Connect with us

Hassan

ಜಿಲ್ಲಾಧಿಕಾರಿಯ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪದಾಧಿಕಾರಿಗಳಿಂದ ತಹಸೀಲ್ದಾರ್‌ಗೆ ಮನವಿ

Published

on

ಅರಸೀಕೆರೆ: ತಾಲೂಕಿನಲ್ಲಿ ಜಗಜ್ಯೋತಿ ಬಸವೇಶ್ವರರ ಪ್ರತಿಮೆ ನಿರ್ಮಾಣಕ್ಕೆ ಮೀಸಲಿಟ್ಟ ಅನುದಾನವನ್ನು ಬೇರೆ ಕಾಮಗಾರಿಗೆ ಬಳಸುವ ಜಿಲ್ಲಾಧಿಕಾರಿಯ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪದಾಧಿಕಾರಿಗಳು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.

ಸಂಘದ ತಾಲೂಕು ಅಧ್ಯಕ್ಷ ಶೇಖರ್ ಸಂಕೋಡನಹಳ್ಳ ಅವರ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಹಿಂದೆ ಬಸವೇಶ್ವರ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 40 ಲಕ್ಷ ರೂ. ಅನುದಾನ ಮೀಸಲಿಟ್ಟಿತ್ತು ಎಂದು ಅವರು ಹೇಳಿದ್ದಾರೆ.

ಆದರೆ ಈಗ ಆ ಅನುದಾನವನ್ನು ಸಮುದಾಯ ಭವನ ನಿರ್ಮಾಣಕ್ಕೆ ಬಳಸಲು ಜಿಲ್ಲಾಧಿಕಾರಿ ಹೊಸ ಆದೇಶ ಹೊರಡಿಸಿರುವುದು ಗಮನಕ್ಕೆ ಬಂದಿದ್ದು, ಅದನ್ನು ರದ್ದುಪಡಿಸಿ ಮೂಲ ಉದ್ದೇಶಕ್ಕೆ ಅನುಗುಣವಾಗಿ ಪ್ರತಿಮೆ ನಿರ್ಮಾಣ ಮುಂದುವರಿಸಬೇಕು ಎಂದು ಸಂಘ ಒತ್ತಾಯಿಸಿದೆ.

ಜಿಲ್ಲಾ ಉಪಾಧ್ಯಕ್ಷ ಎ.ಬಿ.ಗುರುಸಿದ್ದೇಶ್, ಮಹಿಳಾ ಘಟಕದ ಅನುರಾಧ ಕುಮಾರಸ್ವಾಮಿ, ಎಸ್ ಎಂ.ಎಸ್ ಕುಮಾರ್, ಆರ್.ಜಿ.ರಾಘವೇಂದ್ರ, ಆನಂದ್, ಚಂದ್ರಶೇಖರ್, ಶಶಿಧರ್, ,ಪವನ್ ಎ ಪಿ, ಜಗದೀಶ್, ವಿರೂಪಾಕ್ಷಪ್ಪ, ಭರತೇಶ್, ಲೋಕೇಶ್ ನೀರಗುಂದ, ಓಂಕಾರಮೂರ್ತಿ, ಮಲ್ಲೇಶ್ , ಹೇಮಾವತಿ, ಗೌರಮ್ಮ, ಸರೋಜಾ,ಪ್ರೇಮಾ ಗಿರೀಶ್, ಎ.ಎಲ್.ಮೋಹನ್ ಕುಮಾರ್ , ಪಂಚಾಕ್ಷರಿ, ಗಗನ್,ನಂಜುಂಡ ಸ್ವಾಮಿ, ಲಿಂಗರಾಜು ಸೇರಿದಂತೆ ಇತರರಿದ್ದರು

Continue Reading

Hassan

ಜಾನುವಾರು ವಧೆ ಹಾಗೂ ಮಾರಾಟ ನಿಷೇಧ ಕಾಯ್ದೆ ವಾಪಸ್ ಪಡೆಯಲು ಒತ್ತಾಯ

Published

on

ಹಾಸನ, ಮೇ 26: ರೈತ ವಿರೋಧಿ ಎಂದು ಆರೋಪಿಸಲ್ಪಡುವ ‘ಜಾನುವಾರು ವಧೆ ಹಾಗೂ ಮಾರಾಟ ನಿಷೇಧ ಕಾಯ್ದೆ 2020’ ಅನ್ನು ವಾಪಸ್ ಪಡೆಯಬೇಕು ಹಾಗೂ ರೈತರು ತಮ್ಮ ಜಾನುವಾರುಗಳನ್ನು ಮುಕ್ತವಾಗಿ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ವಿವಿಧ ರೈತ, ದಲಿತ ಮತ್ತು ಜನಪರ ಸಂಘಟನೆಗಳು ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿವೆ.

ಕರ್ನಾಟಕ ರಾಜ್ಯ ರೈತ ಸಂಘ (ಕೆಆರ್‌ಆರ್‌ಎಸ್), ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಹಾಗೂ ಹಾಸನ ಜಿಲ್ಲಾ ದಲಿತ ಮತ್ತು ಜನಪರ ಚಳುವಳಿಗಳ ಒಕ್ಕೂಟದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದರು.

ಪ್ರತಿಭಟನಾಕಾರರು ಮಾತನಾಡಿ, ಕೃಷಿ ಕ್ಷೇತ್ರ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ರೈತರು ಹೈನುಗಾರಿಕೆಯನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಹಾಲು ಉತ್ಪಾದನೆಗಾಗಿ ಸಾಕುವ ಜರ್ಸಿ ಹಸುಗಳು ವಯಸ್ಸಾದ ಬಳಿಕ ಹಾಗೂ ಗಂಡು ಕರುಗಳಿಗೆ ಜನ್ಮ ನೀಡಿದಾಗ ಅವುಗಳನ್ನು ಸಾಕುವುದು ರೈತರಿಗೆ ಆರ್ಥಿಕ ಹೊರೆ ಆಗುತ್ತದೆ. ಇಂತಹ ಅನುಪಯುಕ್ತ ಜಾನುವಾರುಗಳನ್ನು ಮಾರಾಟ ಮಾಡುವುದೇ ರೈತರಿಗೆ ಅಲ್ಪ ಆದಾಯದ ಮೂಲವಾಗಿದ್ದು, ಪ್ರಸ್ತುತ ಕಾಯ್ದೆಯಿಂದ ಅದು ಕೂಡ ಅಸಾಧ್ಯವಾಗಿದೆ ಎಂದು ದೂರಿದರು.

ಕೆಲವು ಸಂಘಟನೆಗಳು ಈ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುವುದು ಹಾಗೂ ನೈತಿಕ ಪೊಲೀಸ್‌ಗಿರಿ ತೋರಿಸುತ್ತಿವೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಆಹಾರದ ಆಯ್ಕೆ ಪ್ರತಿಯೊಬ್ಬರ ಸಂವಿಧಾನಬದ್ಧ ಹಕ್ಕು ಎಂದು ಹೇಳಿದರು.

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಕುರ್ಬಾನಿಗೆ ಗೋವುಗಳನ್ನು ಬಳಸಬಾರದೆಂಬ ಜಿಲ್ಲಾಡಳಿತದ ಸೂಚನೆ ಅಲ್ಪಸಂಖ್ಯಾತರ ಆಹಾರದ ಹಕ್ಕಿನ ಮೇಲಿನ ದಾಳಿಯಾಗಿದೆ. ಇದರಿಂದ ರೈತ ಸಮುದಾಯಕ್ಕೂ ನೇರ ಪರಿಣಾಮ ಉಂಟಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಜಿಲ್ಲಾಡಳಿತವು ರೈತರು ತಮ್ಮ ರಾಸುಗಳನ್ನು ಮುಕ್ತವಾಗಿ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ ಧರ್ಮದ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕೆಆರ್‌ಆರ್‌ಎಸ್ ಜಿಲ್ಲಾಾಧ್ಯಕ್ಷ ಬಾಬು, ರಾಜ್ಯ ಉಪಾಧ್ಯಕ್ಷ ರವಿ ಆನೇಕೆರೆ, ಜಿಲ್ಲಾ ಕಾರ್ಯದರ್ಶಿ ಪವಿತ್ರ, ಕೆಪಿಆರ್‌ಎಸ್ ಜಿಲ್ಲಾಾಧ್ಯಕ್ಷ ಹೆಚ್.ಎಸ್. ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಆರ್. ನವೀನ್‌ಕುಮಾರ್, ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಟಿ.ಆರ್. ವಿಜಯ್ ಕುಮಾರ್, ಹಿರಿಯ ದಲಿತ ಮುಖಂಡ ರಾಜಶೇಖರ್ ಹುಲಿಕಲ್ ಸೇರಿದಂತೆ ಮುಬಷಿರ್ ಅಹಮದ್, ಅನ್ಸರ್, ಅರವಿಂದ, ರಮೇಶ್ ಮೊದಲಾದವರು ಭಾಗವಹಿಸಿದ್ದರು.

Continue Reading

Hassan

“ರಾಜ್ಯದ ಸಾಲ ₹10 ಲಕ್ಷ ಕೋಟಿ ತಲುಪಲಿದೆ”: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

Published

on

ಹಾಸನ: ರಾಜ್ಯ ಸರ್ಕಾರದ ಸಾಲದ ಪ್ರಮಾಣ 7 ಲಕ್ಷ ಕೋಟಿ ರೂ. ದಾಟುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ತ್ಯಜಿಸುವ ವೇಳೆಗೆ ಅದು 10 ಲಕ್ಷ ಕೋಟಿ ರೂ. ತಲುಪಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್  ಆರೋಪಿಸಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೆ.ಸಿ. ರೆಡ್ಡಿ ಕಾಲದಿಂದ ಬಸವರಾಜ ಬೊಮ್ಮಾಯಿ ಸರ್ಕಾರದವರೆಗೆ ಒಟ್ಟು ಶೇ.47ರಷ್ಟು ಸಾಲ ಮಾಡಲಾಗಿತ್ತು. ಆದರೆ ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರವೇ ಶೇ.53ರಷ್ಟು ಸಾಲ ಮಾಡಿದೆ” ಎಂದು ಟೀಕಿಸಿದರು.

ಬಿಜೆಪಿ ಸರ್ಕಾರ ಆದಾಯದ ಆಧಾರದ ಮೇಲೆ ಬಡವರಿಗೆ ಯೋಜನೆಗಳನ್ನು ಜಾರಿಗೆ ತಂದಿತ್ತು. ಆದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ, ಈಗ ಅವುಗಳನ್ನು ಸಮರ್ಪಕವಾಗಿ ನೀಡಲು ವಿಫಲವಾಗಿದೆ ಎಂದು ದೂರಿದರು. ಸರ್ಕಾರದ ಖಜಾನೆ ಖಾಲಿಯಾಗಿರುವ ಕಾರಣ ಬಿಪಿಎಲ್ ಕಾರ್ಡ್ ರದ್ದುಪಡಿಸಲು ಮುಂದಾಗಿದೆ. ಬಡವರ ಅನ್ನಕ್ಕೂ ಕತ್ತರಿ ಹಾಕಲು ಹೊರಟಿದೆ ಎಂದು ಆರೋಪಿಸಿದರು.

 

ಅನ್ನಭಾಗ್ಯ ಯೋಜನೆ ಸಿದ್ದರಾಮಯ್ಯ ಅವರದ್ದಲ್ಲ. ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ
ನೀಡುತ್ತಿರುವ ಅಕ್ಕಿಯೇ ಜನರಿಗೆ ತಲುಪುತ್ತಿದೆ. ಕಾಂಗ್ರೆಸ್ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದರೂ ಇದುವರೆಗೆ ಅದನ್ನು ಈಡೇರಿಸಿಲ್ಲ” ಎಂದು ಹೇಳಿದರು.

ರಾಜ್ಯ ಸರ್ಕಾರ ಕೇಂದ್ರಕ್ಕೆ ಹಣ ಪಾವತಿಸದ ಹಿನ್ನೆಲೆ ಅಕ್ಕಿ ಪೂರೈಕೆ ಸಮಸ್ಯೆ ಉಂಟಾಗಿದೆ. ಕಳೆದ ಮೂರು ತಿಂಗಳಿಂದ ಮಶಾಸನ ನೀಡುತ್ತಿಲ್ಲ. ಅನರ್ಹರನ್ನು ಹೊರಗಿಡುವ ನೆಪ ಹೇಳಲಾಗುತ್ತಿದೆ ಎಂದು ಟೀಕಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿ 15 ದಿನಗಳಿಗೊಮ್ಮೆ ಜಿಲ್ಲೆಗಳಿಗೆ ಭೇಟಿ ನೀಡಬೇಕು ಎಂದು ಮುಖ್ಯಮಂತ್ರಿ ಹೇಳಿದ್ದರೂ, ಸಚಿವರು ಜನರ ಸಮಸ್ಯೆ ಆಲಿಸುವ ಬದಲು ದೆಹಲಿಗೆ ತೆರಳುತ್ತಿದ್ದಾರೆ ಎಂದು ಆರೋಪಿಸಿದರು. “ಕಾಂಗ್ರೆಸ್ ಹೈಕಮಾಂಡ್ ‘ವೀಕ್ ಹೈಕಮಾಂಡ್’ ಆಗಿದೆ. ಅಧಿಕಾರಿಗಳಿಗೆ ಸಂಬಳ ನೀಡಲು ಸರ್ಕಾರದಲ್ಲಿ ಹಣವಿಲ್ಲ. ಅಬಕಾರಿ ಆದಾಯದಿಂದಲೇ ಸರ್ಕಾರ ನಡೆಯುತ್ತಿದೆ” ಎಂದು ವ್ಯಂಗ್ಯವಾಡಿದರು.

ಆಳಂದ ಘಟನೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದವರ ವಿರುದ್ಧದ ಪ್ರಕರಣ ಹಿಂಪಡೆಯಲಾಗಿದ್ದು, ಅದರ ಪರಿಣಾಮವಾಗಿ ಭಟ್ಕಳದಲ್ಲಿ ದೇವಾಲಯ ಧ್ವಂಸ ಘಟನೆ ನಡೆದಿದೆ ಎಂದು ಆರೋಪಿಸಿದ ಅವರು, ಈ ಕುರಿತು ಮೇ 29ರಂದು “ಭಟ್ಕಳ ಚಲೋ” ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

“ರಾಜ್ಯ ಸರ್ಕಾರ ಹಿಂದೂಗಳ ರಕ್ಷಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಮುಸ್ಲಿಂರ ಓಲೈಕೆಯಲ್ಲಿ ತೊಡಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂಧನ ದರ ಏರಿಕೆಯಿಂದ ಕೇಂದ್ರ ಸರ್ಕಾರಕ್ಕೆ ಒಂದು ನಯಾಪೈಸೆಯೂ ಆದಾಯ ಬರುವುದಿಲ್ಲ. ಆದರೆ ರಾಜ್ಯ ಸರ್ಕಾರಕ್ಕೆ ಸುಮಾರು 6 ಸಾವಿರ ಕೋಟಿ ರೂ. ಆದಾಯ ಬರುತ್ತಿದೆ ಎಂದು ಆರೋಪಿಸಿದ ಅವರು, “ಮೇ 30ರಂದು ಕಾಂಗ್ರೆಸ್ ಯಾವ ಮುಖ ಇಟ್ಟುಕೊಂಡು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ” ಎಂದು ಪ್ರಶ್ನಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಿತಿನ್ ನಬಿನ್ ಅವರ ರಾಜ್ಯ ಭೇಟಿ, ರಾಜ್ಯಸಭೆ ಚುನಾವಣೆ ಹಾಗೂ ಎಚ್.ಡಿ.ದೇವೇಗೌಡ ಅವರ ಮರು ಆಯ್ಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಈ ಬಗ್ಗೆ ನಮ್ಮ ಅಭಿಪ್ರಾಯವನ್ನು ಪಕ್ಷದ ರಾಷ್ಟ್ರೀಯ ನಾಯಕರಿಗೆ ತಿಳಿಸಿದ್ದೇವೆ. ಅಂತಿಮ ತೀರ್ಮಾನ ಹೈಕಮಾಂಡ್ ಕೈಗೊಳ್ಳಲಿದೆ” ಎಂದರು.

“2028ರ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಸರ್ಕಾರವನ್ನು ತಿರಸ್ಕರಿಸಲಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಯನ್ನು ಹೈಕಮಾಂಡ್ ಒಬ್ಬರನ್ನೇ ದೆಹಲಿಗೆ ಕರೆದಿದ್ದರೂ, ಅವರು ಮಂತ್ರಿಗಳನ್ನು ಒಟ್ಟಿಗೆ ಕರೆದುಕೊಂಡು ಹೋಗಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯಬಹುದು. ಆದರೆ ಡಿ.ಕೆ. ಶಿವಕುಮಾರ್ ಅವರಿಗೆ ‘ಖಾಲಿ ತಟ್ಟೆ’ ಸಿಗಲಿದೆ ಎಂದು ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ, ಶಾಸಕ ಸಿಮೆಂಟ್‌ ಮಂಜು, ಜಿಲ್ಲಾಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Continue Reading

Hassan

2025-26ರ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ : ಫುಟ್ಬಾಲ್‌ನಲ್ಲಿ ಹಾಸನ ಜಿಲ್ಲೆಗೆ ರನ್ನರ್-ಅಪ್ ಗೌರವ

Published

on

ಹಾಸನ: 2025-26ನೇ ಸಾಲಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಹಾಸನ ಜಿಲ್ಲಾ ತಂಡ ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದಿದೆ.ರೋಚಕ ಅಂತಿಮ ಪಂದ್ಯದಲ್ಲಿ ಹಾಸನ ಹಾಗೂ ಬೆಳಗಾವಿ ತಂಡಗಳು ಪೂರ್ಣಾವಧಿ ಆಟದಲ್ಲಿ 0-0 ಗೋಲುಗಳಿಂದ ಸಮಬಲ ಸಾಧಿಸಿವೆ. ಬಳಿಕ ನಡೆದ ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಎರಡೂ ತಂಡಗಳು 3-3ರಿಂದ ಸಮಬಲ ಕಾಯ್ದುಕೊಂಡವು. ಅಂತಿಮವಾಗಿ ಸಡನ್ ಡೆತ್‌ನಲ್ಲಿ ಬೆಳಗಾವಿ ತಂಡ 2-1 ಅಂತರದಲ್ಲಿ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿದರೆ, ಹಾಸನ ತಂಡ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.

ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಮತ್ತು ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಹಾಸನ ತಂಡವು ಬಲಿಷ್ಠ ಬೀದರ್ ಹಾಗೂ ಬೆಂಗಳೂರು ನಗರ ತಂಡಗಳನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು. ಲೀಗ್ ಹಂತದಲ್ಲಿ ಕಲಬುರಗಿ ಮತ್ತು ಚಿಕ್ಕಮಗಳೂರು ತಂಡಗಳ ವಿರುದ್ಧವೂ ಗೆಲುವು ದಾಖಲಿಸಿತ್ತು.ಹಾಸನ ಜಿಲ್ಲಾ ಫುಟ್ಬಾಲ್ ತಂಡದ ನಾಯಕನಾಗಿ ಹರೀಶ್ ಕೆ. (ಪಿಡಿಓ) ತಂಡವನ್ನು ಮುನ್ನಡೆಸಿದರು.

ಸಹಾಯಕ ನಿರ್ದೇಶಕರಾದ ಪಂರಾಜ್ ಹಾಗೂ ಆನೆಮಹಲ್ ವೇಣುಗೋಪಾಲ್ (ಪಿಡಿಓ) ಕಳೆದ ಸಾಲಿನಲ್ಲಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದವರು ಎಂಬುದು ವಿಶೇಷ.ತಂಡದಲ್ಲಿ ಡಾ. ವೆಂಕಟೇಶ್, ಡಾ. ಸತೀಶ್, ವಸಂತ್, ಗುರುಪ್ರಸಾದ್, ಶಿವಣ್ಣ, ಸೋಮಶೇಖರ್, ಸಂಪತ್ (ಆರೋಗ್ಯ ಇಲಾಖೆ), ಡಾ. ಸಾಗರ್, ಲೋಕೇಶ್ (ಪಶುಸಂಗೋಪನೆ ಇಲಾಖೆ), ಲೋಕೇಶ್ (ಕಂದಾಯ ಇಲಾಖೆ), ಪುರುಶೋತ್ತಮ್ ಪ್ರಕಾಶ್, ವೇದ, ಕಾಂತರಾಜು (ಶಿಕ್ಷಣ ಇಲಾಖೆ), ಯೋಗಾನಾಥ್ (ಕೈಗಾರಿಕಾ ತರಬೇತಿ ಇಲಾಖೆ) ಹಾಗೂ ಮೈಲಾರಸ್ವಾಮಿ (ಅರಣ್ಯ ಇಲಾಖೆ) ಆಟಗಾರರಾಗಿ ಭಾಗವಹಿಸಿದ್ದರು.ಹಾಸನ ಜಿಲ್ಲಾ ಫುಟ್ಬಾಲ್ ತಂಡದ ಸಾಧನೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿ, ಜಿಲ್ಲಾಧ್ಯಕ್ಷರಾದ ಬಿ.ಪಿ. ಕೃಷ್ಣೇಗೌಡ ಹಾಗೂ ಜಿಲ್ಲಾ ಪದಾಧಿಕಾರಿಗಳು ಅಭಿನಂದಿಸಿದರು.

Continue Reading

Trending

error: Content is protected !!