State
ಬಿಎಂಎಸ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಕನ್ನಡ ಸಂಸ್ಕೃತಿ ಬೆಳೆಸಲು ಕರೆ
ಬೆಂಗಳೂರು: ಕನ್ನಡ ಎನ್ನುವುದು ಭಾಷೆಯಷ್ಟೆ ಅಲ್ಲ. ಅದು ಸಾವಿರಾರು ವರ್ಷಗಳಿಂದ ಅರಳಿರುವ ಈ ನೆಲದ ಸಂಸ್ಕೃತಿ. ಅದನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಸಂಘಟಿತವಾಗಿ ಮುಂದಾಗಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕರೆ ನೀಡಿದರು.
ಯಲಹಂಕ ಬಿ.ಎಂ.ಎಸ್. ವಾಸ್ತುಶಿಲ್ಪ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ದಸರಾ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡಿಗರ ಔದಾರ್ಯ ದೊಡ್ಡದು. ಆ ಕಾರಣಕ್ಕಾಗಿಯೇ ನಾವು ಅನ್ಯ ಭಾಷಿಕರನ್ನು ನಮ್ಮವರನ್ನಾಗಿ ಮಾಡಿಕೊಳ್ಳುತ್ತೇವೆ. ಆದರೆ ಇದೇ ಔದಾರ್ಯವನ್ನು ಬೇರೆ ಭಾಷಿಕರಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.
ಅಂದು ಸಿಲ್ಕ್ ಸಿಟಿಯಾಗಿದ್ದ ಬೆಂಗಳೂರು ಸಿಲಿಕಾನ್ ಸಿಟಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಎಜುಕೇಶನ್ ಹಬ್ ಆಗಿಯೂ ಗುರುತಿಸಿಕೊಂಡಿದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಲಹೆ ನೀಡಿದರು.
ವಿದ್ಯಾರ್ಥಿ ಜೀವನ ಮತ್ತೆ ಬರುವುದಿಲ್ಲ. ನಿಮ್ಮ ವ್ಯಕ್ತಿತ್ವ ರೂಪಿಸಿದ ತಂದೆ ತಾಯಿ ಅವರ ಶ್ರಮವನ್ನು ಸದಾ ನೆನಪಿನಲ್ಲಿ ಇಟ್ಟುಕೊಂಡು ಸಾಧಕರಾಗಿ ಹೊರಬನ್ನಿ ಎಂದು ಕರೆ ನೀಡಿದರು.
ಕಾಲೇಜಿನ ನಿರ್ದೇಶಕಿ ಡಾ.ಶೈಲಾ ಬಂಟನೂರ ಅವರು ಮಾತನಾಡಿ, ಹಲವು ವೈವಿಧ್ಯಮಯ ಸಂಸ್ಕೃತಿಗಳನ್ನು ಹೊಂದಿರುವ ಕನ್ನಡಿಗರು ಸಹನಾಶೀಲರು ಮತ್ತು ಸಾಧಕರಾಗಿದ್ದಾರೆ ಎಂದರು.
ವೇದಿಕೆಯಲ್ಲಿ ಡೀನ್ ಸುನಿಲ್ ಕುಮಾರ್, ಪ್ರೊ.ಶಶಾಂಕ್ ಚಕ್ರದೇವ್, ಆಡಳಿತಾಧಿಕಾರಿ ಶ್ಯಾಮಸುಂದರ, ಸಂಯೋಜಕ ರಾಕೇಶ್, ವಿದ್ಯಾರ್ಥಿ ಸಂಘಟಕರಾದ
ಸಮೃದ್, ಚಿರಂತ್, ಯಶವಂತ್
ಹಾಜರಿದ್ದರು.
ಕಾಲೇಜಿನ ಒಳಾಂಗಣ ಮತ್ತು ಹೊರಾಂಗಣ ಶೃಂಗರಿಸಿ ಕನ್ನಡ ಹಬ್ಬದ ವಾತಾವರಣವನ್ನು ಸೃಷ್ಟಿ ಮಾಡಲಾಗಿತ್ತು.

State
ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಖರೀದಿಸಿರುವ ಔಷಧಿ ಟೆಂಡರ್ ಬಗ್ಗೆ ಪರಿಶೀಲಿಸಲು ತಜ್ಞರ ಸಮಿತಿ ರಚನೆ : ಸಚಿವ ಡಾ.ಶರಣಪ್ರಕಾಶ ಪಾಟೀಲ್
ಬೆಳಗಾವಿ, ಸುವರ್ಣ ವಿಧಾನಸೌಧ ಡಿ.18 (ಕ.ವಾ.):- ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಖರೀದಿಸಿರುವ ಔಷಧಿ ಟೆಂಡರ್ ಬಗ್ಗೆ ಪರಿಶೀಲಿಸಲು ತಜ್ಞರ ಸಮಿತಿ ರಚಿಸಲಾಗುವುದು. ಸದರಿ ಸಮಿತಿ ನೀಡುವ ವರದಿ ಆಧರಿಸಿ ಮುಂದಿನ ಕ್ರಮವಹಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ. ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ: ಶರಣಪ್ರಕಾಶ ಆರ್.ಪಾಟೀಲ ತಿಳಿಸಿದರು.
ಅವರು ವಿಧಾನ ಪರಿಷತ್ ನಲ್ಲಿ ಶಾಸಕರಾದ ಸಿ.ಟಿ.ರವಿ, ಭಾರತಿ ಶೆಟ್ಟಿ, ಕೇಶವ ಪ್ರಸಾದ್, ಪ್ರತಾಪ್ ಸಿಂಹ ನಾಯಕ್ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದರು.
ಕೊಡಗು, ಹಾವೇರಿ, ರಾಯಚೂರು ಮೆಡಿಕಲ್ ಕಾಲೇಜುಗಳಲ್ಲಿ ಕರೆದಿರುವ ಟೆಂಡರ್ ಮೊತ್ತಕ್ಕೂ ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನಲ್ಲಿ ಕರೆದಿರುವ ಟೆಂಡರ್ ಮೊತ್ತಕ್ಕೂ ಔಷಧಗಳ ದರಗಳಲ್ಲಿ ವ್ಯತ್ಯಾಸ ಕಂಡು ಬಂದಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಅವಶ್ಯವಿದ್ದ ರೂ.4.90 ಕೋಟಿ ಮೊತ್ತದ ಔಷಧಗಳ ಪೈಕಿ ತುರ್ತು ಅವಶ್ಯವಿದ್ದ ರೂ.36 ಲಕ್ಷ ಮೊತ್ತದ ಔಷಧಗಳ ಸರಬರಾಜನ್ನು ಮಾತ್ರ ಪಡೆದು, ಉಳಿದ ಔಷಧಗಳ ಸರಬರಾಜು ಪ್ರಕ್ರಿಯೆಯನ್ನು ತಡೆ ಹಿಡಿಯಲಾಗಿರುತ್ತದೆ. ಔಷಧಗಳ ದರಗಳು ಹೆಚ್ಚಳವಾಗಿರುವ ಬಗ್ಗೆ, ಮತ್ತೊಮ್ಮೆ ಸಮಗ್ರವಾಗಿ ಪರಿಶೀಲಿಸಲು ತಜ್ಞರ ಸಮಿತಿಯೊಂದನ್ನು ರಚಿಸಿ, ವರದಿ ಪಡೆದು, ಮುಂದಿನ ಅಗತ್ಯ ಕ್ರಮ ವಹಿಸಲಾಗುವುದು ಎಂದು ಅವರು ಸದನಕ್ಕೆ ವಿವರಿಸಿದರು.
ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಿನಾಂಕ:31-03-2025 ರವರೆಗೆ ಕೆ.ಎಸ್ .ಡಿ.ಎಲ್.ಎಸ್. ವತಿಯಿಂದ ಉಚಿತವಾಗಿ ಜೀವ ರಕ್ಷಕ ಔಷಧಗಳನ್ನು ಸರಬರಾಜು ಪಡೆಯಲಾಗುತ್ತಿದ್ದು, ಸದರಿ ಔಷಧಿಗಳನ್ನು ಹೊರತುಪಡಿಸಿ, ಅವಶ್ಯಕವಿರುವ 204 ಜೀವರಕ್ಷಕ ಔಷಧಿಗಳನ್ನು 2024-25ನೇ ಸಾಲಿಗೆ ಟೆಂಡರ್ ಮುಖೇನ ಖರೀದಿಸಲಾಗಿದ್ದು, ಜಿಲ್ಲಾ ಆಸ್ಪತ್ರೆಯು ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಸ್ತಾಂತರಗೊಂಡ ನಂತರ 2025-26ನೇ ಸಾಲಿಗೆ 1 ವರ್ಷದ ಅವಧಿಗೆ ಜಾರಿಗೆ ಬರುವಂತೆ ಕ್ಲಿನಿಕಲ್ ವಿಭಾಗದ ಮುಖ್ಯಸ್ಥರುಗಳು ನೀಡಿರುವ ಬೇಡಿಕೆ ಪಟ್ಟಿಯಂತೆ ಅತ್ಯುತ್ತಮ ಗುಣಮಟ್ಟದ 416 ಜೀವ ರಕ್ಷಕ ಔಷಧಿಗಳನ್ನು ಪಡೆಯಲು ನಿಯಮಾನುಸಾರ ಟೆಂಡರ್ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿರುತ್ತದೆ.
ಈ ಹಂತದಲ್ಲಿ, 2024-25ನೇ ಸಾಲಿನಲ್ಲಿ ಜಿಲ್ಲಾಸ್ಪತ್ರೆಗೆ ಟೆಂಡರ್ ಮೂಲಕ ಖರೀದಿ ಮಾಡಲಾದ ಔಷಧಗಳ ದರಗಳನ್ನು ವೈದ್ಯಕೀಯ ಸಂಸ್ಥೆಯಲ್ಲಿ ಪ್ರಸಕ್ತ ಟೆಂಡರ್ ಕರೆಯಲಾಗಿರುವ ಔಷಧಗಳ ದರಗಳೊಂದಿಗೆ ಹೋಲಿಕೆ ಮಾಡಲಾಗಿ ಕೆಲವೊಂದು ಔಷಧಗಳ ಬೆಲೆಯಲ್ಲಿ ಗಣನೀಯ ವ್ಯತ್ಯಾಸ ಕಂಡು ಬಂದಿರುತ್ತದೆ. ಹಾಗೆಯೆ, ಕೊಡಗು, ಹಾವೇರಿ ಮತ್ತು ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳಲ್ಲಿ ಔಷಧಗಳನ್ನು ಟೆಂಡರ್ ಮೂಲಕ ಖರೀದಿಸಲಾಗುವ ದರಗಳನ್ನು ಪರಿಶೀಲಿಸಲಾಗಿ, ಕೆಲವೊಂದು ಔಷಧಗಳ ದರಗಳಲ್ಲಿ ಹೆಚ್ಚಳ ಕಂಡು ಬಂದಿರುತ್ತದೆ.
ಸಾಮಾನ್ಯವಾಗಿ, ವೈದ್ಯಕೀಯ ಕಾಲೇಜುಗಳ ಬೋಧಕ ಆಸ್ಪತ್ರೆಗಳಲ್ಲಿ ವಿವಿಧ ರೀತಿಯ ಹಾಸಿಗೆ ಸಾಮಥ್ರ್ಯವಿದ್ದು, ಆಯಾಯ ಸಂಸ್ಥೆಗಳು ಉಪಯೋಗಿಸುವ ಔಷಧ/ವಸ್ತುಗಳ ಬ್ರಾಂಡ್/ಕಂಪನಿ ಹಾಗೂ ಸಂಗ್ರಹಿಸುವ ಪ್ರಮಾಣ ಇತ್ಯಾದಿಗಳು ಒಂದು ಸಂಸ್ಥೆಗೂ ಮತ್ತೊಂದು ಸಂಸ್ಥೆಗೂ ವ್ಯತ್ಯಾಸವಾಗುವುದರಿಂದ ಎಲ್ಲಾ ವೈದ್ಯಕೀಯ ಸಂಸ್ಥೆಗಳು ಏಕರೂಪ ದರದಲ್ಲಿ ಔಷಧಗಳನ್ನು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಬದಲಿಗೆ, ಔಷಧಿ/ವಸ್ತುಗಳ ಪರಿಮಾಣ, ಗುಣಮಟ್ಟ, ಸಂಯೋಜನೆ (Composition) ಇತ್ಯಾದಿ ಆಧಾರದ ಮೇಲೆ ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳಲ್ಲಿ ದರಗಳನ್ನು ನಿಗದಿಪಡಿಸಿ, ವಿವಿಧ ಸ್ಥಳಗಳಲ್ಲಿ ವಿವಿಧ ದರಗಳಲ್ಲಿ ಔಷಧಗಳನ್ನು ಖರೀದಿಸಲಾಗುತ್ತದೆ ಎಂದು ತಿಳಿಸಿದರು.
State
ಬಿಜೆಪಿ ಕಚೇರಿ ಮುತ್ತಿಗೆ ವೇಳೆ ನಡೆದ ಕೈಚಳಕ : ಎಎಸ್ಐ ಮಾಂಗಲ್ಯ ಸರ ಕಳುವು
ಶಿವಮೊಗ್ಗ: ಕಾಂಗ್ರೆಸ್ ಪಕ್ಷದ ಪ್ರತಿಭಟನೆ ವೇಳೆ ಬಂದೋಬಸ್ತ್ ಡ್ಯೂಟಿಯಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯ ಕೊರಳಲ್ಲಿದ್ದ 40 ಗ್ರಾಂ ತೂಕದ ಮಾಂಗಲ್ಯ ಸರವನ್ನೇ ಕಳ್ಳರು ಎಗರಿಸಿದ ಆಘಾತಕಾರಿ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಗಾಂಧಿ ಕುಟುಂಬದ ವಿರುದ್ಧದ ಪಿತೂರಿ ಕಾನೂನುಬಾಹಿರ ಎಂದು ಸಾಬೀತಾದ ಹಿನ್ನೆಲೆಯಲ್ಲಿ, ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದ್ದರು. ಈ ವೇಳೆ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಎಎಸ್ಐ ಅಮೃತಾ ಅವರು ಪ್ರತಿಭಟನಾಕಾರರನ್ನು ಬಂಧಿಸುವ ವೇಳೆ ಈ ಘಟನೆ ನಡೆದಿದೆ.
ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಬಂದೋಬಸ್ತ್ನಲ್ಲಿ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯ ಎಎಸ್ಐ ಆಗಿರುವ ಅಮೃತಾ ಬಂದೋಬಸ್ತ್ ಕರ್ತವ್ಯದಲ್ಲಿದ್ದರು. ಚಿನ್ನದ ಮಾಂಗಲ್ಯ ಸರ ಕಳುವಾಗಿರುವುದು ತಿಳಿಯುತ್ತಿದ್ದಂತೆಯೇ ಎಎಸ್ಐ ಅಮೃತಾ ಅವರು ಸ್ಥಳದಲ್ಲೇ ಕಣ್ಣೀರು ಹಾಕಿದ ಘಟನೆ ನಡೆಯಿತು. ಕರ್ತವ್ಯ ನಿರತ ಅಧಿಕಾರಿಯೊಬ್ಬರ ಸರವೇ ಕಳುವಾಗಿರುವುದು ಇಲಾಖೆಗೆ ಮತ್ತು ಸಹೋದ್ಯೋಗಿಗಳಿಗೆ ಭಾರೀ ಮುಜುಗರ ಹಾಗೂ ಆತಂಕ ತಂದಿದೆ. ಕೂಡಲೇ ಸ್ಥಳದಲ್ಲಿದ್ದ ಇತರೆ ಪೊಲೀಸ್ ಅಧಿಕಾರಿಗಳು ಅಮೃತಾ ಅವರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬುವ ಪ್ರಯತ್ನ ಮಾಡಿದರು.
ಖದೀಮರ ಪತ್ತೆಗೆ ಮುಂದಾದ ಪೊಲೀಸರು
ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಈ ಬಗ್ಗೆ ತೀವ್ರ ತನಿಖೆ ಆರಂಭಿಸಿದ್ದಾರೆ. ಪ್ರತಿಭಟನೆಯ ವೇಳೆ ಸೆರೆಹಿಡಿಯಲಾದ ವಿಡಿಯೋ ತುಣುಕುಗಳು ಮತ್ತು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಕಳ್ಳರ ಪತ್ತೆಗೆ ಜಾಲ ಬೀಸಲಾಗಿದೆ. ಕಾಂಗ್ರೆಸ್ ಪ್ರತಿಭಟನೆಯ ಗದ್ದಲದ ನಡುವೆ ಈ ದುಷ್ಕೃತ್ಯ ಎಸಗಿದವರು ಯಾರು ಎಂಬುದು ಪೊಲೀಸರ ತನಿಖೆಯಿಂದಲೇ ತಿಳಿಯಬೇಕಿದೆ.
State
ಡಿ.19ಕ್ಕೆ ತಗಡೂರು ಅವರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಬೆಂಗಳೂರು:ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ), ನೀಡುವ ಲೋಹಿಯಾ ಪ್ರಶಸ್ತಿಗೆ ಈ ಬಾರಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಆಯ್ಕೆಯಾಗಿದ್ದು, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಡಿ.19ಕ್ಕೆ ನಡೆಯಲಿದೆ.
ರೈತ, ಜನಪರ ಹೋರಾಟ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿನ ಸೇವೆ ಹಾಗೂ ಪತ್ರಕರ್ತರ ಸಂಘಟನೆಯಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ತಗಡೂರು ಅವರನ್ನು ಆಯ್ಕೆ ಮಾಡಲಾಗಿತ್ತು. ಬೆಂಗಳೂರು ನಾಗರೀಕರ ವೇದಿಕೆ ಮತ್ತು ವಿವಿಧ ಸಂಘಟನೆಗಳು ಏರ್ಪಡಿಸಿರುವ ನಾಗರೀಕ ಸನ್ಮಾನ ಕಾರ್ಯಕ್ರಮದಲ್ಲಿಯೇ ಲೋಹಿಯಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಟ್ರಸ್ಟ್ನ ಅಧ್ಯಕ್ಷರಾದ ಡಾ.ಎಸ್.ರಾಮಲಿಂಗೇಶ್ವರ (ಸಿಸಿರಾ) ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ.19ರಂದು ಶುಕ್ರವಾರ ಬೆಳಗ್ಗೆ 11.15 ಗಂಟೆಗೆ ಶೇಷಾದ್ರಿಪುರಂನಲ್ಲಿರುವ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಗಾಂಧಿ ಭವನದ ಅಧ್ಯಕ್ಷರಾದ ಡಾ.ವೂಡೇ ಪಿ ಕೃಷ್ಣ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಜಾವಾಣಿ ಸಂಪಾದಕರಾದ ರವೀಂದ್ರ ಭಟ್ ಐನಕೈ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಕನ್ನಡ ಪ್ರಭ ಸಂಪಾದಕರಾದ ರವಿ ಹೆಗಡೆ ಅವರು ಅಭಿನಂದನಾ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ದೂರದರ್ಶನ ಕಾರ್ಯಕ್ರಮ ಮುಖ್ಯಸ್ಥರಾದ ಎಚ್.ಎನ್.ಆರತಿ, ಶ್ರೀ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ನ ಅಧ್ಯಕ್ಷರಾದ ಡಾ.ಎಂ.ಆರ್.ವೆಂಕಟೇಶ್ ಭಾಗವಹಿಸಲಿದ್ದಾರೆ ಎಂದು ಸಿಸಿರಾ ತಿಳಿಸಿದ್ದಾರೆ
-
Hassan12 hours agoರೌಡಿಶೀಟರ್ ಜೆಸಿಬಿ ಮಂಜನ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್
-
Mysore9 hours agoಗೃಹಲಕ್ಷ್ಮೀ ಯೋಜನೆ ಬಗ್ಗೆ ಸದನಕ್ಕೆ ತಪ್ಪು ಮಾಹಿತಿ: ಲಕ್ಷ್ಮೀ ಹೆಬ್ಬಾಳ್ಕರ್ ವಜಾಗೆ ಹೇಮಾ ನಂದೀಶ್ ಆಗ್ರಹ
-
Hassan43 minutes agoಕುಡಿದ ಮತ್ತಿನಲ್ಲಿ ಯುವಕನೋರ್ವನ ಬರ್ಬರ ಹ*ತ್ಯೆ
-
Special11 hours ago994 ಪಿಡಿಒ ಹುದ್ದೆಗಳ ನೇಮಕಾತಿ 2026: ಪದವೀಧರರಿಗೆ ಭರ್ಜರಿ ಸರ್ಕಾರಿ ಉದ್ಯೋಗ ಅವಕಾಶ
-
Hassan10 hours agoಕರ್ನಾಟಕ ಮಾದಾರ ಮಹಾಸಭಾ ಸದಸ್ಯತ್ವ ನೋಂದಣಿ ಹಾಗೂ ತಾಲ್ಲೂಕು ಘಟಕಗಳ ಆಯ್ಕೆ
-
Mysore4 hours agoಡಿ.29ರಂದು ವಿಶ್ವಮಾನವ ಧರ್ಮದ ಅಧಿವೇಶನ
-
Chamarajanagar7 hours agoರೈತ ನಾಯಕರಾದ ಪಿ.ಆರ್.ಪಾಂಡಿಯನ್, ಸೆಲ್ವರಾಜ್ ಬಿಡುಗಡೆ ಒತ್ತಾಯಿಸಿ ಮನವಿ
-
Mysore6 hours agoನಿಗಮ ಮಟ್ಟದ ಕ್ರೀಡಾ ತಂಡಗಳ ಆಯ್ಕೆ ಪ್ರಕ್ರಿಯೆ
