Mysore
ಮಾನವೀಯತೆ ಮೆರೆದ ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್
ನಂಜನಗೂಡು : ನಗರದ ಕಪಿಲಾ ನದಿಯ ಸುಳಿಗೆ ಸಿಲುಕಿ ಮೂವರು ಅಯ್ಯಪ್ಪಸ್ವಾಮಿ ಮಾಲಧಾರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೆಜ್ಜಿಗೆ ಗ್ರಾಮದ ಸೇತುವೆ ಬಳಿ ಸ್ನಾನ ಮಾಡಲು ನದಿಗೆ ಇಳಿದ ಐವರ ಪೈಕಿ ಮೂವರು ನೀರು ಪಾಲಾಗಿ ಇನ್ನುಳಿದ ಇಬ್ಬರು ಬದುಕುಳಿದಿದ್ದಾರೆ. ತುಮಕೂರು ಮೂಲದ 19 ವರ್ಷದ ಗವಿ ರಂಗ 19 ವರ್ಷದ ರಾಕೇಶ್ 16 ವರ್ಷದ ಅಪ್ಪು, ಅಯ್ಯಪ್ಪ ಮಾಲಧಾರಿಗಳು ಕಪಿಲಾ ನದಿಯಲ್ಲಿ ಜೀವ ಕಳೆದುಕೊಂಡಿದ್ದಾರೆ.

ಅಯ್ಯಪ್ಪನ ದರ್ಶನ ಮುಗಿಸಿಕೊಂಡು ತಡರಾತ್ರಿ ದಕ್ಷಿಣ ಕಾಶಿ ನಂಜನಗೂಡಿನ ಶ್ರೀ ನಂಜುಂಡೇಶ್ವರನ ದರ್ಶನ ಮಾಡುವ ಸಲುವಾಗಿ ಆಗಮಿಸಿದ ಅಯ್ಯಪ್ಪ ಭಕ್ತರು, ಸ್ನಾನ ಮಾಡಿ ನಂಜನಗೂಡಿನ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ದರ್ಶನ ಮಾಡುವ ಸಲುವಾಗಿ ಸ್ನಾನಕ್ಕೆಂದು ಕಪಿಲಾ ನದಿಯ ಹೆಜ್ಜೆಗೆ ಸೇತುವೆಯ ಬಳಿ 5 ಜನ ಮಾಲಧಾರಿಗಳು ನೀರಿಗಿಳಿದು ಸುಳಿಗೆ ಸಿಲುಕಿದ ಪರಿಣಾಮ ಮೂವರು ಮೇಲೆ ಬರಲಾಗದೆ ಮೃತಪಟ್ಟರೆ, ಇಬ್ಬರು ಜೀವ ರಕ್ಷಿಸಿಕೊಂಡಿದ್ದಾರೆ.
ನಂಜನಗೂಡಿನ ಅಗ್ನಿಶಾಮಕ ದಳದ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಮೃತಪಟ್ಟ ದೇಹವನ್ನು ಹೊರಗೆ ತೆಗೆದಿದ್ದಾರೆ. ಡಿವೈಎಸ್ಪಿ ಗೋವಿಂದರಾಜು, ಪಿಎಸ್ಐ ಬಸವರಾಜು ಮತ್ತು ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣವನ್ನು ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಿಕೊಂಡಿದ್ದಾರೆ.

ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಶಾಸಕ ದರ್ಶನ್ ಧ್ರುವ ನಾರಾಯಣ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಸ್ಥಳದಲ್ಲಿಯೇ ಕಣ್ಣೀರಿಟ್ಟು ಮೂವರಿಗೆ ವೈಯಕ್ತಿಕ ಪರಿಹಾರ ನೀಡಿ ಉಚಿತ ವಾಹನದ ವ್ಯವಸ್ಥೆಯನ್ನು ಕಲ್ಪಿಸಿ ಮೃತದೇಹವನ್ನು ಸ್ವಗ್ರಾಮಕ್ಕೆ ಶವಗಳು ತೆರಳಲು ಅನುವು ಮಾಡಿಕೊಟ್ಟರು. ಶಾಸಕ ದರ್ಶನ್ ಧ್ರುವ ನಾರಾಯಣ್ ರವರ ಮಾನವೀಯ ಕಳಕಳಿಯನ್ನು ಸ್ಥಳದಲ್ಲಿ ಗಮನಿಸಿದ ಜನತೆ ಕ್ಷಣ ಕಾಲ ಮೌನಕ್ಕೆ ಶರಣಾದರು.

Mysore
ಹೊನ್ನಾರುತಿ ದೇಗುಲದ ತಂತಿಬೇಲಿ ಕಾರ್ಯ ಪೂರ್ಣ ಗೊಳಿಸಿದ ಗ್ರಾಮಸ್ಥರು
ತಿ.ನರಸೀಪುರ: ತಾಲೂಕಿನ ಹೆಗ್ಗೂರು ಗ್ರಾಮದ ಶ್ರೀ ಹೊನ್ನಾರುತಿ ಅಮ್ಮನವರ ದೇಗುಲದ ಸುತ್ತಲೂ ತಂತಿಬೇಲಿ ಅಳವಡಿಸುವ ಕಾರ್ಯವನ್ನು ಹೆಗ್ಗೂರು ಗ್ರಾಮದ ಸರ್ವಜನಾಂಗದ ಜನರು ಸೇರಿ ಪೂರ್ಣಗೊಳಿಸಿದರು.
ಹೆಗ್ಗೂರು ಗ್ರಾಮದ ಪ್ರಾಚೀನ ದೇವಾಲಯಗಳಲ್ಲಿ ಒಂದಾದ ಶ್ರೀ ಹೊನ್ನಾರುತಿ ದೇವಾಲಯಕ್ಕೆ ತಂತಿ ಬೇಲಿ ಅಳವಡಿಸುವ ಕುರಿತು ಗ್ರಾಮದ ಸರ್ವ ಜನಾಂಗದ ಜನರು ಹಲವು ಸಭೆ ಸೇರಿ ತಂತಿಬೇಲಿ ಅಳವಡಿಸಲು ಒಮ್ಮತದ ನಿರ್ಧಾರ ಮಾಡಿದ್ದರು.

ಮಾದಿಗ ಸಮುದಾಯಕ್ಕೆ ಸೇರಿದ ದೇಗುಲದ ಸುತ್ತಲೂ ಅನ್ಯಕೋಮಿನ ಕೆಲವು ವ್ಯಕ್ತಿಗಳು ಅತಿಕ್ರಮವಾಗಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ದನಕರುಗಳನ್ನು ಕಟ್ಟಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಹೆಗ್ಗೂರು,ಕುಪ್ಯ, ಸಿದ್ದನಹುಂಡಿ,ಹೂವಿನಕೊಪ್ಪಲು, ತಲಕಾಡು ಮತ್ತು ಬೆಂಗಳೂರು ಸೇರಿದಂತೆ ಶ್ರೀ ಹೊನ್ನಾರುತಿ ದೇವರ ಒಕ್ಕಲಿನ ಹಲವು ಜನರ ಮನವಿ ಮೇರೆಗೆ ಗ್ರಾಮದ ಸರ್ವ ಜನಾಂಗದ ಜನರು ಸಭೆ ಸೇರಿ ದೇಗುಲಕ್ಕೆ ಭದ್ರತೆ ಒದಗಿಸಲು ತಂತಿ ಬೇಲಿ ಅಳವಡಿಸಿಕೊಳ್ಳುವಂತೆ ನಿರ್ಣಯಿಸಲಾಗಿತ್ತು.
ಹಾಗಾಗಿ ಕಳೆದ ಎರಡು ದಿನಗಳಿಂದ ಹೊನ್ನಾರುತಿ ದೇವರ ಒಕ್ಕಲಿನ ಜನರು ಮತ್ತು ಹೆಗ್ಗೂರು ಗ್ರಾಮದ ಜನರು ಸೇರಿಕೊಂಡು ದೇಗುಲಕ್ಕೆ ತಂತಿಬೇಲಿ ಹಾಕುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಸತತ ಎರಡು ದಿನಗಳ ಕಾಲ ನಡೆದ ತಂತಿಬೇಲಿ ಅಳವಡಿಸುವ ಕಾರ್ಯದಲ್ಲಿ ವಯೋವೃದ್ಧರು, ಯುವಕರು ಶ್ರಮದಾನ ಮಾಡಿದರು.

ಇದೇ ವೇಳೆ ಶ್ರೀ ಹೊನ್ನಾರುತಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಸಿದ್ದನಹುಂಡಿ ಎನ್.ಮಲ್ಲಯ್ಯ ಮಾತನಾಡಿ, ಹಲವು ದಶಕಗಳ ಐತಿಹಾಸಿಕ ಹಿನ್ನಲೆಯುಳ್ಳ ದೇವಾಲಯದ ಜಾಗ ನಿರ್ಣಯಕ್ಕೆ ಹೆಗ್ಗೂರು ಗ್ರಾಮದಲ್ಲಿ ಸರ್ವ ಜನಾಂಗದ ಸಭೆಯನ್ನು ಹಲವು ಬಾರಿ ಕರೆಯಲಾಗಿತ್ತು. ಆದರೆ, ಇದೇ ಗ್ರಾಮದ ಕೆಲವು ವ್ಯಕ್ತಿಗಳು ತಮ್ಮ ಸ್ವಹಿತಾಸಕ್ತಿಗಾಗಿ ದೇವಾಲಯದ ಜಾಗ ನಿರ್ಣಯಕ್ಕೆ ತೊಂದರೆ ಕೊಡುತ್ತಾ ಬಂದಿದ್ದರು.
ಈಗ ಗ್ರಾಮದ ಎಲ್ಲ ಸಮುದಾಯದವರ ಸಹಕಾರದೊಂದಿಗೆ ಸೇರಿ ನಮ್ಮ ದೇವಾಲಯದ ಜಾಗಕ್ಕೆ ತಂತಿ ಬೇಲಿ ಅಳವಡಿಸಿಕೊಂಡಿದ್ದೇವೆ. ಈ ಕಾರ್ಯಕ್ಕೆ ಸಹಕಾರ ನೀಡಿದ ಎಲ್ಲ ಸಮುದಾಯದ ಜನರಿಗೆ ನಮ್ಮ ಸಮುದಾಯವು ಚಿರಋಣಿಯಾಗಿರುತ್ತದೆ ಎಂದು ಹೇಳಿದರು.
ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕುಪ್ಯ ಶಂಭಯ್ಯ,ಪ್ರಧಾನ ಕಾರ್ಯದರ್ಶಿ ಬೆಂಗಳೂರಿನ ಕೆ.ವೆಂಕಟೇಶ್ ಕುಮಾರ್,ಉಪ ಕಾರ್ಯದರ್ಶಿ ಹೆಗ್ಗೂರು ರಾಮಕೃಷ್ಣ, ಹೆಗ್ಗೂರು ಕೆಂಪಯ್ಯ, ಹೂವಿನಕೊಪ್ಪಲು ಯಜಮಾನ ನಂಜುಂಡಯ್ಯ ಸೇರಿದಂತೆ ಹಲವು ಗ್ರಾಮದ ಮುಖಂಡರು, ಯುವಕರು ಮತ್ತು ಗ್ರಾಮಸ್ಥರು ಹಾಜರಿದ್ದರು.
Mysore
ಸಿಮ್ ದುರ್ಬಳಕೆ ನೆಪದಲ್ಲಿ 82 ಲಕ್ಷ ರೂ. ದೋಖಾ: ಸೈಬರ್ ಠಾಣೆಗೆ ದೂರು ನೀಡಿದ ವೈದ್ಯ
ಮೈಸೂರು: ನಿಮ್ಮ ಹೆಸರಿನಲ್ಲಿ ಮೊಬೈಲ್ ಫೋನ್ ಸಿಮ್ ದುರ್ಬಳಕೆ ಆಗಿದೆ ಎಂದು ಬೆದರಿಸಿ ವೈದ್ಯರೊಬ್ಬರಿಂದ ಬರೋಬ್ಬರಿ 82 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.
ಮೈಸೂರಿನ ವಿಜಯನಗರ 1ನೇ ಹಂತದ ನಿವಾಸಿ, ವೈದ್ಯ ಡಾ.ರಾಜೀವ್ ಹಣ ಕಳೆದುಕೊಂಡವರು.
ಆಗಿದ್ದೇನು?
ರಾಜೀವ್ ಅವರ ಮೊಬೈಲ್ ಫೋನ್ಗೆ ನವೆಂಬರ್. 1ರಂದು ಕರೆ ಮಾಡಿದ ಅಪರಿಚಿತ ವ್ಯಕ್ತಿ, ತನ್ನನ್ನು ಟೆಲಿಕಾಮ್ ರೆಗ್ಯುಲೇಟರಿ ಆಫ್ ಇಂಡಿಯಾದ ನೋಟಿಫೀಕೇಷನ್ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಮಿತ್ ಶ್ಯಾಮ್ ಎಂದು ಪರಿಚಯ ಮಾಡಿಕೊಂಡಿದ್ದಾನೆ.

ನಿಮ್ಮ ಹೆಸರಿನಲ್ಲಿರುವ ಮೊಬೈಲ್ ಫೋನ್ ಸಿಮ್ ಕಾರ್ಡ್ವೊಂದು ಅಪರಾಧ ಕೃತ್ಯಗಳಿಗೆ ಬಳಕೆಯಾಗಿದೆ. ಈ ಬಗ್ಗೆ ಮಹಾರಾಷ್ಟçದ ಮುಂಬೈನಲ್ಲಿರುವ ಬಾಂದ್ರಾ ಪೊಲೀಸ್ ಠಾಣೆಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದ್ದಾನೆ. ಆತನ ಮಾತು ನಂಬಿ ಡಾ.ರಾಜೀವ್ ವಿಡಿಯೋ ಕರೆ ಮಾಡಿದ್ದು, ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಂಡ ವ್ಯಕ್ತಿ ಮಾತನಾಡಿದ್ದಾನೆ.
ನಿಮ್ಮ ಮೊಬೈಲ್ ಸಂಖ್ಯೆಯಿಂದ ಅಶ್ಲೀಲ ವಿಡಿಯೋ, ಕಾನೂನುಬಾಹಿರ ಜಾಹೀರಾತು ಹಾಗೂ ಬೆದರಿಕೆ ಕರೆಗಳನ್ನು ಮಾಡಿ ಮುಂಬೈ ಸಾರ್ವಜನಿಕರಿಗೆ ತೊಂದರೆ ನೀಡಲಾಗಿದೆ. ನಿಮ್ಮ ಖಾತೆಯಿಂದ 2 ಕೋಟಿ ಹಣ ಚಲಾವಣೆ ಆಗಿದೆ. ಮನಿ ಲಾಂಡ್ರಿAಗ್ ಪ್ರಕರಣದಲ್ಲಿ ನಿಮ್ಮ ಹಾಗೂ ನಿಮ್ಮ ಪತ್ನಿಯನ್ನು ಅರೆಸ್ಟ್ ಮಾಡುವುದಾಗಿ ಬೆದರಿಸಿದ್ದಾನೆ.

ಆಸ್ತಿ ವಿವರಗಳ ಪರಿಶೀಲನೆ ನೆಪದಲ್ಲಿ ಬ್ಯಾಂಕ್ ಖಾತೆಗಳ ಮಾಹಿತಿ ಪಡೆದುಕೊಂಡು ಯೂನಿಯನ್ ಬ್ಯಾಂಕ್ ಖಾತೆಯಿಂದ 11.10 ಲಕ್ಷ ರೂ., ಆಕ್ಸಿಸ್ ಬ್ಯಾಂಕ್ನಿಂದ 33 ಲಕ್ಷ ರೂ., ಇಂಡಸ್ಇಂದ್ ಬ್ಯಾಂಕ್ನಿಂದ 38 ಲಕ್ಷ ರೂ. ಸೇರಿ ಹಂತ ಹಂತವಾಗಿ 82 ಲಕ್ಷ ರೂ. ಹಣ ಕಸಿದುಕೊಳ್ಳಲಾಗಿದೆ.
ಬೆದರಿಸಿ ಹಣ ವಸೂಲಿ ಮಾಡಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಾ.ರಾಜೀವ್ ಅವರು ದೂರು ನೀಡಿದ್ದು, ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mysore
ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ಗೆ ಚಾಲನೆ
ಮೈಸೂರು: ನಗರದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ (ಎಸ್ಐಎಚ್) ಎರಡು ದಿನಗಳ ಸಾಫ್ಟ್ವೇರ್ ಆವೃತ್ತಿಗೆ ಉದ್ಯಮಿ ರೋಹಿತ್ ಆರಾಧ್ಯ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕೇವಲ ಜ್ಞಾನ ಇದ್ದರೆ ಪ್ರಯೋಜನ ಆಗಲಾರದು ಎನ್ನುವ ಹಂತದ ತಾಂತ್ರಿಕ ಪರಿವರ್ತನೆಯ ಅಂಚಿಗೆ ಜಗತ್ತು ಬಂದು ನಿಂತಿದೆ. ಈಗ ಯಾವುದೇ ಮಾಹಿತಿ ನಮ್ಮ ಬೆರಳ ತುದಿಯಲ್ಲಿ ಲಭ್ಯವಿದೆ. ನೀವು ಅದನ್ನು ಹೇಗೆ ಬಳಸುತ್ತೀರಿ, ನೀವು ಹೇಗೆ ಮೌಲ್ಯವನ್ನು ಸೇರಿಸುತ್ತೀರಿ, ನಿಮ್ಮ ಆಲೋಚನೆಗಳನ್ನು ಎಷ್ಟು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುತ್ತೀರಿ ಎಂಬುದು ಮುಖ್ಯ ಎಂದರು.

ಯಶಸ್ಸು ಗಳಿಸಬೇಕಾದರೆ ಶೇ.5ರಷ್ಟು ಮಾತ್ರ ಕಲ್ಪನೆ ಮಾಡಿಕೊಳ್ಳಬೇಕು, ಶೇ.95ರಷ್ಟು ಕಲ್ಪನೆಯ ಕಾರ್ಯಗತಗೊಳಿಸುವಿಕೆಗೆ ಮೀಸಲು ಇಡಬೇಕು. ಆಗ ಮಾತ್ರ ಯಶಸ್ಸು ದೊರೆಯುತ್ತದೆ. ಭಾರತೀಯ ಮಾರುಕಟ್ಟೆ ವಿಶಿಷ್ಟ ಮತ್ತು ಭಾವನಾತ್ಮಕವಾಗಿದೆ. ಉತ್ಪನ್ನದ ಯಶಸ್ಸು ಸಂಕೀರ್ಣತೆಯ ಮೇಲೆ ಅವಲಂಬಿತವಾಗಿಲ್ಲ, ಬದಲಿಗೆ ಸರಳತೆ ಮತ್ತು ಪ್ರಸ್ತುತತೆಯ ಮೇಲೆ ಅವಲಂಬಿತವಾಗಿದೆ. ಅಜ್ಞಾತ ಸಮಸ್ಯೆಯನ್ನು ಗುರುತಿಸುವುದು ದೊಡ್ಡ ಸವಾಲು ಎಂದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣನವರ್, ಎಐಸಿಟಿಇ ಪ್ರತಿನಿಧಿ ಅಖಿಲೇಶ್ ಕುಮಾರ್ ಸಿಂಗ್, ವಿವಿಸಿಇ ಉಪಪ್ರಾಂಶುಪಾಲರಾದ ಶೋಭಾ ಶಂಕರ್, ಆದಿತ್ಯ ಸಿ.ಆರ್., ನೋಡಲ್ ಸೆಂಟರ್ ಪ್ರಭಾರಿ ನಿತಿನ್ ಕುಮಾರ್ ಮುಂತಾದವರಿದ್ದರು.
-
Mysore21 hours agoಉದ್ಯಮಿ ಅಪಹರಿಸಿ ಕೋಟಿ ರೂ.ಗಳಿಗೆ ಡಿಮ್ಯಾಂಡ್: ನಾಲ್ವರ ಬಂಧನ
-
Mandya5 hours agoಡಿ 10 ಶ್ರೀರಂಗಪಟ್ಟಣ ಸೇರಿದಂತೆ ವಿವಿದೆಡೆ ವಿದ್ಯುತ್ ಕಡಿತ
-
Mysore24 hours agoಬಸ್ ನಿಲ್ದಾಣಕ್ಕೆ ಕಾರು ಡಿಕ್ಕಿ: ಚಾಲಕನಿಗೆ ಗಂಭೀರ ಗಾಯ
-
Special19 hours agoಮಹಿಳೆಯರಿಗೆ ದೊಡ್ಡ ಅವಕಾಶ! ಅಂಗನವಾಡಿಯ 571 ಹುದ್ದೆಗಳಿಗೆ ಅರ್ಜಿ ಅಹ್ವಾನ.
-
Hassan30 minutes agoಜಿಲ್ಲಾ ಮಟ್ಟದ ಅಂತರಶಾಲಾ ಚೆಸ್ ಸ್ಪರ್ಧೆ ಯಶಸ್ವಿ
-
Mysore6 hours agoಡಾ.ಬಿ.ಆರ್. ಅಂಬೇಡ್ಕರ್ 69ನೇ ಮಹಾ ಪರಿನಿಬ್ಬಾಣ ದಿನ: ಸೇವಾ ಕಾರ್ಯದೊಂದಿಗೆ ಗೌರವ ನಮನ
-
Hassan23 hours agoHKS PUC ಕಾಲೇಜಿನಲ್ಲಿ ಜರುಗಿದ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ ಸಮಾರೋಪ ಸಮಾರಂಭ
-
Kodagu2 hours agoಸಂವಿಧಾನದ ರಕ್ಷಣೆ ನಮ್ಮೆಲ್ಲರ ಹೊಣೆ : ಗಾಯತ್ರಿ ನರಸಿಂಹ
