Connect with us

Chamarajanagar

ಹಸುಗೂಸನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋದ ಪೋಷಕರು

Published

on

ಚಾಮರಾಜನಗರ: ಒಂದು ವಾರದ ಹಿಂದೆ ಜನಿಸಿರುವ ಹಸುಗೂಸನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋಗಿರುವ ಘಟನೆ ಸಂಭವಿಸಿದೆ.

ತಾಲೂಕಿನ ಸಾಗಡೆ ಮತ್ತು ತಮ್ಮಡಹಳ್ಳಿ ಗ್ರಾಮಗಳ ನಡುವಿನ ರಸ್ತೆಯ ಬದಿಯಲ್ಲಿ ಹೆಣ್ಣು ಹಸುಗೂಸನ್ನು ಪೋಷಕರು ಬಿಟ್ಟು ಹೋಗಿದ್ದು, ಸಾಗಡೆ ಗ್ರಾಮದ ಪರಮೇಶ್ ಎಂಬುವವರು ಅದೇ ರಸ್ತೆಯಲ್ಲಿ ನಗರ ಕಡೆ ಸಂಚಾರ ಮಾಡುತ್ತಿದ್ದಾಗ ಹಸುಗೂಸು ಅಳುವ ಶಬ್ಧ ಕೇಳಿಬಂದಿದೆ.

ಸ್ಥಳಕ್ಕೆ ಬಂದು ನೋಡಿದಾಗ ಹೆಣ್ಣು ಮಗುವನ್ನು ರಸ್ತೆ ಬದಿಯಲ್ಲಿ ಬಿಟ್ಟಿರುವುದು ತಿಳಿದು, ಬಳಿಕ ಸಾಗಡೆ ಗ್ರಾಮದ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಕರೆ ಮಾಡಿ ಮಾಹಿತಿ ತಿಳಿಸಿ ಮಗುವನ್ನು ಆಂಬುಲೆನ್ಸ್ ಮೂಲಕ ಚಾ.ನಗರ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಮಗುವಿನ ಪೋಷಕರು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ.

Continue Reading

Chamarajanagar

ಕ್ಷೇತ್ರದ ಮತದಾರರಿಗೆ ಶ್ವೇತ ಪತ್ರ ಹೊರಡಿಸಿ: ಸೂರ್ಯಕುಮಾರ್

Published

on

ಚಾಮರಾಜನಗರ: ಕ್ಷೇತ್ರದ ಅಭಿವೃದ್ಧಿ ಕುರಿತು ಮತದಾರರಿಗೆ ಶ್ವೇತ ಪತ್ರವನ್ನು ಹೊರಡಿಸಿ ಎಂದು ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಸೂರ್ಯಕುಮಾರ್ ಆಗ್ರಹ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಮುಖಂಡ ಬಿ.ಕೆ.ರವಿಕುಮಾರ್ ಅವರು ಬಿಜೆಪಿ ಮುಖಂಡರಿಗೆ ಶ್ವೇತಪತ್ರ ಹೊರಡಿಸುವ ಅವಶ್ಯಕತೆ ಇಲ್ಲ ಎಂದು ನೀಡಿರುವ ಹೇಳಿಕೆ ಖಂಡನೀಯ. ಬಿಜೆಪಿ ಮುಖಂಡರು ಸಹ ಈ ಕ್ಷೇತ್ರದ ಮತದಾರರೇ ಎಂದು ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.


ಕ್ಷೇತ್ರದ ಶಾಸಕರಾದ ಪುಟ್ಟರಂಗಶೆಟ್ಟಿ ಅವರು ಕಳೆದ ಮೂರು ವರ್ಷಗಳಲ್ಲಿ ಮಾಡಿರುವ ಸಾಧನೆಗಳನ್ನು ಕುರಿತು ಜನತೆಗೆ ಶ್ವೇತಪತ್ರ ಹೊರಸಬೇಕು. ಅಲ್ಲದೇ ಶಾಸಕರ ಪರ ಮಾತನಾಡಿರುವ ಬಿ.ಕೆ. ರವಿಕುಮಾರ್ ಅವರು ಬಿಜೆಪಿ ಮುಖಂಡರಾದ ರಾಮಚಂದ್ರ ಹಾಗೂ ಕುಮಾರಸ್ವಾಮಿ ಅವರು ರಾಜ್ಯ ನಾಯಕರನ್ನು ಮೆಚ್ಚಿಸಲು ಶಾಸಕರ ವಿರುದ್ಧ ಮಾತನಾಡಿದ್ದಾರೆ ಎಂದು ಹೇಳಿರುವುದು ಸರಿಯಲ್ಲ. ನೀವು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವುದರಿಂದ ಶಾಸಕರನ್ನು ಓಲೈಕೆ ಮಾಡಲು ಹೊರಟಿದ್ದೀರಾ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಜಿಲ್ಲಾ ವಕ್ತಾರ ಮನೋಜ್ ಪಟೇಲ್ ಮಾತನಾಡಿ, ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸಿ. ಪುಟ್ಟರಂಗಶೆಟ್ಟಿ ಅವರು, ಚಾಮರಾಜನಗರದ ಅಭಿವೃದ್ಧಿಗೆ ನೀಡಿದ ವಿಶೇಷ ಕೊಡುಗೆಯಾದರೂ ಏನು? ತಮ್ಮ ನಾಲ್ಕು ಅವಧಿಗಳಲ್ಲಿ ಅವರು ಕ್ಷೇತ್ರದಲ್ಲಿ ಮಾಡಿರುವ ಒಂದು ಗಮನಾರ್ಹ ಸಾಧನೆಯನ್ನಾದರೂ ಜನತೆಯ ಮುಂದೆ ಇಡಲಿ ಎಂದು ಒತ್ತಾಯಿಸಿದರು.ಕ್ಷೇತ್ರದಲ್ಲಿ ಕೈಗೆತ್ತಿಕೊಂಡಿರುವ ಬಹುತೇಕ ಮುಖ್ಯ ಕಾಮಗಾರಿಗಳು ಅರ್ಧಕ್ಕೆ ನಿಂತು ಅಪೂರ್ಣಗೊಂಡಿವೆ. ಶಾಸಕರು ಯಾವ ಕೆಲಸವನ್ನು ಪೂರ್ಣಗೊಳಿಸಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ. ಉದಾಹರಣೆಗೆ, ಕರಿನಂಜನಪುರ ಹಾಗೂ ಸೋಮವಾರಪೇಟೆ ಮಾರ್ಗವು ಸೂಕ್ತ ನಿರ್ವಹಣೆ ಇಲ್ಲದೆ ಸಂಪೂರ್ಣವಾಗಿ ಮುಚ್ಚಿಹೋಗಿದೆ ಎಂದರು.


​ಕೇಂದ್ರದ ಯೋಜನೆಗಳಿಗೆ ತಮ್ಮದೆಂದು ಬೀಗುತ್ತಿದ್ದಾರೆ:
ನಗರದಲ್ಲಿ ಅಭಿವೃದ್ಧಿಯಾಗಿರುವ ಜೋಡಿ ರಸ್ತೆಯು ಕೇಂದ್ರ ರಸ್ತೆ ನಿಧಿ (ಸಿಆರ್ಎಫ್) ಯಿಂದ ಬಂದಿರುವುದಾಗಿದೆ. ಹಾಗೂ ಅಮೃತ್ ಯೋಜನೆ ಕೂಡ ಕೇಂದ್ರ ಸರ್ಕಾರದ್ದಾಗಿದೆ. ಆದರೆ, ಶಾಸಕರು ಈ ಕೇಂದ್ರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ದೂರಿದರು. ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಜಲ್ಲಿ ಹಾಕಿರುವ ರಸ್ತೆಗಳಿಗೆ ಹಲವು ದಿನಗಳಾದರೂ ಡಾಂಬರೀಕರಣ ಮಾಡಿಲ್ಲ.

ಬಿಜೆಪಿ ಬೆಂಬಲಿತ ವಾರ್ಡ್ ಮತ್ತು ಗ್ರಾಮಗಳಿಗೆ ಅಭಿವೃದ್ಧಿ ಅನುದಾನ ನೀಡದೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.  ಕ್ರೀಡಾಂಗಣದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಜಿಲ್ಲಾ ಕೇಂದ್ರವಾದ ಚಾಮರಾಜನಗರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಶಾಸಕರಿಗೆ ಯಾವುದೇ ದೂರದೃಷ್ಟಿ ಇಲ್ಲ‌ ಎಂದು ಕಿಡಿಕಾರಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ ಭಗೀರಥ, ಎಸ್ಟಿ ಮೋರ್ಚಾದ ಉಪಾಧ್ಯಕ್ಷ ಬುಲೆಟ್ ಚಂದ್ರು, ಮುಖಂಡರಾದ ಪ್ರಕಾಶ್ ನಾಯ್ಕ, ಶಿವಣ್ಣ, ರವಿ ಇದ್ದರು.

Continue Reading

Chamarajanagar

ನೇರ ಫೋನ್ ಇನ್ ಕಾರ್ಯಕ್ರಮ: 33 ದೂರು ದಾಖಲು

Published

on

ಚಾಮರಾಜನಗರ: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ನೇರ ಫೋನ್ ಇನ್ ಕಾರ್ಯಕ್ರಮಲ್ಲಿ 33 ದೂರುಗಳು ದಾಖಲಾದವು. ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಮೋನಾರೋತ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಗರಸಭೆ, ತಾಲೂಕು ಕಚೇರಿ, ಗ್ರಾಮ ಪಂಚಾಯಿತಿಗಳು ಸೇರಿದಂತೆ ಇತರೆ ಸಮಸ್ಯೆಗಳನ್ನು ಕುರಿತು 33 ಮಂದಿ ದೂರವಾಣಿ ಮೂಲಕ ತಮ್ಮ ಅಹವಾಲನ್ನು ತಿಳಿಸಿದರು.


ಇದರಲ್ಲಿ ಹೆಚ್ಚಾಗಿ ನಗರಸಭೆ ಆಡಳಿತದ ವಿರುದ್ಧ ದೂರುಗಳು ಕೇಳಿಬಂದವು. ಕಸ ನಿರ್ವಹಣೆಯಾಗುತ್ತಿಲ್ಲ. ಚರಂಡಿಗಳ ಹೂಳು ತೆಗೆದಿಲ್ಲ. ಕುಡಿಯುವ ನೀರಿನ ಸಮಸ್ಯೆ ಹಾಗೂ ಇ-ಸ್ವತ್ತು ಸೇರಿದಂತೆ ಹಲವು ದೂರುಗಳು ಬಂದವು. ಈ ವೇಳೆ ಕಾರ್ಯಕ್ರಮದಲ್ಲೇ ಇದ್ದ ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ ಅವರಿಗೆ ದೂರು ಬಂದ ಸ್ಥಳಗಳಿಗೆ ಭೇಟಿ ನೀಡಿ ಶೀಘ್ರವಾಗಿ ಬಗೆಹರಿಸುವಂತೆ ಸೂಚನೆ ನೀಡಿದರು.

Continue Reading

Chamarajanagar

ರಾಜ್ಯ ಮಟ್ಟದ ವಿಶೇಷ ಪ್ರಶಸ್ತಿಗೆ ಹಿರಿಯ ಛಾಯಾಗ್ರಾಹಕ ಕೆ.ಎ. ಶ್ರೀನಿವಾಸ್ ಆಯ್ಕೆ

Published

on

ಚಾಮರಾಜನಗರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಚಿಕ್ಕಮಂಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿರುವ ಪತ್ರಿಕಾ ದಿನಾಚರಣೆ ಹಾಗೂ ಕೆಯುಡಬ್ಲ್ಯೂಜೆ (KUWJ) ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಾಮರಾಜನಗರ ಜಿಲ್ಲೆಯ ಗೋರುಕನ ದಿನಪತ್ರಿಕೆಯ ಹಿರಿಯ ಛಾಯಾಗ್ರಾಹಕ ಕೆ.ಎ. ಶ್ರೀನಿವಾಸ್ (ಬಿಳಿಗಿರಿ ಶ್ರೀನಿವಾಸ್) ಅವರಿಗೆ ರಾಜ್ಯ ಮಟ್ಟದ ವಿಶೇಷ ಪ್ರಶಸ್ತಿ ಲಭಿಸಿದೆ.

ಛಾಯಾಗ್ರಹಣ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಸೇವೆ ಹಾಗೂ ಪತ್ರಿಕೋದ್ಯಮಕ್ಕೆ ನೀಡಿರುವ ಗಮನಾರ್ಹ ಕೊಡುಗೆಯನ್ನು ಪರಿಗಣಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಕೆ.ಎ. ಶ್ರೀನಿವಾಸ್ ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದ್ದಾರೆ.

Continue Reading

Trending

error: Content is protected !!