Connect with us

National

ಭಾರತ ಟಿ-20 ತಂಡಕ್ಕೆ ಹೊಸ ನಾಯಕ? ಶ್ರೇಯಸ್ ಅಯ್ಯರ್ ಹೆಸರು ಮುನ್ನೆಲೆಗೆ

Published

on

ಮುಂಬೈ: ಭಾರತ ಟಿ-20 ತಂಡದ ನಾಯಕತ್ವದಲ್ಲಿ ಮಹತ್ವದ ಬದಲಾವಣೆ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಪ್ರಸ್ತುತ ನಾಯಕ ಸೂರ್ಯಕುಮಾರ್‌ ಯಾದವ್‌ ಅವರನ್ನು ನಾಯಕತ್ವದಿಂದ ಹಿಂದೆ ಸರಿಸಿ, ಶ್ರೇಯಸ್‌ ಅವರಿಗೆ ಜವಾಬ್ದಾರಿ ನೀಡುವ ಕುರಿತು ಬಿಸಿಸಿಐನಲ್ಲಿ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ. ವರದಿಗಳ ಪ್ರಕಾರ, ಆಯ್ಕೆ ಸಮಿತಿ ಶೀಘ್ರದಲ್ಲೇ ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಬಹುದು.

ಮುಂಬರುವ ಐರ್ಲೆಂಡ್‌   ವಿರುದ್ಧದ ಟಿ20 ಸರಣಿ ಹಾಗೂ ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ತಂಡ ಆಯ್ಕೆ ಮಾಡುವ ವೇಳೆ ನಾಯಕತ್ವದ ವಿಷಯವೂ ನಿರ್ಧಾರವಾಗುವ ಸಾಧ್ಯತೆ ಇದೆ. ಯುವ ಆಟಗಾರ ತಿಲಕ್‌ ವರ್ಮ ಅವರನ್ನು ಉಪನಾಯಕರನ್ನಾಗಿ ನೇಮಿಸುವ ಪ್ರಸ್ತಾವವೂ ಇದೆ ಎಂದು ವರದಿಗಳು ತಿಳಿಸಿವೆ.

ಇತ್ತೀಚಿನ ಅವಧಿಯಲ್ಲಿ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ. ನಿರಂತರ ವೈಫಲ್ಯದಿಂದಾಗಿ ಆಯ್ಕೆದಾರರು 2028ರ ಟಿ20 ವಿಶ್ವಕಪ್‌ನ್ನು ಗಮನದಲ್ಲಿಟ್ಟುಕೊಂಡು ಹೊಸ ನಾಯಕತ್ವದತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ. ಮಾಜಿ ವಿಕೆಟ್‌ಕೀಪರ್ ಸಬಾ ಕರೀಂ ಕೂಡ ಆಯ್ಕೆದಾರರು ಭವಿಷ್ಯವನ್ನು ಗಮನಿಸಿ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನೊಂದೆಡೆ, ಶ್ರೇಯಸ್ ಅಯ್ಯರ್ ಇತ್ತೀಚಿನ ಟೂರ್ನಿಗಳಲ್ಲಿ ನಾಯಕ ಹಾಗೂ ಬ್ಯಾಟರ್ ಆಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರ ನಾಯಕತ್ವ ಸಾಮರ್ಥ್ಯವನ್ನು ಹಲವು ಕ್ರಿಕೆಟ್ ತಜ್ಞರು ಮೆಚ್ಚಿದ್ದು, ಭಾರತದ ಭವಿಷ್ಯದ ಟಿ-20 ನಾಯಕನಾಗಿ ಅವರು ಬಲವಾದ ಸ್ಪರ್ಧಿಯಾಗಿದ್ದಾರೆ ಎಂದು ಪರಿಗಣಿಸಲಾಗಿದೆ.

ಆದರೆ, ಬಿಸಿಸಿಐಯಿಂದ ಇನ್ನೂ ಅಧಿಕೃತ ಘೋಷಣೆ ಹೊರಬಂದಿಲ್ಲ. ಆಯ್ಕೆ ಸಮಿತಿಯ ಸಭೆಯ ಬಳಿಕವೇ ನಾಯಕತ್ವದ ಬಗ್ಗೆ ಅಂತಿಮ ಸ್ಪಷ್ಟತೆ ಸಿಗಲಿದೆ.

National

ವಿದ್ಯಾರ್ಥಿಗಳ ಧ್ವನಿಯನ್ನು ಲಾಠಿಯಿಂದ ಹತ್ತಿಕ್ಕಲು ಸಾಧ್ಯವಿಲ್ಲ: ಶ್ರೇಯಸ್ ಎಂ.ಪಟೇಲ್

Published

on

ನವದೆಹಲಿ:  ನವದೆಹಲಿಯ ಜಂತರ್ ಮಂತರ್ ಎದುರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ನಡೆಸಿದ ಲಾಠಿಚಾರ್ಜ್ ಮತ್ತು ದಮನಕಾರಿ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ.

ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳು ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ನ್ಯಾಯ ಒದಗಿಸುವಲ್ಲಿ ವಿಫಲರಾದ ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂಬ ಆಗ್ರಹದೊಂದಿಗೆ, ಪ್ರಧಾನಮಂತ್ರಿ ನಿವಾಸದ ಎದುರು ಲೋಕಸಭೆಯ ವಿರೋಧ ಪಕ್ಷದ ನಾಯಕ  ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ರವರು ಮತ್ತು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ  ಸಂಸದ ಶ್ರೇಯಸ್ ಎಂ.ಪಟೇಲ್ ವಿದ್ಯಾರ್ಥಿಗಳ ಧ್ವನಿಯನ್ನು ಲಾಠಿಯಿಂದ ಹತ್ತಿಕ್ಕಲು ಸಾಧ್ಯವಿಲ್ಲ. ಯುವಜನರ ಭವಿಷ್ಯ, ಶಿಕ್ಷಣ ವ್ಯವಸ್ಥೆಯ ಪಾವಿತ್ರ್ಯ ಮತ್ತು ನ್ಯಾಯಕ್ಕಾಗಿ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು  ತಿಳಿಸಿದ್ದಾರೆ.

Continue Reading

National

ಪ್ರಧಾನಿ ನಿವಾಸದ ಬಳಿ ವಿಪಕ್ಷಗಳ ಪ್ರತಿಭಟನೆ ಅಂತ್ಯ; ರಾಹುಲ್ ಗಾಂಧಿ ಪೊಲೀಸರ ವಶಕ್ಕೆ

Published

on

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಾಗೂ ಯುವ ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮವನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಬಳಿ ವಿರೋಧ ಪಕ್ಷಗಳ ನಾಯಕರು ನಡೆಸುತ್ತಿದ್ದ ಧರಣಿ ಸತ್ಯಾಗ್ರಹವನ್ನು ದೆಹಲಿ ಪೊಲೀಸರು ಮಂಗಳವಾರ ಸಂಜೆ ತೆರವುಗೊಳಿಸಿದ್ದಾರೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ‘ಇಂಡಿಯಾ’ ಮೈತ್ರಿಕೂಟದ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆ ಮುಂದುವರಿಸುವುದಾಗಿ ನಾಯಕರು ತಿಳಿಸಿದ್ದರೂ, ಸಂಜೆ ವೇಳೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಮುಂದಾದರು.

ಈ ವೇಳೆ ರಾಹುಲ್ ಗಾಂಧಿ ರಸ್ತೆಯಲ್ಲೇ ಕುಳಿತು, ಬೇಡಿಕೆಗಳು ಈಡೇರುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ ಪೊಲೀಸರು ಅವರನ್ನು ಸುತ್ತುವರಿದು ಸ್ಥಳದಿಂದ ಎಬ್ಬಿಸಿ ಬಸ್‌ನಲ್ಲಿ ಕರೆದೊಯ್ದರು.

ಪೊಲೀಸರ ಕ್ರಮವನ್ನು ಕಾಂಗ್ರೆಸ್ ಹಾಗೂ ‘ಇಂಡಿಯಾ’ ಕೂಟದ ನಾಯಕರು ಖಂಡಿಸಿದ್ದು, ಯುವಕರು ಮತ್ತು ವಿದ್ಯಾರ್ಥಿಗಳ ಧ್ವನಿಯನ್ನು ಹತ್ತಿಕ್ಕಲು ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ಕ್ರಮಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ. ನೀಟ್ ಅಕ್ರಮಗಳ ಕುರಿತು ಹೊಣೆಗಾರಿಕೆ ನಿಗದಿಪಡಿಸಿ ಕ್ರಮ ಕೈಗೊಳ್ಳಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ.

Continue Reading

National

ನಕ್ಸಲ್ ಪ್ರದೇಶಗಳಿಗೆ ₹95 ಕೋಟಿ ವಿದೇಶಿ ಹಣ ಹರಿವು ಆರೋಪ: ಇಡಿಯಿಂದ PMLA ತನಿಖೆ ಆರಂಭ

Published

on

ನವದೆಹಲಿ: ನಕ್ಸಲ್ ಪೀಡಿತ ಪ್ರದೇಶಗಳಿಗೆ ಅಕ್ರಮವಾಗಿ ವಿದೇಶಿ ಹಣ ಹರಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ED) ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಹೊಸ ತನಿಖೆ ಆರಂಭಿಸಿದೆ.

ಇಡಿಯ ಪ್ರಾಥಮಿಕ ತನಿಖೆಯ ಪ್ರಕಾರ, 2025ರ ನವೆಂಬರ್‌ನಿಂದ 2026ರ ಏಪ್ರಿಲ್‌ವರೆಗೆ ಸುಮಾರು ₹95 ಕೋಟಿ ವಿದೇಶಿ ಹಣವನ್ನು ಭಾರತೀಯ ಬ್ಯಾಂಕಿಂಗ್ ಹಾಗೂ ನಿಯಂತ್ರಣ ವ್ಯವಸ್ಥೆಯನ್ನು ಬದಿಗೊತ್ತಿ, ವಿದೇಶಿ ಡೆಬಿಟ್ ಕಾರ್ಡ್‌ಗಳ ಮೂಲಕ ಭಾರತಕ್ಕೆ ತರಲಾಗಿದೆ ಎನ್ನಲಾಗಿದೆ.

ಈ ಪ್ರಕರಣ ಸಂಬಂಧ ಸಿಬಿಐಗೆ ಪತ್ರ ಬರೆದಿರುವ ಇಡಿ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA), ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಮನವಿ ಮಾಡಿದೆ.

ಅಮೆರಿಕ ಮೂಲದ Truist Bank ನೀಡಿದ್ದ ಡೆಬಿಟ್ ಕಾರ್ಡ್‌ಗಳನ್ನು ಬಳಸಿ ದೇಶದ ವಿವಿಧ ಎಟಿಎಂಗಳಿಂದ ಕೋಟ್ಯಂತರ ರೂಪಾಯಿ ನಗದು ಹಿಂಪಡೆಯಲಾಗಿದೆ ಎಂದು ತನಿಖೆಯಲ್ಲಿ ಆರೋಪಿಸಲಾಗಿದೆ. ವಿದೇಶಿ ಸಂಸ್ಥೆಯೊಂದು ನಕಲಿ (ಶೆಲ್) ಕಂಪನಿಗಳ ಜಾಲದ ಮೂಲಕ ಈ ಹಣ ವರ್ಗಾವಣೆ ನಡೆಸಿದ್ದು, ಡಿಜಿಟಲ್ ಸಾಕ್ಷ್ಯಗಳನ್ನು ನಾಶಪಡಿಸಿರುವ ಶಂಕೆಯನ್ನೂ ಇಡಿ ವ್ಯಕ್ತಪಡಿಸಿದೆ.

ಈ ಜಾಲದ ಸುಳಿವಿನ ಮೇರೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಿ ಪ್ರಜೆಯೊಬ್ಬನನ್ನು ಲುಕ್‌ಔಟ್ ನೋಟಿಸ್ ಆಧಾರದಲ್ಲಿ ತಡೆದು, ಆತನ ಬಳಿ 24 ವಿದೇಶಿ ಡೆಬಿಟ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಮೊದಲು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ತನಿಖೆ ಪೂರ್ಣಗೊಳಿಸಿದ್ದ ಇಡಿ, ತನ್ನ ವರದಿಯನ್ನು ಕರ್ನಾಟಕ ಹಾಗೂ ಛತ್ತೀಸ್‌ಗಢ ಪೊಲೀಸರಿಗೆ ಹಂಚಿಕೊಂಡಿದೆ. ಈ ಸಂಬಂಧ ಎರಡೂ ರಾಜ್ಯಗಳ ಪೊಲೀಸರು ಈಗಾಗಲೇ ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.

Continue Reading

Trending

error: Content is protected !!