Cinema
ಗದ್ದಲ ಮತ್ತು ಶ್ರವಣ ಕಲೆ ಕುರಿತು ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಖ್ಯಾತ ಶಬ್ದ ವಿನ್ಯಾಸಕ ಬಿಸ್ವದೀಪ್ ಚಟರ್ಜಿ ಮಾತು
ಬೆಂಗಳೂರು: 17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ, ಖ್ಯಾತ ಶಬ್ದ ವಿನ್ಯಾಸಕ (ಸೌಂಡ್ ಡಿಸೈನರ್) ಬಿಸ್ವದೀಪ್ ಚಟರ್ಜಿ ಅವರು ‘ಸಿನಿಮಾ ಆಸ್ ಎ ವೇ ಆಫ್ ಲಿಸನಿಂಗ್’ (ಕೇಳಿಸಿಕೊಳ್ಳುವ ಮಾರ್ಗವಾಗಿ ಸಿನಿಮಾ) ಎಂಬ ಮಾಸ್ಟರ್ ಕ್ಲಾಸ್ನಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದರು. ಸಂಸ್ಕೃತಿ, ಪರಿಸರ ಮತ್ತು ಅಕೌಸ್ಟಿಕ್ಸ್ (ಧ್ವನಿ ವಿಜ್ಞಾನ) ಕೇವಲ ಸಿನಿಮಾದ ಶಬ್ದ ವಿನ್ಯಾಸವನ್ನಷ್ಟೇ ಅಲ್ಲದೆ, ದೈನಂದಿನ ಜೀವನದಲ್ಲಿ ಜನರು ಕೇಳಿಸಿಕೊಳ್ಳುವ ಮತ್ತು ಸಂವಹನ ಮಾಡುವ ವಿಧಾನವನ್ನು ಹೇಗೆ ರೂಪಿಸುತ್ತವೆ ಎಂಬುದರ ಕುರಿತು ಅವರು ಈ ಸಂದರ್ಭದಲ್ಲಿ ಬೆಳಕು ಚೆಲ್ಲಿದರು.
ʼ3 ಇಡಿಯಟ್ಸ್’, ʼಬಾಜಿರಾವ್ ಮಸ್ತಾನಿ’, ʼಉರಿ: ದಿ ಸರ್ಜಿಕಲ್ ಸ್ಟ್ರೈಕ್ʼ ಮತ್ತು ಇತ್ತೀಚಿನ ʼಧುರಂಧರ್ʼ ಅಂತಹ ಚಿತ್ರಗಳಲ್ಲಿನ ಕೆಲಸಕ್ಕೆ ಹೆಸರುವಾಸಿಯಾದ ಚಟರ್ಜಿ, ಕೇಳಿಸಿಕೊಳ್ಳುವುದು ಎನ್ನುವುದು ಒಂದು ಸಾಂಸ್ಕೃತಿಕ ಮತ್ತು ಚಲನಚಿತ್ರ ಅಭ್ಯಾಸವಾಗಿ ಎಷ್ಟು ಮುಖ್ಯ ಎಂಬುದನ್ನು ಒತ್ತಿ ಹೇಳಿದರು.
ʼಸಾಂಸ್ಕೃತಿಕವಾಗಿ ಭಾರತೀಯರು ಸ್ವಲ್ಪ ಜೋರಾಗಿ ಮಾತನಾಡುವ ಪ್ರವೃತ್ತಿ ಹೊಂದಿದ್ದಾರೆ ಎಂದ ಚಟರ್ಜಿ, ʼಇದು ನಾವು ವಾಸಿಸುವ ಭೌತಿಕ ಮತ್ತು ಸಾಮಾಜಿಕ ಪರಿಸರದಿಂದ ರೂಪುಗೊಂಡ ಗುಣವಾಗಿದೆ. ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ, ಅಲ್ಲಿನ ತಂಪಾದ ಹವಾಮಾನ ಮತ್ತು ಶಾಂತವಾದ ಸುತ್ತಮುತ್ತಲಿನ ಪರಿಸರವು ಶಬ್ದದೊಂದಿಗೆ ವಿಭಿನ್ನ ಸಂಬಂಧವನ್ನು ಸೃಷ್ಟಿಸುತ್ತದೆʼ ಎಂದು ಅವರು ತಿಳಿಸಿದರು.
ʼಅನೇಕ ಪಾಶ್ಚಿಮಾತ್ಯ ನಗರಗಳಲ್ಲಿ ಮೌನವು ಸಾಮಾನ್ಯವಾಗಿದೆ. ಸುತ್ತುವರಿದ ಗದ್ದಲದ ಮಟ್ಟವು ಕಡಿಮೆಯಿರುತ್ತದೆ ಮತ್ತು ನಗರಾ ಯೋಜನೆಯು ಉತ್ತಮ ಅಕೌಸ್ಟಿಕ್ ಸಮತೋಲನವನ್ನು ಬೆಂಬಲಿಸುತ್ತದೆ. ಮೃದುವಾದ ಪೀಠೋಪಕರಣಗಳು, ಮರದ ನೆಲಹಾಸುಗಳು, ಕಾರ್ಪೆಟ್ಗಳು ಮತ್ತು ಸಂಸ್ಕರಿಸಿದ ಗೋಡೆಗಳು ಶಬ್ದವನ್ನು ಪ್ರತಿಧ್ವನಿಸುವ ಬದಲು ಹೀರಿಕೊಳ್ಳುತ್ತವೆ. ಇದರಿಂದಾಗಿ ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳು ಶಾಂತವಾಗಿರುತ್ತವೆ ಮತ್ತು ಜನರು ಪರಸ್ಪರ ಕೇಳಿಸಿಕೊಳ್ಳಲು ತಮ್ಮ ಧ್ವನಿಯನ್ನು ಏರಿಸುವ ಅಗತ್ಯವಿರುವುದಿಲ್ಲʼ ಎಂದರು.
ಧ್ವನಿ ವಿಜ್ಞಾನ ಅಥವಾ ಅಕೌಸ್ಟಿಕ್ಸ್ ಬಗ್ಗೆ ಇರುವ ಅರಿವಿನ ಕೊರತೆಯೇ ಈ ಸಮಸ್ಯೆಗೆ ಮೂಲ ಕಾರಣ ಎಂದು ಚಟರ್ಜಿ ಒತ್ತಿ ಹೇಳಿದರು. ʼಕಟ್ಟಡಗಳು ಅಥವಾ ಸ್ಥಳಗಳನ್ನು ವಿನ್ಯಾಸಗೊಳಿಸುವಾಗ ಶಬ್ದದ ಬಗ್ಗೆ ಚಿಂತನಶೀಲವಾದ ಕ್ರಮಗಳನ್ನು ಕೈಗೊಂಡರೆ, ಅದು ಸ್ಪಷ್ಟತೆ ಮತ್ತು ಸಮಾಧಾನ ಎರಡನ್ನೂ ನಾಟಕೀಯವಾಗಿ ಸುಧಾರಿಸುತ್ತದೆʼ ಎಂದು ಅವರು ಅಭಿಪ್ರಾಯಪಟ್ಟರು.
ಮಾತುಗಾರರು ಸಹಜವಾಗಿ ಹೇಗೆ ಬದಲಾಗುತ್ತಾರೆ ಎಂಬುದರ ಕುರಿತು ಸಾಮ್ಯತೆಯನ್ನು ನೀಡುತ್ತಾ, ʼಜನರು ಗದ್ದಲದ ನಡುವೆ ತಮ್ಮ ಮಾತು ಕೇಳಿಸುವಂತೆ ಮಾಡಲು ಅರಿವಿಲ್ಲದೆಯೇ ಧ್ವನಿಯನ್ನು ಹೇಗೆ ಬದಲಾಯಿಸಿಕೊಳ್ಳುತ್ತಾರೆʼ ಎಂಬುದನ್ನು ಅವರು ವಿವರಿಸಿದರು.
ʼಅನುಭವಿ ಮಾತುಗಾರರು ಜೋರಾಗಿ ಕಿರುಚುವ ಬದಲು, ಧ್ವನಿಯ ಏರಿಳಿತ (ಪಿಚ್) ಮತ್ತು ತರಂಗಾಂತರವನ್ನು (ಫ್ರೀಕ್ವೆನ್ಸಿ) ಸರಿಹೊಂದಿಸುತ್ತಾರೆ, ಇದರಿಂದ ಅವರ ಧ್ವನಿಯು ಒತ್ತಡವಿಲ್ಲದೆ ಸ್ಪಷ್ಟವಾಗಿ ಸಂವಹನವಾಗುತ್ತದೆ. ಇದೇ ತತ್ವವು ಸಿನಿಮಾದಲ್ಲಿ ಶಬ್ದದ ಧ್ವನಿಮುದ್ರಣ ಮತ್ತು ಮಿಕ್ಸಿಂಗ್ಗೆ ಮೂಲಾಧಾರವಾಗಿದೆʼ ಎಂದು ಅವರು ಹೇಳಿದರು.
ʼಶಬ್ದ ವಿನ್ಯಾಸಕರು ತರಂಗಾಂತರಗಳನ್ನು ಎಚ್ಚರಿಕೆಯಿಂದ ರೂಪಿಸುತ್ತಾರೆ, ಇದರಿಂದಾಗಿ ಹಿನ್ನೆಲೆ ಗದ್ದಲವು ಕೇಳುಗರನ್ನು ಹಿಂಸಿಸದಂತೆ ಸಂಭಾಷಣೆಗಳು ಮತ್ತು ಪ್ರಮುಖ ಶಬ್ದಗಳು ಸ್ಪಷ್ಟವಾಗಿ ಕೇಳಿಸುತ್ತವೆ. ಮನುಷ್ಯರು ಹೇಗೆ ಕೇಳಿಸಿಕೊಳ್ಳುತ್ತಾರೆ ಮತ್ತು ಪರಿಸರವು ಶಬ್ದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯೇ ಶಬ್ದ ವಿನ್ಯಾಸʼ ಎಂದು ಚಟರ್ಜಿ ಬಣ್ಣಿಸಿದರು.
ʼಧ್ವನಿಯನ್ನು ಹದಗೊಳಿಸುವುದಾಗಲಿ, ಬೇಡದ ತರಂಗಾಂತರಗಳನ್ನು ಫಿಲ್ಟರ್ ಮಾಡುವುದಾಗಲಿ ಅಥವಾ ಚಿತ್ರದ ಸೌಂಡ್ ಟ್ರ್ಯಾಕ್ಗಳನ್ನು ಪದರಗಳಾಗಿ ಜೋಡಿಸುವುದಾಗಲಿ, ಎಲ್ಲದರ ಗುರಿ ಒಂದೇ. ಗೊಂದಲವಿಲ್ಲದ ಸ್ಪಷ್ಟತೆ. ಸಿನಿಮಾ ತನ್ನ ಅತ್ಯುತ್ತಮ ರೂಪದಲ್ಲಿ ಪ್ರೇಕ್ಷಕರಿಗೆ ಕೇವಲ ಹೇಗೆ ನೋಡುವುದು ಎಂಬುದನ್ನು ಮಾತ್ರವಲ್ಲದೆ, ಹೇಗೆ ಕೇಳಿಸಿಕೊಳ್ಳಬೇಕು ಎಂಬುದನ್ನು ಸಹ ಕಲಿಸುತ್ತದೆʼ ಎಂದು ಅವರು ಮುಕ್ತಾಯಗೊಳಿಸಿದರು.
ಇದು ಚಲನಚಿತ್ರಗಳಲ್ಲಿ ಮತ್ತು ಪರದೆಯ ಆಚೆಗಿನ ಜೀವನದಲ್ಲಿ ಶಬ್ದ, ಸ್ಥಳಾವಕಾಶ ಮತ್ತು ಮೌನದ ಬಗ್ಗೆ ಆಳವಾದ ಅರಿವನ್ನು ಮೂಡಿಸುತ್ತದೆ. ತಮ್ಮ ಮಾಸ್ಟರ್ಕ್ಲಾಸ್ನಲ್ಲಿ ಅವರು ತಾವು ಕೆಲಸ ಮಾಡಿದ ಚಿತ್ರಗಳ ಕೆಲವು ಭಾಗಗಳನ್ನು ಪ್ರದರ್ಶಿಸಿದರು ಮತ್ತು ಶಬ್ದ ವಿನ್ಯಾಸವು ದೃಶ್ಯದ ಹಿನ್ನೆಲೆ ಮತ್ತು ಸ್ಥಳವನ್ನು ಸ್ಥಾಪಿಸುವಲ್ಲಿ ಹಾಗೂ ಕಥೆ ಹೇಳುವಿಕೆಗೆ ಆಳವನ್ನು ನೀಡುವಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ವಿವರಿಸಿದರು.
Cinema
ಸಿನಿಮಾ ವಿಶ್ಲೇಷಣೆ ಮೂಲಕ ಸಿನಿಮಾ ಕಟ್ಟುವ ಬಗೆ ಕಲಿಸಿದ ಗುರು ಸತೀಶ್ ಬಹಾದುರ್: ಗಿರೀಶ್ ಕಾಸರವಳ್ಳಿ
ಬೆಂಗಳೂರು ಚಿತ್ರೋತ್ಸವ ವೇದಿಕೆ: ‘ಸಿನಿಮಾ ಶಿಕ್ಷಕರಾಗಿದ್ದ ಸತೀಶ್ ಬಹಾದುರ್ ಅವರು ಸಿನಿಮಾ ವಿಶ್ಲೇಷಿಸುವ ಮೂಲಕ ಸಿನಿಮಾ ಕಟ್ಟುವ ಕ್ರಮನ್ನು ಕಲಿಸಿಕೊಟ್ಟರು. ದಾರಿ ಅರ್ಥ ಮಾಡಿಕೊಳ್ಳದೆ ಇದ್ದರೆ ಗುರಿ ಸಾಧಿಸಲು ಆಗುವುದಿಲ್ಲ ಎಂದು ತಿಳಿಸಿಕೊಟ್ಟರು. ಸಿನಿಮಾ ಎಂದರೆ ಕತೆ ಮಾತ್ರವೇ ಅಲ್ಲ, ರಿದಂ, ಸಮತೋಲನ ಎಲ್ಲವೂ ಹೌದು. ಅವೆಲ್ಲವನ್ನೂ ಅರ್ಥ ಮಾಡಿಕೊಂಡರೆ ಸಿನಿಮಾ ಕಟ್ಟುವ ಕ್ರಮವನ್ನು ಕಲಿಯಬಹುದು ಎಂಬುದನ್ನು ಅರ್ಥಮಾಡಿಸಿದರು’ ಎಂದು ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು.
ಸಿನಿಮಾ ಶಿಕ್ಷಕ ಮತ್ತು ಸಿನಿಮಾ ವಿಮರ್ಶಕ ಸತೀಶ್ ಬಹಾದುರ್ ಶತಮಾನೋತ್ಸವ ವರ್ಷದ ಹಿನ್ನೆಲೆಯಲ್ಲಿ ನಡೆದ ಗೋಷ್ಠಿಯಲ್ಲಿ ಸತೀಶ್ ಬಹಾದುರ್ ಅವರ ಪ್ರಾಮುಖ್ಯತೆಯ ಕುರಿತು ಅವರು ಮಾತನಾಡಿದರು.
‘ಸತೀಶ್ ಬಹಾದುರ್ ಅವರು ಸಿನಿಮಾ ವಿಶ್ಲೇಷಣೆಯ ಶಿಕ್ಷಕರಾಗಿದ್ದರು. ಸಿನಿಮಾ ಅನ್ನುವುದು ಅನುಭವ ಮತ್ತು ಪ್ರದರ್ಶಕ ಕಲೆಯೂ ಹೌದು. ಸಿನಿಮಾ ಪ್ರೇಕ್ಷಕನಿಗೆ ಅನುಭವ ಕಟ್ಟಿಕೊಡಬಲ್ಲ ಸಿನಿಮಾ ಹೇಗೆ ರೂಪಿಸಬೇಕು ಅನ್ನುವುದನ್ನು ಅವರು ವಿದ್ಯಾರ್ಥಿಗಳಿಗೆ ಕಲಿಸಿಕೊಟ್ಟರು. ಅವರನ್ನು ಫಾದರ್ ಆಫ್ ಫಿಲ್ಮ್ ಅಪ್ರಿಸಿಯೇಷನ್ ಅಂತ ಕರೆಯುತ್ತಾರೆ. ಆದರೆ ಅದು ಸರಿಯಲ್ಲ, ಅವರು ಫಾದರ್ ಆಫ್ ಫಿಲ್ಮ್ ಅನಾಲಿಸಿಸ್’ ಎಂದು ಅವರು ಹೇಳಿದರು. ಸುದೀರ್ಘವಾಗಿ ಮಾತನಾಡಿದ ಅವರು ಭಾರತೀಯ ಚಿತ್ರರಂಗದಲ್ಲಿ ಸತೀಶ್ ಬಹಾದುರ್ ಅವರ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟರು.
ಸಿನಿಮಾ ವಿಮರ್ಶಕ, ಬೆಂಗಳೂರು ಚಿತ್ರೋತ್ಸವದ ಮಾಜಿ ಕಲಾ ನಿರ್ದೇಶಕರಾದ ಎನ್. ವಿದ್ಯಾಶಂಕರ್ ಅವರು ಮಾತನಾಡಿ, ‘ಸಿನಿಮಾ ಅನುಭವವನ್ನು ದಾಖಲಿಸುವುದು ಮುಖ್ಯ. ಸಿನಿಮಾವನ್ನು ಓದುವ ಕ್ರಮವನ್ನು, ಅನುಭವ ಅರ್ಥ ಮಾಡಿಕೊಳ್ಳುವ ವಿಧಾನವನ್ನು, ಸಿನಿಮಾವನ್ನು ನೋಡುವ, ಅರಿಯುವ ಅಭ್ಯಾಸ ಬೆಳೆಸುವ ವಿಚಾರದಲ್ಲಿ ಸತೀಶ್ ಬಹಾದುರ್ ಒಂದು ಅಪ್ರತಿಮ ದಾರಿಯನ್ನು ಹಾಕಿಕೊಟ್ಟರು. ಕ್ಲಾಸಿಕಲ್ ಸಿನಿಮಾವನ್ನು ನಮ್ಮದಾಗಿಸುವ ಬಗೆಯನ್ನು ದಶಕಗಳ ಕಾಲ ಕಲಿಸಿಕೊಟ್ಟರು. ನಿಮ್ಮ ಕೆಲಸವನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿಯಿರಿ. ಆಗ ಬೇರೆಯದನ್ನೂ ಅರ್ಥ ಮಾಡಿಕೊಳ್ಳುವ ಶಕ್ತಿ ಒದಗುತ್ತದೆ’ ಎಂದು ಅವರು ಹೇಳಿಕೊಟ್ಟರು.
ಹಿರಿಯ ಛಾಯಾಗ್ರಾಹಕರಾದ ಜಿ ಎಸ್ ಭಾಸ್ಕರ್ ಅವರು, ತಮ್ಮ ಮತ್ತು ಸತೀಶ್ ಬಹಾದುರ್ ಅವರ ನಡುವಿನ ಒಡನಾಟ ನೆನಪಿಸಿಕೊಂಡರು. ಆಪ್ತವಾಗಿ ಕಾರ್ಯಕ್ರಮ ನಿರ್ವಹಿಸಿದರು.
Cinema
17 ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದ ಕನ್ನಡ ಚಿತ್ರ ಸ್ಪರ್ಧಾ ವಿಭಾಗದಲ್ಲಿ ಬಡಿಗೇರ್ ದೇವೇಂದ್ರ ನಿರ್ದೇಶನದ “ವನ್ಯಾ” ಚಿತ್ರ ಪ್ರದರ್ಶನ
17 ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದ ಕನ್ನಡ ಚಿತ್ರ ಸ್ಪರ್ಧಾ ವಿಭಾಗದಲ್ಲಿ ಬಡಿಗೇರ್ ದೇವೇಂದ್ರ ನಿರ್ದೇಶನದ “ವನ್ಯಾ” ಚಿತ್ರ ಪ್ರದರ್ಶನ .
ಪಲ್ಲವಿ ಅನಂತ್ ಪೂಮಗಾಮೆ ನಿರ್ಮಾಣದ, ಬಡಿಗೇರ್ ದೇವೇಂದ್ರ ನಿರ್ದೇಶನದ ಹಾಗೂ ವೈಜನಾಥ್ ಬಿರಾದಾರ್, ಮೇಘನಾ ಬೆಳವಾಡಿ, ಪ್ರಕಾಶ್ ಬೆಳವಾಡಿ ಮುಂತಾದವರು ಪ್ರಮುಖಪಾತ್ರದಲ್ಲಿ ನಟಿಸಿರುವ “ವನ್ಯಾ” ಚಿತ್ರ ಈ ಬಾರಿಯ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಕನ್ನಡ ಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನವಾಗಿದೆ. ಪ್ರದರ್ಶನದ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಈಗಾಗಲೇ ನಮ್ಮ ಚಿತ್ರ ಹತ್ತಕ್ಕೂ ಹೆಚ್ಚು ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿದೆ. ಪ್ರಸ್ತುತ ನಮ್ಮ ಬೆಂಗಳೂರು ಚಿತ್ರೋತ್ಸವದಲ್ಲಿ “ವನ್ಯಾ” ಚಿತ್ರ ಪ್ರದರ್ಶನವಾಗಿರುವುದು ಬಹಳ ಖುಷಿಯಾಗಿದೆ. “ವನ್ಯಾ” ಕಾಡಿನ ಪ್ರಮುಖ್ಯತೆ ತಿಳಿಸುವ ಚಿತ್ರ. ನಗರದವರು ಈಗ ವಿಶ್ರಾಂತಿಗಾಗಿ ಕಾಡಿಗೆ ಹೋಗುತ್ತಿದ್ದಾರೆ. ಅದರಿಂದ ನಮ್ಮ ಕಾಡುಗಳಿಗೆ ಹೆಚ್ಚು ಹಾನಿಯಾಗುತ್ತಿದೆ. ಕಾಡಿನಲ್ಲಿ ನೆಲೆಸಿರುವ ಎಷ್ಟೋ ಜನರು ನಾಡಿನತ್ತ ಮುಖ ಮಾಡುತ್ತಿದ್ದಾರೆ. ಈ ರೀತಿಯ ವಿಭಿನ್ನ ಕಥಾಹಂದರ ಹೊಂದಿರುವ ನಮ್ಮ ಚಿತ್ರವನ್ನು ಚಿತ್ರೋತ್ಸವದಲ್ಲಿ ನೋಡಿದವರು ನೀಡಿದ ಪ್ರಶಂಸೆಗೆ ಮನ ತುಂಬಿ ಬಂದಿದೆ ಎಂದು ನಿರ್ದೇಶಕ ಬಡಿಗೇರ್ ದೇವೆಂದ್ರ ತಿಳಿಸಿದರು.
ಈ ಚಿತ್ರದಲ್ಲಿ ಅಭಿನಯಿಸಿರುವುದು ಖುಷಿಯಾಗಿದೆ. ಕಾಡನ್ನು ಬಿಟ್ಟು ನಾಡಿಗೆ ಬರಲು ಮನಸ್ಸಿಲ್ಲದ ವಯಸ್ಸಾದ ವ್ಯಕ್ತಿಯ ಪಾತ್ರ ನನ್ನದು ಎಂದು ಹಿರಿಯ ನಟ ವೈಜನಾಥ ಬಿರಾದಾರ್ ಹೇಳಿದರು.

ಚಿತ್ರದಲ್ಲಿ ನಟಿಸಿರುವ ಅಶ್ವಿನ್ ಹಾಸನ್, ಯಶವಂತ್ ಹಾಗೂ ನಿರ್ಮಾಪಕಿ ಪಲ್ಲವಿ ಅನಂತ್ ಪೂಮಗಾಮೆ ಮುಂತಾದವರು ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ “ವನ್ಯಾ” ಚಿತ್ರ ಪ್ರದರ್ಶನವಾಗಿರುವುದಕ್ಕೆ ಸಂತಸಪಟ್ಟರು.
Cinema
ಮೊದಲಿನಂತೆ ಸ್ವತಂತ್ರವಾಗಿ ಸಿನಿಮಾ ಮಾಡಲಾಗುತ್ತಿಲ್ಲ
ಬೆಂಗಳೂರು : 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ನಡೆದ ‘ಫಿಯರ್ಲೆಸ್ ಫಿಲ್ಮ್ ಮೇಕಿಂಗ್ʼ (ಭಯವಿಲ್ಲದ ಚಲನಚಿತ್ರ ನಿರ್ಮಾಣ) ಸಂವಾದದಲ್ಲಿ ಬಾಲಿವುಡ್ ನಟ-ನಿರ್ದೇಶಕ ಅನುರಾಗ್ ಕಶ್ಯಪ್ ಭಾಗವಹಿಸಿ, ಸದ್ಯದ ಸಿನಿಮಾ ಪ್ರವೃತ್ತಿ, ರಾಜಕೀಯ ಮತ್ತು ತಂತ್ರಜ್ಞಾನದ ಬಗ್ಗೆ ಮುಕ್ತವಾಗಿ ಮಾತನಾಡಿದರು. ಖ್ಯಾತ ಚಿತ್ರ ವಿಮರ್ಶಕ ಭಾರದ್ವಾಜ್ ರಂಗನ್ ಈ ಸಂವಾದವನ್ನು ನಡೆಸಿಕೊಟ್ಟರು.

ʼಇಂದಿನ ದಿನಗಳಲ್ಲಿ ‘ಗ್ಯಾಂಗ್ಸ್ ಆಫ್ ವಾಸೇಪುರ್’ ಅಥವಾ ‘ಬ್ಲ್ಯಾಕ್ ಫ್ರೈಡೇ’ ನಂತಹ ಚಿತ್ರಗಳನ್ನು ಮಾಡುವುದು ಅಸಾಧ್ಯ. ಕೆಲವು ವಿಷಯಗಳು ರಾಜಕೀಯವಾಗಿ ಸೂಕ್ಷ್ಮವಾಗಿ ಪರಿಣಮಿಸಿದ್ದು, ವಿವಾದಗಳಿಗೆ ಕಾರಣವಾಗುತ್ತದೆ’ ಎಂದು ಅನುರಾಗ್ ಕಶ್ಯಪ್ ಅಭಿಪ್ರಾಯಪಟ್ಟಿದ್ದಾರೆ.
ʼಇರಾನ್ ಅಥವಾ ರಷ್ಯಾದಂತಹ ರಾಷ್ಟ್ರಗಳ ನಿರ್ದೇಶಕರು ನಮಗಿಂತ ಹೆಚ್ಚಿನ ನಿರ್ಬಂಧಗಳ ನಡುವೆಯೂ ಸಿನಿಮಾ ಮಾಡುತ್ತಿದ್ದಾರೆ. ಭಾರತೀಯ ನಿರ್ದೇಶಕರು ಅವರಿಂದ ಸ್ಫೂರ್ತಿ ಪಡೆಯಬೇಕುʼ ಎಂದು ಹೇಳಿದರು.
ಇತ್ತೀಚಿನ ‘ಧುರಂಧರ್’ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಅನುರಾಗ್ ಕಶ್ಯಪ್, ʼಇದು ಧೈರ್ಯಶಾಲಿ ಮುಖ್ಯವಾಹಿನಿ ಚಿತ್ರಕ್ಕೆ ಉತ್ತಮ ಉದಾಹರಣೆ. ನನಗೆ ಈ ಸಿನಿಮಾ ಇಷ್ಟವಾಯಿತು, ಆದರೆ, ಕೆಲವು ಸಿದ್ಧಾಂತಗಳು ಇಷ್ಟವಾಗಲಿಲ್ಲ. “ಇದು ಹೊಸ ಭಾರತ” ಎಂಬ ಸಂಭಾಷಣೆ ಮತ್ತು ಒಂದು ಸುದೀರ್ಘ ರಾಜಕೀಯ ಏಕಪಾತ್ರಾಭಿನಯ ಸೇರಿದಂತೆ ಒಟ್ಟು ಮೂರು ದೃಶ್ಯಗಳು ಚಿತ್ರಕ್ಕೆ ಅನಗತ್ಯವಾಗಿದ್ದವು; ಇವುಗಳಿಲ್ಲದಿದ್ದರೂ ಚಿತ್ರದ ಪ್ರಭಾವ ಕುಗ್ಗುತ್ತಿರಲಿಲ್ಲʼ ಎಂದು ಅವರು ಅಭಿಪ್ರಾಯಪಟ್ಟರು.

ಸಿನಿಮಾಗಳನ್ನು ‘ಪ್ರಚಾರ’ ಅಥವಾ ‘ಪ್ರೊಪಗಾಂಡಾ’ ಎಂದು ಕರೆಯುವುದೇ ಒಂದು ರೀತಿಯ ಪ್ರಚಾರ ಎಂದ ಕಶ್ಯಪ್, ʼಹಾಲಿವುಡ್ನ ಮಾರ್ವೆಲ್ ಚಿತ್ರಗಳು ಅಮೆರಿಕದ ಶ್ರೇಷ್ಠತೆಯನ್ನು ಸಾರುತ್ತವೆ, ಆದರೆ ಯಾರೂ ಅದನ್ನು ಆ ದೃಷ್ಟಿಕೋನದಲ್ಲಿ ಟೀಕಿಸುವುದಿಲ್ಲʼ ಎಂದರು.
ಕನ್ನಡದ ‘ಟಾಕ್ಸಿಕ್’ ಚಿತ್ರದ ಟೀಸರ್ ಬಗ್ಗೆ ಮಾತನಾಡಿದ ಅವರು, ಅದನ್ನು ಅತ್ಯಂತ ಧೈರ್ಯಶಾಲಿ ಪ್ರಯತ್ನ ಎಂದು ಶ್ಲಾಘಿಸಿದರು. ʼಟೀಸರ್ ವಿರುದ್ಧ ವ್ಯಕ್ತವಾದ ಆಕ್ರೋಶವು ನಮ್ಮ ಸಾಂಸ್ಕೃತಿಕ ಬೂಟಾಟಿಕೆಯನ್ನು ತೋರಿಸುತ್ತದೆ. ತೆರೆಯ ಮೇಲೆ ಪುರುಷ ನಟರು ಶರ್ಟ್ ಇಲ್ಲದೆ ಕಾಣಿಸಿಕೊಂಡರೆ ಅಥವಾ ಅತಿಯಾದ ಪೌರುಷ ತೋರಿಸಿದರೆ ಯಾರೂ ಪ್ರಶ್ನಿಸುವುದಿಲ್ಲ. ಆದರೆ ಒಬ್ಬ ಮಹಿಳೆ ತನ್ನ ಲೈಂಗಿಕತೆಯನ್ನು ಆಚರಿಸಿದರೆ ಅದನ್ನು ಒಪ್ಪಲು ಕಷ್ಟವಾಗುತ್ತದೆʼ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯದ ಬಗ್ಗೆ ತಮಗಿರುವ ಪ್ರೀತಿಯನ್ನು ವ್ಯಕ್ತಪಡಿಸಿದ ಅನುರಾಗ್ ಕಶ್ಯಪ್, ಖ್ಯಾತ ಬರಹಗಾರ ವಿವೇಕ್ ಶಾನಭಾಗ್ ಅವರ ‘ಘಾಚರ್ ಘೋಚರ್’ ಕಾದಂಬರಿಯನ್ನು ಆಧರಿಸಿ ಕನ್ನಡ ಚಿತ್ರವೊಂದನ್ನು ನಿರ್ಮಿಸುತ್ತಿರುವುದಾಗಿ ಬಹಿರಂಗಪಡಿಸಿದರು. ಈ ಚಿತ್ರವು ಸದ್ಯ ಬರವಣಿಗೆ ಹಂತದಲ್ಲಿದ್ದು, ಮುಂದೆ ಹಿಂದಿಯಲ್ಲೂ ಬರಲಿದೆ. ಇದರ ನಿರ್ದೇಶಕರು ಮತ್ತು ಕಲಾವಿದರ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ತಿಳಿಸಿದರು.

ಇಂದಿನ ಪ್ರೇಕ್ಷಕರು ಮೊಬೈಲ್ ಫೋನ್ಗಳಲ್ಲಿ ಸಿನಿಮಾ ನೋಡಲು ಇಷ್ಟಪಡುತ್ತಿದ್ದಾರೆ ಮತ್ತು ನಿಧಾನಗತಿಯ ಸಿನಿಮಾಗಳಿಗೆ ಗಮನ ಸೆಳೆಯುವುದು ಕಷ್ಟವಾಗುತ್ತಿದೆ ಎಂದ ಅವರು, ʼಇದು ತಂತ್ರಜ್ಞಾನದ ಬದಲಾವಣೆಯ ಫಲವೇ ಹೊರತು ಪ್ರೇಕ್ಷಕರ ತಪ್ಪಲ್ಲʼ ಎಂದು ಅವರು ವಿಶ್ಲೇಷಿಸಿದರು.
ರಾಜಕೀಯ ಚಿತ್ರಗಳ ಬಗ್ಗೆ ಪ್ರತಿಕ್ರಿಯಿಸುತ್ತಾ, ʼಹಿಟ್ಲರ್ ಸತ್ತ ನಂತರವಷ್ಟೇ ಜರ್ಮನಿಯಲ್ಲಿ ಅವನ ವಿರುದ್ಧ ಸಿನಿಮಾಗಳು ಬಂದವು. ಪ್ರತಿಯೊಂದಕ್ಕೂ ಸಮಯ ಬರಬೇಕುʼ ಎಂದು ಮಾರ್ಮಿಕವಾಗಿ ನುಡಿದರು.
-
Manglore3 hours agoಜಿ.ಎಲ್. ಟ್ರೋಫಿ-2026: ಜಿ.ಎಲ್. ಹಾಸನ ತಂಡ ಚಾಂಪಿಯನ್
-
Cinema23 hours ago17 ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದ ಕನ್ನಡ ಚಿತ್ರ ಸ್ಪರ್ಧಾ ವಿಭಾಗದಲ್ಲಿ ಬಡಿಗೇರ್ ದೇವೇಂದ್ರ ನಿರ್ದೇಶನದ “ವನ್ಯಾ” ಚಿತ್ರ ಪ್ರದರ್ಶನ
-
Hassan4 hours agoಮಾಧ್ಯಮ ಸ್ವಾತಂತ್ರ್ಯ ಸದ್ಬಳಕೆಯಾಗಲಿ: ಎಎಸ್ಪಿ ತಮ್ಮಯ್ಯ
-
Hassan3 hours agoಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ : ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂಸದ ಶ್ರೇಯಸ್ ಪಟೇಲ್
-
National5 hours ago17ನೇ ಬೆಂಗಳೂರು ಚಿತ್ರೋತ್ಸವದಲ್ಲಿ ತಾಯಿ-ಮಗನ ಸಂಬಂಧದ ʼಅಮ್ಮಂಗೆ ಹೇಳ್ಬೇಡʼ ಚಿತ್ರ ಪ್ರದರ್ಶನ
-
State6 hours agoಸಿಎಂ ಹೌದು ಹುಲಿಯಾ ಆಗಿಲ್ಲ, ಹೌದು ಇಲಿಯಾ ಆಗಿದ್ದಾರೆ: ಆರ್.ಅಶೋಕ್
-
Mandya8 hours agoಎಂ. ಅಂಕೇಗೌಡರ ಪುಸ್ತಕ ಪ್ರೀತಿ ಇಂದಿನ ಯುವ ಪೀಳಿಗೆಗೆ ಮಾದರಿ : ಡಾ.ಮಾನಸ
-
Hassan2 hours agoಅರಸೀಹಳ್ಳಿ ಹರೀಶ್ಗೆ ಪಿಹೆಚ್ಡಿ ಪದವಿ
