Connect with us

Hassan

ಈ ನಾಡಿನ ಜನ ನನಗೆ ಪೂರ್ಣಾವಧಿ ಸಿಎಂ ಆಗಲು ಅವಕಾಶ ಕೊಡಲಿಲ್ಲ: ಹೆಚ್.ಡಿ. ಕುಮಾರಸ್ವಾಮಿ

Published

on

ಹಾಸನ: ತಮ್ಮ ಜೀವವನ್ನು ಲೆಕ್ಕಿಸದೇ ಶ್ರಮವಹಿಸಿ ದೇಶ ಸೇವೆ ಮಾಡುವವರನ್ನು ಮರೆಯಬಾರದು. ನಿಮ್ಮ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರ ಸಹಕಾರದಲ್ಲಿ ಕೇಂದ್ರ ಗೃಹ ಮತ್ತು ರಕ್ಷಣಾ ಸಚಿವರೊಂದಿಗೆ ಗಮನಸೆಳೆದು ಸ್ಪಂದಿಸುವ ಕೆಲಸ ಮಾಡುವುದಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸವ್ಯಕ್ತಪಡಿಸಿದರು.

ನಗರದ ಹೊರವಲಯ ಕೆಂಚಟ್ಟಹಳ್ಳಿಯಲ್ಲಿ ನಿರ್ಮಿಸಿರುವ ನಿವೃತ್ತ ಅರೆಸೇನಾ ಪಡೆ ಯೋಧರ ಭವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದಲ್ಲಿ ಅರೆಸೇನಾ ಯೋಧರು, ದೇಶ ಸೇನೆಯ ಮೂರು ವಿಭಾಗಗಳ ಯೋಧರು ಮಾಡುವ ಕೆಲಸವನ್ನು ಮಾಡುತ್ತಾರೆ. ಅರೆಸೇನಾ ಪಡೆಯ ಕಾರ್ಯವನ್ನು, ಜೀವ ಲೆಕ್ಕಿಸದೆ ಶ್ರಮವಹಿಸಿ ಮಾಡುವ ಕೆಲಸವನ್ನೂ ಸರ್ಕಾರ ಮರೆಯಬಾರದು. ನಾನು ಅರೆಸೇನಾ ಪಡೆಯ ಕುಟುಂಬದ ನೋವು ಅರಿತುಕೊಂಡಿದ್ದೇನೆ. ಸೈನಿಕರ ಆರೋಗ್ಯ ಶಿಬಿರಕ್ಕೆ ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳಲಾಗುವುದು. ಉಳಿದ ನಿಮ್ಮ ಬೇಡಿಕೆ ಈಡೇರಿಕೆಗೆ ಸ್ವಲ್ಪ ಸಮಯ ಕೊಡಿ, ದೇವೇಗೌಡರ ಸಹಕಾರದಿಂದ ಕೇಂದ್ರ ಸರ್ಕಾರದ ಗಮನ ಸೆಳೆದು ಸ್ಪಂದಿಸುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ದೇಶದ ಒಳಗಿರುವ ರಾಜಕಾರಣಿಗಳು ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂದು ನೀವೆಲ್ಲ ಗಮನಿಸುತ್ತಿದ್ದೀರಿ. ನಾನು ಎರಡು ಬಾರಿ ಸಿಎಂ ಆದರೂ ಹೆಚ್ಚು ಸಮಯ ಸಿಗಲಿಲ್ಲ. ಪೂರ್ಣಾವಧಿ ಸಿಕ್ಕಿದ್ದರೆ ಮಾದರಿ ಸರ್ಕಾರ ನಡೆಸುತ್ತಿದ್ದೆ. ಅದು ನನ್ನ ದುರಾದೃಷ್ಟ ಎಂದು ಭಾವಿಸುವುದಿಲ್ಲ ಎಂದರು.

ನನಗೆ ಸಿಎಂ ಆಗಿ ಅದಿಕಾರ ನಡೆಸಲು ಎರಡು ಬಾರಿ ಅವಕಾಶ ಸಿಕ್ಕಿದ್ದು, ಬಹಳ ಕಡಿಮೆ ಸಮಯ ಈ ನಾಡಿನ ಜನ ನನಗೆ ಪೂರ್ಣ ಅವದಿ ಕೊಡಲಿಲ್ಲ. ಕೊಟ್ಟಿದ್ದರೆ. ಪೂರ್ಣವಧಿಯಾಗಿ ಈ ರಾಜ್ಯವನ್ನು ಮಾದರಿ ರಾಜ್ಯವಾಗಿ ಮಾಡಿ ತೋರಿಸುತ್ತಿದ್ದೆ. ನಮ್ಮ ಪಕ್ಷ ಮುಗಿದೆ ಹೋಯ್ತು ಅಂದ್ರು. ಈಗ ನಾನು ಕೇಂದ್ರದಲ್ಲಿ ಮಂತ್ರಿ ಆಗಿದ್ದಾನೆ. ಆಂಧ್ರದಲ್ಲಿ ಮುಚ್ಚೇ ಹೋಗಿದ್ದ ಒಂದು ಫ್ಯಾಕ್ಟರಿ ಮರು ಆರಂಭ ಮಾಡಿದೆನೆ. ಅಲ್ಲಿ ಜನ ನನ್ನ ಫೋಟೊಗೆ ಹಾಲಿನ ಅಭಿಷೇಕ ಮಾಡ್ತಾರೆ. ರಾಜ್ಯದಲ್ಲಿ ವಿಶ್ವೇಶ್ವರಯ್ಯ ಫ್ಯಾಕ್ಟರಿ ಉಳಿಸಲು ಕ್ರಮ ಕೈಗೊಂಡಿದ್ದೇನೆ ಎಂದು ಹೇಳಿದರು.

ಈ ರಾಜ್ಯ ಸರ್ಕಾರ ೨.೧೦ ಲಕ್ಷ ಕೋಟಿ ಸಾಲ ಮಾಡಿಯಾಗಿದ್ದು, ಕೇವಲ ೧೮ ತಿಂಗಳಲ್ಲಿ ಇಷ್ಟು ಸಾಲ ಆಗಿದೆ. ರಾಜ್ಯದಲ್ಲಿ ಒಟ್ಟು ಸಾಲ ೭ ಲಕ್ಷ ಕೋಟಿ ದಾಟಿದೆ. ತಿಂಗಳಿಗೆ ಎರಡು ಸಾವಿರ ಹಣವನ್ನು ಮಹಿಳೆಯರಿಗೆ ಕೊಡ್ತಾರೆ. ಇದರಿಂದ ಕುಟುಂಬ ನಡೆಸೋಕೆ ಸಾದ್ಯವೇ? ಈಗಲೂ ಕೂಡ ಹಲವು ಹೆಣ್ಣು ಮಕ್ಕಳು ನೆರವಿಗಾಗಿ ನಮ್ಮ ಮನೆ ಹತ್ರ ಬರ್ತಾರೆ. ಎರಡು ಸಾವಿರದಲ್ಲಿ ಜೀವನ ನಡೆಯಿದಾಗಿದ್ರೆ ಅವರು ಯಾಕೆ ಬರ್ತಾರೆ! ಸರ್ಕಾರ ೭ ಲಕ್ಷ ಕೋಟಿ ಸಾಲ ಮಾಡಿ ಅರಾಮಾಗಿ ಓಡಾಡ್ತಾರೆ. ನೀವು ಒಂದೊ ಎರಡು ಲಕ್ಷ ಸಾಲ ಮಾಡಿ ಯಾಕೆ ಹೆದರ್ ತೀರಾ ಧೈರ್ಯದಿಂದ ಓಡಾಡಿ ಈ ಮೈಕ್ರೋ ಫೈನಾನ್ಸ್ ಕಿರುಕುಳ ಅಂತ ಹೆದರಬೇಡಿ. ಸಾಲ ಮಾಡಿ ಮನೆ ಕಟ್ಟಿ, ಮಕ್ಕಳನ್ನು ಓದಿಸಿದರೆ ಆ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತೀರಾ, ರಾಜ್ಯ ಸರ್ಕಾರದ ಒಟ್ಟು ಸಾಲ ೭ ಲಕ್ಷ ಕೋಟಿ ದಾಟಿದೆ. ಅವರೇ ನಾಚಿಕೊಳ್ಳುತ್ತಿಲ್ಲ. ನೀವು ಯಾಕೆ ಆತ್ಮಹತ್ಯೆ ಮಾಡುಕೊಳ್ಳುತ್ತೀರಾ ಎಂದು ಸಾಲಗಾರರಿಗೆ ಧೈರ್ಯದ ಮಾತನ್ನು ತಿಳಿಸಿದರು.

ತಪ್ಪುಗಳು ಆಗುತ್ತವೆ, ಆ ತಪ್ಪು ತಿದ್ದಿಕೊಳ್ಳಲು ಅವಕಾಶ ನೀಡಿ, ನಮಗೆ ಸಿಕ್ಕಿರುವ ಈ ಅವಕಾಶವನ್ನು ಜನರಿಗೆ ಧಾರೆ ಎರೆಯುತ್ತೇನೆ, ದುರುಪಯೋಗ ಪಡಿಸಿ ಕೊಳ್ಳುವುದಿಲ್ಲ. ನನ್ನನ್ನು ಮನೆಯ ಮಗ, ಕುಟುಂಬದ ಸದಸ್ಯ ಎಂದು ಸ್ವೀಕಾರ ಮಾಡುತ್ತೀರೋ ಅದು ನಿಮಗೆ ಬಿಟ್ಟಿದ್ದು. ದೇವೇಗೌಡರು ಅನಾರೋಗ್ಯದ ನಡುವೆಯೂ ರಾಜ್ಯಸಭೆಯಲ್ಲಿ ನದಿ ಜೋಡಣೆ ಬಗ್ಗೆ ಚರ್ಚೆ ಮಾಡಿದ್ದಾರೆ. ನೇರಳೆ, ಹುಣಸೆ, ಹಲಸು ಬೆಳೆಯುವ ರೈತರಿಗಾಗಿ ನಿಗಮ ಮಾಡುವಂತೆ ರಾಜ್ಯ ಸಭೆಯಲ್ಲಿ ದೇವೇಗೌಡರು ಮನವಿ ಮಾಡಿದ್ದಾರೆ. ನಮ್ಮ ತಂದೆ ಬದುಕಿರುವ ಒಳಗೆ ಈ ದೇಶ, ಜಿಲ್ಲೆಯ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನುಡಿದರು.

ಶಾಸಕ ಹೆಚ್.ಪಿ. ಸ್ವರೂಪ್ ಮಾತನಾಡಿ, ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣರ ಆಶಿರ್ವಾದದಿಂದ ಇಂದು ಸೈನಿಕರ ಭವನ ಉದ್ಘಾಟನೆಗೊಂಡಿದೆ. ಜಿಲ್ಲೆಯಲ್ಲಿ ಇಂಜಿನಿಯರಿಂಗ್, ೧೧ಕ್ಕೂ ಹೆಚ್ಚು ಡಿಪ್ಲೊಮಾ ಕಾಲೇಜುಗಳಿವೆ. ಬೇರೆ ಬೇರೆ ದೇಶಗಳಿಗೆ ಹಾಗೂ ಉದ್ಯೋಗ ಅರಸಿ ಬೆಂಗಳೂರಿಗೆ ಹೋಗಬೇಕಾಗಿದೆ. ಮುಂದೆ ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಜಿಲ್ಲೆಯಲ್ಲಿ ಐಟಿ ಪಾರ್ಕ್ ನಿರ್ಮಾಣ ಮಾಡಿ, ಉದ್ಯೋಗ ಸೃಷ್ಟಿ ಮಾಡಬೇಕು ಎಂದು ಮನವಿ ಪತ್ರವನ್ನು ಕುಮಾರಸ್ವಾಮಿ ಅವರಿಗೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಎ.ಮಂಜು, ಹೆಚ್.ಕೆ. ಕುಮಾರಸ್ವಾಮಿ, ಶಾಸಕ ಸಿ.ಎನ್.ಬಾಲಕೃಷ್ಣ, ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ಸುಮುಖ ರಘು, ಜಿಪಂ ಮಾಜಿ ಅಧ್ಯಕ್ಷ, ಸ್ವಾಮಿಗೌಡ, ಹೆಚ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು, ಮಂಜೇಗೌಡ, ತಾಪಂ ಮಾಜಿ ಅಧ್ಯಕ್ಷ ದಿನೇಶ್, ಬಿದರಿ ಕೆರೆ ಜಯರಾಂ, ಜೆಡಿಎಸ್. ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಅರೆ ಸೇನಾಪಡೆ ಜಿಲ್ಲಾಧ್ಯಕ್ಷ ಪಿ.ವಿ. ನಾಗೇಶ್, ದೆಹಲಿಯ ಸಿ.ಎ.ಪಿ.ಎಫ್. ಜನರಲ್ ಸೆಕ್ರಟ್ರಿ ರಣಬೀರ್ ಸಿಂಗ್, ಹೆಚ್.ಆರ್. ಸಿಂಗ್, ಎಂಪಿಎಲ್. ರೆಡ್ಡಿ, ರಾಮೇಗೌಡ, ಉಪಾಧ್ಯಕ್ಷ ಎಂ.ಜಿ. ರಮೇಶ್ ಅರೆಸೇನಾ ಪಡೆಯ ಸಂಘದ ಗೌರವಾಧ್ಯಕ್ಷ ನವಾಬ್ ಖಾನ್, ಉಪಾಧ್ಯಕ್ಷ ಎಂ.ಜಿ. ರಮೇಶ್, ನಾಗಪ್ಪ, ಯು. ನಾರಾಯಣಪ್ಪ, ಪ್ರಧಾನ ಕಾರ್ಯದರ್ಶಿ ಹೆಚ್.ಆರ್. ವಿಜಯಕುಮಾರ್ ಇತರರು ಉಪಸ್ಥಿತರಿದ್ದರು.

Continue Reading

Hassan

ವಿದೇಶಗಳಿಗೆ ಮಾದರಿಯಾಗಬಲ್ಲ ಸಾಂಸ್ಕೃತಿಕ ಹಿರಿಮೆ ಭಾರತದ್ದು: ಸಿಮೆಂಟ್‌ ಮಂಜು

Published

on

ವರದಿ: ಸತೀಶ್ ಚಿಕ್ಕಕಣಗಾಲು

ಆಲೂರು: ಜಗತ್ತಿನ ವಿವಿಧ ದೇಶಗಳಿಗೆ ಮಾದರಿಯಾಗಬಲ್ಲ ಸಾಂಸ್ಕೃತಿಕ ಹಿರಿಮೆ ಭಾರತದ್ದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಐ.ಕ್ಯೂ.ಎ.ಸಿ. ಹಾಗೂ ಸಾಂಸ್ಕೃತಿಕ ವೇದಿಕೆ ಇವುಗಳ ವತಿಯಿಂದ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಎಂಬ ಶೀರ್ಷಿಕೆಯಡಿಯಲ್ಲಿ ಆಯೋಜಿಸಿದ್ದ ಜಾನಪದ ಉತ್ಸವ 2025ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತದ ಪ್ರತಿಯೊಂದು ಸಾಂಸ್ಕೃತಿಕ ಆಚರಣೆಗೂ ನಿರ್ದಿಷ್ಟ ಅರ್ಥವಿದೆ. ಈ ಕಾರಣಕ್ಕಾಗಿಯೇ ಭಾರತದ ಸಾಂಸ್ಕೃತಿಕ ಆಚರಣೆಗಳು ಉಡುಗೆ ತೊಡುಗೆಗಳು ಜಗತ್ತಿನ ವಿವಿಧ ದೇಶಗಳನ್ನು ಸೆಳೆದಿವೆ. ಪ್ರಾಚೀನ ಭಾರತದ ಇತಿಹಾಸ, ಕೌಟುಂಬಿಕ ಹಿನ್ನೆಲೆಗಳತ್ತ ದೃಷ್ಟಿ ಹಾಯಿಸಿ ದಾಗ ಇವು ಅವಿಭಕ್ತ ಕುಟುಂಬಗಳ ಹಿತಾಸಕ್ತಿಗೆ ಹೆಚ್ಚಿನ ಮಹತ್ವ ಮತ್ತು ರಕ್ಷಣೆ ನೀಡುತ್ತ ಬಂದಿರುವುದನ್ನು ನಾವು ಕಾಣಬಹುದು. ಅವಿಭಕ್ತ ಕುಟುಂಬಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಹೆಚ್ಚು ಸ್ವಾವ ಲಂಬಿಯಾಗಿದ್ದವು.ಆದರೆ ಇಂದು ಎಲ್ಲೋ ಮನಸ್ಸಿನ ಮೂಲೆಯಲ್ಲಿ ಅಡಗಿದ ಸಂಶಯ, ಅಹಂಕಾರ, ಅಸೂಯೆ ಎಂಬ ಮಾಯಾ ಜಾಲದಲ್ಲಿ ಸಿಲುಕಿ, ಒಟ್ಟಾಗಿ ಬಾಳಿ ಬದುಕ ಬೇಕಾದ ಅವಿಭಕ್ತ ಕುಟುಂಬ ಗಳು ಇಂದು ವಿಭಕ್ತವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಹಾಸನ ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ.ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿ, ನಮ್ಮ ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಿದ್ದ ಅಪ್ಪಟ ಗ್ರಾಮೀಣ ಕ್ರೀಡೆಗಳು ದಿನದಿಂದ ದಿನಕ್ಕೆ ನಶಿಸಿ ಹೋಗುತ್ತಿದ್ದು, ಮುಂದಿನ ದಿನಗಳಲ್ಲಿ ಇತಿಹಾಸದ ಪುಟವನ್ನು ಸೇರುವ ಎಲ್ಲಾ ಸ್ಪಷ್ಟ ಲಕ್ಷಣಗಳು ಕಂಡುಬರುತ್ತಿದೆ ಆದ್ದರಿಂದ ಗ್ರಾಮೀಣ ಸೊಗಡು, ಸಂಸ್ಕೃತಿಯನ್ನು ನಶಿಸಿ ಹೋಗಲು ಬಿಡಬಾರದು, ಹಳ್ಳಿಗಳಲ್ಲಿ ನಡೆಯುವ ಉತ್ಸವ, ಜಾತ್ರೋತ್ಸವ ಮುಂತಾದ ಸಂಸ್ಕೃತಿ ಗ್ರಾಮೀಣ ಭಾಗದ ಸೊತ್ತಾಗಿದೆ. ಗ್ರಾಮೀಣ ಭಾಗದಲ್ಲಿ ನಡೆಯುವ ಉತ್ಸವಗಳಿಗೆ ಹಲವಾರು ಅರ್ಥಗಳಿರುತ್ತದೆ. ಈ ದಿಸೆಯಲ್ಲಿ ನೂರಾರು ವರ್ಷಗಳಿಂದ ಹಿರಿಯರು ಹಾಕಿಕೊಟ್ಟ ಗ್ರಾಮೀಣ ಭಾಗದ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಬೆಳೆಸಿಕೊಂಡು ಹೋಗುವಂತೆ ಸಲಹೆ ನೀಡಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಆಲೂರು ಬಸ್ ನಿಲ್ದಾಣದಿಂದ ಕಾಲೇಜಿನವರೆಗೂ ಎತ್ತಿನಗಾಡಿಯ ಮೆರವಣಿಗೆ ನಡೆಯಿತು ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿನಿಯರು ಕುಂಭಕಳಸ ಹೊತ್ತು‌ ಸಾಗಿದರೆ ವಿದ್ಯಾರ್ಥಿಗಳು ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕಿದರು, ವೇದಿಕೆ ಕಾರ್ಯಕ್ರಮದಲ್ಲಿ ಶಿಕ್ಷಕಿ ವೇದಾವತಿಯವರು ಜಾನಪದ ಹಾಡುಗಳನ್ನು ಹಾಡುವ ಮೂಲಕ ಎಲ್ಲರ ಗಮನ ಸೆಳೆದರು ನಂತರ ಇದೇ ಕಾಲೇಜಿನಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಬೇರೆಡೆಗೆ ವರ್ಗಾವಣೆಯಾದ ಉಪನ್ಯಾಸಹ ಮೋಹನ್ ಕುಮಾರ್ ಹಾಗೂ ಶಿವಪ್ರಸಾದ್ ಮತ್ತು ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ ರವರನ್ನು ಗೌರವಿಸಿ ಸನ್ಮಾನಿಸಲಾಯಿತು ನಂತರ ವಿಶ್ವ ಜಲದಿನ-2025″ ಅಂಗವಾಗಿ ಜಲ ಸಂರಕ್ಷಣೆ ಕುರಿತು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಟಿ.ಪಿ ಪುಟ್ಟರಾಜು, ಉಪನ್ಯಾಸಕರಾದ ರಾಘವೇಂದ್ರ, ರಮೇಶ್, ವೆಂಕಟೇಶ್, ಪುರುಷೋತ್ತಮ್, ಮಾರುತಿ, ನಟರಾಜ್ ಗ್ರಾಮ ಪಂಚಾಯತಿ ಸದಸ್ಯರಾದ ನಂಜುಂಡಪ್ಪ, ಮೋಹನ್ ಕುಮಾರ್, ಬಿಜೆಪಿ ಮುಖಂಡರಾದ ನಂಜೇಶಣ್ಣ, ಹರೀಶ್, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಬಾಲಲೋಚನ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Continue Reading

Hassan

ಪೊಲೀಸ್ ಇಲಾಖೆ ಸರ್ಕಾರದ ಕೈಗೊಂಬೆ: ಸೂರಜ್ ರೇವಣ್ಣ ಕಿಡಿ

Published

on

ಹಾಸನ: ನಾನೊಬ್ಬ ಎಂಎಲ್‌ಸಿ ಆಗಿ ಪೊಲೀಸ್ ಕಛೇರಿಗೆ ಖುದ್ದಾಗಿ ಹೋಗಿ ಎಸ್‌ಪಿಗೆ ಕಂಪ್ಲೇಂಟ್ ಕೊಟ್ಟರೂ ಸ್ವೀಕರಿಸುವುದಿಲ್ಲ. ಒಂದು ದಿನವಾದರೂ ಎಫ್‌ಐಆರ್ ದಾಖಲಿಸುವುದಿಲ್ಲ. ನನಗೇ ಅನ್ಯಾಯವಾಗಿರುವಾಗ ಜಿಲ್ಲೆಯ ಜನರ ಕಥೆ ಏನು? ಇವತ್ತು ಪೊಲೀಸ್ ಇಲಾಖೆ ಉಳಿದೇ ಇಲ್ಲ, ಸರ್ಕಾರದ ಕೈಗೊಂಬೆಯಾಗಿ ಮಾರ್ಪಟ್ಟಿದೆ ಎಂದು ಎಸ್‌ಪಿ ಮಹಮದ್ ಸುಜೀತಾ ಅವರ ವಿರುದ್ಧ ವಿಧಾನ ಪರಿಷತ್ತು ಸದಸ್ಯ ಸೂರಜ್ ರೇವಣ್ಣ ಅವರು ಏಕವಚನದಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡರು.

ತಾಲೂಕಿನ ಗೊರೂರು ಪ್ರವಾಸಿ ಮಂದಿರದಲ್ಲಿ ಬಜೆಟ್ ಸಭೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ಜಿಲ್ಲೆಯ ಪೊಲೀಸ್ ಇಲಾಖೆಯ ಕಾರ್ಯವೈಖರಿಂ ವಿರುದ್ಧ ಸಿಡಿಮಿಡಿಗೊಂಡ ಸೂರಜ್ ರೇವಣ್ಣ, ನಾನೊಬ್ಬ ಎಂಎಲ್‌ಸಿ ಆಗಿದ್ದು, ನಾನೆ ಹೋಗಿ ಎಸ್‌ಪಿಗೆ ದೂರು ನೀಡಿದರೂ ಸ್ವೀಕರಿಸುವುದಿಲ್ಲ. ಒಂದು ದಿನವಾದರೂ ಎಫ್‌ಐಆರ್ ದಾಖಲಿಸುವುದಿಲ್ಲ. ನನಗೇ ಅನ್ಯಾಯವಾದರೇ ಜಿಲ್ಲೆಯ ಜನರ ಕಥೆ ಏನು? ದೂರು ದಾಖಲಿಸಲು ಬೇಕಾಗಿಯೇ ಒಂದು ದಿನ ತಡ ಮಾಡಿದರು. ಇವತ್ತು ಪೊಲೀಸ್ ಇಲಾಖೆ ಉಳಿದೇ ಇಲ್ಲ, ಸರ್ಕಾರದ ಕೈಗೊಂಬೆಯಾಗಿ ಮಾರ್ಪಟ್ಟಿದೆ ಎಂದು ಗಂಭೀರವಾಗಿ ಆರೋಪಿಸಿದರು. ಜೊತೆಗೆ ಹಾಸನ ಜಿಲ್ಲೆಯ ಎಸ್‌ಪಿ ಮಹಮದ್ ಸುಜೀತಾ ಅವರ ವಿರುದ್ಧವೂ ಏಕವಚನದಲ್ಲಿ ತೀವ್ರ ವಾಗ್ದಾಳಿ ನಡೆಸಿದ ಅವರು, ಜಿಲ್ಲೆಯಲ್ಲಿ ನ್ಯಾಯ ಒದಗಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆಕ್ಷೇಪಿಸಿದರು. ಇಂತಹ ರಾಜಕೀಯ ತಂತ್ರಗಾರಿಕೆ ಮತ್ತು ವ್ಯವಸ್ಥೆಯ ದುರುಪಯೋಗದಿಂದ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ ಎಂದು ಅಸಮಧಾನವ್ಯಕ್ತಪಡಿಸಿದರು.

ರಾಜಕೀಯದಲ್ಲಿ ಪಾರದರ್ಶಕತೆ ಮತ್ತು ಅಭಿವೃದ್ಧಿಯ ಉದ್ದೇಶ ಇರಬೇಕೇ ಹೊರತು, ಕೀಳುಮಟ್ಟದ ತಂತ್ರಗಳಿಗೆ ಮೊರೆ ಹೋಗಬಾರದು ಎಂದರು. ನಾವು ಪಾರದರ್ಶಕವಾದ ರಾಜಕಾರಣ ಮಾಡಬೇಕು. ನಮ್ಮ ಜಿಲ್ಲೆ ತಾಲೂಕು ಮತ್ತು ರಾಜ್ಯವನ್ನು ಅಭಿವೃದ್ಧಿ ಮಾಡುವ ಉದ್ದೇಶ ನಮ್ಮದಾಗಿರಬೇಕು. ಜನ ಏಕೆ ನಮ್ಮನ್ನು ಆಯ್ಕೆ ಮಾಡಿದ್ದಾರೆ ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು. ಆದರೆ ಇಂದು ರಾಜಕಾರಣದಲ್ಲಿ ಅವರವರ ವೈಯಕ್ತಿಕ ವಿಚಾರಗಳನ್ನು ಬಳಸಿಕೊಂಡು ಹನಿಟ್ರ್ಯಾಪ್ ಮಾಡುವುದು, ತಾವು ಸಿಎಂ ಆಗಲು ಇನ್ನೊಬ್ಬ ರಾಜಕಾರಣಿಗೆ ಕೆಟ್ಟ ಹೆಸರು ತರುವ ರೀತಿ ತಂತ್ರಗಾರಿಕೆ ಮಾಡುವುದು, ಪರೋಕ್ಷವಾಗಿ ಬ್ಲಾಕ್‌ಮೇಲ್ ಮೂಲಕ ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದಲ್ಲ ಎಂದರು. ರಾಜ್ಯದ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಎಚ್ಚರಿಸಿದ ಅವರು, ಇಂತಹ ಕೆಟ್ಟ ವ್ಯವಸ್ಥೆಯಿಂದ ಕರ್ನಾಟಕಕ್ಕೆ ದುಸ್ಥಿತಿ ಬಂದಿದೆ. ಅವರವರ ಪಕ್ಷದವರೇ ಕಿತ್ತಾಡಿಕೊಳ್ಳುತ್ತಿದ್ದಾರೆ. ರಾಜಣ್ಣ ಅವರು ಯಾವ ಸಚಿವರನ್ನು ಭೇಟಿಯಾದರು ಎಂದು ಪ್ರಶ್ನಿಸಿದರು ಯಾವ ಹಿರಿಯ ಮುಖಂಡರನ್ನು ಭೇಟಿಯಾದರು ಎಂಬುದನ್ನು ಮಾಧ್ಯಮಗಳಲ್ಲಿ ತೋರಿಸುತ್ತಿದ್ದೀರಿ. ರಾಜಕಾರಣವನ್ನು ನೇರವಾಗಿ ಮಾಡಬೇಕು. ೪೮ ಮಂದಿ ಹನಿಟ್ರ್ಯಾಪ್ ಮಾಡಿದ್ದಾರೆ ಎನ್ನುತ್ತಾರೆ. ಇದೆಲ್ಲ ರಾಜಕೀಯದಲ್ಲಿ ಒಳ್ಳೆಯ ಸಂಪ್ರದಾಯವಲ್ಲ ಎಂದು ಬೇಸರವ್ಯಕ್ತಪಡಸಿದರು. ಇದರಿಂದ ಯಾರಿಗೇ ಆಗಲಿ ಕೆಟ್ಟ ಹೆಸರು ಬರಲಿದೆ. ರಾಜ್ಯಕ್ಕೂ ಕೆಟ್ಟ ಹೆಸರು ಬರಲಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಯಾರೋ ಒಬ್ಬರು ಸಿಎಂ ಆಗಲು ಹೀಗೆ ಮಾಡಿದ್ದಾರ ಎಂಬ ಪ್ರಶ್ನೆಗೆ, ಅದು ನನಗೆ ಗೊತ್ತಿಲ್ಲ. ಆದರೆ ಅವರ ಪಕ್ಷದಲ್ಲೇ ಅವರು, ಇವರು ಅಂತ ಆರೋಪ-ಪ್ರತ್ಯಾರೋಪ ನಡೆಯುತ್ತಿವೆ ಎಂದರು. ಇದೇ ವೇಳೆ ಹಾಸನ ಜಿಪಂನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಸೂರಜ್, ಚುನಾಯಿತ ಪ್ರತಿನಿಧಿಗಳು ಇಲ್ಲದ ಕಾರಣ ಹಾಲಿ ಸಿಇಒ ಅವರು ಪ್ರತಿ ಕಾಮಗಾರಿಗೂ ಇಂತಿಷ್ಟು ಪರ್ಸಂಟೇಜ್ ಪಡೆಯುತ್ತಿದ್ದಾರೆ ಎಂದು ನೇರವಾಗಿ ದೂರಿದರು. ಈ ಬಗ್ಗೆ ನಮ್ಮ ಜಿಲ್ಲೆಯ ಶಾಸಕರಾದ ಸಿಮೆಂಟ್ ಮಂಜು, ಹೆಚ್.ಕೆ.ಸುರೇಶ್, ಹೆಚ್.ಡಿ.ರೇವಣ್ಣ ಮೊದಲಾದವರು ಅಧಿವೇಶನದಲ್ಲೇ ಚರ್ಚೆ ಮಾಡಿದ್ದಾರೆ. ಜಿಪಂನಲ್ಲಿ ನರೇಗಾ ಸೇರಿದಂತೆ ಯಾವುದೂ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂದು ಬೇಸರ ಹೊರ ಹಾಕಿದರು. ಜಿಲ್ಲೆಯ ಗ್ರಾಪಂ, ತಾಪಂ ನಿಂದಲೂ ಅನೇಕ ಕಾಮಗಾರಿಗಳಿಗೆ ಪರ್ಸಂಟೇಜ್ ಕೊಡಬೇಕಿದೆ. ಈ ಬಗ್ಗೆ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಮನವಿ ಮಾಡುತ್ತೇನೆ. ಭ್ರಷ್ಟಾಚಾರ ಮಿತಿ ಮೀರಲು ಕಾರಣರಾಗಿರುವ ಸಿಇಒ ಅವರನ್ನು ವರ್ಗ ಮಾಡಬೇಕು ಎಂದು ಮನವಿ ಮಾಡಿದರು. ಕೇಂದ್ರ ಸರ್ಕಾರದ ಆರ್‌ಸಿಹೆಚ್ ಅನುದಾನದಡಿ ಜಿಲ್ಲೆಗೆ ಬಂದಿದ್ದ ೫ ಕೋಟಿ ಹಣ ವಿನಿಯೋಗದಲ್ಲೂ ಸಾಕಷ್ಟು ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸಂಬಂಧಪಟ್ಟವರು ಶ್ವೇತಪತ್ರ ಹೊರಡಿಸಿ, ಲೆಕ್ಕಪತ್ರ ನೀಡಬೇಕು ಎಂದು ಒತ್ತಾಯಿಸಿದರು. ಎಲ್ಲ ಪ್ರಯತ್ನ: ಹಾಸನ ವಿವಿಯನ್ನು ಉಳಿಸಿಕೊಳ್ಳಲು ಎಲ್ಲ ರೀತಿಯ ಹೋರಾಟ ಮಾಡುತ್ತಿದ್ದೇವೆ. ಬೇರೆ ಜಿಲ್ಲೆಗಳ ವಿವಿಗಳಿಗೆ ಹೋಲಿಸಿದರೆ ಆರ್ಥಿಕ ಸ್ಥಿತಿಗತಿ ಸೇರಿದಂತೆ ಎಲ್ಲ ರೀತಿಯಲ್ಲೂ ಹಾಸನ ವಿವಿ ಉತ್ತಮವಾಗಿದೆ. ಸರ್ಕಾರದಿಂದ ಅಲ್ಲದೆ ಆಂತರಿಕವಾಗಿ ವಾರ್ಷಿಕ ೧೦ ಕೋಟಿ ಆದಾಯ ಬರುತ್ತಿದೆ. ವಿವಿ ಉಳಿಸುವ ಸಂಬಂಧ ಉನ್ನತ ಶಿಕ್ಷಣ ಸಚಿವರು ಹಾಗೂ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಿದ್ದೇವೆ. ಎಲ್ಲರಿಂದಲೂ ನಮ್ಮ ಮನವಿಗೆ ಸ್ಪಂದನೆ ಸಿಗುವ ವಿಶ್ವಾಸ ಇದೆ ಎಂದು ಹೇಳಿದರು.

Continue Reading

Hassan

ಏ.13 ರಂದು ಬ್ರಾಹ್ಮಣ ಮಹಾಸಭಾದ ಚುನಾವಣೆ: ಹೆಚ್.ಎಸ್. ಮಂಜುನಾಥ್ ಮೂರ್ತಿ

Published

on

ಹಾಸನ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ೨೦೨೫-೨೦೩೦ರ ಅವಧಿಗೆ ಅಧ್ಯಕ್ಷೀಯ ಹಾಗೂ ಜಿಲ್ಲಾ ಪ್ರತಿನಿಧಿ ಚುನಾವಣೆ ಏ.13 ರಂದು ನಿಗದಿಯಾಗಿದೆ ಎಂದು ಹಾಸನ ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷ ಹೆಚ್.ಎಸ್. ಮಂಜುನಾಥ್ ಮೂರ್ತಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಅಧ್ಯಕ್ಷೀಯ ಚುನಾವಣೆಗೆ ಈಗಾಗಲೇ ಎರಡು ಬಣಗಳ ಚುನಾವಣಾ ಆಕಾಂಕ್ಷಿಗಳು ಬಂದು ಪ್ರಚಾರ ನಡೆಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾ ಬ್ರಾಹ್ಮಣ ಸಭಾ, ಜಿಲ್ಲಾ ಪ್ರತಿನಿಧಿ ಆಯ್ಕೆ ಸಂಬಂಧ, ಎಲ್ಲಾ ತಾಲ್ಲೂಕಿನ ಪದಾಧಿಕಾರಿಗಳ ಹಾಗೂ ಉಪಪಂಗಡದ ಮುಖಂಡರೊಂದಿಗೆ ಸಭೆ ನಡೆಸಿ ಪಿ.ಎಸ್. ವೆಂಕಟೇಶ್ ಇವರನ್ನು ಜಿಲ್ಲಾ ಪ್ರತಿನಿಧಿ ಅಭ್ಯರ್ಥಿಯಾಗಿದ್ದಾರೆ ಎಂದರು.

ಜಿಲ್ಲಾ ಬ್ರಾಹ್ಮಣ ಸಭಾ ಹಾಗೂ ಉಪಪಂಗಡಗಳು ಮತ್ತು ತಾಲೂಕು ಸಂಘಗಳ ಮುಖಂಡರು ಯಾವುದೇ ಬಣದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುವುದಿಲ್ಲವೆಂದು ನಿರ್ಣಯಿಸಿ, ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷರಾದ ಹೆಚ್. ಎಸ್. ಮಂಜುನಾಥ ಮೂರ್ತಿ ನೇತೃತ್ವದಲ್ಲಿ ತೀರ್ಮಾನಿಸಲಾಗಿದೆ. ಮುಂದೆ ರಾಜ್ಯ ಸಮಿತಿಗೆ ಮಾತ್ರ ಚುನಾವಣೆ ನಡೆಯಬೇಕಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹೊಯ್ಸಳ ಕರ್ನಾಟಕ ಬ್ರಾಹ್ಮಣ ಸಭಾದ ಅಧ್ಯಕ್ಷ ವೆಂಕಟೇಶ್ ಮೂರ್ತಿ, ಬಬ್ಬರೂ ಕಮ್ಮೆ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಾಗರಾಜು, ನಗರ ಬ್ರಾಹ್ಮಣ ಸಭಾ ಅಧ್ಯಕ್ಷ ವೆಂಕಟೇಶ್, ಮಾದವ ಸಂಘದ ಅಧ್ಯಕ್ಷ ಕೆ.ಪಿ.ಎಸ್. ಪ್ರಮೋದ್, ಸೀತಾರಾಮಾಂಜನೇಯ ದೇವಸ್ಥಾನದ ಅಧ್ಯಕ್ಷ ಶ್ರೀಕಾಂತ್ ಇತರರು ಉಪಸ್ಥಿತರಿದ್ದರು.

Continue Reading

Trending

error: Content is protected !!