Connect with us

Kodagu

ನಿರಂತರ ವೈದ್ಯಕೀಯ ಶಿಕ್ಷಣ ಅರಿವು ಕಾರ್ಯಕ್ರಮ

Published

on

ಮಡಿಕೇರಿ : ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿಯ ಕಿವಿ–ಮೂಗು–ಗಂಟಲು ವಿಭಾಗವು “ಅಂಡ್ವಾನ್ಸ್ ಇ.ಎನ್.ಟಿ. 2026”ಎಂಬ ಶೀರ್ಷಿಕೆಯಡಿ ಆಯೋಜಿಸಿದ್ದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಮಟ್ಟದ ವಿವಿಧ ವೈದ್ಯಕೀಯ ಸಂಸ್ಥೆಗಳ ಕಿವಿ–ಮೂಗು–ಗಂಟಲು ತಜ್ಞರು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಭಾಗವಹಿಸಿದ್ದರು.

ಈ ನಿರಂತರ ವೈದ್ಯಕೀಯ ಶಿಕ್ಷಣ (ಸಿಎಂಇ) ಕಾರ್ಯಕ್ರಮವು ಕಿವಿ–ಮೂಗು–ಗಂಟಲು ವೈದ್ಯಕೀಯ ಕ್ಷೇತ್ರದಲ್ಲಿನ ಇತ್ತೀಚಿನ ಪ್ರಗತಿಗಳು ಮತ್ತು ಬೆಳೆಯುತ್ತಿರುವ ಪರಿಕಲ್ಪನೆಗಳ ಮೇಲೆ, ಸಾಕ್ಷ್ಯಾಧಾರಿತ ಚಿಕಿತ್ಸಾ ವಿಧಾನಗಳು ಹಾಗೂ ತಾಂತ್ರಿಕ ನವೀನತೆಗಳಿಗೆ ವಿಶೇಷ ಒತ್ತಡ ನೀಡಿತು.

ಶೈಕ್ಷಣಿಕ ಅಧಿವೇಶನಗಳಲ್ಲಿ ಆಂಟೀರಿಯರ್ ಸ್ಕಲ್ಬೇಸ್ ಚಿಕಿತ್ಸೆ (ಮುಂಭಾಗದ ಕಪಾಲದ ತಳ), ಕೊಕ್ಲಿಯರ್ ಇಂಪ್ಲಾಂಟ್‍ಗಳು, ಅಲರ್ಜಿಕ್ ರೈನೈಟಿಸ್ ನಿರ್ವಹಣೆ, ಎಂಡೋಸ್ಕೋಪಿಕ್ ಸೈನಸ್ ಶಸ್ತ್ರಚಿಕಿತ್ಸೆಯ ಹೊಸ ಆಯಾಮಗಳು, ತಲೆ ಮತ್ತು ಕಂಠ ಕ್ಯಾನ್ಸರ್‌ಗಳ ನಿರ್ವಹಣೆ ಹಾಗೂ ಓಟಾಲಜಿ ಮತ್ತು ರೈನಾಲಜಿ ಕ್ಷೇತ್ರದ ಸಮಕಾಲೀನ ದೃಷ್ಟಿಕೋನಗಳು ಕುರಿತು ವಿವರವಾಗಿ ಚರ್ಚಿಸಲಾಯಿತು. ಮೂಗಿನ ಮೂಲಕ ಮೆದುಳಿಗೆ ಮಾಡುವ ಕನಿಷ್ಠ ಭೇದಿಸುವ ಸ್ಕಲ್ಬೇಸ್ ಶಸ್ತ್ರಚಿಕಿತ್ಸೆಗಳ ಪ್ರದರ್ಶನಗಳು ಪ್ರತಿನಿಧಿಗಳಲ್ಲಿ ವಿಶೇಷ ಆಸಕ್ತಿಯನ್ನು ಹುಟ್ಟಿಸಿತು.

ಫ್ರೋರ್ಟೀಸ್ ಆಸ್ಪತ್ರೆ, ಬನ್ನರುಘಟ್ಟ ರಸ್ತೆ, ಬೆಂಗಳೂರಿನಿಂದ ಆಗಮಿಸಿದ ಖ್ಯಾತ ತಜ್ಞರಾದ ಡಾ. ಹೆಚ್.ಕೆ.ಸುಶೀನ್ ದತ್ತ್, ಡಾ. ಆಶೀಶ್ ರಾವ್ ಮತ್ತು ಡಾ.ಅಭಿಷೇಕ್ ಶುಭೋದಯ್ ಅವರು ಸೂಚನೆಗಳು, ಶಸ್ತ್ರಚಿಕಿತ್ಸಾತಂತ್ರಗಳು, ಫಲಿತಾಂಶಗಳು ಮತ್ತು ಸಂಭವನೀಯ ತೊಡಕುಗಳ ಕುರಿತು ಆಳವಾದ ಉಪನ್ಯಾಸಗಳನ್ನು ನೀಡಿ, ಪ್ರಕರಣಾಧಾರಿತ ಚರ್ಚೆಗಳು ಹಾಗೂ ಅಧಿವೇಶನಗಳ ಮೂಲಕ ತಮ್ಮ ಅನುಭವವನ್ನು ಹಂಚಿಕೊಂಡರು.

ಕೊಕ್ಲಿಯರ್ ಇಂಪ್ಲಾಂಟ್‍ಗೆ ಅರ್ಹತೆ, ಶಸ್ತ್ರಚಿಕಿತ್ಸೆಯ ಸೂಕ್ಷ್ಮಾಂಶಗಳು, ಇಂಪ್ಲಾಂಟ್ ನಂತರದ ಪುನಶ್ಚೇತನ ಹಾಗೂ ಅಲರ್ಜಿಕ್ರೈನೈಟಿಸ್ ನಿರ್ವಹಣೆಯ ಇತ್ತೀಚಿನ ಮಾರ್ಗಸೂಚಿಗಳು ವಿಶೇಷ ಗಮನಾರ್ಹ ವಿಷಯಗಳಾಗಿದ್ದವು. ಸ್ಕಲ್ಬೇಸ್ ಶಸ್ತ್ರಚಿಕಿತ್ಸೆ ಮತ್ತು ತಲೆ–ಕಂಠ ಕಾನ್ಸರ್ ಗಳಲ್ಲಿ ಬಹು ಶಾಖಾಸಹಕಾರ, ವಿವರವಾದ ಶರೀರ ರಚನಾ ಅರಿವು ಹಾಗೂ ಕನಿಷ್ಠ ಭೇದಿಸುವ ಶಸ್ತ್ರಚಿಕಿತ್ಸಾ ತಂತ್ರಗಳ ಪ್ರಗತಿ ಕುರಿತು ಚರ್ಚಿಸಲಾಯಿತು.


ಈ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ಕರ್ನಾಟಕ ವೈದ್ಯಕೀಯ ಪರಿಷತ್ (ಕೆ.ಎಂ.ಸಿ) ಮಾರ್ಗಸೂಚಿಗಳ ಪ್ರಕಾರ ನಡೆಸಲಾಗಿದ್ದು, ಭಾಗವಹಿಸಿದ ಪ್ರತಿನಿಧಿಗಳಿಗೆ 2 ನಿರಂತರ ವೈದ್ಯಕೀಯ ಶಿಕ್ಷಣ ಕ್ರೆಡಿಟ್ ಅಂಕಗಳನ್ನು ನೀಡಲಾಯಿತು. ಕಾರ್ಯಕ್ರಮಕ್ಕೆ ದೊರೆತ ಭರ್ಜರಿ ಪ್ರತಿಕ್ರಿಯೆ, ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಕಿವಿ–ಮೂಗು–ಗಂಟಲು ಕ್ಷೇತ್ರದಲ್ಲಿ ನಿರಂತರ ಶೈಕ್ಷಣಿಕ ನವೀಕರಣದ ಅಗತ್ಯವನ್ನು ಸ್ಪಷ್ಟಪಡಿಸಿತು.

ಕಾರ್ಯಕ್ರಮದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡಾ.ಲೋಕೇಶ್ ಎ.ಜೆ. ಡೀನ್ ಹಾಗೂ ನಿರ್ದೇಶಕರು, ಡಾ. ವಿಶಾಲ್ ಕುಮಾರ್ ಪ್ರಾಂಶುಪಾಲರು, ಡಾ.ಸೋಮಶೇಖರ್ ಹೆಚ್.ಕೆ. ವೈದ್ಯಕೀಯ ಅಧೀಕ್ಷಕರು, ಡಾ.ನಂಜುಡಯ್ಯ ಎನ್. ಜಿಲ್ಲಾ ಶಸ್ತ್ರಚಿಕಿತ್ಸಾಕರು,  ಕೆ.ಎಂ.ರೋಹಿಣಿ ಬಸವರಾಜ್ ಮುಖ್ಯ ಆಡಳಿತಾಧಿಕಾರಿಗಳು, ಡಾ.ಅಭಿನಂದನ್ ಬಿ.ವಿ.ಸ್ಥಾನೀಯ ವೈದ್ಯಾಧಿಕಾರಿಗಳು ಮತ್ತು ಡಾ.ಧನಂಜಯ್ ಕುಮಾರ್ ಎಸ್.ಎಂ, ಸ್ಥಾನೀಯ ವೈದ್ಯಾಧಿಕಾರಿಗಳು ಇವರಿಗೆ ಆಯೋಜನಾ ಸಮಿತಿಯು ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿತು. ಜೊತೆಗೆ, ಕಾರ್ಯಕ್ರಮವನ್ನು ಸುಗಮವಾಗಿ ನಡೆಸಲು ಸಹಕರಿಸಿದ ಕಿವಿ, ಮೂಗು, ಗಂಟಲು ವಿಭಾಗದ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಅಮೂಲ್ಯ ಸೇವೆಯನ್ನು ವಿಶೇಷವಾಗಿ ಸ್ಮರಿಸಲಾಯಿತು.

ಈ ನಿರಂತರ ವೈದ್ಯಕೀಯ ಶಿಕ್ಷಣವನ್ನು ಕಿವಿ, ಮೂಗು, ಗಂಟಲು ವಿಭಾಗದ ಆಯೋಜನಾ ಸಮಿತಿ ಅತ್ಯಂತ ಸಮರ್ಪಣೆ ಮತ್ತು ವ್ಯವಸ್ಥಿತ ಯೋಜನೆಯೊಂದಿಗೆ ಆಯೋಜಿಸಿತು. ಡಾ. ಶ್ವೇತ ಸಮಿತಿಯ ಅಧ್ಯಕ್ಷಕರು, ಡಾ.ನಳಿನ ಪಿ.ಎ. ಕಾರ್ಯದರ್ಶಿ, ಡಾ. ಸತ್ಯಾಕಿ ಡಿ.ಸಿ.ಖಜಾಂಚಿ ಮತ್ತು ಡಾ.ರಾಜಶ್ರೀ ಕೆ.ಟಿ., ಜಂಟಿ ಕಾರ್ಯದರ್ಶಿ, ಅವರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಶೈಕ್ಷಣಿಕ ಕಾರ್ಯಕ್ರಮ ಡಾ. ಮೋನಿಶ್ ಡಿ.ಯು, ವೈಜ್ಞಾನಿಕ ಸಂಶೋಜಕರು, ಸಮರ್ಥವಾಗಿ ಸಂಯೋಜಿಸಿದ್ದು, ಡಾ.ರಮಶ್ರೀ ಅವರು ನೋಂದಣಿ ಮತ್ತು ಸ್ವಾಗತ ಕಾರ್ಯಗಳನ್ನು ನಿರ್ವಹಿಸಿದರು. ಆಯೋಜನಾ ಸಮಿತಿಯ ಸಮನ್ವಯಿತ ತಂಡ ಕಾರ್ಯ ಮತ್ತು ಅಚಲ ಶ್ರಮ ಈ ನಿರಂತರ ವೈದ್ಯಕೀಯ ಶಿಕ್ಷಣದ ಯಶಸ್ಸಿಗೆ ಪ್ರಮುಖ ಕಾರಣವಾಯಿತು.

ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮಗಳು ವೈದ್ಯಕೀಯ ಕೌಶಲ್ಯವೃದ್ಧಿ, ಶೈಕ್ಷಣಿಕ ಶ್ರೇಷ್ಠತೆ ಹಾಗೂ ರೋಗಿ ಆರೈಕೆಯ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುತ್ತವೆ, ಜೊತೆಗೆ ವೈದ್ಯರು ಮತ್ತು ವಿದ್ಯಾರ್ಥಿಗಳ ನಡುವೆ ವೃತ್ತಿಪರ ಸಂವಾದ ಮತ್ತು ಆಲೋಚನೆಗಳ ವಿನಿಮಯಕ್ಕೆ ಪರಿಣಾಮಕಾರಿ ವೇದಿಕೆಯನ್ನು ಒದಗಿಸುತ್ತವೆ ಎಂದು ಆಯೋಜನಾ ಸಮಿತಿ ಅಭಿಪ್ರಾಯಪಟ್ಟಿತು. ಕಾರ್ಯಕ್ರಮವು ಸಮಾರೋಪ ಸಮಾರಂಭ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.

Continue Reading

Kodagu

ವಾಹನದ ಮೂಲ ಸ್ವರೂಪವನ್ನು ಬದಲು – ತನಿಖೆ

Published

on

ಮಡಿಕೇರಿ : ನಗರದಲ್ಲಿ ಜಿಪ್ಸಿಯ ಮೂಲ ಸ್ವರೂಪವನ್ನು ಪರಿವರ್ತಿಸಿಕೊಂಡು ಕರ್ಕಶ ಶಬ್ದ ಬರುವ ಸೈಲೆನ್ಸರನ್ನು ಅಳವಡಿಸಿಕೊಂಡು ಚಾಲನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನವನ್ನು ವಶಕ್ಕೆ ಪಡೆದುಕೊಂಡು ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಲಂ: 281 2.2.2.-2023, 8/2. 52, 53(1), 192, 184, 189 ತನಿಖೆ ಕೈಗೊಳ್ಳಲಾಗಿದೆ.

ಅನಧಿಕೃತವಾಗಿ ವಾಹನಗಳ ಮೂಲ ಸ್ವರೂಪವನ್ನು ಬದಾಯಿಸಿಕೊಂಡು ಕರ್ಕಶ ಶಬ್ದ ಬರುವ ಸೈಲೆನ್ಸರನ್ನು ಅಳವಡಿಸಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿಕೊಂಡು ವಾಹನಗಳು ಸಂಚರಿಸುತ್ತಿರುವುದಾಗಿ ಹಾಗೂ ಸಂಖ್ಯೆ ಕೆಎ01ಎನ್ಜಿ2730ರ ಜಿಪ್ಸಿ ವಾಹನವು ಮಡಿಕೇರಿ ನಗರದಲ್ಲಿ ಕರ್ಕಶ ಶಬ್ದ ಮಾಡಿಕೊಂಡು ರೇಸಿಂಗ್ ಸ್ಪೀಡ್‌ನಲ್ಲಿ ಅಪಾಯಕರ ರೀತಿಯಲ್ಲಿ ಸಂಚರಿಸುತ್ತಿರುವುದಾಗಿ ಸಾರ್ವಜನಿಕರಿಂದ ಮಾಹಿತಿ ಬಂದಿದ್ದು, ಅದರಂತೆ ಪಿ.ಎಸ್.ಐ. ಮಡಿಕೇರಿ ಸಂಚಾರಿ ಠಾಣೆಯವರು ಇಂದು ರಂದು ಬೆಳಿಗ್ಗೆ ಠಾಣಾ ಸಿಬ್ಬಂದಿಯವರಾದ ಬಾಬು ಎಲ್ ಹಾಗೂ ಸುನಿತ್ ಕುಮಾರ್ ರವರೊಂದಿಗೆ ಇಲಾಖಾ ಜೀಪಿನಲ್ಲಿ ಮಡಿಕೇರಿ ನಗರದಲ್ಲಿ ರೌಂಡ್ಸ್ ಮಾಡಿಕೊಂಡು ವಾಪಾಸ್ಸು ಠಾಣೆಯ ಕಡೆಗೆ ಬರುತ್ತಿರುವಾಗ್ಗೆ ಮೈತ್ರಿ ಜಂಕ್ಷನ್ ಬಳಿ ತಲುಪುವಾಗ್ಗೆ ಸಮಯ 9:00 ಗಂಟೆಗೆ ಎಫ್.ಎಂ.ಸಿ. ಕಾಲೇಜು ಕಡೆಯಿಂದ ನಗರದ ಕಡೆಗೆ ಕೆಎ01ಎನ್‌ಜಿ 2730 ರ ಜಿಪ್ಸಿ ವಾಹನವನ್ನು ಅದರ ಚಾಲಕ ಅತೀ ವೇಗವಾಗಿ ಸೈಲೆಸರ್‌ನಲ್ಲಿ ಕರ್ಕಶ ಶಬ್ದ ಮಾಡಿಕೊಂಡು ಅಪಾಯಕರ ರೀತಿಯಲ್ಲಿ ಚಾಲನೆ ಮಾಡಿಕೊಂಡು ಬರುತ್ತಿದ್ದು, ಕೂಡಲೇ ನಾವುಗಳು ಜೀಪನ್ನು ಬದಿಗೆ ನಿಲ್ಲಿಸಿ ಸದರಿ ವಾಹನವನ್ನು ತಡೆದು ಪರಿಶೀಲಿಸಿದಾಗ ಸದರಿ ಜಿಪ್ಪಿಯ ಮೂಲ ಸ್ವರೂಪವನ್ನು ಪರಿವರ್ತಿಸಿಕೊಂಡು ಕರ್ಕಶ ಶಬ್ದ ಬರುವ ಸೈಲೆನ್ಸರನ್ನು ಅಳವಡಿಸಿಕೊಂಡು ಚಾಲನೆ ಮಾಡುತ್ತಿರುವುದು ಕಂಡು ಬಂದಿರುತ್ತದೆ.


ಸದರಿ ಜಿಪ್ಪಿ ಚಾಲಕ ಜಿಪ್ಪಿ ವಾಹನದ ಮೂಲ ಸ್ವರೂಪವನ್ನು ಬದಲಾಯಿಸಲು ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಅನುಮತಿಯನ್ನು ಪಡೆದುಕೊಂಡಿರುತ್ತೀರಾ ಎಂದು ಕೇಳಿದಾಗ ಯಾವುದೇ ಅನುಮತಿಯನ್ನು ಪಡೆದುಕೊಂಡಿರುವುದಿಲ್ಲ ಎಂದು ತಿಳಿಸಿದ ಮೇರೆಗೆ ಮುಂದಿನ ಕ್ರಮದ ಬಗ್ಗೆ ಸದರಿ ವಾಹನವನ್ನು ವಶಕ್ಕೆ ಪಡೆದುಕೊಂಡು ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಲಂ: 281 2.2.2.-2023, 8/2. 52, 53(1), 192, 184, 189 . ತನಿಖೆ ಕೈಗೊಳ್ಳಲಾಗಿರುತ್ತದೆ.

ಯಾವುದೇ ವಾಹನಗಳ ಆರ್.ಸಿ. ನಿಯಮಗಳನ್ನು ಉಲ್ಲಂಘನೆ ಮಾಡಿ ಅನಧಿಕೃತವಾಗಿ ವಾಹನಗಳ ಮೂಲ ಸ್ವರೂಪವನ್ನು ಬದಲಾವಣೆ ಮಾಡುವುದು ಅಥವಾ ಕರ್ಕಶ ಶಬ್ದ ಉಂಟುಮಾಡುವ ಸೈಲೆನ್ಸರ್, ಹಾರ್ನ್ ಗಳನ್ನು ಅಳವಡಿಸಿಕೊಳ್ಳುವುದು, ವೀಲಿಂಗ್ ಮಾಡಿಕೊಂಡು ಚಾಲನೆ ಮಾಡುವವರನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಲು ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕೆಂದು ಪೊಲೀಸ್ ಅಧೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿರುತ್ತಾರೆ.

Continue Reading

Kodagu

ಗುಡುಗಳಲೆ ಜಾನುವಾರುಗಳ ಜಾತ್ರೆಗೆ ಚಾಲನೆ ನೀಡಿದ ಶ್ರೀ ಅಭಿನವ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ

Published

on

ಶನಿವಾರಸಂತೆ: ಜಾತ್ರೆಗಳು ಸಮೂದಾಯ, ಆಚರಣೆ, ಪರಂಪರೆಯನ್ನು ಸಮ್ಮೀಲನಗೊಳಿಸುವ ವೇದಿಕೆಯಾಗುತ್ತದೆ ಎಂದು ಮುದ್ದಿನಕಟ್ಟೆ ಮಠದ ಶ್ರೀ ಅಭಿನವ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ ಪಟ್ಟರು.

ಅವರು ಸಮಿಪದ ಹಂಡ್ಲಿ ಗ್ರಾ.ಪಂ.ವ್ಯಾಪ್ತಿಯ ಗುಡುಗಳಲೆಯ 82ನೇ ವರ್ಷದ ಶ್ರೀ ಜಯದೇವ ಜಾನುವಾರುಗಳ ಜಾತ್ರೆಯ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಆಶೀವ್ರರ್ಚಿಸುತ್ತಿದ್ದರು.

ರೈತರು ಜಾನುವಾರುಗಳನ್ನು ಕೊಂಡುಕೊಳ್ಳಲು ಮತ್ತು ಮಾರಾಟ ಮಾಡುವ ಸಲುವಾಗಿ ಈ ಭಾಗದಲ್ಲಿ 82 ವರ್ಷಗಳ ಹಿಂದೆ ಹಿರಿಯರು ಜಾನುವಾರುಗಳ ಜಾತ್ರೆಯನ್ನು ಸ್ಥಾಪಿಸಿದರು. ಜೊತೆಗೆ ಜನರಿಗೆ ಮನೋರಂಜನೆಯನ್ನು ಒದಗಿಸಿಕೊಡುವ ಸಲುವಾಗಿ ಜಾತ್ರೆಯನ್ನು ವೈಭವದಿಂದ ನಡೆಸಲಾಗುತ್ತಿತ್ತು. ಆದರೆ ಈಗಿನ ವೈಜ್ಞಾನಿಕ ಮತ್ತು ಆಧುನಿಕ ಭರಾಟೆಯಲ್ಲಿ ರೈತರು ವ್ಯವಸಹಾಯಕ್ಕೆ ಯಂತ್ರೋಪಕರಣಗಳ ಮೊರೆ ಹೋಗುತ್ತಿರುವುದ್ದರಿಂದ ಜಾನುವಾರುಗಳ ಸಾಕಾಣಿಕೆ ಕಡಿಮೆಯಾಗುತ್ತಿದ್ದು ಈ ಜಾತ್ರೆಯ ಹಿಂದಿನ ವೈಭವ ಮರೆಯಾಗುತ್ತಿರುವುದು ಬೇಸರದ ವಿಷಯವಾಗಿದೆ ಎಂದರು.

ಬದಲಾಗುತ್ತಿರುವ ಕಾಲಘಟ್ಟದಲ್ಲಿ ಬಾಂಧವ್ಯಗಳನ್ನು ಬೆಸೆಯುವ ಸಮೂದಾಯದ ಸಮ್ಮೀಲನಗಳ ಕೊರತೆಯಿಂದಾಗಿ ಆಚರಣೆ, ಪರಂಪರೆ, ಜಾತ್ರೋತ್ಸವಗಳು ಕಮ್ಮಿಯಾಗುತ್ತಿರುವ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆಯವರು ಆಚರಣೆ, ಪರಂಪರೆಯನ್ನು ರೂಢಿಸಿಕೊಂಡು ಜಾತ್ರೋತ್ಸವಗಳನ್ನು ಉಳಿಸಿಕೊಳ್ಳುವಂತೆ ಸಲಹೆ ನೀಡಿದರು.

ಕಲ್ಲಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ-ಜಾತ್ರೆಯು ಮನೋರಂಜನೆಗೆ ಸೀಮಿತವಾಗಿಲ್ಲ ರೈತರ ಉಪಯೋಗಕ್ಕಾಗಿ ಸ್ಥಾಪಿಸಿದ್ದ ಜಾನುವರುಗಳ ಜಾತ್ರೆಯನ್ನು ಉಳಿಸಿಕೊಳ್ಳಲು ರೈತರು ಜಾನುವಾರುಗಳ ಸಾಕಾಣಿಕೆಯನ್ನು ಮಾಡುವುದರ ಮೂಲಕ ಈ ಜಾತ್ರೆಯ ಹಿಂದಿನ ವೈಭವವನ್ನು ಮತ್ತೆ ಮರುಕಳುಹಿಸುವಂತೆ ಮಾಡಬೇಕು ಎಂದು ಹೇಳಿದರು. ಜಾತ್ರೋತ್ಸವಗಳು ಧಾರ್ಮಿಕ, ಆದ್ಯಾತ್ಮಿಕ ಚಿಂತನೆಗೂ ಮತ್ತು ಜನರು ಸುಖ-ದುಖ:ಗಳನ್ನು ವಿನಿಮಯ ಮಾಡಿಕೊಳ್ಳುವ ವೇದಿಕೆಯಾಗುತ್ತದೆ ಎಂದರು.


ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಚಂದ್ರು ಚಾತ್ರೆಯನ್ನು ಉದ್ಘಾಟಿಸಿ ಮಾತನಾಡಿ, ಜಾತ್ರೋತ್ಸವಗಳು ಸಾರ್ವಜನಿಕವಾಗಿ ನಡೆಯುವುದ್ದರಿಂದ ಇಂತಹ ಉತ್ಸವಗಳು ಸಾಂಗವಾಗಿ ನಡೆಯಬೇಕಾಗುತ್ತದೆ ಜಾತ್ರೆ ಯಶಸ್ವಿಗೊಳ್ಳಬೇಕಾದರೆ ಪೊಲೀಸ್ ರಕ್ಷಣೆಯೂ ಬೇಕಾಗುತ್ತದೆ ಸಾರ್ವಜನಿಕರು, ಪೊಲೀಸ್‌ರಿಗೆ ಸಹಕಾರ ನೀಡಿದರೆ ಜಾತ್ರೋತ್ಸವವು ಯಶಸ್ವಿಗೊಳ್ಳುತ್ತದೆ ಈ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಹಿರಿಯ ಮುಖಂಡ ಎಸ್.ಕೆ.ವೀರಪ್ಪ ಹಿಂದಿನ ಜಾತ್ರೆಯ ವೈಭವದ ಬಗ್ಗೆ ಮಾತನಾಡಿದರು. ಜಾತ್ರಾ ಸಮೀತಿ ಅಧ್ಯಕ್ಷೆ ಚೈತ್ರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು. ಸಮಾರಂಭದಲ್ಲಿ ಹಂಡ್ಲಿ ಗ್ರಾ.ಪಂ.ಅಧ್ಯಕ್ಷೆ ಸುಧಾ ಈರೇಶ್, ದುಂಡಳ್ಳಿ ಗ್ರಾ.ಪಂ.ಅಧ್ಯಕ್ಷೆ ಭವಾನಿ ಗುರು, ಪ್ರಮುಖರಾದ ಮಾಜಿ ತಾ.ಪಂ.ಸದಸ್ಯ ಕುಶಾಲಪ್ಪ, ಕೆ.ಬಿ.ಹಾಲಪ್ಪ, ಡಿ.ಬಿ.ಧರ್ಮಪ್ಪ, ಹಂಡ್ಲಿ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಚಿದಾನಂದ್, ಪ್ರಮುಖರಾದ ಎಸ್.ಎಂ.ಉಮಾಶಂಕರ್, ಜಾತ್ರಾ ಸಮೀತಿ ಕಾರ್ಯದರ್ಶಿ ಎಚ್.ಎಂ.ವಿನಯ್, ಎಚ್.ಎನ್.ಸಂದೀಪ್ ಜಾತ್ರಾ ಸಮೀತಿ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.

ಗುಡುಗಳಲೆ ಜಂಕ್ಸನ್‌ನಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಿಂದ ಹೊರಟ ಅಡ್ಡಪಲ್ಲಕ್ಕಿ ಮೆರವಣಿಯು ವಾದ್ಯಗೋಷ್ಠಿ, ವೀರಗಾಸೆ ಕುಣಿತದೊಂದಿಗೆ ಜಾತ್ರಾ ಮೈದಾನವನ್ನು ತಲುಪಿತು.

Continue Reading

Kodagu

ಕುಡಿಯ ಜನಾಂಗದ ಆಚಾರ, ವಿಚಾರ, ಸಂಸ್ಕೃತಿ ಎಲ್ಲೆಡೆ ಪಸರಿಸಿ: ಮಹೇಶ್ ನಾಚಯ್ಯ

Published

on

ಮಡಿಕೇರಿ : ಸಂಸ್ಕೃತಿ ಮತ್ತು ಸಂಸ್ಕಾರ ಮಿಳಿತಗೊಂಡಲ್ಲಿ ಮಾತ್ರ ಯಾವುದೇ ಒಂದು ಜನಾಂಗ ಬೌದ್ಧಿಕ ಪ್ರಗತಿ ಕಾಣಲು ಸಾಧ್ಯ. ಇಂತಿರುವಾಗ ಶೈಕ್ಷಣಿಕವಾಗಿ ಮುಂದುವರಿಯಬೇಕಾದದ್ದು ಪ್ರತಿಯೊಬ್ಬರ ಜೀವನ ಧರ್ಮ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ನಾಲ್‍ನಾಡ್ ಪೂಮಲೆ ಕುಡಿಯ ಸಾಂಸ್ಕೃತಿಕ ಸಮಿತಿಯ ಸಹಯೋಗದೊಂದಿಗೆ ಯವಕಪಾಡಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕುಡಿಯಡ ಸಾಂಸ್ಕೃತಿಕ ನಮ್ಮೆ-2026ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತ ದೇಶದಲ್ಲೇ ಕೊಡವ ಸಂಸ್ಕೃತಿ ವಿಶೇಷ-ವಿಭಿನ್ನವಾಗಿರುವುದಕ್ಕೆ ಈ ಜನಾಂಗವು ಸರ್ವ ಕ್ಷೇತ್ರಗಳಲ್ಲಿ ಮುಂದುವರೆದಿರುವುದು ಕಾರಣವಾಗಿದೆ. ಕೊಡವ ಭಾಷೆ-ಸಾಹಿತ್ಯ, ಸಂಸ್ಕøತಿಯನ್ನು ಪರಿಪಾಲಿಸುತ್ತಿರುವ ಎಲ್ಲಾ 23 ಜನಾಂಗಗಳು ಪ್ರಸ್ತುತ ಮುಂದುವರೆದಿರುವುದಕ್ಕೆ ಕೊಡವ ಸಂಸ್ಕøತಿಯನ್ನು ಬಾಳಿನ ಬೆಳಕಾಗಿ ಕಾಣುತ್ತಿರುವುದು ಮುಖ್ಯ ಕಾರಣವಾಗಿದ್ದು, ಎಲ್ಲರೂ ಉತ್ತಮವಾದ ಸಂಸ್ಕಾರವನ್ನು ಹೊಂದಿರುವುದು ಮೂಲವಾಗಿದೆ ಎಂದರು.
ಕೊಡವ ಸಂಸ್ಕೃತಿಯ ಕೇವಲ ಒಂದು ಆಚರಣೆ ಮಾತ್ರ ಅಲ್ಲ, ಇದೊಂದು ಬದುಕಿನ ಪಥವಾಗಿದೆ. ಕೊಡವ ಸಂಸ್ಕøತಿ ಪಾಲಿಸುತ್ತಿರುವ ಜನಾಂಗಗಳು ಎಲ್ಲಿಯೇ ಇದ್ದರೂ ತಮ್ಮ ಸಂಸ್ಕೃತಿ , ಸಾಹಿತ್ಯ ಹಾಗೂ ಭಾಷೆ ಮರೆತು ನಡೆಯಬಾರದೆಂದು ಕಿವಿಮಾತು ಹೇಳಿದರು.
ಕುಡಿಯ ಜನಾಂಗವು ಕೊಡಗಿನಲ್ಲಿ ‘ಮಲೆ ಕುಡಿಯ ಅಥವಾ ಪೂಮಾಲೆ ಕುಡಿಯ’ ಎಂದು ಗುರುತಿಸಿಕೊಂಡಿದ್ದು ಕೊಡವ ಸಂಸ್ಕೃತಿ, ಭಾಷೆ, ಜಾನಪದಕ್ಕೆ ಅನಾದಿಕಾಲದಿಂದಲೇ ಕೊಡುಗೆ ನೀಡಿದೆ ಎಂದರು.
ಮಲೆ ಕುಡಿಯವು ಜನಸಂಖ್ಯೆಯಲ್ಲಿ ಕಡಿಮೆ ಇದ್ದರೂ ಕೊಡವ ಆಚಾರ-ವಿಚಾರ, ಪದ್ಧತಿಯನ್ನು ತಮ್ಮ ಸಂಸ್ಕøತಿಯಲ್ಲಿ ಅಳವಡಿಸಿಕೊಂಡು ಬರುತ್ತಿರುವುದೇ ಅಲ್ಲದೆ ಒಗ್ಗಟ್ಟಿನಲ್ಲಿ ಬದುಕು ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಸಂಸ್ಕೃತಿ ಎಂಬುದು ಜನಾಂಗ ವ್ಯವಸ್ಥೆ ಇರುವಲ್ಲಿ ಮಾತ್ರ ಉದಯಿಸಲು ಸಾಧ್ಯ. ಭಾಷೆ ಇದ್ದಲ್ಲಿ ಸಂಸ್ಕೃತಿ ಇರುತ್ತದೆ. ಸಂಸ್ಕøತಿ ಇದ್ದಲ್ಲಿ ಸಂಸ್ಕಾರ ಇರುತ್ತದೆ. ಕೊಡಗಿನಲ್ಲಿರುವ ಎಲ್ಲಾ ಮೂಲ ನಿವಾಸಿಗಳು ಅತಿಥಿ ದೇವೋಭವ ಎಂಬುವುದನ್ನು ಪಾಲಿಸುತ್ತಾ ಬಂದಿದೆ. ನಡಿಕೇರಿಯಂಡ ಚಿಣ್ಣಪ್ಪನವರು ಬರೆದ ಪಟ್ಟೋಲೆ ಪಳಮೆ ಎಂಬ ಗ್ರಂಥವು ಜನಾಂಗ, ಸಂಸ್ಕೃತಿ, ಭಾಷೆಯನ್ನು ಅಜರಾಮರವಾಗಿರಿಸಿದೆ ಎಂದು ಮಹೇಶ್ ನಾಚಯ್ಯ ಅವರು ವಿವರಿಸಿದರು.
ಕೊಡವ ಮೂಲನಿವಾಸಿಗಳು ಪ್ರಕೃತಿಯನ್ನು ಆರಾಧಿಸುತ್ತಾ ಬಂದವರಾಗಿರುತ್ತಾರೆ. ಕುಡಿಯ ಜನಾಂಗದವರು ತಮ್ಮನ್ನು ಮಲೆಕುಡಿಯ, ಪೂಮಲೆ ಕುಡಿಯ ಎಂದು ಗುರುತಿಸಿಕೊಂಡಿದ್ದಾರೆ. ಕುಡಿಯ ಜನಾಂಗದವರು ತಮ್ಮನ್ನು ಆದಷ್ಟು ಹೊರಜಗತ್ತಿಗೆ ಪರಿಚಯಿಸಿಕೊಳ್ಳುವಂತಾಗಬೇಕು ಎಂದರು.
ಕಾರ್ಯಕ್ರಮವನ್ನು ತೊಂಬತ್ತರ ಹರೆಯದ ಕುಯಿನಾಲಮಲೆ ಸೀತಮ್ಮ ಕರುಂಬಯ್ಯ ದೀಪ ಬೆಳಗಿಸಿ ಉದ್ಘಾಟಿಸಿದರು.  ಕೊಡವ ತಕ್ಕ್ ಜನಾಂಗಕಾರಡ ಒಕ್ಕೂಟದ ಅಧ್ಯಕ್ಷ ಪಡಿಞರಂಡ ಜಿ.ಅಯ್ಯಪ್ಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಯಾವುದೇ ಒಂದು ಜನಾಂಗದ ಅಳಿವು-ಉಳಿವು ಅವರ ಭಾಷೆ, ಸಂಸ್ಕøತಿಯನ್ನು ಪ್ರೀತಿಸುವುದರ ಮೇಲೆ ನಿಂತಿರುತ್ತದೆ. ಕೊಡವ ಭಾಷೆಗೆ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೂಕ್ತ ಸ್ಥಾನಮಾನ ದೊರಕಿಸಿಕೊಡುವ ನಿಟ್ಟಿನಲ್ಲಿ ಈಗಿನ ಅಕಾಡೆಮಿ ಅಧ್ಯಕ್ಷರಿಗೆ ಬಹುತರವಾದ ಜವಾಬ್ದಾರಿಯನ್ನು ಸರ್ಕಾರ ಕೊಟ್ಟಿದೆ. ಇದಕ್ಕೆ ಎಲ್ಲಾ ಜನಾಂಗದವರು ಸಹಕರಿಸಬೇಕು. ಕೊಡವ ಭಾಷೆಗೆ ಸರ್ಕಾರದಿಂದ ಮಾನ್ಯತೆ ದೊರೆತರೆ, ಸರ್ವರಿಗೂ ಮಾನ್ಯತೆ ದೊರೆತಂತೆ ಎಂದರು.
ಪ್ರಮುಖರಾದ ಕುಡಿಯರ ಮುತ್ತಪ್ಪ ಮಾತನಾಡಿ, ಯಾವುದೇ ಭಾಷೆ, ಸಂಸ್ಕೃತಿ, ಸಂಸ್ಕಾರವು ಮನುಷ್ಯನ ಅಂತರಾಳದಲ್ಲಿ ಬೇರೂರಬೇಕಾದರೆ ‘ಮನೆಯೇ ಮೊದಲ ಪಾಠಶಾಲೆ’ಯಾಗಬೇಕು. ಮನೆಯಲ್ಲಿ ಪ್ರತಿಯೊಬ್ಬ ತಾಯಂದಿರು ಮಕ್ಕಳಿಗೆ ಚಿಕ್ಕಂದಿನಿಂದಲೇ ಕೊಡವ ಭಾಷೆ, ಸಂಸ್ಕೃತಿಯನ್ನು  ಕಲಿಸಬೇಕು. ಪ್ರತಿಯೊಬ್ಬರೂ ಬಾಲ್ಯದಲ್ಲಿ ತಮ್ಮ ಹೆಗಲಿನಲ್ಲಿ ದುಡಿಯನ್ನು ತೂಗಿಸುವ ಕೆಲಸ ಮಾಡಬೇಕು. ಬಾಳೋಪಾಟ್ ಕಲಿತರೆ ಇಡೀ ಸಂಸ್ಕೃತಿ ಬೆಳಕು ಚೆಲ್ಲುವ ಕೆಲಸ ಮಾಡುತ್ತದೆ. ಇದು ಕೊಡವಾಮೆ ಪ್ರಜ್ವಲಿಸಲು ಅನುವು ಮಾಡಿಕೊಡುತ್ತದೆ ಎಂದರು.
ಮನೆಯಲ್ಲಿ ಸಂಸ್ಕøತಿ ಇದ್ದರೆ ಮಾತ್ರ ಮುಂದಿನ ಪೀಳಿಗೆಗೆ ಮಾತ್ರ ಸಂಸ್ಕøತಿ ಬೆಳೆಯಲು ಸಾಧ್ಯ. ಕುಡಿಯರಲ್ಲಿ ಅಡಿಕೆಮಲೆ ಕುಡಿಯ, ತೇಮಲೆ ಕುಡಿಯ ಹಾಗೂ ಪೂಮಲೆ ಕುಡಿಯ ಎಂಬ ಮೂರು ವಿಧಗಳಿದ್ದು, ಪೂಮಲೆ ಕುಡಿಯರು ಕೊಡವ ಆಚಾರ ವಿಚಾರ, ಸಂಸ್ಕøತಿಯನ್ನು ಪಾಲಿಸುತ್ತ ಬರುತಿರುವ ಜನಾಂಗ ಎಂದರು.
ವೇದಿಕೆಯಲ್ಲಿ ಕುಡಿಯ ಸಮುದಾಯದಲ್ಲಿ ಕೊಡವ ಆಚಾರ-ವಿಚಾರ, ಜನಪದವನ್ನು ಕಲಿತು, ಕಲಿಸುತ್ತ ಕುಡಿಯ ಸಂಸ್ಕೃತಿಯನ್ನು ಬೆಳೆಸುತ್ತಿರುವ ಗಾಳಿಬೀಡಿನ ಬಾಳೋಪಾಟ್ ಕಲಾವಿದ ನೇರತೊಕ್ಕಡ ರಮೇಶ್, ಯವಕಪಾಡಿಯ ಜಾನಪದ ಕಲಾವಿದ ಪಡಿಯಮಲೆ ಗಣೇಶ್ ಬಿದ್ದಪ್ಪ, ಹಿರಿಯ ಯವಕಪಾಡಿಯ ಜಾನಪದ ಕಲಾವಿದ ಕುಯಿನಾಲಮಲೆ ಪೂಣಚ್ಚ, ಹಿರಿಯ ಜಾನಪದ ಕಲಾವಿದ ಕೋಲಿಂದಮಲೆ ಎಂ.ರಾಜ, ತೋರ ಗ್ರಾಮದ ಯುವ ಜಾನಪದ ಕಲಾವಿದೆ ಕಿಪ್ಪರೆಮಲೆ ಪುಷ್ಪ ಮಾಚಯ್ಯ ಗಾಳಿಬೀಡಿನ ಯುವ ಜಾನಪದ ಕಲಾವಿದೆ ನೇರತೊಕ್ಕಡ ರಾಧಿಕಾ ಇವರುಗಳನ್ನು ಶಾಲು ಹೊದಿಸಿ, ಹಾರ ಹಾಕಿ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಲಾಯಿತು.
“ಕೊಡಗ್‍ರ ದೇವನೆಲೆಲ್ ಕುಡಿಯ ಜನಾಂಗ” ವಿಷಯಕ್ಕೆ ಸಂಬಂಧಿಸಿದಂತೆ ವಿಚಾರ ಮಂಡಿಸಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಕೋಲಿಂದಮಲೆ ಕೆ.ಬೋಪಯ್ಯನವರು, ಪ್ರಸ್ತುತ ಕೊಡಗಿನ (ಪೂ)ಮಲೆ ಕುಡಿಯರಲ್ಲಿ 35 ಕುಟುಂಬಗಳಿವೆ. ಅಂದಾಜು ಎರಡು ಸಾವಿರದಷ್ಟು ಜನಸಂಖ್ಯೆ ಇದೆ. ಕುಡಿಯರು ಪನ್ನಂಗಾಲತಮ್ಮೆ ನೆಲೆ ನಿಂತಲ್ಲಿಂದಲೇ ವಿವಿಧ ದೇವನೆಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಬರುತ್ತಿದ್ದಾರೆ ಎಂದು ಮಾಹಿತಿ ನೀಡಿ, ಜಿಲ್ಲಾ ಮಟ್ಟದಲ್ಲಿ ಕುಡಿಯ ಸಾಂಸ್ಕೃತಿಕ ನಮ್ಮೆ ನಡೆಸಿಕೊಡಲು ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಲ್ಲಿ ಮನವಿ ಮಾಡಿದರು.
ಕದ್ದಣಿಯಂಡ ವಂದನ ಚಿಣ್ಣಪ್ಪ, ಅಂಜಪರವಂಡ ರಂಜನ್ ಮುತ್ತಪ್ಪ, ಮೂವೆರ ರೇಖಾ ಪ್ರಕಾಶ್ ಕವಿಗೋಷ್ಠಿಯಲ್ಲಿ ಕವನ ವಾಚಿಸಿ ಪ್ರಶಂಸೆಗೊಳಗಾದರು. ಗಾಳಿಬೀಡು, ಯವಕಪಾಡಿ ತಂಡದಿಂದ ಕೋಲಾಟ್ ಹಾಗೂ ಉರ್‍ಟಿಕೊಟ್ಟ್ ಆಟ್ ಪ್ರದರ್ಶನ ನಡೆಯಿತು.
ಅಕಾಡೆಮಿ ಸದಸ್ಯರಾದ ಕುಡಿಯರ ಕಾವೇರಪ್ಪ, ಮೊಳ್ಳೆಕುಟ್ಟಡ ದಿನು ಬೋಜಪ್ಪ ಸಂಚಾಲಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯರಾದ ಕಂಬೆಯಂಡ ಡೀನಾ ಬೋಜಣ್ಣ, ಕೊಂಡಿಜಮ್ಮನ ಎಂ.ಬಾಲಕೃಷ್ಣ, ಪೊನ್ನಿರ ಯು. ಗಗನ್, ಚೆಪ್ಪುಡಿರ ಎಸ್. ಉತ್ತಪ್ಪ, ಚೊಟ್ಟೆಯಂಡ ಸಂಜು ಕಾವೇರಪ್ಪ, ನಾಪಂಡ ಸಿ.ಗಣೇಶ್ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಕಕ್ಕಬೆ ಗ್ರಾ.ಪಂ.ಮಾಜಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಮರಂದೋಡ ಪಂಚಾಯಿತಿ ಸದಸ್ಯ ಚೋಯಮಾಡಂಡ ಹರೀಶ್, ಹಿರಿಯರಾದ ಬಾಚಮಂಡ ರಾಜ ಪೂವಣ್ಣ ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪ, ಹಿರಿಯ ಜಾನಪದ ಕಲಾವಿದ ಕೋಲಿಂದಮಲೆ ಎ. ಚಿಣ್ಣಪ್ಪ, ಕೋಡಿಮಣಿಯಂಡ ಬೋಪಯ್ಯ, ಆರತೊಕ್ಕಡ ಮಹೇಶ್, ಮಿಥುನ್ ರಂಜಿತ್, ಕೋಪಟ್ಟಿಮಲೆ ಮಹೇಶ್, ಐರಿರ ರೈನ ಕಾರ್ಯಪ್ಪ, ಕಣಿಯರ ನಾಣಯ್ಯ, ಕಬ್ಬೆಮಲೆ ಲೋಲಾವತಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಮಾರಂಭದ ಮೊದಲಿಗೆ ಗಿರಿಜ ಹಾಗೂ ತಂಡದವರು ಪ್ರಾರ್ಥನೆ ಮಾಡಿದರು. ಕುಡಿಯರ ಭರತ್ ದೇವಯ್ಯ ನಿರೂಪಿಸಿ, ವಂದಿಸಿದರು.
Continue Reading

Trending

error: Content is protected !!