Chikmagalur
ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಚಿವ ಕೆ.ಜೆ.ಜಾರ್ಜ್ ಭೇಟಿ : ಪರಿಶೀಲನೆ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭಾನುವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು, ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಜಿಲ್ಲೆಯ ಮೂಡಿಗೆರೆ, ಚಿಕ್ಕಮಗಳೂರು, ಕೊಪ್ಪ ಮತ್ತು ಶೃಂಗೇರಿ ತಾಲೂಕುಗಳಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವರು, ಸಂತ್ರಸ್ತರ ಅಹವಾಲುಗಳನ್ನು ಆಲಿಸಿದರು.
ಸಾಂತ್ವನ ಕೇಂದ್ರಕ್ಕೂ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳ ಬಗ್ಗೆ ಸಂತ್ರಸ್ತರಿಂದ ಮಾಹಿತಿ ಪಡೆದರು. ಸಾಂತ್ವನ ಕೇಂದ್ರಗಳಲ್ಲಿ ಎಲ್ಲಾ ಮೂಲ ಸೌಕರ್ಯ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮೂಡಿಗರೆ ತಾಲೂಕಿನ ಕುನ್ನಹಳ್ಳಿಯಿಂದ ಮಳೆ ಹಾನಿ ವೀಕ್ಷಣೆ ಆರಂಭಿಸಿದ ಸಚಿವ ಕೆ.ಜೆ.ಜಾರ್ಜ್, ಸಂಜೆವರೆಗೂ ಮೂರು ತಾಲೂಕುಗಳ ೧೦ ಪ್ರದೇಶಗಳಿಗೆ ಭೇಟಿ ನೀಡಿ, ಮನೆ ಕುಸಿತದಿಂದ ತೊಂದರೆ ಎದುರಿಸುತ್ತಿರುವ ಸಂತ್ರಸ್ತರ ಅಹವಾಲು ಆಲಿಸಿದರು. ಅಲ್ಲದೆ, ತಕ್ಷಣದ ಪರಿಹಾರವಾಗಿ ೧.೨೦ ಲಕ್ಷ ರೂ. ನೀಡುವುದರ ಜತೆಗೆ ಇನ್ನೂ ೩.೮೦ ಲಕ್ಷ ರೂ. ಮಂಜೂರು ಮಾಡಿ ಮನೆ ನಿರ್ಮಿಸಿಕೊಡುವುದಾಗಿ ತಿಳಿಸಿದರು.
ಗುಡ್ಡ ಕುಸಿತ ಸಂಭವಿಸಿದ ಅರೇನೂರು, ಹುತ್ತಿನಗದ್ದೆ, ಬಸರೀಕಟ್ಟೆ, ಆನೆಗುಂಡ ಮುಂತಾದ ಪ್ರದೇಶಗಳಿಗೆ ತೆರಳಿದ ಸಚಿವರು ಪರಿಸ್ಥಿತಿ ಅವಲೋಕಿಸಿದರು. ಅಲ್ಲದೆ, ಜಯಪುರ-ಕೊಪ್ಪ ರಸ್ತೆಯಸಲ್ಲಿ ರಸ್ತೆ ಕುಸಿದ ನಾರ್ವೆ ಪ್ರದೇಶಕ್ಕೂ ಭೇಟಿ ನೀಡಿದರು.
ಮಳೆಗಾಲದಲ್ಲಿ ಪ್ರತಿ ವರ್ಷ ಗುಡ್ಡ ಕುಸಿತ, ರಸ್ತೆ ಕುಸಿತದಂತಹ ಅನಾಹುತಗಳು ಸಂಭವಿಸುತ್ತವೆ. ಅದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಆದ್ದರಿಂದ ತಕ್ಷಣ ಸಮಸ್ಯೆ ಬಗೆಹರಿಸಲು ತಾತ್ಕಾಲಿಕ ಕ್ರಮ ಕೈಗೊಳ್ಳುವುದರ ಜತೆಗೆ ಶಾಶ್ವತ ಪರಿಹಾರಕ್ಕಾಗಿ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಳೆಯಿಂದ ಕುಸಿದು ಬಿದ್ದಿರುವ ಮೂಡಿಗೆರೆ ತಾಲೂಕಿನ ಚಂಡುಗೋಡು, ಆವಳ್ಳಿ ಶಾಲಾಬಕಟ್ಟಡಗಳನ್ನು ವೀಕ್ಷಿಸಿದ ಸಚಿವರು, ಜಿಲ್ಲೆಯಲ್ಲಿ ಭಾರೀ ಮಳೆ, ಗಾಳಿಗೆ ಕುಸಿದು ಬಿದ್ದಿರುವ ಶಾಲಾ ಕಟ್ಟಡಗಳ ಸುರಸ್ತಿ ಹಾಗೂ ಹೊಸಕೊಠಡಿಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೂಡಲೇ ಅಂದಾಜು ಪಟ್ಟಿ ಸಿದ್ದಪಡಿಸಿ ನಿರ್ಮಾಣ ಕಾರ್ಯಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಶಾಲಾ ಕಟ್ಟಡಗಳ ದುರಸ್ತಿಗೆ ಕ್ರಮ ಕೈಗೊಳ್ಳಾಗುವುದು ಎಂದು ಅಧಿಕಾರಿಗಳು ಹೇಳಿದಾಗ ಪ್ರತಿಕ್ರಿಯಿಸಿದ ಸಚಿವರು, ಶೀಘ್ರ ಕೆಲಸ ಆರಂಭಿಸುವಂತೆ ತಾಕೀತು ಮಾಡಿದರು.
ಸಚಿವರ ಭೇಟಿ ವೇಳೆ ಸ್ಥಳೀಯರು ವಿದ್ಯುತ್ ಸಮಸ್ಯೆಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ವಿವರಿಸಿದರು. ಜನ್ನಾಪುರ ವ್ಯಾಪ್ತಿಯಲ್ಲಿ ೨೦ ದಿನಗಳಿಂದ ವಿದ್ಯುತ್ ಇಲ್ಲದೇ ಇರುವ ಬಗ್ಗೆ ಹೇಳಿದಾಗ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಪದ್ಮಾವತಿ ಅವರು ಮಧ್ಯೆ ಪ್ರವೇಶಿಸಿ, ಅಲ್ಲಿ ಸಬ್ ಸ್ಟೇಷನ್ ನಿರ್ಮಾಣಕ್ಕೆ ಎರಡು ದಿನಗಳಲ್ಲಿ ಕಾರ್ಯಾದೇಶ ನೀಡಲಾಗುವುದು ಎಂದರು. ಕೂಡಲೇ ಕಾರ್ಯಪ್ರವೃತ್ತವಾಗುವಂತೆ ಸಚಿವರು ನಿರ್ದೇಶನ ನೀಡಿದರು.
ಕೊಪ್ಪ ತಾಲೂಕಿನ ಬಸರೀಕಟ್ಟೆ ಪಶು ಆಸ್ಪತ್ರೆ ಹಿಂಭಾಗ ಗುಡ್ಡ ಕುಸಿತವಾಗಿ ಅಪಾಯಕಾರಿ ಸ್ಥಿತಿ ಉದ್ಭವವಾಗಿರುವ ಪ್ರದೇಶವನ್ನು ಪರಿಶೀಲಿಸಿದ ಸಚಿವರು, ಸಂಬಂಧಿಸಿದ ಇಲಾಖೆಗಳ ಸಮನ್ವಯದೊಂದಿಗೆ ಸಮಸ್ಯೆ ಬಗೆಹರಿಸಲು ತಿಳಿಸಿದರು.
ಶಾಸಕರಾದ ನಯನಾ ಮೋಟಮ್ಮ, ರಾಜೇಗೌಡ, ಎಂ.ಕೆ.ಪ್ರಾಣೇಶ್, ಬಿ.ಬಿ.ನಿಂಗಯ್ಯ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾದಿಕಾರಿ ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮ್ಟೆ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಪದ್ಮಾವತಿ, ರಾಷ್ಟ್ರೀಯ ಹೆದ್ದಾರಿ, ಬೃಹತ್ ರಸ್ತೆಗಳು, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಜರಿದ್ದರು
Chikmagalur
ರಾಹುಲ್ ಗಾಂಧಿ ಹೇಳಿಕೆ ದೇಶದ ಸಮಗ್ರತೆ ಮತ್ತು ಐಕ್ಯತೆಗೆ ಧಕ್ಕೆ ಉಂಟಾಗಲಿದೆ: ಬಿಜೆಪಿ
ಚಿಕ್ಕಮಗಳೂರು: ರಾಹುಲ್ಗಾಂಧಿ ಹೇಳಿಕೆಯನ್ನು ವಿರೋಧಿಸಿ ನಗರದಲ್ಲಿ ಶನಿವಾರ ಬಿಜೆಪಿ ಯುವಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಕಚೇರಿ ಪಾಂಚಜನ್ಯದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಆಜಾದ್ವೃತ್ತಕ್ಕೆ ಆಗಮಿಸಿ, ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ಗಾಂಧಿ ವಿರುದ್ಧ ಘೋಷಣೆ ಕೂಗಿದರು. ದೇಶವನ್ನು ಕೀಳಾಗಿ ಕಾಣುವ ರಾಹುಲ್ಗಾಂಧಿಗೆ ಧಿಕ್ಕಾರ, ರಾಷ್ಟ್ರಕಂಟಕ ರಾಹುಲ್ಗಾಂಧಿಗೆ ಧಿಕ್ಕಾರವೆಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು.
ಎಐಸಿಸಿ ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ಹಾಗೂ ಸಂಸದ ರಾಹುಲ್ಗಾಂಧಿಯವರು ನಮ್ಮ ಹೋರಾಟ ಭಾರತದ ವಿರುದ್ಧ ಎಂದು ಹೇಳಿಕೆ ನೀಡಿದ್ದು, ಇದು ದುರುದ್ದೇಶಪೂರ್ವಕ ಮತ್ತು ಪ್ರಚೋದನಾತ್ಮಕ ಹೇಳಿಕೆಯಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ರೀತಿಯ ಹೇಳಿಕೆ ದೇಶದ ಸಮಗ್ರತೆ ಮತ್ತು ಐಕ್ಯತೆಗೆ ಧಕ್ಕೆ ಉಂಟಾಗಲಿದೆ. ರಾಹುಲ್ಗಾಂಧಿ ನೀಡಿರುವ ಹೇಳಿಕೆ ರಾಷ್ಟ್ರವಿರೋಧಿ ಹಾಗೂ ದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುವ ಹೇಳಿಕೆಯಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತರಿಗೆ ದೇಶವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ, ಪ್ರಚೋದನಾತ್ಮಕ ಹೇಳಿಕೆ ಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋ ತುಣುಕುಗಳನ್ನು ಆಧರಿಸಿ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ಕೋಟ್ಯಾನ್, ಪ್ರಧಾನಕಾರ್ಯದರ್ಶಿ ಶಶಿಆಲ್ದೂರು, ಬಿಜೆಪಿ ಪ್ರಧಾನಕಾರ್ಯದರ್ಶಿ ಡಾ.ನರೇಂದ್ರ, ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಂತಾ ಅನಿಲ್ಕುಮಾರ್, ಮಾಧ್ಯಮ ಪ್ರಮುಖ್ ಅಂಕಿತಾ, ಹಿಂದುಳಿದ ವರ್ಗ ರಾಜ್ಯಕಾರ್ಯದರ್ಶಿ ಬಿ.ರಾಜಪ್ಪ, ಮುಖಂಡರಾದ ನೆಟ್ಟೆಕೆರೆಹಳ್ಳಿ ಜಯಣ್ಣ, ಹಿರೇಮಗಳೂರು ರೇವನಾಥ ಇದ್ದರು.
Chikmagalur
ಕಳಸ ಠಾಣಾಧಿಕಾರಿ ಮೇಲೆ ಪತ್ನಿಯಿಂದಲೇ ದೂರು ದಾಖಲು
ಕಳಸ: ಕಳಸ ಆರಕ್ಷಕ ಠಾಣೆಯ ಪಿಎಸ್ಐ ನಿತ್ಯಾನಂದ ಗೌಡ ವಿರುದ್ಧ ಅವರ ಪತ್ನಿಯೇ ದೂರು ದಾಖಲಿಸಿರುವ ಘಟನೆ ನಡೆದಿದೆ. ಕಳಸ ಠಾಣೆಯ ಠಾಣಾಧಿಕಾರಿ ನಿತ್ಯಾನಂದ ಅವರ ಪತ್ನಿ ಅಮಿತಾ ಅವರು ಕಳಸ ಠಾಣೆಯಲ್ಲಿ ಶುಕ್ರವಾರ ತನ್ನ ಪತಿ ವಿರುದ್ಧ ದೂರು ದಾಖಲಿಸಿದ್ದರು.
ಅಮಿತಾ ಅವರು ನೀಡಿದ ದೂರಿನಲ್ಲಿ ತನಗೆ ತನ್ನ ಪತಿ ನಿತ್ಯಾನಂದ ತೀವ್ರ ಹಲ್ಲೆ ನಡೆಸಿದ್ದು ದೌರ್ಜನ್ಯ ನಡೆಸಿದ್ದಾರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರಕರಣ ದಾಖಲಿಸಿದ್ದರು. ಜೊತೆಗೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬರುವವರೆಗೂ ತಾನು ಠಾಣೆ ಬಿಟ್ಟು ಹೋಗಲ್ಲ ಎಂದು ಹೈಡ್ರಾಮಾ ನಡೆಸಿದ್ದರು.
ಅಮಿತಾ ತಾಯಿಯಿಂದಲೇ ಸ್ಪಷ್ಟೀಕರಣ : ಅಮಿತಾ ಅವರು ನೀಡಿದ ದೂರಿಗೆ ಸಂಬಂಧಿಸಿದಂತೆ ಅಮಿತಾ ಅವರ ತಾಯಿ ವಿಡಿಯೋ ಮುಖೇನ ಸ್ಪಷ್ಟೀಕರಣ ನೀಡಿದ್ದು ” ನಿತ್ಯಾನಂದ ತುಂಬಾ ಒಳ್ಳೆಯ ವ್ಯಕ್ತಿ ಅವರು ಯಾವ ತಪ್ಪನ್ನೂ ಮಾಡಿಲ್ಲ ಅವರ ಮೇಲೆ ಯಾವುದೇ ಪ್ರಕರಣ ದಾಖಲಿಸಬೇಡಿ ಅಮಿತಾ ಅವರಿಗೆ ತುಂಬಾ ಕೋಪವಿದ್ದು ಅವರು ಬೇರೆಯವರ ಕುಮ್ಮಕ್ಕಿನಿಂದ ಈ ರೀತಿಯಾಗಿ ದೂರು ದಾಖಲಿಸಿದ್ದಾರೆ ಇದರಲ್ಲಿ ನಿತ್ಯಾನಂದ ಅವರ ತಪ್ಪೇನು ಇಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.
ನಿತ್ಯಾನಂದ ಅವರಿಂದಲೂ ಅಮಿತಾ ಮೇಲೆ ಪ್ರತಿದೂರು ದಾಖಲು
ಇತ್ತ ಶುಕ್ರವಾರ ನಿತ್ಯಾನಂದ ಅವರ ಪತ್ನಿ ದೂರು ದಾಖಲಿಸಿದ ಬೆನ್ನಲ್ಲೇ ಶನಿವಾರ ನಿತ್ಯಾನಂದ ಕೂಡ ಅಮಿತಾ ಅವರ ಮೇಲೆ ಪ್ರತಿದುರು ದಾಖಲಿಸಿದ್ದಾರೆ. ನಿತ್ಯಾನಂದ ಅವರ ದೂರಿನ ಸಾರಾಂಶದಲ್ಲಿ ” ನಾನು ಸುಮಾರು 11 ವರ್ಷಗಳ ಹಿಂದೆ ಮದುವೆಯಾಗಿದ್ದು ಒಬ್ಬ ಮಗನಿರುತ್ತಾನೆ. ನನ್ನ ಪತ್ನಿ ಅಮಿತಾ ಹಾಗೂ ಮಗ ಉಡುಪಿಯಲ್ಲಿ ವಾಸವಿದ್ದು, ಸ್ವಂತ ಮನೆಯನ್ನು ಹೊಂದಿರುತ್ತಾರೆ. ನನಗೆ ಹಾಗೂ ನನ್ನ ಪತ್ನಿಯ ನಡುವೆ ಕೌಟುಂಬಿಕವಾಗಿ ಹೊಂದಾಣಿಕೆ ಇಲ್ಲದ ಕಾರಣ ಹೇಗೋ ಮಗನಿಗಾಗಿ ಇಲ್ಲಿಯವರೆಗೆ ಜೀವನ ಮಾಡಿಕೊಂಡು ಬಂದಿರುತ್ತೇನೆ.
ನನ್ನ ಪತ್ನಿಗೆ ವಿವಾಹವೇತರ ಅಕ್ರಮ ಸಂಬಂಧವಿದ್ದು ಹಾಗೂ ನಾನು ಅದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ನನ್ನ ಇಲಾಖೆಯ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಸುಳ್ಳು ಆರೋಪ ಮಾಡಿ ದೂರು ನೀಡಿರುತ್ತಾಳೆ. ಇದರಿಂದ ಬೇಸತ್ತು ನಾನು 2024 ನೇ ಸಾಲಿನಲ್ಲಿ ಉಡುಪಿಯ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನ ಕೋರಿ ಸರ್ಜಿ ಸಲ್ಲಿಸಿದ್ದು, ಅದರಂತೆ ವಿಚಾರಣೆ ನಡೆಯುತ್ತಿರುತ್ತದೆ. ಅದರಂತೆ 17/01/2025 ರಂದು ಉಡುಪಿಯ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆ ಇದ್ದು, ನಾನು ರಜೆಯ ಮೇಲೆ ತೆರಳಿ ನನ್ನ ವಕೀಲರ ಸಮಕ್ಷಮ ನ್ಯಾಯಾಲಯಕ್ಕೆ ಹಾಜರಾಗಿ ದಾಖಲಾತಿಗಳನ್ನು ನೀಡಿ ಬಂದಿರುತ್ತೇನೆ.ಈ ದಿನ ನನ್ನ ಪತ್ನಿಯು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿರುವುದಿಲ್ಲ. ನಾನು
ವಾಪಾಸು ನ್ಯಾಯಾಲಯದಿಂದ ಹೊರಟು ಬರುತ್ತಿರುವಾಗ ನನಗೆ ನನ್ನ ಪತ್ನಿಯು ಹಲವು ಬಾರಿ ದೂರವಾಣಿ ಕರೆ ಮಡಿ ನಿನ್ನನ್ನು ಇಲಾಖೆಯಿಂದ ತೆಗಿಸುತ್ತೇನೆ. ಹಾಗೂ ನಿನ್ನ ಕಥೆ ಮುಗಿಸುತ್ತೇನೆಂದು ಬೆದರಿಕೆ ಹಾಕಿರುತ್ತಾಳೆ. ಅದರಂತೆ ನಾನು ವಾಪಾಸು ಬಂದು ನನ್ನ ಪೊಲೀಸ್ ವಸತಿ ಗೃಹದಲ್ಲಿರುವಾಗ ರಾತ್ರಿ ಸುಮಾರು 08:30 ಗಂಟೆಗೆ ನನ್ನ ಮನೆಯ ಬಾಗಿಲು ಗೋಡೆ ಹಾಗೂ ಕಿಟಕಿಗೇ ಯಾರೋ ಕಲ್ಲುಗಳಿಂದ ಹೊಡೆಯುತ್ತಿದ್ದ ಶಬ್ಧ ಕೇಳುತ್ತಿದ್ದು, ಆ ಸಮಯ ನಾನು ಕಿಟಕಿಯ ಮರೆಯಿಂದ ಇಣಿಕಿ ಯಾರು ನೀವು ಎಂದು ಕೇಳಿದಾಗ ನನ್ನ ಮನೆಯ ಕಿಟಕಿಯ ಗಾಜಿಗೆ ಕಲ್ಲಿನಲ್ಲಿ ಜೋರಾಗಿ ಹೊಡೆದಿದ್ದು, ಆ ಸಮಯ ಕಿಟಕಿಯ ಗಾಜುಗಳು ಒಡೆದು ಹೋಗಿ, ಮನೆಯ ಒಳಗೆ ಚೆಲ್ಲಾಪಿಲ್ಲಿಯಾಗಿ ಗಾಜಿನ ಚೂರುಗಳು ಮನೆಯ ಒಳಗೆ ಬಿದ್ದಿರುತ್ತವೆ.
ಆ ಸಮಯ ಹೊಡೆದಿರುವುದು ಯಾರೆಂಬುದಾಗಿ ಒಡೆದ ಗಾಜಿನ ಕಿಟಕಿಯಿಂದ ಇಣುಕಿ ನೋಡಿದಾಗ ನನ್ನ ಪತ್ನಿ ಅಮಿತಾ ಹಾಗೂ ಇನ್ನಿಬ್ಬರು ಯಾರೋ ವ್ಯಕ್ತಿಗಳು ಕೈಯಲ್ಲಿ ಕಲ್ಲು ದೊಣ್ಣೆ ಹಿಡಿದುಕೊಂಡು ಇರುವುದು ಕಂಡು ಬಂದಿದ್ದು ನನ್ನನ್ನು ಕಂಡು ಆಕೆಯೊಂದಿಗೆ ಬಂದವರು ಯಾವುದೋ ಕಾರು ಅಥವಾ ಇತರ ಯಾವುದೋ ವಾಹನದಲ್ಲಿ ಹೋದ ರೀತಿ ಶಬ್ದ ಕೇಳಿರುತ್ತದೆ. ಆ ಸಮಯ ನಾನು ಗಾಬರಿಗೊಂಡು ಠಾಣೆಯ ಕರ್ತವ್ಯದಲ್ಲಿದ್ದ ಸಿಬ್ಬಂದಿ ಹಾಗೂ ನನ್ನ ತಂಗಿ ಮೇನಕಾರವರಿಗೆ ದೂರವಾಣಿ ಕರೆ ಮಾಡಿ ಕೂಡಲೇ ಬರಲು ತಿಳಿಸಿರುತ್ತೇನೆ. ಅಷ್ಟರಲ್ಲಿ ನನ್ನ ತಂಗಿ ಮೇನಕಾ, ತಂಗಿಯ ಗಂಡ ಚಂದ್ರಕಾಂತ್ ಕೊಠಾರಿ ಸಿಬ್ಬಂದಿಯವರು ಬಂದಿದ್ದು, ಆ ಸಮಯ ನನ್ನ ಪತ್ನಿಯು ನನ್ನ ಗಂಡ ನನಗೆ ಹೊಡೆದು ಗಾಯಗೊಳಿಸಿದ್ದು, ನನ್ನನ್ನು ಕಾಪಾಡಿ ಎಂದು ಜೋರಾಗಿ ಅಳುತ್ತಾ ಪೊಲೀಸ್ ವಸತಿ ಗೃಹದ ಸುತ್ತಾ ಮುತ್ತಾ ಕಿರುಚಾಡುತ್ತಾ ನನ್ನನ್ನು ಕಾಪಾಡಿ ಎಂದು ಸಾರ್ವಜನಿಕರನ್ನು ಕರೆಸಿಕೊಳ್ಳೂವಂತೆ ಮಾಡಿದ್ದಳು.
ಅಷ್ಟರಲ್ಲೆ ನಾನು ಸಿಬ್ಬಂದಿಗಳ ಸಮಕ್ಷಮ ಬಾಗಿಲು ತೆಗೆದಾಗ ನನ್ನ ಪತ್ನಿಯು ನನ್ನ ಕೊರಳ ಪಟ್ಟಿಗೆ ಕೈಹಾಕಿ ಅಲ್ಲೆ ಇದ್ದ ಕಲ್ಲಿನಿಂದ ಹಲ್ಲೆ ಮಾಡಲು ಮುಂದಾಗಿದ್ದು, ಆ ಸಮಯ ಸಿಬ್ಬಂದಿಗಳು ತಡೆದು ಬುದ್ದಿವಾದ ಹೇಳಿರುತ್ತಾರೆ. ನಂತರ ನನ್ನ ಪತ್ನಿಯನ್ನು ಸಿಬ್ಬಂದಿಗಳು ಸಂತೈಸಿ ಠಾಣೆಗೆ ಕರೆದುಕೊಂಡು ಹೋಗಿದ್ದು, ಈ ಬಗ್ಗೆ ನಾನು ಪೊಲೀಸ್ ಅಧೀಕ್ಷಕರು ಹಾಗೂ ಎಲ್ಲ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ತಿಳಿಸಿರುತ್ತೇನೆ. ನಂತರ ಠಾಣೆಗೆ ನನ್ನ ಪತ್ನಿಯು ಮಹಮ್ಮದ್ ರಫೀಕ್ ನನ್ನು ಠಾಣೆಗೆ ಕರೆಯಿಸಿ ಆತನೊಂದಿಗೆ ಎಲ್ಲವನ್ನು ತಿಳಿಸುತ್ತಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ನನ್ನ ಪತ್ನಿಯು ನಾನು ಪೊಲೀಸ್ ವಸತಿಗೃಹದಲ್ಲಿ ಒಬ್ಬನೇ ಇರುವುದನ್ನು ಪಾಲೋ ಮಾಡಿಕೊಂಡು ಬಂದು ನನ್ನನ್ನು ಕೊಲ್ಲುವ ಉದ್ದೇಶದಿಂದ ಮಹಮ್ಮದ್ ರಫೀಕ್ ಹಾಗೂ ಇತರರೊಂದಿಗೆ ಬಂದು ಹಲ್ಲೆ ಮಾಡಲು ಪ್ರಯತ್ನಿಸಿ ಕಲ್ಲು ಹಾಗೂ ಮಾರಕ ಆಯುಧಗಳಿಂದ ಮನೆಯ ಕಿಟಕಿಯ ಗಾಜನ್ನು ಒಡೆದು ಹಾಕಿದ ನನ್ನ ಪತ್ನಿ ಅಮಿತಾ ಹಾಗೂ ಆಕೆಗೆ ಸಹಕರಿಸಿದ ಮಹಮ್ಮದ್ ರಫೀಕ್ ಹಾಗೂ ಇತರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಕೋರಿದೆ” ಎಂದು ನಿತ್ಯಾನಂದ ಅವರು ಪ್ರತಿದೂರಿನಲ್ಲಿ ದಾಖಲಿಸಿದ್ದಾರೆ.
Chikmagalur
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಟಿ.ರಾಜಶೇಖರ್ ಆಯ್ಕೆ
ಚಿಕ್ಕಮಗಳೂರು-ಇಲ್ಲಿನ ಜಿಲ್ಲಾ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಟಿ.ರಾಜಶೇಕರ್, ಉಪಾಧ್ಯಕ್ಷರಾಗಿ ಟಿ.ಡಿ.ಮಲ್ಲೇಶ್ ಗೌರವ ಕಾರ್ಯದರ್ಶಿಯಾಗಿ ಎಂ.ಎಸ್ ಪ್ರದೀಪ್ಕುಮಾರ್ ಆಯ್ಕೆಯಾಗಿದ್ದಾರೆ.
ಇಂದು ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಮೇಲ್ಕಂಡವರನ್ನು ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ವೆಂಕಟೇಶ್ ಘೋಷಿಸಿದರು.
ನಂತರ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ಟಿ.ರಾಜಶೇಖರ್ ಸಮಾಜದ ಹಿರಿಯರು ಸ್ಥಾಪಿಸಿದ ಒಕ್ಕಲಿಗರ ಸಂಘದ ಅಭಿವೃದ್ಧಿಗೆ ಇಂದು ಆಯ್ಕೆಯಾದ ನಿರ್ದೇಶಕರು, ಪದಾಧಿಕಾರಿಗಳು ಶ್ರಮಿಸಬೇಕೆಂದು ಕರೆ ನೀಡಿದರು.
ಕಳೆದ ಮೂರು ವರ್ಷದ ಅವಧಿಯಲ್ಲಿ ಸಾಧಿಸಿರುವ ಅಭಿವೃದ್ಧಿ ಕಾರ್ಯಗಳನ್ನು ಮೌಲ್ಯಮಾಪನ ಮಾಡಿ ನಿರ್ದೇಶಕರುಗಳು ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ, ಜನಾಂಗದ ಮತ್ತು ಹಿರಿಯರ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದಾಗಿ ಭರವಸೆ ನೀಡಿದರು.
ಮುಂದಿನ ಮೂರು ವರ್ಷಗಳ ಅವಧಿಗೆ ಮತ್ತೋಮ್ಮೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಈ ಅವಧಿಯಲ್ಲಿ ಸಮಾಜದ ಮತ್ತು ಸಂಘಟನೆಗೆ ಒತ್ತುನೀಡಿ ಕೆಲಸ ಮಾಡಲು ಬದ್ಧವಾಗಿದ್ದೇವೆ, ಆಯ್ಕೆ ಮಾಡಿರುವ ನಿರ್ದೇಶಕರು ಹಾಗೂ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಉಪಾಧ್ಯಕ್ಷ ಟಿ.ಡಿ ಮಲ್ಲೇಶ್ ಮಾತನಾಡಿ ನೂತನ ಪದಾಧಿಕಾರಿಗಳ ಮೇಲೆ ವಿಶ್ವಾಸವಿಟ್ಟು ಸಹಕಾರದಿಂದ ಆಯ್ಕೆ ಮಾಡಿರುವ ೨೫ ನಿರ್ದೇಶಕರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಗೌರವ ಕಾರ್ಯದರ್ಶಿ ಎಂ.ಎಸ್ ಪ್ರದೀಪ್ ಕುಮಾರ್ ಮಾತನಾಡಿ ಸಂಘದ ಈ ಸ್ಥಾನಕ್ಕೆ ಅಗೌರವ ತರದೆ ನಿಮ್ಮೆಲ್ಲರ ಸಲಹೆ ಸಹಕಾರ ಪಡೆದು ಸಮುದಾಯದ ಅಭಿವೃದ್ಧಿಗೆ ಅಧ್ಯಕ್ಷರೊಂದಿಗೆ ಸೇರಿ ಶ್ರಮಿಸುವುದಾಗಿ ಭರವಸೆ ನೀಡಿದರು.
ಮಾಜಿ ಗೌರವ ಕಾರ್ಯದರ್ಶಿ ಎಂ.ಸಿ.ಪ್ರಕಾಶ್ ಮಾತನಾಡಿ ಒಕ್ಕಲಿಗರ ಸಂಘ ಹಿಂದಿನವರು ಹಾಕಿದ ಬುನಾದಿಯಾಗಿದ್ದು ಜಿಲ್ಲೆ, ರಾಜ್ಯದಲ್ಲಿಯೇ ಪ್ರತಿಷ್ಠಿತ ಸಂಘಟನೆಯಾಗಿದೆ, ಸಂಘದಲ್ಲಿ ಇದುವರೆಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಸಂಘದಲ್ಲಿದ್ದ ಸದಸ್ಯರು ಹೊರಗಡೆ ಸಂಘದ ಕುರಿತು ಅಪಪ್ರಚಾರ ಮಾಡಬೇಡಿ ಎಂದು ಮನವಿ ಮಾಡಿದರು.
ಜಿಲ್ಲಾ ಒಕ್ಕಲಿಗರ ಸಂಘ ಇತರೆ ಸಮಾಜದ ಸಂಘಟನೆಗಳಿಗೆ ಮಾದರಿಯಾಗಬೇಕು, ಸಂಘದಲ್ಲಿ ಪಾರದರ್ಶಕತೆ ಇರುತ್ತದೆ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಇದರಲ್ಲಿ ಸಂಶಯ ಅನಗತ್ಯ ಎಂದರು.
ಸೇವಾ ಮನೋಭಾವವನ್ನು ಹೊಂದಿರುವ ಉದ್ದೇಶದಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು ರಾಜಕೀಯ ಮಾಡಲು ಬಂದಿಲ್ಲ, ಸ್ವಾರ್ಥಕ್ಕೆ ಅವಕಾಶವಿಲ್ಲ, ಒಕ್ಕಲಿಗ ಸಮಾಜದಲ್ಲಿ ಪ್ರಜ್ಞಾವಂತ ಮತದಾರರಿದ್ದು ಸೇವಾ ಮನೋಭಾವ ಹೊಂದಿರುವವರನ್ನು ಆಯ್ಕೆ ಮಾಡುತ್ತಾರೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪಿ.ರಾಜು, ಎಂ.ಅಶೋಕ್, ಎಂ.ಬಿ.ಸತೀಶ್, ಬಿ.ಸಿ.ಲೋಕಪ್ಪಗೌಡ, ಐ.ಸಿ.ಶ್ರೀನಾಥ್, ಮನುಕುಮಾರ್.ಯು.ಪಿ, ಕೆ.ಪಿ.ರಾಜೇಂದ್ರ, ಹೆಚ್.ಎಸ್.ಮೋಹನ್, ವಿ.ಕೆ.ಹರಿಣಾಕ್ಷಿ ನಾಗರಾಜ್, ಕೆ.ಬಿ.ಅನಂತೇಗೌಡ, ಕೆ.ಬಿ.ಸಜಿತ್, ಜೆ.ಪಿ.ಹೊಯ್ಸಳಗೌಡ, ಐ.ವಿ.ಮಂಜುಚೇತನ್, ಕೆ.ಯು ರತೀಶ್ಕುಮಾರ್, ಭವ್ಯನಟೇಶ್, ಪವಿತ್ರ, ಸಂತೋಷ್.ಎಂ.ಬಿ, ಕೆ.ಪಿ.ಪೃಥ್ವಿರಾಜ್, ಹೆಚ್.ಕೆ.ನವೀನ್, ಸಿ.ಟಿ.ರೇವತಿ, ಪ್ರಮೋದ್, ಟಿ.ಎಂ.ಉಮಾಶಂಕರ್, ಮಾಜಿ ಅಧ್ಯಕ್ಷರುಗಳಾದ ಸಂದೀಪ್, ಹಲಸೆ ಶಿವಣ್ಣ, ರಾಜೇಗೌಡ.ಕೆ, ಮಾಜಿ ಕಾರ್ಯದರ್ಶಿ ಉಮೇಶ್ಚಂದ್ರ, ಲಕ್ಷ್ಮಣ್ಗೌಡ ಉಪಸ್ಥಿತರಿದ್ದರು.
-
Mysore23 hours ago
ಮೈಸೂರು ಮಹಾರಾಜರಿಗೆ ಮದುವೆ ಆಮಂತ್ರಣ ನೀಡಿದ ಡಾಲಿ
-
Sports22 hours ago
ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟ ಸುರೇಶ್ ರೈನಾ
-
Sports21 hours ago
Kho Kho world cup 2025: ಭಾರತ ಮಹಿಳಾ ಹಾಗೂ ಪುರುಷ ತಂಡಗಳೇ ಚಾಂಪಿಯನ್
-
National - International21 hours ago
ಮಹಾ ಕುಂಭಮೇಳ ದರ್ಶನಕ್ಕಾಗಿ ಹುಬ್ಬಳ್ಳಿಯಿಂದ ವಿಶೇಷ ರೈಲು ವ್ಯವಸ್ಥೆ : ಈ ದಿನ ಮಾತ್ರ!
-
Hassan8 hours ago
ಅನುಮತಿ ಪಡೆಯೇ ಚಿತ್ರೀಕರಣ ಉಪಕರಣ ತಂದಿಟ್ಟಿದ್ದಕ್ಕೆ ದಂಡ ವಿಧಿಸಿಧ್ದ ಅರಣ್ಯ ಇಲಾಖೆ
-
Hassan8 hours ago
ಹಾಸನ : ಆನ್ಲೈನ್ ಗೇಮ್ಗೆ ಯುವಕ ಬಲಿ
-
Hassan2 hours ago
ಸುತ್ತೂರು ಮಠದಿಂದ 2 ಲಕ್ಷಕ್ಕೂ ಅಧಿಕ ಉಪಕರಣ ಸರಕಾರಿ ವಾಣಿವಿಲಾಸ ಶಾಲೆಗೆ ಕೊಡುಗೆ
-
Mysore23 hours ago
ಪ್ಲಾಸ್ಟಿಕ್ ತ್ಯಾಜ್ಯ ಕಾನನ ಪ್ರವೇಶಿಸದಂತೆ 2 ಹಂತದ ತಪಾಸಣೆ: ಈಶ್ವರ ಖಂಡ್ರೆ