ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ ಅಲ್ಲ, ವೇಣುಗೋಪಾಲ್ ಕಾಂಗ್ರೆಸ್ ಹೈಕಮಾಂಡ್ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಇಂದು ಸಿಎಂ ಮತ್ತು ವೇಣುಗೋಪಾಲ್ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇಷ್ಟು ದಿನ ರಾಜ್ಯದ ಗೊಂದಲಕ್ಕೆ ಎಐಸಿಸಿ ಅಧ್ಯಕ್ಷರು ಎಲ್ಲರನ್ನು ಕರೆದು ಮಾತುಕತೆ ಮಾಡಿ ನನ್ನಿಂದ ಏನು ಆಗಲ್ಲವೆಂದು ದೆಹಲಿ ಹೋಗಿದ್ದರು. ನನ್ಮ ಕೈಯಲ್ಲಿ ಏನು ಇಲ್ಲ, ಹೈಕಮಾಂಡ್ ಗಮನಕ್ಕೆ ತರುತ್ತೇನೆಂದು ಹೋದರು. ಯಾಕೆ ಮಲ್ಲಿಕಾರ್ಜುನ ಖರ್ಗೆ ಹೀಗೆ ಮಾತಾಡಿದರೆಂದು ರಾಜ್ಯದ ಜನರಿಗೆ ಗೊಂದಲ ಆಗಿತ್ತು. ಈಗ ಆ ಗೊಂದಲ ಏನೆಂದು ಕ್ಲಿಯರ್ ಆಗಿದೆ. ಕಾಂಗ್ರೆಸ್ ಹೈಕಮಾಂಡ್ ಯಾರು ಅಂದರೆ ವೇಣುಗೋಪಾಲ್ ಎಂದು ಗೊತ್ತಾಯಿತು. ಎಐಸಿಸಿ ಅಧ್ಯಕ್ಷರಿಗಿಂತ ವೇಣುಗೋಪಾಲ್ ದೊಡ್ಡವರೆಂದು ಗೊತ್ತಾಯಿತ್ತೆಂದು ಎಂದು ವ್ಯಂಗ್ಯ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆಗೂ ವೇಣುಗೋಪಾಲ್ ಹೈಕಮಾಂಡ್ ಆಗಿದ್ದಾರೆ. ಇದು ಕಾಂಗ್ರೆಸ್ ಪರಿಸ್ಥಿತಿ ಎಲ್ಲಿಗೆ ಬಂದಿದೆ ಗೊತ್ತಾಯ್ತು. ಯಾವುದೋ ಒಬ್ಬ ವ್ಯಕ್ತಿ ಕೈಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೆ ಎಂದು ವಾಗ್ದಾಳಿ ನಡೆಸಿದರು.
ಈ ದೇಶ ನಡೆಸೋ ಕಾಂಗ್ರೆಸ್ ಕೈಯಲ್ಲಿ ಇವತ್ತು ಬಂಡವಾಳ ಇಲ್ಲ. ಬಂಡವಾಳಕ್ಕೆ ಇರೋ ಒಂದೇ ಒಂದು ರಾಜ್ಯ ಕರ್ನಾಟಕ. ವೇಣುಗೋಪಾಲ್ ಅಲ್ಲಿ ಕುಳಿತು ಕಾಂಗ್ರೆಸ್ನಲ್ಲಿ ಇರೋ 2-3 ಗುಂಪುಗಳನ್ನು ಕರೆಯುತ್ತಿದ್ದಾರೆ. ಯಾವ ಗುಂಪು ಎಷ್ಟು ಬಾಳಿಕೆ ಬರುತ್ತದೆಂದು ವೇಣುಗೋಪಾಲ್ ನೋಡುತ್ತಿದ್ದಾರೆ. ಕಾಂಗ್ರೆಸ್ಗೆ ಮೊದಲು ಎಟಿಎಂ ಲೀಡರ್ ಬೇರೆ ಇದ್ದರು. ಆ ಜನರಲ್ ಸೆಕ್ರೆಟರಿ ಬೇರೆ. ಹೈಕಮಾಂಡ್ ಜನರಲ್ ಸೆಕ್ರೆಟರಿ ವೇಣುಗೋಪಾಲ್. ಇವರು ಯರ್ಯಾರು ಎಷ್ಟಕ್ಕೆ ಬಾಳುತ್ತೀರಾ. ನೀವು ಎಷ್ಟಕ್ಕೆ ಬಾಳುತ್ತೀರಾ ಅಂತ ಇಬ್ಬರನ್ನು ತೂಕ ಮಾಡೋ ಸ್ಥಿತಿಗೆ ಬಂದಿದೆ. ರಾಜ್ಯದ ಹಿತ ಮರೆತು ಅಧಿಕಾರ ಉಳಿಯೋಕೆ, ಕುರ್ಚಿ ಉಳಿಸಿಕೊಳ್ಳಬೇಕೆಂದು ಸಿಎಂ-ಡಿಸಿಎಂ ಪೈಪೋಟಿಗೆ ಬಿದ್ದು ರಾಜ್ಯದ ಸ್ಥಿತಿ ಗಂಭೀರ ಮಾಡಿದ್ದಾರೆ ಎಂದು ಸಿಎಂ, ಡಿಸಿಎಂ ಮತ್ತು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಅನೇಕ ಸಮಸ್ಯೆ ಇದೆ, ರೈತರ ಬಗ್ಗೆ ದಲಿತರ ಬಗ್ಗೆ ಕೇಳೋರು ಇಲ್ಲ. ದಲಿತರ ಯೋಗ ಕ್ಷೇಮ ಈ ಸರ್ಕಾರ ನೋಡಿಲ್ಲ. ಕಾಂಗ್ರೆಸ್ನಲ್ಲಿರೋ ದಲಿತ ಲೀಡರ್ಗಳಿಗೂ ಕಾಂಗ್ರೆಸ್ ಉಳಿಯೋದು ಮುಖ್ಯ. ದಲಿತ ಸಮುದಾಯ ಉಳಿಯೋದು ಮುಖ್ಯ ಅಲ್ಲ. ಅಧಿವೇಶನ 8 ರಿಂದ ಪ್ರಾರಂಭ ಆಗುತ್ತಿದೆ. ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡೋಕೆ ಅಧಿವೇಶನ ಮಾಡುತ್ತೇವೆ. ಆದರೆ ಈಗಾಗಲೇ 31 ಬಿಲ್ಗಳು ಇವೆ. ಈಗ ಮತ್ತೆ 22 ಹೊಸ ಬಿಲ್ಗಳು ಇವೆಂದು ಹೇಳುತ್ತಿದ್ದಾರೆ. ಇದು ಬಿಲ್ ಪಾಸ್ ಅಧಿವೇಶನಾ ಎಂದು ಪ್ರಶ್ನೆ ಮಾಡಿದ್ದಾರೆ.
ಸದನ ನಡೆಯೋದೆ 8-9 ದಿನ. ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಇಲ್ಲ. ರಾಜು ಕಾಗೆ ಪ್ರತ್ಯೇಕ ರಾಜ್ಯ ಬೇಕು ಅಂತ ಕೇಳುತ್ತಿದ್ದಾರೆ. ನಿಮ್ಮದೇ ಶಾಸಕರು. ಇದಕ್ಕೆ ಸರ್ಕಾರ ಉತ್ತರ ಕೊಡಬೇಕು. ಕಾಂಗ್ರೆಸ್ ದೇಶ, ರಾಜ್ಯ ಒಡೆಯೋದ್ರಲ್ಲಿ ನಿಪುಣರು. ಯುಪಿ, ಛತ್ತೀಸ್ಗಢ, ಆಂಧ್ರ ಪ್ರದೇಶ ಒಡೆದರು. ಈಗ ಕರ್ನಾಟಕ ಒಡೆಯೋಕೆ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ. ಈ ಬಿಲ್ ಪಾಸ್ ಮಾಡೋಕೆ ವಿಶೇಷ ಅಧಿವೇಶನ ಕರೆಯಿರಿ. ಆದರೆ ಬೆಂಗಳೂರಿಗೆ ಸಂಬಂಧಿಸಿದ ಬಿಲ್ ಬೆಳಗಾವಿಯಲ್ಲಿ ಮಾಡೋದು ಸರಿಯಲ್ಲ ಎಂದರು.
ಸಚಿವ ಹೆಚ್.ಕೆ. ಪಾಟೀಲ್ರನ್ನು ಏನೋ ಅಂದುಕೊಂಡಿದ್ದೆ. ಉತ್ತರ ಕರ್ನಾಟಕ ಭಾಗದ ನಾಯಕರಾಗಿ ಅವರು ಆ ಭಾಗಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕ ಹೀಗೆ ತಾರತಮ್ಯ ಆಗೋಕೆ ಉತ್ತರ ಕರ್ನಾಟಕದ ನಾಯಕರೇ ಕಾರಣ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಯಾಕೆ ಹಿಂದುಳಿದಿದೆ? ಅಲ್ಲಿಯವರೇ ಸಿಎಂ ಆಗಿದ್ದರು ಯಾಕೆ ಅಭಿವೃದ್ಧಿ ಆಗಿಲ್ಲ? ತಾರತಮ್ಯ ಮಾಡೋರಿಗೆ ತಕ್ಕ ಪಾಠ ಕಲಿಸೋ ಕೆಲಸ ಮಾಡಬೇಕು ಎಂದು ಹೇಳಿದರು.