Connect with us

Mandya

ಕಾಂಗ್ರೆಸ್ ಬಲವರ್ಧನೆಗೆ ಲೋಕಸಭೆ ಚುನಾವಣೆ ಅನಿವಾರ್ಯ- ಎನ್.ಚಲುವರಾಯಸ್ವಾಮಿ

Published

on

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದರೆ, ಮುಂದಿನ 20 ವರ್ಷಗಳ ಕಾಲ ಕಾಂಗ್ರೆಸ್ ಬಲವರ್ಧನೆ ಆಗುತ್ತದೆ. ಆ ಮೂಲಕ ಹಲವು ಕಾರ್ಯಕರ್ತರಿಗೆ ರಾಜಕೀಯ ಸ್ಥಾನಮಾನ ದೊರೆಯುತ್ತದೆ ಎಂಬುದನ್ನು ಮನಗಾಣಬೇಕು, ನಗರ ವ್ಯಾಪ್ತಿಯಲ್ಲಿ 25 ಸಾವಿರ ಬಹುಮತ ಕೊಡಿಸಲು ಶ್ರಮಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದರು.

ನಗರದ ಸುಮರವಿ ಸಮುದಾಯ ಭವನದಲ್ಲಿ ಆಯೋಜನೆಗೊಂಡಿದ್ದ ಮಂಡ್ಯ ನಗರಸಭೆ ವ್ಯಾಪ್ತಿಯ ಪಕ್ಷದ ಮುಖಂಡರು, ನಗರಸಭಾ ಸದಸ್ಯರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ  ಪುರಸಭೆ, ನಗರಸಭೆ, ಜಿ.ಪಂ ಹಾಗೂ ತಾ.ಪಂ ಚುನಾವಣೆಗಳು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಮನವಿ ಮಾಡಿದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದರೆ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಾರಮ್ಯ ಸಾಧಿಸಲಿದೆ ಎಂಬುದನ್ನು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅರ್ಥೈಸಿಕೊಂಡು ಸ್ಟಾರ್ ಚಂದ್ರು ಗೆಲುವಿಗೆ ಶ್ರಮಿಸಬೇಕೆಂದರು.

ನಮ್ಮ ಪಕ್ಷದ ಕೆಲವೇ ಮುಖಂಡರು, ಕಾರ್ಯಕರ್ತರು, ಚುನಾವಣೆ ಬಗ್ಗೆ ತಾತ್ಸಾರ ತೋರುತ್ತಿರುವುದು ಸರಿಯಲ್ಲ, ಜಿಲ್ಲೆಯ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷ ಎಂದಿಗೂ ಲೋಕಸಭಾ ಚುನಾವಣೆಯನ್ನು ಇಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ, ವ್ಯವಸ್ಥಿತ ಕಾರ್ಯವೈಖರಿಯಿಂದ ಗೆಲುವಿಗೆ ಶ್ರಮಿಸಬೇಕೆಂದರು.

ಹಿಂದುಳಿತ, ದಲಿತ, ಅಲ್ಪಸಂಖ್ಯಾತ ಮತದಾರರು ಸ್ವಯಂ ಪ್ರೇರಿತರಾಗಿ ಪಕ್ಷದ ಅಭ್ಯರ್ಥಿಗೆ ಮತ ನೀಡಲು ಮುಂದಾಗಿದ್ದಾರೆ. ಒಕ್ಕಲಿಗರು ಸಹ ತುಂಬು ಅಸ್ಥೆ ವಹಿಸಿದ್ದು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಹಾಗೂ ಜಿಲ್ಲೆಯ ಅಭಿವೃದ್ದಿಯನ್ನು ಮುಂದೆ ಮಾಡಿ ಮತಯಾಚಿಸಬೇಕೆಂದು ಸಲಹೆ ನೀಡಿದರು.

ಹೆಚ್.ಡಿ.ದೇವೆಗೌಡರು ಮುಖ್ಯಮಂತ್ರಿ ಪ್ರಧಾನ ಮಂತ್ರಿಯಾಗಿದ್ದರು. ಕುಮಾರಸ್ವಾಮಿ 2 ಬಾರಿ ಮುಖ್ಯಮಂತ್ರಿ ಆಗಿದ್ದರು. ಜಿಲ್ಲೆಯ 8 ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರೇ ಆಯ್ಕೆಯಾಗಿದ್ದರು. ಆದರೂ ಜಿಲ್ಲೆಯ ನಿರೀಕ್ಷಿತ ಅಭಿವೃದ್ದಿಗೆ ಏಕೆ ಮುಂದಾಗಲಿಲ್ಲ ಎಂದು ಪ್ರಶ್ನಿಸಿದ ಅವರು, ಧರ್ಮಸಿಂಗ್ ಆಡಳಿತಾವಧಿಯಲ್ಲಿ ಜಿಲ್ಲಾ ಕೇಂದ್ರಕ್ಕೆ ಮೆಡಿಕಲ್ ಕಾಲೇಜು ಮಂಜೂರಾಗಿದೆ ಎಂದು ತಿಳಿಸಿದರು.

ನಗರಸಭೆ ಚುನಾವಣೆಗೆ ಲೋಕಸಭೆ ಚುನಾವಣೆ ಬುನಾದಿ

ಮುಂದಿನ ನಗರಸಭೆ ಚುನಾವಣೆಗೆ ಬುನಾದಿಯಾಗಲಿರುವ ಲೋಕಸಭಾ ಚುನಾವಣೆಯನ್ನೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಗಂಭೀರವಾಗಿ ಪರಿಗಣಿಸಬೇಕು. ಆ ಮೂಲಕ ನಗರಸಭೆ ವ್ಯಾಪ್ತಿಯ 35 ವಾರ್ಡ್ ಗಳಲ್ಲಿ ಪಕ್ಷದ ಅಭ್ಯರ್ಥಿ ಜಯಗಳಿಸಲು ಲೋಕಸಭಾ ಚುನಾವಣೆಯ ಗೆಲುವು ಅನಿವಾರ್ಯವಾಗಿದೆ ಎಂದು ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.

ಮಂಡ್ಯನಗರದ ಯುಜಿಡಿ ಅನುಷ್ಟಾನಕ್ಕೆ 200 ಕೋಟಿ ಅನುದಾನ, ನಗರ ವ್ಯಾಪ್ತಿಯ ರಸ್ತೆ ಅಭಿವೃದ್ದಿಗೆ 50 ಕೋಟಿ ವಿಶೇಷ ಅನುದಾನ ತರಲು ಪ್ರಯತ್ನಿಸಲಾಗುತ್ತಿದೆ. 33 ಕೋಟಿ ರೂ. ವೆಚ್ಚದಲ್ಲಿ ಎಂ.ಸಿ ರಸ್ತೆ, ಪಾದಾಚಾರಿ ಮಾರ್ಗ ಹಾಗೂ ವೃತ್ತಗಳ ಅಭಿವೃದ್ದಿಗೆ ಯೋಜನೆ ಕಾರ್ಯಗತಗೊಳ್ಳಲಿದೆ ಎಂದರು.

ಸಚಿವರ ಅಪೇಕ್ಷೆಯಂತೆ ಮಂಡ್ಯನಗರ ವ್ಯಾಪ್ತಿಯಲ್ಲಿ 25 ಸಾವಿರ ಹಾಗೂ ಗ್ರಾಮೀಣ ಪ್ರದೇಶದಲ್ಲಿ 15 ಸಾವಿರ ಬಹುಮತ ಗಳಿಸಿ, ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಲು ಸಹಕರಿಸಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳೀಗೌಡ, ಪಕ್ಷದ ಕಾರ್ಯಾಧ್ಯಕ್ಷ ಚಿದಂಬರ್, ಮಹಿಳೆ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ನಗರ ಘಟಕದ ಅಧ್ಯಕ್ಷ ರುದ್ರಪ್ಪ, ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ ಶ್ರೀಧರ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಬೀ, ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಲಹಳ್ಳಿ ಅಶೋಕ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mandya

ಫೆ. 6ಕ್ಕೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ: ಎಚ್.ಆರ್.ಅನಂತೇಗೌಡ

Published

on

ಮದ್ದೂರು: ನಗರದ ಶಿವಪುರದ ಪೂರ್ಣಪ್ರಜ್ಞಾ ಕಾನ್ವೆಂಟ್‌ನಲ್ಲಿ ಫೆ. 6 ರಂದು ಬೆಳಗ್ಗೆ 10.30 ಕ್ಕೆ ಬೃಹತ್ ವಿಜ್ಞಾನ ವಸ್ತು ಪ್ರದರ್ಶನ, 2024-25 ನೇ ಸಾಲಿನ ಸಂಸ್ಥೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ಹಾಗೂ ವೈದ್ಯಕಿಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಎಚ್.ಆರ್.ಅನಂತೇಗೌಡ ತಿಳಿಸಿದರು.

ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಮತ್ತು ಆಧುನಿಕ ತಂತ್ರಜ್ಞಾನದ ಬಗ್ಗೆ ತಿಳಿಸುವ ಉದ್ದೇಶದಿಂದ ವಿಜ್ಞಾನ ವಸ್ತುಪ್ರದರ್ಶನ ಹಮ್ಮಿಕೊಂಡಿದ್ದು, ಶಾಲೆಯ ಎಲ್‌ಕೆಜಿಯಿಂದ  ಎಸ್‌ಎಸ್‌ಎಲ್‌ಸಿವರೆಗಿನ 1 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ಜತೆಗೆ ವಿವಿಧ ಮಾದರಿಯ ವಿಜ್ಞಾನದ ಮಾದರಿಗಳನ್ನು ಮಾಡಿರುವುದು ವಿಶೇಷವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷರಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯ, ಇಸ್ರೋ ವಿಜ್ಞಾನಿ ಡಾ.ಎಸ್.ವೆಂಕಟೇಶ್ವರ ಶರ್ಮ ಉದ್ಘಾಟನೆ ಹಾಗೂ ಶಾಸಕ ಕೆ.ಎಂ.ಉದಯ್ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಪಂ ಸಿಇಒ ಕೆ.ಎಆರ್.ನಂದಿನಿ, ಬಿಇಒ ಧನಂಜಯ, ನಿವೃತ್ತ ಬಿಇಒ ಬಿ.ಎನ್.ಮರಿಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆಂದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷೆ ಕಸ್ತೂರಿಅನಂತೇಗೌಡ ಇದ್ದರು.

Continue Reading

Mandya

ಅದ್ದೂರಿಯಾಗಿ ಜರುಗಿದ ಶ್ರೀ ಮಾರಮ್ಮ ದೇವಿ ಅಮ್ಮನವರ 3 ನೇ ವರ್ಷದ ವಾರ್ಷಿಕೋತ್ಸವ

Published

on

ಮದ್ದೂರು:  ತಾಲೂಕಿನ ಆತಗೂರು ಹೋಬಳಿಯ ಕಂಪಲಾಪುರ ಗ್ರಾಮದಲ್ಲಿ ಶ್ರೀಮಾರಮ್ಮ ದೇವಿ ಅಮ್ಮನವರ 3 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಮಂಗಳವಾರ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.

ವಾರ್ಷಿಕೋತ್ಸವ ಅಂಗವಾಗಿ ಸೋಮವಾರ ಸಂಜೆ ಗೋಧೂಳಿ ಲಗ್ನದಲ್ಲಿ ಮಂಗಳವಾದ್ಯ ಸಮೇತ ಗಂಗೆ ಪೂಜೆಯೊಂದಿಗೆ ಹೋಮ ಅವನಾದಿ ಕಾರ್ಯಕ್ರಮಗಳು ನಡೆಯಿತು.

ರಾತ್ರಿ 7.30 ರಿಂದ ಭಕ್ತಾದಿಗಳಿಗೆಲ್ಲ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಂಗಳವಾರ ಬೆಳಿಗ್ಗೆ 7 ಗಂಟೆಯಿಂದ ಹೋಮ ಕಾರ್ಯಕ್ರಮಗಳು ಜರುಗಿತು. ನಂತರ ಪೂರ್ಣವಧಿಯಾದ ನಂತರ ಅಮ್ಮನವರಿಗೆ ಪೂರ್ಣ ಕುಂಭ ಅಭಿಷೇಕ, ಮತ್ತು 108 ಲೀಟರ್ ಹಾಲಿನ ಅಭೀಷೇಕ ತದನಂತರ ಅಮ್ಮನವರಿಗೆ ಪುಷ್ಪಾಲಂಕಾರ ನಂತರ ಸಂಕಲ್ಪ ಅರ್ಚನೆ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗದ ಜತೆಗೆ ಸಹಸ್ರಾರು ಭಕ್ತಾಧಿಗಳಿಗೆ ಮಧ್ಯಾಹ್ನದ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.

ರಾತ್ರಿ 7 ಗಂಟೆಯಿಂದ ಅಮ್ಮನವರಿಗೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗದ ಜತೆಗೆ ರಾತ್ರಿಯೂ ಅಕ್ಕಪಕ್ಕದ ಗ್ರಾಮಸ್ಥರಿಗೆಲ್ಲ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಸಮಾಜ ಸೇವಕ ಮೋಹನ್ ಕಂಪಲಾಪುರ ಮಾತನಾಡಿ, ದೇವಸ್ಥಾನದ ಶಿತಲ ಅವಸ್ಥೆಯಲ್ಲಿದ್ದ ಅಮ್ಮನವರ ದೇವಸ್ಥಾನವನ್ನು ಜೀರ್ಣೋದ್ಧಾರ ಮತ್ತು ಪ್ರತಿಷ್ಠಾಪನೆ ಮಾಡಿ 3 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ದೇಗುಲದಲ್ಲಿ 3 ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಭಕ್ತಾಧಿಗಳು ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ತೀರ್ಥ, ಪ್ರಸಾದ ಸ್ವೀಕಾರ ಮಾಡಿದರು ಎಂದರು.

ನಿವೃತ್ತ ಅಭಿಯಂತರರು ಹಾಗು ಟ್ರಸ್ಟಿನ ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಣ್ಣ,ರವರು ಪೂಜಾ ಕಾರ್ಯಕ್ರಮದ ನೇತೃತ್ವವಹಿಸಿದ್ದರು ಮತ್ತು ಶ್ರೀ ಮಾರಮ್ಮ ದೇವಿ ದೇವಸ್ಥಾನ ಟ್ರಸ್ಟ್ ಹಾಗೂ ಶ್ರೀ ಮಾರಮ್ಮ ದೇವಿ ಭಕ್ತ ಮಂಡಳಿಯ ಪದಾಧಿಕಾರಿಗಳಾದ ಮೋಹನ್, ರಾಜಣ್ಣ, ಪುಟ್ಟಸ್ವಾಮಿ, ದಿನೇಶ್, ಬೋರೇಗೌಡ, ಉಮೇಶ್, ಆನಂದ್, ಶಿವಣ್ಣ ಹಾಗು ದೇಗುಲದ ಆರ್ಚಕ ವೆಂಕಟೇಶ್ ಇತರರಿದ್ದರು.

Continue Reading

Mandya

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಏ.12 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಮತ್ತು ಸ್ವಯಂ ಪ್ರೇರಿತ ಬಂದ್ : ಸಿ.ಕುಮಾರಿ

Published

on

ಮಂಡ್ಯ: ಸಾಮಾನ್ಯ ಜನರ ಜೀವನೋಪಾಯ ಮತ್ತು ಹಕ್ಕುಗಳ ಮೇಲಿನ ನಿರಂತರ ದಾಳಿ ನಿಲ್ಲಿಸಲು ಕೇಂದ್ರ ಸರಕಾರದ ಕಾರ್ಮಿಕ ಕೋಡ್ ರದ್ದು ಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಏ.12 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಮತ್ತು ಸ್ವಯಂ ಪ್ರೇರಿತ ಬಂದ್ ನಡೆಸಲಾಗುವುದು ಎಂದು ಸಿಐಟಿಯು ಪ್ರಧಾನ ಕಾರ್‍ಯದರ್ಶಿ ಸಿ.ಕುಮಾರಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿದ್ದ 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಕಾರ್ಪೋರೇಟ್ ಸಂಸ್ಥೆಗಳಿಗೆ ನೆರವಾಗಲು 4 ಕಾರ್ಮಿಕ ಸಂಹಿತೆಗಳನ್ನು ಪ್ರಕಟಿಸಿದೆ. 2019 ಹಾಗೂ 2020 ರಲ್ಲೂ ಇದು ಜಾರಿಯಾಗದಂತೆ 5 ಮುಷ್ಕರಗಳನ್ನು ಮಾಡಿ ತಡೆಹಿಡಿಯಲಾಗಿತ್ತು ಎಂದರು.

ಸಾರ್ವಜನಿಕ ಬಳಕೆಯ ವಿದ್ಯುತ್, ದೂರ ಸಂಪರ್ಕ, ಕಲ್ಲಿದ್ದಲು, ಗಣಿಗಾರಿಕೆ, ರೈಲ್ವೆ, ಹೆದ್ದಾರಿ, ಬಂದರು, ಹಡುಗು ಕಟ್ಟೆಗಳು, ನಗರಾಭಿವೃದ್ಧಿ, ತೈಲ ಮುಂತಾದವನ್ನು ಖಾಸಗೀಕರಣ ಮಾಡಲಾಗಿದೆ. ಭೂಸ್ವಾಧೀನ ಕಾಯ್ದೆ ಮೂಲಕ ಶೇ.70 ರಷ್ಟು ಕೃಷಿಕರು ನಿರುದ್ಯೋಗಿಗಳಾಗಿದ್ದಾರೆ. ಇದೀಗ ಯೂನಿಯನ್ ಮುಕ್ತ ವಾತಾವರಣ ಕಲ್ಪಿಸಲು ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿ ಹೊಸ ಶ್ರಮಿಕ ನೀತಿ ಜಾರಿಗೆ ತರಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಪರಮಾಣು ಶಕ್ತಿಯ ಸುಸ್ಥಿರ ಬಳಕೆ ಮತ್ತು ಪ್ರಗತಿಯ ಕಾಯ್ದೆಯ ಮೇಲಿನ ನಿಯಂತ್ರಣ, ಮನರೇಗಾ ಯೋಜನೆ ಮುಂದುವರಿಕೆ, ಬಲವಂತದ ಭೂ ಸ್ವಾಧೀನ, ಭೂ, ಸುಧಾರಣಾ ಕಾಯ್ದೆ ಹಿಂಪಡೆಯಬೇಕು. ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಶಾಸನ ಭದ್ರತೆ ಮುಕ್ತ ವಾಣಿಜ್ಯ ಒಪ್ಪಂದ ಹಾಗೂ ರಾಜ್ಯ ಸರಕಾರ 4 ಲೇಬರ್ ಕೋಡ್ ನಿಯಮಾವಳಿ ಹಾಗೂ ಕೇಂದ್ರ ಸರ್ಕಾರದ ಎಲ್ಲ ಮಾನವ ವಿರೋಧಿ ಮಸೂದೆ ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.

ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಎಂ.ವಿ.ಕೃಷ್ಣ ಮಾತನಾಡಿ, ದೇಶಾದ್ಯಂತ ಕರೆ ನೀಡಿರುವ ಸಾರ್ವತ್ರಿಕ ಮುಷ್ಕರ ಹಾಗೂ ಸ್ವಯಂ ಪ್ರೇರಿತ ಬಂದ್‌ನ ಹಿನ್ನಲೆ ಫೆ.5 ರಿಂದ ಜಿಲ್ಲೆ ಎಲ್ಲ ಹೋಬಳಿ ಮಟ್ಟದಲ್ಲಿ ಪ್ರಚಾರ ಮಾಡಲಾಗುವುದು. ಫೆ.12 ರಂದು ನಗರದಾದ್ಯಂತ ಬೈಕ್ ಹಾಗೂ ಆಟೋಗಳ ಜಾಥ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಸಿಐಟಿಯು ಜಿಲ್ಲಾಧ್ಯಕ್ಷ ಎಂ.ಎಂ.ಶಿವಕುಮಾರ್, ಕರುನಾಡ ಸೇವಕರು ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಆಟೋ ಚಾಲಕರ ಸಂಘದ ಅಧ್ಯಕ್ಷ ಕೃಷ್ಣ, ಎಐಎಡಬ್ಲ್ಯೂಯು ಜಿಲ್ಲಾ ಪ್ರಧಾನ ಕಾರ್‍ಯದರ್ಶಿ ಬಿ.ಹನುಮೇಶ್, ಜನಶಕ್ತಿಯ ಎಂ.ಸಿದ್ದರಾಜು ಹಾಜರಿದ್ದರು.

Continue Reading

Trending

error: Content is protected !!