Connect with us

Chikmagalur

ಕರ್ನಾಟಕ ಸಾರಿಗೆ ನೌಕರರ ಮುಷ್ಕರ: ಚಿಕ್ಕಮಗಳೂರಲ್ಲಿ ಉತ್ತಮ ಪ್ರತಿಕ್ರಿಯೆ

Published

on

ಚಿಕ್ಕಮಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಸ್ ನಿಲ್ದಾಣ ಸಂಪೂರ್ಣ ಖಾಲಿ ಖಾಲಿಯಾಗಿದ್ದು ಎಂದಿನಂತೆ ಪ್ರಯಾಣಿಕರು ಬಸ್‌ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಆದರೆ ಬೆಳೆಗ್ಗೆಯಿಂದಲೇ ಒಂದೇ ಒಂದು ಬಸ್ ಗಳು ಸಂಚಾರ ನಡೆಸುತ್ತಿಲ್ಲ.

ಹೀಗಾಗಿ ಕೆಲಸ ಕಾರ್ಯಗಳಿಗೆ ತೆರಳುವವರು ಪರದಾಡುವಂತಾಗಿದೆ. ಪ್ರತಿನಿತ್ಯ ಬೆಳಗ್ಗೆ 4 ಗಂಟೆಯಿಂದಲೇ ಬಸ್ಸುಗಳು ಸಂಚಾರ ಆರಂಭಗೊಳ್ಳುತ್ತಿದ್ದವು ಆದರೆ ಇಂದು ಒಂದೇ ಒಂದು ಬಸ್ಸಿಲ್ಲದೆ ಬಸ್‌ ನಿಲ್ದಾಣ ಬೀಕೊ ಎನ್ನುತ್ತಿದೆ.

ಚಿಕ್ಕಮಗಳೂರು ವಿಭಾಗಕ್ಕೆ ಒಳಪಡುವ ಆರು ಡಿಪೋಗಳ 560 ಬಸ್ ಗಳು ಸಂಪೂರ್ಣ ನಿಲುಗಡೆಗೊಂಡಿದ್ದು ಚಾಲಕರು ಹಾಗೂ ನಿರ್ವಾಹಕರು ಬಸ್ ನಿಲ್ದಾಣ ಹಾಗೂ ಡಿಪೋಗಳಲ್ಲಿ ಮುಂದಿನ ಬೆಳವಣಿಗೆಗಾಗಿ ಕಾದು ನಿಂತಿದ್ದಾರೆ.

Continue Reading

Chikmagalur

ಕೆಂಪೇಗೌಡರ ಕನಸಿನ ಬೆಂಗಳೂರು ನಮ್ಮ ಹೆಮ್ಮೆಯ ಸಂಕೇತ : ತಮ್ಮಯ್ಯ

Published

on

ಚಿಕ್ಕಮಗಳೂರು:  ಇಂದು ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿರುವ ಬೆಂಗಳೂರು ಮಹಾನಗರದ ಸೃಷ್ಟಿಗೆ ಕಾರಣರಾದ ನಾಡಪ್ರಭು ಕೆಂಪೇಗೌಡರ ಜಯಂತಿಯು ಕೇವಲ ಒಬ್ಬ ವ್ಯಕ್ತಿಯ ಸ್ಮರಣೆಯಲ್ಲ. ಅದು ನಮ್ಮ ನಾಡಿನ ಅಸ್ಮಿತೆ, ಸಂಸ್ಕøತಿ ಮತ್ತು ಐತಿಹಾಸಿಕ ಹೆಮ್ಮೆಯ ಸಂಕೇತವಾಗಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.
ಚಿಕ್ಕಮಗಳೂರಿನ ಕುವೆಂಪು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಸಮಾರಂಭದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಕೆಂಪೇಗೌಡರು ಕೇವಲ ಒಬ್ಬ ಸಾಮಂತ ರಾಜರಾಗಿರಲಿಲ್ಲ. ಅವರು ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯರ ಕಾಲದಲ್ಲಿ ಯಲಹಂಕ ನಾಡನ್ನು ಆಳುತ್ತಿದ್ದಾಗ, ಇಡೀ ರಾಜ್ಯವನ್ನಾಳುವ ಮಹಾರಾಜರಿಗಿಂತಲೂ ಮಿಗಿಲಾದ ವಿಶಾಲವಾದ ದೂರದೃಷ್ಟಿ ಮತ್ತು ಕನಸುಗಳನ್ನು ಹೊಂದಿದ್ದರು. ಧರ್ಮನಿಷ್ಠೆ, ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ಸುಧಾರಣೆಗಳ ಮೂಲಕ ಜಾತಿ-ಮತ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಂಡ ಮಹಾನ್ ನಾಯಕ ಎಂದು ಬಣ್ಣಿಸಿದರು.
1537ರಲ್ಲಿ ಬೆಂಗಳೂರು ಒಂದು ಸಣ್ಣ ಪಟ್ಟಣವಾಗಿ ರೂಪುಗೊಳ್ಳುತ್ತಿದ್ದ ಕಾಲದಲ್ಲೇ ಕೆಂಪೇಗೌಡರು ನಗರದ ನಾಲ್ಕೂ ದಿಕ್ಕುಗಳಲ್ಲಿ ಗಡಿಗೋಪುರಗಳನ್ನು ನಿರ್ಮಿಸುವ ಮೂಲಕ ಭವಿಷ್ಯದ ನಗರದ ವ್ಯಾಪ್ತಿಯನ್ನು ಅಂದಾಜಿಸಿದ್ದರು. ಅಂದಿನ ಅವರ ಪುರಸಭಾ ಮಾದರಿಯ ಆಡಳಿತ ಇಂದು ಜಗತ್ತೇ ಮೆಚ್ಚುವ ಮಹಾನಗರಕ್ಕೆ ಅಡಿಪಾಯವಾಗಿದೆ. ಅಷ್ಟೇ ಅಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂದು ಗುರುತಿಸಿಕೊಂಡಿರುವ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ‘ನಾಡಪ್ರಭು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ನಾಮಕರಣ ಮಾಡಿರುವುದೇ ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ತಿಳಿಸಿದರು.
ಕೆಂಪೇಗೌಡರು ಅಂದಿನ ಕಾಲದಲ್ಲೇ ಪರಿಸರ ಹಾಗೂ ಜಲಸಂರಕ್ಷಣೆಗೆ ಆಪಾರ ಒತ್ತು ನೀಡಿದ್ದರು. ಬೆಂಗಳೂರಿನ ನಿರ್ಮಾಣದ ಸಂದರ್ಭದಲ್ಲಿ ಅವರು ನಿರ್ಮಿಸಿದ ನೂರಾರು ಕೆರೆಗಳು ಮತ್ತು ನೀರಿನ ಮೂಲಗಳು ಅವರ ಪರಿಸರ ಪ್ರೇಮ ಹಾಗೂ ದೂರದೃಷ್ಟಿಗೆ ಸಾಕ್ಷಿಯಾಗಿವೆ. ಕೆಂಪೇಗೌಡರ ಆಡಳಿತದಲ್ಲಿ ಜಾತಿ-ಧರ್ಮದ ಭೇದವಿರಲಿಲ್ಲ. ಅವರು ಎಲ್ಲ ಧರ್ಮಗಳ ದೇವಸ್ಥಾನಗಳನ್ನು ನಿರ್ಮಿಸಿ ಸಮಗ್ರತೆಯನ್ನು ಕಾಪಾಡಿದರು. ಅವರು ಕೇವಲ ಕೋಟೆ-ಕೆರೆಗಳನ್ನು ಕಟ್ಟಲಿಲ್ಲ, ಜನರ ವಿಶ್ವಾಸದ ಮೇಲೆ ನಾಡನ್ನು ಕಟ್ಟಿದರು. ಮಾತನಾಡುವುದಕ್ಕಿಂತ ಹೆಚ್ಚಾಗಿ ಕೆಲಸ ಮಾಡುವುದರಲ್ಲಿ ಅವರು ನಂಬಿಕೆ ಇಟ್ಟಿದ್ದರು ಎಂದು ತಿಳಿಸಿದ ಅವರು, ಇಂತಹ ಮಹಾನ್ ಚೇತನದ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕೇಂದ್ರ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ರಾಜ್ಯ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ, ಇಡೀ ಪ್ರಪಂಚವೇ ಹೆಮ್ಮೆಪಡುವಂತಹ ಮತ್ತು ಎಲ್ಲರ ಕಣ್ಣು ಸೆಳೆಯುವಂತಹ ಸುಂದರ ಬೆಂಗಳೂರು ನಗರವನ್ನು ನಿರ್ಮಿಸಿದ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ. ಎಂದು ತಿಳಿಸಿದರು.
ಕೆಂಪೇಗೌಡರು ಕೇವಲ ಒಬ್ಬ ರಾಜ, ಶೂರನಾಗಿರದೆ, ಮಾನವೀಯತೆ ಹಾಗೂ ಸಾಮಾಜಿಕ ಕಳಕಳಿಯುಳ್ಳ ಪರಿಸರ ಪ್ರೇಮಿಯಾಗಿದ್ದರು. ಎಲ್ಲಾ ಸಮಾಜಗಳನ್ನು ಪ್ರೀತಿಯಿಂದ ಕಾಣುವ ಜ್ಯಾತ್ಯತೀತ ಭಾವನೆ ಅವರಲ್ಲಿತ್ತು. ಕೃಷ್ಣದೇವರಾಯನ ವಿಜಯನಗರ ಸಾಮ್ರಾಜ್ಯದ ಯುದ್ಧಗಳಲ್ಲೂ ಕೆಂಪೇಗೌಡರ ತಂದೆ ಕೆಂಪನಂಜೇಗೌಡರು ಶೌರ್ಯ ಪ್ರದರ್ಶಿಸಿದ್ದರು. ಅವರೊಂದಿಗೆ ಬಾಲಕ ಕೆಂಪೇಗೌಡರು ಕೂಡ ಯುದ್ಧಕ್ಕೆ ತೆರಳುತ್ತಿದ್ದರು ಎಂದು ಇತಿಹಾಸವನ್ನು ಸ್ಮರಿಸಿದರು.
ಕೇವಲ 59 ವರ್ಷಗಳ ಜೀವಿತಾವಧಿಯಲ್ಲಿ ಕೆಂಪೇಗೌಡರು ಸುಮಾರು 40 ವರ್ಷಗಳ ಕಾಲ ಯಶಸ್ವಿಯಾಗಿ ಆಡಳಿತ ನಡೆಸಿದರು. ಕ್ರಿ.ಶ. 1534ರ ಮಕರ ಸಂಕ್ರಾಂತಿಯ ಶುಭ ದಿನದಂದು ಬೆಂಗಳೂರು ನಗರ ನಿರ್ಮಾಣಕ್ಕೆ ಅಡಿಪಾಯ ಹಾಕಲಾಯಿತು. ಅಂದಿನ ದಟ್ಟವಾದ ಕಾಡನ್ನು ಕಡಿದು, ಕೇವಲ ಮೂರೇ ವರ್ಷಗಳಲ್ಲಿ ಸುಂದರ ನಗರವನ್ನು ನಿರ್ಮಿಸಿ ಮುಗಿಸಿದರು. ಬೆಂಗಳೂರನ್ನು ನಿರ್ಮಿಸುವಾಗ ಕೆಂಪೇಗೌಡರು ಸಮಾಜದ ಎಲ್ಲಾ ವರ್ಗದವರನ್ನು ಸಮಷ್ಟಿಯಾಗಿ ಒಳಗೊಂಡಿದ್ದರು. ಜನರ ಕಸುಬು ಮತ್ತು ಜಾತಿಗೆ ಅನುಗುಣವಾಗಿ ಚಿಕ್ಕಪೇಟೆ, ಬಳೇಪೇಟೆ, ಕುರುಬರಪೇಟೆ, ಕುಂಬಾರಪೇಟೆ, ಗಾಣಿಗರಪೇಟೆ ಸೇರಿದಂತೆ ಒಟ್ಟು 66 ವಿವಿಧ ಪೇಟೆಗಳನ್ನು ಅವರು ನಿರ್ಮಿಸಿದರು. ಅಲ್ಲದೆ, ಅಂದಿನ ಕಾಲದಲ್ಲಿ ವಾಹನ ಸೌಕರ್ಯಗಳಿಲ್ಲದೆ ಕೇವಲ ನಡಿಗೆಯನ್ನೇ ಆಶ್ರಯಿಸಿ, ತಲೆಯ ಮೇಲೆ ಭಾರವಾದ ಹೊರೆ ಹೊತ್ತು ಸಾಗುತ್ತಿದ್ದ ಜನ ಸಾಮಾನ್ಯರು ವಿಶ್ರಮಿಸಲು ಮತ್ತು ಹೊರೆ ಇಳಿಸಿಕೊಳ್ಳಲು ಅನುಕೂಲವಾಗುವಂತೆ ಆಯಕಟ್ಟಿನ ಸ್ಥಳಗಳಲ್ಲಿ ‘ಹೊರೆಗಟ್ಟೆಗಳನ್ನು’ ನಿರ್ಮಿಸುವ ಮೂಲಕ ತಮ್ಮ ಅಪಾರ ಮಾನವೀಯ ಕಾಳಜಿ ಮೆರೆದಿದ್ದರು ಎಂದರು.
ಕೆಂಪೇಗೌಡರು ಬೆಂಗಳೂರನ್ನು ನಿರ್ಮಿಸುವಾಗ ರಸ್ತೆಗಳ ಇಕ್ಕೆಲಗಳಲ್ಲಿ ಸಾಲು ಮರಗಳನ್ನು ನೆಟ್ಟು ಪರಿಸರ ಪ್ರೇಮ ಮೆರೆದಿದ್ದರು. ದಣಿದು ಬರುವ ಹಾದಿಹೋಕರು ವಿಶ್ರಮಿಸಲು ವ್ಯವಸ್ಥೆ ಮಾಡಿದ್ದರು. ಅಂದು ಅವರು ನಿರ್ಮಿಸಿದ್ದು ಹಸಿರು ಬೆಂಗಳೂರು. ಆದರೆ ಇಂದು ಆ ನಗರವು ಸಂಚಾರ ದಟ್ಟಣೆ ಹಾಗೂ ಕಾಂಕ್ರೀಟ್ ಕಾಡಾಗಿ ಪರಿಣಮಿಸಿರುವುದು ಅತ್ಯಂತ ವಿಷಾದನೀಯ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ ಅವರು,  ಕೆಂಪೇಗೌಡರ ಈ ಹಸಿರು ನಗರದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅವರ ನೆನಪಿನಲ್ಲಿ 15 ಲಕ್ಷ ಸಸಿಗಳನ್ನು ನೆಡುವ ಬೃಹತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದು ಶ್ಲಾಘನೀಯ ಎಂದರು.
ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಮಾತನಾಡಿ, ಕೆಂಪೇಗೌಡರು ಅಂದಿನ ಕಾಲದಲ್ಲೇ ತಂತ್ರಜ್ಞಾನ ಹಾಗೂ ಸಮರ್ಥ ಆಡಳಿತದ ಮೂಲಕ ಒಂದು ಸುಂದರ ನಗರದ ಕನಸಿಗೆ ಜೀವ ತುಂಬಿದ್ದರು. ಸುಮಾರು 500 ವರ್ಷಗಳ ಹಿಂದೆ ಅವರು ರೂಪಿಸಿದ ನಗರದ ವಿನ್ಯಾಸ, ರಸ್ತೆಗಳು ಹಾಗೂ ಮೂಲಸೌಕರ್ಯಗಳ ಯೋಜನೆ ಇಂದಿಗೂ ಅತ್ಯಂತ ಪ್ರಸ್ತುತವಾಗಿದೆ ಎಂದರು.
  ‘ಇಂದು ಜಾಗತಿಕ ಮಟ್ಟದಲ್ಲಿ ಬೆಂಗಳೂರು ‘ಸಿಲಿಕಾನ್ ವ್ಯಾಲಿ’ ಹಾಗೂ ಪ್ರಮುಖ ಮಾಹಿತಿ ತಂತ್ರಜ್ಞಾನ ಕೇಂದ್ರವಾಗಿ ಗುರುತಿಸಿಕೊಂಡಿದೆ. ಇದಕ್ಕೆ ಅಂದೇ ಕೆಂಪೇಗೌಡರು ಹಾಕಿಕೊಟ್ಟ ಭದ್ರ ಬುನಾದಿಯೇ ಕಾರಣ. ವ್ಯಾಪಾರ-ವಹಿವಾಟಿಗೆ ಪೂರಕವಾಗಿ ಚಿಕ್ಕಪೇಟೆ ಸೇರಿದಂತೆ 50ಕ್ಕೂ ಹೆಚ್ಚು ವಾಣಿಜ್ಯ ಆಧಾರಿತ ಪೇಟೆಗಳನ್ನು ಅವರು ವ್ಯವಸ್ಥಿತವಾಗಿ ನಿರ್ಮಿಸಿದ್ದರು. ನಗರದಲ್ಲಿ ನೀರಿನ ಕೊರತೆಯಾಗದಂತೆ ನೂರಾರು ಕೆರೆಗಳನ್ನು ನಿರ್ಮಿಸಿ, ಉದ್ಯಾನಗಳು ಹಾಗೂ ಪರಿಸರ ಸಮತೋಲನವನ್ನು ಕಾಪಾಡಿದ್ದರು. ನಗರ ನಿರ್ಮಾಣದ ಅವರ ಈ ಯೋಜನೆ ಇಂದಿನ ಎಲ್ಲಾ ನಗರ ಯೋಜಕರು ಹಾಗೂ ಆಡಳಿತಾಧಿಕಾರಿಗಳಿಗೆ ದೊಡ್ಡ ಪ್ರೇರಣೆಯಾಗಿದೆ ಎಂದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ, ನಾಡಪ್ರಭು ಕೆಂಪೇಗೌಡ ಜಯಂತಿಯ ಅದ್ದೂರಿ ಆಚರಣೆಗಾಗಿ ಸರ್ಕಾರವು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಪ್ರತಿ ವರ್ಷ ತಲಾ 5 ಲಕ್ಷ ರೂಪಾಯಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಹಾಗೂ ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲೂ ಕೆಂಪೇಗೌಡರ ಭವ್ಯ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಸರ್ಕಾರಕ್ಕೆ ಒತ್ತಾಯಿಸಿದರು.
ಕೆಂಪೇಗೌಡರ ಜೀವನ ಮತ್ತು ಸಾಧನೆ ಕುರಿತು ದೀಪ ಹಿರೇಗುತ್ತಿ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ನಗರಸಭೆ ಅಧ್ಯಕ್ಷೆ ಭವ್ಯ ಮಂಜುನಾಥ್, ಉಪಾಧ್ಯಕ್ಷೆ ಲಲಿತಾ ರವಿನಾಯ್ಕ್, ಕೃಷಿ ಉತ್ಪನ್ನ ಸಂಸ್ಕರಣಾ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎನ್.ಹರೀಶ್,  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಂಜೇಗೌಡ, ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ,  ಡಿವೈಎಸ್‍ಪಿ ತಿಪ್ಪೇಸ್ವಾಮಿ, ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಟಿ.ಡಿ.ಮಲ್ಲೇಶ್, ಕಾರ್ಯದರ್ಶಿ ಎಂ.ಎಸ್.ಪ್ರದೀಪ್, ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷ ರೀನಾ ಸುಚೇಂದ್ರ, ನಿರ್ದೇಶಕರಾದ ಪೂರ್ಣೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಸೇರಿದಂತೆ ಮತ್ತಿತರರು ಇದ್ದರು.
Continue Reading

Chikmagalur

ರಾಂಪಾಲ್ ಶಾಮಣ್ಣ(64) ನಿಧನ

Published

on

ಜಯಪುರ : ಮಕ್ಕಿಕೊಪ್ಪ ವಾಸಿ ರಾಂಪಾಲ್ ಶಾಮಣ್ಣ(64ವರ್ಷ) ಅಲ್ಪ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಶುಕ್ರವಾರ ಬೆಳಿಗ್ಗೆ ಚಿಕ್ಕಮಗಳೂರಿನ ಮಗಳ ಮನೆಯಲ್ಲಿ ನಿಧನರಾಗಿದ್ದಾರೆ.

ಸೌಮ್ಯ ಸ್ವಭಾವದ ಸದಾ ನಗುಮುಖದ ಶಾಮಣ್ಣ ಚಿಕ್ಕ ಮಕ್ಕಳಿಂದ ವಯಸ್ಸಾದ ವ್ಯಕ್ತಿಗಳವರೆಗೂ ಪ್ರೀತಿಯ ಶಾಮಣ್ಣ ಆಗಿದ್ದರು. ವೃತ್ತಿಯಲ್ಲಿ ಉತ್ತಮ ಕೃಷಿಕರಾಗಿದ್ದು ಜೊತೆಗೆ ಪತ್ರಿಕೆ ವಿತರಣೆ, ಹಾಲು ವಿತರಣೆ ಮುಂತಾದ ಉದ್ಯೋಗ ಮಾಡುತ್ತಿದ್ದರು.

ಶ್ರೀಯುತರು ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಮತ್ತು ಸ್ನೇಹಿತರನ್ನು ಅಗಲಿದ್ದಾರೆ. ಇವರ ಅಂತಿಮ ಸಂಸ್ಕಾರವನ್ನು ರಾಂಪಾಲ್ ನಲ್ಲಿರುವ ಸ್ವಂತ ಜಮೀನಿನಲ್ಲಿ ನಡೆಸಲಾಯಿತು ಎಂದು ಕುಟುಂಬಸ್ಥರು ತಿಳಿಸಿದರು.

Continue Reading

Chikmagalur

ಅಪ್ರಾಪ್ತ ಬಾಲಕಿ ಅಪಹರಣ| ಪೋಕ್ಸೋ ಪ್ರಕರಣ ದಾಖಲು: ಜಿತೇಂದ್ರ ಕುಮಾರ್‌

Published

on

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕು ಬಾಳೂರು ವ್ಯಾಪ್ತಿಯ ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಹಬೀವರ್ ಇಸ್ಲಾಂ ಎಂಬ ವಲಸೆ ಕಾರ್ಮಿಕ ಮಧ್ಯಪ್ರದೇಶ ಮೂಲದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಮತಾಂತರಕ್ಕೆ ಯತ್ನಿಸಿದ ಆರೋಪದ ಹಿನ್ನಲೆ ಬಾಳೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಆತನ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ಅಪ್ರಾಪ್ತ ಬಾಲಕಿಉನ್ನು ಆರೋಪಿ ಯುವಕ ಅಸ್ಸಾಂಗೆ ಕರೆದುಕೊಂಡು ಹೋಗಿದ್ದು, ಇತ್ತೀಚೆಗೆ ಅವರಿಬ್ಬರು ಮತ್ತೆ ಕಾಫಿತೋಟಕ್ಕೆ ಬಂದಿದ್ದಾರೆ. ಈ ಹಿನ್ನಲೆ ಬಾಲಕಿ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದು, ಪ್ರಕರಣದ ತನಿಖೆ ಮುಂದೂವರೆದಿದೆ ಎಂದರು.


ಈ ಹಿಂದೆ ಕಾಫಿ ಕೊಯ್ಲು ಮುಗಿದ ನಂತರ ಬಾಲಕಿ ನಾಪತ್ತೆಯಾಗಿದ್ದಾಗ, ಆಕೆ ಬೀರೂರು ರೈಲ್ವೆ ನಿಲ್ದಾಣದ ಮೂಲಕ ಬೇರೆಡೆಗೆ ಹೋಗಿರುವ ಸಾಧ್ಯತೆ ಬಗ್ಗೆ ಪೋಷಕರಿಗೆ ಮಾಹಿತಿ ಇತ್ತು.

ಹಾಗಾಗಿ ಅವರು ಸ್ವಲ್ಪ ದಿನ ಕಾದಿದ್ದರು. ಆದರೆ, ಬಾಲಕಿ ಯುವಕನೊಂದಿಗೆ ವಾಪಾಸ್ ಬಂದ ತಕ್ಷಣ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಾಲಕಿಯ ಕುಟುಂಬವೂ ಮಧ್ಯಪ್ರದೇಶ ಮೂಲದ್ದಾ ಗಿದ್ದು, ಇಲ್ಲಿಗೆ ಕೂಲಿ ಕೆಲಸಕ್ಕೆ ಬಂದಿದ್ದರು. ಹಾಗೇ ಆರೋಪಿ ಯುವಕನ ಕುಟುಂಬವು ಅಸ್ಸಾಂನಿಂದ ಬಂದು ಇಲ್ಲಿನ ತೋಟವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

Continue Reading

Trending

error: Content is protected !!