State
ಶಿಗ್ಗಾಂವಿ ಕ್ಷೇತ್ರದಲ್ಲಿ ಬಂಡಾಯ ಶಮನ; ಅ. 30 ರಂದು ನಾಮಪತ್ರ ಹಿಂಪಡೆಯಲಿರುವ ಖಾದ್ರಿ: ಡಿಸಿಎಂ
ಬೆಂಗಳೂರು: ಶಿಗ್ಗಾಂವಿ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಯ್ಯದ್ ಅಜ್ಜಂಪೀರ್ ಖಾದ್ರಿ ಅವರು ಅ.30 ಬುಧವಾರದಂದು ನಾಮಪತ್ರವನ್ನು ಹಿಂಪಡೆಯಲಿದ್ದಾರೆ. ಅವರ ಅರ್ಹತೆಗೆ ತಕ್ಕಂತೆ ಪಕ್ಷವು ಅಧಿಕಾರ ನೀಡುತ್ತದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಸದಾಶಿವನಗರದ ತಮ್ಮ ನಿವಾಸಕ್ಕೆ ಆಗಮಿಸಿದ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರ ಉಪಚುನಾವಣೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ ಅವರ ಜತೆ ಮಾತುಕತೆ ನಡೆಸಿದ ನಂತರ ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ಉದ್ದೇಶಿಸಿ ಶನಿವಾರ ಮಾತನಾಡಿದರು.
“ಖಾದ್ರಿ ಅವರು ನಮ್ಮ ಜೊತೆಯಲ್ಲಿದ್ದಾರೆ. ಅವರ ದುಃಖ ದುಮ್ಮಾನಗಳನ್ನು ನಮ್ಮ ಬಳಿ ಚರ್ಚೆ ಮಾಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಇರುವ ಕಾರಣಕ್ಕೆ ಅವರಿಗೆ ನೀಡಿರುವ ಭರವಸೆಗಳನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಖಾದ್ರಿ ಅವರ ಬಳಿ ಗೌಪ್ಯವಾಗಿ ಮಾತನಾಡಿದ್ದೇನೆ” ಎಂದು ಹೇಳಿದರು.
“ಖಾದ್ರಿ ಅವರಿಗೆ ಕಳೆದ ಚುನಾವಣೆಯಲ್ಲಿಯೇ ಟಿಕೆಟ್ ನೀಡಬೇಕಾಗಿತ್ತು, ಕಾರಣಾಂತರಗಳಿಂದ ಯಾಸಿರ್ ಪಠಾಣ್ ಅವರಿಗೆ ನೀಡಲಾಗಿತ್ತು. ಇವರ ತ್ಯಾಗವನ್ನು ಪಕ್ಷ ಮರೆಯುವುದಿಲ್ಲ. ಅವರಿಗೆ ಉತ್ತಮ ಸ್ಥಾನವನ್ನು ನೀಡುವುದಾಗಿ ಹಿಂದೆಯೂ ಹೇಳಿದ್ದೆವು, ಈಗಲೂ ಹಾಗೂ ಮುಂದಕ್ಕೂ ಹೇಳುತ್ತೇವೆ” ಎಂದರು.
ಖಾದ್ರಿ ಪ್ರಾಮಾಣಿಕ ವ್ಯಕ್ತಿ
“ಅತ್ಯಂತ ಪ್ರಾಮಾಣಿಕ ವ್ಯಕ್ತಿಯಾದ ಖಾದ್ರಿ ಅವರು ಜಾತ್ಯಾತೀತ ತತ್ವಗಳಿಗೆ ಹಾಗೂ ಕಾಂಗ್ರೆಸ್ ಪಕ್ಷದ ನಿಲುವಿಗೆ ಬದ್ಧರಾಗಿದ್ದಾರೆ. ಸಚಿವರಾದ ಜಮೀರ್ ಅವರು, ಎಂಎಲ್ ಸಿ ನಜೀರ್ ಅಹ್ಮದ್ ಅವರು, ಬಿಡಿಎ ಅಧ್ಯಕ್ಷರಾದ ಹ್ಯಾರಿಸ್ ಅವರು ಹಾಗೂ ಇಸ್ಮಾಯಿಲ್ ತಮಟಗಾರ ಅವರೆಲ್ಲಾ ಸೇರಿ ಖಾದ್ರಿ ಅವರ ಮನವೊಲಿಸಿದ್ದಾರೆ. ಶನಿವಾರ (ಇಂದು) ಬೆಳಿಗ್ಗೆ ಮುಖ್ಯಮಂತ್ರಿಗಳ ಬಳಿಯೂ ಟಿಕೆಟ್ ಹಿಂಪಡೆಯುವ ವಿಚಾರವಾಗಿ ಚರ್ಚೆ ನಡೆಸಿದ್ದರು” ಎಂದು ಹೇಳಿದರು.
ಪಕ್ಷದ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ
“ಭಾನುವಾರ (ನಾಳೆ) ಶಿಗ್ಗಾಂವಿ ಕ್ಷೇತ್ರದ ಮುಖಂಡರ ಬಳಿ ಚರ್ಚೆ ಮಾಡಲಾಗುವುದು. ಎಲ್ಲರೂ ಪಕ್ಷದ ಗೆಲುವಿಗೆ ಒಗ್ಗಟ್ಟಾಗಿ ಕೆಲಸ ಮಾಡಲಿದ್ದಾರೆ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತಾರೆ. ಖಾದ್ರಿ ಅವರ ತ್ಯಾಗವನ್ನು ಕಾಂಗ್ರೆಸ್ ಪಕ್ಷ ಮರೆಯುವುದಿಲ್ಲ, ಗುರುತಿಸುತ್ತದೆ” ಎಂದು ಪುನರುಚ್ಚರಿಸಿದರು.
“ಖಾದ್ರಿ ಅವರು ಜನತಾದಳದಿಂದ ಒಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಹಿಂದೆ ಸೋನಿಯಾ ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು” ಎಂದರು
ಕಾರ್ಯಕರ್ತರ ಜೊತೆ ಮಾತುಕತೆ
ಖಾದ್ರಿ ಅವರು ಸಂದಾನಕ್ಕೆ ಈ ಹಿಂದೆ ಒಪ್ಪಿರಲಿಲ್ಲ ಎಂದು ಕೇಳಿದಾಗ, ” ಕ್ಷೇತ್ರದ ಎಲ್ಲಾ ಕಾರ್ಯಕರ್ತರ ಅಭಿಪ್ರಾಯ ತೆಗೆದುಕೊಳ್ಳಬೇಕಲ್ಲವೇ? ಈಗ ಯಾವುದೇ ಬಂಡಾಯವಿಲ್ಲ. ಅವರ ಅಭಿಮಾನಿಗಳ ಜೊತೆ ಮಾತನಾಡಬೇಕಿದೆ. ಅವರನ್ನೆಲ್ಲಾ ಬೆಂಗಳೂರಿಗೆ ಕರೆಸಿ ಮಾತನಾಡಲಾಗುವುದು. ಮೂರು ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಸಲಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಒಮ್ಮತದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ.” ಎಂದರು.
ಖಾದ್ರಿ ಅವರಿಗೆ ಯಾವ ಭರವಸೆಗಳನ್ನು ನೀಡಲಾಗಿದೆ ಎಂದು ಕೇಳಿದಾಗ, “ಖಾದ್ರಿ ಅವರು ಕ್ಷೇತ್ರದ ಮತದಾರರು. ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ, ಅವರ ಸಮ್ಮುಖದಲ್ಲಿ ಬಹಿರಂಗಗೊಳಿಸಲು ಆಗುವುದಿಲ್ಲ. ಅವರ ಗೌರವಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಸ್ಥಾನಮಾನ ನೀಡಲಾಗುವುದು” ಎಂದರು.
ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ
ನಂತರ ಮಾತನಾಡಿದ ಮಾಜಿ ಶಾಸಕ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸೈಯದ್ ಅಜ್ಜಂಪಿರ್ ಖಾದ್ರಿ ಅವರು, “ಈ ಬಾರಿ ಟಿಕೆಟ್ ನೀಡಿದರೆ ನಾನೇ ಗೆಲ್ಲುತ್ತೇನೆ, ಟಿಕೆಟ್ ನೀಡಿ ಎಂದು ಉಭಯ ನಾಯಕರ ಬಳಿಯೂ ನಾನು ಮತ್ತೊಮ್ಮೆ ಮನವಿ ಮಾಡಿದೆ. ಇದು ನಮ್ಮ ತೀರ್ಮಾನವಲ್ಲ, ಹೈಕಮಾಂಡ್ ತೀರ್ಮಾನ ಎಂದು ಹೇಳಿದರು. ನಾನು ಪಕ್ಷದ ತೀರ್ಮಾನವನ್ನು ಕ್ಷೇತ್ರದ ಕಾರ್ಯಕರ್ತರ ಬಳಿಗೆ ತೆಗೆದುಕೊಂಡು ಹೋಗುತ್ತೇನೆ. ಅವರ ಬಳಿ ಚರ್ಚೆ ಮಾಡುತ್ತೇವೆ. ಕಾರ್ಯಕರ್ತರಿಗೆ ಸಿಎಂ ಹಾಗೂ ಡಿಸಿಎಂ ಅವರನ್ನು ಭಾನುವಾರ (ನಾಳೆ) ಭೇಟಿ ಮಾಡಿಸಲಾಗುವುದು. ನಿಮ್ಮ ಆದೇಶವನ್ನು ಪಾಲಿಸಲಾಗುವುದು” ಎಂದು ಹೇಳಿದರು.
“ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ನಾನು ಐದು ಚುನಾವಣೆಗಳನ್ನು ಎದುರಿಸಿದ್ದು, ನಾಲ್ಕು ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದೇನೆ. ಪ್ರತಿ ಬಾರಿಯೂ ಅತ್ಯಂತ ಕಡಿಮೆ ಅಂತರಗಳ ಮತದಿಂದ ಸೋತಿದ್ದೇನೆ. ಒಂದು ಚುನಾವಣೆಯನ್ನು 787 ಮತಗಳ ಅಂತರದಿಂದ ಸೋತಿದ್ದೇನೆ” ಎಂದರು.
ಬಿಜೆಪಿ ಸೋಲಬೇಕು, ಕಾಂಗ್ರೆಸ್ ಗೆಲ್ಲಬೇಕು
“ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟಿದ್ದೇನೆ. ಮೂರು ಬಾರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಕಡಿಮೆ ಅಂತರದಿಂದ ಸೋತಿದ್ದೇನೆ. ಮೊದಲ ಬಾರಿಗೆ ಜನತಾದಳದಿಂದ ಸಿದ್ದರಾಮಯ್ಯ ಅವರು ನನಗೆ ಮೊದಲ ಬಾರಿಗೆ ಟಿಕೆಟ್ ನೀಡಿದ್ದರು. ಪ್ರಸ್ತುತ ನನಗೆ ವ್ಯಕ್ತಿಗಿಂತ, ಕಾಂಗ್ರೆಸ್ ಪಕ್ಷವೇ ಮುಖ್ಯ. ಕ್ಷೇತ್ರದಲ್ಲಿ ಬಿಜೆಪಿ ಸೋಲಬೇಕು, ಕಾಂಗ್ರೆಸ್ ಗೆಲ್ಲಬೇಕು” ಎಂದರು.
ಶನಿವಾರ (ಇಂದು) ಬೆಳಿಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದಾಗ, ಖಾದ್ರಿ ನೀನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನಿನಗೆ ರಕ್ಷಣೆಯನ್ನು ಕೊಡುವುದು ನನ್ನ ಹಾಗೂ ಕೆಪಿಸಿಸಿ ಅಧ್ಯಕ್ಷರ ಜವಾಬ್ದಾರಿ. ಪಕ್ಷವನ್ನು ಗೆಲ್ಲಿಸುವ ಹೊಣೆ ಜಮೀರ್, ನಜೀರ್, ಹ್ಯಾರಿಸ್ ಅವರು ಸೇರಿದಂತೆ ಎಲ್ಲರ ಮೇಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು” ಎಂದರು.
ಶಿವಕುಮಾರ್ 4.5 ಕೋಟಿ ಅನುದಾನ ಕೊಡಿಸಿದ್ದರು
ನಾನು ಪರಂಪರೆಯಿಂದ ಬಂದವನು. ನುಡಿದಂತೆ ನಡೆಯುತ್ತೇನೆ. ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಾಗ ನಿಮ್ಮ ಕ್ಷೇತ್ರ ಜವಾಬ್ದಾರಿ ನನ್ನ ಮೇಲಿದೆ ಎಂದು ಡಿ.ಕೆ.ಶಿವಕುಮಾರ್ ಅವರು ಈ ಹಿಂದೆ ಹೇಳಿದ್ದರು. ಅದೇ ರೀತಿ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಸವಣೂರಿನ ಮೋತಿ ತಲಾಬ್ ಅಭಿವೃದ್ಧಿಗೆ 4.5 ಕೋಟಿ ಅನುದಾನ ಕೊಟ್ಟವರು ಶಿವಕುಮಾರ್ ಎನ್ನುವುದನ್ನು ಮರೆತಿಲ್ಲ” ಎಂದು ಹೇಳಿದರು.
State
ಮೆಟ್ರೋ ದರ ಏರಿಕೆ: ಹೈಕ್ ಸಿದ್ದರಾಮಯ್ಯ ಎಂದು ಜರಿದ ಬಿಜೆಪಿ
ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣದ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಬಿಎಂಆರ್ಸಿಎಲ್ ಅಣಿಯಾಗಿರುವಾಗಲೇ ರಾಜ್ಯ ಬಿಜೆಪಿ, ಸಿಎಂ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ಇನ್ನುಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೈಕ್ ಸಿದ್ದರಾಮಯ್ಯ ಎಂದು ಕರೆಯಬೇಕು ಜರಿದಿದೆ.
ರಾಜ್ಯದಲ್ಲಿ ಸಾರಿಗೆ ನಿಗಮಗಳಿಗೆ ಐಸಾ ಐಸಾ ಯೋಜನೆ ಕೊಟ್ಟು ಬಸ್ಗಳನ್ನು ತಳ್ಳುವಂತೆ ಮಾಡಿರುವ ಭ್ರಷ್ಟ ಸಿದ್ದರಾಮಯ್ಯ ಅವರು ಇದೀಗ ಎಲ್ಲಾ ಹೈಕ್ ಹೈಕ್ ಎನ್ನುತ್ತಾ 48% ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡುವ ಮೂಲಕ ಹೈಕ್ ರಾಮಯ್ಯ ಎನಿಸಿಕೊಂಡಿದ್ದಾರೆ.
ಬಸ್ ಪ್ರಯಾಣವೂ ದುಬಾರಿ ಮೆಟ್ರೋ ಬಲು ದುಬಾರಿ ಆಗಿದೆ. ಜನರಿಗೆ ಅಕ್ಕಿಯನ್ನೂ ಕೊಡುತ್ತಿಲ್ಲ, ಗೃಹ ಲಕ್ಷ್ಮಿ ಹಣವನ್ನು ನೀಡುತ್ತಿಲ್ಲ. ದುಡಿದು ತಿನ್ನೋಣ ಎಂದರೆ ಎಲ್ಲಾ ದರವನ್ನು ಏರಿಕೆ ಮಾಡಿ ಬಡವರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿದೆ ರಾಜ್ಯ ಕಾಂಗ್ರೆಸ್ ಸರಕಾರ ಎಂದು ಬಿಜೆಪಿ ಕಿಡಿಕಾರಿದೆ.
State
ಪರಿಶಿಷ್ಟರ ಹಣವು ಸಾಮಾಜಿಕ ಹೂಡಿಕೆಯಾಗಬೇಕೇ ಹೊರತು, ಸಾಮಾಜಿಕ ಖರ್ಚಾಗಬಾರದು: ಡಾ. ಎಚ್.ಸಿ.ಮಹದೇವಪ್ಪ
ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಇಂದು ವಿಧಾನಸೌಧದ ಕೊಠಡಿ ಸಂಖ್ಯೆ 334 ರಲ್ಲಿ SCSP ನೋಡಲ್ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಿದೆರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ನಿಗದಿತ ಅವಧಿಯ ಒಳಗಾಗಿ SCSP ಅನುದಾನವನ್ನು ಬಳಸಿಕೊಂಡು ಪರಿಶಿಷ್ಟರ ಅಭಿವೃದ್ಧಿಗೆ flag ship ಯೋಜನೆಗಳನ್ನು ರೂಪಿಸಬೇಕೆಂದು ಸೂಚಿಸಿದರು.
ಸಹಕಾರಿ ವಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪರಿಶಿಷ್ಟರ ನೊಂದಾವಣೆ ಮಾಡಿಸುವುದು ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಿದರು.
ಮುಖ್ಯವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ SCSP ಹಣವನ್ನು ಪಡೆಯುವ ಇಲಾಖೆಗಳು ಸುಮ್ಮನೇ ಹಣ ಖರ್ಚು ಮಾಡದೇ ಸೂಕ್ತ ರೀತಿಯಲ್ಲಿ ಯೋಜನೆಗಳನ್ನು ಮಾಡುವ ಮೂಲಕ ಪರಿಶಿಷ್ಟ ಸಮುದಾಯದ ಹಣ ಸದ್ಬಳಕೆಯತ್ತ ಗಮನ ಹರಿಸಬೇಕೆಂದು ತಿಳಿಸಿದರು.
ಅಧಿಕಾರಿಗಳು ಮೌಲ್ಯಮಾಪನದ ಕಡೆ ಹೆಚ್ಚು ಗಮನ ಹರಿಸಿ, ವಸತಿ ಇಲ್ಲದ ಜನರು ಎಷ್ಟು ಮಂದಿ ಇದ್ದಾರೆ, ಕೃಷಿಯಲ್ಲಿ ತೊಂದರೆ ಅನುಭವಿಸುತ್ತಿರುವ ಪರಿಶಿಷ್ಟ ಸಮುದಾಯದವರು ಎಷ್ಟು ಮಂದಿ ಇದ್ದಾರೆ ಮತ್ತು ಯಾರಿಗೆಲ್ಲಾ ನಾವು ಉದ್ಯಮಗಳನ್ನು ಮಾಡಲು, ಕೌಶಲ್ಯಗಳನ್ನು ಒದಗಿಸಲು ಕ್ರಮ ವಹಿಸಬೇಕು ಎಂಬುದರ ಕುರಿತು ಅಧಿಕಾರಿ ಮಿತ್ರರು ನೇರವಾಗಿ ಜನರ ಬಳಿ ಹೋಗಿ ವಾಸ್ತವಗಳನ್ನು ಅರಿಬೇಕೆಂದು ತಿಳಿಸಿದರು.
ಇನ್ನು ಪರಿಶಿಷ್ಟ ಸಮುದಾಯದವರಿಗೆ ಮನೆ ಕಟ್ಟಲು 5 ಲಕ್ಷ ರೂಪಾಯಿಯ unit fund ಅನ್ನು ನಿಗದಿಗೊಳಿಸುವ ಕುರಿತು ಕ್ಯಾಬಿನೆಟ್ ನಲ್ಲಿ ಚರ್ಚಿಸುವುದಾಗಿ ಹೇಳಿದರು.
ಉನ್ನತ ಶಿಕ್ಷಣ ಮಾಡುತ್ತಿರುವ ಮಕ್ಕಳಿಗೆ ತೊಂದರೆ ಆಗದ ರೀತಿಯಲ್ಲಿ ಅವರಿಗೆ ಬರಬೇಕಾದ ವಿದ್ಯಾರ್ಥಿ ವೇತನವನ್ನು ನಿಗದಿತ ಸಮಯಕ್ಕೆ ಕಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವ ಸಂದರ್ಭದಲ್ಲಿ ಕೆಲವೊಂದು ಗೊಂದಲ ಉಂಟಾಗಿದ್ದು, ಈ ಗೊಂದಲವನ್ನು ಶೀಘ್ರದಲ್ಲಿ ಪರಿಹಾರ ಮಾಡುವುದಾಗಿ ಅಧಿಕಾರಿಗಳು ತಿಳಿಸಿದರು.
ಇನ್ನು ಸರ್ಕಾರದ ಎಲ್ಲಾ ಇಲಾಖೆಗಳೂ ಕೂಡಾ ಪರಿಶಿಷ್ಟರ ಹಣವನ್ನು ಸಾಮಾಜಿಕ ಖರ್ಚು ( Social Expenditure) ಎಂದು ಭಾವಿಸದೇ ಅದನ್ನು ಸಾಮಾಜಿಕ ಹೂಡಿಕೆ ( Social Investment ) ಆಗಿ ವಿನಿಯೋಗಿಸಿದರೆ ಮಾತ್ರ ಪರಿಶಿಷ್ಟರ ಏಳಿಗೆ ಸಾಧ್ಯ ಎಂಬುದಾಗಿ ತಿಳಿದರು.
ನಿಗದಿತ ಅವಧಿಯಲ್ಲಿ ಹಣ ಖರ್ಚು ಮಾಡದೇ SCSP/TSP ಕಾಯ್ದೆಯ ಆಶಯಗಳನ್ನು ಮರೆತು, ನಿಯಮಬಾಹಿರವಾಗಿ ವರ್ತಿಸಿದರೆ ಮತ್ತು ಅನುದಾವನ್ನು ಬಳಸುವಲ್ಲಿ ನಿರ್ಲಕ್ಷ್ಯ ತೋರಿದರೆ ಸಮಾಜ ಕಲ್ಯಾಣ ಇಲಾಖೆಯು ಸಿಂಗಲ್ ವಿಂಡೋ ಏಜೆನ್ಸಿ ಮೂಲಕ ಖರ್ಚಾಗದ ಹಣವನ್ನು ಹಿಂಪಡೆದು, ಪರಿಶಿಷ್ಟ ಸಮುದಾಯಗಳಿಗೆ ಪೂರಕ ಯೋಜನೆಗಳನ್ನು ನೀಡಲಿದೆ ಎಂಬ ಸಂಗತಿಯನ್ನು ಪ್ರಮುಖವಾಗಿ ತಿಳಿಸಿದರು.
State
ಬಿ.ಎಸ್ ಯಡಿಯೂರಪ್ಪ ಸಿಎಂ ಆಗಲು ರಮೇಶ್ ಜಾರಕಿಹೊಳಿ ಕಾರಣ: ಯತ್ನಾಳ್ ಟಾಂಗ್
ವಿಜಯಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಸತೀಶ್ ಜಾರಕಿಹೊಳಿ ಕಾರಣ. ಅವರು ಕಾಂಗ್ರೆಸ್ ಪಕ್ಷದಿಂದ 17 ಜನ ಶಾಸಕರನ್ನು ಕರೆದುಕೊಂಡು ಬರದೇ ಹೋಗಿದ್ದರೇ ಯಡಿಯೂರಪ್ಪ ಸಿಎಂ ಆಗಲು ಆಗುತ್ತಿರಲಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರಗೆ ಟಾಂಗ್ ಕೊಟ್ಟಿದ್ದಾರೆ.
ಬಿಎಸ್ವೈ ಮುಖ್ಯಮಂತ್ರಿಯಾಗಿ, ನೀವೆಲ್ಲಾ ಇಷ್ಟು ದುಡ್ಡು ಮಾಡಲು ರಮೇಶ್ ಜಾರಕಿಹೊಳಿಯೇ ಕಾರಣ. ನಿಮ್ಮ ಸಂಪಾದನೆ ಬಗ್ಗೆ ಇಡೀ ಜಗತ್ತಿಗೆ ಗೊತ್ತಿದೆ ಎಂದು ಯತ್ನಾಳ್ ಬಾಂಬ್ ಹಾಕಿದ್ದಾರೆ.
ರಮೇಶ್ ಜಾರಕಿಹೊಳಿ ಅವರು ಎಸ್ಟಿ ಸಮುದಾಯದ ನಾಯಕ. ಅವರನ್ನು ಹಗುರವಾಗಿ ಕಾಣುವುದು ಬೇಡ. ಸಚಿವರಾಗಿಯೂ ಉತ್ತಮ ಕೆಲಸ ಮಾಡುತ್ತಿದ ಜಾರಕಿಹೊಳಿ ಅವರನ್ನು ಬಲಿಕೊಟ್ಟವರು ಯಾರು? ಎಂದು ಬಿವೈವಿ ಅವರನ್ನು ಪ್ರಶ್ನಿಸಿದ್ದಾರೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಳ್ಳೆಯ ನಾಯಕ ಅಧ್ಯಕ್ಷನಾಗಬೇಕಾಗದೇ ಚುನಾವಣೆ ಮೂಲಕ ಆಯ್ಕೆಯಾಗಬೇಕು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆಗೆ ನಿಲ್ಲುವುದಕ್ಕೆ ಎಲ್ಲರಿಗೂ ಮುಕ್ತ ಸ್ವಾತಂತ್ರ್ಯವಿದೆ. ವಿಜಯೇಂದ್ರ ಅವರು ಸ್ಪರ್ಧೆ ಮಾಡಲಿ, ಸಾಮಾನ್ಯ ಕಾರ್ಯಕರ್ತರು ಸ್ಪರ್ಧೆ ಮಾಡಲಿ. ಚುನಾವಣೆ ಪ್ರಕಟಗೊಂಡ ಬೆನ್ನಲ್ಲೇ ನಾವು ಏನೋ ಪ್ರಕಟಣೆ ಮಾಡುವುದಿದೆ. ಅದನ್ನು ಮಾಡುತ್ತೇವೆ. ಯಾವುದೇ ಕಾರಣಕ್ಕೂ ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ. ಕಲುಷಿತ ವ್ಯಕ್ತಿಗಳಿಂದ ಬಿಜೆಪಿ ಮುಕ್ತ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಯತ್ನಾಳ್ ಹೇಳಿದರು.
-
Kodagu20 hours ago
ಅಖಿಲ ಕೊಡವ ಸಮಾಜದ ಹೇಳಿಕೆಗೆ ನಮ್ಮ ವಿರೋಧವಿದೆ, ಹೋರಾಟ ಮುಂದುವರಿಯಲಿದೆ – ಕನೆಕ್ಟಿಂಗ್ ಕೊಡವಾಸ್ ಸಂಘಟನೆ ಸ್ಪಷ್ಟನೆ
-
Kodagu19 hours ago
ಕಿಡಿಗೇಡಿಗಳನ್ನು ಬಂಧಿಸದೇ ನಡೆಸುವ ಶಾಂತಿ ಮಾತುಕತೆಗೆ ನಮ್ಮ ಬೆಂಬಲವಿಲ್ಲ: ಯುಕೊ ಸ್ಪಷ್ಟನೆ
-
Tech16 hours ago
ಮೊಬೈಲ್ ಬಳಕೆದಾರರಿಗೆ ದೂರ ಸಂಪರ್ಕ ಇಲಾಖೆಯಿಂದ ಗೂಡ್ ನ್ಯೂಸ್ : ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕಾದ ಮಾಹಿತಿ
-
Sports21 hours ago
Champions Trophy 2025ಕ್ಕೆ ಟೀಂ ಇಂಡಿಯಾ ಪ್ರಕಟ: ಗಿಲ್ಗೆ ಉಪನಾಯಕ ಪಟ್ಟ
-
National - International23 hours ago
ಕೊಲ್ಕತ್ತಾ ವೈದ್ಯ ಮೇಲಿನ ಅತ್ಯಾಚಾರ ಪ್ರಕರಣ: 57 ದಿನಗಳಲ್ಲಿ ತೀರ್ಪು ಪ್ರಕಟ; ರಾಯ್ ದೋಷಿ
-
Cinema23 hours ago
ನಟ ಸೈಫ್ ಅಲಿ ಖಾನ್ಗೆ ಚಾಕು ಇರಿತ ಪ್ರಕರಣ: ಪತ್ನಿ ಕರೀನಾ ಕಪೂರ್ ಫಸ್ಟ್ ರಿಯಾಕ್ಷನ್!
-
Mysore20 hours ago
ಮೈಸೂರು ವಿವಿ ಗೌರವ ಡಾಕ್ಟರೇಟ್ ತಂದ ಖುಷಿ
-
Mysore19 hours ago
ಮೈಸೂರಿನ ಮಾರುಕಟ್ಟೆಗೆ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು