Hassan
ಕೆಪಿಎಸ್ ಮ್ಯಾಗ್ನೆಟ್ ಶಾಲೆ ತೆರೆಯದಂತೆ ಆಗ್ರಹ: ಎಐಡಿಎಸ್ಓ ಸಂಘಟನೆಯಿಂದ ನಿಟ್ಟೂರಿನಲ್ಲಿ ಬೃಹತ್ ಸಮಾವೇಶ
ಹಾಸನ: ಬಡವರ ಶಾಲೆ ಮುಚ್ಚುವ ಮಾತನಾಡುವ ಸರ್ಕಾರ 1,500 ಹೊಸ ಖಾಸಗಿ ಶಾಲೆಗಳಿಗೆ ಅನುಮತಿ ನೀಡಿದೆ. ನಮ್ಮ ರಕ್ತದಲ್ಲೇ ಕನ್ನಡ ಇದೆ ಎನ್ನುವ ಶಿಕ್ಷಣ ಸಚಿವರು ಚೆನ್ನಪಟ್ಟಣದ ಹೊಂಗನೂರು ಶಾಲೆಯನ್ನು ಮುಚ್ಚುವ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಈ ಇಬ್ಬಗೆಯ ನೀತಿಯನ್ನು ಸೋಲಿಸಬೇಕು ಎಂದು ಎಐಡಿಎಸ್ಒ ರಾಜ್ಯ ಉಪಾಧ್ಯಕ್ಷೆ ಚಂದ್ರಕಲಾ ಕರೆ ನೀಡಿದರು.
ಇಂದು ನಿಟ್ಟೂರಿನ ಬಳಿ, ರಾಜ್ಯ ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಶಾಲಾ ಯೋಜನೆ ಅಡಿಯಲ್ಲಿ ಮುಚ್ಚುತ್ತಿರುವ ಹಂಗರಹಳ್ಳಿ , ನಾಗೇನಹಳ್ಳಿ, ರಂಗೇನ ಹಳ್ಳಿ, ಕೆಲವತ್ತಿ, ವೇದಾವತಿ, ಯಲಗುಂದ, ಹೊಸೂರು, ಸಿಂಗಟಗೆರೆ, ಸೊಪ್ಪಿನ ಹಳ್ಳಿ, ಲಿಂಗರಸನಹಳ್ಳಿ, ಬ್ರಹ್ಮದೇವರ ಹಳ್ಳಿ, ಉಬ್ಬೆನಹಳ್ಳಿ ಶಾಲೆಗಳನ್ನು ಉಳಿಸಲು ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿಟ್ಟೂರು ಹೋಬಳಿ ಮಟ್ಟದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದರು.

6 ಕಿ.ಮೀ. ವ್ಯಾಪ್ತಿಗೆ ಸೇರಿದಂತೆ ಗ್ರಾಮ ಪಂಚಾಯಿತಿಗೆ ಒಂದು ಶಾಲೆ ಎಂಬ KPS ಮ್ಯಾಗ್ನೆಟ್ ಯೋಜನೆ ಮೂಲಕ ರಾಜ್ಯ ಸರ್ಕಾರ 40,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ. ಸರ್ಕಾರಿ ಶಾಲೆಗಳಿಗೆ ಬೇಕಾದ ಮೂಲಸೌಕರ್ಯಗಳನ್ನು ಒದಗಿಸದೇ ಅಧೋಗತಿಗೆ ತಂದು, ಜನ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಿಲ್ಲ ಎಂದು ಸರ್ಕಾರವೇ ಅಪಪ್ರಚಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ವಿನಯ್ ಚಂದ್ರ ಅವರು ಮಾತನಾಡಿ, ಅಕ್ಟೋಬರ್ 15 ಹಾಗೂ ಡಿಸೆಂಬರ್ 30 2025 ರಂದು ರಾಜ್ಯ ಸರ್ಕಾರವು ಬಿಡುಗಡೆ ಮಾಡಿರುವ ಆದೇಶಗಳ ಪ್ರಕಾರ, ರಾಜ್ಯಾದಾದ್ಯಂತ ಗ್ರಾಮ ಪಂಚಾಯಿತಿಗೆ ಒಂದು ಸರ್ಕಾರಿ ಶಾಲೆಯಂತೆ, ಕೇವಲ ೬೦೦೦ ಶಾಲೆಗಳು ಉಳಿದು ೪೦,೦೦೦ ಸರ್ಕೆಕಾರಿ ಶಾಲೆಗಳು ನಶಿಸುವವು. ಅಂದರೆ, ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಐದು ಕಿಲೋಮೀಟರ್ ವ್ಯಾಪ್ತಿಯ ಉಳಿದ ಎಲ್ಲಾ ಸರ್ಕಾರಿ ಶಾಲೆಗಳನ್ನು ಕೊಲ್ಲುವ ಹುನ್ನಾರ ಇದಾಗಿದೆ. ಈಗಾಗಲೇ ಕಳೆದ 15 ವರ್ಷಗಳಲ್ಲಿ ರಾಜ್ಯ ಸರ್ಕಾರದ ಪ್ರಕಾರ 17 ಲಕ್ಷ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ದೂರಿದರು.

ಈ ಯೋಜನೆ ಪ್ರಕಾರ ನಮ್ಮ ರಾಜ್ಯದ ಲಕ್ಷಾಂತರ ರೈತ-ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಮತ್ತು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅಡಿ ವೃತ್ತಿಪರ ಶಿಕ್ಷಣವನ್ನು ಆರಂಬಿಸಲಾಗುವುದು. 6ನೇ ತರಗತಿಯಿಂದ ಮಕ್ಕಳಿಗೆ ಮಣ್ಣಿನ ಹಣತೆ ಮಾಡುವ, ಅಡಿಕೆ ಸುಲಿಯುವ ಕೌಶಲ್ಯಗಳನ್ನು ಕಲಿಸುವುದಾಗಿ ಶಿಕ್ಷಣ ಮಂತ್ರಿಗಳು ಬಹಿರಂಗಪಡಿಸಿದ್ದಾರೆ. ಕಾರ್ಮಿಕರ ಮಕ್ಕಳನ್ನು, ಕಾರ್ಮಿಕರನ್ನಗಿಯೇ ಉಳಿಸುವ ಕುತಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ಆರ್. ಪಿ ವೆಂಕಟೇಶ್ ಮೂರ್ತಿ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಬೇಕಾದ ಸರ್ಕಾರಗಳು ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ಮುಚ್ಚಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ಕೇಂದ್ರೀಕೃತ ಶಾಲೆಗಳನ್ನು ಮಾಡುವ ನೆಪದಲ್ಲಿ ಜನರ ಸ್ವಾತಂತ್ರ್ಯ ಕಸಿಯಲು ಹಾಗೂ ಮಹಾನ್ ವ್ಯಕ್ತಿಗಳ ಆಶಯಗಳನ್ನು ಗಾಳಿಗೆ ತೂರಲು ಮುಂದಾಗುತ್ತಿದ್ದಾರೆ. ಇದೇನ ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆ!!? ಎಲ್ಲಿವರೆಗೆ ಜನರ ಕೈಯಲ್ಲಿ ಅಧಿಕಾರ ಇರುವುದಿಲ್ಲವೋ ಅಲ್ಲಿವರೆಗೂ ಈ ಸರ್ಕಾರಗಳು ಈ ಜನವಿರೋಧಿ, ವಿದ್ಯಾರ್ಥಿ ವಿರೋಧಿ ನೀತಿಗಳನ್ನು ತರಲು ತುದಿಗಾಲಲ್ಲಿ ನಿಂತಿವೆ. ಶಾಲೆಗಳನ್ನು ಉಳಿಸಲು ನಡೆಯುತ್ತಿರುವ ಈ ಹೋರಾಟ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿದೆ. ಶಾಲೆಗಳು ಉಳಿಯುವರೆಗೂ ಹೋರಾಟ ನಡೆಯಲಿ ಎಂದು ಕರೆ ನೀಡಿದರು.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ರಾಜ್ಯ ಉಪಾಧ್ಯಕ್ಷರಾದ ವಿ. ಎನ್ ರಾಜಶೇಖರ್ ಅವರು ಮಾತನಾಡಿ, ಕೆ. ಪಿ.ಎಸ್ ಮ್ಯಾಗ್ನೆಟ್ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಏಶಿಯನ್ ಡೆವಲಪ್ಮೆಂಟ್ ಬ್ಯಾಂಕ್ ನಿಂದ 2500 ಕೋಟಿ ಸಾಲ ಪಡೆದಿರುವ ಉದ್ದೇಶ ಮತ್ತು ಷರತ್ತುಗಳೇನು ಎಂಬುದು ಜನರ ಮುಂದೆ ಸರ್ಕಾರ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಎಂ. ಕೃಷ್ಣ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶಿವಶಂಕರ್, ಬರಹಗಾರರಾದ ಅಪ್ಪಾಜಿಗೌಡ ಅವರು ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು.
ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜಾನಕಿ, ನಿಂಗರಾಜ, ಮಮತಾ, ನೀಲಮ್ಮ ಶಿವರುದ್ರಪ್ಪ , ಚಂದ್ರಶೇಖರ ಪ್ರವೀಣ್ ನಾಯ್ಕ, ಬಸವರಾಜು ಸದಸ್ಯರು ಹಾಗೂ ರಂಗೇನಹಳ್ಳಿ ಗ್ರಾಮದ ರೇವಣ್ಣ ಅವರು ಮಾತನಾಡಿದರು.
ಪ್ರಾಸ್ತವಿಕವಾಗಿ ಎಐಡಿಎಸ್ಓ ಹಾಸನ ಜಿಲ್ಲಾ ಅಧ್ಯಕ್ಷರು ಚೈತ್ರ ಅವರು ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಸುಷ್ಮಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಮಾವೇಶದಲ್ಲಿ ಹಾಸನ ಜಿಲ್ಲಾ ಕೌನ್ಸಿಲ್ ನ ಉಪಾಧ್ಯಕ್ಷರಾದ ಅಭಿಷೇಕ್ ಡಿ. ಪಿ, ಪದಾಧಿಕಾರಿಗಳಾದ, ಮಮತಾ, ಪುರುಷೋತ್ತಮ್, ಕಾರ್ಯಕರ್ತರಾದ ಧನು, ಧನಂಜಯ್, ರಾಕೇಶ್, ಶಿವು, ಭಾನು, 150ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು, ಗ್ರಾಮಸ್ಥರು ಭಾಗವಹಿಸಿದ್ದರು.
Hassan
ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ : ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂಸದ ಶ್ರೇಯಸ್ ಪಟೇಲ್
ನವದೆಹಲಿ: ಹಾಸನ ಜಿಲ್ಲೆಯಲ್ಲಿ ದಶಕಗಳಿಂದಲೂ ರೈತರನ್ನು ಕಾಡುತ್ತಿರುವ ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಪಟೇಲ್ ಅವರು ಇಂದು ದೆಹಲಿಯಲ್ಲಿ ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ಶೀಘ್ರದಲ್ಲೇ ಹಾಸನಕ್ಕೆ ಕೇಂದ್ರ ತಂಡ ಭೇಟಿ ಸಚಿವರೊಂದಿಗಿನ ಭೇಟಿಯ ನಂತರ, ಅರಣ್ಯ ವಿಭಾಗದ ಹೆಚ್ಚುವರಿ ಮಹಾ ನಿರ್ದೇಶಕರಾದ ರಮೇಶ್ ಕೆ. ಪಾಂಡೇ (IFS) ಅವರನ್ನು ಸಂಸದರು ಭೇಟಿ ಮಾಡಿದರು. ಸಚಿವರ ನಿರ್ದೇಶನದಂತೆ, ಹಾಸನ ಜಿಲ್ಲೆಯಲ್ಲಿನ ಪರಿಸ್ಥಿತಿಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ವೈಲ್ಡ್ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (WII) ತಂಡವು ಶೀಘ್ರದಲ್ಲೇ ಜಿಲ್ಲೆಗೆ ಭೇಟಿ ನೀಡಲಿದೆ ಎಂದು ಸಂಸದರು ತಿಳಿಸಿದರು.

ಈ ತಂಡವು ಜಿಲ್ಲೆಯ ಆನೆ ಕಾರಿಡಾರ್ಗಳ ಸ್ಥಿತಿಗತಿ ಮತ್ತು ಸಂಘರ್ಷ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಲಿದೆ. 7 ಗ್ರಾಮಗಳ ರೈತರಿಂದ ಸ್ವಯಂಪ್ರೇರಿತ ಜಮೀನು ಹಸ್ತಾಂತರ ಹಿಂದೆ ನಡೆದ ಟಾಸ್ಕ್ಫೋರ್ಸ್ ಕಮಿಟಿ ಸಭೆಯ ನಿರ್ಧಾರಗಳನ್ನು ಸಚಿವರ ಗಮನಕ್ಕೆ ತಂದ ಶ್ರೇಯಸ್ ಪಟೇಲ್ ಅವರು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಮತ್ತು ಆನೆಗಳ ಸಂಚಾರ ಅಧಿಕವಾಗಿರುವ ಕೆಳಕಂಡ 7 ಗ್ರಾಮಗಳನ್ನು ಯೋಜನೆಗೆ ಒಳಪಡಿಸುವಂತೆ ಒತ್ತಾಯಿಸಿದರು.
ಅರಣಿ, ಬೋರನಮನೆ, ಬಾಳೆಹಳ್ಳ, ಬೆಟ್ಟಕುಮರಿ, ಮಂಕನಹಳ್ಳಿ, ಯತ್ತಹಳ್ಳ, ಬಾಜಿ ಮನೆ ಎಸ್ಟೇಟ್ ಈ ಗ್ರಾಮಗಳಲ್ಲಿನ 416 ರೈತರು ತಮ್ಮ ಒಟ್ಟು 2261.21 ಎಕರೆ ಹಿಡುವಳಿ ಪ್ರದೇಶವನ್ನು ಸರ್ಕಾರಕ್ಕೆ ಬಿಟ್ಟುಕೊಡಲು ಸಿದ್ಧರಿದ್ದಾರೆ.
ಪರಿಹಾರಕ್ಕೆ ಆಗ್ರಹ
“ಈ 7 ಗ್ರಾಮಗಳ ರೈತರು ಆನೆಗಳ ಕಾಟದಿಂದ ಬೇಸತ್ತಿದ್ದು, ಸರ್ಕಾರವು ಪ್ರತಿ ಎಕರೆಗೆ ಕನಿಷ್ಠ 15 ಲಕ್ಷ ರೂ. ಪರಿಹಾರ ನೀಡಿದಲ್ಲಿ ತಕ್ಷಣವೇ ಜಮೀನು ಹಸ್ತಾಂತರಿಸಲು ಒಪ್ಪಿಗೆ ಸೂಚಿಸಿದ್ದಾರೆ. ಈ ಪ್ರಸ್ತಾವನೆ ಜಾರಿಯಾದಲ್ಲಿ ಆನೆಗಳಿಗೆ ಮುಕ್ತ ಸಂಚಾರಕ್ಕೆ ಅವಕಾಶ ಸಿಗಲಿದ್ದು, ರೈತರ ಪ್ರಾಣ-ಹಾನಿ ತಪ್ಪಿಸಬಹುದು,” ಎಂದು ಶ್ರೇಯಸ್ ಪಟೇಲ್ ತಿಳಿಸಿದರು.

ಹಾಸನ ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಈ ಯೋಜನೆಯನ್ನು ಕೇಂದ್ರ ಸರ್ಕಾರವು ಆದ್ಯತೆಯ ಮೇಲೆ ಪರಿಗಣಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.
Hassan
ಮಾಧ್ಯಮ ಸ್ವಾತಂತ್ರ್ಯ ಸದ್ಬಳಕೆಯಾಗಲಿ: ಎಎಸ್ಪಿ ತಮ್ಮಯ್ಯ
ಹಾಸನ: ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಸಾಂಸ್ಕೃತಿಕ ಸಮಿತಿ ವತಿಯಿಂದ ಅಪರಾಧ ಸುದ್ದಿ-ಪರಿಣಾಮಗಳು, ಸ್ಟಡೀ ವಿತ್ ಸೊಸೈಟಿ ಹೆಸರಿನಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಕೆ.ತಮ್ಮಯ್ಯ ಅವರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಮ್ಮಯ್ಯ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೇ ಸ್ತಂಭ ಎನಿಸಿರುವ ಮಾಧ್ಯಮ ರಂಗಕ್ಕೆ ಸಂವಿಧಾನದಲ್ಲೇ ರಕ್ಷಣೆ ಇದೆ. ಪತ್ರಿಕಾ ಸ್ವಾತಂತ್ರ್ಯ, ಅಭಿವ್ಯಕ್ತಿಗೆ ಸ್ವಾತಂತ್ರ್ಯ ಇದೆ. ಇದರ ಉದ್ದೇಶ ಅಧಿಕಾರದಲ್ಲಿರುವವರನ್ನು ಸದಾ ಎಚ್ಚರಿಸುವುದು, ಅವರು ಲೋಪ-ದೋಷ ಪ್ರಶ್ನೆ ಮಾಡುವುದಾಗಿದೆ ಎಂದರು.

ಆದರೆ ಬೇರೆ ಕಡೆಗಳಲ್ಲಿ ಈ ರೀತಿ ಇಲ್ಲ, ನಮ್ಮ ದೇಶದಲ್ಲಿ ಮಾಧ್ಯಮದವರೇ ತನಿಖಾ ವರದಿ ಮಾಡಬಹುದು, ಅದನ್ನು ಪ್ರಕಟ ಮಾಡಿ, ಹಂಚಿಕೆ ಮಾಡಲೂ ಬಹುದು. ಇದನ್ನು ಮಾಡಲು ಮಾಧ್ಯಮದವರಿಗೆ ಭಯ ಇರಬಾರದು, ಭಯ ಇದ್ದರೆ ಏನೂ ಮಾಡಲು ಆಗುವುದಿಲ್ಲ ಎಂದ ಅವರು, ಇತ್ತೀಚಿನ ದಿನ ಮಾನಗಳಲ್ಲಿ ಒಂದಲ್ಲ, ಒಂದು ಮಾಧ್ಯಮಗಳು ಉಳ್ಳವರ ನಿಯಂತ್ರಣದಲ್ಲಿವೆ. ಅಂದರೆ ಮಾಧ್ಯಮಗಳನ್ನೂ ನಿಯಂತ್ರಣ ಮಾಡಲಾಗುತ್ತಿದೆ. ಇನ್ನೂ ಕೆಲವು ಕಡೆ ರಾಜಕೀಯ ಒತ್ತಡ ಇದೆ. ಆರ್ಥಿಕ ಸ್ಥಿತಿಗತಿ ಸದೃಢವಾಗಿಲ್ಲ ಜೊತೆಗೆ ಭಯದ ವಾತಾವರಣವೂ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಸಮಾಜದಲ್ಲಿ ಮೀಡಿಯಾ ವಿಚಾರಣೆ ಒಳ್ಳೆಯದಲ್ಲ, ಸಂದರ್ಶನ ಮಾಡುವಾಗ ಹುಷಾರು, ಯಾವುದೇ ಸಂದರ್ಭದಲ್ಲೂ ಜನರ ಭಾವನೆಗಳನ್ನು ಮಿಸ್ ಗೈಡ್ ಮಾಡಬಾರದು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಂಶೋಧನಾತ್ಮಕ ವರದಿಗಾರಿಕೆಗೆ ಹೆಚ್ಚಿನ ಒತ್ತು ನೀಡಬೇಕು ಸಲಹೆ ನೀಡಿದರು.

ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಸರ್ಕಾರಿ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಭವ್ಯಾ ನವೀನ್ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನಿಸಿರುವ ಪ್ರತಿಕೋದ್ಯಮದ ಮೂಲ ಆಶಯವೇ ಸಮಾಜ ಮತ್ತು ಕಲಿಕೆ ಆಗಿದೆ. ಆದರೆ ಆರಂಭದ ಪತ್ರಿಕೋದ್ಯಮ, ಹಾಲಿ ಕಲಿಯುತ್ತಿರುವ, ಪತ್ರಿಕೋದ್ಯಮ ಕಲಿಸುತ್ತಿರುವ/ಅಸ್ತಿತ್ವದಲ್ಲಿರುವ ಪತ್ರಿಕೋದ್ಯಮ ವ್ಯತಿರಿಕ್ತವಾಗಿದೆ. ನನ್ನ ಪ್ರಕಾರ ಮೂರು ಕಾಲಘಟ್ಟದ ಪತ್ರಿಕೋದ್ಯಮದ ಆಶಯಗಳು ಒಂದೇ ಆದರೆ, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಅನುಕೂಲ ಆಗಲಿದೆ. ಪತ್ರಿಕೋದ್ಯಮ ಪ್ರಾಯೋಗಿಕ ಕಲಿಕೆಗೆ ಪೂರಕ ಆಗಿರಲಿ ಎಂದು ಆಶಿಸಿದರು.
ಇಡೀ ಕರ್ನಾಟದಲ್ಲಿ ಹೆಚ್ಚು ಪತ್ರಿಕೋದ್ಯಮ ಕಲಿಸುವ ಕಾಲೇಜು ಇರುವುದು ಹಾಸನದಲ್ಲಿ. ಹಾಗೆಯೇ ವಿದ್ಯಾರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗೆಯೇ ರಾಜ್ಯದಲ್ಲೇ ಗಟ್ಟಿಯಾದ ಸಂಘ ಮತ್ತು ಹಿರಿಯ ಪತ್ರಕರ್ತರಿರುವುದು ಹಾಸನದಲ್ಲೇ. ಈ ಎಲ್ಲರಿಂದ ಭವಿಷ್ಯದಲ್ಲಿ ಜಿಲ್ಲೆಯಿಂದ ಉತ್ತಮ ಪತ್ರಕರ್ತರು ಹೊರ ಬರುವಂತಾಗಲಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್.ಕೆಂಚೇಗೌಡ ಅವರು, ಎಎಸ್ಪಿ ತಮ್ಮಯ್ಯ ಅವರು ಅಪರಾಧ ಪ್ರಕರಣಗಳ ವರದಿಗಾರಿಕೆ, ಮುನ್ನೆಚ್ಚರಿಕೆ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ ಎಂದರು.
ವಿಶ್ವದಲ್ಲಿ ಭಾರತ ಪತ್ರಿಕೋದ್ಯಮದಲ್ಲಿ ೧೫೯ನೇ ಸ್ಥಾನದಲ್ಲಿದೆ. ಇದಕ್ಕೆ ಮಾಧ್ಯಮ ಬಂಡವಾಳ ಶಾಹಿಗಳ ಹಿಡಿತ, ರಾಜಕೀಯ ವ್ಯವಸ್ಥೆ, ಸಂಸ್ಥೆಗಳ ಆರ್ಥಿಕ ಸ್ಥಿತಿಗತಿ ಇದಕ್ಕೆ ಕಾರಣ ಎಂದರು.
ನಾವೆಲ್ಲರೂ ವೃತ್ತಿ ಬದ್ಧತೆಯಿಂದ ಕೆಲಸ ಮಾಡೋಣ, ಮಕ್ಕಳು ಸಾಕಷ್ಟು ಕನಸು ಹೊತ್ತು ಈ ಕ್ಷೇತ್ರಕ್ಕೆ ಬಂದಿರುತ್ತೀರಿ, ಕ್ರೀಯಾತ್ಮಕವಾಗಿ ಕೆಲಸ ಮಾಡಿ, ಅದಕ್ಕೆ ತಕ್ಕುದಾದ ಸಂಭಾವನೆ, ಗೌರವ ಇದೆ. ಸೈದ್ಧಾಂತಿಕ ನಿಯಮ ಸ್ಪಷ್ಟವಾಗಿರಲಿ ಎಂದರು.
ಸಾಂಸ್ಕೃತಿಕ ಸಮಿತಿಯ ಪ್ರಸನ್ನ ಕುಮಾರ್(ಚಲಂ) ಸ್ಟಡೀ ವಿತ್ ಸೊಸೈಟಿ, ಕಲಿಕೆಯ ಒಂದು ತಾಣ, ಈ ಕಾಲಘಟ್ಟದಲ್ಲಿ ನಾವು ನಿತ್ಯ ಕಲಿಯಬೇಕಿದೆ ಅದಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಕೆ.ಎಂ.ಹರೀಶ್, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಉಪಾಧ್ಯಕ್ಷರಾದ ಎನ್.ನಂಜುಂಡೇಗೌಡ, ಜಿ.ಪ್ರಕಾಶ್, ಸಾಂಸ್ಕೃತಿಕ ಸಮಿತಿಯ ಸದಸ್ಯರು ಇದ್ದರು. ಚೈತ್ರಾ ಮಹಾಲಿಂಗು ನಿರೂಪಿಸಿದರು. ಮಲ್ಲಿಕಾರ್ಜುನ್ ಕೊಚ್ಚರಗಿ ಸ್ವಾಗತಿಸಿದರು. ಕಡೆಯಲ್ಲಿ ತಮ್ಮಯ್ಯ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
Hassan
ಬಾರ್ನಲ್ಲಿ ಕುಡಿಯುವಾಗ ಕ್ಷುಲ್ಲಕ ವಿಚಾರಕ್ಕೆ ಯುವಕರ ನಡುವೆ ಗಲಾಟೆ
ಹಾಸನ : ನಗರದ ಸಂತೇಪೇಟೆಯಲ್ಲಿರುವ ಪ್ರಿಯದರ್ಶಿನಿ ಬಾರ್ನಲ್ಲಿ ಕುಡಿಯುವಾಗ ಕ್ಷುಲ್ಲಕ ವಿಚಾರಕ್ಕೆ ಯುವಕರ ನಡುವೆ ಗಲಾಟೆ ನಡೆದಿದ್ದು, ಇಬ್ಬರಿಗೆ ಗಾಯವಾಗಿ, ಒಂದು ಕಾರು ಜಖಂಗೊಂಡಿರುವ ಘಟನೆ ನಡೆದಿದೆ.
ಮೊಹಮದ್ ಜುನೈದ್, ಶಾಹಿದ್ ಹಲ್ಲೆಗೊಳಗಾದ ಯುವಕರು.

ಮೊಹಮದ್ ಜುನೈದ್ ಹಾಗೂ ಶಾಹಿದ್ ಅವರು ಮದ್ಯ ಸೇವಿಸುತ್ತಾ ಜೋರಾಗಿ ಮಾತನಾಡುತ್ತಿದ್ದರು. ಇವರಿಗೆ ನಿಧಾನವಾಗಿ ಮಾತನಾಡುವಂತೆ ಪವನ್ ಹಾಗೂ ನಿತಿನ್ ಎಂಬುವವರು ಹೇಳಿದ್ದಾರೆ. ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ತಾರಕಕ್ಕೇರಿದೆ.
ಈ ಜಗಳದಲ್ಲಿ ಬಿಯರ್ ಬಾಟೆಲ್ಗಳಿಂದ ಮೊಹಮದ್ ಜುನೈದ್, ಶಾಹಿದ್ ಮೇಲೆ ಪವನ್ ಹಾಗೂ ನಿತಿನ್ರಿಂದ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ನಂತರ ಪವನ್, ನಿತಿನ್ ತೆರಳುತ್ತಿದ್ದಾಗ ಮೊಹಮದ್ ಜುನೈದ್ ಹಾಗೂ ಶಾಹಿದ್ ಅವರು ಕಾರು ಅಡ್ಡ ಹಾಕಿ ಜಖಂಗೊಳಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ.
ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಈ ಘಟನೆ ಪೆನ್ಷನ್ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ದೂರಿನ ಜೊತೆಗೆ ಪ್ರತಿದೂರು ದಾಖಲಾಗಿದೆ.
-
Cinema20 hours ago17 ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದ ಕನ್ನಡ ಚಿತ್ರ ಸ್ಪರ್ಧಾ ವಿಭಾಗದಲ್ಲಿ ಬಡಿಗೇರ್ ದೇವೇಂದ್ರ ನಿರ್ದೇಶನದ “ವನ್ಯಾ” ಚಿತ್ರ ಪ್ರದರ್ಶನ
-
Hassan60 minutes agoಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ : ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂಸದ ಶ್ರೇಯಸ್ ಪಟೇಲ್
-
Hassan1 hour agoಮಾಧ್ಯಮ ಸ್ವಾತಂತ್ರ್ಯ ಸದ್ಬಳಕೆಯಾಗಲಿ: ಎಎಸ್ಪಿ ತಮ್ಮಯ್ಯ
-
State4 hours agoಸಿಎಂ ಹೌದು ಹುಲಿಯಾ ಆಗಿಲ್ಲ, ಹೌದು ಇಲಿಯಾ ಆಗಿದ್ದಾರೆ: ಆರ್.ಅಶೋಕ್
-
Mandya5 hours agoಎಂ. ಅಂಕೇಗೌಡರ ಪುಸ್ತಕ ಪ್ರೀತಿ ಇಂದಿನ ಯುವ ಪೀಳಿಗೆಗೆ ಮಾದರಿ : ಡಾ.ಮಾನಸ
-
Manglore15 minutes agoಜಿ.ಎಲ್. ಟ್ರೋಫಿ-2026: ಜಿ.ಎಲ್. ಹಾಸನ ತಂಡ ಚಾಂಪಿಯನ್
-
National3 hours ago17ನೇ ಬೆಂಗಳೂರು ಚಿತ್ರೋತ್ಸವದಲ್ಲಿ ತಾಯಿ-ಮಗನ ಸಂಬಂಧದ ʼಅಮ್ಮಂಗೆ ಹೇಳ್ಬೇಡʼ ಚಿತ್ರ ಪ್ರದರ್ಶನ
-
Hassan23 hours agoವಿಜೃಂಭಣೆಯಿಂದ ಜರುಗಿದ ಡೆಕ್ಕನ್ ವ್ಯಾಲಿ ಇಂಟರ್ ನ್ಯಾಷನಲ್ ಶಾಲೆಯ 7ನೇ ವರ್ಷದ ವಾರ್ಷಿಕೋತ್ಸವ
