Hassan
ಸರಕಾರಿ ಆಸ್ಪತ್ರೆ ಕ್ಯಾನ್ಸರ್ ಘಟಕಕ್ಕೆ ಕ್ಯಾನ್ಸರ್ , ವೈದ್ಯರು-ಸಿಬ್ಬಂದಿಗಳ ಕೊರತೆಯಿಂದ ಬಡ ರೋಗಿಗಳು ವಂಚಿತ

ಹಾಸನ: ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಕೇಂದ್ರ ಇದ್ದರೂ ಕೂಡ ಘಟಕಕ್ಕೆ ಕ್ಯಾನ್ಸರ್ ಬಂದಂತೆ ಕಾಣುತ್ತಿದೆ. ಈ ಕೇಂದ್ರಕ್ಕೆ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆಯಿಂದ ಬಡವರು ವಂಚಿತರಾಗಿ ಚಿಕಿತ್ಸೆ ದೊರಕದೇ ಖಾಸಗೀ ಆಸ್ಪತ್ರೆಗೆ ಹೋಗಲು ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಕ್ಯಾನ್ಸರ್ ಘಟಕಕ್ಕೆ ಇನ್ನಷ್ಟು ಜೀವ ತುಂಬಲು ಹಾಸನದಲ್ಲೊಂದು ಹಿರಿಯ ನಾಗರೀಕರ ತಂಡ ಸಿದ್ದರಾಗಿ ಅನೇಕ ಸಭೆ ನಡೆಸಿದಲ್ಲದೇ ಸರಕಾರದಿಂದ ಏನಾದರೂ ಸ್ಪಂದನೆ ಸಿಗದಿದ್ದರೇ ಹೋರಾಟಕ್ಕೂ ಮುಂದಾಗಿದ್ದಾರೆ.
ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿರುವ ಕ್ಯಾನ್ಸರ್ ಘಟಕ ಸ್ಥಾಪನೆಗೊಂಡು ಚಾಲನೆಯಲ್ಲಿದ್ದು, ದಿನಕ್ಕೆ ೫೦ ರಿಂದ ೭೦ ಜನ ಕ್ಯಾನ್ಸರ್ ರೋಗಿಗಳು ತಪಾಸಣೆ ಮತ್ತು ಚಿಕಿತ್ಸೆಗಾಗಿ ಬರುತ್ತಾರೆ. ಒಬ್ಬ ರೋಗಿಯ ಪರೀಕ್ಷೆ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಅಷ್ಟು ಜನ ರೋಗಿಗಳ ಪರೀಕ್ಷೆ ಮಾಡಲು ವೈದ್ಯರ ಕೊರತೆ ಕಾಣುತ್ತಿದೆ. ಇಲ್ಲಿ ಕೆಲವೆ ವೈದ್ಯರು ಮತ್ತು ಸಿಬ್ಬಂದಿಗಳು ಇರುವುದರಿಂದ ದಿನದಲ್ಲಿ ಹತ್ತಾರು ಮಂದಿ ಮಾತ್ರ ಚಿಕಿತ್ಸೆ ನೋಡಲು ಸಾಧ್ಯವಾಗುತ್ತಿದೆ. ಉಳಿದ ರೋಗಿಗಳು ಕ್ಯಾನ್ಸರ್ ಚಿಕಿತ್ಸೆಗಾಗಿ ಇತರೆ ಜಿಲ್ಲೆಗೆ ದುಪ್ಪಟ್ಟು ಹಣ ನೀಡಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕ್ಯಾನ್ಸರ್ ಖಾಯಿಲೆಗೆ ತುತ್ತಾದ ಬಡವರು ಏನು ಮಾಡಬೇಕು ಎಂಬುದು ಹಿರಿಯ ನಾಗರೀಕರ ವೇದಿಕೆಯ ಪ್ರಶ್ನೆಯಾಗಿದೆ. ಇದಕ್ಕೆ ಶಾಶ್ವತ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಹಿರಿಯ ನಾಗರೀಕರ ವೇದಿಕೆ ಸಜ್ಜಾಗಿದ್ದು, ಈ ಬಗ್ಗೆ ಸರಕಾರದ ಗಮನಸೆಳೆದು ಪರಿಹಾರ ಕಂಡುಕೊಂಡು ಕೊನೆಯ ವ್ಯಕ್ತಿಗೂ ಇದರ ಸೌಲಭ್ಯ ದೊರಕಲಿ ಎಂಬುದು ಇವರ ಗುರಿಯಾಗಿದೆ. ಇದಕ್ಕಾಗಿ ಅನೇಕ ಸಬೆಗಳು ನಡೆದು ಆರೋಗ್ಯಕರ ಚರ್ಚೆ ಮಾಡಲಾಗಿ ಅನೇಕ ರೂಪರೇಶಗಳನ್ನು ಕಂಡುಕೊಳ್ಳಲಾಗಿದೆ.
ನಗರದ ಸ್ಕೌಟ್ ಅಂಡ್ ಗೈಡ್ಸ್ ಭವನದ ಆವರಣದಲ್ಲಿ ಜಿಲ್ಲಾ ಹಿರಿಯ ನಾಗರೀಕರ ವೇದಿಕೆ ಅಧ್ಯಕ್ಷ ವೈ.ಎಸ್. ವೀರಭದ್ರಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಬಿ.ಕೆ. ಮಂಜುನಾಥ್ ಮಾತನಾಡಿ, ಹಿಮ್ಸ್ ಆಸ್ಪತ್ರೆಯಲ್ಲಿರುವ ಕ್ಯಾನ್ಸರ್ ಘಟಕ ಸ್ಥಗಿತವಾಗುವುದಕ್ಕೆ ಯಾವುದೊ ಒಂದು ಯುಜಿಡಿ ಲೈನ್ ಕೆಲಸ ಆಗಿಲ್ಲ ಎನ್ನುವ ಒಂದೆ ಕಾರಣಕ್ಕೆ ಕೇಂದ್ರದಲ್ಲಿ ಪೂರ್ಣ ಪ್ರಮಾಣದ ಸೇವೆ ಸಿಗುತ್ತಿಲ್ಲ. ಈ ಬಗ್ಗೆ ಸರಕಾರಕ್ಕೆ ಯಾವ ವರದಿಯನ್ನು ಕೂಡ ಸಲ್ಲಿಸಿರುವುದಿಲ್ಲ ಎಂದು ದೂರಿದರು. ಕೂಡಲೇ ಎಲ್ಲಾವನ್ನು ಸರಿಪಡಿಸಿ ಕ್ಯಾನ್ಸರ್ ಕೇಂದ್ರಕ್ಕೆ ಹೆಚ್ಚಿನ ವೈದ್ಯರು ಮತ್ತು ಸಿಬ್ಬಂದಿಗಳನ್ನು ನೇಮ ಮಾಡಿಕೊಂಡು ಉತ್ತಮ ಚಿಕಿತ್ಸೆ ಕೊಡಬೇಕು. ಇಲ್ಲವಾದರೇ ಮುಂದೆ ಎಲ್ಲಾ ಸಂಘಟನೆಗಳು ಸೇರಿ ಬೃಹತ್ ಸಭೆ ಮಾಡಿ, ಸರಕಾರದ ಗಮನಸೆಳೆಯಲಾಗುವುದು. ಸರಕಾರದಿಂದ ಸ್ಪಂದನೆ ದೊರಕದಿದ್ದರೇ ನಂತರ ಹೋರಾಟದ ಹಾದಿ ಹಿಡಿಯಲಾಗುವುದು ಎಂದು ಎಚ್ಚರಿಸಿದರು.
ಡಾ. ಹೇಮಾಲತಾ ಮಾತನಾಡಿ, ಕ್ಯಾನ್ಸರ್ ರೋಗದಿಂದ ಸಂಭವಿಸುವ ಸಾವುಗಳು ಹೆಚ್ಚಾಗಿದ್ದು, ಪ್ರತಿ ಒಂದು ಲಕ್ಷ ಮಹಿಳೆಯರಲ್ಲಿ ೨೨ ಮಹಿಳಯರಿಗೆ ಬ್ಲಡ್ ಕ್ಯಾನ್ಸರ್ ಖಾಯಿಲೆಗೆ ತುತ್ತಾಗುತ್ತಿದ್ದಾರೆ. ೨೯ ಜನ ಕ್ಯಾನ್ಸರ್ ಗೆ ಸಾಯುತ್ತಿರುವುದು ಆತಂಕದ ವಿಚಾರವಾಗಿದೆ. ಪರಿಣಾಮಕಾರಿಯಾಗಿ ಈ ಸಮಸ್ಯೆಯನ್ನು ತಡೆಗಟ್ಟಬೇಕಾಗಿದ್ದು, ಆದರೇ ಜನರಲ್ಲಿ ಅರಿವು ಕಡಿಮೆ ಇದ್ದು, ಬಡತನ, ಅತಿಯಾದ ಸಂಕೋಚ ಕಾಡುತ್ತಿದ್ದೆ. ವೈದ್ಯ ಲೋಕವು ಹಗಲಿರುಳು ಶ್ರಮ ಮತ್ತು ಸಂಶೋಧನೆಯಿಂದ ಗಣನೀಯವಾದ ಕ್ರಾಂತಿಕಾರಕ ಪ್ರಗತಿ ಸಾಧಿಸಿದೆ ಎಂದರು. ಆರಂಭದಲ್ಲೆ ಕ್ಯಾನ್ಸರ್ ಗುರುತಿಸಿ ಚಿಕಿತ್ಸೆ ನೀಡಿದರೇ ಸಾವು ನೋವನ್ನು ತಡೆಯಬಹುದು. ಬಡವರಿಗೆ ಸರಿಯಾದ ಚಿಕಿತ್ಸೆ ನೀಡಲು ಸರಕಾರಿ ಆಸ್ಪತ್ರೆಯಲ್ಲಿ ಸೌಲಭ್ಯ ನೀಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಈ ಬಗ್ಗೆ ಹೋರಾಟ ಮಾಡುವ ಅವಶ್ಯಕತೆ ಇದೆ ಎಂದು ಕರೆ ಕೊಟ್ಟರು.
ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಲಕ್ಷ್ಮಣ್ ಮಾತನಾಡಿ, ಯಾವುದೇ ರೀತಿಯಾದ ಸ್ವಾರ್ಥವಿಲ್ಲದ ಹಿರಿಯ ನಾಗರೀಕರ ವೇದಿಕೆಯಾಗಿದೆ. ಇದರಲ್ಲಿ ಯಾವ ರಾಜಕಾರಣ ಇಲ್ಲ. ದೇವರ ಸೇವೆ, ಬಡವರಿಗೆ ನಮ್ಮಿಂದ ಸೇವೆ ಸಿಗಲಿ ಎನ್ನುವ ಚಿಂತನೆ ಉತ್ತಮವಾಗಿದೆ. ಹಿರಿಯ ನಾಗರೀಕರ ಜೊತೆ ನಾವು ಇರುತ್ತೇವೆ. ಜಿಲ್ಲಾ ಮಂತ್ರಿಗಳು ಇಲ್ಲಿಗೆ ಬಂದಾಗ ಒಂದು ಬಾರಿ ಆಸ್ಪತ್ರೆಯನ್ನು ಪರಿಶೀಲಿಸಲಿ. ನಾನು ಒಬ್ಬ ಹಿರಿಯ ನಾಗರೀಕ ಆಗಿರುವುದರಿಂದ ನಿಮ್ಮ ವೇದಿಕೆ ಜೊತೆಯಲ್ಲೆ ಇರುತ್ತೇವೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ವಕೀಲರಾದ ಪ್ರಸನ್ನಕುಮಾರ್ ಮಾತನಾಡಿ, ಇದರಲ್ಲಿ ರಾಜಕಾರಣ ಬೇಡ. ಹಿರಿಯ ನಾಗರೀಕರ ವೇದಿಕೆಯು ಸಭೆ ಸೇರಿರುವುದಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಹೇಳುತ್ತೇನೆ ಎಂದರು.
ಸಭೆಯಲ್ಲಿ ಹಿರಿಯ ನಾಗರೀಕರ ವೇದಿಕೆ ಸದಸ್ಯರಾದ ಜಗದೀಶ್, ಸದಸ್ಯರಾದ ಮಹಾಲಕ್ಷ್ಮಿ ದೊಡ್ಡಯ್ಯ, ಡಾ. ಹೇಮಾಲತಾ, ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಆರ್.ಪಿ. ವೆಂಕಟೇಶ್ ಮೂರ್ತಿ, ಖಜಾಂಚಿ ಕೆ. ರಮೇಶ್, ಶಾರದ, ಗೌರಮ್ಮ, ಹಿರಿಯ ಪತ್ರಕರ್ತ ವೆಂಕಟೇಶ್, ಜಯಮ್ಮ, ವನಜಾಕ್ಷಿ, ಮಾಜಿ ಯೋಧರಾದ ವೆಂಕಟೇಶ್, ಗೋವಿಂದೇಗೌಡ, ಬಸವರಾಜು, ಪುಟ್ಟಸ್ವಾಮಿ, ಮುಬಾಶೀರ್ ಅಹಮದ್, ಮಂಜುನಾಥ್ ಶರ್ಮ ಇತರರು ಉಪಸ್ಥಿತರಿದ್ದರು.
Hassan
ದೊಡ್ಡಕಣಗಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ

ವರದಿ: ಸತೀಶ್ ಚಿಕ್ಕಕಣಗಾಲು
ಆಲೂರು: ತಾಲ್ಲೂಕಿನ ದೊಡ್ಡಕಣಗಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 12 ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಿತು. ಎಲ್ಲಾ ಸ್ಥಾನಗಳಿಗೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಕುಮಾರ್ ಅವರು ಅವಿರೋಧ ಆಯ್ಕೆ ಘೋಷಿಸಿದರು.
ಸಾಮಾನ್ಯ ಕ್ಷೇತ್ರದಿಂದ ಕೆ.ಕೆ. ಜಯರಾಮ, ಹೆಚ್.ಎಂ. ನಾರಾಯಣ, ಕೆ.ಟಿ. ಬೋರೇಗೌಡ, ಸುಬ್ಬೇಗೌಡ, ವೆಂಕಟೇಗೌಡ, ಮಹಿಳಾ ಕ್ಷೇತ್ರದಿಂದ ಶಕುಂತಲ, ಪ್ರತಿಮ, ನಂಜಶೆಟ್ಟಿ (ಹಿಂದುಳಿದ ವರ್ಗ ಎ), ಕೆ. ಜಗದೀಶ್ (ಹಿಂದುಳಿದ ವರ್ಗ ಬಿ), ರಂಗಸ್ವಾಮಿ (ಪ.ಜಾ.) ಹಾಗು ಪರಿಶಿಷ್ಟ ಪಂಗಡದ ಒಂದು ಸ್ಥಾನಕ್ಕೆ ಯಾರೂ ಅರ್ಜಿ ಸಲ್ಲಿಸದ ಹಿನ್ನಲೆಯಲ್ಲಿ ಸ್ಥಾನ ಖಾಲಿಯಿದೆ. ಸಾಲಗಾರರಲ್ಲದ ಕ್ಷೇತ್ರದಿಂದ ಕೆ.ಸಿ. ಸಂತೋಷ್ ಅವರು ಆಯ್ಕೆಯಾದರು. 2030ರ ಫೆ. 9ರ ವರೆಗೆ ಚುನಾಯಿತರು ನಿರ್ದೇಶಕರಾಗಿ ಮುಂದುವರೆಯುತ್ತಾರೆ.
ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಕುಮಾರ್, ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಹೆಚ್ಡಿಸಿಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್, ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಕುಮಾರಸ್ವಾಮಿ, ನಂಜೇಶ್ ಸೇರಿದಂತೆ ಗ್ರಾಮದ ಹಿರಿಯ ಮುಖಂಡರು ಹಾಜರಿದ್ದರು.
Hassan
ಫೆ.11 ರಿಂದ 13 ವರೆಗೆ ರೇಣುಕಾ ಯಲ್ಲಮ್ಮ ದೇವಿಯ 18ನೇ ವರ್ಷದ ಜಾತ್ರಾ ಮಹೋತ್ಸವ

ಬೇಲೂರು: ಬೇಲೂರಿನ ಚನ್ನಾಪುರ ರಸ್ತೆಯಲ್ಲಿರುವ ಕೋವಿಪೇಟೆಯಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಿಯ 18ನೇ ವರ್ಷದ ಜಾತ್ರಾ ಮಹೋತ್ಸವ ಫೆ. 11 ರಿಂದ ಫೆ.13ರ ವರೆಗೂ ನಡೆಯಲಿದೆ, ಪ್ರತಿಯೊಬ್ಬ ಭಕ್ತರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇಗುಲದ ಪ್ರಧಾನ ಅರ್ಚಕ ರವಿಸ್ವಾಮಿ ತಿಳಿಸಿದ್ದಾರೆ.
ಜಾತ್ರಾ ಮಹೋತ್ಸವ ನಿಮಿತ್ತ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಫೆ.11 ಮಂಗಳವಾರ ಸಂಜೆ 6.00 ಗಂಟೆಗೆ ಗಂಗಪೂಜೆ ಮತ್ತು ಕಳಸ ಸ್ಥಾಪನೆ, ಪಂಚಾಮೃತ, ಅಭಿಷೇಕ, ಗಣ ಹೋಮ, ನವಗ್ರಹ ಹೋಮ ಚಂಡಿ ಹೋಮ, ದುರ್ಗಾ ಹೋಮ, ಜಯಾವಿ ಹೋಮಗಳು ನಡೆಯುತ್ತದೆ.
ಫೆ.12 ರ ಬುಧವಾರ ಬೆಳಗ್ಗೆ 8.00 ಗಂಟೆಗೆ 12.30 ವರೆಗೂ ಬೇಲೂರಿನ ವಿಷ್ಣು ಸಮುದ್ರದಲ್ಲಿ (ಅಷ್ಟಮ್ಮನಕೆರೆ) “ಗಂಗಾ ಪೂಜೆ’ ನಂತರ ನಗರದ ಪ್ರಮುಖ ಬೀದಿಗಳಲ್ಲಿ ವೀರಗಾಸೆ ಕುಣಿತ, ಡೊಳ್ಳು ಕುಣಿತ, ನಂದಿ ಧ್ವಜ ಮತ್ತು ಚೌಡಿಕೆ ಪದಗಳೊಂದಿಗೆ ಹಲವು ವಾದ್ಯ ಗೋಷ್ಠಿಯೊಂದಿಗೆ 101 ಕುಂಭಾಷೇಕಗಳೊಂದಿಗೆ ಪ್ರಷಾಲಂಕಾರಗೊಂಡ ಶ್ರೀ ರೇಣುಕಾ ಅಮ್ಮನವರ ಪಲ್ಲಕ್ಕಿ ಮೆರವಣಿಗೆ ಮತ್ತು ಬೆಳಗ್ಗೆ 11.30 ಕ್ಕೆ “ಶ್ರೀ ರೇಣುಕಾ ಯಲ್ಲಮ್ಮನವರ ಕೆಂಡೋತ್ಸವ” ನಡೆಯುತ್ತದೆ. ನಂತರ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ಇರುತ್ತದೆ. “ಮದ್ಯಾಹ್ನ 1-00 ಗಂಟೆಗೆ ಅನ್ನ ಸಂತರ್ಪಣೆ” ನಡೆಯುತ್ತದೆ.
ಫೆ.13 ರ ಬೆಳಿಗ್ಗೆ 8.00 ರಿಂದ ಶ್ರೀ ಹುಚ್ಚಂಗಿ ಅಮ್ಮನವರ ಜಾತ್ರಾ ಮಹೋತ್ಸವ ಉತ್ಸವ” ಬೆಳಗ್ಗೆ 10.30 ರಿಂದ ಸಂಜೆ 6.00 ರವರೆಗೆ ದೇವಿಗೆ ಹರಕೆ ಸೇವೆ ಇರುತ್ತದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ತನು, ಮನ, ಧನ ಸಹಾಯದೊಂದಿಗೆ ಸಹಕರಿಸಿ ಶ್ರೀ ದೇವಿಯವರ ಕೃಪೆಗೆ ಪಾತ್ರರಾಗಬೇಕಾಗಿ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
Hassan
ಕಳಪೆ ಗುಣಮಟ್ಟದ ಉಪ್ಪು ತಯಾರಿಸಿದ ಕಂಪನಿಗೆ ಒಂದು ಲಕ್ಷ ರೂ. ದಂಡ

ಚಾಮರಾಜನಗರ, ಫೆ.06:- ಕಳಪೆ ಗುಣಮಟ್ಟದ ಉಪ್ಪು ತಯಾರಿಸಿದ್ದ ತಮಿಳುನಾಡಿನ ಕಂಪನಿಯೊಂದಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ನ್ಯಾಯನಿರ್ಣಾಯಕ ಅಧಿಕಾರಿ ಗೀತ ಹುಡೇದ ಅವರು 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.
ಹನೂರು ಪಟ್ಟಣದ ಬಂಡಳ್ಳಿ ರಸ್ತೆಯಲ್ಲಿರುವ ಶ್ರೀ ಮಹದೇಶ್ವರ ಸ್ಟೋರ್ ಗೆ ಕಳೆದ 2024ರ ಜುಲೈ 29ರಂದು ಕೊಳ್ಳೇಗಾಲ ತಾಲ್ಲೂಕಿನ ಆಹಾರ ಸುರಕ್ಷತಾಧಿಕಾರಿ ಶ್ರೀನಿವಾಸ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಅಂಗಡಿಯಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ ವಿ.ಕೆ.ಎಸ್.ಟ್ರೂ ಸಾಲ್ಟ್ (VKS TRUE SALT) ಎಂಬ ಹೆಸರಿನ ಉಪ್ಪಿನ ಆಹಾರ ಮಾದರಿಯನ್ನು ಸಂಗ್ರಹಿಸಿ ಮೈಸೂರಿನ ವಿಭಾಗೀಯ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು.
ಸದರಿ ಉಪ್ಪಿನ ಮಾದರಿಯು ವಿಶ್ಲೇಷಣಾ ವರದಿಯಿಂದ ಕಳಪೆ ಗುಣಮಟ್ಟ (ಸಬ್ ಸ್ಟ್ಯಾಂಡರ್ಡ್) ಎಂದು ದೃಡಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳು ಹಾಗೂ ನ್ಯಾಯನಿರ್ಣಯಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ಸಂಬಂಧ ಮೊಕದ್ದಮೆ ಹೂಡಲಾಗಿತ್ತು.
ಹೆಚ್ಚುವರಿ ಜಿಲ್ಲಾಧಿಕಾರಿಗಳು ಹಾಗೂ ನ್ಯಾಯನಿರ್ಣಾಯಕ ಅಧಿಕಾರಿಗಳಾದ ಗೀತಾ ಹುಡೇದ ಅವರು ಪ್ರಕರಣದ ವಿಚಾರಣೆ ನಡೆಸಿ ತಯಾರಕರಾದ ತಮಿಳುನಾಡಿನ ತೂತುಕುಡಿಯ ವಿ.ಕೆ.ಎಸ್. ಪುಡ್ ಪ್ರಾಡಕ್ಟ್ಸ್ ಕಂಪನಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಹಾಗೂ ನಿಯಮ ನಿಬಂಧನೆ 2011ರ ರಿತ್ಯಾ ಸೆಕ್ಷನ್ 51 ರಡಿಯಲ್ಲಿ ಒಂದು ಲಕ್ಷ ರೂ. ದಂಡ ವಿಧಿಸಿ ಫೆಬ್ರವರಿ 3 ರಂದು ಆದೇಶಿಸಿದ್ದಾರೆ.
-
State12 hours ago
ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ದುರದೃಷ್ಟಕರ: ಬಸವರಾಜ ಬೊಮ್ಮಾಯಿ ಬೇಸರ
-
Kodagu9 hours ago
ಕೊಡವಾಮೆ ಬಾಳೋ ಪಾದಯಾತ್ರೆ: ಮಧ್ಯ ಮಾರಾಟ ನಿಷೇಧ
-
Chamarajanagar9 hours ago
ಚಿಕ್ಕಮಗಳೂರು: ನಕ್ಸಲ್ ರವೀಂದ್ರಗೆ ಸೇರಿದ್ದು ಎನ್ನಲಾದ ಬಂದೂಕು ಪತ್ತೆ?
-
Kodagu13 hours ago
ಫೆ.7 ರ ಕೊಡವ ಪಾದಯಾತ್ರೆಗೆ ಸಿಎನ್ ಸಿ ಬೆಂಬಲ
-
Kodagu9 hours ago
ಕೊಟ್ಟಮುಡಿ ಝೀನತ್ ಯುವಕ ಸಂಘ ಅಧ್ಯಕ್ಷರಾಗಿ ಸೌಕತ್ ಆಯ್ಕೆ
-
Hassan8 hours ago
ಆಸ್ತಿ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ
-
Sports10 hours ago
ಏಕದಿನ ಮಾದರಿಗೆ ದಿಢೀರ್ ನಿವೃತ್ತಿ ಘೋಷಿಸಿದ ಆಸೀಸ್ ಆಲ್ರೌಂಡರ್ ಸ್ಟೋಯ್ನಿಸ್
-
Hassan7 hours ago
ಎಂಸಿಇ ಕಾಲೇಜು ಉಪಾಧ್ಯಕ್ಷರಿಗೆ ವೀರಶೈವ ಲಿಂಗಾಯತ ಮಹಾಸಭಾದಿಂದ ಸನ್ಮಾನ