Connect with us

Chamarajanagar

ಸಾಲಗಾರರಿಗೆ ಕಿರುಕುಳ ನೀಡಿದರೇ ನಿರ್ದಾಕ್ಷಿಣ್ಯ ಕ್ರಮ: ಜಿಲ್ಲಾಧಿಕಾರಿ ಶಿಲ್ಪಾನಾಗ್‌

Published

on

ಚಾಮರಾಜನಗರ: ಜಿಲ್ಲೆಯ ಯಾವುದೇ ಭಾಗದಲ್ಲಿ ಮೈಕ್ರೋಫೈನಾನ್ಸ್ ಕಂಪನಿಗಳು, ಲೇವಾದೇವಿದಾರರು, ಇತರೆ ವ್ಯಕ್ತಿಗಳು, ಸಂಸ್ಥೆಗಳಿಂದ ಸಾಲಗಾರರಿಗೆ ಕಿರುಕುಳ ನೀಡುವುದು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಎಚ್ಚರಿಕೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳು, ಆರ್.ಬಿ.ಐ ಪ್ರತಿನಿಧಿ ಹಾಗೂ ಲೀಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾಲ ನೀಡುವ ಮೈಕ್ರೋ ಫೈನಾನ್ಸ್ ಕಂಪನಿಗಳು ಆರ್.ಬಿ.ಐ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಸಾಲಗಾರರು ಅಥವಾ ಅವರ ಕುಟುಂಬದ ಸದಸ್ಯರ ಮೇಲೆ ಸಾಲ ವಸೂಲಾತಿಗಾಗಿ ವಿನಾಕಾರಣ ಒತ್ತಡ ತರುವಂತಿಲ್ಲ. ಸಾಲ ಪಡೆದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಅವಮಾನಿಸುವುದು, ಹಿಂಸೆ ನೀಡುವಂತಿಲ್ಲ. ಸಾಲಗಾರರ ಸ್ವಾಧೀನದಲ್ಲಿರುವ ವಸ್ತುಗಳು, ಆಸ್ತಿಗಳ ಬಳಕೆಗೆ ಅಡ್ಡಿಪಡಿಸಬಾರದು ಎಂದು ಸೂಚನೆ ನೀಡಿದರು.

ಸಾಲ ವಸೂಲಿ ಮಾಡಲು ಯಾವುದೇ ಬಲವಂತದ ಕ್ರಮಗಳನ್ನು ಅನುಸರಿಸಬಾರದು. ಸಾಲ ವಸೂಲಿಗಾಗಿ ಹೊರ ವ್ಯಕ್ತಿಗಳು, ಅಪರಾಧ ಹಿನ್ನಲೆ ಹೊಂದಿರುವವರನ್ನು ಬಳಸಿ ಬೆದರಿಕೆ ಹಾಕಬಾರದು. ಮೈಕ್ರೋ ಫೈನಾನ್ಸ್ ಕಂಪನಿಗಳು ಮತ್ತು ಲೇವಾದೇವಿದಾರರು ನೀಡುತ್ತಿರುವ ಕಿರುಕುಳದಿಂದ ಸಾಲಗಾರರನ್ನು ರಕ್ಷಿಸಲು ಸರ್ಕಾರದಿಂದ ಹೊರಡಿಸಲಾಗುವ ಹೊಸ ಆಜ್ಞೆ ಹಾಗೂ ಆದೇಶಗಳನ್ನು ನಿರೀಕ್ಷಿಸಲಾಗಿದೆ. ಇದರಂತೆ ಕಿರುಕುಳ ನೀಡುವ ಮೈಕ್ರೊ ಫೈನಾನ್ಸ್ ಕಂಪನಿಗಳ ವಿರುದ್ದ ಕ್ರಮವಹಿಸಲಿದ್ದೇವೆ ಎಂದರು.

ಮೈಕ್ರೊ ಫೈನಾನ್ಸ್ ಕಂಪನಿ ಕಿರುಕುಳ ಕುರಿತ ದೂರು ಸಲ್ಲಿಸಲು ಸಹಾಯವಾಣಿ ತೆರೆಯಲಾಗಿದೆ. ನೊಂದಣಿ ಪರವಾನಗಿ ಹೊಂದಿರುವವರು ಹಾಗೂ ಇಲ್ಲದಿರುವ ಎಲ್ಲ ಮೈಕ್ರೋ ಫೈನಾನ್ಸ್ ಕಂಪನಿಗಳು, ಲೇವಾದೇವಿದಾರರು ಇತರೆ ಸಾಲ ನೀಡುವವರ ಮೇಲೆ ನಿಗಾವಹಿಸಿದ್ದೇವೆ. ಎಲ್ಲ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಜಿಲ್ಲೆಯ ಎಲ್ಲಿಯೇ ಆಗಲಿ ಸಾಲಗಾರರಿಗೆ ಅನಾವಶ್ಯಕವಾಗಿ ತೊಂದರೆ ನೀಡುವವರ ವಿರುದ್ದ ಕ್ರಮ ವಹಿಸುತ್ತೇವೆ. ಕಂಪನಿಗಳು ನಿಯಮಾವಳಿ, ಮಾರ್ಗಸೂಚಿ ಉಲ್ಲಂಘನೆ ಮಾಡಬಾರದು ಎಂದು ಜಿಲ್ಲಾಧಿಕಾರಿಯವರು ಕಟುನಿಟ್ಟಿನ ಸೂಚನೆ ನೀಡಿದರು.

ಆರ್.ಬಿ.ಐ ನಿಯಮಗಳ ಪ್ರಕಾರ ನೀಡಲಾಗುವ ಸಾಲದ ಮೊತ್ತ, ವಿಧಿಸಿರುವ ಬಡ್ಡಿದರ, ಮಾಸಿಕ ಕಂತುಗಳು ಸೇರಿದಂತೆ ಎಲ್ಲ ವಿವರಗಳನ್ನು ಸ್ಥಳೀಯ ಭಾಷೆಯಲ್ಲಿ ಸಾಲ ಪಡೆದವರಿಗೆ ವಿವರಿಸಬೇಕು. ಪಾರದರ್ಶಕವಾಗಿ ಪ್ರಕ್ರಿಯೆ ಇರಬೇಕು. ಜಿಲ್ಲೆಯಲ್ಲಿ ವ್ಯಾಪಕವಾಗಿ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದೇವೆ. ಗ್ರಾಮ ಸಭೆಗಳಲ್ಲೂ ಜಾಗೃತಿ ಶಿಬಿರ ಹಮ್ಮಿಕೊಳ್ಳಲು ಸೂಚನೆ ನೀಡಿದ್ದೇವೆ. ಇಂತಹ ಕಾರ್ಯಕ್ರಮಗಳಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿ ಜನರಿಗೆ ವಾಸ್ತವ ಅಂಶಗಳನ್ನು ಮನವರಿಕೆ ಮಾಡಿಕೊಡಬೇಕೆಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಮಾತನಾಡಿ, ಸಾಲಗಾರರಿಗೆ ಶೋಷಣೆ ಮಾಡುವಂತಿಲ್ಲ. ಸಾಲ ಕಟ್ಟುವ ಸಾಮಥ್ರ್ಯವಿಲ್ಲದಿದ್ದರೂ ಲಾಭವನ್ನಷ್ಟೇ ಕೇಂದ್ರಕರಿಸಿ ಸಾಲ ನೀಡಿ ಬಳಿಕ ಬಲವಂತದ ವಸೂಲಿಗೆ ಫೈನಾನ್ಸ್ ಕಂಪನಿಗಳು ಮುಂದಾಗಬಾರದು. ಸಾಲ ನೀಡುವ ಮುನ್ನ ಸಾಲಗಾರರ ದುಡಿಮೆ ಆದಾಯವನ್ನು ನೋಡಬೇಕು. ಸಾಲ ಪಡೆದುಕೊಂಡವರಿಗೆ ಕಿರುಕುಳ, ಅವಮಾನ, ನಿಂದನೆ ಮಾಡುವುದನ್ನು ಸಹಿಸುವುದಿಲ್ಲ. ಕಿರುಕುಳಕ್ಕೆ ಸಂಬಂಧಿಸಿದ ದೂರುಗಳು ಬಂದರೆ ನಿಯಮಾನುಸಾರ ಪ್ರಕರಣ ದಾಖಲು ಮಾಡಿ ತ್ವರಿತವಾಗಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಆರ್.ಬಿ.ಐ ನ ಲೀಡ್ ಜಿಲ್ಲಾ ಅಧಿಕಾರಿ ವಿಜಯಶ್ರೀ ಮಾತನಾಡಿ, ಮೈಕ್ರೊ ಫೈನಾನ್ಸ್ ಕಂಪನಿಗಳು 3 ಲಕ್ಷಕ್ಕಿಂತ ಕಡಿಮೆ ಆದಾಯ ಇರುವವರಿಗೆ ಸಾಲ ನೀಡಬೇಕಿದೆ. ಸಾಲ ಮರುಪಾವತಿಸುವ ಸಾಮಥ್ರ್ಯಕ್ಕೆ ಅನುಗುಣವಾಗಿ ಸಾಲ ವಿತರಿಸಬೇಕು. ನಿಯಮಾವಳಿಗಳ ಪ್ರಕಾರ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಸಾಲಗಾರರ ಮನೆಯ ಬಳಿ ತೆರಳಬೇಕು. ನಿಗದಿತ ವೇಳೆಯ ನಂತರ ಸಾಲ ವಸೂಲಿ ಮಾಡುವಂತಿಲ್ಲ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಉಪವಿಭಾಗಾಧಿಕಾರಿ ಬಿ.ಆರ್. ಮಹೇಶ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ.ಎನ್. ಸುರೇಖ, ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Continue Reading

Chamarajanagar

ಜಲಾಯನ‌ ಯಾತ್ರೆಗೆ ಚಾಲನೆ ನೀಡಿದ ಜಂಟಿ ನಿರ್ದೇಶಕ ಎಸ್ ಎಸ್ ಅಭೀದ್

Published

on

ವರದಿ : ಗೋವಿಂದ ಕೆ ಗೌಡ ಹನೂರು

ಹನೂರು: ಪ್ರತಿಯೊಬ್ಬ ರೈತರು ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡುವ ಕಾರ್ಯಕ್ಕೆ ಮುಂದಾಗಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಸ್ ಎಸ್ ಅಭೀದ್ ತಿಳಿಸಿದರು.

ಹನೂರು ತಾಲೂಕಿನ ಕೊರಟ್ಟಿ ಹೊಸೂರು ಗ್ರಾಮದಲ್ಲಿ ಕೃಷಿ ಇಲಾಖೆ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಲಾಯನ ಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿಯೊಂದು ಹನಿ ಹನಿ ನೀರನ್ನು ಸಂರಕ್ಷಣೆ ಮಾಡಬೇಕಾಗಿರುವುದು ಪ್ರತಿಯೊಬ್ಬರ ಜವಾಬ್ದಾರಿ. ಬೇಸಿಗೆ ಕಾಲದಲ್ಲಿ ನೀರಿನ ಬಳಕೆಯನ್ನು ಮುನ್ನೆಚ್ಚರಿಕೆಯಿಂದ ಬಳಸುವ ಮೂಲಕ ನಾವು ಪರಿಸರವನ್ನು ಸಂರಕ್ಷಣೆ ಮಾಡಿಕೊಳ್ಳಬಹುದು.. ಮುಂದಿನ ಪೀಳಿಗೆಗೆ ಸ್ವಚ್ಛ ಹಾಗೂ ಸಮೃದ್ಧ ಪರಿಸರವನ್ನು ಕಲ್ಪಿಸಬಹುದು. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯಿಂದ ದೊರೆಯುವ ವೈಜ್ಞಾನಿಕ ತಂತ್ರಜ್ಞಾನ ಹಾಗೂ ಮಾರ್ಗದರ್ಶನಗಳನ್ನು ಅನುಸರಿಸಿದರೆ ರೈತರು ಕೃಷಿಯಲ್ಲಿ ಆರ್ಥಿಕವಾಗಿ ಸಬಲರಾಗಬಹುದು. ಜೊತೆಗೆ ಮಣ್ಣು ಫಲವತ್ತಾಗಿ, ಪರಿಸರ ಸ್ನೇಹಿಯಾಗಿಸಲು ಸಾಧ್ಯವಿದೆ. ಈ ಎಲ್ಲಾ ಕಾರ್ಯಕ್ರಮವು ನಮ್ಮ ಪರಿಸರ ಮತ್ತು ಕೃಷಿಯ ಭವಿಷ್ಯವನ್ನು ಸುರಕ್ಷಿತವಾಗಿಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ರಾಮಾಪುರ ರೈತ ಸಂಪನ್ಮೂಲ ಕೇಂದ್ರದ ಕೃಷಿ ಅಧಿಕಾರಿ ಮನೋಹರ್ ಮಾತನಾಡಿ ದೇಶಕ್ಕೆ ಸೈನಿಕ ಎಷ್ಟು ಮುಖ್ಯವೋ, ರೈತನು ಕೂಡ ಅಷ್ಟೇ ಮುಖ್ಯ, ಸೈನಿಕ ದೇಶವನ್ನು ಸಂರಕ್ಷಣೆ ಮಾಡಿದರೆ ರೈತ ಇಡೀ ದೇಶಕ್ಕೆ ಅನ್ನ ನೀಡುತ್ತಾನೆ. ರೈತರು ವಲಸೆ ಹೋಗುವುದನ್ನು ತಪ್ಪಿಸಲು ಕೃಷಿ ಇಲಾಖೆ ವತಿಯಿಂದ ಸರ್ಕಾರ ವಿವಿಧ ಯೋಜನೆಗಳ ಮೂಲಕ ಮನೆಯ ಬಾಗಿಲಿಗೆ ಹಲವು ಕಾರ್ಯಕ್ರಮಗಳನ್ನು ತಲುಪಿಸುತ್ತಿದೆ. ಪ್ರತಿಯೊಬ್ಬರು ಆಗಾಗ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಸರ್ಕಾರದಿಂದ ಸಿಗುವ ಸೌಲತ್ತುಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಲಾನಯನ ಕಾರ್ಯಕ್ರಮದ ಬಗ್ಗೆ ಚಿತ್ರಕಲೆ ಪ್ರಬಂಧ ಸೇರಿ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರಥಮ ದ್ವಿತೀಯ ಹಾಗೂ ತೃತೀಯ ಬಹುಮಾನ ಹಾಗೂ ಪ್ರಶಸ್ತಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ನೀರು ಮಣ್ಣಿನ ಪಾತ್ರದ ಮಹತ್ವದ ಕುರಿತು ಜನರಲ್ಲಿ ಹರಿವು ಮೂಡಿಸಲು ಜಲಾಯನ ಯಾತ್ರೆಯ ಕಿರುಚಿತ್ರವನ್ನು ಪ್ರದರ್ಶನದ ಜೊತೆಗೆ ರಂಗವಾಹಿನಿ ಚಾಮರಾಜನಗರ ತಂಡದಿಂದ ನಾಟಕ ಪ್ರದರ್ಶನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ನಟರಾಜು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಗಸ್ವಾಮಿ, ಅಧಿಕಾರಿಗಳಾದ ನಿಶಾಂತ್, ನಾಗೇಂದ್ರ, ಧರ್ಮೇಂದ್ರ, ಉಪೇಂದ್ರ, ಜಗದೀಶ್ ಸ್ಥಳಿಯ ಮುಖಂಡರಾದ ಶಿವಣ್ಣ ಪೊನ್ನು ಶೆಟ್ಟಿ ಜಗ ಮಲ್ಲೇಶ್ ಸೇರಿದಂತೆ ಇತರರು ಹಾಜರಿದ್ದರು.

Continue Reading

Chamarajanagar

ರಸ್ತೆ ಸುರಕ್ಷತಾ ಸಪ್ತಾಹದ ಅರಿವು ಮೂಡಿಸುವ ಜಾಥಾಗೆ ಚಾಲನೆ

Published

on

ಚಾಮರಾಜನಗರ: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸಾರಿಗೆ ಇಲಾಖೆ ವತಿಯಿಂದ ನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ರಸ್ತೆ ಸುರಕ್ಷತೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಜಾಥಾಗೆ ಚಾಲನೆ ದೊರೆಯಿತು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಗಾಯತ್ರಿ ಅವರು ಜಾಥಾಗೆ ಹಸಿರು ನಿಶಾನೆ ತೋರಿ ಬಳಿಕ ಮಾತನಾಡಿ, ಜನಸಾಮಾನ್ಯರಿಗೆ ರಸ್ತೆ ಸುರಕ್ಷತೆಯ ಅರಿವು ಮೂಡಿಸಲು ಪ್ರತಿವರ್ಷದಂತೆ ಈ ಬಾರಿಯೂ ರಸ್ತೆ ಸುರಕ್ಷತಾ ಸಪ್ತಾಹವನ್ನು ಆಯೋಜಿಸಲಾಗಿದೆ. ದಿನೇ ದಿನೇ ಹೆಚ್ಚಾಗುತ್ತಿರುವ ಅಪಘಾತ ಪ್ರಮಾಣವನ್ನು ತಗ್ಗಿಸುವುದೇ ಸಪ್ತಾಹದ ಉದ್ದೇಶವಾಗಿದೆ. ರಸ್ತೆ ಸುರಕ್ಷತೆಯ ಬಗ್ಗೆ ನಾಗರಿಕರು, ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಜಾಗೃತಿ ಅಗತ್ಯವಾಗಿದೆ ಎಂದರು.

ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಜಿಲ್ಲೆಯಲ್ಲಿ ಅಪಘಾತ ಪ್ರಮಾಣ ಕಳೆದ ಬಾರಿಗಿಂತ ಪ್ರಸ್ತುತ ಸಾಲಿನಲ್ಲಿ ಹೆಚ್ಚಾಗಿದೆ. ಅಪಘಾತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಜನರು ರಸ್ತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಮೂಲಕ ಚಾಮರಾಜನಗರವನ್ನು ಅಪಘಾತ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರು ಸಹಕರಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಗಾಯತ್ರಿ ಅವರು ತಿಳಿಸಿದರು.

ಪ್ರಾದೇಶಿಕ ಸಾರಿಗೆ ನಿರೀಕ್ಷಕ ದಿನೇಶ್‍ಕುಮಾರ್ ಮಾತನಾಡಿ ಸಾರ್ವಜನಿಕರು, ವಿದ್ಯಾರ್ಥಿಗಳು ರಸ್ತೆ ಸುರಕ್ಷತೆಯ ಮಹತ್ವವನ್ನು ಅರಿಯಬೇಕು. ಅಪಘಾತ ಪ್ರಮಾಣಗಳನ್ನು ಕಡಿಮೆ ಮಾಡಲು ವಾಹನ ಚಲಾಯಿಸುವ ಪ್ರತಿಯೊಬ್ಬರು ಚಾಲನಾ ಪರವಾನಗಿ ಪಡೆದಿರಬೇಕು. 18 ವರ್ಷ ಮೇಲ್ಪಟ್ಟವರು ಮಾತ್ರ ವಾಹನ ಚಾಲನೆ ಮಾಡಬೇಕು. ಅಪ್ರಾಪ್ತರು ವಾಹನ ಚಾಲಿಸಿದರೆ ಅವರ ಪೋಷಕರಿಗೆ 25 ಸಾವಿರ ರೂ. ದಂಡ ವಿಧಿಸಲಾಗುವುದು. ಅಪಘಾತದಲ್ಲಿ ಸಿಲುಕಿದ ವ್ಯಕ್ತಿ ಮರಣ ಹೊಂದಿದರೆ ಅಪ್ತಾಪ್ತರನ್ನು ಬಾಲಮಂದಿರಕ್ಕೆ ಕಳುಹಿಸಲಾಗುವುದು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಯುವಕರು ಬೈಕ್ ವೀಲಿಂಗ್ ಮಾಡಬಾರದು. ಕುಡಿದು ವಾಹನ ಚಾಲಿಸಬಾರದು ಎಂದರು.

ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ ಪ್ರಸನ್ನ, ಸಂಚಾರಿ ನಿರೀಕ್ಷಕರಾದ ಮಹದೇವಸ್ವಾಮಿ ಇತರರು  ಉಪಸ್ಥಿತರಿದ್ದರು

Continue Reading

Chamarajanagar

ಗಾಯಗೊಂಡಿದ್ದ ಹಾವಿಗೆ ಚಿಕಿತ್ಸೆ

Published

on

ಚಾಮರಾಜನಗರ: ತಾಲ್ಲೂಕಿನ ಕೆಲ್ಲಂಬಳ್ಳಿ ಗ್ರಾಮದಲ್ಲಿ ಮನೆ ನಿರ್ಮಾಣ ಸಂದರ್ಭದಲ್ಲಿ ಅಡಿಪಾಯ ತೆಗೆಯುವಾಗ ಕೆರೆ ಹಾವಿಗೆ ಕಬ್ಬಿಣ ಸರಳಿನಿಂದ ಏಟು ಬಿದ್ದು, ತೀವ್ರ ಗಾಯಗೊಂಡಿದ್ದ ಹಾವಿಗೆ ಚಿಕಿತ್ಸೆ ನೀಡಿ ರಕ್ಷಿಸಲಾಗಿದೆ.

ಉತ್ತುವಳ್ಳಿ ಗ್ರಾಮದ ಸ್ನೇಕ್ ಸುರೇಶ್ ರವರು ಕೆರೆ ಹಾವನ್ನು ಚಾಮರಾಜನಗರದ ಜಿಲ್ಲಾ ಪಶುಪಾಲನ ಪಾಲಿ ಕ್ಲಿನಿಕ್ ಗೆ ಕೊಂಡು ಹೋಗಿ ಪಶು ಪಾಲನ ಸಹಾಯಕ ನಿರ್ದೇಶಕ ಡಾ. ಎಂ ಮೂರ್ತಿ ಅವರು ಮತ್ತು ಸಿಬ್ಬಂದಿ ವರ್ಗದವರು ಹಾವಿಗೆ ಸೂಕ್ತ ಚಿಕಿತ್ಸೆ ನೀಡಿ ಚೇತರಿಸಿಕೊಂಡ ಬಳಿಕ ಕಾಡಿಗೆ ಬಿಟ್ಟಿರುತ್ತಾರೆ.

Continue Reading

Trending

error: Content is protected !!