Connect with us

Cinema

ಕಲಿತು ಸಿನಿಮಾಗೆ ಬರಬೇಕು, ಬಂದು ಕಲಿಯುವುದಲ್ಲ: ಆರ್. ರತ್ನವೇಲು

Published

on

ಸಿನಿಮಾ ಛಾಯಾಗ್ರಾಹಣದ ಕುರಿತು ಮಾಸ್ಟರ್ ಕ್ಲಾಸ್ ನೀಡಿದ ಪ್ರಖ್ಯಾತ ಸಿನಿಮಾ ಛಾಯಾಗ್ರಾಹಕ

ಬೆಂಗಳೂರು ಚಿತ್ರೋತ್ಸವ ವೇದಿಕೆ: ‘ಅಧ್ಯಯನ ಮಾಡಿದ ಬಳಿಕ ಸಿನಿಮಾಗೆ ಬರುವುದು ಒಳಿತು. ಕಲಿತು ಬಂದು ಚಿತ್ರಗಳಲ್ಲಿ ಪ್ರಯೋಗ ಮಾಡಬೇಕು. ಈಗ ಬಹುತೇಕರು ಮೊದಲು ಸಿನಿಮಾಗೆ ಬಂದು, ಆಮೇಲೆ ಕಲಿಯುತ್ತೇನೆ ಎನ್ನುತ್ತಾರೆ. ಆಗ ಪ್ರಯೋಗ ಮಾಡುವ ಅವಕಾಶ ಇರುವುದಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಸಿನಿಮಾ ಕರ್ಮಿಗೂ ಶಿಸ್ತು ಇರಬೇಕು. ಆ ಶಿಸ್ತಿನಿಂದಾಗಿಯೇ ಹಾಲಿವುಡ್ ನಲ್ಲಿ ಇವತ್ತಿಗೂ 65 ವರ್ಷ, 70 ವರ್ಷದವರು ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ದೇಶದ ಪ್ರಖ್ಯಾತ ಸಿನಿಮಾ ಛಾಯಾಗ್ರಾಹಕ ಆರ್. ರತ್ನವೇಲು ಹೇಳಿದರು.

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ‘ಬೆಳಕು ಭಾಷೆಯಾದಾಗ’ ಎಂಬ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿನಿಮಾ ಛಾಯಾಗ್ರಾಹಣದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ‌

‘ನಾನು ಮೊದಲು ಸ್ಕ್ರಿಪ್ಟ್ ಅನ್ನು ಎರಡು ಮೂರು ಬಾರಿ ಓದುತ್ತೇನೆ. ನಿರ್ದೇಶಕರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಯತ್ನಿಸುತ್ತೇನೆ. ನಂತರ ನಿರ್ದೇಶಕರ ಕತೆಯನ್ನು, ಆ ಕತೆಯ ಭಾವವನ್ನು ಅವರು ಕಲ್ಪಿಸಿದ್ದಕ್ಕಿಂತ ವಿಭಿನ್ನವಾಗಿ, ಉತ್ತಮವಾಗಿ ಹೇಗೆ ದೃಶ್ಯ ಭಾಷೆಯ ಮೂಲಕ ಕಟ್ಟಿಕೊಡಬಹುದು ಎಂದು ನೋಡುತ್ತೇನೆ. ನಾನು ಬರವಣಿಗೆ ಹಂತದಿಂದ ಸಿನಿಮಾ ಚಿತ್ರಮಂದಿರಕ್ಕೆ ಬರುವವರೆಗೂ ಜೊತೆ ಇರುತ್ತೇನೆ’ ಎಂದು ಹೇಳಿದರು.

ಕಮರ್ಷಿಯಲ್ ಮತ್ತು ಪ್ರಯೋಗಾತ್ಮಕ ಚಿತ್ರಗಳ ಕುರಿತು ಮಾತನಾಡಿದ ಅವರು, ‘ನನಗೆ ಸಣ್ಣ ಬಜೆಟ್ ಸಿನಿಮಾಗಳನ್ನು, ಕಮರ್ಷಿಯಲ್ ಸಿನಿಮಾಗಳನ್ನು ಎರಡೂ ಮಾಡುವುದಿಷ್ಟ. ಆದರೆ, ಕಮರ್ಷಿಯಲ್ ಸಿನಿಮಾ ಸ್ವಲ್ಪ ಸವಾಲಿನ ಕೆಲಸ. ಅಲ್ಲಿ ಬೆಳಿಗ್ಗೆ ಬಂದಾಗ ಸ್ಟಾರ್ ಗಳು 3 ಗಂಟೆಗೆ ಹೋಗುತ್ತಾರೆ, ಬೇಗ ಶೂಟ್ ಮಾಡಬೇಕು ಎಂದು ಹೇಳುತ್ತಾರೆ. ಆಗ ಸಮಯದ ಪರಿಮಿತಿಯಲ್ಲಿ ಕೆಲಸ ಮಾಡಬೇಕಿರುತ್ತದೆ. ಟೀಟ್ವೆಂಟಿ ಮಾದರಿಯಲ್ಲಿ ರನ್ ಗಳಿಸಬೇಕಿರುತ್ತದೆ. ನಾವು ಪರಿಸ್ಥಿತಿಗೆ ತಕ್ಕಂತೆ ನಮ್ಮ ಯೋಜನೆಗಳನ್ನು ಬದಲಿಸುತ್ತಾ ಇರಬೇಕು. ಅದಕ್ಕೆ ನಾವು ಸಿದ್ಧರಿರಬೇಕು’ ಎಂದರು.

‘ಪುಷ್ಪ’ ನಿರ್ದೇಶಕ ಸುಕುಮಾರ್ ಅವರ ಜೊತೆಗೆ ಕೆಲಸ ಮಾಡುವ ಅನುಭವ ಹಂಚಿಕೊಂಡ ಅವರು, ‘ಸುಕುಮಾರ್ ಜೊತೆ ಸಿನಿಮಾ ಮಾಡುವಾಗ ನನಗೆ ಸಿನಿಮಾ ಸಂಬಂಧಿಸಿದಂತೆ ಏನಾದರೂ ಐಡಿಯಾ ಬಂದರೆ ರಾತ್ರಿ 11 ಗಂಟೆಯಾದರೂ ಅವರಿಗೆ ಕಾಲ್ ಮಾಡುತ್ತೇನೆ. ‘ರಂಗಸ್ಥಳಂ’ ಸಿನಿಮಾ ಮಾಡುವಾಗ ಅವರಿಗೆ ಕಾಲ್ ಮಾಡಿದ್ದೆ. ನಾವು ಹುಲ್ಲಿನ ಮಧ್ಯೆ ಹಾವು ಹರಿದುಹೋಗುವಂತೆ ಕ್ಯಾಮೆರಾ ಬಳಕೆ ಮಾಡೋಣ ಎಂದು ಹೇಳಿದ್ದೆ. ಅವರು ಖುಷಿಯಾಗಿ ಎದ್ದು ಬಂದಿದ್ದರು. ಆ ಸಿನಿಮಾದಲ್ಲಿ ನಾನು ಮೊದಲ ಬಾರಿಗೆ ಗಿಂಬಲ್ ಬಳಕೆ ಮಾಡಿದ್ದೆ. ಶೇ.90ರಷ್ಟು ಸಿನಿಮಾ ಗಿಂಬಲ್ ನಲ್ಲಿಯೇ ಚಿತ್ರೀಕರಣ ಮಾಡಿದ್ದೆವು. ನಾಯಕನ ಹಿಂದೆಯೇ ಕ್ಯಾಮೆರಾ ಚಲಿಸುತ್ತಾ ಇರುತ್ತದೆ. ಆಗ ಸುಕುಮಾರ್ ಈ ಚಿತ್ರಕ್ಕೆ ಬೇಕಿದ್ದ ದೃಶ್ಯ ಭಾಷೆ ಇದೇ ಎಂದು ಸಂತೋಷಪಟ್ಟಿದ್ದರು. ಪ್ರತೀ ಚಿತ್ರಕ್ಕೂ ಒಂದು ದೃಶ್ಯ ಭಾಷೆ ಇರುತ್ತದೆ. ಸಿನಿಮಾ ಅರ್ಥ ಮಾಡಿಕೊಂಡಾಗ ಆ ದೃಶ್ಯ ಭಾಷೆಯನ್ನು ನಾವು ರೂಪಿಸಿಕೊಳ್ಳಬಹುದು’ ಎಂದು ಹೇಳಿದ ಅವರು, ‘ನನಗೂ ಸುಕುಮಾರ್ ಅವರಿಗೂ ಸಿನಿಮಾನೇ ಮೊದಲ ಆದ್ಯತೆ, ಉಳಿದೆಲ್ಲವೂ ನಂತರ’ ಎಂದು ಸಿನಿಮಾ ಪ್ಯಾಷನ್ ಕುರಿತು ಒತ್ತಿ ಹೇಳಿದರು.

‘ನಾವು ದೃಶ್ಯಗಳ ಮೂಲಕ ಪ್ರೇಕ್ಷಕರು ತೀವ್ರವಾಗಿ ಕತೆಯಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು. ಸಿನಿಮಾ ಛಾಯಾಗ್ರಾಹಣದಲ್ಲಿ ಬೆಳಕು ತುಂಬಾ ಮುಖ್ಯ. ನನ್ನ ಪಾಲಿಗೆ ಬೆಳಕೇ ಒಂದು ಭಾವ. ಪಾತ್ರವನ್ನು ವಿಶೇಷಗೊಳಿಸುವುದು ಬೆಳಕು. ಮೂಡ್ ಕ್ರಿಯೇಟ್ ಮಾಡುವುದು ಬೆಳಕು. ಬೆಳಕನ್ನು ಹೇಗೆ ಬಳಸಬೇಕು ಅನ್ನುವುದನ್ನು ಪ್ರತಿಯೊಬ್ಬ ಸಿನಿಮಾ ಛಾಯಾಗ್ರಾಹಕನೂ ಕಲಿಯಬೇಕು. ‘ನೇನೊಕ್ಕಡಿನ’ ಸಿನಿಮಾದ ಸಾಹಸ ಚಿತ್ರೀಕರಣ ಲಂಡನ್ ನಲ್ಲಿ ನಡೆಯುತ್ತಿತ್ತು. ಅಂಡರ್ ಗ್ರೌಂಡ್ ನಲ್ಲಿದ್ದ ಪಾರ್ಕಿಂಗ್ ಲಾಟ್ ನಲ್ಲಿ ಈ ಚಿತ್ರೀಕರಣ ಇತ್ತು. ಎಷ್ಟು ಲೈಟ್ ಬೇಕು ಎಂದು ಕೇಳಿದರು. ನನಗೆ ಮೂರು ನಾಲ್ಕು ಎಲ್ಇಡಿ ಲೈಟ್ ಸಾಕು ಎಂದು ಹೇಳಿದೆ. ಅಲ್ಲಿನವರು ಆಶ್ಚರ್ಯಚಕಿತರಾದರು. ನಾನು ಅಲ್ಲಿನ ಕಾರ್, ಬೈಕ್ ಗಳ ಬೆಳಕನ್ನು ಬಳಸಿ ಚಿತ್ರೀಕರಣ ಮಾಡಿದೆ. ಇಡೀ ತಂಡ ಚಪ್ಪಾಳೆ ತಟ್ಟಿತು’ ಎಂದರು.

‘ನಾನು ದಿಗ್ಗಜರಿಂದ ಬಹಳಷ್ಟು ಕಲಿತಿದ್ದೇನೆ. ಅವರ ಸಿನಿಮಾಗಳನ್ನು ನೋಡಿ ಅವರ ತಂತ್ರಗಳನ್ನು ನೋಡಿ ಚಕಿತಗೊಂಡಿದ್ದೇನೆ. ಹಿರಿಯರು ಯಾವುದೇ ಸೌಲಭ್ಯ ಇಲ್ಲದೇ ಇದ್ದಾಗಲೂ ಅತ್ಯುತ್ತಮ ದೃಶ್ಯಗಳನ್ನು ತೆರೆ ಮೇಲೆ ತಂದಿದ್ದಾರೆ. ಈಗ ನಮಗೆ ಎಲ್ಲಾ ಸೌಲಭ್ಯಗಳಿವೆ. ಅದನ್ನು ಬಳಸಿಕೊಂಡು ಉತ್ತಮ ದೃಶ್ಯಗಳನ್ನು ರೂಪಿಸಬಹುದು. ಹಿರಿಯರಿಂದ ಕಲಿಯುವುದು ಬಹಳ ಮುಖ್ಯ. ಸೆಟ್ ನಲ್ಲಿ ಸೂರ್ಯನ ಬೆಳಕನ್ನು ಸಿದ್ಧ ಮಾಡುವುದನ್ನು ಕಲಿಯುವುದಕ್ಕೆ ನಾನು ಹತ್ತು ವರ್ಷ ತೆಗೆದುಕೊಂಡೆ, ಆದರೆ ನನ್ನ ಸಹಾಯಕ ಛಾಯಾಗ್ರಾಹಕರು ಹತ್ತೇ ತಿಂಗಳಲ್ಲಿ ಕಲಿಯಬಹುದು’ ಎಂದರು.

‘ಡಿಜಿಟಲ್ ಕ್ಯಾಮೆರಾ ಬಂದ ಮೇಲೆ ನಮ್ಮ ಬದುಕು ಸುಲಭವಾಯಿತು. ಆದರೆ, ಬಹುಬೇಗ ಬೋರ್ ಕೂಡಾ ಆಗುತ್ತಿದೆ. ಏಕೆಂದರೆ, ಬಹುತೇಕ ಸಿನಿಮಾಗಳು ಒಂದೇ ತರಹ ಕಾಣಿಸುತ್ತವೆ. ನಾನು ರಾಮ್ ಚರಣ್ ತೇಜಾ ನಟನೆಯ ‘ಪೆದ್ದಿ’ ಸಿನಿಮಾದ ಒಂದು ಭಾಗವನ್ನು ನೆಗೆಟಿವ್ ಫಿಲ್ಮ್ ಬಳಸಿ ಚಿತ್ರೀಕರಣ ಮಾಡಿದೆ. ರಾಮಚರಣ್ ತೇಜಾ ಬಹಳ ಸಂತೋಷ ಪಟ್ಟರು. ನೆಗೆಟಿವ್ ಕ್ಯಾಮೆರಾ ಸದ್ದು ಮರೆತುಹೋಗುತ್ತಿತ್ತು, ಪ್ರಸ್ತುತ ಈಗ ನೆಗೆಟಿವ್ ಕ್ಯಾಮೆರಾ ಮುನ್ನೆಲೆಗೆ ಬರುತ್ತಿದೆ. ಹಾಲಿವುಡ್ ನಲ್ಲಿ ಯೂಟ್ಯೂಬರ್ ಗಳೂ ನೆಗೆಟಿವ್ ಫಿಲ್ಮ್ ಬಳಸುತ್ತಿದ್ದಾರೆ’ ಎಂದು ಹೇಳಿದರು.

‘ಸಿನಿಮಾ ಅನ್ನುವುದು ಹೃದಯಕ್ಕೆ ಹತ್ತಿರವಾದದ್ದು. ತೀವ್ರವಾದ ದೃಶ್ಯಗಳನ್ನು ಕಟ್ಟಿಕೊಡಬೇಕೆಂದರೆ ಎಲ್ಲರೂ ಜೊತೆ ಸೇರಿ ಕೆಲಸ ಮಾಡಬೇಕಾಗುತ್ತದೆ’ ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರು ‘ದೇವರ’, ‘ವಾರಣಂ ಆಯಿರಮ್’, ‘ರೋಬೋ’, ‘ನೆನೋಕ್ಕಡಿನೆ’, ‘ರಂಗಸ್ಥಳಂ’ ಸಿನಿಮಾಗಳ ದೃಶ್ಯಗಳನ್ನು ಚಿತ್ರೀಕರಿಸಿದ ರೀತಿ ಬಗ್ಗೆ ವಿವರವಾಗಿ ತಿಳಿಸಿದರು. ವಿಎಫ್ಎಕ್ಸ್, ಕಲರಿಸ್ಟ್ ಗಳ ಜೊತೆ ಹೇಗೆ ಕೆಲಸ ನಡೆಯುತ್ತದೆ ಎಂಬುದನ್ನೂ ಹೇಳಿದರು. ಈ ಗೋಷ್ಠಿಯು ನಿಜವಾದ ಅರ್ಥದಲ್ಲಿ ಮಾಸ್ಟರ್ ಕ್ಲಾಸ್ ನಂತೆ ಮೂಡಿಬಂತು.

ಪ್ರಶಾಂತ್ ಪಂಡಿತ್ ಈ ಗೋಷ್ಠಿಯನ್ನು ಸೊಗಸಾಗಿ ನಿರ್ವಹಿಸಿದರು.

Continue Reading

Cinema

ಗದ್ದಲ ಮತ್ತು ಶ್ರವಣ ಕಲೆ ಕುರಿತು ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಖ್ಯಾತ ಶಬ್ದ ವಿನ್ಯಾಸಕ ಬಿಸ್ವದೀಪ್ ಚಟರ್ಜಿ ಮಾತು

Published

on

ಬೆಂಗಳೂರು: 17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ, ಖ್ಯಾತ ಶಬ್ದ ವಿನ್ಯಾಸಕ (ಸೌಂಡ್ ಡಿಸೈನರ್) ಬಿಸ್ವದೀಪ್ ಚಟರ್ಜಿ ಅವರು ‘ಸಿನಿಮಾ ಆಸ್ ಎ ವೇ ಆಫ್ ಲಿಸನಿಂಗ್’ (ಕೇಳಿಸಿಕೊಳ್ಳುವ ಮಾರ್ಗವಾಗಿ ಸಿನಿಮಾ) ಎಂಬ ಮಾಸ್ಟರ್‌ ಕ್ಲಾಸ್‌ನಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದರು. ಸಂಸ್ಕೃತಿ, ಪರಿಸರ ಮತ್ತು ಅಕೌಸ್ಟಿಕ್ಸ್ (ಧ್ವನಿ ವಿಜ್ಞಾನ) ಕೇವಲ ಸಿನಿಮಾದ ಶಬ್ದ ವಿನ್ಯಾಸವನ್ನಷ್ಟೇ ಅಲ್ಲದೆ, ದೈನಂದಿನ ಜೀವನದಲ್ಲಿ ಜನರು ಕೇಳಿಸಿಕೊಳ್ಳುವ ಮತ್ತು ಸಂವಹನ ಮಾಡುವ ವಿಧಾನವನ್ನು ಹೇಗೆ ರೂಪಿಸುತ್ತವೆ ಎಂಬುದರ ಕುರಿತು ಅವರು ಈ ಸಂದರ್ಭದಲ್ಲಿ ಬೆಳಕು ಚೆಲ್ಲಿದರು.

ʼ3 ಇಡಿಯಟ್ಸ್’, ʼಬಾಜಿರಾವ್ ಮಸ್ತಾನಿ’, ʼಉರಿ: ದಿ ಸರ್ಜಿಕಲ್ ಸ್ಟ್ರೈಕ್ʼ ಮತ್ತು ಇತ್ತೀಚಿನ ʼಧುರಂಧರ್ʼ ಅಂತಹ ಚಿತ್ರಗಳಲ್ಲಿನ ಕೆಲಸಕ್ಕೆ ಹೆಸರುವಾಸಿಯಾದ ಚಟರ್ಜಿ, ಕೇಳಿಸಿಕೊಳ್ಳುವುದು ಎನ್ನುವುದು ಒಂದು ಸಾಂಸ್ಕೃತಿಕ ಮತ್ತು ಚಲನಚಿತ್ರ ಅಭ್ಯಾಸವಾಗಿ ಎಷ್ಟು ಮುಖ್ಯ ಎಂಬುದನ್ನು ಒತ್ತಿ ಹೇಳಿದರು.

 

ʼಸಾಂಸ್ಕೃತಿಕವಾಗಿ ಭಾರತೀಯರು ಸ್ವಲ್ಪ ಜೋರಾಗಿ ಮಾತನಾಡುವ ಪ್ರವೃತ್ತಿ ಹೊಂದಿದ್ದಾರೆ ಎಂದ ಚಟರ್ಜಿ, ʼಇದು ನಾವು ವಾಸಿಸುವ ಭೌತಿಕ ಮತ್ತು ಸಾಮಾಜಿಕ ಪರಿಸರದಿಂದ ರೂಪುಗೊಂಡ ಗುಣವಾಗಿದೆ. ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ, ಅಲ್ಲಿನ ತಂಪಾದ ಹವಾಮಾನ ಮತ್ತು ಶಾಂತವಾದ ಸುತ್ತಮುತ್ತಲಿನ ಪರಿಸರವು ಶಬ್ದದೊಂದಿಗೆ ವಿಭಿನ್ನ ಸಂಬಂಧವನ್ನು ಸೃಷ್ಟಿಸುತ್ತದೆʼ ಎಂದು ಅವರು ತಿಳಿಸಿದರು.

ʼಅನೇಕ ಪಾಶ್ಚಿಮಾತ್ಯ ನಗರಗಳಲ್ಲಿ ಮೌನವು ಸಾಮಾನ್ಯವಾಗಿದೆ. ಸುತ್ತುವರಿದ ಗದ್ದಲದ ಮಟ್ಟವು ಕಡಿಮೆಯಿರುತ್ತದೆ ಮತ್ತು ನಗರಾ ಯೋಜನೆಯು ಉತ್ತಮ ಅಕೌಸ್ಟಿಕ್ ಸಮತೋಲನವನ್ನು ಬೆಂಬಲಿಸುತ್ತದೆ. ಮೃದುವಾದ ಪೀಠೋಪಕರಣಗಳು, ಮರದ ನೆಲಹಾಸುಗಳು, ಕಾರ್ಪೆಟ್‌ಗಳು ಮತ್ತು ಸಂಸ್ಕರಿಸಿದ ಗೋಡೆಗಳು ಶಬ್ದವನ್ನು ಪ್ರತಿಧ್ವನಿಸುವ ಬದಲು ಹೀರಿಕೊಳ್ಳುತ್ತವೆ. ಇದರಿಂದಾಗಿ ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳು ಶಾಂತವಾಗಿರುತ್ತವೆ ಮತ್ತು ಜನರು ಪರಸ್ಪರ ಕೇಳಿಸಿಕೊಳ್ಳಲು ತಮ್ಮ ಧ್ವನಿಯನ್ನು ಏರಿಸುವ ಅಗತ್ಯವಿರುವುದಿಲ್ಲʼ ಎಂದರು.

ಧ್ವನಿ ವಿಜ್ಞಾನ ಅಥವಾ ಅಕೌಸ್ಟಿಕ್ಸ್ ಬಗ್ಗೆ ಇರುವ ಅರಿವಿನ ಕೊರತೆಯೇ ಈ ಸಮಸ್ಯೆಗೆ ಮೂಲ ಕಾರಣ ಎಂದು ಚಟರ್ಜಿ ಒತ್ತಿ ಹೇಳಿದರು. ʼಕಟ್ಟಡಗಳು ಅಥವಾ ಸ್ಥಳಗಳನ್ನು ವಿನ್ಯಾಸಗೊಳಿಸುವಾಗ ಶಬ್ದದ ಬಗ್ಗೆ ಚಿಂತನಶೀಲವಾದ ಕ್ರಮಗಳನ್ನು ಕೈಗೊಂಡರೆ, ಅದು ಸ್ಪಷ್ಟತೆ ಮತ್ತು ಸಮಾಧಾನ ಎರಡನ್ನೂ ನಾಟಕೀಯವಾಗಿ ಸುಧಾರಿಸುತ್ತದೆʼ ಎಂದು ಅವರು ಅಭಿಪ್ರಾಯಪಟ್ಟರು.

ಮಾತುಗಾರರು ಸಹಜವಾಗಿ ಹೇಗೆ ಬದಲಾಗುತ್ತಾರೆ ಎಂಬುದರ ಕುರಿತು ಸಾಮ್ಯತೆಯನ್ನು ನೀಡುತ್ತಾ, ʼಜನರು ಗದ್ದಲದ ನಡುವೆ ತಮ್ಮ ಮಾತು ಕೇಳಿಸುವಂತೆ ಮಾಡಲು ಅರಿವಿಲ್ಲದೆಯೇ ಧ್ವನಿಯನ್ನು ಹೇಗೆ ಬದಲಾಯಿಸಿಕೊಳ್ಳುತ್ತಾರೆʼ ಎಂಬುದನ್ನು ಅವರು ವಿವರಿಸಿದರು.

ʼಅನುಭವಿ ಮಾತುಗಾರರು ಜೋರಾಗಿ ಕಿರುಚುವ ಬದಲು, ಧ್ವನಿಯ ಏರಿಳಿತ (ಪಿಚ್) ಮತ್ತು ತರಂಗಾಂತರವನ್ನು (ಫ್ರೀಕ್ವೆನ್ಸಿ) ಸರಿಹೊಂದಿಸುತ್ತಾರೆ, ಇದರಿಂದ ಅವರ ಧ್ವನಿಯು ಒತ್ತಡವಿಲ್ಲದೆ ಸ್ಪಷ್ಟವಾಗಿ ಸಂವಹನವಾಗುತ್ತದೆ. ಇದೇ ತತ್ವವು ಸಿನಿಮಾದಲ್ಲಿ ಶಬ್ದದ ಧ್ವನಿಮುದ್ರಣ ಮತ್ತು ಮಿಕ್ಸಿಂಗ್‌ಗೆ ಮೂಲಾಧಾರವಾಗಿದೆʼ ಎಂದು ಅವರು ಹೇಳಿದರು.

ʼಶಬ್ದ ವಿನ್ಯಾಸಕರು ತರಂಗಾಂತರಗಳನ್ನು ಎಚ್ಚರಿಕೆಯಿಂದ ರೂಪಿಸುತ್ತಾರೆ, ಇದರಿಂದಾಗಿ ಹಿನ್ನೆಲೆ ಗದ್ದಲವು ಕೇಳುಗರನ್ನು ಹಿಂಸಿಸದಂತೆ ಸಂಭಾಷಣೆಗಳು ಮತ್ತು ಪ್ರಮುಖ ಶಬ್ದಗಳು ಸ್ಪಷ್ಟವಾಗಿ ಕೇಳಿಸುತ್ತವೆ. ಮನುಷ್ಯರು ಹೇಗೆ ಕೇಳಿಸಿಕೊಳ್ಳುತ್ತಾರೆ ಮತ್ತು ಪರಿಸರವು ಶಬ್ದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯೇ ಶಬ್ದ ವಿನ್ಯಾಸʼ ಎಂದು ಚಟರ್ಜಿ ಬಣ್ಣಿಸಿದರು.

ʼಧ್ವನಿಯನ್ನು ಹದಗೊಳಿಸುವುದಾಗಲಿ, ಬೇಡದ ತರಂಗಾಂತರಗಳನ್ನು ಫಿಲ್ಟರ್ ಮಾಡುವುದಾಗಲಿ ಅಥವಾ ಚಿತ್ರದ ಸೌಂಡ್ ಟ್ರ್ಯಾಕ್‌ಗಳನ್ನು ಪದರಗಳಾಗಿ ಜೋಡಿಸುವುದಾಗಲಿ, ಎಲ್ಲದರ ಗುರಿ ಒಂದೇ. ಗೊಂದಲವಿಲ್ಲದ ಸ್ಪಷ್ಟತೆ. ಸಿನಿಮಾ ತನ್ನ ಅತ್ಯುತ್ತಮ ರೂಪದಲ್ಲಿ ಪ್ರೇಕ್ಷಕರಿಗೆ ಕೇವಲ ಹೇಗೆ ನೋಡುವುದು ಎಂಬುದನ್ನು ಮಾತ್ರವಲ್ಲದೆ, ಹೇಗೆ ಕೇಳಿಸಿಕೊಳ್ಳಬೇಕು ಎಂಬುದನ್ನು ಸಹ ಕಲಿಸುತ್ತದೆʼ ಎಂದು ಅವರು ಮುಕ್ತಾಯಗೊಳಿಸಿದರು.

ಇದು ಚಲನಚಿತ್ರಗಳಲ್ಲಿ ಮತ್ತು ಪರದೆಯ ಆಚೆಗಿನ ಜೀವನದಲ್ಲಿ ಶಬ್ದ, ಸ್ಥಳಾವಕಾಶ ಮತ್ತು ಮೌನದ ಬಗ್ಗೆ ಆಳವಾದ ಅರಿವನ್ನು ಮೂಡಿಸುತ್ತದೆ. ತಮ್ಮ ಮಾಸ್ಟರ್‌ಕ್ಲಾಸ್‌ನಲ್ಲಿ ಅವರು ತಾವು ಕೆಲಸ ಮಾಡಿದ ಚಿತ್ರಗಳ ಕೆಲವು ಭಾಗಗಳನ್ನು ಪ್ರದರ್ಶಿಸಿದರು ಮತ್ತು ಶಬ್ದ ವಿನ್ಯಾಸವು ದೃಶ್ಯದ ಹಿನ್ನೆಲೆ ಮತ್ತು ಸ್ಥಳವನ್ನು ಸ್ಥಾಪಿಸುವಲ್ಲಿ ಹಾಗೂ ಕಥೆ ಹೇಳುವಿಕೆಗೆ ಆಳವನ್ನು ನೀಡುವಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ವಿವರಿಸಿದರು.

Continue Reading

Cinema

ಸಿನಿಮಾ ವಿಶ್ಲೇಷಣೆ ಮೂಲಕ ಸಿನಿಮಾ ಕಟ್ಟುವ ಬಗೆ ಕಲಿಸಿದ ಗುರು ಸತೀಶ್ ಬಹಾದುರ್: ಗಿರೀಶ್ ಕಾಸರವಳ್ಳಿ

Published

on

ಬೆಂಗಳೂರು ಚಿತ್ರೋತ್ಸವ ವೇದಿಕೆ: ‘ಸಿನಿಮಾ ಶಿಕ್ಷಕರಾಗಿದ್ದ ಸತೀಶ್ ಬಹಾದುರ್ ಅವರು ಸಿನಿಮಾ ವಿಶ್ಲೇಷಿಸುವ ಮೂಲಕ ಸಿನಿಮಾ ಕಟ್ಟುವ ಕ್ರಮನ್ನು ಕಲಿಸಿಕೊಟ್ಟರು. ದಾರಿ ಅರ್ಥ ಮಾಡಿಕೊಳ್ಳದೆ ಇದ್ದರೆ ಗುರಿ ಸಾಧಿಸಲು ಆಗುವುದಿಲ್ಲ ಎಂದು ತಿಳಿಸಿಕೊಟ್ಟರು. ಸಿನಿಮಾ ಎಂದರೆ ಕತೆ ಮಾತ್ರವೇ ಅಲ್ಲ, ರಿದಂ, ಸಮತೋಲನ ಎಲ್ಲವೂ ಹೌದು. ಅವೆಲ್ಲವನ್ನೂ ಅರ್ಥ ಮಾಡಿಕೊಂಡರೆ ಸಿನಿಮಾ ಕಟ್ಟುವ ಕ್ರಮವನ್ನು ಕಲಿಯಬಹುದು ಎಂಬುದನ್ನು ಅರ್ಥಮಾಡಿಸಿದರು’ ಎಂದು ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು.

 

ಸಿನಿಮಾ ಶಿಕ್ಷಕ ಮತ್ತು ಸಿನಿಮಾ ವಿಮರ್ಶಕ ಸತೀಶ್ ಬಹಾದುರ್ ಶತಮಾನೋತ್ಸವ ವರ್ಷದ ಹಿನ್ನೆಲೆಯಲ್ಲಿ ನಡೆದ ಗೋಷ್ಠಿಯಲ್ಲಿ ಸತೀಶ್ ಬಹಾದುರ್ ಅವರ ಪ್ರಾಮುಖ್ಯತೆಯ ಕುರಿತು ಅವರು ಮಾತನಾಡಿದರು.

 

‘ಸತೀಶ್ ಬಹಾದುರ್ ಅವರು ಸಿನಿಮಾ ವಿಶ್ಲೇಷಣೆಯ ಶಿಕ್ಷಕರಾಗಿದ್ದರು. ಸಿನಿಮಾ ಅನ್ನುವುದು ಅನುಭವ ಮತ್ತು ಪ್ರದರ್ಶಕ ಕಲೆಯೂ ಹೌದು. ಸಿನಿಮಾ ಪ್ರೇಕ್ಷಕನಿಗೆ ಅನುಭವ ಕಟ್ಟಿಕೊಡಬಲ್ಲ ಸಿನಿಮಾ ಹೇಗೆ ರೂಪಿಸಬೇಕು ಅನ್ನುವುದನ್ನು ಅವರು ವಿದ್ಯಾರ್ಥಿಗಳಿಗೆ ಕಲಿಸಿಕೊಟ್ಟರು. ಅವರನ್ನು ಫಾದರ್ ಆಫ್ ಫಿಲ್ಮ್ ಅಪ್ರಿಸಿಯೇಷನ್ ಅಂತ ಕರೆಯುತ್ತಾರೆ. ಆದರೆ ಅದು ಸರಿಯಲ್ಲ, ಅವರು ಫಾದರ್ ಆಫ್ ಫಿಲ್ಮ್ ಅನಾಲಿಸಿಸ್’ ಎಂದು ಅವರು ಹೇಳಿದರು. ಸುದೀರ್ಘವಾಗಿ ಮಾತನಾಡಿದ ಅವರು ಭಾರತೀಯ ಚಿತ್ರರಂಗದಲ್ಲಿ ಸತೀಶ್ ಬಹಾದುರ್ ಅವರ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟರು.

 

ಸಿನಿಮಾ ವಿಮರ್ಶಕ, ಬೆಂಗಳೂರು ಚಿತ್ರೋತ್ಸವದ ಮಾಜಿ ಕಲಾ ನಿರ್ದೇಶಕರಾದ ಎನ್. ವಿದ್ಯಾಶಂಕರ್ ಅವರು ಮಾತನಾಡಿ, ‘ಸಿನಿಮಾ ಅನುಭವವನ್ನು ದಾಖಲಿಸುವುದು ಮುಖ್ಯ. ಸಿನಿಮಾವನ್ನು ಓದುವ ಕ್ರಮವನ್ನು, ಅನುಭವ ಅರ್ಥ ಮಾಡಿಕೊಳ್ಳುವ ವಿಧಾನವನ್ನು, ಸಿನಿಮಾವನ್ನು ನೋಡುವ, ಅರಿಯುವ ಅಭ್ಯಾಸ ಬೆಳೆಸುವ ವಿಚಾರದಲ್ಲಿ ಸತೀಶ್ ಬಹಾದುರ್ ಒಂದು ಅಪ್ರತಿಮ ದಾರಿಯನ್ನು ಹಾಕಿಕೊಟ್ಟರು. ಕ್ಲಾಸಿಕಲ್ ಸಿನಿಮಾವನ್ನು ನಮ್ಮದಾಗಿಸುವ ಬಗೆಯನ್ನು ದಶಕಗಳ ಕಾಲ ಕಲಿಸಿಕೊಟ್ಟರು. ನಿಮ್ಮ ಕೆಲಸವನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿಯಿರಿ. ಆಗ ಬೇರೆಯದನ್ನೂ ಅರ್ಥ ಮಾಡಿಕೊಳ್ಳುವ ಶಕ್ತಿ ಒದಗುತ್ತದೆ’ ಎಂದು ಅವರು ಹೇಳಿಕೊಟ್ಟರು.

 

ಹಿರಿಯ ಛಾಯಾಗ್ರಾಹಕರಾದ ಜಿ ಎಸ್ ಭಾಸ್ಕರ್ ಅವರು, ತಮ್ಮ ಮತ್ತು ಸತೀಶ್ ಬಹಾದುರ್ ಅವರ ನಡುವಿನ ಒಡನಾಟ ನೆನಪಿಸಿಕೊಂಡರು. ಆಪ್ತವಾಗಿ ಕಾರ್ಯಕ್ರಮ ನಿರ್ವಹಿಸಿದರು.

Continue Reading

Cinema

17 ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದ ಕನ್ನಡ ಚಿತ್ರ ಸ್ಪರ್ಧಾ ವಿಭಾಗದಲ್ಲಿ ಬಡಿಗೇರ್ ದೇವೇಂದ್ರ ನಿರ್ದೇಶನದ “ವನ್ಯಾ” ಚಿತ್ರ ಪ್ರದರ್ಶನ

Published

on

17 ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದ ಕನ್ನಡ ಚಿತ್ರ ಸ್ಪರ್ಧಾ ವಿಭಾಗದಲ್ಲಿ ಬಡಿಗೇರ್ ದೇವೇಂದ್ರ ನಿರ್ದೇಶನದ “ವನ್ಯಾ” ಚಿತ್ರ ಪ್ರದರ್ಶನ .

 

ಪಲ್ಲವಿ ಅನಂತ್ ಪೂಮಗಾಮೆ ನಿರ್ಮಾಣದ, ಬಡಿಗೇರ್ ದೇವೇಂದ್ರ ನಿರ್ದೇಶನದ ಹಾಗೂ ವೈಜನಾಥ್ ಬಿರಾದಾರ್, ಮೇಘನಾ ಬೆಳವಾಡಿ, ಪ್ರಕಾಶ್ ಬೆಳವಾಡಿ ಮುಂತಾದವರು ಪ್ರಮುಖಪಾತ್ರದಲ್ಲಿ ನಟಿಸಿರುವ “ವನ್ಯಾ” ಚಿತ್ರ ಈ ಬಾರಿಯ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಕನ್ನಡ ಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನವಾಗಿದೆ. ಪ್ರದರ್ಶನದ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಈಗಾಗಲೇ ನಮ್ಮ ಚಿತ್ರ ಹತ್ತಕ್ಕೂ ಹೆಚ್ಚು ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿದೆ. ಪ್ರಸ್ತುತ ನಮ್ಮ ಬೆಂಗಳೂರು ಚಿತ್ರೋತ್ಸವದಲ್ಲಿ “ವನ್ಯಾ” ಚಿತ್ರ ಪ್ರದರ್ಶನವಾಗಿರುವುದು ಬಹಳ ಖುಷಿಯಾಗಿದೆ. “ವನ್ಯಾ” ಕಾಡಿನ ಪ್ರಮುಖ್ಯತೆ ತಿಳಿಸುವ ಚಿತ್ರ. ನಗರದವರು ಈಗ ವಿಶ್ರಾಂತಿಗಾಗಿ ಕಾಡಿಗೆ ಹೋಗುತ್ತಿದ್ದಾರೆ. ಅದರಿಂದ ನಮ್ಮ ಕಾಡುಗಳಿಗೆ ಹೆಚ್ಚು ಹಾನಿಯಾಗುತ್ತಿದೆ. ಕಾಡಿನಲ್ಲಿ ನೆಲೆಸಿರುವ ಎಷ್ಟೋ ಜನರು ನಾಡಿನತ್ತ ಮುಖ ಮಾಡುತ್ತಿದ್ದಾರೆ. ಈ ರೀತಿಯ ವಿಭಿನ್ನ ಕಥಾಹಂದರ ಹೊಂದಿರುವ ನಮ್ಮ ಚಿತ್ರವನ್ನು ಚಿತ್ರೋತ್ಸವದಲ್ಲಿ ನೋಡಿದವರು ನೀಡಿದ ಪ್ರಶಂಸೆಗೆ ಮನ ತುಂಬಿ ಬಂದಿದೆ ಎಂದು ನಿರ್ದೇಶಕ ಬಡಿಗೇರ್ ದೇವೆಂದ್ರ ತಿಳಿಸಿದರು.

 

ಈ ಚಿತ್ರದಲ್ಲಿ ಅಭಿನಯಿಸಿರುವುದು ಖುಷಿಯಾಗಿದೆ. ಕಾಡನ್ನು ಬಿಟ್ಟು ನಾಡಿಗೆ ಬರಲು ಮನಸ್ಸಿಲ್ಲದ ವಯಸ್ಸಾದ ವ್ಯಕ್ತಿಯ ಪಾತ್ರ ನನ್ನದು ಎಂದು ಹಿರಿಯ ನಟ ವೈಜನಾಥ ಬಿರಾದಾರ್ ಹೇಳಿದರು.

ಚಿತ್ರದಲ್ಲಿ ನಟಿಸಿರುವ ಅಶ್ವಿನ್ ಹಾಸನ್, ಯಶವಂತ್ ಹಾಗೂ ನಿರ್ಮಾಪಕಿ ಪಲ್ಲವಿ ಅನಂತ್ ಪೂಮಗಾಮೆ ಮುಂತಾದವರು ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ “ವನ್ಯಾ” ಚಿತ್ರ ಪ್ರದರ್ಶನವಾಗಿರುವುದಕ್ಕೆ ಸಂತಸಪಟ್ಟರು.

Continue Reading

Trending

error: Content is protected !!