Connect with us

Mandya

ಜಿಲ್ಲೆಯ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಿ : ಮನೋಜ್ ಕುಮಾರ್ ಮೀನಾ

Published

on

ಮಂಡ್ಯ: ಸದರಿ ವರ್ಷ ಜಿಲ್ಲೆಗೆ ಅಗತ್ಯವಿರುವ ನೀರಿನ ಪ್ರಮಾಣ ಲಭ್ಯವಿದೆ. ಹಾಗಾಗಿ ಬೇಸಿಗೆ ಕಾಲದಲ್ಲಿ ಬೆಳೆ ಮತ್ತು ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ ಅವರು ಹೇಳಿದರು.

ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಹಾಗೂ ಜಿಲ್ಲಾ ಮಟ್ಟದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಹಶೀಲ್ದಾರ್ ಗಳು ವಿಶೇಷ ಮುತುವರ್ಜಿ ಕೆರೆಗಳನ್ನು ತೆರವುಗೊಳಿಸಿ ನಂತರ ಸದರಿ ಕೆರೆಯ ಜಾಗದಲ್ಲಿ ಒತ್ತುವರಿಯಾಗದಂತೆ ತಂತಿ ಬೇಲಿ ಮತ್ತು ಸೂಚನಾ ಫಲಕ ಅಳವಡಿಸಿ. ಜಿಲ್ಲೆಯಲ್ಲಿ ಇದುವರೆಗೆ 232 ಗ್ರಾಮ ಪಂಚಾಯಿತಿಗಳಲ್ಲಿ ಪೌತಿ ಖಾತಾ ಆಂದೋಲನ ನಡೆಸಿ 67659 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಹೇಳಿದರು.

ಪಿ.ಎಂ. ಕಿಸಾನ್ ಯೋಜನೆಯಡಿಯಲ್ಲಿ 21 ಕಂತುಗಳಲ್ಲಿ ರೂ 892.08 ಕೋಟಿ ಹಣವನ್ನು ನೀಡಲಾಗಿದೆ. ಕೃಷಿ ಇಲಾಖೆ ಕೃಷಿ ವಿಶ್ವವಿದ್ಯಾನಿಲಯ ಹಾಗೂ ಸಂಬಂಧಪಟ್ಟ ಇಲಾಖೆಗಳ ಜೊತೆ ಕೈಜೋಡಿಸಿ ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಕೃಷಿಯಿಂದ ಉದ್ಯಮ ಹೇಗೆ ಪ್ರಾರಂಭಿಸಬೇಕು ಎಂಬುದರ ಕುರಿತಾಗಿ ತರಬೇತಿ ನೀಡಿ ಅರ್ಹ ಸೌಲಭ್ಯ ಕಲ್ಪಿಸಿ ಜಿಲ್ಲೆಯ ಯುವಕರನ್ನು ನಿರುದ್ಯೋಗದಿಂದ ಮುಕ್ತಗೊಳಿಸಿ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಜನರಿಗೆ ಜಲ ಜೀವನ್ ಮಿಷನ್ ಮೂಲಕ ಶುದ್ಧ ಕುಡಿಯುವ ನೀರನ್ನು ಮನೆ ಮನೆಗೆ ತಲುಪಿಸಿ. ಪ್ರತಿ ವಾರ ನೀರಿನ ಗುಣಮಟ್ಟವನ್ನು ಪರಿಶೀಲಿಸಿ ಎಂದು ಸೂಚಿಸಿದರು.

ನಲ್ ಜಲ್ ಯೋಜನೆಯಡಿ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಸ್ವ ಸಹಾಯ ಗುಂಪುಗಳಿಗೆ ತರಬೇತಿ ನೀಡಲಾಗಿದೆ. ಸದರಿ ಹೆಣ್ಣು ಮಕ್ಕಳಿಗೆ ಕೇವಲ ತರಬೇತಿ ನೀಡಿದರೆ ಸಾಲದು ತರಬೇತಿಗೆ ತಕ್ಕ ಹಾಗೆ ಕೆಲಸಗಳನ್ನು ನೀಡಿ ಆಗ ಮಾತ್ರ ತರಬೇತಿ ನೀಡಿದ್ದಕ್ಕೆ ಅರ್ಥ ದೊರೆಯುತ್ತದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಪ್ರಾಥಮಿಕದಲ್ಲಿಯೇ ಹಸಿ ಕಸ ಮತ್ತು ಒಣ ಕಸಗಳನ್ನು ಬೇರ್ಪಡಿಸುಲಯವಂತೆ ಅರಿವು ಮೂಡಿಸಿ. ಸರ್ಕಾರಿ ಕಚೇರಿಗಳಲ್ಲಿಯೇ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ಸಂಗ್ರಹಿಸಬೇಕು ಇಲ್ಲಿಂದಲೇ ಜಾಗೃತಿ ಶುರುವಾದರೆ ಸಾರ್ವಜನಿಕರಿಗೆ ಅರಿವು ಮೂಡಿಸಿದಂತಾಗುತ್ತದೆ. ಮಂಡ್ಯ ಸುಂದರವಾದ ನಗರ ಮಂಡ್ಯದಲ್ಲಿ ಸ್ವಚ್ಛತೆ ಕಾಪಾಡುವುದು ಎಲ್ಲರ ಹೊಣೆಯಾಗಿದೆ. ಜಿಲ್ಲೆಯಲ್ಲಿ ಕಸಗಳನ್ನು ಸಂಗ್ರಹಿಸಿ ಬೆಂಕಿ ಹಾಕದಿರುವಂತೆ ನೋಡಿಕೊಳ್ಳಬೇಕು. ಕಸ ವಿಲೇವಾರಿಯನ್ನು ವೈಜ್ಞಾನಿಕವಾಗಿ ನಡೆಸಿ ಎಂದು ಹೇಳಿದರು.

ಜಿಲ್ಲೆಯ ಅಂಗನವಾಡಿಗಳಲ್ಲಿ 61 ಸಾವಿರಕ್ಕೂ ಹೆಚ್ಚು ಮಕ್ಕಳು ಇದ್ದು ಸದರಿ ಮಕ್ಕಳಿಗೆ ಪೌಷ್ಟಿಕ ಕೊರತೆ ಉಂಟಾಗದಂತೆ ಕ್ರಮ ವಹಿಸಿ. ಗುಣಮಟ್ಟದ ಪೌಷ್ಟಿಕ ಆಹಾರಗಳನ್ನು ಮಕ್ಕಳಿಗೆ ನೀಡಿ. ಸದರಿ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲಿರುವ ಮಕ್ಕಳಿಗೆ ವಿಶೇಷವಾಗಿ ಭಾಷಾ ವಿಷಯ ಹಾಗೂ ಗಣಿತ ವಿಷಯಗಳಲ್ಲಿ ಮೇಲೆ ಹೆಚ್ಚಿನ ಒತ್ತು ನೀಡಿ. ಶಾಲಾ ಶಿಕ್ಷಕರು ಮಕ್ಕಳಿಗೆ ಸೂಕ್ತವಾಗಿ ಪಾಠ ಪ್ರವಚನಗಳನ್ನು ನಡೆಸುತ್ತಿದ್ದಾರ ಎಂದು ಪರಿಶೀಲನೆ ನಡೆಸಿ ಎಂದು ಹೇಳಿದರು.

ಮಕ್ಕಳು ದೇಶದ ಭವಿಷ್ಯ ಅವರ ಶಿಕ್ಷಣಕ್ಕೆ ಕೊರತೆ ಉಂಟಾಗದಂತೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಹಾಗೂ ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆ ಎದುರಿಸಲಿರುವ ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ಮಕ್ಕಳ ಫಲಿತಾಂಶವನ್ನು ಹೆಚ್ಚಿಸಿ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮಾತನಾಡಿ, ಆಸ್ತಿ ತೆರಿಗೆಯ ವಸೂಲಾತಿಯಲ್ಲಿ ಈಗಾಗಲೇ ಶೇ 89 ರಷ್ಟು ತೆರಿಗೆಯನ್ನು ಸಂಗ್ರಹಿಸಲಾಗಿದೆ. ಉಳಿದ ತೆರಿಗೆಯನ್ನು ಮಾರ್ಚ್ ಮಾಹೆಯ ಅಂತ್ಯದೊಳಗೆ ಸಂಗ್ರಹಿಸಲಾಗುತ್ತದೆ. ಹಸಿ ಕಸ ಮತ್ತು ಒಣ ಕಸ ಗಳನ್ನು ಪ್ರಾಥಮಿಕ ಹಂತದಲ್ಲಿಯೇ ಬೇರ್ಪಡಿಸುವಂತೆ ಈಗಾಗಲೇ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ಹೇಳಿದರು.

ಶೇ 84 ರಷ್ಟು ಜಿಲ್ಲೆಯ ಜನರ ಆಧಾರ್ ಸೀಡಿಂಗ್ ಈಗಾಗಲೇ ಮಾಡಲಾಗಿದೆ. ಉಪ ವಿಭಾಗಾಧಿಕಾರಿಗಳು ಜವಾಬ್ದಾರಿ ವಹಿಸಿ ಒಂದು ವರ್ಷಕ್ಕಿಂತ ಹಳೆಯ ಕಂದಾಯ ಪ್ರಕರಣಗಳನ್ನು ವಿಲೇವಾರಿ ಮಾಡಿ. ನಮ್ಮಲ್ಲಿ ಬೇಸಿಗೆ ಕಾಲಕ್ಕೆ ಸಾಕಷ್ಟು ನೀರು ಲಭ್ಯವಿದ್ದು ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಸೂಕ್ತ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಎಂ ಎಲ್ ಎ ಮತ್ತು ಎಂ ಎಲ್ ಸಿ ಕಾಮಗಾರಿಗಳಲ್ಲಿ ಬಾಕಿ ಇರುವ ಶೀಘ್ರವಾಗಿ ಪೂರ್ಣಗೊಳಿಸಿ. ಸದರಿ ವರ್ಷ ಪಿ. ಎಂ.ಎಫ್ .ಎಂ ಇ ಯೋಜನೆಯಡಿ ಜಿಲ್ಲೆಯ 328 ಅರ್ಹ ರೈತ ಫಲಾನುಭವಿಗಳಿಗೆ 83.42 ಕೋಟಿ ಸಾಲ ಹಾಗೂ 27.72 ಕೋಟಿ ಸಹಾಯಧನವನ್ನು ನೀಡಲಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಈಗಾಗಲೇ ಶೇ 79 ರಷ್ಟು ಕಾಮಗಾರಿ ಮುಗಿದಿದ್ದು ಅನುದಾನದ ಕೊರತೆಯಿಂದ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಧ್ಯಾವಾಗಿರುವುದಿಲ್ಲ ಎಂದು ಹೇಳಿದರು.

ಎನ್ ಆರ್ ಎಲ್ ಎಂ ಯೋಜನೆಯಡಿ ಜಿಲ್ಲೆಯ ಸ್ವ ಸಹಾಯ ಗುಂಪಿನ ಅರ್ಹ ಮಹಿಳಾ ಫಲಾನುಭವಿಗಳು ತಮ್ಮ “ಅಕ್ಕನ ಮೀನು ಊಟ” ಉದ್ಯಮದಲ್ಲಿ ಉತ್ತಮ ಲಾಭವನ್ನು ಪಡೆಯುತ್ತಿದ್ದಾರೆ. ಮೀನುಗಾರಿಕೆ ಇಲಾಖೆಯಿಂದ ಮೀನು ಸಾಕಾಣಿಕೆ ಮತ್ತು ಮೀನುಗಳಿಗೆ ನೀಡಬೇಕಾದ ಆಹಾರ ಕ್ರಮಗಳ ಕುರಿತು ತಿಳಿಸಿ ಮೀನುಗಾರರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.

ನೂತನವಾಗಿ ಅಕ್ಕನ ಬುತ್ತಿ ಎಂಬ ಹೊಸ ಯೋಜನೆಯನ್ನು ಎನ್ ಆರ್ ಎಲ್ ಎಂ ಯೋಜನೆಯಡಿ ರೂಪಿಸಲಾಗಿದ್ದು ಉತ್ತಮ ಗುಣಮಟ್ಟದ ಆಹಾರವನ್ನು ಕ್ಯಾಟರಿಂಗ್ ಮೂಲಕ ಸರ್ಕಾರಿ ಕಚೇರಿಗಳು ಮತ್ತು ಇನ್ನಿತರ ಸಂಸ್ಥೆಗಳಿಗೆ ಶುಚಿತ್ವದ ಆಹಾರವನ್ನು ನೀಡಲಾಗುತ್ತಿದೆ. ಸ್ವ ಸಹಾಯ ಗುಂಪುಗಳ ಮಹಿಳೆಯರು ತಯಾರಿಸುವ ಮದ್ದೂರು ವಡೆ, ಮೇಲುಕೋಟೆ ಪುಳಿಯೋಗರೆ ಮತ್ತು ಮಂಡ್ಯ ಬೆಲ್ಲಕ್ಕೆ ಜಿ.ಐ ಟ್ಯಾಗ್ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದ ಮೂರ್ತಿ, ಉಪವಿಭಾಗಾಧಿಕಾರಿಗಳಾದ ಶಿವಮೂರ್ತಿ ಮತ್ತು ಶ್ರೀನಿವಾಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

Mandya

ಕೆರೆ ಒತ್ತುವರಿ ತೆರವುಗೊಳಿಸದಿದ್ದರೆ ಶಿಸ್ತು ಕ್ರಮ: ಸಮಯ ನಿಗದಿಗೊಳಿಸಿ ಸೂಚನೆ ನೀಡಿದ ಡಿಸಿ ಡಾ.ಕುಮಾರ

Published

on

ಮಂಡ್ಯ: ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ಮತ್ತು ಜವಾಬ್ದಾರಿಯನ್ನು ತೆಗೆದುಕೊಂಡು ಕೆರೆ ಒತ್ತುವರಿಯನ್ನು ತೆರವುಗೊಳಿಸಬೇಕು. ತೆರವುಗೊಳಿಸಿದ ಕೆರೆಗಳು ಮತ್ತೆ ಒತ್ತುವರಿ ಮಾಡದಂತೆ ಸಂರಕ್ಷಣೆ ಮಾಡಬೇಕು. ಕೆರೆ ಒತ್ತುವರಿ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಳಾದ ಡಾ.ಕುಮಾರ ಅವರು ಹೇಳಿದರು.

ಮಂಡ್ಯ ಜಿಲ್ಲೆಯಲ್ಲಿ ಕೆರೆಗಳ ಒತ್ತುವರಿ ತೆರವುಗೊಳಿಸುವ ಸಂಬಂಧ ಜಿಲ್ಲಾಧಿಕಾರಿ ಗಳ ಕಚೇರಿಯಲ್ಲಿ ಕರೆಯಲಾಗಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,
ಇದುವರೆಗೆ ಸುಮಾರು 245 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಇನ್ನು 203 ಕೆರೆಗಳ ತೆರವು ಬಾಕಿ ಉಳಿದಿದೆ. ಬಾಕಿ ಇರುವ ಕೆರೆ ಒತ್ತುವರಿಗಳನ್ನು ತಕ್ಷಣವೇ ತೆರವುಗೊಳಿಸಿ ವರದಿ ನೀಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಿದರು.

ಪ್ರತಿ ತಿಂಗಳು ಕೆರೆ ಒತ್ತುವರಿ ಸಂಬಂಧ ಸಭೆ ನಡೆಸಲಾಗುತ್ತಿದ್ದು ಮಾರ್ಚ್ 30 ರೊಳಗೆ ಬಾಕಿ ಇರುವ ಎಲ್ಲಾ ಕೆರೆಗಳ ಒತ್ತುವರಿ ತೆರವುಗೊಳಿಸಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೖಗೊಳ್ಳಲಾಗುವುದು. ತೆರವುಗೊಳಿಸಿದ ಕೆರೆಗಳ ಸುತ್ತ ಟ್ರಂಚ್‌ಗಳನ್ನು (ಕಂದಕ) ನಿರ್ಮಿಸಿ, ನಾಮಫಲಕಗಳನ್ನು ಅಳವಡಿಸುವ ಮೂಲಕ ಮರು-ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು ಎಂದರು.

ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಎಚ್.ಎಲ್.ಬಿ.ಸಿ, ಕಾವೇರಿ ನೀರಾವರಿ ನಿಗಮ ನಿಯಮಿತ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಕೆರೆಯನ್ನು ಸಂರಕ್ಷಿಸಬೇಕು. ನಿಯಮಿತವಾಗಿ ಕೆರೆಗಳ ಪರಿಶೀಲನೆ ನಡೆಸಿ ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಮಂಡ್ಯ ಉಪ ವಿಭಾಗಧಿಕಾರಿ ಶಿವಮೂರ್ತಿ, ಪಾಂಡವಪುರ ಉಪ ವಿಭಾಗಧಿಕಾರಿ ಶ್ರೀನಿವಾಸ್ ಡಿಡಿಎಲ್ ಆರ್ ವಿರುಪಾಕ್ಷ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

Mandya

ಬೂದನೂರು ಗ್ರಾಮ ಪಂಚಾಯತಿಗೆ ನೇಮಕವಾಗಿರುವ ಆಡಳಿತಾಧಿಕಾರಿಗೆ ಗ್ರಾಮಸ್ಥರಿಂದ ಭವ್ಯ ಸ್ವಾಗತ

Published

on

ಮಂಡ್ಯ: ತಾಲೂಕಿನ ಬೂದನೂರು ಗ್ರಾಮ ಪಂಚಾಯತಿಗೆ ಆಡಳಿತಾಧಿಕಾರಿಯಾಗಿ ನೇಮಕವಾಗಿರುವ
ಶಿಶು ಅಭಿವೃದ್ಧಿ ಅಧಿಕಾರಿ ಎಂ. ಕೆ. ಕುಮಾರಸ್ವಾಮಿ ಅವರನ್ನು ಗ್ರಾಮಸ್ಥರು ‌ಭವ್ಯವಾಗಿ ಸ್ವಾಗತಿಸಿ ಅಭಿನಂದಿಸಿದರು.

ಹಿಂದಿನ ಗ್ರಾಪಂ ಆಡಳಿತದಿಂದ ಬೇಸತ್ತಿರುವ ಗ್ರಾಮಸ್ಥರು ಹಾಗೂ ಹೋರಾಟಗಾರರು, ಜನಪ್ರತಿನಿಧಿಗಳ ಅಧಿಕಾರಕ್ಕಿಂತ ಅಧಿಕಾರಿಗಳ ಆಡಳಿತವೇ ಮೇಲು ಎಂದು ವಿಷಾದಿಸಿದರು. ಬೂದನೂರು ಗ್ರಾಮ ಪಂಚಾಯತಿ ಕಚೇರಿ ಮುಂದೆ ತೋರಣ ಕಟ್ಟಿ, ರಂಗೋಲಿ ಬಿಡಿಸಿ ಆಡಳಿತಾಧಿಕಾರಿಗೆ ಸ್ವಾಗತ ಕೋರಿದರು.

ಆಡಳಿತಾಧಿಕಾರಿಯಾಗಿ ಶಿಶು ಅಭಿವೃದ್ಧಿ ಅಧಿಕಾರಿ ಎಂ. ಕೆ. ಕುಮಾರಸ್ವಾಮಿ ಅಧಿಕಾರ ಸ್ವೀಕಾರ ಬಳಿಕ ಶಾಲು ಹೊದಿಸಿ, ಮೈಸೂರು ಪೇಟಾ ಹಾಕಿ ಅಭಿನಂದಿಸಿ ನೆರೆದವರಿಗೆ ಸಿಹಿ ವಿತರಿಸಲಾಯಿತು.

ಇನ್ನೂ ಒಂದು ವರ್ಷ ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿ ನೇಮಿಸುವಂತೆ ಸರ್ಕಾರವನ್ನು ಗ್ರಾಮಸ್ಥರು ಒತ್ತಾಯಿಸಿದ್ದು, ಕಳೆದ ಐದು ವರ್ಷಗಳ ಆಡಳಿತದಲ್ಲಿ ಜನಪ್ರತಿನಿಧಿಗಳ ಅಕ್ರಮ, ಜನವಿರೋಧಿ ನೀತಿಯಿಂದಾಗಿ ಬೇಸತ್ತಿರುವುದಾಗಿ ಸ್ವಂತಮನೆ ನಮ್ಮ ಹಕ್ಕು ಹೋರಾಟಗಾರ್ತಿ ಸವಿತಾ ಅಳಲು ತೋಡಿಕೊಂಡರು.

ಬಡ ಜನರ ವಿರುದ್ಧ ಇರುವ ಆಡಳಿತಗಾರ ಜನಪ್ರತಿನಿಧಿಗಳ ಬದಲು ಅಧಿಕಾರಿಗಳ ಆಡಳಿತ ಉತ್ತಮವಾಗಿದೆ. ಚುನಾವಣೆಗಳು ಬೇಸರ ಮೂಡಿಸಿದೆ ಎಂದರು.

ರೈತ ಸಂಘದ ತಾಲೂಕು ಅಧ್ಯಕ್ಷ ಬಿ. ಸಿ.ಪುಟ್ಟಸ್ವಾಮಿ ಮಾತನಾಡಿ, ಜನರ ಪರವಾದ ಕೆಲಸ ಮಾಡಲು ಕಳೆದ ಆಡಳಿತ ಮಂಡಳಿ ವಿಫಲವಾಗಿದೆ. ಪ್ರಶ್ನಿಸಿದವರ ವಿರುದ್ಧ ಕಾನೂನು ಕ್ರಮ ವಹಿಸಲು ಮುಂದಾದ ಆಡಳಿತಗಾರರು ನಿಜವಾದ ಪ್ರಜಾಪ್ರಭುತ್ವ ವಿರೋಧಿಗಳು ಎಂದು ಬಣ್ಣಿಸಿದರು.

ಈ ವೇಳೆ ತಾಪಂ ಯೋಜನಾಧಿಕಾರಿ ವೆಂಕಟರಾವ್, ಪಿಡಿಒ ಸ್ವಾಮಿ, ಸ್ವಂತಮನೆ ನಮ್ಮ ಹಕ್ಕು ಹೋರಾಟ ಸಮಿತಿ ಸಂಚಾಲಕ ಸತೀಶ್, ಮುಖಂಡರಾದ ರಾಜೇಂದ್ರ, ಕುಳ್ಳ, ಜಯಮ್ಮ, ಶಿವರಾಜ್, ಸುನೀಲ್ ಸೇರಿದಂತೆ ಹಲವರಿದ್ದರು.

Continue Reading

Mandya

ಕರ್ಣಾಟಕ ಬ್ಯಾಂಕ್ ವತಿಯಿಂದ ಶ್ರೀರಂಗನಾಥ ದೇಗುಲಕ್ಕೆ 10 ಫ್ಯಾನ್ ಗಳ ಕೊಡುಗೆ

Published

on

ಶ್ರೀರಂಗಪಟ್ಟಣ : ಕರ್ಣಾಟಕ ಬ್ಯಾಂಕ್ ಶಾಖೆ ವತಿಯಿಂದ ಶ್ರೀರಂಗನಾಥ ದೇಗುಲಕ್ಕೆ ಸುಮಾರು 55 ಸಾವಿರ ರೂ.ಬೆಲೆಯುಳ್ಳ 10 ಫ್ಯಾನ್ ಗಳನ್ನು ಕೊಡುಗೆಯಾಗಿ ನೀಡಲಾಯಿತು.

ಎಜಿಎಂ ಶೇಷಾದ್ರಿ ಕೆ‌.ಎಲ್ ರವರು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಉಮಾ ಅವರಿಗೆ ಹಸ್ತಾಂತರಿಸಿ, ಭಕ್ತರ ಅನುಕೂಲಕ್ಕೆ ಬಳಸಿಕೊಳ್ಳುವಂತೆ ಮನವಿ ಮಾಡಿದರು.

ಇದೇ ವೇಳೆ ಮಾತನಾಡಿದ ಅವರು, ಕರ್ಣಾಟಕ ಬ್ಯಾಂಕ್ ವತಿಯಿಂದ ಹತ್ತು ಹಲವು ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರುತ್ತಿದ್ದು, ದೇವಾಲಯದ ಆವರಣದಲ್ಲಿ ಸರದಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಅನುಕೂಲವಾಗಲೆಂದು ಹತ್ತು ಫ್ಯಾನ್ ಗಳನ್ನು ನೀಡಿದ್ದಾಗಿ ತಿಳಿಸಿದರು.

ಈ ವೇಳೆ ಮದ್ದೂರು ಕ್ಲಷ್ಟರ್ ನ ಸಿ.ಎಂ.ಮುನಿರಾಜು ರೆಡ್ಡಿ, ಶ್ರೀರಂಗಪಟ್ಟಣ ಶಾಖಾ ವ್ಯವಸ್ಥಾಪಕ ವಿ.ನಾರಾಯಣ್ ಸೇರಿದಂತೆ ಬ್ಯಾಂಕ್ ನ ಸಿಬ್ಬಂಧಿ ವರ್ಗ ಉಪಸ್ಥಿತರಿದ್ದರು.

Continue Reading

Trending

error: Content is protected !!