Kodagu
ಗಾಳಿಬೀಡು ಗ್ರಾ.ಪಂ.ನೂತನ ಕಟ್ಟಡ ಉದ್ಘಾಟನೆ; ಗ್ರಾ.ಪಂ.ಅಭಿವೃದ್ಧಿಗೆ ಶ್ರಮಿಸಿ

ಮಡಿಕೇರಿ – ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಸೇರಿದಂತೆ ವಿವಿಧ ಯೋಜನೆಯಡಿ 47 ಲಕ್ಷ ರೂ. ವೆಚ್ಚದಲ್ಲಿ ಗಾಳಿಬೀಡು ಗ್ರಾಮ ಪಂಚಾಯಿತಿಯಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡವನ್ನು ಸಂಸದರಾದ ಪ್ರತಾಪ್ ಸಿಂಹ ಹಾಗೂ ಶಾಸಕರಾದ ಡಾ.ಮಂತರ್ ಗೌಡ ಅವರು ಮಂಗಳವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸಂಸದರಾದ ಪ್ರತಾಪ್ ಸಿಂಹ ಅವರು ಕೇಂದ್ರ ಸರ್ಕಾರದಿಂದ ಪ್ರತೀ ಗ್ರಾಮ ಪಂಚಾಯಿತಿಗೆ 38 ಲಕ್ಷ ರೂ.ನಷ್ಟು ನೇರವಾಗಿ ಅನುದಾನ ಬಿಡುಗಡೆಯಾಗುತ್ತಿದ್ದು, ಗ್ರಾ.ಪಂ.ಗಳು ಆರ್ಥಿಕವಾಗಿ ಸಬಲತೆ ಹೊಂದುವುದರ ಜೊತೆಗೆ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದ್ದಾರೆ.
ಕೇಂದ್ರದಿಂದ 14-15ನೇ ಹಣಕಾಸು ಆಯೋಗದಿಂದ ಪಂಚಾಯತ್ ಸೇವಾ ಕೇಂದ್ರದಡಿ ಗ್ರಾ.ಪಂ.ಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಗ್ರಾಮೀಣ ರಸ್ತೆ, ಚರಂಡಿ ಮತ್ತಿತರ ಮೂಲ ಸೌಲಭ್ಯಕ್ಕೆ ಒತ್ತು ನೀಡಲಾಗಿದೆ ಎಂದರು.
ಗಾಳಿಬೀಡು ಗ್ರಾ.ಪಂ.ಸೇರಿದಂತೆ ಕೊಡಗು ಜಿಲ್ಲೆಯ 60 ಕ್ಕೂ ಹೆಚ್ಚು ಕಡೆಗಳಲ್ಲಿ ಮೊಬೈಲ್ ಟವರ್ಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಪ್ರತಾಪ್ ಸಿಂಹ ಅವರು ಮಾಹಿತಿ ನೀಡಿದರು.
ಗ್ರಾ.ಪಂ.ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಸಂಸದರ ನಿಧಿಯಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಪ್ರತಾಪ್ ಸಿಂಹ ಅವರು ನುಡಿದರು.
ಮೈಸೂರು-ಬೆಂಗಳೂರು ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಶ್ರಿರಂಗಪಟ್ಟಣ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಸಂಪಾಜೆ-ಮಾಣಿ ರಸ್ತೆ ಅಭಿವೃದ್ಧಿ ಹಾಗೂ ಕರಿಕೆ-ಭಾಗಮಂಡಲ ರಸ್ತೆ ಅಭಿವೃದ್ಧಿಗೆ ಕ್ರಮವಹಿಸಲಾಗುವುದು. ಅಮೃತ ಯೋಜನೆಯಡಿ 146 ಕೋಟಿ ರೂ. ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ ಎಂದು ಪ್ರತಾಪ್ ಸಿಂಹ ಅವರು ತಿಳಿಸಿದರು.
ನಲ್ಲಿ ನೀರು ಸಂಪರ್ಕ, ಅಡುಗೆ ಅನಿಲ ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು, ಪೈಪ್ ಮೂಲಕ ಅಡುಗೆ ಅನಿಲ ಪೂರೈಸಲಾಗುವುದು ಎಂದರು. ಕೊಡಗು ಜಿಲ್ಲೆಗೆ ಹೆಚ್ಚಿನ ಗಮನಹರಿಸಲಾಗುವುದು, 15 ನೇ ಹಣಕಾಸು ಯೋಜನೆಯಡಿ ಕೊಡಗು ಜಿಲ್ಲೆಗೆ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದರು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಸಾವಿರ ಮನೆ ನಿರ್ಮಾಣಕ್ಕೆ ವಸತಿ ಸಚಿವರಾದ ಜಮೀರ್ ಅಹ್ಮದ್ ಅವರು ಅನುಮೋದನೆ ನೀಡಿದ್ದು, ವಸತಿ ಇಲ್ಲದ, ನಿವೇಶನ ಇರುವವರ ಗ್ರಾ.ಪಂ. ಮೂಲಕ ಪಟ್ಟಿ ಒದಗಿಸುವಂತೆ ಗ್ರಾ.ಪಂಗಳಿಗೆ ತಿಳಿಸಿದರು.
ಮಡಿಕೇರಿ ನಗರಕ್ಕೆ ನೀರು ಪೂರೈಕೆಯಾಗುವ ಕೂಟುಹೊಳೆ, ಕುಂಡಾಮೇಸ್ತ್ರಿ ಕುಡಿಯುವ ನೀರು ಯೋಜನೆ ಸಂಬಂಧಿಸಿದಂತೆ ಪಂಚಾಯತ್ ರಾಜ್ ಇಲಾಖೆಯಿಂದ 300 ಕೋಟಿ ರೂ. ಬಿಡುಗಡೆಗೆ ಒಪ್ಪಿಗೆ ನೀಡಿದ್ದು, ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಗಮನಹರಿಸುವಂತೆ ಶಾಸಕರು ತಿಳಿಸಿದರು.
ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಪೂರೈಸಬೇಕು. ಗ್ರಾಮ ಪಂಚಾಯಿತಿಗೆ ಸಾರ್ವಜನಿಕರು ಭೇಟಿ ನೀಡಿದ ಸಂದರ್ಭದಲ್ಲಿ ಸ್ಪಂದಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಮನಹರಿಸಬೇಕು. 47 ಲಕ್ಷ ರೂ. ವೆಚ್ಚದಲ್ಲಿ ಗ್ರಾ.ಪಂ.ಕಟ್ಟಡವನ್ನು ನಿರ್ಮಿಸಲಾಗಿದ್ದು, ಉತ್ತಮವಾಗಿದೆ ಎಂದು ತಿಳಿಸಿದರು.
ಗ್ರಾ.ಪಂ.ಸದಸ್ಯರಾದ ಸುಭಾಷ್ ಸೋಮಯ್ಯ ಅವರು ಗ್ರಾ.ಪಂ.ಅಭಿವೃದ್ಧಿ ಸಂಬಂಧಿಸಿದಂತೆ ಮಾತನಾಡಿ ಡಿಜಿಟಲ್ ಗ್ರಂಥಾಲಯ, ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಕೊಠಡಿ, ಸಭಾ ಕೊಠಡಿ, ಸಭೆ ಸಮಾರಂಭ ನೆರವೇರಿಸಲು ಸಭಾಂಗಣ ಹೀಗೆ ಹಲವು ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಗ್ರಾ.ಪಂ.ಭವನ ನಿರ್ಮಾಣ ಆಗಿದೆ ಎಂದರು.
ಗ್ರಾ.ಪಂ. ಅಧ್ಯಕ್ಷರಾದ ಉಷಾ, ತಾ.ಪಂ.ಇಒ ಶೇಖರ್ ಅವರು ಮಾತನಾಡಿದರು. ಗ್ರಾ.ಪಂ. ಉಪಾಧ್ಯಕ್ಷರಾದ ಪೆಮ್ಮಯ್ಯ ಪಿಡಿಒ ಶಶಿಕಿರಣ, ಗ್ರಾಪಂ ಸದಸ್ಯರು ಇತರರು ಇದ್ದರು.
Kodagu
ಕೊಡಗು ಜಿಲ್ಲಾಡಳಿತ ಭವನದಲ್ಲಿ ಆಧುನಿಕ ತಂತ್ರಜ್ಞಾನದ ಲಿಫ್ಟ್ ಭಾಗ್ಯ

ಕೊಡಗು: ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾಡಳಿತ ಭವನದ ಸಂಕೀರ್ಣಕ್ಕೆ ಆಧುನಿಕ ತಂತ್ರಜ್ಞಾನದ ನೂತನ ಲಿಫ್ಟ್ ಅಳವಡಿಕೆ ಆಗಲಿದೆ. ಸುಮಾರು 14 ಲಕ್ಷ ರೂ ವೆಚ್ಚದಲ್ಲಿ ಸಂಪೂರ್ಣ ರಸ್ಟ್ ಪ್ರೂಫ್ ಲಿಫ್ಟ್ ಇನ್ನು ಮೂರು ವಾರಗಳ ಒಳಗಾಗಿ ಅಳವಡಿಸಿ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ ಎಂದು ನಿರ್ವಹಣೆ ಹೊತ್ತ ಸಂಸ್ಥೆ ಮಾಹಿತಿ ನೀಡಿದೆ.
ಜಿಲ್ಲಾಡಳಿತ ಭವನ ಲೋಕಾರ್ಪಣೆ ಗೊಂಡು ಐದು ವರ್ಷಗಳಲ್ಲಿಯೇ ಪದೇ ಪದೇ ರಿಪೇರಿಯಾಗಲು ಆರಂಭಿಸಿತ್ತು. ಕಟ್ಟಡ ನಿರ್ಮಾಣ ಕಾಲದಲ್ಲಿ ಕಾಮಗಾರಿ ವಸ್ತುಗಳನ್ನು ಸಾಗಿಸಲು ಲಿಫ್ಟ್ ಬಳಕೆಯಾದ್ದರಿಂದ ಅದರ ಸಾಮರ್ಥ್ಯ ಕೂಡ ಕುಗ್ಗಿತ್ತು. ಕಳೆದ ಡಿಸೆಂಬರ್ ನಲ್ಲಿ ಸಂಪೂರ್ಣ ಬಂದ್ ಆಗಿತ್ತು. ಕೊಡಗು ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ ಅವರಿಂದ ಸಂಪೂರ್ಣ ಮಾಹಿತಿ ಪಡೆದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಅವರು ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಮತ್ತು ಡಾ ಮಂತರ್ ಗೌಡ ಅವರು ಲಿಫ್ಟ್ ನ್ನು ರಿಪೇರಿ ಮಾಡುವ ಬದಲು ಹೊಸ ಲಿಫ್ಟ್ ಖರೀದಿಗೆ ಸೂಚನೆ ನೀಡಿದ ಮೇರೆಗೆ ದಿನಾಂಕ 31-1-2025 ರಂದು ಜಿಲ್ಲಾಧಿಕಾರಿಗಳು ಟೆಂಡರ್ ಕರೆದು ದಿನಾಂಕ 4-3-2025 ರಂದು ಕಾರ್ಯಾದೇಶವನ್ನು ಲಿಫ್ಟ್ ತಯಾರಿಕೆಯಲ್ಲಿ ಪ್ರತಿಷ್ಠಿತ ಸಂಸ್ಥೆ ಯಾಗಿರುವ ಬೆಂಗಳೂರಿನ ಸ್ವಿಫ್ಟ್ ಸ್ಪೇಸ್ ಎಲಿವೇಟರ್ಸ್ ಸಂಸ್ಥೆಗೆ ನೀಡಲಾಯಿತು.
ಹಳೆಯ ಲಿಫ್ಟ್ ನ್ನು ಸ್ಥಳಾಂತರಿಸುವ ಕೆಲಸ ಮುಗಿದಿದ್ದು, ಹೊಸ ಲಿಪ್ಟ್ ಅಳವಡಿಕೆಗೆ ಸಂಸ್ಥೆ ಸಿದ್ದತೆ ನಡೆಸುತ್ತಿದೆ. ಇನ್ನು ಮೂರು ವಾರಗಳಲ್ಲಿ ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗಲಿದೆ. ಲಿಫ್ಟ್ ಇಲ್ಲದೆ ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ವೃದ್ದರು ಮತ್ತು ವಿಶೇಷ ಚೇತನರು ಜಿಲ್ಲಾಡಳಿತ ಭವನದ ಮೂರನೇ ಮಹಡಿ ತಲುಪಲು ಪ್ರಯಾಸ ಪಡುತ್ತಿದ್ದು, ಈಗ
ಉಸ್ತುವಾರಿ ಸಚಿವರು, ಕೊಡಗಿನ ಶಾಸಕದ್ವಯರು ಹಾಗೂ ಕೊಡಗು ಜಿಲ್ಲಾಧಿಕಾರಿಗಳ ಕಾಳಜಿಯಿಂದ ನಿಟ್ಟುಸಿರು ಬಿಡುವಂತೆ ಆಗಿದೆ.
Kodagu
ಮಾ.25 ಮತ್ತು 26 ರಂದು ಉಸ್ತುವಾರಿ ಸಚಿವರ ಕೊಡಗು ಜಿಲ್ಲಾ ಪ್ರವಾಸ

ಮಡಿಕೇರಿ : ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಮಾರ್ಚ್, 25 ಮತ್ತು 26 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಮಾನ್ಯ ಸಚಿವರು ಮಾರ್ಚ್, 25 ರಂದು ಬೆಳಗ್ಗೆ 11 ಗಂಟೆಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ‘ಸುಸ್ಥಿರ ಅಭಿವೃದ್ಧಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ’ ಎಂಬ ಶೀರ್ಷಿಕೆಯಡಿ ಕನ್ನಡದಲ್ಲಿ 5ನೇ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ಸಂಜೆ 4.30 ಗಂಟೆಗೆ ಪೊನ್ನಂಪೇಟೆ ತಾಲ್ಲೂಕು ನಾಗರಹೊಳೆ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗೆ ಭೇಟಿ ನೀಡಲಿದ್ದಾರೆ.
ಮಾರ್ಚ್, 26 ರಂದು ಬೆಳಗ್ಗೆ 10.30 ಗಂಟೆಗೆ ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲ್ಲೂಕುಗಳ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ವೀರಭದ್ರ ಹಂಚಿನಾಳ ಅವರು ತಿಳಿಸಿದ್ದಾರೆ.
Kodagu
ಮಡಿಕೇರಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ಲೈಬಸ್ ಸಂಚಾರ

ಮಡಿಕೇರಿ : ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ಲೈಬಸ್ ಸಂಚಾರಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ಕೆಎಸ್ಆರ್ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕರಾದ ಎಂ.ಎಂ.ಮೆಹಬೂಬ್ ಅಲಿ ಅವರು ತಿಳಿಸಿದ್ದಾರೆ.
ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯರಾತ್ರಿ 2.30 ಗಂಟೆಗೆ ಹೊರಟು ಮಡಿಕೇರಿಗೆ ಬೆಳಗ್ಗೆ 7.30 ಗಂಟೆಗೆ ತಲುಪಲಿದೆ.
ನಂತರ ಬೆಳಗ್ಗೆ 11.30 ಗಂಟೆಗೆ ಮಡಿಕೇರಿಯಿಂದ ಹೊರಟು ಸಂಜೆ 6 ಗಂಟೆಗೆ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲಿದೆ. ಕೆಎಸ್ಆರ್ಟಿಸಿ ಬೆಂಗಳೂರು ಕೇಂದ್ರ ವಿಭಾಗದ ನಾಲ್ಕನೇ ಘಟಕದಿಂದ ಪ್ಲೈ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮೆಹಬೂಬ್ ಅಲಿ ಅವರು ತಿಳಿಸಿದ್ದಾರೆ
-
Mandya7 hours ago
ಜನಮಿತ್ರ ಫಲಶೃತಿ: ಹೆಬ್ಬಾಡಿಹುಂಡಿ ಗ್ರಾಮದ ಸ್ಮಶಾನ ಜಾಗದ ರಸ್ತೆ ಬೇಲಿಗೆ ಸಿಗ್ತು ಉತ್ತರ
-
Hassan14 hours ago
ಹಾಸನದಲ್ಲಿ ಭಾರೀ ಮಳೆ: ಅಪಾರ ಪ್ರಮಾಣದ ಬೆಳೆ ಹಾನಿ
-
Mandya10 hours ago
ಜೆಎಸ್ಎಸ್ ಕಾಲೇಜಿನಲ್ಲಿ ಪತ್ರಿಕಾ ಬರಹ ಕುರಿತು ಕಾರ್ಯಾಗಾರ
-
Kodagu12 hours ago
ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
-
Mandya9 hours ago
ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ತಿಳಿಸಿ
-
Hassan13 hours ago
ಕ್ಷಯ ಮುಕ್ತ ಭಾರತವನ್ನಾಗಿ ಮಾಡಲು ಎಲ್ಲಾರೂ ಕೈಜೋಡಿಸಿ: ಡಿಸಿ ಸಿ. ಸತ್ಯಭಾಮ
-
Kodagu10 hours ago
ನಿವೃತ್ತ ಶಿಕ್ಷಕಿಯಿಂದ ಕಕ್ಕಬ್ಬೆ ಯುವಕಪಾಡಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಚಾರಣ ಭಾಗ್ಯ
-
Kodagu7 hours ago
ಮಡಿಕೇರಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ಲೈಬಸ್ ಸಂಚಾರ