Connect with us

Uncategorized

ಅಖಿಲ ಭಾರತ ಸಮ್ಮೇಳನದಲ್ಲಿ 87 ಪುಸ್ತಕ ಪ್ರಕಟ: ನಾಡೋಜ ಮಹೇಶ ಜೋಶಿ

Published

on

ಮಂಡ್ಯ: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 87 ಪುಸ್ತಕಗಳನ್ನು ಪ್ರಕಟಿಸಲಾಗುವುದು, ಮಂಡ್ಯ ಜಿಲ್ಲೆಯ ನಾಡು ನುಡಿ ಸಾಂಸ್ಕೃತಿಕ ಕಲೆಗಳಿಗೆ ಸೀಮಿತವಾದ ವಿಷಯಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಮಹೇಶ ಜೋಶಿ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ನಡೆದ ಪುಸ್ತಕ ಪ್ರಕಟಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

87 ಪುಸ್ತಕಗಳ ಪೈಕಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅತಿ ಮುಖ್ಯವಾದ ಕೆಲವು ಪುಸ್ತಕಗಳನ್ನು ಮರು ಮುದ್ರಣ ಮಾಡಲಾಗುವುದು. ಇದರ ಜೊತೆಗೆ ಮಂಡ್ಯ ಜಿಲ್ಲೆಗೆ ಸೀಮಿತವಾದ ವಿಷಯಗಳನ್ನಿಟ್ಟುಕೊಂಡು ಜಿಲ್ಲೆಯ ಸಾಹಿತಿಗಳು, ಲೇಖಕರಿಂದ 50ಕ್ಕೂ ಹೆಚ್ಚು ಪುಸ್ತಕಗಳನ್ನು ಹೊಸತಾಗಿ ರಚಿಸಲು ಪ್ರಕಟಣಾ ಸಮಿತಿ ರೂಪುರೇಷೆ ಹಮ್ಮಿಕೊಳ್ಳುತ್ತದೆ ಎಂದು ತಿಳಿಸಿದರು.

ಜಿಲ್ಲೆಗೆ ಸಂಬಂಧಿಸಿದಂತೆ ಪ್ರವಾಸಿ ತಾಣಗಳು, ಸಾಂಸ್ಕೃತಿಕ ಕೇಂದ್ರಗಳು, ದೇಶಕ್ಕಾಗಿ ಪ್ರಾಣ ಕೊಟ್ಟ ಹುತಾತ್ಮರು, ಸಾರಸ್ವತ ಲೋಕ ಕಟ್ಟಿದವರು, ಜಿಲ್ಲೆಯ ಸಾಧಕರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿ, ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ.ವಿಶ್ವೇಶ್ವರಯ್ಯ, ಕರ್ನಾಟಕ ಏಕೀಕರಣ, ಕೃಷ್ಣರಾಜಸಾಗರ(ಕನ್ನಂಬಾಡಿ) ಏಳು ತಾಲ್ಲೂಕುಗಳ ದರ್ಶನ, ಸಾಂಸ್ಕೃತಿಕ ಕೇಂದ್ರಗಳು, ಜಿಲ್ಲೆಯ ವಾಸ್ತುಶಿಲ್ಪ, ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ದಾರಿ ತೋರಿದ ದಾರ್ಶನಿಕರು, ನಾಡು ಕಟ್ಟಿದವರು ವಿಷಯಗಳೂ ಸೇರಿದಂತೆ ಇನ್ನೂ ಹಲವು ವಿಷಯಗಳ ಬಗ್ಗೆ 80 ರಿಂದ 100 ಪುಟಗಳ ಒಳಗಿನ ಪುಸ್ತಕಗಳನ್ನು ಹೊರ ತರಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಕೃತಿಗಳನ್ನು ಜನಸಾಮಾನ್ಯ ಓದುಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಎಲ್ಲರಿಗೂ ಅರ್ಥವಾಗುವ ಭಾಷಾ ಶೈಲಿಯಲ್ಲಿ ರಚಿಸಲಾಗುವುದು. ಕೃತಿಗಳನ್ನು ರಚಿಸುವ ಆಸಕ್ತಿಯುಳ್ಳ ಲೇಖಕರಿಗೆ ಅವಕಾಶ ನೀಡಬೇಕಾಗಿದ್ದು ಆಯಾ ಕ್ಷೇತ್ರದಲ್ಲಿ ಪರಿಣತಿ, ತಿಳುವಳಿಕೆ, ಆಸಕ್ತಿ ಇರುವವರನ್ನು ಸಾಮಾಜಿಕ, ಪ್ರಾದೇಶಿಕ ಮತ್ತು ಪ್ರತಿಭಾ ನ್ಯಾಯದ ಆಧಾರದ ಮೇಲೆ ಲೇಖಕರನ್ನು ಆಯ್ಕೆ ಮಾಡಿ ಹಾಗೂ ಕಾಲಮಿತಿಯೊಳಗೆ ಪುಸ್ತಕ ರಚಿಸಿ ಕೊಡಲು ಬದ್ಧತೆ ಇರುವವರ ಹೆಸರನ್ನು ಮುಂದಿನ ಸಭೆಯೊಳಗೆ ಸೂಚಿಸಬೇಕೆಂದು ಸಮಿತಿ ಸದಸ್ಯರಿಗೆ ತಿಳಿಸಿದರು.

ಅವರುಗಳ ಬಗ್ಗೆ ಪರಿಶೀಲನೆ ನಡೆಸಿ ಆಯ್ಕೆ ಮಾಡಿ ಪುಸ್ತಕ ರಚಿಸಲು ಅವಕಾಶ ಮಾಡಿಕೊಡಲಾಗುವುದು. ಬಿಡುಗೆಯಾಗುವ ಈ ಕೃತಿಗಳು ಮೌಲಿಕ ಹಾಗೂ ಆಕರ ಗ್ರಂಥ ಆಗುವ ರೀತಿಯಲ್ಲಿರಬೇಕು. ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅದ್ಭುತ ಯಶಸ್ಸು ಕಂಡ ನಂತರ ಮಂಡ್ಯದಲ್ಲಿ ನಡೆಯುವ 87ನೇ ಸಮ್ಮೇಳನದ ಕುರಿತು ಕನ್ನಡಿಗರಲ್ಲಿ ಅಪಾರ ನಿರೀಕ್ಷೆ, ಮತ್ತು ಕುತೂಹಲವಿದೆ, ಈ ನಿಟ್ಟಿನಲ್ಲಿ ಇದೊಂದು ಮಾರ್ಗದರ್ಶಿ ಸಮ್ಮೇಳನವಾಗಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಹುಸ್ಕೂರು ಕೃಷ್ಣೇಗೌಡ ಮಾತನಾಡಿ, ಹಾವೇರಿಯಲ್ಲಿ ನಡೆದ 86ನೇ ಸಮ್ಮೇಳನ ನಡೆದುದಕ್ಕಿಂತ ಹೆಚ್ಚು ಅರ್ಥಪೂರ್ಣವಾಗಿ ನಡೆಸಲಾಗುವುದು. ಮಂಡ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗುವ ಪುಸ್ತಕಗಳು ಸಾರ್ವಕಾಲಿಕವಾಗಿ ಉಳಿಯುವಂತೆ ಮಾಡಲು ಪುಸ್ತಕ ಸಮಿತಿ ಒಗ್ಗಟ್ಟಿನಿಂದ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕಿದ್ದು, ಜಿಲ್ಲೆಯ ಘನತೆ ಹೆಚ್ಚಿಸುವ ರೀತಿಯಲ್ಲಿ ಎಲ್ಲರೂ ಸಮ್ಮೇಳನ ನಡೆಸೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಕೇಂದ್ರ ಕಸಾಪ ಕಾರ್ಯದರ್ಶಿ ನೇ.ಭ.ರಾಮಲಿಂಗಶೆಟ್ಟಿ, ಕೋಶಾಧ್ಯಕ್ಷ ಪಟೇಲ್ ಪಾಂಡು, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಜಿಲ್ಲಾ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಪದಾಧಿಕಾರಿಗಳಾದ ಧನಂಜಯ ದರಸಗುಪ್ಪೆ, ಹೊಳಲು ಶ್ರೀಧರ್, ಚಂದ್ರಲಿಂಗು, ಪೂರ್ಣಚಂದ್ರ, ಸಮಿತಿ ಸದಸ್ಯರಾದ ಸುಮಾರಾಣಿ ಶಂಭು, ಭವಾನಿ ಲೋಕೇಶ್, ಶುಭಶ್ರೀ ಪ್ರಸಾದ್, ಎಂ.ಯು.ಶ್ವೇತಾ, ಷೌಕತ್ ಆಲಿ, ಚಲುವೇಗೌಡ, ಚಂದ್ರಶೇಖರಯ್ಯ, ಶಿವಣ್ಣ, ಕೊತ್ತತ್ತಿ ರಾಜು, ಹರಿಚರಣ ತಿಲಕ್, ಧರ್ಮಪ್ಪ, ಬಸಪ್ಪ ನೆಲಮಾಕನಹಳ್ಳಿ ಭಾಗವಹಿಸಿದ್ದರು.

Continue Reading
Click to comment

Leave a Reply

Your email address will not be published. Required fields are marked *

Chamarajanagar

ಭಾರತ್ ಜೋಡೋ ಯುವ ಸಂಘ ಸ್ಥಾಪನೆ : ಆ. 6 ರಿಂದ ಯುವಜನರ ನೋಂದಣಿ ಸದಸ್ಯತ್ವ ಪ್ರಕ್ರಿಯೆ ಆರಂಭ : ಜಿಲ್ಲಾಧಿಕಾರಿ ಶ್ರೀರೂಪ

Published

on

ಚಾಮರಾಜನಗರ: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಭಾರತ್ ಜೋಡೋ ಯುವ ಸಂಘ ಸ್ಥಾಪನೆ ಮಾಡುವ ಸಂಬಂಧ ಯುವಜನರು ತಮ್ಮ ವಾಸಸ್ಥಳ ವ್ಯಾಪ್ತಿಯ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಆ. 6 ರಂದು ಬಿಜೆವೈಎಸ್ (BJYS) ವೈಬ್‍ಸೈಟ್ ಪ್ರಾರಂಭವಾಗಲಿದ್ದು, ಅದರಲ್ಲಿ ನೋಂದಣಿ ಮಾಡಿಕೊಂಡು ಭಾರತ್ ಜೋಡೋ ಯುವ ಸಂಘದ ಸದಸ್ಯತ್ವ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಶ್ರೀರೂಪ ತಿಳಿಸಿದ್ದಾರೆ.


ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಂದು ಯುವ ಸಂಘ, ಪ್ರತಿ ಪಟ್ಟಣ ಪಂಚಾಯಿತಿ (ಟಿ.ಪಿ) ವ್ಯಾಪ್ತಿಯಲ್ಲಿ ಸರಾಸರಿ 4 ಸಾವಿರ ಜನಸಂಖ್ಯೆಗೆ ಒಂದು ಯುವ ಸಂಘ, ಪ್ರತಿ ಪುರಸಭೆ (ಟಿ.ಎಂ.ಸಿ) ವ್ಯಾಪ್ತಿಯಲ್ಲಿ ಸರಾಸರಿ 6 ಸಾವಿರ ಜನಸಂಖ್ಯೆಗೆ ಒಂದು ಯುವ ಸಂಘ, ಪ್ರತಿ ನಗರಸಭೆ (ಸಿ.ಎಂ.ಸಿ) ವ್ಯಾಪ್ತಿಯಲ್ಲಿ ಸರಾಸರಿ 8 ಸಾವಿರ ಜನಸಂಖ್ಯೆಗೆ ಒಂದು ಯುವ ಸಂಘವನ್ನು ಸ್ಥಾಪಿಸಲು ಎಲ್ಲಾ ಸಮುದಾಯದ 16 ರಿಂದ 35 ವರ್ಷ ವಯೋಮಾನದ ಯುವಜನರು,

ತಮ್ಮ ವಾಸಸ್ಥಳ ವ್ಯಾಪ್ತಿಯಲ್ಲಿ ಬರುವ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಆ. 6 ಬಿವೈಜೆಎಸ್ ವೈಬ್‍ಸೈಟ್ ಪ್ರಾರಂಭವಾಗಲಿದ್ದು, ಅದರಲ್ಲಿ ನೋಂದಣಿ ಮಾಡಿಕೊಂಡು ಭಾರತ್ ಜೋಡೋ ಯುವ ಸಂಘದ ಸದಸ್ಯತ್ವ ಪಡೆಯಬಹುದು. ನೊಂದಣಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ತಮ್ಮ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯಿತಿ, ಪುರಸಭೆ ಹಾಗೂ ನಗರಸಭೆಯಲ್ಲಿ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

Uncategorized

ರೈತರು, ವ್ಯಾಪಾರಿಗಳು, ವಿದ್ಯಾರ್ಥಿಗಳ ಪ್ರಗತಿಗೆ ಪ್ರಾರ್ಥನೆ: ಸಿಎಂ ಡಿಕೆಶಿ

Published

on

ಮೈಸೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತರ ಬದುಕು, ವರ್ತಕರ ವ್ಯಾಪಾರ ಹಾಗೂ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.

“ಮೈಸೂರು ನಗರಕ್ಕೆ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಬಂದಿದ್ದೇನೆ. ದುಃಖಗಳನ್ನು ದೂರ ಮಾಡುವ ಚಾಮುಂಡಿ ತಾಯಿಯ ದರ್ಶನ ಪಡೆದಿದ್ದೇನೆ. ನಾನು ಈ ಹಿಂದೆ ಇದೇ ಸ್ಥಳದಲ್ಲಿ ಹೇಳಿದ್ದೆ — ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದು. ಆ ಮಾತಿನ ಬಗ್ಗೆ ಹಲವರು ಚರ್ಚೆ ಮಾಡಿದರು, ಟೀಕೆ ಮಾಡಿದರು. ಆದರೆ ನನಗೆ ಚಾಮುಂಡೇಶ್ವರಿಯ ಆಶೀರ್ವಾದದ ಮೇಲೆ ನಂಬಿಕೆ ಇದೆ” ಎಂದು ಸಿಎಂ ಹೇಳಿದರು.

ಸರ್ಕಾರ ಎಲ್ಲ ಧರ್ಮಗಳನ್ನು ಸಮಾನವಾಗಿ ನೋಡಬೇಕು ಎಂದು ಹೇಳಿದ ಅವರು, ಪ್ರತಿಯೊಬ್ಬರ ನಂಬಿಕೆ, ಆಚಾರ-ವಿಚಾರಗಳನ್ನು ಗೌರವಿಸುವುದು ಸರ್ಕಾರದ ಜವಾಬ್ದಾರಿ ಎಂದರು. ಕುವೆಂಪು ಅವರ ಆಶಯದಂತೆ ಕರ್ನಾಟಕವನ್ನು ಶಾಂತಿಯ ತೋಟವಾಗಿ ಕಾಪಾಡುವುದು ತಮ್ಮ ಕರ್ತವ್ಯ ಎಂದು ತಿಳಿಸಿದರು.

“ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸಬೇಕು. ಜನರ ಹಿತಕ್ಕಾಗಿ ಕೆಲಸ ಮಾಡಿ ಸಾಕ್ಷಿಗುಡ್ಡೆಗಳನ್ನು ಬಿಟ್ಟು ಹೋಗಬೇಕು ಎಂಬುದು ನನ್ನ ಧ್ಯೇಯ. ಎಲ್ಲರನ್ನೂ ಸಮಾನವಾಗಿ ಕರೆದುಕೊಂಡು ಹೋಗುವುದು ನನ್ನ ಧರ್ಮ” ಎಂದು ಹೇಳಿದರು.

ಕಾವೇರಿ ನೀರು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನೀರನ್ನು ಸಂಪೂರ್ಣವಾಗಿ ತಡೆದು ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದರು. ಕಾವೇರಿ ನದಿಯನ್ನು ಅವಲಂಬಿಸಿರುವ ಕರ್ನಾಟಕ, ತಮಿಳುನಾಡು, ಪುದುಚೇರಿ ಸೇರಿದಂತೆ ಎಲ್ಲ ಭಾಗಗಳ ರೈತರು, ಕೈಗಾರಿಕೆಗಳು ಮತ್ತು ಜನರಿಗೆ ಕಾವೇರಿ ಕೃಪೆ ಇರಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.

“ಪ್ರಾಣಿ-ಪಕ್ಷಿ ಸೇರಿದಂತೆ ಎಲ್ಲ ಜೀವಿಗಳು ನೀರಿನಿಂದ ಬದುಕಬೇಕು. ರಾಜ್ಯದಲ್ಲಿ ಉತ್ತಮ ವಾತಾವರಣ ನೆಲೆಸಲಿ, ಕಾವೇರಿ ತುಂಬಿ ಹರಿಯಲಿ ಎಂಬುದು ನಮ್ಮ ಸಂಕಲ್ಪ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

Continue Reading

Uncategorized

ಚೆನ್ನಮ್ಮ ಅವರ 11ನೇ ದಿನದ ಉತ್ತರಕ್ರಿಯೆಗೆ ಹರದನಹಳ್ಳಿ ಸಜ್ಜು : ಎರಡು ಲಕ್ಷಕ್ಕೂ ಅಧಿಕ ಜನರ ನಿರೀಕ್ಷೆ

Published

on

ಹೊಳೆನರಸೀಪುರ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ಅವರ 11ನೇ ದಿನದ ಉತ್ತರಕ್ರಿಯಾ ವಿಧಿ ವಿಧಾನಗಳು ಗುರುವಾರ ಹರದನಹಳ್ಳಿಯ ಮಾವಿನಕೆರೆ ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಅವರ ಪವಿತ್ರ ಸಮಾಧಿ ಸ್ಥಳದಲ್ಲಿ ನಡೆಯಲಿವೆ.

ಉತ್ತರಕ್ರಿಯೆ ವಿಧಿ ವಿಧಾನಗಳು ಬೆಳಗ್ಗೆ 10 ಗಂಟೆಯಿಂದ ಆರಂಭವಾಗಲಿದ್ದು, ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಕಾರ್ಯಕ್ರಮದ ಅಚ್ಚುಕಟ್ಟು ವ್ಯವಸ್ಥೆಗಾಗಿ ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ.

ಗಣ್ಯರ ಆಗಮನಕ್ಕೆ ಐದು ಹೆಲಿಪ್ಯಾಡ್ ಸಿದ್ಧ:

ಕಾರ್ಯಕ್ರಮಕ್ಕೆ ಗಣ್ಯರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಐದು ಹೆಲಿಪ್ಯಾಡ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಸುಮಾರು ಎರಡು ಲಕ್ಷಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಸುಮಾರು ಆರು ಲಕ್ಷಕ್ಕೂ ಹೆಚ್ಚು ಆಹ್ವಾನ ಪತ್ರಿಕೆಗಳನ್ನು ಮನೆಮನೆಗೆ ಹಂಚಲಾಗಿದೆ.

ಚೆನ್ನಮ್ಮ ಅವರ ಸಮಾಧಿ ದರ್ಶನ ಹಾಗೂ ಪ್ರಸಾದ ಸ್ವೀಕಾರಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದೇ ಪಂಕ್ತಿಯಲ್ಲಿ ಸುಮಾರು 22 ಸಾವಿರ ಮಂದಿ ಏಕಕಾಲದಲ್ಲಿ ಕುಳಿತು ಪ್ರಸಾದ ಸ್ವೀಕರಿಸುವ ವ್ಯವಸ್ಥೆ ಮಾಡಲಾಗಿದೆ.

ಮಳೆ ಹಿನ್ನೆಲೆಯಲ್ಲಿ 15 ಬೃಹತ್ ಜರ್ಮನ್ ಟೆಂಟ್:

 

ಮಳೆ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸ್ಥಳದಲ್ಲಿ 15 ಬೃಹತ್ ಜರ್ಮನ್ ಟೆಂಟ್‌ಗಳನ್ನು ಅಳವಡಿಸಲಾಗಿದೆ. ಮೂರು ವಿಭಾಗಗಳನ್ನು ಮಹಿಳೆಯರಿಗೆ ಪ್ರತ್ಯೇಕವಾಗಿ ಮೀಸಲಿಡಲಾಗಿದ್ದು, ಗಣ್ಯರಿಗಾಗಿ ಎರಡು ಕಡೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.

ಚೆನ್ನಮ್ಮ ಅವರ ಸಮಾಧಿ ದರ್ಶನಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಯಾವುದೇ ಭೇದವಿಲ್ಲದೆ ಒಂದೇ ರೀತಿಯ ಪ್ರಸಾದ ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ಪ್ರಸಾದದಲ್ಲಿ ಆರು ಬಗೆಯ ಸಿಹಿ ತಿನಿಸು ಸೇರಿದಂತೆ 20ಕ್ಕೂ ಹೆಚ್ಚು ಬಗೆಯ ಆಹಾರ ಪದಾರ್ಥಗಳು ಇರಲಿವೆ. ಚೆನ್ನಮ್ಮ ಅವರಿಗೆ ಇಷ್ಟವಾದ ಆಹಾರ ಪದಾರ್ಥಗಳನ್ನೂ ಪ್ರಸಾದದಲ್ಲಿ ಸೇರಿಸಲಾಗಿದೆ.

5 ಸಾವಿರಕ್ಕೂ ಅಧಿಕ ಸಿಬ್ಬಂದಿಯಿಂದ ಪ್ರಸಾದ ಸಿದ್ಧತೆ:

 

ಪ್ರಸಾದವನ್ನು ಶಾಸ್ತ್ರೋಕ್ತವಾಗಿ ಸಿದ್ಧಪಡಿಸಲಾಗುತ್ತಿದ್ದು, ಐದು ಸಾವಿರಕ್ಕೂ ಅಧಿಕ ಸಿಬ್ಬಂದಿ ಪ್ರಸಾದ ತಯಾರಿಕೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಸಾದದಲ್ಲಿ: ಅಕ್ಕಿ ಪಾಯಸ, ಬೂಂದಿ, ಕಾಯಿ ಹೋಳಿಗೆ, ಕಜ್ಜಾಯ, ಬಾದಾಮಿ ಹಲ್ವಾ, ಇಡ್ಲಿ-ಸಾಂಬಾರ್, ದೋಸೆ, ಪುಳಿಯೋಗರೆ, ಬಿಸಿಬೇಳೆ ಬಾತ್, ಮಸಾಲೆ ವಡೆ, ಉದ್ದಿನ ವಡೆ, ಕೋಸಂಬರಿ, ತರಕಾರಿ ಕೂಟು, ಅನ್ನ, ಮಜ್ಜಿಗೆ ಹುಳಿ ಸೇರಿದಂತೆ 20ಕ್ಕೂ ಹೆಚ್ಚು ಬಗೆಯ ಪದಾರ್ಥಗಳು ಇರಲಿವೆ.

ಒಟ್ಟಾರೆ, ಚೆನ್ನಮ್ಮ ಅವರ 11ನೇ ದಿನದ ಉತ್ತರಕ್ರಿಯಾ ಕಾರ್ಯಕ್ರಮಕ್ಕೆ ಆಗಮಿಸುವ ಲಕ್ಷಾಂತರ ಜನರಿಗೆ ಯಾವುದೇ ತೊಂದರೆಯಾಗದಂತೆ ದರ್ಶನ, ಪ್ರಸಾದ ವಿತರಣೆ, ವಾಹನ ಸಂಚಾರ ಹಾಗೂ ಗಣ್ಯರ ಆಗಮನ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಕೈಗೊಳ್ಳಲಾಗಿದೆ.

Continue Reading

Trending

error: Content is protected !!