Mysore
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಮೇಕೆದಾಟು ಯೋಜನೆ ಪೂರ್ಣಗೊಳಿಸುತ್ತೇವೆ: ಡಿಸಿಎಂ ಡಿ.ಕೆ.ಶಿವಕುಮಾರ್
ಪಿರಿಯಾಪಟ್ಟಣ (ಮೈಸೂರು) ಜ. 24:
“ನಮ್ಮ ರೈತರ ರಕ್ಷಣೆಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಮೇಕೆದಾಟು ಯೋಜನೆ ಪೂರ್ಣಗೊಳಿಸುತ್ತೇವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಾಗ್ದಾನ ನೀಡಿದರು.
ಪಿರಿಯಾಪಟ್ಟಣ ತಾಲ್ಲೂಕಿನ 79 ಗ್ರಾಮಗಳ 150 ಕೆರೆಗಳಿಗೆ ಕಾವೇರಿ ನೀರು ತುಂಬಿಸುವ ಮುತ್ತಿನಮುಳುಸೋಗೆ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೇಳಿದ್ದಿಷ್ಟು;
“ಮೇಕೆದಾಟು ಬಗ್ಗೆ ಕಾಂಗ್ರೆಸ್ ಸರ್ಕಾರ ಚಿಂತನೆ ಮಾಡುತ್ತಿಲ್ಲ ಎಂದು ಮಾಜಿ ಪ್ರಧಾನಿಗಳಾದ ದೇವೇಗೌಡರು ಹೇಳಿದ್ದಾರೆ. ದೇವೇಗೌಡರೇ ನೀವು ಮತ್ತು ಪ್ರಧಾನಿ ಮೋದಿ ಅವರು ಆತ್ಮೀಯರಿದ್ದೀರಿ, ಅವರ ಬಳಿ ಮಾತನಾಡಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿ.”
ಕಾವೇರಿ ನದಿ ನಮ್ಮ ತಾಯಿ, ಈ ತಾಯಿಯ ಕೃಪೆಯಿಂದ ನಾವೆಲ್ಲಾ ಬದುಕಿದ್ದೇವೆ. ಆದರೂ ಈ ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ 26 ಜನ ಬಿಜೆಪಿ ಎಂಪಿಗಳು ರಾಜ್ಯದ ಪರವಾಗಿ ಮಾತನಾಡುತ್ತಿಲ್ಲ. ಪ್ರತಾಪ್ ಸಿಂಹ ಅವರು ಪ್ರಧಾನಿಗಳಿಗೆ ಹೇಳಿ ಅನುಮತಿ ಕೊಡಿಸಬಹುದಲ್ಲವೇ? ಆದರೂ ಯಾರೂ ದನಿ ಎತ್ತುತ್ತಿಲ್ಲ.
ಕಾಂಗ್ರೆಸ್ ಪಕ್ಷ ಏನೂ ಕೆಲಸ ಮಾಡುತ್ತಿಲ್ಲ ಎಂದು ದೇವೇಗೌಡರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಮೇಕೆದಾಟು ಪರವಾಗಿ ನಾವು ಕಾನೂನು ಹೋರಾಟ ಮಾಡುತ್ತಿದ್ದೇವೆ. ಸುಪ್ರೀಂ ಕೋರ್ಟ್ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದವರಿಗೆ ಅಣೆಕಟ್ಟು ನಿರ್ಮಾಣ ಮಾಡಲು ಅಡ್ಡಿಪಡಿಸಬಾರದು ಎಂದು ಹೇಳಿದೆ.
ಮೇಕೆದಾಟು ಯೋಜನೆಯಿಂದ ಮುಳುಗಡೆಯಾಗುವ ಅರಣ್ಯ ಪ್ರದೇಶಗಳ ಬದಲಾಗಿ ಕಂದಾಯ ಭೂಮಿಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗುವುದು. ಚಾಮರಾಜನಗರ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ ಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಮರಗಳ ಎಣಿಕೆ ಕಾರ್ಯಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಮೇಕೆದಾಟು ಯೋಜನೆಯಿಂದ ಸುಮಾರು 66 ಟಿಎಂಸಿ ನೀರು ಸಂಗ್ರಹಿಸಬಹುದು. ಹಾರಂಗಿ, ಕಬಿನಿ, ಕೆಆರ್ಎಸ್, ಹೇಮಾವತಿ ಜಲಾಶಯಗಳಲ್ಲಿ ನೀರು ಇಲ್ಲದಿದ್ದಾಗ ಮೇಕೆದಾಟುವಿನಲ್ಲಿ ಸಂಗ್ರಹವಾದ ನೀರನ್ನು ತಮಿಳುನಾಡಿಗೆ ನೀಡಿ, ನಮ್ಮ ರೈತರನ್ನು ಬದುಕಿಸಬಹುದು ಎಂದು ಕಾವೇರಿ ತಾಯಿಯನ್ನು ಪೂಜಿಸಿ ಮೇಕೆದಾಟು ಪಾದಯಾತ್ರೆ ಹೊರಟೆವು.
“ನಮ್ಮ ನೀರು, ನಮ್ಮ ಹಕ್ಕು” ಎಂದು ಸಂಗಮದಿಂದ, ಬೆಂಗಳೂರಿಗೆ ಹೆಜ್ಜೆ ಹಾಕಿದೆವು. ಪಾದಯಾತ್ರೆ ವೇಳೆ ನಮ್ಮ ಮೇಲೆ ಅನೇಕ ಪ್ರಕರಣಗಳನ್ನು ದಾಖಲಿಸಿದರು. ನಮ್ಮ ಹೋರಾಟ ನೋಡಿ ಬೊಮ್ಮಾಯಿ ಅವರು 1 ಸಾವಿರ ಕೋಟಿ ರೂ. ಮೀಸಲಿಟ್ಟರು. ಆದರೆ ಈ ಹಣ ಏನಾಯಿತು? ಈ ವಿಚಾರವಾಗಿ ಬಿಜೆಪಿಯವರನ್ನು ಜೆಡಿಎಸ್ ಏಕೆ ಪ್ರಶ್ನಿಸುತ್ತಿಲ್ಲ?
2018 ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲೇ ಗುದ್ದಲಿಪೂಜೆಯಾದ ಮುತ್ತಿನಮುಳುಸೋಗೆ ಏತ ನೀರಾವರಿ ಯೋಜನೆ ನಮ್ಮಿಂದಲೇ ಉದ್ಘಾಟನೆಯಾಗುತ್ತಿದೆ. ಉಳುವವನೇ ಭೂಮಿಯ ಒಡೆಯ ಕಾನೂನು ಜಾರಿ ಮಾಡಿದ ಕಾಂಗ್ರೆಸ್ ಸದಾ ರೈತಪರವಾಗಿ ಕೆಲಸ ಮಾಡುತ್ತದೆ. ರೈತನಿಗೆ ಸಂಬಳ, ವರ್ಗಾವಣೆ, ಬಡ್ತಿ, ನಿವೃತ್ತಿ, ಪಿಂಚಣಿ ಸೇರಿದಂತೆ ಯಾವ ಸೌಲಭ್ಯವೂ ಇಲ್ಲ. ಆದ ಕಾರಣ ಎಲ್ಲಾ ಸರ್ಕಾರಗಳು ರೈತರ ಪರ ನಿಲ್ಲಬೇಕು.
ರೈತರ ಏಳಿಗೆಗೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಾನು, ಎಚ್.ಸಿ.ಮಹದೇವಪ್ಪ, ಬೋಸರಾಜು ಸೇರಿದಂತೆ ಎಲ್ಲರೂ ಶ್ರಮಿಸುತ್ತೇವೆ. ರೈತರ ಬೆನ್ನಿಗೆ ನಿಲ್ಲಲು ಸಚಿವರಾದ ವೆಂಕಟೇಶ್ ಅವರು ಅನೇಕ ಪ್ರಸ್ತಾವನೆಗಳನ್ನು ಸಲ್ಲಿಸಿದ್ದಾರೆ. ರೈತರ ಏಳ್ಗೆಗೆ, ಪಿರಿಯಾಪಟ್ಟಣ ಭಾಗದ ನೀರಿನ ಬವಣೆ ನಿವಾರಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ.
ಕಳೆದ 40 ವರ್ಷಗಳಲ್ಲೇ ಅತ್ಯಂತ ಹೆಚ್ಚು ಬಹುಮತವನ್ನು ಕರ್ನಾಟಕದ ಜನ ನೀಡಿದ್ದಾರೆ. ಮೈಸೂರು ಭಾಗದಲ್ಲೂ ನಮ್ಮ ಪಕ್ಷ ಉತ್ತಮ ಸಾಧನೆ ಮಾಡಿದೆ. 136 ಜನ ಶಾಸಕರನ್ನು, ಇಲ್ಲಿನ ಶಾಸಕ ವೆಂಕಟೇಶ್ ಅವರನ್ನು ಆಯ್ಕೆ ಮಾಡಿದ ಪಿರಿಯಾಪಟ್ಟಣ ಮತ್ತು ಕರ್ನಾಟಕದ ಜನತೆಗೆ ಋಣಿಯಾಗಿರುತ್ತೇವೆ.
ನುಡಿದಂತೆ ನಡೆದಿದ್ದೇವೆ:
ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಬಿಜೆಪಿ- ಜನತಾ ದಳದವರು ಏನು ಬೇಕಾದರೂ ಮಾತನಾಡಲಿ. ಏಕೆಂದರೆ ಎರಡೂ ಪಕ್ಷಗಳು ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು, ನಮ್ಮ ಶಕ್ತಿ ನೋಡಿ ಕಮಲ ಉದುರಿ ಹೋಯಿತು, ಮಹಿಳೆ ತೆನೆ ಎಸೆದು ಹೋದಳು. ಅದಕ್ಕೆ ದಳದವರ ಜೊತೆ ಬಿಜೆಪಿಯವರು ಸೇರಿಕೊಂಡಿದ್ದಾರೆ. ಜನತಾದಳದವರು ಬಿಜೆಪಿಯ ವಕ್ತಾರರಾಗಿದ್ದಾರೆ.
ನಮ್ಮ ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ಸಮೃದ್ಧವಾಗಿದೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು ನೋಡಿ ಪ್ರಧಾನಿ ಮೋದಿ ಅವರೇ ʼಮೋದಿ ಗ್ಯಾರಂಟಿʼ ಎಂದು ಜಾಹೀರಾತು ನೀಡುತ್ತಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುತ್ತಿದ್ದವರು, ದಿವಾಳಿಯಾಗುತ್ತದೆ ಎಂದು ಹೇಳುತ್ತಿದ್ದವರೇ ಈಗ ಗ್ಯಾರಂಟಿ ಯೋಜನೆಗಳ ಹಿಂದೆ ಬಿದ್ದಿದ್ದಾರೆ. ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ, ಉಚಿತ ವಿದ್ಯುತ್ ಗೃಹಜ್ಯೋತಿ ಯೋಜನೆ ಪ್ರತಿಯೊಬ್ಬರ ಮನೆ ತಲುಪಿದೆ. 1.4 ಕೋಟಿ ಮಹಿಳೆಯರ ಖಾತೆಗೆ ಲಕ್ಷ್ಮಿ ತಲುಪಿದ್ದಾಳೆ. ಯುವನಿಧಿ ಮೂಲಕ ಯುವ ಸಮುದಾಯಕ್ಕೆ ಆತ್ಮವಿಶ್ವಾಸ ತುಂಬುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳಿಂದ ಜನರ ಬದುಕಿನಲ್ಲಿ ಬದಲಾವಣೆ ಆಗು ತ್ತಿದೆ.
ನಾವೇನೂ ಹಿಂದೂಗಳಲ್ಲವೇ:
ನಮಗೆ ಭಾವನೆಗಳಿಗಿಂತ ಜನರಿಗೆ ಬದುಕು ಮುಖ್ಯ. ಕೆಲವೊಬ್ಬರು ಭಾವನೆಯ ಮೇಲೆ ರಾಜಕೀಯ ಮಾಡಲು ಹೊರಟಿದ್ದಾರೆ. ನಾವೇನೂ ಹಿಂದೂಗಳಲ್ಲವೇ, ಆಂಜನೇಯ ನಮ್ಮ ದೇವರಲ್ಲವೇ?, ನಮಗೆಲ್ಲಾ ದೇವರ ಮೇಲೆ ನಂಬಿಕೆ ಇಲ್ಲವೇ? ಸಿದ್ದರಾಮಯ್ಯ ಅವರ ಹೆಸರಿನಲ್ಲಿ ರಾಮನಿದ್ದಾನೆ, ನನ್ನ ಹೆಸರಿನಲ್ಲಿ ಶಿವ, ವೆಂಕಟೇಶ್ ಅವರ ಹೆಸರಿನಲ್ಲಿ ವೆಂಕಟೇಶ, ಶಿವನ ಅವತಾರ ಮಹದೇವನ ಹೆಸರಿನ ಹೆಚ್.ಸಿ. ಮಹದೇವಪ್ಪ ಇಲ್ಲವೇ?, ನಾವೇನೂ ಹಿಂದೂಗಳಲ್ಲವೇ? ನಮ್ಮೆಲ್ಲರ ಬದುಕಿಗೆ ನಮ್ಮದೇ ಆದ ವಿಚಾರ ಇರುತ್ತದೆ.
ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೆ, ಪೂಜೆ ನೂರಾದರೂ ಭಕ್ತಿವೊಂದೇ, ಕರ್ಮ ಹಲವಾದರೂ ನಿಷ್ಠೆವೊಂದೇ, ದೇವನೊಬ್ಬ ನಾಮ ಹಲವು.ನಾವು ನೂರಾರು ದೇವರನ್ನು ಪೂಜೆ ಮಾಡಿಕೊಂಡು ಬಂದಿದ್ದೇವೆ. ಸಿದ್ದರಾಮಯ್ಯ ಅವರ ಅಕ್ಕಿಗೆ ಅರಿಶಿನ ಬೆರೆಸಿದರೆ ಅದೇ ಮಂತ್ರಾಕ್ಷತೆ ಎನ್ನುತ್ತಿದ್ದಾರೆ. ಜನರ ಹಸಿವಿಗೆ “ಅನ್ನಭಾಗ್ಯ”ವೇ ಮಂತ್ರಾಕ್ಷತೆ, ನಿರುದ್ಯೋಗಕ್ಕೆ “ಯುವನಿಧಿ”ಯೇ ಮಂತ್ರಾಕ್ಷತೆ, ಮಹಿಳೆಯರ ಕಷ್ಟಕ್ಕೆ “ಗೃಹಲಕ್ಷ್ಮಿ”ಯೇ ಮಂತ್ರಾಕ್ಷತೆ, ಮಹಿಳೆಯರ ಪ್ರಯಾಣಕ್ಕೆ “ಶಕ್ತಿ”ಯೇ ಮಂತ್ರಾಕ್ಷತೆ, ಮನೆಯ ಬೆಳಕಿಗೆ “ಗೃಹಜ್ಯೋತಿ”ಯೇ ಮಂತ್ರಾಕ್ಷತೆ”.
ಮಾತೃಭಾಷೆ ಕನ್ನಡ ಬೆಳೆಯಬೇಕು, ಉಳಿಯಬೇಕು ಎಲ್ಲರ ನಾಲಿಗೆಯಲ್ಲೂ ಕನ್ನಡ ನಲಿದಾಡಬೇಕು ಎಂದು ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಮಾಡಲಾಗಿದೆ. ಸಂವಿಧಾನದ ಪೀಠಿಕೆಯನ್ನು ಪ್ರತಿ ಶಾಲೆಗಳಲ್ಲಿ ಓದುವಂತೆ ಮಾಡಿದ್ದೇವೆ.
ನಾವು ನುಡಿದಂತೆ ನಡೆಯುತ್ತೇವೆ. ಇನ್ನೂ ನೂರಾರು ಯೋಜನೆಗಳನ್ನು ಜನರ ಕಲ್ಯಾಣಕ್ಕೆ ಜಾರಿ ಮಾಡುತ್ತೇವೆ. ನಮಗೆ ಅಧಿಕಾರ ಕೊಟ್ಟ ಜನರ ಋಣ ತೀರಿಸುವ ಕೆಲಸ ಮಾಡುತ್ತೇವೆ.
ಲೋಕಸಭಾ ಚುನಾವಣೆಯಲ್ಲಿ ಮತ ಹಾಕಿ
ಸಭಿಕರೊಬ್ಬರು ಡಿ.ಕೆ.ಶಿವಕುಮಾರ್ ಅವರಿಗೆ ಜೈ ಎಂದಾಗ “ಪಾರ್ಲಿಮೆಂಟ್ ಚುನಾವಣೆಯಲ್ಲಿ ಮತ ಹಾಕಿ, ಇನ್ನೂ ಜೋರಾಗಿ ಜೈಕಾರ ಹಾಕಬಹುದು ಎಂದು ಹೇಳಿ ಆತನಿಗೆ ಸುಮ್ಮನೆ ಕೂರುವಂತೆ ಸೂಚಿಸಿದರು.

Mysore
ನಮ್ಮೂರ ಶಾಲೆ ಮುಚ್ಚಲು ಬಿಡುವುದಿಲ್ಲ: ಬಡಗಲ ಹುಂಡಿ ಗ್ರಾಮಸ್ಥರ ಪ್ರತಿಭಟನೆ
ಮೈಸೂರು: ಕೆಎಸ್ಪಿ- ಮ್ಯಾಗ್ನೆಟ್ ಹೆಸರಿನಲ್ಲಿ ಮುಚ್ಚಲು ಹೊರಟಿರುವ ವರುಣ ಕ್ಷೇತ್ರದ ಬಡಗಲಹುಂಡಿ ಗ್ರಾಮದ ಸರ್ಕಾರಿ ಶಾಲೆಯನ್ನು ಉಳಿಸಲು ಬಡಗಲಹುಂಡಿ ಗ್ರಾಮಸ್ಥರು ಎಐಡಿಎಸ್ಒ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ನಮ್ಮೂರ ಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ’ ಎಂದು ಸರ್ಕಾರದ ವಿರುದ್ಧ ಒಕ್ಕೊರಲಿನಿಂದ ಧ್ವನಿಯೆತ್ತಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ಒ ಜಿಲ್ಲಾ ಉಪಾಧ್ಯಕ್ಷ ಸ್ವಾತಿ ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ 40,000ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ರಾಜ್ಯ ಸರ್ಕಾರ ಮುಚ್ಚಲು ಮುಂದಾಗಿದೆ. ಈ ಯೋಜನೆ ಭಾಗವಾಗಿ ವರಕೊಡು ಹಿರಿಯ ಪ್ರಾಥಮಿಕ ಶಾಲೆಯನ್ನು ಮ್ಯಾಗ್ನೆಟ್ ಶಾಲೆಯನ್ನಾಗಿಸಿ ಬಡಗಲಹುಂಡಿ ಗ್ರಾಮದ ಶಾಲೆಯನ್ನು ಅಲ್ಲಿಗೆ ಸೇರಿಸಲಾಗುತ್ತಿದೆ. 50 ದಾಖಲಾತಿ ಹೊಂದಿರುವ ಈ ಶಾಲೆಯನ್ನು ಮುಚ್ಚುತ್ತಿರುವ ಸರ್ಕಾರವು ಬಡ ರೈತ-ಕಾರ್ಮಿಕರ ಮಕ್ಕಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರದ ಯೋಜನೆಯ ಅನುಷ್ಠಾನಕ್ಕೆ ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಸಭೆ ಬಳಿಕ ಮಾತನಾಡಿರುವ ಸಚಿವ ಎಚ್.ಕೆ. ಪಾಟೀಲ ಅವರು ಯೋಜನೆ ಜಾರಿಗಾಗಿ ಕೆಲವು ಸರ್ಕಾರಿ ಶಾಲೆಗಳನ್ನು ಮುಚ್ಚಬೇಕಾಗುತ್ತದೆ ಎಂದಿದ್ದಾರೆ ಎಂದರು.
ಸಮುದಾಯದ ನಡುವೆ ಇರುವ ಊರಿನ ಶಾಲೆಗಳನ್ನು ಮುಚ್ಚಿ, ಮಕ್ಕಳನ್ನು ದೂರದ ಶಾಲೆಗೆ ತಲುಪಿಸಲು ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳುತ್ತಿರುವ ಸರ್ಕಾರವು ಸಾರಿಗೆ ವ್ಯವಸ್ಥೆಯ ಹೊರೆಯನ್ನು ಎಸ್ ಡಿ ಎಂ ಸಿ ತಲೆಯ ಮೇಲೆ ಹೊರೆಸಿದೆ. ಮ್ಯಾಗ್ನೆಟ್ ಶಾಲೆಯ ನಿರ್ವಹಣೆಯನ್ನು ಹೊರಗುತ್ತಿಗೆ ಕೊಡಲಾಗುತ್ತದೆ. ಕ್ರಮೇಣವಾಗಿ ಸರ್ಕಾರಿ ಶಾಲೆಗಳನ್ನು ಖಾಸಗೀಕರಣಗೊಳಿಸಿ ಬಡ ಮಕ್ಕಳನ್ನು ಶಾಶ್ವತವಾಗಿ ದೂರ ತಳ್ಳುವ ಹುನ್ನಾರ ಎಂದು ಸರ್ಕಾರದ ನಿರ್ಧಾರವನ್ನು ಖಂಡಿಸಿದರು.
ಬಡಗಲಗುಂಡಿ ಶಾಲೆ ಉಳಿಸುವ ಹೋರಾಟಕ್ಕಾಗಿ ಸಾರ್ವಜನಿಕ ಶಿಕ್ಷಣ ಉಳಿಸಿ ಹೋರಾಟ ಸಮಿತಿಯನ್ನು ರಚಿಸಲಾಯಿತು.
ಕುಮಾರ್ ಅವರು ಅಧ್ಯಕ್ಷರಾಗಿ ,ಮಹಾದೇವ್ ಅವರು ಉಪಾಧ್ಯಕ್ಷರಾಗಿ, ಯೋಗೇಶ್ ಅವರು ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಹೋರಾಟ ಸಮಿತಿಯ ಅಧ್ಯಕ್ಷರಾದ ಕುಮಾರ್ ಅವರು ಮಾತನಾಡಿ, ಬಡವರ ಮಕ್ಕಳು ಓದುವ ಗ್ರಾಮೀಣ ಭಾಗದ ಶಾಲೆಗಳನ್ನು ಸೌಲಭ್ಯ ಒದಗಿಸಿ ಅಭಿವೃದ್ಧಿ ಪಡಿಸಬೇಕಾದ ಸರ್ಕಾರವೇ ಇಂದು ಶಾಲೆಗಳನ್ನು ಮುಚ್ಚುತ್ತಿದೆ. ಬದಲಿಗೆ ಖಾಸಗೀ ಶಿಕ್ಷಣ ಸಂಸ್ಥೆಗಳ ಲಾಭಕ್ಕಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚಿ ಹಣವಂತರಿಗೆ ಮಾತ್ರ ಶಿಕ್ಷಣ ಎಂಬ ಷಡ್ಯಂತ್ರವನ್ನು ಸರ್ಕಾರ ರಚಿಸಿದೆ. ಬಡಗಲ ಹುಂಡಿ ಗ್ರಾಮಸ್ಥರೆಲ್ಲ ಒಗ್ಗಟ್ಟಿನಿಂದ ಹೋರಾಡುತ್ತೇವೆ. ಸರ್ಕಾರ ಜನರ ಹೋರಾಟವನ್ನು ಎದುರಿಸಲು ಸಿದ್ಧವಾಗಲಿ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಎಐಡಿಎಸ್ಒ ಪದಾಧಿಕಾರಿಗಳಾದ ಸ್ವಾತಿ, ಚಂದ್ರಿಕಾ, ಹೇಮಲತಾ, ಅಭಿಷೇಕ್, ನಂದೀಶ್, ಗ್ರಾಮಸ್ಥರಾದ ಕುಮಾರ್, ಮಹದೇವ್, ಯೋಗೇಶ್, ಎಚ್.ನಾಗರಾಜು ,ಮಂಜುನಾಥ್, ರಾಮು, 30ಕ್ಕೂ ಹೆಚ್ಚು ಊರಿನ ಗ್ರಾಮಸ್ಥರು ಹಾಗೂ ಪೋಷಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Mysore
ಸಿಟಿಜನ್ಸ್ ಶಿಕ್ಷಣ ಸಂಸ್ಥೆ ಶಿಕ್ಷಣ ಮತ್ತು ಕ್ರೀಡೆಗೆ ಉತ್ತಮ ವಾತಾವರಣದಲ್ಲಿದೆ : ಶಾಸಕ ದರ್ಶನ್ ಧ್ರುವನಾರಾಯಣ್ z
ವರದಿ : ಮಹದೇವಸ್ವಾಮಿ ಪಟೇಲ್
ನಂಜನಗೂಡು: ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಇಲ್ಲಿನ ಸಿಟಿಜನ್ ಶಿಕ್ಷಣ ಸಂಸ್ಥೆಯು ಶಿಕ್ಷಣ ಮತ್ತು ಕ್ರೀಡೆಗೆ ಉತ್ತಮ ವಾತಾವರಣವನ್ನುಂಟು ಮಾಡಿಕೊಂಡಿದ್ದು ಈ ಸಂಸ್ಥೆಯು ಸಾವಿರಾರು ಪ್ರತಿಭಾವಂತರನ್ನು ಸಮಾಜಕ್ಕೆ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ರವರು ಸಿಟಿಜನ್ ಶಿಕ್ಷಣ ಸಂಸ್ಥೆಯ ಕಾರ್ಯಸಾಧನೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಸಿಟಿಜನ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಎರಡು ದಿನಗಳ ಕಾಲ ನಡೆದ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಇಲ್ಲಿ ಎರಡು ದಿನಗಳು ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ನಡೆದಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಗಳನ್ನು ಪ್ರದೇಶಿಸಲು ಉತ್ತಮ ವೇದಿಕೆಯನ್ನು ಕಲ್ಪಿಸಿ ಕೊಟ್ಟಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ನಂಜನಗೂಡು ತಾಲೂಕಿಗೆ ಯುನಿವರ್ಸಿಟಿಗಳು ಪ್ರಾರಂಭವಾಗಲಿದ್ದು ನಂಜನಗೂಡು ತಾಲೂಕು ಶಿಕ್ಷಣದ ಕೇಂದ್ರವಾಗಲಿದೆ ಎಂದು ಭವಿಷ್ಯ ನುಡಿದರು.
ಸಿಟಿಸನ್ ಶಿಕ್ಷಣ ಸಮೂಹದ ಸಂಸ್ಥೆಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿ, ಆಡಳಿತ ಮಂಡಳಿಯವರ ಕಾರ್ಯ ಸಾಧನೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್ .ಸಿ. ಬಸವರಾಜು, ಪ್ರಥಮ ದರ್ಜೆ ಗುತ್ತಿಗೆದಾರ ಪದ್ಮನಾಭ ರಾವ್, ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮಸೂದ ಜಾವಿದ್, ಕಾರ್ಯದರ್ಶಿ ಮೊಹಮ್ಮದ್ ಅಲಿ, ಸೇರಿದಂತೆ ಎಲ್ಲಾ ಪ್ರಮುಖರುಗಳು ಭಾಗವಹಿಸಿದ್ದರು.
ಸಿಟಿಜನ್ಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ವಾರ್ಷಿಕೋತ್ಸವವು ಎರಡು ದಿನ ಮಕ್ಕಳ ಆಕರ್ಷಕ ನೃತ್ಯಗಳು ಯಶಸ್ವಿಯಾಗಿ ನಡೆಯಿತು.

ಮೊದಲನೇ ದಿನದ ಕಾರ್ಯಕ್ರಮದಲ್ಲಿ ಜಾವೀದ್ ಮತ್ತು ಅಹಮದ್ ಮತ್ತು ಪತ್ರಕರ್ತ ನಡುವಿನ ಅವಿನಾಭವ ಸಂಬಂಧ ಪ್ರಯುಕ್ತ ಗೌರವ ಪ್ರೀತಿ ಅನ್ಯುನ್ಯಕ್ಕಾಗಿ ಪ್ರತಿವರ್ಷ ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಪತ್ರಕರ್ತರು ಒಬ್ಬರಿಗೆ ಶ್ರೀ ಜಾವಿದ್ ಅಹಮದ್ ಮಾಧ್ಯಮ ಪ್ರಶಸ್ತಿ ಕಳೆದ ವರ್ಷದಿಂದ ಪ್ರಾರಂಭಗೊಂಡಿದ್ದು ಈ ಬಾರಿ ಹಿರಿಯ ಪತ್ರಕರ್ತ ಕೆಂಪೇಗೌಡರು ಈ ಪ್ರಶಸ್ತಿಗೆ ಬಾಜನರಾದರು.
ಸಮಾರಂಭದಲ್ಲಿ ಭಾಗವಹಿಸಿದ್ದ ಹಿರಿಯ ಗುತ್ತಿಗೆದಾರದ ಯು.ಏನ್ ಪದ್ಮನಾಭರಾವ್ ಬಿ.ಇ.ಓ.ಮಹೇಶ್ ಸಂಸ್ಥೆಯ ಕಾರ್ಯದರ್ಶಿ ನೂರ್ ಮಹಮ್ಮದ್ ಅಲಿ ಹಾಗೂ ಸಂಸ್ಥೆಯ ಮುಖ್ಯಸ್ಥರುಗಳು ಶ್ರೀ ಕೆಂಪೇಗೌಡರಿಗೆ ಪ್ರಶಸ್ತಿ ಫಲಕಗಳನ್ನು ನೀಡಿ ಗೌರವಿಸಿದರು.
ಮಕ್ಕಳ ಆಕರ್ಷಕ ನೃತ್ಯಗಳು ಸೇರಿದ್ದ ಸಹಸ್ರಾರು ಪೋಷಕರುಗಳವರಿಗೆ ರಂಜಿಸಿದವು.
ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಮಸೂದ ಜಾವಿದ್ ಮ್ಯಾನೇಜ್ಮೆಂಟ್ ಮೆಂಬರ್ ಆದ ಹನಿಯಾ ಹಲಿ ಆಡಳಿತ ಅಧಿಕಾರಿ ಸಲ್ಮಾನ್ ಶರೀಫ್, ಮುಖ್ಯೋಪಾಧ್ಯಾಯರುಗಳಾದ ಹೇನಾಕಣ್ಣನ್, ಪುಟ್ಟಸ್ವಾಮಿ, ಪ್ರಾಂಶುಪಾಲರುಗಳಾದ ಮೈತುಲಿ ಲಕ್ಷ್ಮಣ್,ಪ್ರಸಾದ್, ಗುರುಪ್ರಸಾದ್ ಸತೀಶ್ ಭಟ್ ಹಾಗೂ ಶಾಲೆಯ ಮುಖ್ಯಸ್ಥರುಗಳು ಸಿಬ್ಬಂದಿ ವರ್ಗದವರು ಪೋಷಕರುಗಳು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
Mysore
ಕೊಲ್ಕತ್ತಾದ ಮೈಸೂರು ಉದ್ಯಾನಕ್ಕೆ 10ನೇ ಚಾಮರಾಜ ಒಡೆಯರ್ ನಾಮಫಲಕ ಅಳವಡಿಸಲು ಪತ್ರ
ಮೈಸೂರು: “ಕೊಲ್ಕತಾದಲ್ಲಿರುವ ‘ಮೈಸೂರು ಉದ್ಯಾನ’ದ ಬಳಿ 10ನೇ ಚಾಮರಾಜ ಒಡೆಯರ್ ಅವರ ಮಾಹಿತಿ ಫಲಕ ಅಳವಡಿಸಲು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್. ರಘು (ಕೌಟಿಲ್ಯ) ಕೊಲ್ಕತಾ ಮುನ್ಸಿಪಲ್ ಆಯುಕ್ತರಿಗೆ ತಮ್ಮ ನೈಪುಣ್ಯ ಶಿಕ್ಷಣ ಸಂಸ್ಥೆಯ ಕಾಯಕ ಪ್ರತಿಷ್ಠಾನದ ಮುಖೇನ ಮನವಿ ಸಲ್ಲಿಸಿದ್ದಾರೆ.
ಮೈಸೂರು ಕೇಂದ್ರಿತ ಕಾಯಕ ಪ್ರತಿಷ್ಠಾನವು ದಕ್ಷಿಣ ಕರ್ನಾಟಕದಲ್ಲಿ ಶಿಕ್ಷಣ ಹಾಗೂ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ
ಟ್ರಸ್ಟ್ ಮೈಸೂರಿನಲ್ಲಿರುವ ಒಂದು ಟ್ರಸ್ಟ್ ಆಗಿದ್ದು, ಇದು ಶಿಕ್ಷಣ, ಸಂಸ್ಕೃತಿ, ಜಾನಪದ, ಪಾರಂಪರಿಕ ಮೌಲ್ಯಗಳ ಮಹತ್ವದ ಪ್ರಸಾರ ಹಾಗೂ ಐತಿಹಾಸಿಕ ಸ್ಥಳಗಳ ಜಾಗೃತಿ ಹಾಗೂ ಸಂರಕ್ಷಣೆ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು ಬರುತ್ತಿದೆ.

ಮೈಸೂರು ರಾಜಮನೆತನದ 10ನೇ ಚಾಮರಾಜೇಂದ್ರ ಒಡೆಯರ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯ 1881- 1947 ಅವಧಿಯು ಭಾರತೀಯ ಇತಿಹಾಸದಲ್ಲೂ ಸುವರ್ಣಾಕ್ಷರಗಳಲ್ಲಿ ಬರೆದಿರುವ ಯುಗ. ಆ ದಿನಗಳಲ್ಲಿ ಆಧುನಿಕ ಮೈಸೂರು ಸಂಸ್ಥಾನವು ಭಾರತದ ಅತ್ಯಂತ ಪ್ರಗತಿಪರ ರಾಜ್ಯಗಳಲ್ಲಿ ಒಂದಾಗಿತ್ತು.
-1911 ರವರೆಗೆ ಕೊಲ್ಕತ್ತಾ ಬ್ರಿಟಿಷ್ ರಾಜರ ರಾಜಧಾನಿಯಾಗಿತ್ತು. ಆ ದಿನಗಳಲ್ಲಿಯೇ 10ನೇ ಚಾಮರಾಜೇಂದ್ರ ಒಡೆಯರ್ ಅವರು ಆಗಿನ ಗವರ್ನರ್ ಜನರಲ್ ಅವರನ್ನು ಭೇಟಿ ಮಾಡಲು ಕಲ್ಕತ್ತಾಗೆ ಹೋಗಿದ್ದರು.ಆಗ
ಇದ್ದಕ್ಕಿದ್ದಂತೆ ಅವರು ಡಿಫ್ತೀರಿಯಾದಿಂದ ಅನಾರೋಗ್ಯಕ್ಕೆ ತುತ್ತಾಗಿ 1894ನೇ ಡಿಸೆಂಬರ್ 28 ರಂದು ಕಲ್ಕತ್ತಾದಲ್ಲಿ ನಿಧನರಾದರು.
ಅವರ ದೇಹವನ್ನು ಸಹನಗರದ ಟೋಲಿಗುಂಜ್ ಕಿರೋತಲ ಘಾಟ್ ನಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಈ ಜಾಗವನ್ನು ಮೈಸೂರು ಉದ್ಯಾನವನ ಎಂದೇ ಕರೆಯಲಾಗುತ್ತಿದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಜನರಿಗೆ ಮೈಸೂರಿನ ರಾಜವಂಶಸ್ಥರ ಬಗ್ಗೆ ಅಪಾರ ಗೌರವ ಮತ್ತು ಅಭಿಮಾನ ಇದೆ.
10ನೇ ಚಾಮರಾಜೇಂದ್ರ ಒಡೆಯರ್ ಅವರಂತೂ ದಾರ್ಶನಿಕ ಆಡಳಿತಗಾರರಾಗಿದ್ದರು. ಆಧುನಿಕ ಮೈಸೂರು ರಾಜ್ಯ ನಿರ್ಮಾಣದಲ್ಲಿ ಅವರ ಪಾತ್ರ ಗಮನಾರ್ಹ. 1881 ರಲ್ಲಿ ಅವರು ಸ್ಥಾಪಿಸಿದ ಮೈಸೂರು ಪ್ರತಿನಿಧಿ ಸಭೆ ಪ್ರಜಾಪ್ರಭುತ್ವದ ಅಡಿಗಲ್ಲು. 1893ರಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ನಗರಕ್ಕೆ ತೆರಳಿದಾಗ, ಅದಕ್ಕೆ ನೆರವು ನೀಡಿದ್ದರು. ಇದೆಲ್ಲವನ್ನೂ ಭಾರತೀಯರು ಮರೆಯುವುದಿಲ್ಲ, ಮರೆಯಲಾಗದೂ ಕೂಡ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಕೋಲ್ಕತಾಗೆ ಭೇಟಿ ನೀಡುತ್ತಿದ್ದು, ಈ ಪೈಕಿ ಬಹುತೇಕರು ಮೈಸೂರು ಉದ್ಯಾನಕ್ಕೂ ಭೇಟಿ ನೀಡಿತ್ತಾರೆ. ಆದರೆ, ಆ ಉದ್ಯಾನದಲ್ಲಿ ಹತ್ತನೇ ಚಾಮರಾಜೇಂದ್ರ ಒಡೆಯರ್ ಅವರ ಕುರಿತು ಸಮಾಧಿ ಸ್ಥಳದ ಮಹತ್ವ ಸೇರಿದಂತೆ ಯಾವುದೇ ಮಾಹಿತಿಯೂ ಸಿಗುತ್ತಿಲ್ಲ. ಸಂದರ್ಶಕರಿಗೆ ತಿಳಿಸಲು ಕನಿಷ್ಠ ಪಕ್ಷ ಸೂಚನಾ ಫಲಕವೂ ಇಲ್ಲ. ಹಾಗಾಗಿ 10ನೇ ಚಾಮರಾಜೇಂದ್ರ ಒಡೆಯರ್ ಅವ ಜೀವನ ಮತ್ತು ಅವರ ಸಾಧನೆಗಳ ಬಗ್ಗೆ ಬಂಗಾಳಿ, ಇಂಗ್ಲಿಷ್, ಹಿಂದಿ ಮತ್ತು ಕನ್ನಡ ಸೇರಿ 4 ಭಾಷೆಗಳಲ್ಲಿ ಮಾಹಿತಿ ನೀಡುವ ತುರ್ತು ಇದೆ. ನಮ್ಮ ಟ್ರಸ್ಟ್ ಸ್ವಂತ ಖರ್ಚಿನಲ್ಲಿಯೇ ಮಾಹಿತಿ ಫಲಕವನ್ನು ಅಳವಡಿಸಲು ಉತ್ಸುಕವಾಗಿದೆ.
ಪಶ್ಚಿಮ ಬಂಗಾಳ ಸರಕಾರ, ಸ್ಥಳೀಯ ಪಾಲಿಕೆ ಆಡಳಿತ ನಮಗೆ ಅನುಮತಿ ನೀಡುವಂತೆ ಕೋರಿಕೊಳ್ಳುತ್ತೇನೆ. ಈ ವ್ಯವಸ್ಥೆಯನ್ನು ನಗರ ಪಾಲಿಕೆಯೇ ಮಾಡಿದರೂ ಸಂತೋಷ. ಈ ಸ್ಮಾರಕವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬೇಕೆಂದು ಕೋರುವೆ.
-ಈ ಉಪಕ್ರಮವು ಕೋಲ್ಕತಾಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಮೈಸೂರು ರಾಜಮನೆತನದ ಬಗ್ಗೆ ಅರಿವು ಮೂಡಿಸಲು, ಪಾರಂಪರಿಕ ತಾಣದ ಸಂರಕ್ಷಿಸಲು ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಸಹಾಯ ಮಾಡುತ್ತದೆ ಎಂದು ರಘು ಕೋಲ್ಕತಾ
ಮುನ್ಸಿಪಲ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.
-
Mandya23 hours agoಡಾ.ಬಿ.ಆರ್.ಅಂಬೇಡ್ಕರ್ ರವರ 69ನೇ ಪರಿನಿರ್ವಾಣ ದಿನ: ಮಾಲಾರ್ಪಣೆ ಮಾಡಿದ ಕೇಂದ್ರ ಸಚಿವ ಎಚ್ಡಿಕೆ
-
Hassan24 hours agoಪಂಚ ಗ್ಯಾರಂಟಿಗಳನ್ನು ವಿರೋಧಿಸುತ್ತಿರುವವರಿಗೆ ಜನರೇ ಉತ್ತರ ನೀಡಬೇಕು: ಸಿಎಂ ಸಿದ್ದರಾಮಯ್ಯ
-
Mysore22 hours agoಡಿ.14ರಂದು ‘ಮೈಸೂರು ಭವಿಷ್ಯದ ಅಭಿವೃದ್ಧಿ’ ಸಾರ್ವಜನಿಕ ಸಂವಾದ
-
Kodagu22 hours agoಪುತ್ತರಿ ಹಿನ್ನೆಲೆ “ಲಕ್ಡಿಕೋಟೆ ಕೊಡವ ಯುದ್ಧ ಸ್ಮಾರಕ”ದಲ್ಲಿ ಕೊಡವ ಯೋಧರಿಗೆ ಗೌರವ ನಮನ ಸಲ್ಲಿಸಿದ ಸಿಎನ್ಸಿ
-
Chamarajanagar21 hours agoಕಠಿಣ ಶ್ರಮದಿಂದ ಗೆಲುವು ಖಚಿತ: ಡಾ. ಶಾಂತರಾಜು
-
Mysore21 hours agoಪಠ್ಯದಿಂದ ಡಾ.ಅಂಬೇಡ್ಕರ್ ಹೊರಗಿಡುವ ಹುನ್ನಾರ: ಪ್ರೊ.ಪ್ರಸನ್ನಕುಮಾರ್ ಕೆರಗೋಡು ಶಂಕೆ
-
Hassan23 hours agoನಾವು ತೆರೆದ ಪುಸ್ತಕ ಎಲ್ಲವನ್ನೂ ಎದುರಿಸೋದಕ್ಕೆ ಸಿದ್ಧರಿದ್ದೇವೆ: ಸಿಎಂ ಸಿದ್ದರಾಮಯ್ಯ
-
Kodagu23 hours agoಕ್ರಿಸ್ಮಸ್ ಗಾನ ತರಂಗ ಜಿಲ್ಲಾ ಮಟ್ಟದ ಗಾಯನ ಹಾಗೂ ಚಿತ್ರಕಲೆ ಸ್ಪರ್ಧೆ
