Connect with us

State

75 ವರ್ಷ ದಾಟಿದವರ ಮನೆಗೇ ಪಡಿತರ: ಆಹಾರ ಇಲಾಖೆ ಸಿದ್ಧತೆ

Published

on

ಬೆಂಗಳೂರು: ‘ಅನ್ನಭಾಗ್ಯ’ ಯೋಜನೆಯಡಿ ವಿತರಿಸುವ ಪಡಿತರವನ್ನು 75 ವರ್ಷ ದಾಟಿದವರ ಮನೆ ಬಾಗಿಲಿಗೇ ತಲುಪಿಸಲು ಆಹಾರ ಇಲಾಖೆ ಸಿದ್ಧತೆ ನಡೆಸಿದೆ.

ಕೋರಿಕೆಯಷ್ಟು ಅಕ್ಕಿಯನ್ನು ಎಫ್‌ಸಿಐ ನಿಗದಿಪಡಿಸಿದ ದರದಲ್ಲಿ (ಪ್ರತಿ ಕೆ.ಜಿಗೆ ₹ 34) ಪೂರೈಸಲು ಛತ್ತೀಸಗಢ ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಿವೆ.

ಇದೇ ತಿಂಗಳಿನಿಂದ ನಗದು ಬದಲು ಪೂರ್ಣ ಪ್ರಮಾಣದಲ್ಲಿ ಅಕ್ಕಿ ಪೂರೈಸಲು ನಿರ್ಧರಿಸಿರುವ ಇಲಾಖೆ, ಪಡಿತರ ವಿತರಣೆಯಲ್ಲಿ ಹಿರಿಯ ನಾಗರಿಕರಿಗೆ ಅನುಕೂಲ ಮಾಡಿಕೊಡಲು ಮತ್ತೊಂದು ನಿರ್ಧಾರ ತೆಗೆದುಕೊಂಡಿದೆ. ಅದಕ್ಕಾಗಿ ಹಿರಿಯ ನಾಗರಿಕಸ್ನೇಹಿ ನೀತಿ ಪರಿಚಯಿಸುತ್ತಿದೆ.

ಇದುವರೆಗೂ ಪಡಿತರ ಕಾರ್ಡ್‌ ಹೊಂದಿರುವ ಕುಟುಂಬದ ಯಾರಾದರೂ ಒಬ್ಬ ಸದಸ್ಯರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿ ಅಥವಾ ಅನ್ನಭಾಗ್ಯ ಪಡಿತರ ವಿತರಣಾ ಕೇಂದ್ರಗಳಿಗೆ ತೆರಳಿ ಬಯೊಮೆಟ್ರಿಕ್‌ ನೀಡಿದ ನಂತರ ತಮ್ಮ ಕುಟುಂಬಕ್ಕೆ ನಿಗದಿಪಡಿಸಿದ ಅಕ್ಕಿ ಮತ್ತಿತರ ಪಡಿತರ ಪಡೆಯಬೇಕಿತ್ತು. ವಯಸ್ಸಾದವರು ಪಡಿತರ ಕೇಂದ್ರಗಳಿಗೆ ಹೋಗಲು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು. ಇಂತಹ ಸಮಸ್ಯೆಗಳಿಗೆ ಕೊನೆ ಹಾಡಲು ‘ಮನೆ ಬಾಗಿಲಿಗೆ ಪಡಿತರ’ ಯೋಜನೆ ರೂಪಿಸಲಾಗಿದೆ.

ಒಂಟಿ ಕುಟುಂಬಕ್ಕೆ ಮೊದಲ ಪ್ರಾಶಸ್ತ್ಯ:

ಮನೆ ಬಾಗಿಲಿಗೆ ಪಡಿತರ ವಿತರಿಸಬೇಕಾದರೆ ಅವರ ಕುಟುಂಬದಲ್ಲಿ (ಪಡಿತರ ಚೀಟಿಯಲ್ಲಿ ನಮೂದಿಸಿದಂತೆ) 75ರ ಒಳಗಿನ ಇತರೆ ಸದಸ್ಯರು ಇರಬಾರದು. ಇದ್ದರೆ, ಅವರು ವಿತರಣಾ ಕೇಂದ್ರಗಳಿಗೆ ಬಂದು ಪಡಿತರ ಪಡೆಯಬೇಕು ಎಂಬ ಷರತ್ತು ವಿಧಿಸಲಾಗಿದೆ. ಒಂಟಿ ವೃದ್ಧರು, 75 ದಾಟಿದ ದಂಪತಿಗಳ ಪ್ರತ್ಯೇಕ ಪಟ್ಟಿಯನ್ನು ಆಹಾರ ಇಲಾಖೆ ಈಗಾಗಲೇ ಸಿದ್ಧಪಡಿಸಿದೆ. ಒಂದು ವೇಳೆ ತಮ್ಮ ಕುಟುಂಬದ ಇತರೆ ಸದಸ್ಯರು ಬೇರೆ ಪ್ರದೇಶಗಳಿಗೆ ತೆರಳಿದ್ದರೆ, ಅಂತಹ ಸಮಯದಲ್ಲಿ ಊರಲ್ಲೇ ಉಳಿದ ವೃದ್ಧರು ಮನೆ ಬಾಗಿಲಿಗೇ ಪಡಿತರ ನೀಡುವಂತೆ ಕೋರಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

‘ಮನೆಬಾಗಲಿಗೆ ಪಡಿತರ ನೀಡುವುದು ಅತ್ಯಂತ ಪ್ರಯೋಜನಕಾರಿ. ಸಂಚಾರ ದಟ್ಟಣೆ ಅಥವಾ ವಯಸ್ಸಿನ ಕಾರಣಕ್ಕೆ ನ್ಯಾಯಬೆಲೆ ಅಂಗಡಿಗೆ ಹೋಗಲು ಸಾಧ್ಯವಾಗದೆ, ಕೆಲವೊಮ್ಮೆ ಸರದಿಯಲ್ಲಿ ನಿಲ್ಲಲು ಆಗದೇ ಕೆಲ ತಿಂಗಳು ಪಡಿತರವನ್ನೇ ಪಡೆಯಲಿಲ್ಲ. ಸರ್ಕಾರದ ಈ ನಿರ್ಧಾರ ತುಂಬಾ ಉಪಕಾರಿಯಾಗಿದೆ’ ಎನ್ನುತ್ತಾರೆ ಬೆಂಗಳೂರು ಎಂ.ಸಿ. ಲೇಔಟ್‌ನ 90 ವರ್ಷದ ನಾಗರಿಕ ರತ್ನಾಕರ ಶೆಣೈ.

Special

ಕರ್ನಾಟಕದಲ್ಲಿ 2.93 ಲಕ್ಷ ಹೊಸ BPL ಕಾರ್ಡ್ ಬಿಡುಗಡೆ : ನಿಮ್ಮ ಹೆಸರು ಹೊಸ ಪಟ್ಟಿಯಲ್ಲಿ ಇದೆಯೇ?

Published

on

ಕರ್ನಾಟಕ ಸರ್ಕಾರದಿಂದ ಬಡ ಕುಟುಂಬಗಳ ಸಹಾಯಕ್ಕಾಗಿ ಹೊಸ BPL (Below Poverty Line) ಕಾರ್ಡ್ ವಿತರಣೆ ಕಾರ್ಯ ನಡೆದಿದೆ. ರಾಜ್ಯದಾದ್ಯಂತ ಸುಮಾರು 2.93 ಲಕ್ಷ ಹೊಸ BPL ಕಾರ್ಡ್‌ಗಳು ಮಂಜೂರಾಗಿದ್ದು, ಅರ್ಜಿ ಸಲ್ಲಿಸಿದ ಕುಟುಂಬಗಳು ತಮ್ಮ ಹೆಸರು ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಈಗಲೇ ಪರಿಶೀಲಿಸಬಹುದು.

ಹೊಸ BPL ಕಾರ್ಡ್ ಪಡೆಯಲು ಅರ್ಹರು:
•ಆರ್ಥಿಕವಾಗಿ ದುರ್ಬಲ ಮತ್ತು ಬಡ ಕುಟುಂಬಗಳು
•ಆದಾಯ ಮಿತಿ ಸರ್ಕಾರ ನಿಗದಿಪಡಿಸಿರುವ ಮಾನದಂಡಕ್ಕೆ ಒಳಪಡುವವರು
•ಹಿಂದಿನಿಂದಲೂ BPL ಕಾರ್ಡ್ ಸಲ್ಲಿಸಿದರೂ ಮಂಜೂರಾಗದ ಕುಟುಂಬಗಳು
•ಪರಿಶೀಲನಾ ಹಂತದಲ್ಲಿ ತಪ್ಪಾಗಿ APL ಪಟ್ಟಿಗೆ ಸೇರಿಸಲ್ಪಟ್ಟ ಕುಟುಂಬಗಳು

ಪಟ್ಟಿ ಪರಿಶೀಲನೆ ಮಾಡುವುದು ಹೇಗೆ?
•ಅಧಿಕೃತ ಸಾರ್ವಜನಿಕ ಪೋರ್ಟಲ್‌ಗೆ ಭೇಟಿ ನೀಡಿ ನಿಮ್ಮ ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಆಯ್ಕೆ ಮಾಡಿ
•ಕುಟುಂಬದ ಮುಖ್ಯಸ್ಥರ ಹೆಸರು ಅಥವಾ ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ
•‘Search’ ಒತ್ತಿದರೆ ಪಟ್ಟಿಯಲ್ಲಿ ನಿಮ್ಮ ವಿವರಗಳು ಕಾಣಿಸುತ್ತವೆ

ಈ ಹೊಸ ಹಂತದ ಮಹತ್ವ:
ಮುನ್ನಡೆಯ ವರ್ಷಗಳಲ್ಲಿ BPL ಕಾರ್ಡ್‌ಗಳ ಸಂಖ್ಯೆಯಲ್ಲಿ ಗೊಂದಲ, ಅನರ್ಹರ ಸೇರ್ಪಡೆ, ಅರ್ಹರು ಹೊರಬೀಳುವ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಸರ್ಕಾರ ಸಂಪೂರ್ಣ ವಿಮರ್ಶೆ ನಡೆಸಿ ಹೊಸ ವ್ಯವಸ್ಥೆ ತರಲಾಗಿದೆ.

BPL ಕಾರ್ಡ್ ಪಡೆಯುವ ಪ್ರಯೋಜನಗಳು:
•ಅನ್ನಭಾಗ್ಯ ಯೋಜನೆಯಡಿ ಉಚಿತ/ಕಡಿಮೆ ದರದ ಧಾನ್ಯ
•ಸಿಲಿಂಡರ್, ಆರೋಗ್ಯ, ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಅನೇಕ ಸರ್ಕಾರಿ ಯೋಜನೆಗಳ ಸೌಲಭ್ಯ
•ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳಿಗೆ ಅರ್ಹತೆ

ಅರ್ಹ ಕುಟುಂಬಗಳು ಯಾವುದೇ ವಿಳಂಬವಿಲ್ಲದೆ ಪಡಿತರ ಮತ್ತು ಸರ್ಕಾರದ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯಬಹುದು.ಕರ್ನಾಟಕದ 2.93 ಲಕ್ಷ ಹೊಸ BPL ಕಾರ್ಡ್ ವಿತರಣೆಯು ಹಲವು ಬಡ ಕುಟುಂಬಗಳಿಗೆ ನಿಜವಾದ ಆಶಾಕಿರಣ.

Continue Reading

State

ನಾಳೆ KSCA ಚುನಾವಣಾ ಮತದಾನ: ವೆಂಕಟೇಶ್‌ ಪ್ರಸಾದ್ v/s ಬ್ರಿಜೇಶ್ ಪಟೇಲ್ ಬಣಗಳ ಮಧ್ಯೆ ಜಿದ್ದಾಜಿದ್ದಿ

Published

on

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್  ಚುನಾವಣಾ ಮತದಾನ ನಾಳೆ ನಡೆಯಲಿದ್ದು, ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಬಣ ಮ ಬ್ರಿಜೇಶ್ ಪಟೇಲ್  ಬಣಗಳ ಮಧ್ಯೆ  ಭಾರೀ ಹಣಾಹಣಿ ನಡೆದಿದೆ.
ಚುನಾವಣೆಯನ್ನು ಸುತ್ತುವರಿದ ವಿವಾದಗಳ ನಡುವೆ ಇಂದು ಪ್ರಸಾದ್ ಬಣವೂ ಕೆಎಸ್‌ಸಿಎ ಸದಸ್ಯರೊಂದಿಗೆ ಸಂವಾದ ನಡೆಸಿತು.

ಪ್ಯಾಲೇಸ್ ಮೈದಾನದಲ್ಲಿ ಇಂದು ನಡೆದ ಸಂವಾದ ಕಾರ್ಯಕ್ರಮದಲ್ಲಿ ನೂರಾರು ಕೆಎಸ್‌ಸಿಎ ಸದಸ್ಯರು ಪಾಲ್ಗೊಂಡಿದ್ದರು. ಟೀಂ ಗೇಮ್ ಚೇಂಜರ್ಸ್ ಪರವಾಗಿ ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಬ್ರಿಜೇಶ್ ಬಣದ ಆಡಳಿತದ ವೈಫಲ್ಯಗಳನ್ನು ಪ್ರಸಾದ್ ಬಣವು ಪಿಪಿಟಿ ಮೂಲಕ ಸದಸ್ಯರಿಗೆ ವಿವರಣೆ ನೀಡಿತ್ತು.

ಸಂವಾದದ ನಂತರ ಮಾತನಾಡಿದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಪ್ರಸ್ತುತ ಆಡಳಿತದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ವೆಂಕಟೇಶ್ ಪ್ರಸಾದ್ ತಂಡ ಗೆಲ್ಲಲೇಬೇಕು. ರಾಜ್ಯದಲ್ಲಿ ಕ್ರಿಕೆಟ್ ಉದ್ಧಾರ ಆಗಬೇಕಾದರೆ ಬದಲಾವಣೆ ಅನಿವಾರ್ಯ. ನಾವು ಅಧಿಕಾರದಲ್ಲಿದ್ದಾಗ ಎರಡು ಹೆಜ್ಜೆ ಮುಂದೆ ಇಟ್ಟಿದ್ದೇವೆ. ಈಗ 10 ಹೆಜ್ಜೆ ಹಿಂದೆ ಹೋಗಿದ್ದೇವೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇನ್ಫ್ರಾಸ್ಟ್ರಕ್ಚರ್ ಬದಲಾಗಬೇಕು. ಪ್ರಸಾದ್ ತಂಡ ಇದನ್ನು ಸಾಧಿಸುವ ಸಾಮರ್ಥ್ಯ ಹೊಂದಿದೆ. ಕೆಎಸ್‌ಸಿಎನಲ್ಲಿ ದುಡ್ಡಿಗೆ ಕೊರತೆಯಿಲ್ಲ. ಆದರೆ ಕ್ರಿಕೆಟ್ ಬೆಳವಣಿಗೆ ಆಗಬೇಕು. ಮತ ಕೇವಲ ಕ್ಲಬ್‌ಗೆ ಅಲ್ಲ. ಕ್ರಿಕೆಟ್ ಕನಸು ಕಟ್ಟಿಕೊಂಡಿರುವ ಮಕ್ಕಳಿಗಾಗಿ ಎಂದು ಹೇಳಿದರು.

ಇನ್ನೂ ನಾಳೆ ನಿರ್ಣಾಯಕ ದಿನವಾಗಿದ್ದು, ನಾಳೆ ಬೆಳಗ್ಗೆ 11 ಗಂಟೆಗೆ ಮತದಾನ ಆರಂಭವಾಗಲಿದೆ. ಅಲ್ಲದೇ ನಾಳೆಯೇ ಕೆಎಸ್‌ಸಿಎ ಹೊಸ ಆಡಳಿತ ನಿರ್ಧಾರವಾಗಲಿದ್ದು, ಪ್ರಸಾದ್-ಬ್ರಿಜೇಶ್ ಬಣಗಳ ನಡುವೆ ಕಠಿಣ ಪೈಪೋಟಿ ಎದುರಾಗಲಿದೆ.

Continue Reading

State

ಡಿವೈಡರ್‌ಗೆ ಕಾರ್‌ ಡಿಕ್ಕಿ, ಹೊತ್ತಿ ಉರಿದ ಕಾರಿನೊಳಗೆ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಸಜೀವ ದಹನ

Published

on

ಧಾರವಾಡ: ಐಎಎಸ್‌ ಅಧಿಕಾರಿ ಮಹಾಂತೇಶ್‌ ಬೀಳಗಿ ರಸ್ತೆ ಅಪಘಾತದಲ್ಲಿ ಸಾವು ಕಂಡ ಸುದ್ದಿ ಮಾಸುವ ಮುನ್ನವೇ ಅದೇ ರೀತಿಯ ಇನ್ನೊಂದು ಘಟನೆ ಧಾರವಾಡದಲ್ಲಿ ವರದಿಯಾಗಿದೆ.

ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಪಂಚಾಕ್ಷರಿ ಸಾಲಿಮಠ ಅವರು ಪ್ರಯಾಣ ಮಾಡುತ್ತಿದ್ದ ಐ20 ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಹೊತ್ತಿ ಉರಿದ ಕಾರಿನಿಂದ ಹೊರಬರಲು ಸಾಧ್ಯವಾಗದೇ ಇನ್ಸ್‌ಪೆಕ್ಟರ್ ಕೂಡ ಅದರ ಒಳಗೆ ಸಜೀವವಾಗಿ ದಹನವಾಗಿದ್ದಾರೆ.

ಕಾರ್‌ನಲ್ಲಿ ಇನ್ಸ್‌ಪೆಕ್ಟರ್‌ ಸಾಲಿಮಠ ಪ್ರಯಾಣ ಮಾಡುತ್ತಿದ್ದರು. ಕಾರಿನಲ್ಲಿಯೇ ಅವರ ದೇಹ ಸುಟ್ಟುಹೋಗಿದೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಹೊರ ಹೊಲಯದಲ್ಲಿ ಘಟನೆ ನಡೆದಿದೆ.

ಗದಗದಿಂದ ಹುಬ್ಬಳ್ಳಿ ಮಾರ್ಗವಾಗಿ ಕಾರ್‌ ಪ್ರಯಾಣ ಮಾಡುವಾಗ, ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಭೀಕರ ಘಟನೆ ನಡೆದಿದೆ.

I20 ಕಾರ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಸಾಲಿಮಠ ಅವರು ಹಾವೇರಿ ಲೋಕಾಯುಕ್ತ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡಿದ್ದರು. ಗದಗದಲ್ಲಿ ಇರುವ ಕುಟುಂಬವನ್ನು ಭೇಟಿ ಮಾಡುವ ಸಲುವಾಗಿ ಅವರು ಹೊರಟಿದ್ದರು.

ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಅಣ್ಣಿಗೇರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Continue Reading

Trending

error: Content is protected !!