Chikmagalur
ಅ. 19 ರಿಂದ 24ರ ವರೆಗೆ ಕಾಫಿ ನಾಡಿನಲ್ಲಿ ನಿಷೇದಾಜ್ಞೆ ಜಾರಿ

ಚಿಕ್ಕಮಗಳೂರು : ಮಹಿಷ ದಸರಾ ಸಂಬಂಧ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರ ವಿರೋಧ ಚರ್ಚೆಗಳು ವ್ಯಾಪಕವಾದ ಹಿನ್ನೆಲೆಯಲ್ಲಿ ಹಾಗೂ ಮಹಿಷ ದಸರಾ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ ಬೆನ್ನಲ್ಲೇ ಮುಂಜಾಗ್ರತ ಕ್ರಮವಾಗಿ ಅ.19ರಿಂದ 24 ರವರೆಗೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಮಹಿಷ ದಸರಾ ಸಂದರ್ಭದಲ್ಲಿ ಯಾವುದೇ ರೀತಿಯ ಮೆರವಣಿಗೆ, ಪ್ರಚೋದನಾತ್ಮಕ ಭಾಷಣ, ಪೋಸ್ಟರ್, ಫ್ಲೆಕ್ಸ್ ಹಾಕಬಾರದು. ಈ ಸಂದರ್ಭದಲ್ಲಿ ಯಾವುದೇ ಪ್ರತಿಭಟನೆ ನಡೆಸುವಂತಿಲ್ಲ ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ನಿಷೇದಾಜ್ಞೆ ಅವಧಿಯಲ್ಲಿ ಘೋಷಣೆಗಳನ್ನು ಕೂಗುವುದು, ಆವೇಶಭರಿತರಾಗಿ ಭಾಷಣ ಮಾಡುವುದು, ಸಂಗೀತ ಕಾರ್ಯಕ್ರಮ ನಡೆಸುವುದನ್ನು ನಿಷೇಧಿಸಲಾಗಿದೆ. ಯಾರಾದರೂ ನಿಷೇದಾಜ್ಞೆ ಉಲ್ಲಂಘನೆ ಮಾಡಿದರೆ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಅ. 20ರಂದು ಮಹಿಷ ದಸರಾ ಅಂಗವಾಗಿ ಚಿಕ್ಕಮಗಳೂರು ನಗರದ ಹನುಮಂತಪ್ಪ ಸರ್ಕಲ್ ನಿಂದ ಆಜಾದ್ ಪಾರ್ಕ್ ಸರ್ಕಲ್ ವರೆಗೆ ಮೆರವಣಿಗೆ ನಡೆಸಲು ಮಹಿಷ ದಸರಾ ಆಚರಣಾ ಸಮಿತಿ ಮುಂದಾಗಿತ್ತು. ಜೊತೆಗೆ ಮಹಿಷ ದಸರಾದ ಸಭಾ ಕಾರ್ಯಕ್ರಮವನ್ನು ಚಿಂತಕ ಪ್ರೊ.ಭಗವಾನ್ ನೆರವೇರಿಸಲಿದ್ದರು. ಆದರೆ ನಿಷೇದಾಜ್ಞೆ ಜಾರಿಯಿಂದಾಗಿ ಮಹಿಷ ದಸರಾ ಅಂಗವಾಗಿ ನಡೆಯಬೇಕಿದ್ದ ಮೆರವಣಿಗೆ ರದ್ದಾದಂತಾಗಿದೆ.
ಮಹಿಷ ದಸರ ಕಾರ್ಯಕ್ರಮಕ್ಕೆ ಚಿಂತಕ ಪ್ರೊಫೆಸರ್ ಭಗವಾನ್ ಆಗಮಿಸುವುದಕ್ಕೆ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಪ್ರಮುಖವಾಗಿ ಒಕ್ಕಲಿಗರ ಸಂಘ, ಶ್ರೀರಾಮ ಸೇನೆ ಕಾರ್ಯಕರ್ತರು ಭಗವಾನ್ ಚಿಕ್ಕಮಗಳೂರಿಗೆ ಬಂದಲ್ಲಿ ಅವರಿಗೆ ಮಸಿ ಬಳಿಯುವುದಾಗಿ ಜೊತೆಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಹೀಗಾಗಿ ಭಗವಾನ್ ಚಿಕ್ಕಮಗಳೂರಿಗೆ ಬಾರದಂತೆ ಗಡಿಪಾರು ಮಾಡಬೇಕು ಎಂದು ಡಿಸಿಗೆ ಮನವಿಯನ್ನು ಸಲ್ಲಿಸಲಾಗಿತ್ತು.
ಮಹಿಷ ದಸರಾಗೆ ಭಗವಾನ್ ಬಂದಲ್ಲಿ ಮಸಿಬಳಿಯುವುದಾಗಿ ಕೆಲ ಸಂಘಟನೆಗಳು ಹೇಳಿಕೆ ನೀಡಿದ್ದ ಬೆನ್ನಲ್ಲೇ ದಲಿತ ಸಂಘಟನೆಗಳು ಭಗವಾನ್ ಅವರನ್ನು ಕರೆಯಿಸುತ್ತೇವೆ. ಅವರಿಗೆ ಮಸಿ ಬಳಿಯಲು ಬಂದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಜೊತೆಗೆ ಭಗವಾನ್ ಅವರಿಗೆ ಮಹಿಳಾ ಕಾರ್ಯಕರ್ತರಿಂದ ಮಸಿ ಬಳಿಸುವ ಸಾಧ್ಯತೆಯಿರುವುದರಿಂದ ಭಗವಾನ್ ಅವರಿಗೆ ನಾವು ಮಹಿಳೆಯರಿಂದಲೇ ರಕ್ಷಣೆ ಕೊಡಿಸುತ್ತೇವೆ ಎಂದು ಹೇಳಿದ್ದರು.
ಈ ಎಲ್ಲ ಘಟನಾವಳಿಗಳನ್ನು ಅವಲೋಕಿಸಿದ ಎಸ್ ಪಿ ವಿಕ್ರಮ್ ಅಮಟೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮುಂಜಾಗ್ರಾತಾ ಕ್ರಮವಾಗಿ ಅ.19 ರಿಂದ 24ರವರೆಗೆ ನಿಷೇದಾಜ್ಞೆ ಜಾರಿಗೊಳಿಸುವಂತೆ ಡಿಸಿ ಮೀನಾ ನಾಗರಾಜ್ ಅವರಿಗೆ ಶಿಫಾರಸ್ಸು ಮಾಡಿದ್ದರು. ಎಸ್ ಪಿ ಶಿಫಾರಸ್ಸಿನ ಮೇಲೆ ನಿಷೇದಾಜ್ಞೆ ಜಾರಿಗೊಳಿಸಿ ಡಿಸಿ ಆದೇಶಿಸಿದ್ದಾರೆ.
Chikmagalur
ಕೋಟಿಚೆನ್ನಯ್ಯ ಬಯಲು ರಂಗಮಂದಿರ ಉದ್ಘಾಟಿಸಿದ ಶಾಸಕ ಟಿ.ಡಿ ರಾಜೇಗೌಡ

ಬಾಳೆಹೊನ್ನೂರು: ಶ್ರೀ ನಾರಾಯಣಗುರುಗಳ ಸಂದೇಶ ಸಾರ್ವಕಾಲಿಕವಾಗಿದ್ದು ಅವರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಜದಲ್ಲಿ ಶಾಂತಿ ಸಮೃದ್ಧಿಯಾಗಲಿದೆ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ತಿಳಿಸಿದರು.
ಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಬಿಲ್ಲವ ಸಮಾಜ ಸೇವಾ ಸಂಘ(ರಿ) ಶ್ರೀ ನಾರಾಯಣಗುರು ಯುವ ವೇದಿಕೆ ಹಾಗೂ ಬಿಲ್ಲವ ಮಹಿಳಾ ಘಟಕ ಹಮ್ಮಿಕೊಂಡಿದ್ದ ಕೋಟಿ ಚೆನ್ನಯ್ಯ ಬಯಲು ರಂಗಮಂದಿರದಿರದ ಉದ್ಘಾಟನಾ ಸಮಾರಂಭದಲ್ಲಿ ರಂಗಮಂದಿರ ಉದ್ಘಾಟಿಸಿ ಮಾತನಾಡಿದರು.
ಎಲ್ಲರೂ ಒಂದೇ ಎಂಬ ಸಂದೇಶ ಸಾರಿ ಸಾಮರಸ್ಯ ಸಾರಿದ ಮಹಾನ್ ವ್ಯಕ್ತಿಯಾಗಿದ್ದರು. ಸಮುದಾಯದ ಬೆಳವಣಿಗೆಗೆ ಮಾರ್ಗದರ್ಶನವಿರಬೇಕು. ಬೆಳವಣಿಗೆಗೆ ರಾಜಕೀಯ ನುಸಳದಂತೆ ಸಂಘಟನೆಯನ್ನು ಬಲಪಡಿಸಬೇಕು ಸರ್ವಾನುಮತದ ಅಧ್ಯಕ್ಷರ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರನ್ನು ಆಯ್ಕೆ ಮಾಡಿಕೊಂಡಾಗ ಅಭಿವೃದ್ಧಿಯಾಗಲಿದೆ. ಎಲ್ಲರೂ ಶಿಕ್ಷಣವನ್ನು ಪಡೆದು ಉನ್ನತ ಹುದ್ದೆಯನ್ನು ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಮಕ್ಕಳನ್ನು ಶಿಕ್ಷಣವಂತರನ್ನಾಗಿಸಬೇಕು ಹಾಗೂ ಸರ್ಕಾರದಿಂದ ಬರುವ ಅನುದಾನವನ್ನು ಕೊಡಿಸುವುದಾಗಿ ತಿಳಿಸಿದರು.
ಮಾಜಿ ಸಚಿವರಾದ ಡಿ.ಎನ್ ಜೀವರಾಜ್ ಮಾತನಾಡಿ ದಕ್ಷಿಣ ಕನ್ನಡದಿಂದ ಕೂಲಿಗಾಗಿ ವಲಸೆ ಬಂದ ಕುಟುಂಬಗಳು ಇಂದು ಈ ಭಾಗದಲ್ಲಿ ಸತತ ಪರಿಶ್ರಮದಿಂದ ಆರ್ಥಿಕ ಬೆಳವಣಿಗೆ ಸಾಧಿಸಿದ್ದಾರೆ. ಮಕ್ಕಳಿಗೆ ನಾರಾಯಣ ಗುರುಗಳ ಸಂದೇಶವನ್ನು ಮುಟ್ಟಿಸಬೇಕು. ನಾರಾಯಣ ಗುರುಗಳು ಶೋಷಿತರ ಧ್ವನಿಯಾಗಿ ಎಲ್ಲರನ್ನು ಸರಿಸಮಾನರಾಗಿ ಕಾಣಬೇಕೆಂದು ಬಯಸಿದ್ದರೆಂದು ತಿಳಿಸಿದರು. ಕೋಟಿಚೆನ್ನಯ್ಯ ಹಾಗೂ ಶ್ರೀ ನಾರಾಯಣ ಗುರುಗಳು ಸಮುದಾಯದ ಎರಡು ಕಣ್ಣುಗಳಿದ್ದಂತೆ ಎಂದು ತಿಳಿಸಿದರು.
ಪುತ್ತೂರಿನ ಶ್ರೀ ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷ ರವಿ ಚಿಲಿಂಬಿ ಮಾತನಾಡಿ ಕುದ್ರೋಳಿ ದೇವಸ್ಥಾನ ಹಾಗೂ ಗೆಜ್ಜೆಗಿರಿ ಕ್ಷೇತ್ರ ಸಮಾಜದ ಎರಡು ಕಣ್ಣುಗಳಿದ್ದಂತೆ ನ್ಯಾಯ ಧರ್ಮವಿದ್ದಲ್ಲಿ ದೇವರಿದ್ದಾರೆ ಎಂದು ತಿಳಿಸಿ ಮೂಲ ಸಾನಿಧ್ಯಕ್ಕೆ ಎಲ್ಲರು ಬಂದು ದರ್ಶನ ಪಡೆಯಬೇಕು ದೇಶ ವಿದೇಶಗಳಲ್ಲು ನಾರಾಯಣ ಗುರುಗಳ ಸಂಸ್ಥೆಗಳು ಇದ್ದು ವಿಶ್ವಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಂ.ಜೆ ಮೋಹನ್ ವಹಿಸಿ ಮಾತನಾಡಿ ರಂಗಮಂದಿರ ನಿರ್ಮಾಣಕ್ಕೆ ಸಹಕರಿಸಿದ ಎಲ್ಲಾ ದಾನಿಗಳಿಗು ಕೃತಜ್ಞತೆ ಸಲ್ಲಿಸಿದರು. ಕಾಡಾ ಅಧ್ಯಕ್ಷ ಡಾ. ಅಂಶುಮಂತ್, ಜಿ.ಪಂ ಮಾಜಿ ಸದಸ್ಯ ಪಿ.ಆರ್ ಸದಾಶಿವ, ಬ್ರಹ್ಮಶ್ರೀ ನಾರಾಯಣಗುರು ಸಮಾಜದ ಜಿಲ್ಲಾಧ್ಯಕ್ಷರಾದ ಹೆಚ್.ಎಂ ಸತೀಶ್, ಕೇಂದ್ರೀಯ ಕಾಫಿ ಮಂಡಳಿಯ ಸದಸ್ಯ ಬಿ.ಎನ್ ಭಾಸ್ಕರ್ ಮಾತನಾಡಿದರು. ಬಿ.ಕಣಬೂರು ಗ್ರಾ.ಪಂ ಅಧ್ಯಕ್ಷ ರವಿಚಂದ್ರ, ಮಹಲಗೋಡು ಶ್ರೀನಿವಾಸ್, ಗ್ರಾ.ಪಂ ಮಾಜಿ ಅಧ್ಯಕ್ಷ ಎಂ.ಎಸ್ ಅರುಣೇಶ್, ಆಲ್ದೂರು ಸಂಘದ ಅಧ್ಯಕ್ಷ ಕುಮಾರಣ್ಣ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಸದಾನಂದ ಬಂಗೇರ, ರಾಮ ಡಿ ಸಾಲಿಯಾನ್, ಮಹಿಳಾ ಅಧ್ಯಕ್ಷೆ ಪಾರ್ವತಮ್ಮ ಉಮೇಶ್, ಇಟ್ಟಿಗೆ ಶೇಖರ್, ಹಾತೂರು ಪ್ರಭಾಕರ್, ಸಂಜೀವ ಸೇರಿದಂತೆ ಜಗದೀಶ್ ಅರಳಿಕೊಪ್ಪ ಸಮುದಾಯದವರು ಉಪಸ್ಥಿತರಿದ್ದರು. ಹಿತೈಶಿ ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಜಯ ಪ್ರಭಾಕರ್ ಸ್ವಾಗತಿಸಿ, ದೀಪಾ ನಿರೂಪಿಸಿ, ಸತೀಶ್ ಅರಳಿಕೊಪ್ಪ ಪ್ರಾಸ್ತಾವಿಕ ಮಾತನಾಡಿದರು.
Chikmagalur
ಹುಯಿಗೆರೆಯಲ್ಲಿ ಶಂಕರ ಭಾರತಿ ಗೋಸೇವಾ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ

ಬಾಳೆಹೊನ್ನೂರು: ಸಿಎಂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಪ ಸಂಖ್ಯಾತರ ತುಷ್ಟೀಕರಣದ ಪಕ್ಷವಾಗಿದೆ ಇವರ ಆಡಳಿತದಲ್ಲಿ ರಾಜ್ಯಾದ್ಯಂತ ಅವ್ಯಾಹತವಾಗಿ ಗೋ ಸಾಗಾಣಿಕೆ, ಹತ್ಯೆ, ಹಿಂದೂಗಳ ಮೇಲೆ ದೌರ್ಜನ್ಯ, ಲವ್ ಜಿಹಾದ್ ನಿರಂತರವಾಗಿ ಮುಂದುವರೆಯುತ್ತಿರುವುದು ಆತಂಕ ಸೃಷ್ಠಿಸಿದೆ ಎಂದು ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಸಹ ಕಾರ್ಯದರ್ಶಿ ಗೋಪಾಲ್ ಜಿ ತಿಳಿಸಿದರು .
ಅವರು ಬಾಳೆಹೊನ್ನುರು ಸಮೀಪದ ಹುಯಿಗೆರೆಯಲ್ಲಿರುವ ಶಂಕರ ಭಾರತಿ ಗೋಸೇವಾ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ & ಹಸು, ಕರುವನ್ನು ಪೂಜಿಸಿ ಬಿಡುವ ಮೂಲಕ ಉದ್ಘಾಟಿಸಲಾಯಿತು.
ಸತತ 500 ವರ್ಷಗಳ ಸಂಘರ್ಷದ ಬಳಿಕ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಗೊಂಡಿರುವುದು ನಾವು ಹೆಮ್ಮೆಪಡುವ ವಿಚಾರವಾಗಿದೆ. 30 ಸಾವಿರಕ್ಕೂ ಹೆಚ್ಚು ಹಿಂದೂ ದೇವಸ್ಥಾನಗಳನ್ನು ಆಕ್ರಮಣಕಾರಿಗಳು ಧ್ವಂಸ ಮಾಡಿದ್ದು, ಅದರಲ್ಲಿ ಅಯೋಧ್ಯೆಯನ್ನು ವ್ಯಾಪಕ ಜನಾಂದೋಲನ, ಕಾನೂನಿನ ಮೂಲಕ ಕಡೆಗೂ ನಮ್ಮದಾಗಿಸಿಕೊಳ್ಳಲಾಗಿದೆ.
ವಿಶ್ವ ಹಿಂದೂ ಪರಿಷತ್ ಸಂಘಟನೆಯು ಮುಂದಿನ ದಿನಗಳಲ್ಲಿ ಕಾಶಿ, ಮಥುರಾ, ಅಯೋಧ್ಯೆಯ ಉಳಿವಿನ ಛಲದ ಹೋರಾಟಕ್ಕೆ ಹಂತಹಂತವಾಗಿ ಜಯ ಲಭಿಸುವ ಕಾಲ ಸನ್ನಿಹಿತವಾಗುತ್ತಿದ್ದು, ಮುಂದೆ ಐತಿಹಾಸಿಕ ಮಥುರೆ, ಕಾಶಿಯನ್ನು ನಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ಚುರುಕು ಗತಿಯಲ್ಲಿ ಸಾಗಲಿದೆ.
ಮಲೆನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಗೋಶಾಲೆಗಳು ಹೆಚ್ಚಿನ ಪ್ರಮಾಣದಲ್ಲಿ ನಿರ್ಮಾಣಗೊಳ್ಳುವ ಮೂಲಕ ಗೋ ಸಂರಕ್ಷಣೆಯ ಆಂದೋಲನದಲ್ಲಿ ಹೊಸ ಆತ್ಮ ವಿಶ್ವಾಸ, ಚೈತನ್ಯವನ್ನು ಹೆಚ್ಚಿಸಿದೆ. ಪ್ರವೀಣ್ ಖಾಂಡ್ಯ ಮತ್ತು ತಂಡ ನಿರ್ವಹಣೆ ಮಾಡುತ್ತಿರುವ ಈ ಗೋ ಸೇವಾ ಕೈಂಕರ್ಯಕ್ಕೆ ಶೃಂಗೇರಿ ಶಾರದಾ ಪೀಠದ ಅನುಗ್ರಹ, ಸಹಕಾರ ದೊರೆತಿದ್ದು, ಅನೇಕ ಕಾರ್ಯಕರ್ತರು ಈ ಸೇವೆಯಲ್ಲಿ ತೊಡಗಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ.
ಸಾಕಲು ಅಸಹಾಯಕರಾದ ರೈತರು, ಕಸಾಯಿಖಾನೆಗೆ ಸಾಗಿಸುತ್ತಿದ್ದಾಗ ಹಿಡಿದು ರಕ್ಷಿಸಿದ ಗೋವುಗಳಿಗೆ ಆಶ್ರಯ ನೀಡಿ ಪುನರ್ಜನ್ಮ ಕಲ್ಪಿಸುವಲ್ಲಿ ಗೋ ಸೇವಾ ಕೇಂದ್ರಗಳು ಸಹಕಾರಿಯಾಗಿದೆ. ಸಮಾಜ, ಮಠ, ಮಾನ್ಯಗಳ ಬೆಂಬಲ ಸಿಗದೆ ಇದ್ದಲ್ಲಿ ಇವುಗಳು ಉಳಿಯಲಾರವು. ಪ್ರತಿಯೊಬ್ಬರೂ ಆರ್ಥಿಕ ನೆರವು, ಆಹಾರ, ಮೇವಿನ ರೂಪದಲ್ಲಿ ಧರ್ಮಾಭಿಮಾನಿಗಳು ಗೋಗ್ರಾಸದ ರೂಪದಲ್ಲಿ ದಾನ ನೀಡಬೇಕು ಎಂದರು.
ಆಳುವ ಕಾಂಗ್ರೆಸ್ ಸರಕಾರವು ಮತಾಂಧತೆಗೆ ಬೆಂಬಲ ನೀಡುತ್ತಿದ್ದು, ಹಿಂದೂ ಸಮಾಜ ಅದನ್ನು ದಿಟ್ಟ ಹೋರಾಟದ ಮೂಲಕ ಎದುರಿಸಬೇಕಾಗಿದೆ. ದತ್ತಪೀಠದ ವಿವಾದದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಉಚ್ಚ ನ್ಯಾಯಾಲಯದ ತೀರ್ಪಿನಂತೆ ರಾಮ ಮಂದಿರಕ್ಕೆ ಅಯೋಧ್ಯೆ ಮೀಸಲಿಟ್ಟು, ಮುಸ್ಲಿಮರಿಗೆ ಪ್ರತ್ಯೇಕ ಜಾಗ ನೀಡಿದ ಕ್ರಮವನ್ನೇ ದತ್ತಪೀಠಕ್ಕೂ ಅನ್ವಯಿಸುವಂತೆ ಮಾಡುವ ತೀರ್ಪು ಬಂದಾಗ ಸಮಸ್ಯೆ ಬಗೆಹರಿಯಬಲ್ಲದು ಎಂದರು.
ಇದರ ಅಂಗವಾಗಿ ರುದ್ರ, ಶತರುದ್ರ ಹೋಮ ಮುಂತಾದ ಧಾರ್ಮಿಕ ಕಾರ್ಯಗಳು ನಡೆದವು. ಬೆಂಗಳೂರಿನ ಐಎಎಸ್ ಅಧಿಕಾರಿ ವಿಶ್ವನಾಥ್ ಹಿರೇಮಠ್, ವಿಹಿಂಪ ಮುಖಂಡ ದಾವಣಗೆರೆಯ ಮುರಳಿ, ಶಂಕರ ಭಾರತಿ ಗೋಶಾಲೆ ಟ್ರಸ್ಟ್ ಅಧ್ಯಕ್ಷೆ ಶೃತಿ ಪ್ರವೀಣ್, ಉಪಾಧ್ಯಕ್ಷ ಮುರಳಿಧರ್, ಖಜಾಂಚಿ ಪ್ರವೀಣ್ ಖಾಂಡ್ಯ, ಸಾವಿತ್ರಮ್ಮ ಕೇಶವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಕಿರಿಯ ಜಗದ್ಗುರುಗಳ ಆಪ್ತ ಸಹಾಕ ಕೃಷ್ಣಮೂರ್ತಿ ಮಾತನಾಡಿ, ಶ್ರೀ ಪೀಠದಿಂದ ಸಹಕಾರ ಧರ್ಮ, ಸಂಸ್ಕೃತಿ, ಪರಂಪರೆಗಳ ಉಳಿವಿಗಾಗಿ ಯಾವ ಸಂಘಟನೆ, ವ್ಯಕ್ತಿಗಳು ಮುಂದೆ ಬರುತ್ತಾರೋ ಅವರಿಗೆ ಶ್ರೀ ಪೀಠದ ಉಭಯ ಜಗದ್ಗುರುಗಳ ಅನುಗ್ರಹ ಹಾಗೂ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು
Chikmagalur
ಮಲೆನಾಡಿನ ಜನರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ನೂತನ ಕಟ್ಟಡ

ಚಿಕ್ಕಮಗಳೂರು: ಮಲೆನಾಡಿನ ಜನರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ನೂತನವಾಗಿ ಹೊರ ರೋಗಿಗಳ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಇಂಧನ ಮತ್ತು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಜಿಲ್ಲಾ ಪಂಚಾಯತ್, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಕ್ಕಮಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಅರಳುಗುಪ್ಪೆ ಮಲ್ಲೇಗೌಡ ಜಿಲ್ಲಾ ಆಸ್ವತ್ರೆ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಹೊರ ರೋಗಿಗಳ ವಿಭಾಗದ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಅವರು ಹೇಳಿದರು.
ಚಿಕ್ಕಮಗಳೂರು ಹಚ್ಚ ಹಸಿರಿನಿಂದ ಕೂಡಿರುವ ಪ್ರವಾಸಿಗರ ತಾಣ, ಇಲ್ಲಿನ ಜನರು ಕೂಡ ಅಷ್ಟೇ ಮುಗ್ಧ ಮನಸ್ಸಿನವರು.ಇಲ್ಲಿರುವ ಸರ್ಕಾರಿ ಆಸ್ಪತ್ರೆ ಜನರ ಹಿತಕ್ಕಾಗಿ ನಿರ್ಮಿತವಾಗಿದೆ. ಇಲ್ಲಿ ಸಾಕಷ್ಟು ರೋಗಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇಂತಹ ಆಸ್ಪತ್ರೆಗೆ ಯಾವುದೇ ಸೌಲಭ್ಯದ ಕೊರತೆ ಇಲ್ಲದಂತೆ ನೋಡಿಕೊಳ್ಳುವ ಜವಬ್ದಾರಿ ನಮ್ಮೆಲ್ಲರದು. ಹಾಗೇ ಜನರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ನೂತನವಾಗಿ ಹೊರ ರೋಗಿಗಳ ಕಟ್ಟಡವನ್ನು ನಿರ್ಮಿಸಲಾಗಿದೆ ಇದನ್ನು ಜನರು ಸದುಪಯೋಗ ಪಡಿಸಿಕೊಂಡು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಹೇಳಿದರು.
ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ಡಿ. ತಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ, ಎಂಎಲ್ಸಿ ಸಿ.ಟಿ. ರವಿ, ಭದ್ರಾ ಕಾಡಾ ಶಿವಮೊಗ್ಗ ಅಧ್ಯಕ್ಷ ಡಾ. ಅಂಶುಮಂತ್, ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಕ.ರಾ. ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ಅಧ್ಯಕ್ಷ ಬಿ.ಹೆಚ್. ಹರೀಶ್, ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಶಿವಾನಂದ ಸ್ವಾಮಿ, ಜಿಲ್ಲಾ ಪೊಲೀಸ್ ಅಧೀಕ್ಷ ಡಾ.ವಿಕ್ರಮ್ ಅಮಟೆ, ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್.ಎಸ್ ಕೀರ್ತಾನ, ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಹಾಗೂ ನಿದೇಶಕ ಡಾ ಹರೀಶ್ ಎಂ.ಆರ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವತ್ ಬಾಬು, ಜಿಲ್ಲಾ ಸರ್ಜನ್ ಡಾ ಮೋಹನ್ ಕುಮಾರ್., ವೈದ್ಯರು, ವಿದ್ಯಾರ್ಥಿಗಳು, ಮುಂತಾದವರು ಉಪಸ್ಥಿತರಿದ್ದರು
-
Hassan22 hours ago
ನನ್ನ ರಕ್ಷಿಸಿ, ಆಸ್ತಿ ಉಳಿಸಿಕೊಡಿ: ಡಿಸಿ ಕಛೇರಿ ಮುಂದೆ ವೃದ್ಧೆ ಅಳಲು
-
Chamarajanagar21 hours ago
ಗುಂಡ್ಲುಪೇಟೆ ಪಟ್ಟಣದ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಜಯಕುಮಾರ್ ಅಧಿಕಾರ ಸ್ವೀಕಾರ
-
Kodagu22 hours ago
ಭೀಕರ ರಸ್ತೆ ಅಪಘಾತ – ಬೈಕ್ ಸವಾರ ದುರ್ಮರಣ
-
Hassan22 hours ago
ಹೊಸಕೋಟೆ ಸಹಕಾರ ಸಂಘಕ್ಕೆ 12ಜನ ನೂತನ ನಿರ್ದೇಶಕರ ಆಯ್ಕೆ
-
Mysore21 hours ago
ಜಿಡಿ ಹರೀಶ್ಗೌಡ ಸಹಕಾರ ಸಂಘದ ಭ್ರಷ್ಟಾಚಾರ ಮುಚ್ಚಿಹಾಕಲು ಪ್ರತಿಭಟನೆ ಮಾಡುತ್ತಿದ್ದಾರೆ: ಎಚ್.ಪಿ.ಮಂಜುನಾಥ್
-
Mysore21 hours ago
ನಂಜನಗೂಡು ದೊಡ್ಡ ಜಾತ್ರೆ: ಭಕ್ತರಿಗೆ ಸೂಕ್ತ ಸೌಲಭ್ಯ ಒದಗಿಸುವಂತೆ ದರ್ಶನ್ ಧ್ರುವ ಸೂಚನೆ
-
State18 hours ago
ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ಜಸ್ಟ್ 4ನೇ ತರಗತಿ ಪಾಸಾದವರಿಗೆ ಉದ್ಯೋಗವಕಾಶ : ಹೇಗೆ ಅರ್ಜಿ ಸಲ್ಲಿಸುವುದು?
-
State23 hours ago
Nation First, Party next, Self last: ಯತ್ನಾಳ್ ಹೀಗೇಳಿದ್ದೇಕೆ?