತ್ತೀರ್ಣರಾಗಿದ್ದು ಕಾಲೇಜಿಗೆ ಹಾಗೂ ಹಾಸನ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ.

ಸಾಧಕರನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಹೆಚ್.ಕೆ.ಸುರೇಶ್, ಕಾರ್ಯದರ್ಶಿಗಳಾದ ಶ್ರೀಯುತ ಹೆಚ್. ಎಸ್. ಪ್ರಶಾಂತ್ ಗೌಡ, ಕ್ರಿಯೇಟಿವ್ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಸಂಯೋಜಕರು ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
Hassan
ಮಠ ಮಂದಿರಗಳಿಗೆ ಭೌತಿಕ ಆಸ್ತಿಗಿಂತ ಭಕ್ತರೆ ದೊಡ್ಡ ಆಸ್ತಿ: ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ
ವರದಿ: ಸತೀಶ್ ಚಿಕ್ಕಕಣಗಾಲು
ಆಲೂರು: ಸಮಾಜ ಧರ್ಮದ ದಾರಿಯಲ್ಲಿ ನಡೆಯುವಂತೆ ಮಾರ್ಗದರ್ಶನ ಮಾಡುತ್ತಿರುವ ಮಠ ಮಾನ್ಯಗಳು ಬೆಳೆಯಬೇಕಾದರೆ ಭಕ್ತರ ಔದಾರ್ಯತೆ ಅಗತ್ಯ. ಮಠ ಮಂದಿರಗಳಿಗೆ ಭೌತಿಕ ಆಸ್ತಿಗಿಂತ ಭಕ್ತರೆ ದೊಡ್ಡ ಆಸ್ತಿ ಎಂದು ಶ್ರೀಮದ್ ರಂಭಾಪುರೀ ವೀರಾ ಸಿಂಹಾಸನ ಶಾಖಾ ಶ್ರೀ ಸಂಸ್ಥಾನ ಹಿರೇಮಠ ಕಾರ್ಜುವಳ್ಳಿಯ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಪಾಳ್ಯ ಹೋಬಳಿ ಕಾರ್ಜುವಳ್ಳಿ ಗ್ರಾಮದಲ್ಲಿರುವ ಶ್ರೀ ಸಂಸ್ಥಾನ ಹಿರೇಮಠದಲ್ಲಿ ಕಾರ್ಜುವಳ್ಳಿ ಶ್ರೀಗಳವರ ಅಧಿಕ ಜೇಷ್ಠ ಮಾಸದ ನಿಮಿತ್ಯ ಕೈಗೊಂಡ 9 ದಿನಗಳ ಮೌನ ಶಿವಾನುಷ್ಠಾನ ಮಂಗಲ ಸಮಾರಂಭ ಮತ್ತು ಶ್ರೀ ಸಿದ್ಧಾಂತ ಶಿಖಾಮಣಿ ತತ್ತ್ವ ಪ್ರಸಾರ ಅಭಿಯಾನ ಸಮಿತಿಯ ಆಶ್ರಯದಲ್ಲಿ ಧರ್ಮ ಪ್ರಸಾರಕ್ಕಾಗಿ ಸಾಗುತ್ತಿರುವ “ಮನೆ-ಮನೆಗೆ ರೇಣುಕ ಮನ-ಮನಕೆ ರೇಣುಕ” ಶ್ರೀ ಸಿದ್ಧಾಂತ ಶಿಖಾಮಣಿ ತತ್ತ್ವ ಪ್ರಸಾರ ಅಭಿಯಾನ ಕಾರ್ಯಕ್ರಮ 36 ಸಂಚಿಕೆಗಳನ್ನು ಪೂರೈಸಿ ಮುನ್ನಡೆಯುತ್ತಿರುವ ಶುಭ ಸಮಾರಂಭ ಅಭಿಯಾನದ 3ನೇ ವಾರ್ಷಿಕೋತ್ಸವ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಧರ್ಮದಲ್ಲಿ ದಾರಿಯಲ್ಲಿ ನಡೆದರೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಮಠ,ಮಂದಿರಗಳು ಭಕ್ತರಿಗೆ ಶ್ರದ್ಧಾಕೇಂದ್ರಗಳಾಗಿ ಅವರನ್ನು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಣೆ ನೀಡುತ್ತವೆ. ಮಠಗಳು ಮತ್ತು ಧಾರ್ಮಿಕ ಸಂಸ್ಥೆಗಳು ಮೂಲಭೂತವಾಗಿ ಭಕ್ತರ ಕಲ್ಯಾಣ ಮತ್ತು ಲೋಕೋಪಕಾರಕ್ಕಾಗಿ ಸ್ಥಾಪಿತವಾಗಿರುತ್ತವೆ. ಭಕ್ತರ ಆಧ್ಯಾತ್ಮಿಕ ಉದ್ಧಾರ, ನೈತಿಕ ಮೌಲ್ಯಗಳ ಬೋಧನೆ ಮತ್ತು ಸಮಾಜ ಸೇವೆಯೇ ಮಠಗಳ ಪ್ರಮುಖ ಉದ್ದೇಶವಾಗಿರುತ್ತದೆ. ಸಮಾಜದ ಏಳಿಗೆಗೆ ಸಮರ್ಪಿಸಿಕೊಂಡವರಿಗೆ ನೀಡುವ ಗೌರವಾದರ ಸಾಂಕೇತಿಕ ಮಾತ್ರ. ಗುರುವಿಗೆ ಅರ್ಪಣೆ ಮಾಡಿದರೆ ತಮ್ಮ ಜೀವನ ಸಾರ್ಥಕವಾಗುತ್ತದೆ ಎಂಬ ಭಾವನೆ ಭಕ್ತಾದಿಗಳಲ್ಲಿ ಮೂಡಬೇಕು ಎಂದು ಆಶೀರ್ವದಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಸೇವೆಯಲ್ಲಿ ತಮ್ಮ ಜೀವನವನ್ನೇ ಸವೆಸುತ್ತಿರುವ ಕಾರ್ಜುವಳ್ಳಿಯ ಪೂಜ್ಯ ಶ್ರೀಗಳು ಕೇವಲ ಒಬ್ಬ ಮಠಾಧೀಶರಲ್ಲ, ಅವರು ಈ ಭಾಗದ ಭಕ್ತರ ಬದುಕಿನ ಬೆಳಕು. ಸಮಾಜದ ಏಳಿಗೆಗೆ ನಿರಂತರ ಶ್ರಮಿಸುತ್ತಿರುವ ಶ್ರೀಗಳು ತೋರಿದ ಪಥದಲ್ಲಿ ನೀವೆಲ್ಲ ನಡೆಯೋಣ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶ್ರೀಮಠದಿಂದ ನೀಡಿರುವ ಧರ್ಮಸಂವರ್ಧಕ ಪ್ರಶಸ್ತಿ ಘೋಷಿತರಾಗಿರುವ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರರವರನ್ನು ಕಾರ್ಜುವಳ್ಳಿಯ ಶ್ರೀಗಳಿಂದ ಗೌರವಿಸಿ ಸನ್ಮಾನಿಸಲಾಯಿತು. ಆಲೂರು ತಾಲೂಕಿನ ಪತ್ರಕರ್ತರುಗಳಾದ ರಾಘವೇಂದ್ರ, ವೀರಭದ್ರ ಸ್ವಾಮಿ ಬೈರಾಪುರ, ಸತೀಶ್ ಚಿಕ್ಕಕಣಗಾಲು ಇವರುಗಳಿಂದ ಪರಿಸರ ದಿನಾಚರಣೆ ಅಂಗವಾಗಿ ಶ್ರೀಗಳವರಿಗೆ ತೈಲ್ಯಾಂಡ್ ಹಲಸಿನ ಗಿಡವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮಠದ ಆಡಳಿತಾಧಿಕಾರಿ ಶಿವಮೂರ್ತಿ ಸಿದ್ದಾಪುರ, ಆಲೂರು ತಾಲೂಕು ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ರೇಣುಕಾ ಪ್ರಸಾದ್, ಉಪಾಧ್ಯಕ್ಷ ಡಿ.ಎಸ್ ಜಯಣ್ಣ, ಖಜಾಂಚಿ ಟೀಕರಾಜು, ಸಹ ಕಾರ್ಯದರ್ಶಿ ಡಾ.ಜಯರಾಜ್, ವಕೀಲರ ಸಂಘದ ಅಧ್ಯಕ್ಷ ಎಂ.ಎಸ್ ಮಹೇಶ್, ಜಿಲ್ಲಾ ಹಿಂದುಳಿದ ವರ್ಗಗಳ ಹಿರಿಯ ಸಲಹೆಗಾರ ಬಿ.ಸಿ ಶಂಕರಾಚಾರ್ಯ, ಪುರೋಹಿತರಾದ ದೇವರಾಜ್ ಶಾಸ್ತ್ರೀಗಳು, ಯತೀಶ್ ಶಾಸ್ತ್ರೀಗಳು, ಜಸ್ವಂತ್ ಶಾಸ್ತ್ರೀಗಳು, ಮನೆಮನೆಗೆ ರೇಣುಕಾ ಸಮಿತಿ ನಿರ್ದೇಶಕರಾದ ಯಶ್ವಂತ್, ಇಂದ್ರೇಶ್, ಮಂಜುನಾಥ ಶ್ರೀಧರ್, ಆನಗಳಲೆ ಕುಮಾರ್, ವಿರುಪಾಕ್ಷಯ್ಯ ಸೇರಿದಂತೆ ಮುಂತಾದವರು ಹಾಜರಿದ್ದರು.
-
Politics7 hours agoರಾಜೀನಾಮೆ ಹಿಂಪಡೆದ ರಾಮಲಿಂಗಾರೆಡ್ಡಿ
-
National8 hours agoಗಿಲ್–ರಾಹುಲ್ ಶತಕದ ಹೊಳಪು: ಅಫ್ಘಾನಿಸ್ತಾನದ ವಿರುದ್ಧ ಮೊದಲ ಟೆಸ್ಟ್ನಲ್ಲಿ ಭಾರತದ ಬಲಿಷ್ಠ ಬ್ಯಾಟಿಂಗ್ ಪ್ರದರ್ಶನ
-
Manglore12 hours agoಪ್ರತ್ಯೇಕ 2 ಪ್ರಕರಣಗಳಲ್ಲಿ ಡ್ರಗ್ ಸರಬರಾಜು ಮಾಡುತ್ತಿದ್ದ ಆರೋಪಿಗಳಿಬ್ಬರ ಸೆರೆ
-
Hassan7 hours agoKCET ಫಲಿತಾಂಶ ಪ್ರಕಟ: HKSನ ಯಜತ್ ಗೌಡ ಜಿಲ್ಲೆಗೆ ಪ್ರಥಮ
-
Politics11 hours agoರಾಮಲಿಂಗಾರೆಡ್ಡಿ ರಾಜೀನಾಮೆ ಅಂಗೀಕರಿಸುವುದಿಲ್ಲ: ಸಿಎಂ ಡಿ.ಕೆ. ಶಿವಕುಮಾರ್
-
State6 hours agoರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ
-
Kodagu9 hours agoಕೊಡಗು : ಭಾರೀ ವಾಹನಗಳ ಸಂಚಾರ ನಿಷೇಧ
-
Mysore8 hours agoವಿದ್ಯಾರ್ಥಿ ಜೀವನದಲ್ಲಿ ಪ್ರತಿ ಕ್ಷಣವೂ ಅತ್ಯಮೂಲ್ಯವಾದದ್ದು: ಡಾ. ಶಿವಕುಮಾರ್
