Mysore
ಬನ್ನಹಳ್ಳಿಯಲ್ಲಿ ಮಲೆ ಮಹದೇಶ್ವರ ಸ್ವಾಮಿ ನೂತನ ದೇವಾಲಯ ಲೋಕಾರ್ಪಣೆ
ತಿ.ನರಸೀಪುರ: ತಾಲೂಕಿನ ಬನ್ನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ತೀ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನವನ್ನು ಲೋಕಾರ್ಪಣೆ ಮಾಡಲಾಯಿತು.
ದೇವಸ್ಥಾನದ ಉದ್ಘಾಟನೆ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯ ಗಳನ್ನು ನೆರವೇರಿಸಲಾಯಿತು.
ನೂತನ ಬಸವ ಆಗ್ರೋದಕ ಸಮೇತ ಜಾನಪದ ಕಲಾ ತಂಡದೊಂದಿಗೆ ಯಾಗಶಾಲಾ ಪ್ರವೇಶ, ಗಣಪತಿ ಪೂಜೆ,ಸ್ವಸ್ತಿ ಪುಣ್ಯಾಹ ವಾಸ್ತು, ಹೋಮ,ಶಿಲಾ ಮೂರ್ತಿಗೆ ಆದಿವಾಸ ಗಳ ಸಂಸ್ಕಾರ ಪೂಜೆಗಳು ಜರುಗಿದವು. ಪ್ರದಾನ ಹೋಮ,ಕಲಾ ಹೋಮ,ಜಲಾದಿ ಹೋಮ ಮತ್ತು ಸ್ವಾಮಿಯವರಿಗೆ ರುದ್ರಾಭಿಷೇಕದೊಂದಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.ಸಾವಿರಾರು ಮಂದಿ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.ತಾಲೂಕಿನ ಸಾವಿರಾರು ಮಂದಿ ಭಕ್ತ ಸಮೂಹ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿತು.
ದೇವಸ್ಥಾನದ ಆವರಣದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮುಡುಕನ ಪುರ ಹಲವಾರ ಮಠದ ಶ್ರೀ ಷಡಕ್ಷರ ದೇಶೀಕೇಂದ್ರ ಸ್ವಾಮಿ ಉತ್ತರದಿಂದ ಬಂದ ಮಾಯಿಕಾರ ಗಣೇಶ್ವರರು ತಮ್ಮ ಅದ್ಭುತ ಪವಾಡಗಳೊಡನೆ ದಕ್ಷಿಣ ನಾಡಿನೆಡೆಗೆ ಪ್ರವಾಸ ಬೆಳೆಸಿ ಹಲವಾರು ಪುಣ್ಯ ಕ್ಷೇತ್ರಗಳು ಹಾಗೂ ತೀರ್ಥಕ್ಷೇತ್ರಗಳನ್ನು ಪಾವನಗೊಳಿಸಿ ಮಲೆಯಲ್ಲಿ ನೆಲೆಸಿದ್ದರಿಂದ ಮಲೈ ಮಹದೇಶ್ವರರಾದರು. ಇಂತಹ ಪವಾಡ ಪುರುಷರಿಂದ ಇಂದು ಕೋಟ್ಯಾಂತರ ಭಕ್ತರು ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ಭಕ್ತಿ ಪ್ರದರ್ಶನ ಮಾಡುತ್ತಿರುವುದರಿಂದ ಇಂದು ಧಾರ್ಮಿಕ ಕ್ಷೇತ್ರವಾಗಿ ರೂಪುಗೊಂಡು ಮಲೈ ಮಹದೇಶ್ವರ ಬೆಟ್ಟ ಎಂದು ಪ್ರಸಿದ್ಧಿ ಪಡೆದಿದೆ. ಇಂತಹ ಪುಣ್ಯ ಪುರುಷರ ದೇವಾಲಯವನ್ನು ಬನ್ನಳ್ಳಿಹುಂಡಿ ಗ್ರಾಮದಲ್ಲಿ ಜೀರ್ಣೋದ್ಧಾರಗೊಳಿಸಿ ಗ್ರಾಮದ ಭಕ್ತರಿಗೆ ಮಹದೇಶ್ವರರ ದರ್ಶನ ಮಾಡುವ ಹಾಗೂ ಸ್ಮರಿಸುವ ಅವಕಾಶ ಕಲ್ಪಿಸಿಕೊಟ್ಟಿರುವು ನಿಮ್ಮೆಲ್ಲರ ಸೌಭಾಗ್ಯ ಎಂದರು.
ಈ ವೇಳೆ ಹೊಸೂರು ಹುಂಡಿ ದಾಸೋಹ ಮಠಾಧ್ಯಕ್ಷರಾದ ಶ್ರೀ ರಾಜ ಶೇಖರ ಸ್ವಾಮಿ,ಶ್ರೀ ದಯಾನಂದ,ನಾಗೇಶ್ ಸ್ವಾಮಿ ಸೇರಿದಂತೆ ವಿವಿಧ ಸ್ವಾಮೀಜಿಗಳು ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದರು.
Mysore
ಕಸಕ್ಕೆ ಪದೇ ಪದೇ ಬೆಂಕಿ: ಕೇಳುವವರಿಲ್ಲ ಕುವೆಂಪುನಗರ ನಿವಾಸಿಗಳ ಗೋಳು
ಮೈಸೂರು: ಕುವೆಂಪುನಗರ ಸಮೀಪದ ಇಸ್ಕಾನ್ ದೇವಾಲಯದ ಬಳಿ ಖಾಲಿ ಜಾಗದಲ್ಲಿ ನಿತ್ಯವೂ ಕಸ ಸುರಿಯುವುದು ಮತ್ತು ಅದಕ್ಕೆ ಬೆಂಕಿ ಹಚ್ಚುವುದು ಸಾಮಾನ್ಯವಾಗಿದ್ದು, ಜನರ ಸಮಸ್ಯೆಗೆ ಸ್ಪಂದಿಸುವವರೇ ಇಲ್ಲವಾಗಿದ್ದಾರೆ.
ಇಸ್ಕಾನ್ ದೇವಾಲಯ ಹಿಂಭಾಗದ ಕೆರೆಯ ಜಾಗದಲ್ಲಿ ಎಲ್ಲೆಲ್ಲಿಂದಲೋ ತಂದ ಕಸ ಕಡ್ಡಿಗಳನ್ನು ತುಂಬುತ್ತಾರೆ. ಇಸ್ಕಾನ್ ಎದುರಿನ ಗುಜರಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಸಾಮಾನುಗಳನ್ನು ಶೇಖರಿಸಿದ್ದು, ಅಲ್ಲಿನ ನಿರುಪಯುಕ್ತ ವಸ್ತುಗಳನ್ನೂ ಕಸದ ರಾಶಿಗೆ ಬಿಸಾಡಲಾಗುತ್ತಿದೆ.

ಕಸಕ್ಕೆ ಬೆಂಕಿ ಹಾಕುತ್ತಿರುವುದರಿಂದ ಕುವೆಂಪು ನಗರ ನಿವಾಸಿಗಳ ಉಸಿರಾಟಕ್ಕೆ ತೊಂದರೆ ಆಗುತ್ತಿದೆ. ಎಷ್ಟೇ ಕೇಳಿಕೊಂಡರು ಮೋರಿಗೆ ಕಸ ಸುರಿಯುವುದು ಹಾಗೂ ಬೆಂಕಿ ಹಾಕುವುದು ತಪ್ಪುತ್ತಿಲ್ಲ. ಅಲ್ಲಿ ಮಹಾನಗರ ಪಾಲಿಕೆಯವರು ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ. ಅದು ನೆಪಕ್ಕೆ ಮಾತ್ರಿದ್ದು, ಪ್ರತಿನಿತ್ಯ ಬೆಳಗ್ಗೆ ಹಾಗೂ ರಾತ್ರಿ ಕತ್ತಲಾದೊಡನೆ ಬೇರೆ ಬೇರೆ ಬಡಾವಣೆಗಳಿಂದ ಕಸ ತಂದು ಕಾರು, ಸ್ಕೂಟರ್ಗಳಲ್ಲಿ ಎಸೆದು ಹೋಗುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಎಷ್ಟೇ ದೂರು ಕೊಟ್ಟರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಸಾಲದ್ದಕ್ಕೆ ಕಸ ಸುರಿಯಬಾರದು ಎಂದು ಎಚ್ಚರಿಕೆ ಫಲಕವನ್ನೇ ಕಿತ್ತು ಹಾಕಿದ್ದಾರೆ. ಕೂಡಲೇ ಅಧಿಕಾರಿಗಳು ಕಸ ಬಿಸಾಡುವವರು ಮತ್ತು ಬೆಂಕಿ ಹಚ್ಚುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕುವೆಂಪುನಗರ ಕೆ ಬ್ಲಾಕ್ ನಿವಾಸಿಗಳು ಒತ್ತಾಯಿಸಿದ್ದಾರೆ.
Mysore
ಸಿಎಂ ತವರಿನಲ್ಲೇ 1.20 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ
ಮೈಸೂರು: ನಗರ ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, 1.20 ಲಕ್ಷ ರೂ. ಮೌಲ್ಯದ 11.90 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಉದಯಗಿರಿ ಠಾಣಾ ವ್ಯಾಪ್ತಿಯ ಸಾತಗಳ್ಳಿಯಲ್ಲಿರುವ ಮೂನ್ ಬಕ್ಸ್ ಕೆಫೆ ಬಳಿ ದಾಳಿ ನಡೆಸಲಾಯಿತು.

ಅಮೀರ್ ಖಾನ್, ಸೈಯದ್ ಇಮ್ರಾನ್, ಮಹಮ್ಮದ್ ನಬೀಲ್ ಎಂಬವರನ್ನು ಬಂಧಿಸಲಾಗಿದೆ.
ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಮೂರು ಆರೋಪಿಗಳ ಪೈಕಿ ಆರೋಪಿ ಅಮೀರ್ ಖಾನ್ ವಿರುದ್ಧ ಈ ಹಿಂದೆ ಕೂಡ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ. ಎಸ್ ಕಾಯ್ದೆಯಲ್ಲಿ ಪ್ರಕರಣ ದಾಖಲಾಗಿತ್ತು.
Mysore
ಬೃಹತ್ ಮೈಸೂರು’ ಅವೈಜ್ಞಾನಿಕ ವಿಸ್ತರಣೆ ಯೋಜನೆಗೆ ಆಕ್ಷೇಪಣೆ ಸಲ್ಲಿಕೆ
ಮೈಸೂರು: ಮೈಸೂರಿನ ಪ್ರಜ್ಞಾವಂತ ನಾಗರಿಕರು ಮತ್ತು ನಾಗರಿಕ ಸಮಾಜದ ಸಂಘಟನೆಗಳ ಒಕ್ಕೂಟವು ಪ್ರಸ್ತಾವಿತ ‘ಬೃಹತ್ ಮೈಸೂರು’ ಮಹಾನಗರ ಪಾಲಿಕೆ (Greater Mysuru) ವಿಸ್ತರಣೆ ಯೋಜನೆಗೆ ಸಂಬಂಧಿಸಿದಂತೆ ವಿಸ್ತೃತ ಆಕ್ಷೇಪಣೆಯನ್ನು ಸಲ್ಲಿಸಿತು. ಪ್ರಸ್ತುತ ಹೊರಡಿಸಲಾಗಿರುವ ಅಧಿಸೂಚನೆಯನ್ನು ತಕ್ಷಣ ಹಿಂಪಡೆದು, ವೈಜ್ಞಾನಿಕ ಹಾಗೂ ಜನಸಹಭಾಗಿತ್ವದ ಮೂಲಕ ಬೃಹತ್ ಮೈಸೂರು ಮಹಾನಗರಪಾಲಿಕೆ ರಚಿಸುವಂತೆ ಸರ್ಕಾರವನ್ನು ಆಗ್ರಹಿಸಲಾಯಿತು.
“ಭವಿಷ್ಯದರ್ಶಿ ಮಹಾ ಮೈಸೂರು” ಸಂಘಟನೆಯ ಪ್ರವರ್ತಕ, ಬಿಜೆಪಿ ಹಿರಿಯ ನಾಯಕ ಖ್ಯಾತ ನರರೋಗ ತಜ್ಞ ಡಾ. ಸುಶ್ರುತ ಗೌಡ ನೇತೃತ್ವದ ನಗರದ ಪ್ರಜ್ಞಾವಂತ ನಾಗರೀಕರತಂಡ ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಇಲಾಖೆಯ ಪೌರಾಡಳಿತ ನಿರ್ದೇಶನಾಲಯದ (DMA) ಸಹಾಯಕ ನಿರ್ದೇಶಕರಾದ ಶ್ರೀಮತಿ ಶೈಲಾ ಕೆ. ಡಿ. (ಕೆ.ಎಂ.ಎ.ಎಸ್) ಅವರನ್ನು ಭೇಟಿ ಮಾಡಿ ಆಕ್ಷೇಪಣೆ ಸಲ್ಲಿಸಿತು.

ನಮ್ಮ ಮೈಸೂರು ಫೌಂಡೇಶನ್, ಕ್ರಿಸ್ಟಲ್ ಗ್ರೀನ್ ಬಡ್ಸ್, ಕ್ರೆಡಿಟ್-ಐ ಸಂಸ್ಥೆ, ರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಸಾಮಾಜಿಕ ನ್ಯಾಯ ಸಮಿತಿ, ಕನ್ನಡ ರಕ್ಷಣಾ ವೇದಿಕೆ, ಮೈಸೂರು ಗ್ರಾಹಕರ ಪರಿಷತ್ತು, ಮಿಷನ್ ಮೋದಿ ಡೆಮಾಕ್ರಸಿ ಡೆವಲಪ್ಮೆಂಟ್ ಟ್ರಸ್ಟ್, ಯೂತ್ ಫಾರ್ ನೇಷನ್ (YFN), ಮತ್ತು ಹಲವಾರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಭಿವೃದ್ಧಿಗೆ ವಿರೋಧವಿಲ್ಲ, ಆದರೆ ಅವೈಜ್ಞಾನಿಕ ವಿಸ್ತರಣೆಗೆ ಆಕ್ಷೇಪ: ಈ ಸಂದರ್ಭದಲ್ಲಿ ಮಾತನಾಡಿದ ಡಾ. ಸುಶ್ರುತ ಗೌಡ “ನಾವು ಅಭಿವೃದ್ಧಿಗೆ ವಿರುದ್ಧವಾಗಿಲ್ಲ. ನಗರಗಳು ಬೆಳೆಯಬೇಕು ಮತ್ತು ಮೂಲಸೌಕರ್ಯಗಳು ಸುಧಾರಿಸಬೇಕು. ಆದರೆ, ಸರಿಯಾದ ಪೂರ್ವತಯಾರಿ- ಯೋಜನೆ, ವೈಜ್ಞಾನಿಕ ದತ್ತಾಂಶ ಮತ್ತು ಪ್ರಜಾಸತ್ತಾತ್ಮಕ ಮಾದರಿಯ ಸಮಾಲೋಚನೆ ಇಲ್ಲದ, ಏಕಪಕ್ಷೀಯ ಅವೈಜ್ಞಾನಿಕ ಅಭಿವೃದ್ಧಿಯು ಪ್ರಗತಿಯಲ್ಲ. ಇದು ಭವಿಷ್ಯದಲ್ಲಿ ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನು ಉಂಟು ಮಾಡಬಹುದು,” ಎಂದು ಅವರು ಎಚ್ಚರಿಸಿದರು.
“ಪ್ರಸ್ತುತ ಹೊರಡಿಸಲಾಗಿರುವ ಪ್ರಸ್ತಾವನೆಯಲ್ಲಿ ಪಾರದರ್ಶಕತೆ ಮತ್ತು ಸಮರ್ಪಕ ಸಿದ್ಧತೆಯ ಕೊರತೆಯಿದೆ. ಈ ವಿಸ್ತರಣೆಯನ್ನು ಹಂತ ಹಂತವಾಗಿ ಮತ್ತು ಸಾರ್ವಜನಿಕ ಸಹಭಾಗಿತ್ವದೊಂದಿಗೆ ಯೋಜಿಸಬೇಕು. ದುರದೃಷ್ಟವಶಾತ್, ಪ್ರಸ್ತುತ ಬೃಹತ್ ಮೈಸೂರು ಪ್ರಸ್ತಾವನೆಯು ಈ ಮೂಲಭೂತ ತತ್ವಕ್ಕೆ ವಿರುದ್ಧವಾಗಿದೆ,” ಎಂದು ಅವರು ಟೀಕಿಸಿದರು.
ಮೈಸೂರು ಗ್ರಾಹಕರ ಪರಿಷತ್ತಿನ ಸ್ಥಾಪಕ ಅಧ್ಯಕ್ಷ ಡಾ. ಭಾಮಿ ವಿ ಶೆಣೈ ಮಾತನಾಡಿ, ಯೋಜನೆಯ ಪರಿಸರ ಪರಿಣಾಮಗಳ ಮೌಲ್ಯಮಾಪನ ನಡೆದಿಲ್ಲ ಎಂದು ದೂರಿದರು. “ಯಾವುದೇ ಪರಿಸರ ಪ್ರಭಾವದ ಮೌಲ್ಯಮಾಪನ (EIA) ವರದಿ ಸಾರ್ವಜನಿಕವಾಗಿ ಲಭ್ಯವಿಲ್ಲ. ಅಗತ್ಯ ಮುನ್ನೆಚ್ಚರಿಕೆಗಳಿಲ್ಲದೆ ಈ ಯೋಜನೆಯನ್ನು ಜಾರಿಗೆ ತಂದರೆ ಕೆರೆಗಳು, ಜೌಗು ಪ್ರದೇಶಗಳು, ಹಸಿರು ವಲಯಗಳು ಮತ್ತು ವನ್ಯಜೀವಿ ಕಾರಿಡಾರ್ಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ,” ಎಂದು ಎಚ್ಚರಿಸಿದರು.
ಪ್ರಮುಖ ಆಕ್ಷೇಪಗಳು:
ನಿಯೋಗ ಈ ಕೆಳಗಿನ ಅಂಶಗಳ ಬಗ್ಗೆ ಸರಕಾರದ ಗಮನ ಸೆಳೆದಿದೆ.
* ಗ್ರಾಮ ಸಭೆ ಮತ್ತು ವಾರ್ಡ್ ಸಮಿತಿಗಳ ಕಡೆಗಣನೆ
* ಮಾಸ್ಟರ್ ಪ್ಲಾನ್ ಅಲಭ್ಯತೆ
* ಸದ್ಯ ಮೈಸೂರು ನಗರ ಎದುರಿಸುತ್ತಿರುವ ನೀರಿನ ಅಭಾವ, ಒಳಚರಂಡಿ ಅವ್ಯವಸ್ಥೆ, ಪ್ರವಾಹ, ಸಂಚಾರ ದಟ್ಟಣೆ ಮತ್ತು ಘನತ್ಯಾಜ್ಯ ವಿಲೇವಾರಿಯಂತಹ ಸಮಸ್ಯೆಗಳನ್ನು ಬಗೆಹರಿಸದೆ ನಗರ ವಿಸ್ತರಣೆ ಮಾಡುತ್ತಿರುವುದು.
* ರೈತರು ಮತ್ತು ಗ್ರಾಮೀಣ ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮ ಸಾಧ್ಯತೆ.
* ಹೆಚ್ಚಿನ ತೆರಿಗೆ ಮತ್ತು ಸೌಲಭ್ಯಗಳ ಮೇಲಣ ಶುಲ್ಕದಿಂದ ಜೀವನ ವೆಚ್ಚ ಏರಿಕೆ.
* ನೀರಿನ ಭದ್ರತೆ ಮತ್ತು ಸುಸ್ಥಿರತೆಯ ಬಗ್ಗೆ ಸ್ಪಷ್ಟತೆ ಕೊರತೆ
* ಚಾಮುಂಡಿ ಬೆಟ್ಟ ಮತ್ತು ಪರಿಸರ ಸೂಕ್ಷ್ಮ ವಲಯಗಳಿಗೆ ಅಪಾಯ ಸಾಧ್ಯತೆ
* ವಿಪತ್ತು ನಿರ್ವಹಣೆ ಮತ್ತು ಸಾರ್ವಜನಿಕ ಆರೋಗ್ಯ ಸಿದ್ಧತೆಯ ಕೊರತೆ.
* ಪಾರದರ್ಶಕತೆ ಇಲ್ಲದೆ ಸಾರ್ವಜನಿಕ ಖಜಾನೆಯ ಮೇಲೆ ಬೀಳುವ ಆರ್ಥಿಕ ಹೊರೆ.
* ಈ ವಿಸ್ತರಣೆಯು ಭೂ-ಮಾಫಿಯಾದ ಹಿತಾಸಕ್ತಿಯಿಂದ ಪ್ರೇರಿತವಾಗಿದೆ ಎಂಬ ಆತಂಕ.
ನಮ್ಮ ಮೈಸೂರು ಫೌಂಡೇಶನ್ನ ದಶರಥ್ ಮಾತನಾಡಿ, “ರೈತರು ಅನಿವಾರ್ಯವಾಗಿ ಭೂಮಿ ಮಾರಾಟ ಮಾಡಬೇಕಾಗುತ್ತದೆ ಮತ್ತು ಕೃಷಿ ಕಾರ್ಮಿಕರು ಜೀವನೋಪಾಯ ಕಳೆದುಕೊಳ್ಳುತ್ತಾರೆ. ಇದು ಗ್ರಾಮೀಣ-ನಗರ ಅಸಮಾನತೆಯನ್ನು ಹೆಚ್ಚಿಸುತ್ತದೆ ಮತ್ತು ಆಹಾರ ಭದ್ರತೆಗೆ ಸಂಚಕಾರ ತರುತ್ತದೆ,” ಎಂದರು. ನಿಮಿಷಾಂಬ ಸ್ವಸಹಾಯ ಸಂಘದ ಸುಜಾತಾ ಎಸ್. ಅವರು, ಸಾಮಾನ್ಯ ನಾಗರಿಕರು ಹೆಚ್ಚಿನ ತೆರಿಗೆ ಮತ್ತು ಶುಲ್ಕಗಳ ಹೊರೆ ಹೊರಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಸ್ತುತ ಬೃಹತ್ ಮೈಸೂರು ಅಧಿಸೂಚನೆಯನ್ನು ಹಿಂಪಡೆಯಬೇಕು, ಕಡ್ಡಾಯವಾಗಿ ಗ್ರಾಮ ಸಭೆ ಮತ್ತು ವಾರ್ಡ್ ಸಮಿತಿ ಸಮಾಲೋಚನೆ ನಡೆಸಬೇಕು. ವೈಜ್ಞಾನಿಕ ಮಹಾಯೋಜನೆಯನ್ನು (2031 ಮತ್ತು ಅದಕ್ಕೂ ಮೀರಿದ) ಪ್ರಕಟಿಸಬೇಕು.
ಪರಿಸರ ಮತ್ತು ಆರೋಗ್ಯ ಪ್ರಭಾವದ ಮೌಲ್ಯಮಾಪನಗಳನ್ನು ಬಿಡುಗಡೆ ಮಾಡಬೇಕು, ಸಾರ್ವಜನಿಕ ವಿಚಾರಣೆಗಳನ್ನು (Public Hearings) ನಡೆಸಬೇಕ., ರೈತರು, ಕೆರೆಗಳು, ಹಸಿರು ವಲಯ ಮತ್ತು ಚಾಮುಂಡಿ ಬೆಟ್ಟದ ಪರಿಸರ ವಲಯಗಳನ್ನು ಸಂರಕ್ಷಿಸಬೇಕು, .
ವಿಸ್ತರಣೆಯ ಮೊದಲು ಮೈಸೂರಿನ ಹಾಲಿ ಮೂಲಸೌಕರ್ಯಗಳನ್ನು ಬಲಪಡಿಸಬೇಕು.
ಸ್ಥಳೀಯ ಸಂಸ್ಥೆಗಳ ಪ್ರಜಾಸತ್ತಾತ್ಮಕ ಒಪ್ಪಿಗೆಯೊಂದಿಗೆ ಮಾತ್ರ ಮುಂದುವರಿಯಬೇಕು ಎಂದು ಈ ಸಂದರ್ಭದಲ್ಲಿ ರಾಜ್ಯ ಸರಕಾರವನ್ನು ಆಗ್ರಹಿಸಲಾಯಿತು.
“ಮೈಸೂರಿನ ಭವಿಷ್ಯವನ್ನು ದೂರದೃಷ್ಟಿಯಿಂದ ರೂಪಿಸಬೇಕು ಎಂದು ನಾಗರಿಕ ಗುಂಪು ಹೇಳಿದೆ. “ನಿಜವಾದ ಅಭಿವೃದ್ಧಿಯು ಒಳಗೊಳ್ಳುವಿಕೆಯನ್ನ ಹೊಂದಿರಬೇಕು. ಮೈಸೂರಿನ ಭವಿಷ್ಯವನ್ನು ಅವಸರದಲ್ಲಿ ಅಥವಾ ಕೆಲವೇ ಹಿತಾಸಕ್ತಿಗಳಿಗಾಗಿ ನಿರ್ಧರಿಸಬಾರದು. ಅದು ಜನರ ಇಚ್ಛೆ ಮತ್ತು ಕಲ್ಯಾಣವನ್ನು ಪ್ರತಿಬಿಂಬಿಸಬೇಕು,” ಎಂದು ಡಾ. ಗೌಡ ಹೇಳಿದರು.
-
Politics7 hours agoಆಡಳಿತ- ವಿಪಕ್ಷಗಳ ಜಿದ್ದಾಜಿದ್ದಿಗೆ ಬಲಿಯಾದ ವಿಧಾನ ಪರಿಷತ್ ಕಲಾಪ
-
Kodagu13 hours agoಕಾರೆಕೆರೆ ಕಾವಲು: 47 ದಲಿತ ಕುಟುಂಬಗಳಿಗೆ ಭೂಮಿ ಮಂಜೂರಿಗೆ ಆಗ್ರಹ
-
Kodagu13 hours agoಕೋಮು ಸಾಮರಸ್ಯ ಮೂಡಿಸುವಲ್ಲಿ ಉರೂಸ್ ಕೊಡುಗೆ ಅಪಾರ
-
Hassan5 hours agoಪ್ರತ್ಯೇಕ ಪ್ರಕರಣ: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ
-
Hassan10 hours ago2027 ರ ಅಂತ್ಯಕ್ಕೆ ಎತ್ತಿನಹೊಳೆ ನೀರು ಹರಿಸಲು ಕ್ರಮ: ಕೃಷ್ಣ ಬೈರೇಗೌಡ
-
National9 hours agoಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಭೂಪೇಂದ್ರ ಯಾದವ್ಗೆ ಎಚ್ಡಿಕೆ ಮನವಿ
-
Chamarajanagar9 hours agoಬೆಳಗಿನ ವೇಳೆ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ರೈತರಿಂದ ಪ್ರತಿಭಟನೆ
-
Mysore9 hours agoಜಿಲ್ಲಾ ಪೊಲೀಸರಿಂದ ಗೋದಾಮು, ಕೈಗಾರಿಕಾ ಶೋಧ
