Mysore
ರೈತರಿಗೆ ಅನ್ಯಾಯ ಮಾಡಿದಲ್ಲಿ ತಾಯಿಗೆ ಮೋಸ ಮಾಡಿದಂತೆ: ಜಿ.ಡಿ.ಹರೀಶ್ಗೌಡ
ವರದಿ: ಶಂಕರ್ ಕಟ್ಟೆಮಳಲವಾಡಿ
ಹುಣಸೂರು: ರಾಗಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ಮೋಸ ಮಾಡುವುದು, ಅನಾವಶ್ಯಕವಾಗಿ ಸತಾಯಿಸುವ ಬಗ್ಗೆ ದೂರುಗಳು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಜಿ.ಡಿ.ಹರೀಶ್ಗೌಡ ತಿಳಿಸಿದರು.
ನಗರದ ಎಪಿಎಂಸಿ ಆವರಣದಲ್ಲಿ ಮಂಗಳವಾರ ರಾಗಿ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ತಾಲೂಕಿನ ರತ್ನಪುರಿಯ ಎಪಿಎಂಸಿಯಲ್ಲಿ ಮತ್ತೊಂದು ಖರೀದಿ ಕೇಂದ್ರ ಆರಂಭಿಸಲಾಗಿದೆ. ರಾಗಿ ಖರೀದಿ ಕೇಂದ್ರದಲ್ಲಿ ಕಳೆದ ಬಾರಿ ದಲ್ಲಾಳಿಗಳ ಹಾವಳಿ ಜೊತೆಗೆ ಕ್ವಿಂಟಾಲ್ಗೆ 4ಕೆ.ಜಿ.ವೇಸ್ಟೇಜ್ ತೆಗೆಯುವ ಮತ್ತು ರೈತರಿಂದ ಹಣ ವಸೂಲಿ ಮಾಡುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ ಯಾವೊಬ್ಬ ರೈತರಿಗೂ ಅನ್ಯಾಯವಾಗದ ರೀತಿಯಲ್ಲಿ ನಿಯಮಾನುಸಾರ ಖರೀದಿ ಪ್ರಕ್ರಿಯೆ ನಡೆಸಬೇಕು.
ರೈತರಿಗೆ ಅನ್ಯಾಯ ಮಾಡಿದಲ್ಲಿ ತಾಯಿಗೆ ಮೋಸ ಮಾಡಿದಂತೆ. ಈ ಬಗ್ಗೆ ರೈತರಿಂದ ದೂರು ಬಂದಲ್ಲಿ ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿಗಳನ್ನು ಎಚ್ಚರಿಸಿ, ರೈತರು ಸಹ ಗುಣಮಟ್ಟದ ರಾಗಿಯನ್ನು ತರುವಂತೆ ಸಲಹೆ ನೀಡಿದರು.

ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಕಿರಣ್ ಮಾತನಾಡಿ, ಸರಕಾರ ಪ್ರತಿಕ್ವಿಂಟಾಲ್ಗೆ 4.886ರೂಗಳಂತೆ ನಿಗದಿಗೊಳಿಸಿದೆ. ಹುಣಸೂರು ಎಪಿಎಂಸಿಯಲ್ಲಿ 5021ಮಂದಿ ಹಾಗೂ ರತ್ನಪುರಿ ಕೇಂದ್ರದಲ್ಲಿ 251ಮಂದಿ ಸೇರಿದಂತೆ ಒಟ್ಟು 5272ಮಂದಿ ರೈತರು ನೊಂದಾಯಿಸಿಕೊಂಡಿದ್ದಾರೆ. ರೈತರಿಂದ 1,31ಲಕ್ಷ ಕ್ವಿಂಟಾಲ್ ರಾಗಿ ಖರೀದಿಸಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ ಆಹಾರ ಶಿರಸ್ತೆದಾರ್ ಲಕ್ಷ್ಮಿ, ನಿರೀಕ್ಷಕ ಕರೀಂಖಾನ್,ಎಪಿಎಂಸಿ ಮಾಜಿ ಅಧ್ಯಕ್ಷ ಕಿರಂಗೂರುಬಸವರಾಜು, ಟಿಎಪಿಸಿಎಂಎಸ್ನ ಗೋವಿಂದೇಗೌಡ, ಖರೀದಿ ಅಧಿಕಾರಿ ಮೈಕೇಲ್ಫರ್ನಾಡಿಸ್, ಎಪಿಎಂಸಿ ಕಾರ್ಯದರ್ಶಿ ನಾಗೇಶ್, ರೈತಸಂಘದ ಮುಖಂಡರಾದ ಚಂದ್ರೇಗೌಡ, ಮೋದೂರುಶಿವಣ್ಣೇಗೌಡ, ವಿಷಕಂಠಪ್ಪ, ಕೃಷ್ಣೇಗೌಡ, ಬನ್ನಿಕುಪ್ಪೆ ನಂಜಪ್ಪ, ಚೆಲುವಾಚಾರಿ, ಬಸವರಾಜು, ಸತೀಶ್, ಮಹದೇವ್ ಸೇರಿದಂತೆ ಹಲವರು ಇದ್ದರು.
Mysore
ಕಾಲ ಕಾಲಕ್ಕೆ ನೀರಿನ ಪೈಪ್ ಲೈನ್ ಗಳನ್ನು ಪರಿಶೀಲಿಸಿ: ಯುಕೇಶ್ ಕುಮಾರ್
ಮೈಸೂರು: ಕಾಲ ಕಾಲಕ್ಕೆ ನೀರಿನ ಪೈಪ್ ಲೈನ್ ಗಳನ್ನು ಪರಿಶೀಲಿಸಿ ಹೊಡೆದ ಪೈಪ್ ಗಳನ್ನು ತಕ್ಷಣವೇ ಸರಿಪಡಿಸಬೇಕು. ನೀರಿನ ಅಭಾವ ಕಂಡು ಬಂದಲ್ಲಿ ಟ್ಯಾಂಕರ್ ಗಳ ಮೂಲಕ ನೀರು ಪಾರೈಸಿ ನಿಮ್ಮ ಹಂತದಲ್ಲೇ ಸಮಸ್ಯೆ ಸರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್ ತಿಳಿಸಿದರು.

ನೀರಿನ ಸಮಸ್ಯೆ ದೂರಿನ ಹಿನ್ನೆಲೆ ಮಂಗಳವಾರ ಹದಿನಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹದಿನಾರುಮೋಳೆ, ಬಿಳಿಗೆರೆ ಗ್ರಾಮ ಪಂಚಾಯತಿಯ ಕುಪ್ಪರವಳ್ಳಿ ಹಾಗೂ ಕಾಮಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ನೀರಿನ ಸಮಸ್ಯೆ ಪರಿಶೀಲಿಸಿ ಮಾತನಾಡಿದರು.
ನೀರು ಬಿಡುವ ಅವಧಿಯನ್ನು ನಿಗದಿ ಪಡಿಸಿ, ಸರಿಯಾದ ಸಮಯಕ್ಕೆ ವಾಟರ್ ಮೆನ್ ಮೂಲಕ ನೀರು ಪೂರೈಸಬೇಕು. ಈಗ ಎಲ್ಲಾ ಗ್ರಾಮೀಣ ಭಾಗಗಳಲ್ಲಿ ಸ್ಥಳೀಯ ಹಬ್ಬ ಗಳು ಜರುಗುತಲಿದ್ದು ಈ ವೇಳೆಯಲ್ಲಿ ನೀರಿನ ಸಮಸ್ಯೆ ತಲೆದೂರದಂತೆ ಎಚ್ಚರವಹಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು.

ಸಾರ್ವಜನಿಕರೊಂದಿಗೆ ಮಾತನಾಡಿದ ಅವರು ಅತ್ಯಮೂಲ್ಯ ವಾದ ನೀರನ್ನು ಪ್ರತಿಯೊಬ್ಬರು ಇತಮಿತವಾಗಿ ಬಳಸಬೇಕು, ಸಮರ್ಪಕವಾಗಿ ಉಪಯೋಗಿಸಿದರೆ ಬೇಸಿಗೆಕಾಲದಲ್ಲಿ ನೀರಿನ ಸಮಸ್ಯೆ ತಲೆ ದೂರುವುದಿಲ್ಲ ಎಂದು ತಿಳಿಸಿದರು.
ಈ ವೇಳೆ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದು, ಹಲವು ಮನೆಗಳಲ್ಲಿ ನಲ್ಲಿಪೈಪ್ ಗಳಿಗೆ ಮೋಟಾರ್ ಗಳನ್ನು ಅಳವಡಿಸಿಕೊಂಡಿರುವ ಹಿನ್ನೆಲೆ ಎಲ್ಲಾ ಮನೆಗಳಿಗೆ ಸಮರ್ಪಕವಾಗಿ ನೀರು ಬರುತಿಲ್ಲ ಎಂದು ತಿಳಿಸಿದರು.

ನಂಜನಗೂಡು ಹಾಗೂ ವರುಣ ಕ್ಷೇತ್ರದ 62 ಹಳ್ಳಿಗಳಿಗೆ ನೀರು ಪೂರೈಸಬಹುದಾದಾ ದೊಡ್ಡ ಕವಲಂದೆ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಬಹುಗ್ರಾಮ ಕುಡಿಯುವ ನೀರು ಪುನಃಚೇತನ ಕಾಮಗಾರಿಯ ಪ್ರಗತಿಯ ಬಗ್ಗೆ ಗ್ರಾಮೀಣ ನೀರು ಸರಬರಾಜು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ವೇಳೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ಗ್ರಾಮೀಣ ನೀರು ಸರಬರಾಜು ಕಾರ್ಯ ಪಾಲಕ ಅಭಿಯಂತರರಾದ ರಾಮಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮನು, ಕಿರಿಯ ಸಹಾಯಕ ಅಭಿಯಂತರರಾದ ಪ್ರವೀಣ್, ಹದಿನಾರು ಪಿಡಿಒ ಪ್ರದೀಪ್, ಬಿಳಿಗೆರೆ ಪಿಡಿಒ ಗಣೇಶ್ ಹಾಗೂ ಇತರೆ ಸಿಬ್ಬಂದಿ ಹಾಜರಿದ್ದರು.
Mysore
ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಪುನಾರಂಭಿಸಲು ಅಶ್ವಿನ್ ವೈಷ್ಣವ್ಗೆ ಯದುವೀರ್ ಮನವಿ
ಮೈಸೂರು: ಅನಿವಾರ್ಯ ಕಾರಣಗಳಿಂದ ನನೆಗುದಿಗೆ ಬಿದ್ದಿರುವ ಮೈಸೂರು-ಕುಶಾಲನಗರ ಯೋಜನೆಗೆ ಮರು ಚಾಲನೆ ನೀಡಬೇಕು. ಪ್ರಮುಖವಾಗಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಲು ಮಧ್ಯ ಪ್ರವೇಶಿಸಬೇಕು ಎಂದು ಕೇಂದ್ರ ರೈಲ್ವೆ ಸಚಿವರಿಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಮಾಡಿದ್ದಾರೆ.
ಈ ಸಂಬಂಧ ಪತ್ರ ಬರೆದಿರುವ ಸಂಸದರು, ಕೆಲವು ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಯೋಜನೆ ನಿಧಾನಗತಿಯಲ್ಲಿ ಸಾಗಿದೆ ಅಥವಾ ನನೆಗುದಿಗೆ ಬಿದ್ದಿದೆ ಎಂದರು.

ಮೈಸೂರು (ಬೆಳಗೊಳ) – ಕುಶಾಲನಗರ (89 ಕಿಮೀ) ಯೋಜನೆಯ ಅಂತಿಮ ಸ್ಥಳ ಸಮೀಕ್ಷೆ ಪೂರ್ಣಗೊಂಡಿದ್ದರೂ ಕಾರಣಾಂತರಗಳಿಂದ ಸ್ಥಗಿತಗೊಂಡಿದೆ. ಈ ಯೋಜನೆಗೆ ಪುನರುಜ್ಜೀವನಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಚಿವರು ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಲಾಗಿದೆ.
ಕೊಡಗು ಜಿಲ್ಲೆಗೆ ಸೂಕ್ತ ರೈಲು ಸಂಪರ್ಕವಿಲ್ಲದೇ ಪ್ರಮುಖ ಪ್ರವಾಸೋದ್ಯಮ ಮತ್ತು ತೋಟಗಾರಿಕೆ ಕ್ಷೇತ್ರಗಳ ಆರ್ಥಿಕತೆಗೆ ಭಾರಿ ತೊಂದರೆಯಾಗುತ್ತಿದೆ. ಸಂಪೂರ್ಣವಾಗಿ ಸ್ಯಾಚುರೇಟೆಡ್ ರಸ್ತೆ ಸಂಪರ್ಕದ ಮೇಲೆ ಬೆಳೆಗಾರರು ಅವಲಂಬಿತಾಗಿದ್ದಾರೆ ಎಂದು ವಿವರಿಸಿದರು.

ಸುಸ್ಥಿರ ಪ್ರವಾಸೋದ್ಯಮಕ್ಕೆ ಅವಕಾಶ: ಈ ಯೋಜನೆಯು ಕೊಡಗು ಜಿಲ್ಲೆಗೆ ಸುಸ್ಥಿರ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೇರಳ ಅವಕಾಶ ಒದಗಿಸುತ್ತದೆ. ಕೃಷಿ-ತೋಟಗಾರಿಕೆ ಪೂರೈಕೆ ಸರಪಳಿಗಳನ್ನು ಬಲಪಡಿಸುತ್ತದೆ ಮತ್ತು ಕೊಡಗನ್ನು ಮೈಸೂರು ಮತ್ತು ಬೆಂಗಳೂರಿನ ಬೆಳವಣಿಗೆಯ ಕಾರಿಡಾರ್ಗಳೊಂದಿಗೆ ಸಂಯೋಜಿಸುತ್ತದೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ.
ಈ ನಿಟ್ಟಿನಲ್ಲಿ ರೈಲ್ವೆ ಸಚಿವಾಲಯವು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ರೈಲ್ವೆ ಸಚಿವಾಲಯ ಹಾಗೂ ಅಧಿಕಾರಿಗಳ ಜೊತೆ ನಿರಂತರ ಫಾಲೋ ಅಪ್ ಮಾಡಿ ಎರಡೂ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಎಲ್ಲ ರೀತಿಯಲ್ಲೂ ಕ್ರಮ ಕೈಗೊಳ್ಳಲಾಗುವುದು. ನನ್ನ ಕ್ಷೇತ್ರದ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ.

ಈ ಎರಡೂ ಮನವಿಯನ್ನು ಸ್ವೀಕರಿಸಿರುವ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಕೂಡಲೇ ಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಯದುವೀರ್ ಮಾಹಿತಿ ನೀಡಿದ್ದಾರೆ.
ಚೆನ್ನೈ-ಬೆಂಗಳೂರು ಹೈಸ್ಪೀಡ್ ರೈಲಿಗೆ ಮೈಸೂರು ಸೇರಿಸಲು ಆಗ್ರಹ
ಇದೇ ವೇಳೆ ಕೇಂದ್ರ ಬಜೆಟ್ನಲ್ಲಿ ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು ಯೋಜನೆ ಘೋಷಿಸಲಾಗಿದೆ. ಆದರೆ ಮೈಸೂರು ಕೈ ಬಿಡಲಾಗಿದೆ. ರೈಲ್ವೆ ಸಚಿವರು ಕೂಡಲೇ ಮಧ್ಯ ಪ್ರವೇಶಿಸಿ ಈ ಯೋಜನೆಗೆ ಸಾಂಸ್ಕೃತಿಕ ನಗರಿಯನ್ನೂ ಸೇರಿಸಬೇಕು ಎಂದು ಸಂಸದರು ಮನವಿ ಮಾಡಿದರು.

ಮೈಸೂರು ಈಗ ಪ್ರಮುಖ ಪ್ರವಾಸಿ ತಾಣವಾಗಿದೆ. ಐಟಿ ಹಬ್ ಆಗುತ್ತಿದೆ. ರಾಜಧಾನಿ ಬೆಂಗಳೂರಿನೊಂದಿಗೆ ಸೂಕ್ತ ಸಂಪರ್ಕ ಜಾಲ ಹೊಂದಿದರೆ ಆರ್ಥಿಕ ಪ್ರಗತಿಯಾಗಲಿದೆ ಎಂದು ಸಚಿವರಿಗೆ ಮನವರಿಕೆ ಮಾಡಲಾಗಿದೆ ಎಂದು ಸಂಸದರು ವಿವರಿಸಿದರು.
ಬೆಂಗಳೂರನ್ನು ಮೆಟ್ರೊ ಪಾಲಿಟನ್ ವಲಯದಿಂದ ದಟ್ಟಣೆ ಕಡಿಮೆ ಮಾಡಲು ಇದರು ನೆರವಾಗಲಿದೆ ಮತ್ತು ಹಲವಾರು ದಿನಗಳ ಬೇಡಿಕೆಯನ್ನು ಈಡೇರಿಸಲು ಸಚಿವರು ಮಂದಾಗಬೇಕು.

ಈ ನಿಟ್ಟಿನಲ್ಲಿ ಚೆನ್ನೈ-ಬೆಂಗಳೂರು ಆರ್ಥಿಕ ಕಾರಿಡಾರ್ಗೆ ಮೈಸೂರು ಕೂಡ ಸೇರ್ಪಡೆ ಮಾಡಬೇಕೆಂದು ಮನವಿ ಮಾಡಿದ್ದೇನೆ ಎಂದು ಯದುವೀರ್ ಒಡೆಯರ್ ತಿಳಿಸಿದ್ದಾರೆ.
Mysore
ಅಧಿಕೃತ ಆ್ಯಪ್ ಸ್ಟೋರ್ಗಳಿಂದ ಮಾತ್ರ ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ: ಕ್ರೈಂ ಇನ್ಸ್ಪೆಕ್ಟರ್ ನಂದೀಶ್ ಕುಮಾರ್
ಮೈಸೂರು: ಕೃತಕ ಬುದ್ಧಿಮತ್ತೆ ಜೀವನವನ್ನು ಹೆಚ್ಚು ಚತುರ, ವೇಗವಾದ ಮತ್ತು ಹೆಚ್ಚು ಪರಿಣಾಮಕಾರಿಯಾಗಿಸುವ ಯುಗದಲ್ಲಿ ನಾವಿದ್ದೇವೆ. ಅದು ಮೋಸವನ್ನೂ ಹಿಂದಿನಿಗಿಂತ ಹೆಚ್ಚು ನಂಬಿಕೆ ಮೂಡಿಸುವಂತೆ ಮಾಡಬಹುದು ಎಂದು ಸೈಬರ್ ಕ್ರೈಂ ಇನ್ಸ್ಪೆಕ್ಟರ್ ನಂದೀಶ್ ಕುಮಾರ್ ಅವರು ಹೇಳಿದರು.
ಸುರಕ್ಷಿತ ಅಂತರ್ಜಾಲ ದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದ ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಭಾಂಗಣದಲ್ಲಿ ಇಂಟರ್ನೆಟ್ ದಿನ ಸ್ಮಾರ್ಟ್ ತಂತ್ರಜ್ಞಾನ, ಸುರಕ್ಷಿತ ಆಯ್ಕೆಗಳು, Al ಸುರಕ್ಷಿತ ಮತ್ತು ಜವಾಬ್ದಾರಿಯುತ ಬಳಕೆಯನ್ನು ಅನ್ವೇಷಿಸುವುದರ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದರು.
ಇನ್ಸ್ಟಾಗ್ರಾಮ್, ಫೇಸ್ ಬುಕ್ ಅಂತಹ ಸೋಶಿಯಲ್ ಮೀಡಿಯಾ ಫ್ಲಾಟರ್ಮ್ಸ್ನಲ್ಲಿ ಕೂಡ ಅತಿ ಹೆಚ್ಚು ಜನರು ಮೋಸ ಹೋಗುತ್ತಿದ್ದಾರೆ. ಆದ್ದರಿಂದ ಜನರಿಗೆ ವಿವಿಧ ಕಾರ್ಯಕ್ರಮಗಳ ಮೂಲಕ ಸೈಬರ್ ಕ್ರೈಂ ಬಗ್ಗೆ ಶಾಲಾ ಮಟ್ಟದಿಂದಲೂ ಸೋಷಿಯಲ್ ಮೀಡಿಯಾ ಎಐನ ಬಗ್ಗೆ ಮಾಹಿತಿಯನ್ನು ತಿಳಿಸಬೇಕು ಎಂದು ಅಭಿಪ್ರಾಯ ಪಟ್ಟರು.

ಸೋಶಿಲ್ ಮೀಡಿಯಾ ಫ್ಲಾಟರ್ಮ್ಸ್ನಲ್ಲಿ ಪರ್ಸನಲ್ ವಿಷಯಗಳನ್ನು ಹಂಚಿಕೊಳ್ಳಬಾರದು, ಎಐ ನಿಂದ ಇನ್ಸ್ಟಾಗ್ರಾಮ್ ನಲ್ಲಿ ಬರುವ ರೀಲ್ಸ್ ಗಳ ಮೂಲಕ ಲಿಂಕ್ ಗಳನ್ನು ಅತಿ ಹೆಚ್ಚು ಫಾರ್ ವರ್ಡ್ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಜಾಸ್ತಿ ಆಗುತ್ತಿದೆ ಎಂದು ಹೇಳಿದರು.
ಪ್ಲೇಯಸ್ಟೋರ್ ಮತ್ತು ಆಪಲ್ ಸ್ಟೋರ್ ಮೂಲಕ ಆಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಬೇರೆ ಇನ್ಯಾವುದೇ ಅಪ್ಲಿಕೇಶನ್ ಗಳಲ್ಲಿ ಅಪ್ ಡೌನ್ಲೋಡ್ ಮಾಡಬಾರದು ಎಂದು ತಿಳಿಸಿದರು.

ದೇಶದಲ್ಲಿ ಕಡಿಮೆ ಸೈಬರ್ ಕ್ರೈಂ ಅಪರಾಧದಲ್ಲಿ ತಮಿಳುನಾಡು 1 ಸ್ಥಾನದಲ್ಲಿದೆ. ಕರ್ನಾಟಕ 5 ನೇ ಸ್ಥಾನದಲ್ಲಿದೆ ಎಂದು ಹೇಳಿದರು.
ಮೈಸೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ 48 ಕೋಟಿ ವಂಚನೆಯಾಗಿದೆ, ಆದರಿಂದ ಯಾವುದೇ OTP ಅಥವಾ ರಹಸ್ಯ ಮಾಹಿತಿಯನ್ನು ಎಂದಿಗೂ ಹಂಚಿಕೊಳ್ಳಬಾರದು. ಆನ್ಲೈನ್ನಲ್ಲಿ ಅತಿಯಾದ ಹಂಚಿಕೆಯನ್ನು ತಪ್ಪಿಸುವುದು, ಆ್ಯಪ್ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಗೌಪ್ಯತಾ ಸೆಟ್ಟಿಂಗ್ಗಳನ್ನು ಬಳಸಬೇಕು ಎಂದು ಸೂಚನೆ ನೀಡಿದರು.

ಸಹಾಯಕ ಪ್ರಧ್ಯಾಪಕಿ ಶಿಲ್ಪಾ ಮಾತನಾಡಿ, ಇಂಟರ್ನೆಟ್ ಮತ್ತು ಅದರ ಸುರಕ್ಷಿತ ಮತ್ತು ಜವಾಬ್ದಾರಿಯುತ ಬಳಕೆಯ ಬಗ್ಗೆ ಬಳಕೆದಾರರನ್ನು ಜಾಗೃತಗೊಳಿಸಬೇಕು ಎಂದರು.
ಸೈಬರ್ ನೈರ್ಮಲ್ಯಕ್ಕಾಗಿ ಉತ್ತಮ ಅಭ್ಯಾಸಗಳನ್ನು ಉತ್ತೇಜಿಸಿ ಪ್ರಮುಖ ಸೈಬರ್ ಬೆದರಿಕೆಗಳು ಮತ್ತು ತಗ್ಗಿಸುವಿಕೆ ತಂತ್ರಗಳ ಬಗ್ಗೆ ಬಳಕೆದಾರರಿಗೆ ಶಿಕ್ಷಣ ನೀಡಬೇಕು ಎಂದು ತಿಳಿದರು.
ಪ್ರಮುಖ ಕೈಗಾರಿಕಾ ಸಂಶೋಧನಾ ಸಂಸ್ಥೆಯ ಅಧ್ಯಯನದ ಪ್ರಕಾರ, ಎಲ್ಲಾ ಸೈಬರ್ ದಾಳಿಗಳಲ್ಲಿ 90% ಮಾನವ ನಿರ್ಲಕ್ಷ್ಯದಿಂದಲೇ ಉಂಟಾಗುತ್ತವೆ ಎಂದರು.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಫೆಬ್ರವರಿ 10, 2026 ರಂದು ಐಎಸ್ಇಎ ಯೋಜನೆಯಡಿಯಲ್ಲಿ ಎನ್ಐಸಿ ಮತ್ತು ರಾಷ್ಟ್ರವ್ಯಾಪ್ತಿ ಇತರ ಸಂಸ್ಥೆಗಳ ಸಹಯೋಗದೊಂದಿಗೆ ರಾಷ್ಟ್ರವ್ಯಾಪಿ ಜಾಗೃತಿ ಅಭಿಯಾನವನ್ನು ಆಚರಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಡಳಿತ ಉಪಕಾರ್ಯದರ್ಶಿ ಸವಿತ ಬಿ. ಎಂ., ಅಭಿವೃದ್ಧಿ ಉಪಕಾರ್ಯದರ್ಶಿ ಭೀಮಪ್ಪ, ಮುಖ್ಯ ಯೋಜನಾ ಅಧಿಕಾರಿ ಕೆ.ಬಿ.ಪ್ರಭುಸ್ವಾಮಿ, ಮುಖ್ಯ ಲೆಕ್ಕಾಧಿಕಾರಿ ಸಿದ್ದಗಂಗಮ್ಮ, ಸೈಬರ್ ಕ್ರೈಂ ಇನ್ಸ್ಪೆಕ್ಟರ್ ಮಹೇಶ್, ಕುಮಾರ್, ತಾಲೂಕು ಮಟ್ಟದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
-
Mysore9 hours agoರಾಜ್ಯದಲ್ಲಿ ಯತೀಂದ್ರ ಸೇಲ್ಸ್ ಟ್ಯಾಕ್ಸ್ ಕಡ್ಡಾಯ: ಪ್ರತಾಪ್ ಸಿಂಹ ಆರೋಪ
-
Mandya3 hours agoಕಾಯಕ ಶರಣರ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು :ಡಾ. ಬಿ.ವಿ. ನಂದೀಶ್
-
Hassan1 hour agoಕ್ಷುಲ್ಲಕ ಕಾರಣಕ್ಕೆ ಕೆಎಸ್ಆರ್ಟಿಸಿ ಬಸ್ ಚಾಲಕನ ಮೇಲೆ ಹಲ್ಲೆ
-
Mysore3 hours agoಕಳ್ಳತನ ಮಾಡಿದ್ದ ಕಾರು ವಶ: ಆರೋಪಿ ಬಂಧನ
-
National3 hours agoಪಿಎಂ ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ ಹೊತ್ತೊಯ್ದಿರುವುದು ಪ್ರಚೋದನಕಾರಿ ನೀತಿ: ಪ್ರಹ್ಲಾದ್ ಜೋಶಿ
-
Kodagu4 hours ago104 ಮೊಬೈಲ್ಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಹಿಂದಿರುಗಿಸಲಾಗಿದೆ: ಎಸ್ಪಿ ಬಿಂದುಮಣಿ
-
Chikmagalur2 hours agoಮುಳ್ಳಯ್ಯನಗಿರಿ ದೇವಸ್ಥಾನದ ಕಾಮಗಾರಿ: ಸೀತಾಳಯ್ಯನ ಗಿರಿಯಿಂದ ಮುಳ್ಳಯ್ಯನಗಿರಿಗೆ ತೆರಳುವ ಮಾರ್ಗದಲ್ಲಿ ತಾತ್ಕಾಲಿಕ ನಿರ್ಬಂಧ
-
Kodagu2 hours agoಸಮ ಸಮಾಜ ನಿರ್ಮಾಣದಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಬಿ.ಬಿ.ಹೇಮಲತಾ
