Mandya
ದಕ್ಷಿಣ ಶಿಕ್ಷಕರ ಕ್ಷೇತ್ರ: ಅರ್ಹ ಮತದಾರರು ಹೆಸರು ನೊಂದಾಯಿಸಿಕೊಳ್ಳಲು ಮೇ 6 ರವರೆಗೆ ಅವಕಾಶ: ಡಾ:ಕುಮಾರ

ಮಂಡ್ಯ : ಕರ್ನಾಟಕ ವಿಧಾನ ಪರಿಷತ್ತಿಗೆ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ನಡೆಯುವ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯಲ್ಲಿ ಈಗಾಗಲೇ ಅರ್ಹ ಶಿಕ್ಷಕ ಮತದಾರರ ಪರಿಷ್ಕರಣೆ ನಡೆಸಿ ಡಿಸೆಂಬರ್ 30 ರಂದು ಅರ್ಹ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಮೇ 6 ರ ಸಂಜೆ 5.00 ಗಂಟೆಯ ವರೆಗೆ ಅರ್ಹ ಶಿಕ್ಷಕರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಹತೆ ಹೊಂದಿರುವ ಶಿಕ್ಷಕರು ಅಥವಾ ಹೆಸರು ಬಿಟ್ಟಿ ಹೋಗಿರುವವರು ಆಯಾ ತಾಲ್ಲೂಕು ಕಚೇರಿಗಳಲ್ಲಿ ನೋಂದಾಯಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷದ ಮುಖಂಡರ ಸಭೆ ನಡೆಸಿ ಮಾತನಾಡಿದರು. ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯ ವೇಳಪಟ್ಟಿ ಪ್ರಕಟವಾಗಿದ್ದು, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಚುನಾವಣಾಧಿಕಾರಿಗಳಾಗಿದ್ದು, ಮೇ 9 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು ಎಂದರು.
ಚುನಾವಣೆಯಲ್ಲಿ ಸ್ಪರ್ಧೆ ಮಾಡಬಯಸುವ ಅಭ್ಯರ್ಥಿಗಳು ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ನಾಮಪತ್ರ ನಮೂನೆ ಪಡೆದುಕೊಂಡು ಮೇ 16 ರೊಳಗೆ ಸಲ್ಲಿಸಬಹುದಾಗಿದೆ. ಮೇ 17 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಮೇ 20 ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನಾಂಕವಾಗಿರುತ್ತದೆ.
ಜೂನ್ 3 ರಂದು ಬೆಳಿಗ್ಗೆ 8 ರಿಂದ 4 ರವರೆಗೆ ಮತದಾನ ನಡೆಯಲಿದ್ದು. ಜೂನ್ 6 ರಂದು ಮತ ಎಣಿಕೆ ನಡೆಯಲಿದೆ, ಎಲ್ಲ ಚುನಾವಣೆ ಪ್ರಕ್ರಿಯೆಗಳು ಜೂನ್ 12 ರಂದು ಪೂರ್ಣಗೊಳ್ಳುತ್ತದೆ.
ದಕ್ಷಿಣ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳು ಒಳಪಡುತ್ತದೆ ಎಂದರು.
4860 ಮತದಾರರು ನೊಂದಣಿ
ಮಂಡ್ಯ ಜಿಲ್ಲೆಯಲ್ಲಿ 8 ಮತಕೇಂದ್ರಗಳಿದ್ದು, ಅಂತಿಮ ಮತದಾರರ ಪಟ್ಟಿಯ ಪ್ರಕಾರ ಈವರೆಗೆ 4860 ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಣಿ ಮಾಡಿಕೊಂಡಿದ್ದು, ಮೇ 6 ರ ಸಂಜೆ 5 ಗಂಟೆಯವರೆಗೆ ನೊಂದಣಿಗೆ ಅವಕಾಶ ನೀಡಲಾಗಿದೆ.
ಕೆ ಆರ್ ಪೇಟೆ ಮಿನಿ ವಿಧಾನಸೌಧ ಮತ ಕೇಂದ್ರದಲ್ಲಿ ಗಂಡು – 295, ಹೆಣ್ಣು – 132 ಒಟ್ಟು 427 ಮತದಾರರು ಹೆಸರು ನೊಂದಾಯಿಸಿಕೊಂಡಿದ್ದಾರೆ.
ನಾಗಮಂಗಲ ಮಿನಿ ವಿಧಾನಸೌಧ ಮತ ಕೇಂದ್ರದಲ್ಲಿ ಗಂಡು – 268, ಹೆಣ್ಣು – 132, ಒಟ್ಟು – 400 ಮತದಾರರು ಹೆಸರು ನೊಂದಾಯಿಸಿಕೊಂಡಿದ್ದಾರೆ.
ಪಾಂಡವಪುರ ಮಿನಿ ವಿಧಾನಸೌಧ ಮತ ಕೇಂದ್ರದಲ್ಲಿ ಗಂಡು – 228, ಹೆಣ್ಣು – 167, ಒಟ್ಟು – 395 ಮತದಾರರು ಹೆಸರು ನೊಂದಾಯಿಸಿಕೊಂಡಿದ್ದಾರೆ.
ಮಂಡ್ಯ ಮಿನಿವಿಧಾನಸೌಧ ಮತ ಕೇಂದ್ರದಲ್ಲಿ ಗಂಡು – 534, ಹೆಣ್ಣು – 555, ಒಟ್ಟು – 1089, ಮತದಾರರು ಹೆಸರು ನೊಂದಾಯಿಸಿಕೊಂಡಿದ್ದಾರೆ.
ಮಂಡ್ಯ ತಾಲ್ಲೂಕು ಪಂಚಾಯತ್ ಸಾಮರ್ಥ್ಯ ಸೌಧ ಮತ ಕೇಂದ್ರದಲ್ಲಿ ಗಂಡು – 389, ಹೆಣ್ಣು – 291, ಒಟ್ಟು – 680, ಮತದಾರರು ಹೆಸರು ನೊಂದಾಯಿಸಿಕೊಂಡಿದ್ದಾರೆ.
ಮದ್ದೂರು ಮಿನಿ ವಿಧಾನಸೌಧಮತ ಕೇಂದ್ರದಲ್ಲಿ ಗಂಡು – 502, ಹೆಣ್ಣು – 373, ಒಟ್ಟು – 875 ಮತದಾರರು ಹೆಸರು ನೊಂದಾಯಿಸಿಕೊಂಡಿದ್ದಾರೆ.
ಶ್ರೀರಂಗಪಟ್ಟಣ ಮಿನಿವಿಧಾನಸೌಧ ಮತ ಕೇಂದ್ರದಲ್ಲಿ ಗಂಡು – 182, ಹೆಣ್ಣು – 201, ಒಟ್ಟು – 383 ಮತದಾರರು ಹೆಸರು ನೊಂದಾಯಿಸಿಕೊಂಡಿದ್ದಾರೆ.
ಮಳವಳ್ಳಿ ಮಿನಿವಿಧಾನಸೌಧ ಮತ ಕೇಂದ್ರದಲ್ಲಿ ಗಂಡು – 419, ಹೆಣ್ಣು – 192, ಒಟ್ಟು – 611 ಮತದಾರರು ಹೆಸರು ನೊಂದಾಯಿಸಿಕೊಂಡಿದ್ದಾರೆ.
ಸಭೆಯಲ್ಲಿ ಡಿಡಿಪಿಐ ಹೆಚ್ ಶಿವರಾಮೇಗೌಡ, ಚುನಾವಣಾ ತಹಶೀಲ್ದಾರ್ ವೆಂಕಟಾಚಲಪತಿ, ಮಂಡ್ಯ ತಹಶೀಲ್ದಾರ್ ಶಿವಕುಮಾರ್ ಬಿರಾದಾರ್, ವಿವಿಧ ಪಕ್ಷದ ಮುಖಂಡರುಗಳಾದ ನವೀನ್ ಕುಮಾರ್, ಬೊಮ್ಮಯ್ಯ, ಚಿದಂಬರ್, ರಮೇಶ್, ದಿನೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Mandya
ಶಾಲಾ ಜಾಗ ಖಾಸಗಿ ವ್ಯಕ್ತಿಯ ಹೆಸರಿಗೆ : ಬಿಇಓ ರಿಂದ ಸ್ಥಳ ಪರಿಶೀಲನೆ

ಶ್ರೀರಂಗಪಟ್ಟಣ : ತಾಲೂಕಿನ ಹುಲಿಕೆರೆ ಗ್ರಾಮದ ಸರ್ವೆ ನಂ 101/16 ರ 1 ಎಕರೆ ಶಾಲಾ ಜಾಗವು ಖಾಸಗಿ ವ್ಯಕ್ತಿಯ ಹೆಸರಿಗೆ ವರ್ಗಾವಣೆಗೊಂಡಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು.
ಶಾಲಾ ಜಾಗವನ್ನು ಬದಲಾವಣೆ ಮಾಡಿ ಖಾಸಗಿ ವ್ಯಕ್ತಿ ಹೆಸರಿಗೆ ವರ್ಗಾಯಿಸಿರುವ ಕುರಿತು ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳ ಆದೇಶದನ್ವಯ ಕ್ಷೇತ್ರ ಶಿಕ್ಷಣಾಧಿಕಾರಿ ಗ್ರಾಮಕ್ಕೆ ತೆರಳಿ ಪರಿಶೀಲಿಸಿದರು.
1956 ರಲ್ಲಿ ಹುಲಿಕೆರೆ ಗ್ರಾಮದ ಪಟೇಲ್ ದಾಸೇಗೌಡ ಎಂಬುವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 1 ಎಕರೆ ಜಾಗವನ್ನು ನೀಡಿ ಖಾತೆ ಮಾಡಿಸಿದ್ದರು. 2022ರ ತನಕ ಈ ಜಾಗವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸರಿನಲ್ಲಿ ಖಾತೆ ಹೊಂದಿದ್ದು, 2023 ರಲ್ಲಿ ಏಕಾಏಕಿ ಖಾಸಗಿ ವ್ಯಕ್ತಿ ಹೆಸರಿಗೆ ಖಾತೆ ಮಾಡಲಾಗಿದೆ. ಈ ಕುರಿತು ಹುಲಿಕೆರೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದಾಖಲೆಗಳ ಸಮೇತ ದೂರು ನೀಡಿದ್ದು ದಾಖಲೆಗಳನ್ನು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಈ ಕುರಿತು ತನಿಖೆ ನಡೆಸಿ ಸ್ಥಳ ಪರಿಶೀಲನೆ ಮಾಡಿ ವರದಿ ನೀಡಲು ತಹಶೀಲ್ದಾರ್ ಗೆ ಆದೇಶ ಮಾಡಿದ್ದರು. ಈ ಹಿನ್ನಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ನೇತೃತ್ವದಲ್ಲಿ , ಭೂಪನ ಇಲಾಖೆಯ ಎ.ಡಿ.ಎಲ್ ಮೇಘಾ, ಕಂದಾಯ ಇಲಾಖೆಯ ರಾಜಸ್ವ ನೀರಿಕ್ಷಕ ಪ್ರಸನ್ನ ಒಳಗೊಂಡ ತಂಡ ಸ್ಥಳ ಪರಿಶೀಲನೆ ನಡೆಸಿ, ಸ್ಥಳಿಯರಿಂದ ಮಾಹಿತಿ ಸಂಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎ.ಡಿ.ಎಲ್.ಆರ್ ಮೇಘಾ ಈಗಲೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸರಲ್ಲಿ ಒಂದು ಎಕರೆ ಜಾಗದ ಖಾತೆ ಹೊಂದಿದೆ. ಆತಂಕ ಬೇಡ ಜಿಲ್ಲಾಧಿಕಾರಿಗಳ ಆದೇಶದಂತೆ ತಹಶೀಲ್ದಾರ್ ಮಾರ್ಗದರ್ಶನದಲ್ಲಿ ಸರ್ವೇ ನಡೆಸಿ ವರದಿ ನೀಡಲಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಮಾತನಾಡಿ, ಶಾಲೆಗೆ ಸೇರಿದ ಜಾಗ ಸರ್ಕಾರದ ಆಸ್ತಿಯಾಗಿದೆ. ಅತಿಕ್ರಮಣ ಹಾಗೂ ವರ್ಗಾವಣೆ ಕಾನೂನು ಬಾಹಿರವಾಗಿ ನಡೆಸಿದ್ದು, ಸರ್ವೇ ನಂತರ ತಿಳಿಯಲಿದೆ. ಈಗಿರುವ ಜಾಗದಲ್ಲಿ ಯಾರು ಅತಿಕ್ರಮ ಮಾಡದಂತೆ ಸೂಚಿಲಾಗುತ್ತದೆ ಎಂದರು.
ಹುಲಿಕರೆ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಚೆಲವರಾಜು, ಮುಖಂಡ ಶ್ರೀನಿವಾಸ ಅಧಿಕಾರಿಗಳಿಗೆ ದಾಖಲೆ ಸಮೇತ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಮಾಜಿ ಸದಸ್ಯೆ ರೇಶ್ಮಾಬಾನು ಸ್ಥಳಕ್ಕಾಗಮಿಸಿ ನಮ್ಮ ಮುಸ್ಲಿಂ ಸಮುದಾಯಕ್ಕೆ ಸೇರಿದ ಜಾಗ ಕೂಡ ಖಾಸಗಿ ವ್ಯಕ್ತಿಯ ಹೆಸರಿಗೆ ಮಾಡಿರುವುದು ಕಂಡು ಬಂದಿದೆ ಎಂದು ದೂರಿದರು.
ರಾಜ ಸ್ವ ನೀರಿಕ್ಷಕ ಪ್ರಸನ್ನ, ಗ್ರಾಮ ಲೆಕ್ಕಾಧಿಕಾರಿ ರಘು ಸೇರಿದಂತೆ, ಹುಲಿಕರೆ ಗ್ರಾಮಸ್ಥರು, ಮುಖಂಡರು ಇತರರು ಇದ್ದರು.
Mandya
ಕಾನೂನಾತ್ಮಕ ಸಮಸ್ಯೆಗಳಿಗೆ ಸ್ಥಳದಲ್ಲಿ ಪರಿಹಾರದ ಭರವಸೆ : ಸಚಿವ ಎನ್. ಚಲುವರಾಯಸ್ವಾಮಿ

ನಾಗಮಂಗಲ : ಜನಸಾಮಾನ್ಯರಿಗೆ ತಮ್ಮ ಸ್ಥಳದಲ್ಲಿ ಕಾನೂನಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ಜನಸ್ಪಂದನಾ ಕಾರ್ಯಕ್ರಮ ಸೂಕ್ತವಾಗಿದೆ ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ತಿಳಿಸಿದರು.
ತಾಲೂಕಿನ ದೇವಲಾಪುರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯೋಜನೆ ಮಾಡಿದ್ದ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರು ನಿಮ್ಮೂರಿನ ಸಮಸ್ಯೆಗಳನ್ನು ತಿಳಿಸಿದರೆ ಕಾನೂನಾತ್ಮಕವಾಗಿ ಸ್ಥಳದಲ್ಲೇ ಪರಿಹಾರ ನೀಡುವ ಜೊತೆಗೆ ನ್ಯಾಯ ದೊರಕಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಸಾಮಾಜಿಕ ಸಮಾನತೆ ನಿರ್ಮಾಣದ ಹಾದಿಯಲ್ಲಿ ಗ್ಯಾರಂಟಿ ಯೋಜನೆಗಳ ಅಭಿವೃದ್ಧಿ ಜನರ ಆರ್ಥಿಕ ಅಭಿವೃದ್ಧಿಗೆ ನೇರ ಪರಿಹಾರ ಒದಗಿಸುತ್ತಿದ್ದು, ಸರ್ಕಾರದ ಈ ಮಹತ್ವಕಾಂಕ್ಷೆ ಯೋಜನೆ ಬಡಜನರ ಆಶಾಕಿರಣವಾಗಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಸಚಿವರು ಭೀಮನಹಳ್ಳಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಆರ್.ನಂದಿನಿ, ತಹಸೀಲ್ದಾರ್ ಆದರ್ಶ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಮುಡ್ಲಿಗೌಡ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಸತೀಶ್. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್, ಸಚಿನ್ ಚೆಲುವರಾಯಸ್ವಾಮಿ, ಸುನಿಲ್, ಲಕ್ಷ್ಮಿಕಾಂತ್ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Mandya
ಬಾಲ್ಯ ವಿವಾಹ ತಡೆಗಟ್ಟುವ ಕುರಿತು ಶಾಲಾ ಮಕ್ಕಳಿಗೆ ಅರಿವು

ಶ್ರೀರಂಗಪಟ್ಟಣ : ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಈ ಬಗ್ಗೆ ಮಕ್ಕಳು ಪೋಷಕರಿಗೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚಿನ ಗಮನಹರಿಸಿದರೆ ತಾಲ್ಲೂಕಿನಲ್ಲಿ ನಡೆಯುವ ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಯಬಹುದಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ್ ಸಲಹೆ ನೀಡಿದರು.
ತಾಲೂಕಿನ ಬಲ್ಲೆನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಬಲ್ಲೆನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಆಯೋಜಿಸಿದ್ದ “ಬಾಲ್ಯ ವಿವಾಹ ತಡೆಗಟ್ಟುವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ” ಉದ್ದೇಶಿಸಿ ಮಾತನಾಡಿದರು.
ಬಾಲ್ಯ ವಿವಾಹ ಹಾಗೂ ಪೋಕ್ಸೋ ಪ್ರಕರಣಗಳು ತುಂಬಾ ಗಂಭೀರ ಸ್ವರೂಪದಾಗಿದ್ದು, ತಂದೆ, ತಾಯಿ, ಸಂಬಂಧಿಕರ ಅಭಿಪ್ರಾಯದ ಮೇರೆಗೆ ಬಾಲ್ಯ ವಿವಾಹ ನಡೆಯುತ್ತವೆ. ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಬಾಲ್ಯ ವಿವಾಹದಿಂದಾಗುವ ಗಂಭೀರ ಪರಿಣಾಮಗಳ ಬಗ್ಗೆ ಹಾಗೂ ಕಾಯ್ದೆ ಬಗ್ಗೆ ತಿಳುವಳಿಕೆ ನೀಡಿದಾಗ ಮಾತ್ರ ಬಾಲ್ಯ ವಿವಾಹ ತಡೆಗಟ್ಟಲು ಸಾಧ್ಯ. ಬಾಲ್ಯ ವಿವಾಹದಿಂದ ಹೆಣ್ಣು ಮಕ್ಕಳ ಮೇಲೆ ಮಾನಸಿಕವಾಗಿ ದೈಹಿಕವಾಗಿ ಗಂಭೀರ ಪರಿಣಾಮ ಬೀರಿ ಜೀವನ ಹಾಳಾಗುವಂತೆ ಮಾಡುತ್ತದೆ. ಇಂತಹ ಪ್ರಕರಣಗಳು ಕಂಡು ಬಂದರೆ 1098/112 ಸಹಾಯವಾಣಿ ಮೂಲಕ ವಿಷಯಗಳನ್ನು ಅಧಿಕಾರಿಗಳಿಗೆ ತಿಳಿಸಬೇಕು ಎಂದರು.
ಬಾಲ್ಯ ವಿವಾಹ ಕಂಡುಬಂದಲ್ಲಿ ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡುವವರು ಸೇರಿದಂತೆ ಮಗುವಿನ ಪೋಷಕರಿಗೆ,ಮಗುವಿನ ಜವಾಬ್ದಾರಿ ಹೊತ್ತವರಿಗೆ, ಭಾಗವಹಿಸಿದ ಇತರರ ವಿರುದ್ಧ ಪ್ರಕರಣ ದಾಖಲಿಸುತ್ತಾರೆ. ಆದ್ದರಿಂದ ಮಕ್ಕಳು ಬಾಲ್ಯ ವಿವಾಹಕ್ಕೆ ಒಳಗಾಗದೆ ಸಂಪೂರ್ಣ ಶಿಕ್ಷಣ ಪಡೆಯಬೇಕು.ಬಾಲ್ಯ ವಿವಾಹವಾದಲ್ಲಿ ಸಣ್ಣ ವಯಸ್ಸಿನಲ್ಲೇ ಗರ್ಭಿಣಿಯಾಗಿ ಕಡಿಮೆ ತೂಕದ ಮಗ ಮಗುವಿನ ಜನನ,ತಾಯಿ ಮರಣ, ಶಿಶು ಮರಣ, ಬುದ್ಧಿಮಾಂದ್ಯತೆ ಮಗು ಹುಟ್ಟುವ ಸಾಧ್ಯತೆ ಇದೆ. ಜೊತೆಗೆ ವಯಸ್ಸಿಗೆ ಮೀರಿದ ಜವಾಬ್ದಾರಿ ಹೊರಿಸಿದಂತಾಗುತ್ತದೆ. ದೈಹಿಕ ಬೆಳವಣಿಗೆಗೆ ಕುಂಠಿತವಾಗುತ್ತದೆ ಎಂದು ಹೇಳಿದರು.
ರಕ್ತ ಹೀನತೆ ಉಂಟಾಗಿ ಕಡಿಮೆ ತೂಕದ ಮಗುವಿನ ಜನನದ ಸಾಧ್ಯತೆ ಇದೆ ಹಾಗೆಯೇ ಗರ್ಭ ಚೀಲಕ್ಕೆ ಪೆಟ್ಟು ಬೀಳುವ ಕಾರಣ ಎಳೆಯ ವಯಸ್ಸಿನಲ್ಲಿ ಗರ್ಭಕೋಶ ತೆಗೆಯುವ ಸಂದರ್ಭ ಒದಗುತ್ತದೆ. ಎಳೆವಯಸ್ಸಿನಲ್ಲಿ ಮುಪ್ಪಾದಂತೆ ಕಾಣುತ್ತಾರೆ. ಭಯ ಭೀತ ವಾತಾವರಣದಲ್ಲಿ ಬದುಕುತ್ತಾರೆ ಹಾಗಾಗಿ ಎಲ್ಲರೂ ಸೇರಿ ಈ ಬಾಲ್ಯ ವಿವಾಹವನ್ನು ತಡೆಗಟ್ಟಿ ಬಾಲ್ಯ ವಿವಾಹ ಮುಕ್ತ ಶ್ರೀರಂಗಪಟ್ಟಣ ತಾಲೂಕನ್ನಾಗಿ ಘೋಷಿಸಲು ನಾವೆಲ್ಲರೂ ಸನ್ನದ್ಧರಾಗೋಣ ಎಂದರು.
ನಂತರ ಬಾಲ್ಯ ವಿವಾಹ ತಡೆ ಕುರಿತು ಮಕ್ಕಳಿಂದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಸೆಲ್ವಿ ಎಂ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪದ್ಮ,ಆಶಾ ಕಾರ್ಯಕರ್ತೆ ಸುಗುಣ ಹಾಗೂ ಸಹ ಶಿಕ್ಷಕರು, ಶಾಲಾ ಮಕ್ಕಳು ಇದ್ದರು.
-
State15 hours ago
GST ನೋಟಿಸ್: ನಗದು ವ್ಯವಹಾರದತ್ತ ಮುಖ ಮಾಡಿದ ವರ್ತಕರು; ಗೊಂದಲಗಳಿಗೆ ತೆರಿಗೆ ಇಲಾಖೆ ಕೊಟ್ಟ ಸ್ಪಷ್ಟನೆ, ಸೂಚನೆಗಳೇನು..?
-
Mandya11 hours ago
ಡಿಸಿಎಂ ಡಿ.ಕೆ.ಶಿವಕುಮಾರ್ ಎಸ್ಕಾರ್ಟ್ ವಾಹನ ಪಲ್ಟಿ : ಇಬ್ಬರಿಗೆ ಗಾಯ
-
Chamarajanagar17 hours ago
ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಸಾವು
-
Chamarajanagar11 hours ago
ಸುರೇಶ್ ಎನ್. ಋಗ್ವೇದಿ ಅವರಿಗೆ ವಿಪ್ರ ವಿಕಾಸ ಪ್ರಶಸ್ತಿ
-
Mysore12 hours ago
ನಾವು ನಿಮ್ಮ ಬಳಿ ಜೈಕಾರ ಹಾಕಿಸಿಕೊಳ್ಳಲು ಬಂದಿಲ್ಲ ನಿಮ್ಮ ಋಣ ತೀರಿಸಲು ಬಂದಿದ್ದೇವೆ – ಡಿ.ಕೆ.ಶಿವಕುಮಾರ್
-
Special16 hours ago
ನಿಸ್ವಾರ್ಥ ಸೇವೆಯ ಆಯುರ್ವೇದ ತಜ್ಞ ವೈದ್ಯ ಡಾ.ಗುರುಬಸವರಾಜ
-
Kodagu11 hours ago
ಕೊಡಗು ಸೇರಿ ರಾಜ್ಯದ ಮಲೆನಾಡಿನಲ್ಲಿ ಮುಂದಿನ 3 ದಿನ ಭಾರಿ ಮಳೆ ಸಾಧ್ಯತೆ
-
Chamarajanagar11 hours ago
ಹಸುಗೂಸನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋದ ಪೋಷಕರು