Connect with us

Location

ಲಿಂಗಾಯಿತರಿಗೆ ಅಧಿಕಾರ ತಪ್ಪಿಸಿ ಅನ್ಯಾಯ ಮಾಡಿದ್ದ ಎಚ್ ಡಿ ಕುಮಾರಸ್ವಾಮಿ : ಸಚಿವ ಎಂ.ಬಿ ಪಾಟೀಲ್*

Published

on

*ಲಿಂಗಾಯಿತರಿಗೆ ಅಧಿಕಾರ ತಪ್ಪಿಸಿ ಅನ್ಯಾಯ ಮಾಡಿದ್ದ ಎಚ್ ಡಿ ಕುಮಾರಸ್ವಾಮಿ : ಸಚಿವ ಎಂ.ಬಿ ಪಾಟೀಲ್*

ಮಂಡ್ಯ :- ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವೀರಶೈವ ಲಿಂಗಾಯತ ಸಮುದಾಯಕ್ಕೆ ರಾಜಕೀಯ ಕ್ಷೇತ್ರದಲ್ಲಿ ಉನ್ನತ ಅಧಿಕಾರ ತಪ್ಪಿಸುವ ಮೂಲಕ ಬಹುದೊಡ್ಡ ಅನ್ಯಾಯ ಮಾಡಿದ್ದನ್ನು ಸಮುದಾಯದ ಜನತೆ ಮರೆಯಬಾರದು ಎಂದು ಸಚಿವ ಎಂ ಬಿ ಪಾಟೀಲ್ ತಿಳಿಸಿದರು.

ನಗರದ ಕನಕ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ವೀರಶೈವ – ಲಿಂಗಾಯಿತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, 2008 ರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚನೆ ಮಾಡಿದವು.

ಮೊದಲ ಅವಧಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿ ಅಧಿಕಾರ ಅನುಭವಿಸಿದರು, ಒಪ್ಪಂದದಂತೆ ಇನ್ನುಳಿದ 20 ತಿಂಗಳ ಅವಧಿಗೆ ಲಿಂಗಾಯಿತ ಸಮುದಾಯದ ಬಿ.ಎಸ್.ಯಡಿಯೂರಪ್ಪರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕಾಗಿತ್ತು, ಆದರೆ ಯಡಿಯೂರಪ್ಪರಿಗೆ ಮುಖ್ಯಮಂತ್ರಿ ಸ್ಥಾನಮಾನ ಕಲ್ಪಿಸದೆ ಸಮುದಾಯಕ್ಕೆ ದೊಡ್ಡ ಅನ್ಯಾಯ ಮಾಡಿದ್ದರು ಎಂದು ಹೇಳಿದರು.

ಬಿಜೆಪಿ ಪಕ್ಷ ಸಮಾನತೆಯ ಹರಿಕಾರ ಬಸವಣ್ಣನವರ ತತ್ವ ಸಿದ್ಧಾಂತವನ್ನು ಎಂದಿಗೂ ಒಪ್ಪುವುದಿಲ್ಲ, ಅಷ್ಟೇ ಅಲ್ಲದೆ ಬಸವಣ್ಣರನ್ನ ಸಾಂಸ್ಕೃತಿಕ ನಾಯಕ ಎಂಬುವುದನ್ನು ಒಪ್ಪುವುದಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರ ಸಂವಿಧಾನ ಮತ್ತು ಬಸವಣ್ಣನವರ ಸಿದ್ಧಾಂತದ ಮೇಲೆ ಹೆಚ್ಚಿನ ನಂಬಿಕೆ ಇಟ್ಟಿದೆ ಎಂದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಹೀನಾಯವಾಗಿ ಸೋತ ಹಿನ್ನೆಲೆಯಲ್ಲಿ ಬಿ.ಎಸ್.ಯಡಿಯೂರಪ್ಪರ ಪುತ್ರ ಬಿ.ವೈ.ವಿಜಯೇಂದ್ರರನ್ನ ಪಕ್ಷದ ರಾಜ್ಯಾಧ್ಯಕ್ಷ ರನ್ನಾಗಿ ಮಾಡಲಾಗಿದೆ.

ವೀರಶೈವ – ಲಿಂಗಾಯಿತ ಸಮುದಾಯ ಓಲೈಕೆ ಮಾಡಲು ಇಂತಹ ತಂತ್ರ ಮಾಡಿರುವ ಬಿಜೆಪಿ ವರಿಷ್ಠರು, ಕೇವಲ 3 ವರ್ಷ ಮಾತ್ರ ರಾಜ್ಯಾಧ್ಯಕ್ಷ ಎಂದು ವಿಜಯೇಂದ್ರ ಅವರಿಗೆ ನಿಗದಿ ಮಾಡಿದ್ದಾರೆ. ಅಷ್ಟರೊಳಗೆ ಎಲ್ಲಾ ಚುನಾವಣೆ ಮುಗಿಯುತ್ತದೆ. ಆಮೇಲೆ ಇನ್ನೇಕೆ ಇವರು ಎಂಬ ಭಾವನೆ ಇಟ್ಟುಕೊಂಡಿದೆ. ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಪಕ್ಷದ ಅಧ್ಯಕ್ಷ ಸ್ಥಾನವು ಲಿಂಗಾಯತ ಸಮುದಾಯದ ಕೈತಪ್ಪಲಿದ್ದು, ಆದರೆ ಕಾಂಗ್ರೆಸ್ ಪಕ್ಷ ಸಮುದಾಯದ ಹೆಚ್ಚಿನವರನ್ನು ಮುಖ್ಯಮಂತ್ರಿಯಾಗಲು ಅವಕಾಶ ಕಲ್ಪಿಸಿದೆ ಎಂದರು.

ಕಾಂಗ್ರೆಸ್ ಪಕ್ಷ ಜನರ ಬದುಕು ಕಟ್ಟುವ ಕೆಲಸ ಮಾಡುತ್ತಿದ್ದರೆ, ಬಿಜೆಪಿ ಪಕ್ಷ ಜನರ ಭಾವನೆ ಕೆರಳಿಸುವ ಕೆಲಸ ಮಾಡುತ್ತಿದೆ. ದೇಶದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನೆಸುತ್ತಾರೆ, ನಿಜವಾಗಲೂ ದೇಶ ಕಟ್ಟಿದ್ದು ಕಾಂಗ್ರೆಸ್ ನಾಯಕರು. ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟದ್ದು ಕಾಂಗ್ರೆಸ್. ದೇಶವನ್ನಾಳಿದ ಕಾಂಗ್ರೆಸ್ ಸಾವಿರಾರು ಅಣೆಕಟ್ಟು, ಕೈಗಾರಿಕೆ ನಿರ್ಮಾಣ ಮಾಡಿದೆ. ಆಹಾರ ಉತ್ಪಾದನೆಯಲ್ಲಿ ಕ್ರಾಂತಿ ಮಾಡಿತು. ಆದರೆ ಹಳೆ ಮೈಸೂರು ಭಾಗದಲ್ಲಿ ಒಂದು ಅಣೆಕಟ್ಟು ನಿರ್ಮಾಣ ಮಾಡದ ಬಿಜೆಪಿ ಅಭಿವೃದ್ಧಿ ಮಂತ್ರ ಜಪಿಸುತ್ತಿದೆ.

ನರೇಂದ್ರ ಮೋದಿ ನೇತೃತ್ವದ ಸರಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದೆ. ಉದ್ಯೋಗ ಸೃಷ್ಟಿ ಇಲ್ಲದೆ ನಿರುದ್ಯೋಗ ತಾಂಡವಡುತ್ತಿದೆ. ನೋಟ್ ಬ್ಯಾನ್ ಮಾಡಿ ತಪ್ಪು ಮಾಡಿದೆ, ಇದೀಗ ಚುನಾವಣಾ ಬಾಂಡ್ ಹಗರಣ ದೊಡ್ಡ ಮಟ್ಟದ್ದಾಗಿದ್ದು, ಕೇಂದ್ರ ತನಿಕಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಹೆದರಿಸಿ ಬೆದರಿಸಿ ಚುನಾವಣಾ ಬಾಂಡ್ ನೆಪದಲ್ಲಿ ಸುಲಿಗೆ ಮಾಡಲಾಗಿದೆ.

ಈ ಬಗ್ಗೆ ತನಿಖೆ ನಡೆದರೆ ನರೇಂದ್ರ ಮೋದಿ ಕಥೆ ಏನಾಗಲಿದೆ. ಆದರೂ ಸಹ ನರೇಂದ್ರ ಮೋದಿ ಅಪ್ಪಟ ಸುಳ್ಳಿನ ನಾಟಕ ಮುಂದುವರೆಸಿದ್ದಾರೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳಿಂದ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ಮಹಿಳೆಯರಿಗೆ ಹೆಚ್ಚಿನ ಸವಲತ್ತು ದೊರಕಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕೇಂದ್ರದಿಂದ ಹೆಚ್ಚಿನ ಗ್ಯಾರಂಟಿ ಲಾಭ ಮಹಿಳೆಯರು, ರೈತರು, ಕಾರ್ಮಿಕರಿಗೆ ಸಿಗಲಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡರಿಗೆ ಮತ ನೀಡುವ ಮೂಲಕ ಸಮುದಾಯದ ಜನತೆ ಗೆಲ್ಲಿಸಿ ಕೊಡಬೇಕು. ಮುಂದಿನ ದಿನಗಳಲ್ಲಿ ವೀರಶೈವ ಲಿಂಗಾಯತ ಸಮುದಾಯದ ಜನತೆಗೆ ರಾಜಕೀಯ ಸ್ಥಾನಮಾನ ದೊರಕಿಸಿಕೊಡಲು ಬದ್ಧನಾಗಿರುವುದಾಗಿ ಅವರು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಮಾತನಾಡಿ, ಜಿಲ್ಲೆಯ ಜನತೆ ಅವಕಾಶ ಕೊಟ್ಟಾಗ ಏನು ಮಾಡದೆ ಸಂಸದರಾಗಿ ಎಚ್.ಡಿ.ಕುಮಾರಸ್ವಾಮಿ ಏನು ಮಾಡಲು ಸಾಧ್ಯ. ಅವರ ತಂದೆಗಿಂತಲೂ ದೊಡ್ಡ ನಾಯಕರಾಗಲು ಸಾಧ್ಯವೇ. ಕಾವೇರಿ ವಿಚಾರದಲ್ಲಿ ಎಚ್.ಡಿ.ದೇವೇಗೌಡ ಪ್ರಧಾನಿಯಾಗಿದ್ದಾಗ ಏನು ಮಾಡಲಿಲ್ಲ. ಈಗ ಕುಮಾರಸ್ವಾಮಿ ಏನು ಮಾಡಲಿದ್ದಾರೆ. ಇಷ್ಟೊಂದು ಸುಳ್ಳು ಹೇಳುವ ಅವಶ್ಯಕತೆ ಇದೆಯಾ ಎಂದು ಪ್ರಶ್ನಿಸಿದರು.

ಬಿ.ಎಸ್.ಯಡಿಯೂರಪ್ಪರಿಗೆ ಮುಖ್ಯಮಂತ್ರಿ ಹುದ್ದೆಯ ಅಧಿಕಾರ ತಪ್ಪಿಸಿದ ಎಚ್.ಡಿ.ಕುಮಾರಸ್ವಾಮಿ, ಅನಂತರವೂ ಸಹ ಅವರ ವಿರುದ್ಧ ವೇಸದ ರಾಜಕಾರಣ ಮಾಡುತ್ತಾ ಯಡಿಯೂರಪ್ಪರನ್ನ ಜೈಲಿಗೆ ಕಳುಹಿಸಲು ಸತತವಾಗಿ ಮುಂದಾದರು. ಅಷ್ಟರ ಮಟ್ಟಿಗೆ ಯಡಿಯೂರಪ್ಪರಿಗೆ ಕಿರುಕುಳ ನೀಡಿದ್ದನ್ನು ಜನತೆ ಮರೆಯುವುದಿಲ್ಲ ಎಂದರು.

ಮಂಡ್ಯ ಜಿಲ್ಲೆಗೆ ನೂರಾರು ವರ್ಷ ಮರೆಯದಿರುವ ಯಾವುದಾದರೂ ಕೊಡುಗೆಯನ್ನು ಎಚ್.ಡಿ.ಕುಮಾರಸ್ವಾಮಿ ನೀಡಿದ್ದಾರಾ..? ನಿಜವಾಗಲೂ ಅವರ ಕೊಡುಗೆ ಬಿಗ್ ಝೀರೋ ಎಂದ ಅವರು ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದ್ದೇನೆ ಅವಕಾಶ ಕೊಡಿ ಎಂದು ಮನವಿ ಮಾಡಬೇಕು.

ಆದರೆ ಇಲ್ಲ ಸಲ್ಲದ ಸುಳ್ಳು ಭರವಸೆಗಳನ್ನು ಹೇಳಿದರೆ ಜನರು ನಂಬಲು ಸಾಧ್ಯವಿಲ್ಲ ಎಂದು ತಿಳಿಸಿದರು.

ವೀರಶೈವ – ಲಿಂಗಾಯಿತ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ಪ್ರಾಮುಖ್ಯತೆ ನೀಡಿದ್ದು, ಸಮುದಾಯದ ಜನರ ಮೇಲೆ ವಿಶ್ವಾಸದಿಂದ ಮುನ್ನಡೆಯುತ್ತಿದೆ. ನಿಮ್ಮಗಳ ಆಶೀರ್ವಾದ ಇರಲಿ ಎಂದು ಮನವಿ ಮಾಡಿದರು.

ವೀರಶೈವ ಲಿಂಗಾಯತ ಸಮುದಾಯದ ಜಗದಾಂಬ, ಎಂ.ಎಸ್.ಮಂಜುನಾಥ್ ಬೆಟ್ಟಹಳ್ಳಿ, ನಾಗರಾಜ್, ಸುಂಡಹಳ್ಳಿ ಮಂಜುನಾಥ್, ಗೀತಾ, ಸುಗುಣ, ಶೀಲಾ, ಆಶಾ, ರೇಣುಕಾ ಶಿವಣ್ಣ ಸೇರಿದಂತೆ ಹಲವರು ಬಿಜೆಪಿ -ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.

ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ರಮೇಶ್ ಬಾಬು ಬಂಡಿ ಸಿದ್ದೇಗೌಡ, ರವಿಕುಮಾರ್ ಗಣಿಗ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Chamarajanagar

ಕ್ಷಯ ಮುಕ್ತ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲು ಕ್ರಮವಹಿಸಲಾಗುವುದು: ಕೃಷ್ಣನಾಯಕ

Published

on

ಯಳಂದೂರು: ಗುಂಬಳ್ಳಿ ಗ್ರಾಮ ಪಂಚಾಯಿತಿಯನ್ನು ಕ್ಷಯ ಮುಕ್ತ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲು ಕ್ರಮವಹಿಸಲಾಗುವುದು ಎಂದು ಬಿಲ್ ಕಲೆಕ್ಟರ್ ಕೃಷ್ಣನಾಯಕ ತಿಳಿಸಿದರು.

ಗುಂಬಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

ಕಳೆದ ಎರಡು ವರ್ಷಗಳಿಂದ ಗುಂಬಳ್ಳಿ ಗ್ರಾಮ ಪಂಚಾಯಿತಿಯು ಕ್ಷಯಮುಕ್ತ ಗ್ರಾಮ ಪಂಚಾಯಿತಿಯಾಗಿ ಪ್ರಶಸ್ತಿಯನ್ನು ಪಡೆದಿತ್ತು. ಆದರೆ ಈ ಬಾರಿ ಕ್ಷಯ ರೋಗದ ಲಕ್ಷಣ ಕ್ಷಣ ಕಂಡು ಬಂದು ರೋಗಿಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದ್ದಾರೆ. ಅವರಿಗೆ ಸರಿಯಾದ ಚಿಕಿತ್ಸೆಯನ್ನು ಕೊಡಿಸಿ ಗುಂಬಳ್ಳಿ ಗ್ರಾಮ ಪಂಚಾಯಿತಿಯನ್ನು ಕ್ಷಯ ಮುಕ್ತ ಗ್ರಾಮ ಪಂಚಾಯತಿಯನ್ನಾಗಿ ಮಾಡಲು ಶ್ರಮಿಸಲಾಗುವುದು ಎಂದು ತಿಳಿಸಿದರು.

ಗುಂಬಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಪುಟ್ಟ ಮಾಧವಿ ದೀಪವನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಗೆ ಉಚಿತ ತಪಾಸಣೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ವೈದ್ಯರು, ಗ್ರಾಮಸ್ಥರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇತರರು ಹಾಜರಿದ್ದರು.

Continue Reading

Mandya

ಜು.11 ‘ಸೆಪ್ಟೆಂಬರ್ 10’ ಕನ್ನಡ ಚಲನಚಿತ್ರ ಬಿಡುಗಡೆ : ಓಂ ಸಾಯಿಪ್ರಕಾಶ್

Published

on

ಮಂಡ್ಯ: ಎಲ್ಲ ಸಮಸ್ಯೆಗಳಿಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲವೆಂಬ ಧ್ಯೇಯದೊಂದಿಗೆ `ಸೆಪ್ಟೆಂಬರ್ ೧೦’ ಶೀರ್ಷಿಕೆಯೊಂದಿಗೆ ಚಲನಚಿತ್ರ ನಿರ್ಮಿಸಲಾಗಿದ್ದು, ಜುಲೈ.11ರಂದು ಬಿಡುಗಡೆಯಾಗಲಿದೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಓಂ ಸಾಯಿಪ್ರಕಾಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತವರಿಗೆ ಬಾ ತಂಗಿ, ಮುದ್ದಿನ ಮಾವ, ಅಣ್ಣ ತಂಗಿ, ಸೋಲಿಲ್ಲದ ಸರದಾರದಂತಹ ಯಶಸ್ವಿ ಚಲನಚಿತ್ರಗಳ ನಿರ್ದೇಶನ ಮಾಡಿದ್ದು, `ಸೆಪ್ಟೆಂಬರ್ 10೦’ ನನ್ನ 105ನೇ ಚಲನಚಿತ್ರವಾಗಿದೆ ಎಂದರು.

ಸೆಪ್ಟೆಂಬರ್.10 ರೈತ ಆತ್ಮಹತ್ಯೆ ತಡೆ ದಿನವಾಗಿದ್ದು, ಆತ್ಮಹತ್ಯೆಯನ್ನೇ ಮೂಲವನ್ನಾಗಿಸಿಕೊಂಡು ಚಲನಚಿತ್ರ ನಿರ್ಮಿಸಲಾಗಿದೆ. ದುರ್ಬಲ ಹಾಗೂ ಸಂಕುಚಿತ ಮನಸ್ಸನವರಿಗೆ ಉತ್ತಮ ಸಂದೇಶ, ಮಾರ್ಗದರ್ಶನ ನೀಡುವ ಪ್ರಯತ್ನ ಚಿತ್ರದಲ್ಲಿದೆ. ಬೆಳೆ ನಷ್ಟ, ಸಾಲದ ಸುಳಿಗೆ ಸಿಲುಕಿದ ರೈತ, ಪ್ರೇಮಿಗಳು, ವ್ಯಾಪಾರಿಗಳು, ಪರೀಕ್ಷೆ ಎದುರಿಸಲಾಗದ, ಕಡಿಮೆ ಅಂಕಗಳಿಸಿದ ವಿದ್ಯಾರ್ಥಿಗಳ ಆತ್ಮಹತ್ಯೆಯ ಸತ್ಯ ದರ್ಶನವನ್ನು ಚಿತ್ರದ ಮೂಲಕ ತೋರ್ಪಡಿಸಲಾಗುತ್ತಿದೆ ಎಂದು ಹೇಳಿದರು.

ಚಿತ್ರದ ಚಿತ್ರೀಕರಣವನ್ನು ಬೆಂಗಳೂರಿನಲ್ಲೇ ಮಾಡಲಾಗಿದ್ದು, 60 ಲಕ್ಷ ರೂ.ಗಳನ್ನು ವ್ಯಯಿಸಲಾಗಿದೆ. ನಿಮಾನ್ಸ್‌ನ ವೈದ್ಯರೂ ಮಾನಸಿಕವಾಗಿ ಕುಗ್ಗಿದವರಿಗೆ ಮಾನಸಿಕ ಸ್ಥೈರ್ಯ ನೀಡಲಿದೆ ಎಂದು ಹೇಳಿರುವುದಾಗಿ ಅವರು ತಿಳಿಸಿದರು.

2020೨೦೨೦ರಲ್ಲೇ ಚಲನಚಿತ್ರ ಪ್ರಾರಂಭಿಸಿ ಮುಗಿಸುವಷ್ಟರಲ್ಲಿ ಕೊರೋನದಿಂದಾಗಿ ಬಿಡುಗಡೆ ಮಾಡಲಾಗಿರಲಿಲ್ಲ, ಚಿತ್ರಕ್ಕೆ ಡಾ.ವಿ.ನಾಗೇಂದ್ರ ಪ್ರಸಾದ್ ಅವರ ಸಂಗೀತ, ಜೆ.ಜಿ.ಕೃಷ್ಣರ ಛಾಯಾಗ್ರಹಣ, ಬಿ.ಎ.ಮಧು ಅವರ ಸಂಭಾಷಣೆಯಿದೆ. ಚಲನಚಿತ್ರಕ್ಕೆ ಬೆನ್ನೆಲುಬಾಗಿ ನಿಂತ ಬಿಬಿಎಂಪಿ ಮಾಜಿ ಸದಸ್ಯ ಡಾ.ರಾಜು ಅವರ ಸಹಕಾರದಿಂದ ಚಲನಚಿತ್ರ ಬಿಡುಗಡೆಯಾಗುತ್ತಿದ್ದು, ಚಲನಚಿತ್ರ ಪ್ರಿಯರು ಚಿತ್ರ ವೀಕ್ಷಿಸಿ, ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಹ ನಿರ್ದೇಶಕ ಶಶಿಕಿರಣ್, ಹಿರಿಯ ನಟ ಮೀಸೆ ಆಂಜನಪ್ಪ (ಶಂಖನಾದ ಆಂಜಿನಪ್ಪ), ನಟರಾದ ತುಳಸಿ, ಜಯಸಿಂಹ, ಪತ್ರಕರ್ತ ಹಲ್ಲೆಗೆರೆ ಗುರುಸ್ವಾಮಿ, ಜಯರಾಮ್ ಇದ್ದರು.

Continue Reading

Kodagu

ಕೊಡಗಿನಲ್ಲಿ ಎನ್‌ಡಿಆರ್‌ಎಫ್ ಅನುದಾನದಿಂದ ಅಭಿವೃದ್ಧಿ ಕಾರ್ಯ ಪ್ರಗತಿ : ಚೆಪ್ಪುಡಿರ ರಾಕೇಶ್ ದೇವಯ್ಯ ಸಮರ್ಥನೆ

Published

on

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 2024-25ನೇ ಸಾಲಿನ ಕಾರ್ಯಾದೇಶದಂತೆ ಮಳೆಹಾನಿ ಕಾಮಗಾರಿಗಳು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ಅನುದಾನದಿಂದ ನಡೆಯುತ್ತಿದೆ. ಆದರೆ ಜಿಲ್ಲೆಯ ಕಾಂಗ್ರೆಸಿಗರು ಈ ಕಾಮಗಾರಿಗಳನ್ನು ರಾಜ್ಯ ಸರ್ಕಾರದ ಅನುದಾನದಿಂದ ಕೈಗೆತ್ತಿಕೊಳ್ಳಲಾಗಿದೆ ಎಂದು ಜನರ ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿರಾಜಪೇಟೆ ಮಂಡಲ ಬಿಜೆಪಿಯ ವಕ್ತಾರರು ಹಾಗೂ ಕೊಡಗು ಜಿಲ್ಲಾ ದಿಶಾ ಸಮಿತಿಯ ಸದಸ್ಯರಾದ ಚೆಪ್ಪುಡಿರ ರಾಕೇಶ್ ದೇವಯ್ಯ ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೋಟ್ಯಾಂತರ ರೂ. ಎನ್‌ಡಿಆರ್‌ಎಫ್ ಅನುದಾನದಿಂದ ಜಿಲ್ಲಾ ವ್ಯಾಪಿ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಈ ಕಾಮಗಾರಿ ರಾಜ್ಯ ಸರ್ಕಾರದ ಅನುದಾನದಿಂದ ಕಾರ್ಯಗತಗೊಳ್ಳುತ್ತಿದೆ ಎಂದು ಕಾಂಗ್ರೆಸಿಗರು ಪ್ರತಿಬಿಂಬಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎನ್‌ಡಿಆರ್‌ಎಫ್ ಶೇ.75ರಷ್ಟು ಅನುದಾನ ನೀಡಿದರೆ ಉಳಿದ ಶೇ.25ನ್ನು ರಾಜ್ಯ ಸರ್ಕಾರ ನೀಡಬೇಕಾಗುತ್ತದೆ. 2024-25ನೇ ಸಾಲಿನಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ರಸ್ತೆ ದುರಸ್ತಿಯ 495 ಕಾಮಗಾರಿಗಳಿಗೆ ಎನ್‌ಡಿಆರ್‌ಎಫ್ ಮೂಲಕ 1,483.69 ಲಕ್ಷ ರೂ. ಮೀಸಲಿಟ್ಟಿದ್ದು, ಶೇ.75ರ ಅನುಪಾತದಲ್ಲಿ 1,112.77 ಲಕ್ಷ ಹಣ ಬಿಡುಗಡೆಯಾಗಿದೆ. ಮಡಿಕೇರಿ ನಗರಸಭೆ ವ್ಯಾಪ್ತಿಯ ರಸ್ತೆ ದುರಸ್ತಿಯ 14 ಕಾಮಗಾರಿಗಳಿಗೆ 30 ಲಕ್ಷ ರೂ. ನಿಗಧಿಯಾಗಿದ್ದು, 22.50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ.

ಕುಶಾಲನಗರ ಪುರಸಭೆ ವ್ಯಾಪ್ತಿಯ 18 ರಸ್ತೆ ದುರಸ್ತಿ ಕಾಮಗಾರಿಗೆ 10.20 ಲಕ್ಷ ರೂ. ಮೀಸಲಿಟ್ಟಿದ್ದು, 7.65 ಲಕ್ಷ ಬಿಡುಗಡೆಯಾಗಿದೆ. ವಿರಾಜಪೇಟೆ ಪುರಸಭೆ ವ್ಯಾಪ್ತಿಯ ರಸ್ತೆ ದುರಸ್ತಿಯ 13 ಕಾಮಗಾರಿಗಳಿಗೆ 12.90 ಲಕ್ಷ ನಿಗಧಿಯಾಗಿದ್ದು, 9.68 ಲಕ್ಷ ಬಿಡುಗಡೆಯಾಗಿದೆ. ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 6 ರಸ್ತೆ ದುರಸ್ತಿ ಕಾಮಗಾರಿಗೆ 5.70 ಲಕ್ಷ ರೂ. ನಿಗಧಿಯಾಗಿದ್ದು, 4.28 ಲಕ್ಷ ರೂ. ಬಿಡುಗಡೆಯಾಗಿದೆ.

ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ರಸ್ತೆ ದುರಸ್ತಿಯ 74 ಕಾಮಗಾರಿಗಳಿಗೆ 211.54 ಲಕ್ಷ ರೂ. ಮೀಸಲಿಟ್ಟಿದ್ದು, 158.66 ಲಕ್ಷ ರೂ. ಬಿಡುಗಡೆಯಾಗಿದೆ. ಚೆಸ್ಕಾಂ ಇಲಾಖೆಗೆ ಸಂಬಂಧಿಸಿದಂತೆ 3,137 ವಿದ್ಯುತ್ ಕಂಬಗಳ ಬದಲಾವಣೆ ಮತ್ತು 2.20 ಕಿ.ಮೀ ವಿದ್ಯುತ್ ಮಾರ್ಗದ ದುರಸ್ತಿ ಕಾರ್ಯಕ್ಕಾಗಿ 157.86 ಲಕ್ಷ ರೂ. ಮಂಜೂರಾಗಿದ್ದು, ಸಂಪೂರ್ಣ ಹಣ ಬಿಡುಗಡೆಯಾಗಿದೆ. ಹೀಗೆ ಒಟ್ಟು 620 ಕಾಮಗಾರಿಗಳಿಗೆ 1911.89ಲಕ್ಷ ರೂ. ಮಂಜೂರಾಗಿದ್ದು, 1473.38 ಲಕ್ಷ ರೂ. ಬಿಡುಗಡೆಯಾಗಿದೆ. ಅಲ್ಲದೆ ಅತಿ ಮಳೆಯಿಂದ ಅಕಾಲಿಕವಾಗಿ ಮೃತಪಟ್ಟ ವಿರಾಜಪೇಟೆಯ ವಿಷ್ಣು ಬೆಳ್ಯಪ್ಪ ಹಾಗೂ ಗೌರಿ ಅವರ ಕುಟುಂಬಕ್ಕೆ ತಲಾ 5 ಲಕ್ಷ ರೂ.ಗಳನ್ನು ಪರಿಹಾರವಾಗಿ ಎನ್‌ಡಿಆರ್‌ಎಫ್ ಅನುದಾನದಿಂದ ನೀಡಲಾಗಿದೆ.

ಬಹುತೇಕ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತು ಪರಿಹಾರಕ್ಕೆ ಎನ್‌ಡಿಆರ್‌ಎಫ್ ಅನುದಾನದ ಮೂಲಕವೇ ಹಣ ಹಂಚಿಕೆಯಾಗುತ್ತಿದೆ. ಆದರೆ ಇದನ್ನು ಬಹಿರಂಗಪಡಿಸದ ಕಾಂಗ್ರೆಸ್ಸಿಗರು ರಾಜ್ಯ ಸರ್ಕಾರದ ಅನುದಾನವೆಂದು ಪ್ರತಿಬಿಂಬಿಸಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದು ರಾಕೇಶ್ ದೇವಯ್ಯ ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ ವಿವಿಧ ಭಾಗ್ಯಗಳ ಯೋಜನೆಯನ್ನು ಅನುಷ್ಠಾನಗೊಳಿಸುವುದಕ್ಕಾಗಿ ಬಹುತೇಕ ಹಣವನ್ನು ಖರ್ಚುಮಾಡುತ್ತಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಹಣ ದೊರೆಯುತ್ತಿಲ್ಲ. ರಾಜ್ಯ ಸರ್ಕಾರ ಸಮರ್ಪಕವಾಗಿ ಅನುದಾನವನ್ನು ಬಿಡುಗಡೆ ಮಾಡದೆ ಇರುವುದರಿಂದ ಕೊಡಗಿನ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಎನ್‌ಡಿಆರ್‌ಎಫ್ ಅನುದಾನ ಸೇರಿದಂತೆ ಕೇಂದ್ರದ ಅನುದಾನದ ಮೂಲಕವೇ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ಜನರ ಹಾದಿ ತಪ್ಪಿಸುವ ಕಾರ್ಯದಲ್ಲಿ ಕಾಂಗೆಸ್ ಕಾರ್ಯಕರ್ತರು ತೊಡಗಿದ್ದಾರೆ.

ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿರುವ ಜನಪ್ರತಿನಿಧಿಗಳು ಎನ್‌ಡಿಆರ್‌ಎಫ್ ಅನುದಾನವನ್ನು ತಮ್ಮ ಪಕ್ಷದ ಕಾರ್ಯಕರ್ತರುಗಳ ಮನೆಗಳಿಗೆ ತೆರಳುವ ರಸ್ತೆಗಳ ದುರಸ್ತಿಗೆ ಮಾತ್ರ ಬಳಕೆಯಗುವಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ರಾಕೇಶ್ ದೇವಯ್ಯ, ಇತರ ರಸ್ತೆಗಳ ನಿರ್ಲಕ್ಷ್ಯವನ್ನು ಖಂಡಿಸುವುದಾಗಿ ತಿಳಿಸಿದ್ದಾರೆ.

ಅಧಿಕಾರಿಗಳು ಜನಪ್ರತಿನಿಧಿಗಳ ಯಾವುದೇ ಒತ್ತಡಕ್ಕೆ ಮಣಿಯದೆ ಎನ್‌ಡಿಆರ್‌ಎಫ್ ಅನುದಾನ ಅಗತ್ಯ ಕಾಮಗಾರಿಗಳಿಗೆ ನ್ಯಾಯಯುತವಾಗಿ ವಿನಿಯೋಗವಾಗುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Continue Reading

Trending

error: Content is protected !!