Connect with us

Kodagu

ಅರ್ಚಕರ ಮೇಲೆ ಹಲ್ಲೆ : ಕೊಡಗು ಬಿಜೆಪಿ ಖಂಡನೆ

Published

on

ಮಡಿಕೇರಿ: ಕಟ್ಟೆಮಾಡು ಗ್ರಾಮದ ಶ್ರೀಮಹಾ ಮೃತ್ಯುಂಜಯ ದೇವಾಲಯದ ಪ್ರಧಾನ ಅರ್ಚಕ ವಿಘ್ನೇಶ್ ಭಟ್ ಅವರ ಮೇಲೆ ನಡೆದಿರುವ ಹಲ್ಲೆ ಪ್ರಕರಣವನ್ನು ಕೊಡಗು ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅರ್ಚಕರ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಕೊಡಗು ಜಿಲ್ಲೆಯಲ್ಲಿ ಇನ್ನು ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.


ಅರ್ಚಕರ ಮನೆಯ ಬಳಿ ತೆರಳಿ ಅರ್ಚಕರು ಹಾಗೂ ಅವರ ತಾಯಿಯ ಮೇಲೆ ಹಲ್ಲೆ ಮಾಡಿರುವುದು ಅಮಾನವೀಯ ಕೃತ್ಯವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಕಿಡಿಗೇಡಿಗಳಿಗೆ ಕಾನೂನಿನ ಬಗ್ಗೆ ಭಯವಿಲ್ಲದಾಗಿದೆ. ಹಲ್ಲೆ, ದೌರ್ಜನ್ಯ, ಜನಾಂಗೀಯ ಸಂಘರ್ಷ, ದರೋಡೆ, ಗೋಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಜನಸಾಮಾನ್ಯರು ಭಯಮುಕ್ತರಾಗಿ ಜೀವನ ಸಾಗಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರವಿ ಕಾಳಪ್ಪ ಆರೋಪಿಸಿದ್ದಾರೆ.

Continue Reading

Kodagu

ಭಗವತಿ ದೇವಸ್ಥಾನ ಅಭಿವೃದ್ಧಿ ಪಡಿಸಲು ಸಹಕರಿಸಲಾಗುವುದು: ಪೊನ್ನಣ್ಣ

Published

on

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು: ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಗ್ರಾಮಗಳಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಪೂರ್ಣಗೊಂಡ ರಸ್ತೆಯ ಉದ್ಘಾಟನೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ. ಎಸ್. ಪೊನ್ನಣ್ಣ ಅವರು ನೆರವೇರಿಸಿದರು.

ನರಿಯಂದಡ ಪಂಚಾಯಿತಿ ವ್ಯಾಪ್ತಿಯ ಕರಡ ಸಮೀಪದ ಮಲೆತೀರಿಕೆ ದೇವಸ್ಥಾನಕ್ಕೆ ತೆರಳುವ ರಸ್ತೆಗೆ ಪ್ರವಾಸೋದ್ಯಮ ಇಲಾಖೆ ಹಾಗೂ ಶಾಸಕರ ಅನುದಾನದ 25 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ ಕಾಂಕ್ರೆಟ್ ರಸ್ತೆಯನ್ನು ಶಾಸಕರಾದ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.

ಬಳಿಕ ಕಡಂಗ ಅರಪಟ್ಟು ಶ್ರೀ ಭಗವತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನ ಅಭಿವೃದ್ಧಿ ಪಡಿಸಲು ಸಹಕರಿಸುವ ಭರವಸೆ ನೀಡಿದರು.

ಎಡಪಾಲ ಗ್ರಾಮದಲ್ಲಿ ಅಲ್ಪಸಂಖ್ಯಾತ ಇಲಾಖೆಯಿಂದ 20 ಲಕ್ಷ ರೂ ವೆಚ್ಚದ 3 ಕಾಮಗಾರಿಗಳಲ್ಲಿ 2 ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಕುರಿಕಡೆಗೆ ತೆರಳುವ ನೂತನವಾಗಿ ನಿರ್ಮಿಸಿದ ಕಾಂಗ್ರೆಟ್ ರಸ್ತೆಯನ್ನು ಶಾಸಕರು ಉದ್ಘಾಟಿಸಿ ಮತಾನಾಡಿದರು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪ ಇರುವ ನಿರಂತರ ಅಪಘಾತ ಸಂಭವಿಸುವ ಸೇತುವೆಯನ್ನು ವೀಕ್ಷಣೆ ಮಾಡಿದ ಶಾಸಕರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಚೆಯ್ಯಂಡಾಣೆ,ಬಾವಲಿ,ಪಾರಾಣೆ ಸಂಪರ್ಕ ಕಲ್ಪಿಸುವ ಕಾಕೆತೋಡು ಸೇತುವೆ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯ ಅಂದಾಜು 62ಲಕ್ಷ ಅನುದಾನದಲ್ಲಿ ಮೀಸಲು ಉದ್ದೇಶಿಸಿರುವ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದರು.

ನಂತರ ಪುನರ್ ನಿರ್ಮಾಣ ಗೊಳ್ಳುತ್ತಿರುವ ಅಯ್ಯಪ್ಪ ದೇವಸ್ಥಾನ ಹಾಗೂ ಮುತ್ತಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿದರು.ಬಳಿಕ ತಟ್ಟಮಕ್ಕಿ ಪೈಸಾರಿಗೆ ತೆರಳುವ ರಸ್ತೆಗಳನ್ನು ವೀಕ್ಷಿಸಿದ ಶಾಸಕರು ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಭರವಸೆ ನೀಡಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ, ಉಪಾಧ್ಯಕ್ಷ ವಿನೋದ್ ನಾಣಯ್ಯ,ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ನಾಪೋಕ್ಲು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಉಮ್ಮರ್, ಡಿಸಿಸಿ ಸದಸ್ಯರಾದ ಮಣಿ ಅಯ್ಯಮ್ಮ, ಶಾಫಿ, ದೇವಸ್ಥಾನ ಅಧ್ಯಕ್ಷ ಸೊಮ್ಮಯ್ಯ, ಕೆಡಿಪಿ ಸದಸ್ಯ ಲವ ಚಿಣ್ಣಪ್ಪ, ಮಾಳೆಟೀರ ಪ್ರಶಾಂತ್, ಐತಿಚಂಡ ಪ್ರಕಾಶ್, ಬೀಮಯ್ಯ, ಮೇದುರ ಗಣು ಕುಶಾಲಪ್ಪ, ಬಿದ್ದಪ್ಪ, ವಿರಾಜಪೇಟೆ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಸದಸ್ಯ ನಾಸರ್, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.

Continue Reading

Kodagu

ಮಹಿಳೆ ಬಲಿ ಪಡೆದಿದ್ದ ಕಾಡಾನೆ ಸೆರೆ: ದುಬಾರೆ ಆನೆ ಶಿಬಿರಕ್ಕೆ ಸ್ಥಳಾಂತರ

Published

on

ಗೋಣಿಕೊಪ್ಪ: ಚನ್ನಂಗೊಲ್ಲಿಯಲ್ಲಿ ಎರಡು ದಿನಗಳ ಹಿಂದೆ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ದಾಳಿ ನಡೆಸಿ ಮಹಿಳೆಯನ್ನು ಬಲಿಪಡಿದಿದ್ದ ಕಾಡಾನೆಯನ್ನು ಸೆರೆ ಹಿಡಿಯಲು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರು ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕ ಎ. ಎಸ್. ಪೊನ್ನಣ್ಣ ಅವರು ಅರಣ್ಯ ಸಚಿವ ಈಶ್ವರ ಕಂಡ್ರೆ ಅವರೊಂದಿಗೆ ಮಾತನಾಡಿ ಕೂಡಲೇ ಕಾರ್ಯಚರಣೆ ಅನುಮತಿ ನೀಡಿ ಪುಂಡಾಣೆಯನ್ನು ಸೆರೆ ಹಿಡಿಯಲು ಮನವಿ ಮಾಡಿದ ಬೆನ್ನಲ್ಲೇ ಶನಿವಾರ ಕಾರ್ಯಚರಣೆ ಆರಂಭಿಸಲಾಯಿತು.

ಕಾರ್ಯಚರಣೆಯನ್ನು ಡಿ ಸಿ ಎಫ್ ಜಗನ್ನಾಥ್ ನೇತೃತ್ವದಲ್ಲಿ ಅರಣ್ಯ ಇಲಾಖೆ ನಡೆಸಿ ಸಂಜೆ 3 ಗಂಟೆ ಅಂದಾಜಿಗೆ ಕಾಡಾನೆಗೆ ಅರವಳಿಕೆಯ ಮದ್ದನ್ನು ನೀಡಿ ಪ್ರಜ್ಞೆ ತಪ್ಪಿಸಿ ಆನೆಯನ್ನು ಸೆರೆ ಹಿಡಿಯಲಾಯಿತು. ನಂತರ ದುಬಾರೆ ಆನೆ ಶಿಬಿರಕ್ಕೆ ಈ ಆನೆಯನ್ನು ಸ್ಥಳಾಂತರ ಮಾಡಲಾಯಿತು.

ಮತ್ತಿಗೋಡು, ದುಬಾರೆ, ಹಾರಂಗಿ ಶಿಬಿರದಿಂದ ಆರು ಸಾಕಾನೆಗಳು ಆಗಮಿಸಿ, ಅರವಳಿಕೆ ನೀಡುವ ಮೂಲಕ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ. ಕಾಡಾನೆಗೆ ಯಾವುದೇ ಸಮಸ್ಯೆಯಾಗದಂತೆ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಅವರು ತಿಳಿಸಿದ್ದಾರೆ.

Continue Reading

Kodagu

ಕೊಡಗು ವಿವಿ ಮುಚ್ಚುವ ಪ್ರಸ್ತಾಪಕ್ಕೆ ವಿರಾಜಪೇಟೆ ಬಿಜೆಪಿ ತೀವ್ರ ವಿರೋಧ

Published

on

ಮಡಿಕೇರಿ : ಕೊಡಗು ವಿಶ್ವ ವಿದ್ಯಾಲಯವನ್ನು ಮುಚ್ಚುವ ರಾಜ್ಯ ಸರ್ಕಾರದ ಪ್ರಸ್ತಾಪಕ್ಕೆ ವಿರಾಜಪೇಟೆ ಬಿಜೆಪಿ ಮಂಡಲ ತೀವ್ರ ವಿರೋಧ ವ್ಯಕ್ತಪಡಿಸಿದೆ. ರಾಜ್ಯದ ಭವಿಷ್ಯದ ದೃಷ್ಟಿಯಿಂದ ಶಿಕ್ಷಣಕ್ಕೆ ಆದ್ಯತೆ ನೀಡುವಂತೆ ಒತ್ತಾಯಿಸಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ವಿರಾಜಪೇಟೆ ಬಿಜೆಪಿ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಅವರು, ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಹಿಂದಿನ ಬಿಜೆಪಿ ಸರ್ಕಾರ ಜಿಲ್ಲೆಗೊಂದು ವಿಶ್ವ ವಿದ್ಯಾಲಯ ಎಂಬ ಗುರಿಯೊಂದಿಗೆ ಕೊಡಗು ಸೇರಿದಂತೆ ೯ ಜಿಲ್ಲೆಗಳಲ್ಲಿ ನೂತನ ವಿವಿಯನ್ನು ಸ್ಥಾಪಿಸಿತು. ಆದರೆ ಇದೀಗ ರಾಜ್ಯವನ್ನು ಆಳುತ್ತಿರುವ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯವನ್ನು ಕಡೆಗಣಿಸಿ ವಿವಿಗಳನ್ನು ಮುಚ್ಚುವ ನಿರ್ಧಾರ ಮಾಡಿರುವುದು ಖಂಡನೀಯವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅತ್ಯಂತ ಮಹತ್ವಾಕಾಂಕ್ಷೆಯಿಂದ ಬಡ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಿಂದಿನ ಬಿಜೆಪಿ ಸರ್ಕಾರ ನೂತನ ವಿವಿಯನ್ನು ಸ್ಥಾಪಿಸಿತು. ಈ ಹಂತದಲ್ಲೇ ವಿಧಾನಸಭಾ ಚುನಾವಣೆಯೂ ಘೋಷಣೆಯಾದ ಹಿನ್ನೆಲೆ ವಿವಿಗಳಿಗೆ ನೀಡಬೇಕಾದ ಅನುದಾನ ಮತ್ತು ಸೌಲಭ್ಯಗಳನ್ನು ಪೂರೈಸಲು ಸಾಧ್ಯವಾಗಿರಲಿಲ್ಲ. ಒಂದು ವೇಳೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದರೆ ವಿವಿಗಳಿಗೆ ನೀಡಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಿ ಸದೃಢಗೊಳಿಸಲಾಗುತ್ತಿತ್ತು. ಆದರೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಖಜಾನೆ ಖಾಲಿ ಮಾಡಿಕೊಂಡು ಕುಳಿತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯ ಅನುದಾನ ನೀಡುತ್ತಿಲ್ಲ. ಇದೀಗ ಖರ್ಚು ವೆಚ್ಚವನ್ನು ಕುಗ್ಗಿಸುವ ಸಲುವಾಗಿ ಶಿಕ್ಷಣ ಮಂದಿರಕ್ಕೆ ಕೈಹಾಕಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವೇ ಕಳೆದಿದೆ. ಆದರೆ ನೂತನ ವಿವಿಗಳಿಗೆ ಬೇಕಾದ ಅನುದಾನ ಮತ್ತು ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ವಿಫಲವಾಗಿದೆ. ಇದೇ ಕಾರಣದಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವುದು ಸ್ಪಷ್ಟವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸ್ಥಾಪನೆಯಾಗಿರುವ ವಿವಿಗಳಿಗೆ ಅಗತ್ಯ ಅನುದಾನ ನೀಡಲು ಸರ್ಕಾರ ಮುಂದಾಗಬೇಕು. ಯುವ ಸಮೂಹ ಶಿಕ್ಷಣದ ಮೂಲಕ ದೇಶ ಕಟ್ಟಬೇಕಾಗಿದೆ. ಕೊಡಗು ವಿವಿ ಮುಚ್ಚುವುದಕ್ಕೆ ಬಿಜೆಪಿ ಎಂದಿಗೂ ಬಿಡುವುದಿಲ್ಲ, ಒಂದು ವೇಳೆ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ ಹೋರಾಟ ಹಾದಿ ಹಿಡಿಯಬೇಕಾಗುತ್ತದೆ ಎಂದು ರಾಕೇಶ್ ದೇವಯ್ಯ ಎಚ್ಚರಿಕೆ ನೀಡಿದ್ದಾರೆ.

Continue Reading

Trending

error: Content is protected !!