National - International
ಜಾಗರೂಕರಾಗಿರಿ! – ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ಕೆನಡಾ ಎಚ್ಚರಿಕೆ

ಒಟ್ಟಾವಾ: ಕೆನಡಾದ (Canada) ಸರ್ಕಾರ ಭಾರತದಲ್ಲಿರುವ (India) ತನ್ನ ನಾಗರಿಕರಿಗೆ ಜಾಗರೂಕರಾಗಿರುವಂತೆ ಸಲಹೆಯನ್ನು ನೀಡಿದೆ.
ಕೆನಡಾ ಸರ್ಕಾರ ತನ್ನ ಪ್ರಯಾಣಿಕರಿಗೆ ನೀಡಿದ ಸಲಹೆಯಲ್ಲಿ, ಕೆನಡಾ ಮತ್ತು ಭಾರತದಲ್ಲಿನ ಇತ್ತೀಚಿನ ಬೆಳವಣಿಗೆಗಳ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನೆಗಳಿಗೆ ಕರೆಗಳು ಹಾಗೂ ಕೆನಡಾದ ಬಗ್ಗೆ ಕೆಲವು ನಕಾರಾತ್ಮಕ ಭಾವನೆಗಳು ಹುಟ್ಟಿಕೊಂಡಿವೆ. ಈ ಹಿನ್ನೆಲೆ ದಯವಿಟ್ಟು ಜಾಗರೂಕರಾಗಿರಿ ಮತ್ತು ಎಚ್ಚರಿಕೆಯಿಂದಿರಿ ಎಂದು ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ.
ಕಳೆದ ವಾರ ಭಾರತ ಕೆನಡಾದಲ್ಲಿ ವಾಸವಿರುವ ತನ್ನ ಪ್ರಜೆಗಳು ಮತ್ತು ವಿದ್ಯಾರ್ಥಿಗಳಿಗೆ ಇದೇ ರೀತಿಯ ಸಲಹೆಯನ್ನು ನೀಡಿತು. ಕಳೆದ ಬುಧವಾರ ಭಾರತೀಯ ಪ್ರಜೆಗಳು, ಕೆನಡಾದಲ್ಲಿರುವ ವಿದ್ಯಾರ್ಥಿಗಳು ಮತ್ತು ದೇಶಕ್ಕೆ ಪ್ರಯಾಣಿಸಲು ಯೋಜಿಸುತ್ತಿರುವವರು ಎಚ್ಚರಿಕೆ ವಹಿಸುವಂತೆ ಸೂಚಿಸಿತ್ತು. ಭಾರತೀಯ ಪ್ರಜೆಗಳು ಮತ್ತು ಕೆನಡಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಕೆನಡಾದಲ್ಲಿ ಹೆಚ್ಚುತ್ತಿರುವ ಭಾರತ ವಿರೋಧಿ ಚಟುವಟಿಕೆಗಳನ್ನು ಕಂಡಿರುವ ಪ್ರದೇಶಗಳು ಮತ್ತು ಸಂಭಾವ್ಯ ಸ್ಥಳಗಳಿಗೆ ಪ್ರಯಾಣಿಸದಂತೆ ಸೂಚಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
National - International
ಆರ್ಸಿಬಿಯನ್ನು ಮಾರಾಟ ಮಾಡುತ್ತಿಲ್ಲ: ಯುನೈಟೆಡ್ ಸ್ಪಿರಿಟ್ಸ್ ಅಧಿಕೃತ ಘೋಷಣೆ

ಮುಂಬೈ: ಡಿಯಾಜಿಯೋ, ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡವನ್ನು ಮಾರಾಟ ಮಾಡುತ್ತಿಲ್ಲ ಎಂದು ಮಾಲೀಕತ್ವ ಹೊಂದಿರುವ ಯುನೈಟೆಡ್ ಸ್ಪಿರಿಟ್ಸ್ ಅಧಿಕೃತವಾಗಿ ಘೋಷಿಸಿದೆ.
ಇತ್ತೀಚೆಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ಪ್ರಕರಣದ ಹಿನ್ನೆಲೆ ಆರ್ಸಿಬಿ ಷೇರನ್ನು ಡಿಯಾಜಿಯೊ ಮಾರಾಟ ಮಾಡಲಿದೆ ಎಂದು ವದಂತಿ ಸುದ್ದಿ ಹರಡಿತ್ತು. ಇದರ ಬೆನ್ನಲ್ಲೇ ಇಂದು ಬಾಂಬೆ ಸ್ಟಾಕ್ ಎಕ್ಸ್ಚೆಂಜ್ ಈ ಮೂಲಕ ಇದರ ಬಗ್ಗೆ ಸ್ಪಷ್ಟನೆ ಕೇಳಿತ್ತು.
ಈ ಪ್ರಶ್ನೆಗೆ ಉತ್ತರಿಸಿದ ಯುನೈಟೆಡ್ ಸ್ಪಿರಿಟ್ಸ್ ಆರ್ಸಿಬಿಯ ಸಂಭಾವ್ಯ ಪಾಲು ಮಾರಾಟಕ್ಕೆ ಸಂಬಂಧಿಸಿದಂತೆ ಮಾಧ್ಯಮ ವರದಿಗಳು ಊಹಾತ್ಮಕವಾಗಿವೆ. ಅಂತಹ ಯಾವುದೇ ತೀರ್ಮಾನಗಳನ್ನು ಮಾಡಿಲ್ಲ ಸ್ಪಷ್ಟನೆ ನೀಡಿದೆ.
ಆರ್ಸಿಬಿ ತಂಡ ಡಿಯಾಜಿಯೊ ತೆಕ್ಕೆಗೆ ಹೋಗಿದ್ದು ಹೇಗೆ?
ಐಪಿಎಲ್ ಪ್ರಾರಂಭಗೊಳ್ಳುವ ವೇಳೆ ವಿಜಯ್ ಮಲ್ಯ ಅವರು ಆರ್ಸಿಬಿ ತಂಡವನ್ನು ಖರೀದಿಸಿದ್ದರು. 2012ರಲ್ಲಿ ಕಿಂಗ್ಫಿಶರ್ ಏರ್ಲೈನ್ಸ್ ಕಾರ್ಯಾಚರಣೆ ಸ್ಥಗಿತಗೊಳಿಸಿತು. ಉದ್ಯಮದಲ್ಲಿ ನಷ್ಟವಾದ ಕಾರಣ ಮಲ್ಯ ಅವರ ಯುನೈಟೆಡ್ ಸ್ಪಿರಿಟ್ಸ್ ಕಂಪನಿಯನ್ನು ಡಿಯಾಜಿಯೊ ಸ್ವಾಧೀನಪಡಿಸಿಕೊಂಡಿತು. ಆರ್ಸಿಬಿಯಲ್ಲಿ ಯುನೈಟೆಡ್ ಸ್ಪಿರಿಟ್ಸ್ ಷೇರುಗಳಿಂದರಿಂದ ಕಾರಣ ಅದರ ಮಾಲೀಕತ್ವ ಈಗ ಡಿಯಾಜಿಯೊಗೆ ಹೋಗಿದೆ.
National - International
ಜಾತಿಗಣತಿ ವರದಿಗೆ ತಾತ್ವಿಕ ಒಪ್ಪಿಗೆ| ಸಮೀಕ್ಷೆ ಮರುಗಣತಿಗೆ ನಿರ್ಧಾರ: ಸಿ.ಎಂ ಸಿದ್ದರಾಮಯ್ಯ

ನವದೆಹಲಿ: ಜಾತಿಗಣತಿ ವರದಿ ಬಗ್ಗೆ ಅಪಸ್ವರ ಎದ್ದಿರುವ ಹಿನ್ನಲೆಯಲ್ಲಿ, ಈಗಾಗಲೇ ಸಲ್ಲಿಕೆಯಾಗಿರುವ ಜಾತಿಗಣತಿ ವರದಿಗೆ ತಾತ್ವಿಕ ಒಪ್ಪಿಗೆ ನೀಡಿ, ಸಮೀಕ್ಷೆಗೆ ಮರುಗಣತಿ ನಡೆಸಲು ನಿರ್ಧಾರ ಕೈಗೊಂಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನವದೆಹಲಿಯ ಕರ್ನಾಟಕ ಭವನದಲ್ಲಿ ಅವರು ಇಂದು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಇಂದು ಕರ್ನಾಟದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಲಾಗಿದೆ. ವಿವಿಧ ಜಾತಿಗಳ ಸಂಘಸಂಸ್ಥೆಗಳು, ಮಠಾಧೀಶರು, ಸಮುದಾಯದಗಳ ಮುಖಂಡರು, ಸಚಿವರು ಜಾತಿಗಣತಿ ವರದಿ ಬಗ್ಗೆ ಅಪಸ್ವರ ಎತ್ತಿರುವ ಬಗ್ಗೆ ಚರ್ಚಿಸಲಾಗಿ, ಜಾತಿಗಣತಿ ವರದಿಯನ್ನು ತಾತ್ವಿಕವಾಗಿ ಒಪ್ಪಿಕೊಳ್ಳುವುದು ಹಾಗೂ ಜಾತಿ ಗಣತಿಯ ದತ್ತಾಂಶ ಹತ್ತು ವರ್ಷ ಹಳೆಯದಾಗಿರುವುದರಿಂದ ಮರುಗಣತಿ ಮಾಡಲು ತೀರ್ಮಾನಿಸಲಾಗಿದೆ. ಈಗಾಗಲೇ ಪರಿಶಿಷ್ಟ ಜಾತಿಗಳ ಜನಗಣತಿ ನಡೆದಂತೆ, ಇತರೆ ಜಾತಿಗಳ ಗಣತಿಯನ್ನು ಹೊಸದಾಗಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಸಮೀಕ್ಷಾ ಕಾರ್ಯವನ್ನು 90 ದಿನದೊಳಗೆ ಪೂರ್ಣಗೊಳಿಸಿ ವರದಿ ನೀಡಬೇಕಾಗುವುದು ಎಂದು ತಿಳಿಸಿದರು.
ಕಾಲ್ತುಳಿತ ಪ್ರಕರಣ: ಸರ್ಕಾರದ ಕ್ರಮಗಳ ಬಗ್ಗೆ ವರಿಷ್ಠರಿಗೆ ವಿವರಣೆ
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಾಲ್ತುಳಿತ ಪ್ರಕರಣದ ಬಗ್ಗೆ ಚರ್ಚಿಸಿ, ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ವರಿಷ್ಠರಿಗೆ ವಿವರಿಸಲಾಗಿದೆ. ಪ್ರಕರಣದ ತನಿಖೆಗೆ ಜಿಲ್ಲಾಧಿಕಾರಿಗಳ ನೇತೃತ್ವದ ಮ್ಯಾಜಿಸ್ಟ್ರಿಯಲ್ ತನಿಖೆ, ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಏಕಸದಸ್ಯ ಆಯೋಗ ರಚನೆ , ಐದು ಪೊಲೀಸ್ ಅಧಿಕಾರಿಗಳ ಅಮಾನತ್ತು , ಗುಪ್ತಚರ ಇಲಾಖೆಯ ಮುಖ್ಯಸ್ಥರ ಬದಲಾವಣೆ , ರಾಜಕೀಯ ಕಾರ್ಯದರ್ಶಿಗಳ ಬದಲಾವಣೆಯಂತಹ ಸರ್ಕಾರದ ಕ್ರಮಗಳು ಸಮರ್ಪಕವಾಗಿರುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏಕಸದಸ್ಯ ಆಯೋಗದ ತನಿಖಾ ವರದಿಯನ್ನು ಆಧರಿಸಿ, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಸಚಿವ ಸಂಪುಟ ಪುನರ್ ಬಗ್ಗೆ ಚರ್ಚೆಯಾಗಿಲ್ಲ
ಇದೇ ತಿಂಗಳ 13 ರಂದು 16 ನೇ ಹಣಕಾಸಿನ ಆಯೋಗದ ಅಧ್ಯಕ್ಷರನ್ನು ಭೇಟಿಯಾಗಲು ನವದೆಹಲಿಗೆ ಆಗಮಿಸಲಿದ್ದೇನೆ. ಸಚಿವ ಸಂಪುಟ ಪುನರ್ರಚನೆಯ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದರು.
ಕುಂಭಮೇಳದ ಕಾಲ್ತುಳಿತ ಘಟನೆ- ಅಲ್ಲಿನ ಸಿಎಂ ಜವಾಬ್ದಾರರಲ್ಲವೇ?
ಕೇಂದ್ರದ ಸಂಸತ್ ನಲ್ಲಿ ಬೆಂಗಳೂರಿನ ಕಾಲ್ತುಳಿತದ ಘಟನೆ ಚರ್ಚೆಗೆ ಬರುವ ಸಾಧ್ಯತೆಯಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕೇಂದ್ರ ಸರ್ಕಾರ ಮೊದಲು ಕುಂಭಮೇಳದಲ್ಲಿ ನಡೆದ ಕಾಲ್ತುಳಿತ , ಪ್ರಧಾನಿಯವರು ಉದ್ಘಾಟಿಸಿದ ಸೇತುವೆ ಕುಸಿದು ಜನ ಮೃತಪಟ್ಟ ಘಟನೆಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯಲಿ. ಬೆಂಗಳೂರಿನಲ್ಲಿ ನಡೆದ ಘಟನೆ ನಡೆದಿರುವುದುಕ್ಕೆ ಸರ್ಕಾರಕ್ಕೆ ದು:ಖದ ಸಂಗತಿಯಾಗಿದೆ. ಯುವಜನರ ಸಾವು ಎಲ್ಲರಿಗೂ ನೋವು ತರುವ ವಿಚಾರ. ಕುಂಭಮೇಳದ ಘಟನೆಯಲ್ಲಿ ಜನರ ಸಾವು ಪ್ರಕರಣದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಜವಾಬ್ದಾರಿಯಲ್ಲವೇ ಎಂದು ಪ್ರಶ್ನಿಸಿದರು.
ಇಡಿ ತನಿಖಾ ಸಂಸ್ಥೆ 100ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕಾನೂನು ಕ್ರಮ ತೆಗೆದುಕೊಂಡಿರುವುದಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದರು.
National - International
ಜಾತಿಗಣತಿ ವಿಚಾರವಾಗಿ ಎದ್ದಿರುವ ಅಪಸ್ವರ, ಗೊಂದಲ ಬಗೆಹರಿಸಲು ಮತ್ತೊಮ್ಮೆ ಅವಕಾಶ: ಡಿಸಿಎಂ ಡಿ.ಕೆ. ಶಿವಕುಮಾರ್

ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಖ್ಯಮಂತ್ರಿಗಳಿಂದ ದಿನಾಂಕ ಘೋಷಣೆ
ನವದೆಹಲಿ: “ಜಾತಿ ಗಣತಿ ವಿಚಾರವಾಗಿ ಎದ್ದಿರುವ ಅಪಸ್ವರ, ಸಮುದಾಯಗಳ ಅಂಕಿಅಂಶಗಳ ಬಗ್ಗೆ ಇರುವ ಗೊಂದಲ ನಿವಾರಣೆಗೆ ತೀರ್ಮಾನಿಸಲಾಗಿದೆ. ಮನೆ ಮನೆ ಸಮೀಕ್ಷೆ ಹಾಗೂ ಆನ್ಲೈನ್ ಮೂಲಕ ಎಲ್ಲರೂ ತಮ್ಮ ಮಾಹಿತಿಯನ್ನು ಮತ್ತೊಮ್ಮೆ ಸಲ್ಲಿಸಲು ಅವಕಾಶ ನೀಡಲಾಗುವುದು. ಈ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ನವದೆಹಲಿಯಲ್ಲಿ ಎಐಸಿಸಿ ನಾಯಕರ ಸಭೆ ಬಳಿಕ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಅವರು ಮಾಧ್ಯಮಗಳ ಜತೆ ಮಂಗಳವಾರ ಮಾತನಾಡಿದರು.
“ಮಂಗಳವಾರದಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೆವಾಲ ಅವರು ನನ್ನನ್ನು ಹಾಗೂ ಮುಖ್ಯಮಂತ್ರಿಗಳನ್ನು ಕರೆಸಿ ಪಕ್ಷ ಸಂಘಟನೆ ವಿಚಾರವಾಗಿ, ರಾಜ್ಯ ರಾಜಕಾರಣ ಹಾಗೂ ಇತ್ತೀಚಿನ ಕಾಲ್ತುಳಿತ ಪ್ರಕರಣದ ಬಗ್ಗೆ ಚರ್ಚೆ ಮಾಡಲಾಯಿತು” ಎಂದು ಹೇಳಿದರು.
“ಜಾತಿ ಗಣತಿ ವಿಚಾರವಾಗಿ ಇದೇ ತಿಂಗಳ 12ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಮಾಡಲು ನಿರ್ಧರಿಸಿದ್ದೆವು. ಈ ವಿಚಾರವಾಗಿ ಸಂಸದರು, ಶಾಸಕರು, ಸಂಘ ಸಂಸ್ಥೆಗಳು ನಮ್ಮ ವರಿಷ್ಠರ ಜತೆ ಚರ್ಚೆ ಮಾಡಿದ್ದಾರೆ. ಕೆಲವು ಸಂಘಟನೆ ಹಾಗೂ ಸಮಾಜಗಳಿಂದ ಈ ಜಾತಿ ಗಣತಿಗೆ ಅಪಸ್ವರ ಬಂದಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ನ್ಯಾಯಬದ್ಧವಾಗಿ ಅವಕಾಶ ಕಲ್ಪಿಸಿಕೊಡಬೇಕು ಎಂದು ವರಿಷ್ಠರು ನಮಗೆ ಮಾರ್ಗದರ್ಶನ ನೀಡಿದ್ದಾರೆ. ಈ ಜಾತಿ ಗಣತಿಯಲ್ಲಿ ಯಾರನ್ನೂ ಬಿಡಬಾರದು, ಎಲ್ಲರನ್ನು ಒಳಗೊಳ್ಳಬೇಕು ಎಂದು ತೀರ್ಮಾನಿಸಲಾಗಿದೆ. ಯಾರ ಅಪಸ್ವರವೂ ಇಲ್ಲದಂತೆ ನೋಡಿಕೊಳ್ಳಲು ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡಿದ್ದಾರೆ” ಎಂದು ಮಾಹಿತಿ ನೀಡಿದರು.
“ಸಾಮಾಜಿಕ ನ್ಯಾಯದ ಬಗ್ಗೆ ಸರ್ಕಾರದ ಬದ್ಧತೆ ಇದೆ. ಜಾತಿ ಗಣತಿಯಲ್ಲಿ ಅಂಕಿ ಅಂಶಗಳ ಬಗ್ಗೆ ಅನೇಕ ಸಮಾಜಗಳು ಅಪಸ್ವರ ಎತ್ತಿದ್ದು, ಈ ಬಗ್ಗೆ ಎಲ್ಲರಿಗೂ ಸ್ಪಷ್ಟನೆ ನೀಡಲು ಅವಕಾಶ ಮಾಡಿಕೊಡಬೇಕು ಎಂದು ತೀರ್ಮಾನಿಸಲಾಗಿದೆ. ಸಾರ್ವಜನಿಕರು ನ್ಯಾಯಬದ್ಧವಾಗಿ ಯಾವ ಸಮಾಜಕ್ಕೆ ಸೇರಿದ್ದೀರಿ ಎಂಬುದನ್ನು ವ್ಯಕ್ತಪಡಿಸಿಕೊಳ್ಳಬೇಕು. ಈ ಅವಕಾಶವನ್ನು ಎಲ್ಲರೂ ಬಳಸಿಕೊಳ್ಳಬೇಕು. ಸಮಾಜದ ಮುಖಂಡರು ಹಾಗೂ ಮಠಾಧೀಶರು ಇದಕ್ಕೆ ಸಹಕರಿಸಬೇಕು” ಎಂದು ಮನವಿ ಮಾಡಿದರು.
“ಕಳೆದ ಎರಡು ತಿಂಗಳಿನಿಂದ ಒಳಮೀಸಲಾತಿ ವಿಚಾರವಾಗಿ ಪರಿಶಿಷ್ಟ ಜಾತಿ ಅವರ ಜನಗಣತಿ ಮಾಡುತ್ತಿದ್ದೇವೆ. ಹೀಗಾಗಿ ಈ ಪ್ರಕ್ರಿಯೆ ಸುದೀರ್ಘವಾಗಿ ನಡೆಯುವುದರಿಂದ ಇದನ್ನು ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ನಾವು ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಎಲ್ಲರಿಗೂ ನ್ಯಾಯ ಒದಗಿಸಿಕೊಡಲಾಗುವುದು. ಇದರಲ್ಲಿ ಯಾವುದೇ ಆತಂಕ ಬೇಡ. ನಮ್ಮ ಈ ಪ್ರಯತ್ನದ ಮೂಲಕ ಜಾತಿಗಣತಿ ವಿಚಾರವಾಗಿ ಇರುವ ಅಪಸ್ವರವನ್ನು ಸರಿಪಡಿಸಲಾಗುವುದು. ನಮ್ಮ ರಾಜ್ಯದವರು ಎಲ್ಲೇ ಇದ್ದರೂ ಈ ಬಗ್ಗೆ ಆನ್ಲೈನ್ ಮೂಲಕ ಮಾಹಿತಿ ನೀಡಲು ಅವಕಾಶ ಕಲ್ಪಿಸಲಾಗುವುದು” ಎಂದು ತಿಳಿಸಿದರು.
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚೆಯಾಯಿತೇ ಎಂದು ಕೇಳಿದಾಗ, “ಈ ವಿಚಾರವಾಗಿ ಚರ್ಚೆ ಮಾಡಲಾಯಿತು. ಈ ದುರ್ಘಟನೆಯನ್ನು ನಮ್ಮ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ಬಗ್ಗೆ ವರಿಷ್ಠರಿಗೆ ಸಂಪೂರ್ಣ ಮಾಹಿತಿ ನೀಡಿ ಸತ್ಯಾಸತ್ಯತೆಯನ್ನು ವಿವರಿಸಿದ್ದೇವೆ” ಎಂದು ತಿಳಿಸಿದರು.
ಸಚಿವ ಸಂಪುಟ ಪುನಾರಚನೆ ಬಗ್ಗೆ ಚರ್ಚೆಯಾಯಿತೇ ಎಂದು ಕೇಳಿದಾಗ, “ಈ ವಿಚಾರವಾಗಿ ಯಾವುದೇ ಚರ್ಚೆ ಆಗಿಲ್ಲ” ಎಂದು ತಿಳಿಸಿದರು.
ವಿಧಾನ ಪರಿಷತ್ ಸ್ಥಾನಕ್ಕೆ ನಾಮನಿರ್ದೇಶನದ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಹೈಕಮಾಂಡ್ ಪರಿಶೀಲಿಸಿ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಲಿದೆ” ಎಂದು ತಿಳಿಸಿದರು.
-
Mandya23 hours ago
ನೇಣು ಬಿಗಿದ ಸ್ಥಿತಿಯಲ್ಲಿ ಪುರುಷ ಹಾಗೂ ಮಹಿಳೆಯ ಕೊಳೆತ ಶ*ವಗಳು ಪತ್ತೆ
-
State19 hours ago
ಹಾಸನ ಏರ್ಪೋರ್ಟ್ 2026ಕ್ಕೆ ಪೂರ್ಣ: ಚಿಕ್ಕಮಗಳೂರು-ಮಡಿಕೇರಿಯಲ್ಲಿ ಹೆಲಿಪೋರ್ಟ್ ನಿರ್ಮಾಣಕ್ಕೆ ವರದಿ ಸಿದ್ಧ
-
Mandya24 hours ago
ಜೂ. 26ಕ್ಕೆ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಜಾಗೃತಿ ಕಾರ್ಯಕ್ರಮ: ಡಾ. ಕುಮಾರ
-
Kodagu23 hours ago
ಗೃಹಲಕ್ಷ್ಮಿ ಯೋಜನೆ ಇ-ಕೆವೈಸಿ ಫೆಲ್ಯೂರ್: ಹತ್ತಿರದ ಸಿಡಿಪಿಓ ಕಚೇರಿ ತೆರಳಿ Status ಪರಿಶೀಲನೆ ಮಾಡಿಸಿ
-
Hassan23 hours ago
ಬೆಳೆ ವಿಮೆ ಪ್ರಚಾರದ ವಾಹನಗಳಿಗೆ ಡಿಸಿ ಸಿ. ಸತ್ಯಭಾಮ ಚಾಲನೆ
-
Hassan20 hours ago
ಕಾಣೆಯಾಗಿದ್ದ ಮಹಿಳೆ ಶವವಾಗಿ ಪತ್ತೆ
-
Mandya24 hours ago
ಗೌರವ ಡಾಕ್ಟರೇಟ್ ಸ್ವೀಕರಿಸಲು ಪ್ರೊ.ಜಯಪ್ರಕಾಶ್ ಗೌಡ ಅವರಿಗೆ ಅಧಿಕೃತ ಆಹ್ವಾನ
-
State20 hours ago
16ನೇ ಹಣಕಾಸಿನ ಆಯೋಗಕ್ಕೆ ಹೆಚ್ಚುವರಿ ಜ್ಞಾಪನಾ ಪತ್ರ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ