Mandya
ಏ.6 ರಂದು ಸಂಸ್ಕೃತಿ ಬಿಂಬಿಸುವ ಜಾನಪದ ಜಾತ್ರೆ
ಮಂಡ್ಯ: ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ) ಸಹಯೋಗದಲ್ಲಿ ಏ.6 ಬೆಳಿಗ್ಗೆ 10 ಗಂಟೆಗೆ ಕಾಲೇಜಿನ ವನರಂಗದಲ್ಲಿ ಜಾನಪದ ಜಾತ್ರೆ ಏರ್ಪಡಿಸಲಾಗಿದೆ ಎಂದು ಕಾಲೇಜಿನ ಸಾಂಸ್ಕತಿಕ ವೇದಿಕೆ ಸಂಚಾಲಕ ಡಾ.ಕುಮಾರ್ ಬೆಳಲೆ ಹೇಳಿದರು.
ಸಂಸ್ಕೃತಿ ಚಿಂತಕ, ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಅವರು ಸಮಾರಂಭ ಉದ್ಘಾಟಿಸುವರು. ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ.ಹಿ.ಚಿ.ಬೋರಲಿಂಗಯ್ಯ, ಪ್ರಾಂಶುಪಾಲರಾದ ಡಾ.ಕೆ.ಹೇಮಲತಾ ಭಾಗವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.
ವಿದ್ಯಾರ್ಥಿಗಳಿಗೆ ಜಾನಪದ, ಸಂಸ್ಕೃತಿಯನ್ನು ತಿಳಿಸುವ ಸಲುವಾಗಿ 2013ರಲ್ಲಿ ನಮ್ಮ ಕಾಲೇಜಿನಲ್ಲಿ ಜಾನಪದ ಜಾತ್ರೆ ಪ್ರಾರಂಭಿಸಲಾಯಿತು. ಅಂದಿನಿಂದ ನಿರಂತರವಾಗಿ ನಡೆಸಲಾಗುತ್ತಿತ್ತು. ಕೋವಿಡ್ ಕಾರಣದಿಂದಾಗಿ ಎರಡು ವರ್ಷ ಕಾರ್ಯಕ್ರಮ ಮಾಡಲಾಗಿರಲಿಲ್ಲ. ಕಳೆದ ವರ್ಷ ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಸಂಭ್ರಮ, ಸಡಗರದಿಂದ ಜಾನಪದ ಜಾತ್ರೆ ಆಯೋಜಿಸಲು ತೀರ್ಮಾನಿಸಲಾಗಿದೆ. ವಿದ್ಯಾರ್ಥಿಗಳೂ ಸಹ ಇದರಲ್ಲಿ ಪಾಲ್ಗೊಳ್ಳಲು ಉತ್ಸಾಹ ತೋರಿದ್ದಾರೆ ಎಂದರು.
ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ದೇಸೀ ಉಡುಗೆಯಲ್ಲೇ ಬರುತ್ತಾರೆ. ಕಾಲೇಜಿನ ಆವರಣದಲ್ಲಿ ಅಲಂಕೃತಗೊಂಡ ಎತ್ತಿನ ಗಾಡಿ, ತಮಟೆ, ಪೂಜಾ ಕುಣಿತ, ಕೋಲಾಟ, ಕಾರುಡಿಗೊಂಬೆ, ವೀರಗಾಸೆ ಮೊದಲಾದ ಕಲಾತಂಡಗಳ ಮೆರವಣಿಗೆಯನ್ನು ಏರ್ಪಡಿಸಲಾಗಿದೆ. ಭತ್ತ, ರಾಗಿಯ ರಾಶಿ ಪೂಜೆಯೊಡನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಜಾನಪದ ವಸ್ತುಗಳ ಪ್ರದರ್ಶನ, ದೇಸಿ ತಿಂಡಿ ಅಂಗಡಿಗಳು, ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.
ಸುಂದರವಾಗಿ ದೇಸಿ ವೇಷಭೂಷಣ ತೊಟ್ಟ ವಿದ್ಯಾರ್ಥಿನಿಯರಿಗಾಗಿ ಜಾನಪದ ಚಲುವೆ/ಚಲುವ ಪ್ರಶಸ್ತಿ ನೀಡಲಾಗುತ್ತದೆ. ಜಾನಪದ ಸಂಸ್ಥೆಯವರು ಗಾದೆ ಹೇಳಿ-ಒಗಟು ಬಿಡಿಸಿ-ಬಹುಮಾನ ಗೆಲ್ಲಿ ಎಂಬ ಸ್ಪರ್ಧೆ ಏರ್ಪಡಿಸಲಾಗಿದೆ, ಜೊತೆಗೆ ಗ್ರಾಮೀಣ ಕ್ರೀಡೆಗಳ ಸ್ಪರ್ಧೆ, ರಂಗೋಲಿ ಸ್ಪರ್ಧೆ ಇರುತ್ತದೆ. ಈ ಬಾರಿ ವಿಶೇಷವಾಗಿ ವಿದ್ಯಾರ್ಥಿನಿಯರು, ಮಹಿಳಾ ಮತ್ತು ಪುರುಷ ಸಿಬ್ಬಂದಿಗೆ ಹಳ್ಳಿಯ ತಿಂಡಿಗಳಾದ ಕಜ್ಜಾಯ, ರೆವೆಉಂಡೆ, ಕರ್ಜಿಕಾಯಿ, ಎಳ್ಳುಂಡೆ, ಒಬ್ಬಟ್ಟು ಸೇರಿದಂತೆ ₹500 ಮೌಲ್ಯದ ಸಿಹಿ ಖಾರಾ ಒಳಗೊಂಡಂತೆ ಬುಜ್ಜಣಿಗೆ ಬುಟ್ಟಿಯಲ್ಲಿ ಇಟ್ಟು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿ ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಜಾನಪದೀಯವಾಗಿ ಅಲಂಕೃತಗೊಂಡ ಎತ್ತಿನ ಗಾಡಿ ಮೆರವಣಿಗೆಯಲ್ಲಿ ಭಾಗವಹಿಸಿ ಬಹುಮಾನ ಪಡೆದವರಿಗೆ ₹3 ಸಾವಿರ, ₹3 ಸಾವಿರ ಹಾಗೂ ₹1 ಸಾವಿರ ಬಹುಮಾನ ನೀಡಲಾಗುತ್ತದೆ. ವಿದ್ಯಾರ್ಥಿಗಳು ತಾವೇ ತಿಂಡಿಗಳನ್ನು ತಯಾರಿಸಿ ಮಾರಾಟ ಮಾಡಲು 14 ಸ್ಟಾಲ್ಗಳನ್ನು ತೆರೆಯಲಾಗುತ್ತದೆ ಎಂದರು.
ಪ್ರಾಂಶುಪಾಲರಾದ ಡಾ.ಕೆ.ಹೇಮಲತಾ, ಪ್ರಾಧ್ಯಾಪಕರಾದ ಡಾ.ಜ್ಯೋತ್ಸ್ನಾ ಕಾರಂತ್, ಡಾ.ಕೆಂಪಮ್ಮ, ಡಾ.ಪ್ರಮೀಳಾ, ಡಾ.ಕೃಷ್ಣೇಗೌಡ, ಪತ್ರಾಂಕಿತ ವ್ಯವಸ್ಥಾಪಕ ರವಿಕಿರಣ್ ಇದ್ದರು.

Mandya
ತಾಲೂಕು ಪಂಚಾಯತ್ಗೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲಿಸಿದ ಜಿ.ಪಂ. ಸಿಇಓ ಕೆ.ಆರ್. ನಂದಿನಿ
ಮಂಡ್ಯ: ಸ್ವಚ್ಛ ಭಾರತ, ಮಹಾತ್ಮ ಗಾಂಧಿ ನರೇಗಾ, ಎನ್ಆರ್ಎಲ್ಎಂ ಯೋಜನೆಗಳು ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಪ್ರಗತಿಯನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಮಳವಳ್ಳಿ ತಾಲೂಕು ಪಂಚಾಯತ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಜಿ.ಪಂ. ಸಿಇಓ ಕೆ.ಆರ್. ನಂದಿನಿ ಸೂಚಿಸಿದರು.

ತಾಲೂಕು ಪಂಚಾಯತ್ ಕಚೇರಿಗೆ ಇಂದು ಭೇಟಿ ನೀಡಿದ ಅವರು, ಪ್ರತಿ ಸೋಮವಾರ ತಾಲೂಕು ಪಂಚಾಯತ್ ಕಚೇರಿಯಲ್ಲಿ ಕುಂದು ಕೊರತೆ ಸಭೆ ಆಯೋಜಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ, ಸಾರ್ವಜನಿಕರಿಂದ ಸ್ವೀಕೃತವಾಗಿರುವ ಕುಂದು ಕೊರತೆ ಅರ್ಜಿಗಳ ಬಗ್ಗೆ ಈವರೆಗೆ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ಅನುಪಾಲನಾ ವರದಿಯನ್ನು ಪಡೆದು ಪರಿಶೀಲನೆ ನಡೆಸಿದರು.
ಮುಂದಿನ ಸೋಮವಾರದಿಂದ ತಾ.ಪಂ. ಕಚೇರಿಗಳಲ್ಲಿ ಕುಂದುಕೊರತೆ ಸಭೆಯ ಅನುಪಾಲನಾ ಸಭೆ
ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಆಗಸ್ಟ್. 18 ರಿಂದ ಪ್ರತಿ ಸೋಮವಾರವೂ ಸಾರ್ವಜನಿಕ ಕುಂದು ಕೊರತೆ ಸಭೆಗಳನ್ನು ಆಯೋಜಿಸಲಾಗುತ್ತಿದ್ದು, ಜಿಲ್ಲಾ ಪಂಚಾಯತ್ ಕಚೇರಿಗೆ ಈವರೆಗೆ 300ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾಗಿವೆ. ಈ ಅರ್ಜಿಗಳ ಕುರಿತು ತಾಲ್ಲೂಕು ಮತ್ತು ಗ್ರಾಮ ಪಂಚಾಯತ್ ಗಳಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಲು ಇಂದಿನಿಂದ ತಾಲೂಕು ಪಂಚಾಯತ್ ಕಚೇರಿಯಲ್ಲಿ ಅನುಪಾಲನಾ ಸಭೆಯನ್ನು ನಡೆಸಲಾಗುತ್ತಿದೆ. ಮುಂದಿನ ಸೋಮವಾರವೂ ಸಹ ಮತ್ತೊಂದು ತಾಲೂಕು ಪಂಚಾಯತ್ ನಲ್ಲಿ ಸಾರ್ವಜನಿಕ ಕುಂದು ಕೊರತೆಗಳ ಅನುಪಾಲನಾ ಸಭೆಯನ್ನು ನಡೆಸಲಾಗುತ್ತದೆ ಎಂದು ಜಿ.ಪಂ. ಸಿಇಓ ರವರು ತಿಳಿಸಿದರು.

ಶೌಚಾಲಯ ನಿರ್ಮಾಣ ಮಾಡಿಕೊಂಡ ಫಲಾನುಭವಿಗಳಿಗೆ ಪ್ರೋತ್ಸಾಹಧನ ಪಾವತಿಸಿ: ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಶೌಚಾಲಯ ನಿರ್ಮಾಣ ಮಾಡಿಕೊಂಡಿರುವ ಫಲಾನುಭವಿಗಳಿಗೆ ರೂ.12,000/-ಗಳಂತೆ ಪ್ರೋತ್ಸಾಹಧನ ಬಿಡುಗಡೆಯಾಗಿದ್ದು, ಸದರಿ ಅನುದಾನವನ್ನು ಫಲಾನುಭವಿಗಳಿಗೆ ಪಾವತಿಸಲು ಕ್ರಮವಹಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಸಾಮಾಗ್ರಿ ಮೊತ್ತವನ್ನು ಆಧ್ಯತೆಯ ಮೇಲೆ ಪಾವತಿಸಲು ಸೂಚನೆ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಾಮಾಗ್ರಿ ಮೊತ್ತವನ್ನು ಹಿರಿತನದ ಆಧಾರದಲ್ಲಿ ಪಾವತಿಸಲು ನಿಯಮಾನುಸಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚಿಸಿದರು.

ತೆರಿಗೆ ವಸೂಲಾತಿಯಲ್ಲಿ ಶೇಕಡ 100ರಷ್ಟು ಪ್ರಗತಿ ಸಾಧಿಸಲು ಯೋಜನೆ ರೂಪಿಸಿ: ಪ್ರಸಕ್ತ ಸಾಲಿನ ಬೇಡಿಕೆಗೆ ಅನುಗುಣವಾಗಿ ತೆರಿಗೆ ವಸೂಲಾತಿ ಮಾಡಲು ಯೋಜನೆ ರೂಪಿಸುವಂತೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಕರೆ ನೀಡಿದರು.
ಪ್ರತೀ ಗುರುವಾರ ಹಮ್ಮಿಕೊಳ್ಳಲಾಗುತ್ತಿರುವ ತೆರಿಗೆ ವಸೂಲಾತಿ ವಿಶೇಷ ಅಭಿಯಾನದಂದು ಹೆಚ್ಚಿನ ಪ್ರಗತಿ ಸಾಧಿಸಲು ಹಾಗೂ ಉಳಿದ ದಿನಗಳಲ್ಲಿಯೂ ತೆರಿಗೆ ವಸೂಲಾತಿಗೆ ಕ್ರಮವಹಿಸಬೇಕೆಂದು ತಿಳಿಸಿದರು.

ಗ್ರಾ.ಪಂ. ಅಭಿಲೇಖಾಲಯದ ಬಗ್ಗೆ ವರದಿ ಸಲ್ಲಿಸಲು ಸೂಚನೆ: ಗ್ರಾ.ಪಂ.ಗಳಲ್ಲಿನ ದಾಖಲೆಗಳು, ಇ-ಸ್ವತ್ತು ಸಂಬಂಧಿಸಿದ ಕಡತಗಳು ಸೇರಿದಂತೆ ಇತರೆ ದಾಖಲೆಗಳ ನಿರ್ವಹಣೆಗೆ ಗ್ರಾ.ಪಂ.ಗಳು ಸುಸಜ್ಜಿತ ಅಭಿಲೇಖಾಲಯಗಳನ್ನು ನಿರ್ವಹಣೆ ಮಾಡುವಂತೆ ಈಗಾಗಲೇ ಸೂಚಿಸಲಾಗಿದೆ. ಈ ಬಗ್ಗೆ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಭಿಲೇಖಾಲಯ ನಿರ್ವಹಣೆ ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ವರದಿ ಸಲ್ಲಿಸುವಂತೆ ತಾ.ಪಂ. ಇಓ ಗಳಿಗೆ ಸೂಚಿಸಿದರು.
ಇ-ಸ್ವತ್ತು ವಿತರಣೆಗೆ ಕ್ರಮವಹಿಸಲು ಸೂಚನೆ: ಹೊಸ ತಂತ್ರಾಂಶದ ಮೂಲಕ ಇ-ಸ್ವತ್ತು ವಿತರಣೆ ಮಾಡಲು ಅಗತ್ಯ ಪೂರ್ವಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ ಈ ಬಗ್ಗೆ ಸಾಕಷ್ಟು ತರಬೇತಿಗಳನ್ನು ಸಹ ನೀಡಲಾಗಿದ್ದು, ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳು ಎದುರಾದಲ್ಲಿ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ನ ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ) ಚಂದ್ರು, ಮಳವಳ್ಳಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್, ತಾಲ್ಲೂಕು ಪಂಚಾಯತ್ ನ ಸಹಾಯಕ ನಿರ್ದೇಶಕ (ಪಂ.ರಾಜ್) ಪಾರ್ಥಸಾರಥಿ ಸೇರಿದಂತೆ ತಾಲ್ಲೂಕಿನ ಎಲ್ಲಾ ಪಿಡಿಓಗಳು ಹಾಗೂ ಗ್ರಾ.ಪಂ. ಸಿಬ್ಬಂದಿಗಳು ಹಾಜರಿದ್ದರು.
Mandya
ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ SC, ST ಆಯೋಗದ ಅಧ್ಯಕ್ಷ ಡಾ. ಮೂರ್ತಿ
ಮದ್ದೂರು : ರಾಜ್ಯ ಎಸ್, ಎಸ್ಟಿ ಆಯೋಗದ ಅಧ್ಯಕ್ಷ ಡಾ. ಮೂರ್ತಿ ರವರು ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ,ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ನಂತರ ಅವರು ಮಾತನಾಡಿ ಆಯೋಗದಲ್ಲಿ ಈಗಾಗಲೇ ಸುಮಾರು 2,800 ಅರ್ಜಿಗಳು ದಾಖಲಾಗಿವೆ ಅವುಗಳಲ್ಲಿ ಸುಮಾರು 60 ರಿಂದ 70 ಅರ್ಜಿದಾರರ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದರು.
ನಾನು ಆಯೋಗದ ಅಧ್ಯಕ್ಷನಾದ ಬಳಿಕ ಬಹಳಷ್ಟು ಅಹವಾಲುಗಳು ರಾಜ್ಯದ ಇತರೆಡೆಗಳಿಂದ ಬರುತ್ತಿದ್ದವು. ಹೀಗಾಗಿ ತಾಲೂಕು ಮಟ್ಟದಲ್ಲಿಯೇ ಸಭೆ ನಡೆಸಿದ್ದು, ಅರ್ಜಿ ಸ್ವೀಕರಿಸಿ ಅಲ್ಲಿಯೇ ಅಧಿಕಾರಿಗಳ ಸಭೆಯನ್ನೂ ನಡೆಸಲು ತೀರ್ಮಾನಿಸಿದ ಹಿನ್ನೆಲೆಯಲ್ಲಿ ಇಂದು ನನ್ನ ಸ್ವಂತ ತಾಲೂಕಾದ ಮದ್ದೂರಿನಲ್ಲಿ ಸಭೆ ನಡೆಸಿದ್ದೇನೆ ಎಂದು ಹೇಳಿದರು.

ಇಂದು ಸಾರ್ವಜನಿಕವಾಗಿ ಒಟ್ಟು 26 ಅರ್ಜಿಗಳು ಸಲ್ಲಿಕೆಯಾಗಿದ್ದು ಇದರಲ್ಲಿ ಜಮೀನು, ದೌರ್ಜನ್ಯ, ಸುಳ್ಳು ಜಾತಿ ಸಲ್ಲಿಕೆ ವಿಚಾರಗಳು ಸೇರಿದಂತೆ ಸ್ಮಶಾನ ವಿವಾದಗಳಿಗೆ ಸಂಭಂಧಿಸಿದಂತೆ ಅರ್ಜಿಗಳನ್ನು ಪಡೆಯಲಾಗಿದೆ ಎಂದರು.
ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸಲ್ಲಿಕೆಯಾಗಿರುವ ಅರ್ಜಿಗಳ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಶೀಘ್ರ ಬಗೆಹರಿಸಲು ಸೂಚಿಸಿದ್ದೇನೆ ಎಂದರು.

ಈ ವೇಳೆ ಮುಖಂಡರಾದ ಹಿಂದುಳಿದ ವರ್ಗದ ಮುಖಂಡರಾದ ಚಿದಂಬರ ಮೂರ್ತಿ, ಗುಡಿಗೆರೆ ಬಸವರಾಜು, ಕುಮಾರ್ ಕೊಪ್ಪ,ರಾಮಾನಂದ್, ಆಲೂರು ಬಸವರಾಜು, ಹಳ್ಳಿಕೆರೆ ಮಾದೇಶ್, ಆಲೂರು ಕುಮಾರ್, ಮಹದೇವಪ್ಪ, ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ, ಸಮಾಜ ಕಲ್ಯಾಣಾಧಿಕಾರಿ ನಾಗರಾಜು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
Mandya
ಚಿರತೆ ದಾಳಿಗೆ 4 ಕುರಿ ಸಾ*ವು, 2 ಕುರಿಗೆ ತೀವ್ರ ಗಾಯ
ಮದ್ದೂರು: ಚಿರತೆ ದಾಳಿಗೆ 4 ಕುರಿಗಳು ಸಾವನ್ನಪ್ಪಿದ್ದು, 2 ಕುರಿಗಳು ತೀವ್ರವಾಗಿ ಗಾಯಗೊಂಡಿರುವ ಘಟನೆ ಜರುಗಿದೆ.
ತಾಲೂಕಿನ ವಳಗೆರೆಹಳ್ಳಿ ಗ್ರಾಮದ ಶ್ರೀನಿವಾಸ್ ಎಂಬುವವರ ಮನೆಯ ಹಿಂಭಾಗದ ಕೊಟ್ಟಿಗೆಗೆ ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ನುಗ್ಗಿರುವ ಚಿರತೆಯೊಂದು 18 ಕುರಿಗಳ ಪೈಕಿ 6 ಕುರಿಗಳ ಮೇಲೆ ದಾಳಿ ಮಾಡಿದೆ.
ಕುರಿಗಳ ಚೀರಾಟದಿಂದ ಕೊಟ್ಟಿಗೆಗೆ ಬಂದ ಶ್ರೀನಿವಾಸ್ ಚಿರತೆ ದಾಳಿ ಮಾಡುತ್ತಿರುವುದು ಕಂಡು ಬಂದಿದೆ. ಇದರಿಂದ ಆತಂಕಗೊಂಡು ಶ್ರೀನಿವಾಸ್ ಕೂಗಾಟ ಚೀರಾಟ ನಡೆಸಿದ ಪರಿಣಾಮ ಚಿರತೆ ಅಲ್ಲಿಂದ ಪರಾರಿಯಾಗಿದೆ. ಆದರೆ, ಅಷ್ಟರಲ್ಲಿ 4 ಕುರಿಗಳು ಸಾವನ್ನಪ್ಪಿದ್ದು, 2 ಕುರಿಗಳು ಗಾಯಗೊಂಡಿವೆ.

ತಾಲೂಕಿನಾದ್ಯಂತ ಚಿರತೆಗಳ ಉಪಟಳ ಹೆಚ್ಚಾಗಿದ್ದು, ಇದರಿಂದ ರಾತ್ರಿಯ ವೇಳೆ ರೈತರು ಜಮೀನುಗಳಿಗೆ ಹೋಗಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ ಹಾಗೂ ಕೆಲವು ಗ್ರಾಮಗಳಲ್ಲಿ ಬೆಳಗಿನ ವೇಳೆಯೇ ಚಿರತೆಗಳು ಕಂಡು ಬರುತ್ತಿದೆ. ಆದ್ದರಿಂದ, ಅರಣ್ಯ ಅಧಿಕಾರಿಗಳು ಚಿರತೆ ಉಪಟಳ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಗವಿಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ಚಿರತೆ ಸೆರೆಗೆ ಅಗತ್ಯವಿರುವ ಕಡೆಗಳಲ್ಲಿ ಈಗಾಗಲೆ ಹಲವಾರು ಗ್ರಾಮಗಳಲ್ಲಿ ಬೋನನ್ನು ಇರಿಸಲಾಗಿದ್ದು, ಹಲವಾರು ಚಿರತೆಗಳನ್ನು ಸೆರೆಹಿಡಿದು ಮೇಲಾಧಿಕಾರಿಗಳ ಆದೇಶದ ಮೇರೆಗೆ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಇಲಾಖೆ ವತಿಯಿಂದ ಚಿರತೆ ಸೆರೆ ಹಿಡಿಯಲು ಅಗತ್ಯ ಕ್ರಮವಹಿಸಲಾಗಿದೆ ಎಂದು ಭರವಸೆ ನೀಡಿದರು.
-
Mandya4 hours agoಡಿ.17ಕ್ಕೆ ಮಳವಳ್ಳಿಗೆ ರಾಷ್ಟ್ರಪತಿ ಆಗಮನ : ಜಿಲ್ಲಾಧಿಕಾರಿಗಳಿಂದ ಸ್ಧಳ ಪರಿಶೀಲನೆ
-
Mandya10 hours agoಡಿ 10 ಶ್ರೀರಂಗಪಟ್ಟಣ ಸೇರಿದಂತೆ ವಿವಿದೆಡೆ ವಿದ್ಯುತ್ ಕಡಿತ
-
Mysore2 hours agoಮೈಸೂರು ದಸರಾ: ಮಹಿಳಾ ಉದ್ಯಮಿ ಉಪಸಮಿತಿಗೆ ಎಸ್. ರಂಗನಾಥ ಸಂಚಾಲಕರಾಗಿ ನೇಮಕ
-
Hassan6 hours agoಜಿಲ್ಲಾ ಮಟ್ಟದ ಅಂತರಶಾಲಾ ಚೆಸ್ ಸ್ಪರ್ಧೆ ಯಶಸ್ವಿ
-
Hassan6 hours agoಎಂಸಿಇ ಕಾಲೇಜಿನ ಸಿವಿಲ್ ವಿಭಾಗದಲ್ಲಿ ಸ್ಪೋರ್ಟ್ಸ್ ವಿಜೇತರಿಗೆ ಸನ್ಮಾನ
-
Mysore12 hours agoಡಾ.ಬಿ.ಆರ್. ಅಂಬೇಡ್ಕರ್ 69ನೇ ಮಹಾ ಪರಿನಿಬ್ಬಾಣ ದಿನ: ಸೇವಾ ಕಾರ್ಯದೊಂದಿಗೆ ಗೌರವ ನಮನ
-
Kodagu8 hours agoಸಂವಿಧಾನದ ರಕ್ಷಣೆ ನಮ್ಮೆಲ್ಲರ ಹೊಣೆ : ಗಾಯತ್ರಿ ನರಸಿಂಹ
-
Mysore6 hours agoದೌರ್ಜನ್ಯ ತಡೆಗೆ ಕೆಪಿಎ- ಸಾವಿತ್ರಿಬಾ ಫುಲೆ ಸಂಸ್ಥೆ ನಡುವೆ ಒಡಂಬಡಿಕೆ
