Hassan
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಹೆಚ್ಚಾದ ಚಿರತೆ ಹಾವಳಿ
ಹಾಸನ : ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಹೆಚ್ಚಾದ ಚಿರತೆ ಹಾವಳಿ
ಸಕಲೇಶಪುರ ತಾಲ್ಲೂಕಿನ, ಮಾವೀನಹಳ್ಳಿಯಲ್ಲಿ ಚಿರತೆ ದಾಳಿಗೆ ಬಲಿಯಾಗಿದ್ದ ಮೂರು ಹಸುಗಳು
ಬೇರೆಡೆ ಸೆರೆ ಹಿಡಿದ ಚಿರತೆಯನ್ನು ಈ ಗ್ರಾಮದಲ್ಲಿ ಬಿಟ್ಟಿದ್ದಾರೆ ಎಂದು ಆರೋಪಿಸಿದ್ದ ಗ್ರಾಮಸ್ಥರು
ಬಳಿಕ ಎಚ್ಚೆತ್ತಿದ್ದ ಅರಣ್ಯ ಇಲಾಖೆ

ಚಿರತೆ ಚಲನವಲನ ಗಮನಿಸಲು ಆರು ಸಿಸಿ ಕ್ಯಾಮೆರಾ ಅಳವಡಿಸಿದ್ದ ಅರಣ್ಯ ಇಲಾಖೆ
ಒಂದು ಸಿಸಿ ಕ್ಯಾಮೆರಾದಲ್ಲಿ ಚಿರತೆ ಓಡಾಟ ಸೆರೆ
ಚಿರತೆ ಸೆರೆಗೆ ಬೋನು ಇಟ್ಟಿರುವ ಅರಣ್ಯ ಇಲಾಖೆ
ಬೋನಿಗೆ ಬೀಳದೆ ಓಡಾಡುತ್ತಿರುವ ಚಿರತೆ
ಮೂರು ಕರುಗಳ ಮೇಲೆ ದಾಳಿ ಮಾಡಿ ಗಾಯಗೊಳಿಸಿರುವ ಚಿರತೆ
ಅನಾಹುತ ಸಂಭವಿಸುವ ಮುನ್ನ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರ ಆಗ್ರಹ

Hassan
ಡಿ.21ಕ್ಕೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಬಹಿರಂಗ ಸಭೆ: ಎಸ್.ವರಲಕ್ಷ್ಮೀ
ಹಾಸನ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಪೊರೇಟ್ ಪರ ನೀತಿಗಳಿಂದಾಗಿ ರಾಜ್ಯದ ಜನಸಾಮಾನ್ಯರ ಮೇಲೆ ಆಗುತ್ತಿರುವ ಪರಿಣಾಮಗಳು ಮತ್ತು ಅವರ ಬದುಕಿನ ಪ್ರಶ್ನೆಗಳನ್ನು ಆಧರಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಸಿಪಿಐಎಂ ಜನಪರ ಪರ್ಯಾಯ ನೀತಿಗಳಿಗಾಗಿ ರಾಜ್ಯಾದ್ಯಂತ ಮನಮನೆ ಪ್ರಚಾರಾಂದೋಲನ ನಡೆಸುತ್ತಿದೆ. ಇದರ ಸಮಾರೋಪವಾಗಿ ಡಿಸೆಂಬರ್.21 ಕ್ಕೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಬಹಿರಂಗ ಸಭೆಯನ್ನು ನಡೆಸಲಾಗುತ್ತಿದೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಸ್.ವರಲಕ್ಷ್ಮೀ ತಿಳಿಸಿದರು.

ಇತ್ತೀಚೆಗೆ ನಗರದ ಸಿಪಿಐಎಂ ಕಚೇರಿಯಲ್ಲಿ ಜನಾಂದೋಲನದ ಕಿರುಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ದಿನದಿಂದ ದಿನಕ್ಕೆ ರಾಜ್ಯದ ರೈತರು, ಕಾರ್ಮಿಕರು, ಕೂಲಿಕಾರರು, ಮಹಿಳೆಯರು, ಬಡವರು, ದಲಿತರು ಮತ್ತು ಅಲ್ಪಸಂಖ್ಯಾತರು ತೀವ್ರ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆಯಿಲ್ಲ, ಕಾರ್ಮಿಕರಿಗೆ ದುಡಿಮೆಗೆ ತಕ್ಕಂತ ಸಂಬಳವಿಲ್ಲ, ವಿಪರೀತ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಜೀವನ ಸಾಗಿಸುವುದೇ ಅತ್ಯಂತ ದುಸ್ತರವಾಗಿದೆ. ಇದೆಲ್ಲದಕ್ಕೂ ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ಜನವಿರೋಧಿ ನೀತಿಗಳೇ ಕಾರಣವಾಗಿದ್ದು, ಈ ನೀತಿಗಳನ್ನು ಹಿಮ್ಮೆಟ್ಟಿಸಿ ಪರ್ಯಾಯ ಜನಪರ ನೀತಿಗಳಿಗಾಗಿ ಸಿಪಿಐಎಂ ರಾಜ್ಯಾದ್ಯಂತ ಜನಾಂದೋಲನವನ್ನು ಸಂಘಟಿಸಲಾಗಿದೆ. ಇದಕ್ಕೆ ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಜನಾಂದೋಲನ ಮತ್ತು ಪ್ರತಿಭಟನಾ ಬಹಿರಂಗ ಸಭೆಯಲ್ಲಿ ಮಂಡಿಸಲಾಗುವ ಹಕ್ಕೋತ್ತಾಯಗಳೇನು?
ಕೃಷಿ ಬಿಕ್ಕಟ್ಟು: ಎಲ್ಲಾ ಬೆಳೆಗಳಿಗೆ ಒಟ್ಟಾರೆ ಉತ್ಪಾದನಾ ವೆಚ್ಚಕ್ಕೆ ಶೇ.೫೦ ಲಾಭಾಂಶ ಸೇರಿಸಿ ಕನಿಷ್ಟ ಬೆಂಬಲ ಬೆಲೆ ಕಾಯ್ದೆ ಜಾರಿ ಮಾಡಬೇಕು. ರೈತಾಧಾರಿತ ಕೃಷಿ ರಕ್ಷಿಸಬೇಕು, ಕಾರ್ಪೊರೇಟ್ ಲಾಭದ ಕೃಷಿ ಕೈಬಿಡಬೇಕು.
ಭೂಮಿ ಪ್ರಶ್ನೆ: ಬಲವಂತದ, ಅನಗತ್ಯವಾದ ಭೂಸ್ವಾಧೀನ ನಿಲ್ಲಿಸಬೇಕು. ಬಿಜೆಪಿ ಸರ್ಕಾರದ ಕಾಲದಲ್ಲಿ ಜಾರಿಗೊಳಿಸಿದ ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ರೈತರ ಭೂಮಿಯನ್ನು ರಕ್ಷಿಸಬೇಕು, ಬಡವರಿಗೆ ದಲಿತರಿಗೆ ಭೂಮಿಗಳನ್ನು ನೀಡಬೇಕು. ಬಗೈರ್ ಹುಕುಂ ಮತ್ತು ಅರಣ್ಯ ಸಾಗುವಳಿ ಭೂಮಿಗಳಿಗೆ ಹಕ್ಕುಪತ್ರಗಳನ್ನು ನೀಡಬೇಕು.
ಕಾರ್ಮಿಕರ ಹಕ್ಕುಗಳು: ಕೇಂದ್ರ ಬಿಜೆಪಿ ಸರ್ಕಾರ ಕಾರ್ಮಿಕ ಸಂಹಿತೆಗಳನ್ನು ಕೈಬಿಡಬೇಕು. ರಾಜ್ಯ ಸರ್ಕಾರ ಅವುಗಳನ್ನು ಜಾರಿ ಮಾಡಬಾರದು. ಗುತ್ತಿಗೆ, ಹೊರಗುತ್ತಿಗೆ ಮುಂತಾದ ಅಸ್ಥಿರ ಅತಂತ್ರ ಸ್ವರೂಪದ ಕೆಲಸಗಳನ್ನು ಖಾಯಂ ಮಾಡಬೇಕು. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಬೇಕು. ಕನಿಷ್ಟ ವೇತನ ಮಾಸಿಕ ರೂ.36,000 ಮತ್ತು ಎಲ್ಲಾ ನಿವೃತ್ತರಿಗೂ ಕನಿಷ್ಟ ಪಿಂಚಣಿ ರೂ.9,000 ಜಾರಿಗೊಳಿಸಬೇಕು. ಕಟ್ಟಡ, ಸಾರಿಗೆ, ಮುಂತಾದ ಕಾರ್ಮಿಕರಿಗೆ ಸೌಲಭ್ಯಗಳನ್ನು ವಿಸ್ತರಿಸಬೇಕು ಮತ್ತು ಭ್ರಷ್ಟಾಚಾರ ತಡೆಗಟ್ಟಬೇಕು.

ನಿರುದ್ಯೋಗ: ಎಲ್ಲ ಅರ್ಹ ಯುವಜನರಿಗೂ ಉದ್ಯೋಗದ ಭದ್ರತೆ ನೀಡಬೇಕು. ಯುವನಿಧಿಯನ್ನು ಕನಿಷ್ಟ 5,000 ರೂ.ಗಳಿಗೆ ಹೆಚ್ಚಿಸಿ ಎಲ್ಲಾ ವಿದ್ಯಾವಂತ ನಿರುದ್ಯೋಗಿಗಳಿಗೆ ವಿಸ್ತರಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಖಾಲಿಯಿರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಬೇಕು. ಖಾಸಗಿ ರಂಗದಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿಯನ್ನು ಜಾರಿಗೊಳಿಸಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ನಗರಗಳಿಗೂ ವಿಸ್ತರಿಸಬೇಕು ಮತ್ತು ಕೂಲಿಯನ್ನು 600ಕ್ಕೆ ಹೆಚ್ಚಿಸಿ 200 ದಿನ ಕೆಲಸ ನೀಡಬೇಕು. ರಾಜ್ಯದಲ್ಲಿರುವ ಎಲ್ಲಾ ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಮತ್ತು ಎಲ್ಲಾ ಖಾಸಗಿ ಸಂಸ್ಥೆಗಳಲ್ಲಿ ಸಂಪರ್ಕ ಮತ್ತು ಸಂವಹನವನ್ನು ಕನ್ನಡದಲ್ಲಿ ಮಾಡಬೇಕು. ಯುವಜನರಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಜಾಲ, ಜೂಜು, ಗೇಮಿಂಗ್ ಇತ್ಯಾದಿಗಳನ್ನು ತಡೆಗಟ್ಟಲು ತೀವ್ರವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಭ್ರಷ್ಟಾಚಾರ: ತಳಮಟ್ಟದಿಂದ ಮೇಲ್ಮಟ್ಟದವರೆಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಎಲ್ಲಾ ಜನ ಸೇವೆಗಳೂ ಲಂಚವಿಲ್ಲದೆ ನಡೆಯುವುದೇ ಇಲ್ಲವೆನ್ನುವ ಪರಿಸ್ಥಿತಿ ಉಂಟಾಗಿದೆ. ರಾಜ್ಯದ ಮತ್ತು ದೇಶದ ಸಂಪತ್ತು ಮತ್ತು ಸಂಪನ್ಮೂಲಗಳನ್ನು ಬಂಡವಾಳದಾರರಿಗೆ ವರ್ಗಾವಣೆ ಮಾಡುವ ಬೃಹತ್ ಭ್ರಷ್ಟಾಚಾರ ನಡೆಯುತ್ತಿದೆ. ಇವುಗಳ ವಿರುದ್ಧ ಜನತೆ ತೀವ್ರ ಪ್ರತಿರೋಧ ಮಾಡಬೇಕಾಗಿದೆ.

ಶಿಕ್ಷಣ: ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣ ತೀವ್ರಗೊಂಡಿದೆ. ಬಡವರು, ಮಧ್ಯಮ ವರ್ಗಗಳು ದುಬಾರಿ ವೆಚ್ಚಗಳನ್ನು ಭರಿಸಲಾಗಿದೆ ತತ್ತರಿಸುವಂತಾಗಿದೆ. ಸರ್ಕಾರಿ ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳನ್ನು ವ್ಯವಸ್ಥಿತವಾಗಿ ಮುಚ್ಚುತ್ತಾ, ಖಾಸಗಿ ಶಿಕ್ಷಣ ಪಡೆಯಿರಿ ಅಥವಾ ಶಿಕ್ಷಣವನ್ನು ತ್ಯಜಿಸಿರಿ ಎಂದು ಸರ್ಕಾರಗಳು ಮಾಡುತ್ತಿವೆ. ಶಿಕ್ಷಣ ಕ್ಷೇತ್ರದಲ್ಲಿ ಸಾರ್ವಜನಿಕ ಶಿಕ್ಷಣವನ್ನು ಸದೃಢಗೊಳಿಸಿರುವ ಕೇರಳದ ಮಾದರಿಯನ್ನು ಅನುಸರಿಸಬೇಕು.
ಆರೋಗ್ಯ: ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರದ ಖಾಸಗೀಕರಣ ಮತ್ತು ಕಾರ್ಪೊರೇಟೀಕರಣದಿಂದಾಗಿ ಸಾಮಾನ್ಯ ಜನರಿಂದ ಆರೋಗ್ಯ ದೂರವಾಗುತ್ತಿದೆ. ಹಣವುಳ್ಳವರು ಬದುಕಬಹುದು ಇಲ್ಲದವರು ಬದುಕನ್ನು ಮುಗಿಸಿಕೊಳ್ಳಬಹುದು ಎಂಬ ವಾತಾವರಣ ಸೃಷ್ಟಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ, ಸಿಬ್ಬಂದಿಯಿಲ್ಲ, ಮೂಲಭೂತ ಸೌಕರ್ಯಗಳಿಲ್ಲ. ದುಬಾರಿ ಖಾಸಗಿ ಆಸ್ಪತ್ರೆಗಳಿಗೆ ಹೋಗುವಂತಹ ಪರಿಸ್ಥಿತಿ ನಿರ್ಮಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಸಕಲ ಸಜ್ಜಿತ ಆಧುನಿಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಿಸಬೇಕು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು.

ರೇಷನ್ ವ್ಯವಸ್ಥೆ: ಬಿಪಿಎಲ್ ಕಾರ್ಡುಗಳನ್ನು ಕಡಿತಗೊಳಿಸಲು ಬಿಜೆಪಿ ಸರ್ಕಾರ ಸೂಚಿಸಿದೆ. ಕಾಂಗ್ರೆಸ್ ಸರ್ಕಾರ ಜಾರಿ ಮಾಡುತ್ತಿದೆ. ಇದರಿಂದ ಬಡವರು ರೇಷನ್ ಸೌಲಭ್ಯಗಳನ್ನು ಕಳೆದುಕೊಳ್ಳುತ್ತಾರೆ. ಬಿಪಿಎಲ್ ಕಾರ್ಡನ್ನು ರಿಯಾಯಿತಿ/ಉಚಿತ ಆರೋಗ್ಯ ಸೇವೆಗೆ ಆಧಾರವಾಗಿ ಬಳಸುವ ಅವಕಾಶ ತಪ್ಪಿ ಸಂಕಷ್ಟಕ್ಕೆ ಸಿಲುಕುತ್ತಾರೆ. ಬಿಪಿಎಲ್ ಮಾನದಂಡಗಳನ್ನು ವೈಜ್ಞಾನಿಕವಾಗಿ ನಿರ್ಧರಿಸಿ, ಆದಾಯ ಮಿತಿಗಳನ್ನು ಸಮಕಾಲೀನಗೊಳಿಸಿ, ಎಲ್ಲಾ ಅರ್ಹ ಬಡವರಿಗೂ ಬಿಪಿಎಲ್ ಕಾರ್ಡುಗಳನ್ನು ನೀಡಬೇಕು.
ವಸತಿ-ನಿವೇಶನ: ನಿವೇಶನ ರಹಿತರಿಗೆ ನಿವೇಶನ, ಮನೆ ನೀಡುವ ಮಾತುಗಳು ಪೇಪರಿನಲ್ಲೇ ಉಳಿದಿವೆ. ಲಕ್ಷಾಂತರ ಅರ್ಜಿಗಳು ವಿಲೇವಾರಿ ಆಗದೆ ನಿಂತಿವೆ. ಅರ್ಜಿ ಹಾಕಿರುವ ಎಲ್ಲರಿಗೂ ನಿವೇಶನಗಳನ್ನು ಹಂಚಬೇಕು. ಕೇರಳದ ಮಾದರಿಯಲ್ಲಿ ಸಮರೋಪಾದಿಯಲ್ಲಿ ಅಗತ್ಯವಿರುವ ಎಲ್ಲರಿಗೂ ನಿವೇಶನಗಳನ್ನು ಒದಗಿಸಬೇಕು.

ಮಹಿಳೆಯರು: ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಕುಟುಂಬಗಳ ಹೆಚ್ಚುತ್ತಿರುವ ಸಂಕಷ್ಟದಿAದಾಗಿ ಮಹಿಳೆಯರ ಮೇಲಿನ ಒತ್ತಡ ಹೆಚ್ಚುತ್ತಿದೆ. ಮೈಕ್ರೋಫೈನಾನ್ಸ್ ಕಿರುಕುಳಗಳು, ಉದ್ಯೋಗ ಖಾತ್ರಿ ಕೆಲಸಗಳ ಕಡಿತದಿಂದ ಸಂಕಷ್ಟ ಹೆಚ್ಚಾಗುತ್ತಿದೆ.
ದಲಿತರು: ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಮೀಸಲಾತಿ ವಿಷಯಗಳು ಗೊಂದಲಗಳನ್ನು ಉಂಟು ಮಾಡುತ್ತಿವೆ. ಸರ್ಕಾರಿ ಮತ್ತು ಸಾರ್ವಜನಿಕ ಉದ್ಯೋಗಗಳು ನಾಶವಾಗುತ್ತಿವೆ. ಖಾಸಗೀಕರಣದ ದಾಳಿಯು ಭೂಮಿಯನ್ನು ಮತ್ತು ಸಂಪನ್ಮೂಲಗಳನ್ನು ದಲಿತರಿಂದ ದೂರ ಮಾಡುತ್ತಿದೆ. ಸಂಪತ್ತು ಮತ್ತು ಅಧಿಕಾರದ ವಂಚನೆಯು ಹೆಚ್ಚುತ್ತಿದೆ. ದಲಿತರ ಸ್ಥಿತಿಗತಿಗಳ ಸಮೀಕ್ಷೆ ಆಧರಿಸಿ ಭೂಮಿ, ಆಸ್ತಿ ಮತ್ತು ಅಧಿಕಾರಗಳ ಸಮರ್ಪಕ ಹಂಚಿಕೆಯಾಗಬೇಕು.
ಅಲ್ಪಸಂಖ್ಯಾತರು: ಆರ್.ಎಸ್.ಎಸ್.ನ ಮತೀಯ ದಾಳಿಗಳಿಂದಾಗಿ ಅಲ್ಪಸಂಖ್ಯಾತರು ಆತಂಕಿತರಾಗಿದ್ದಾರೆ. ನಿರಂತರ ಅಪಪ್ರಚಾರ, ಸುಳ್ಳುಗಳನ್ನು ಹೇಳುವ ಮೂಲಕ ಅಲ್ಪಸಂಖ್ಯಾತರಲ್ಲಿ ಪರಕೀಯತೆ, ಆತಂಕ, ಅಭದ್ರತೆಗಳನ್ನು ಹೆಚ್ಚಿಸಲಾಗಿದೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಬೇಕಾಗಿದೆ. ಬದುಕಿನ ಪ್ರಶ್ನೆಗಳನ್ನು ಬಗೆಹರಿಸಬೇಕಾಗಿದೆ.
ಕೋಮುವಾದ-ಜಾತಿವಾದ: ಸಮಾಜದಲ್ಲಿ ಕೋಮುವಾದ ಮತ್ತು ಜಾತಿವಾದ ವ್ಯಾಪಕಗೊಂಡಿದೆ. ಪರಸ್ಪರ ಸಹಬಾಳ್ವೆಯನ್ನು ನಾಶ ಮಾಡಿ, ಅಪನಂಬಿಕೆಗಳನ್ನು ಹೆಚ್ಚು ಮಾಡಲಾಗಿದೆ. ಮತೀಯ ಮತ್ತು ಜಾತಿಯ ಅಸ್ಮಿತೆಗಳನ್ನು ಮನಸ್ಸಿನಾಳಕ್ಕೆ ಇಳಿಸಲಾಗುತ್ತಿದೆ. ಕೋಮುವಾದವನ್ನು ಜಾತಿವಾದವನ್ನು ಸೋಲಿಸದಿದ್ದರೆ ಜನರ ಬದುಕು ತೀವ್ರವಾಗಿ ತೊಂದರೆಗೆ ಒಳಗಾಗಲಿದೆ.
ಸೇವೆಗಳ ಖಾಸಗೀಕರಣ: ವಿದ್ಯುತ್, ಸಾರಿಗೆ, ನೀರು, ರಸ್ತೆ, ಮುಂತಾದ ಸೇವೆಗಳ ಖಾಸಗೀಕರಣವನ್ನು ಮಾಡಲಾಗುತ್ತಿದೆ. ಎಲ್ಲಾ ಸೇವೆಗಳಿಗೂ ಜನರೇ ಪೂರ್ಣವಾಗಿ ಹಣ ಪಾವತಿಸಿಬೇಕೆಂಬ ಕಾರ್ಪೊರೇಟ್ ನೀತಿಗಳನ್ನು ಜಾರಿಗೊಳಿಸಲಾಗುತ್ತಿದೆ. ಇವುಗಳನ್ನು ತಡೆಯದಿದ್ದರೆ ಮುಂದೆ ಸಾಮಾನ್ಯರಿಗೆ ಯಾವುದೂ ಸಿಗುವುದಿಲ್ಲ.
ಹೆಚ್ಚುತ್ತಿರುವ ಬಡವ-ಶ್ರೀಮಂತ ಅಸಮಾನತೆ: ದೇಶವನ್ನು ಮುನ್ನಡೆಸುವ ಕಾರ್ಮಿಕರ ಶ್ರಮ, ನೆಲ, ಜಲ ಸಂಪತ್ತು ಮತ್ತು ಸಂಪನ್ಮೂಲಗಳನ್ನು ಲೂಟಿ ಹೊಡೆಯುವ ನೀತಿಗಳಿಂದಾಗಿ ಬಿಲಿಯಾಧಿಪತಿಗಳು ಭಾರತವನ್ನು ಕಬ್ಜ ಮಾಡಿದ್ದಾರೆ. ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಅಗಾಧವಾಗಿ ಬೆಳೆದಿದೆ. ಈ ಅಸಮಾನತೆಯನ್ನು ಇಲ್ಲವಾಗಿಸಬೇಕು.
ಬಯಲು ಸೀಮೆಯ ನೀರಾವರಿ ಪ್ರಶ್ನೆ: ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮುಂತಾದ ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಕೃಷ್ಣಾ ನೀರಿನಲ್ಲಿ ಈ ಭಾಗಕ್ಕೆ ನೀರನ್ನು ಒದಗಿಸಬೇಕು.
ಒಕ್ಕೂಟ ವ್ಯವಸ್ಥೆ ಮೇಲೆ ದಾಳಿ: ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯಗಳ ಹಣಕಾಸು, ಶಾಸನಾತ್ಮಕ ಮತ್ತು ಆಡಳಿತಾತ್ಮಕ ಹಕ್ಕುಗಳ ಮೇಲೆ ತೀವ್ರವಾದ ದಾಳಿಗಳನ್ನು ಮಾಡುತ್ತಿದೆ. ಸಂವಿಧಾನದ ಒಕ್ಕೂಟ ತತ್ವದ ಅಡಿಪಾಯವನ್ನು ದುರ್ಬಗೊಳಿಸುತ್ತಿದೆ. ರಾಜ್ಯಗಳು ಈ ದಾಳಿಗಳ ವಿರುದ್ಧ ಪ್ರಬಲವಾಗಿ ನಿಲ್ಲಬೇಕಾಗಿದೆ.
ಪ್ರಜಾಪ್ರಭುತ್ವ ವಿರೋಧಿ ಕಾನೂನುಗಳು: ರಾಜ್ಯ ಸರ್ಕಾರವು ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ, ಮೆರವಣಿಗೆ, ಹೋರಾಟಗಳನ್ನು ನಡೆಸುವ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸಲು, ಕೇಂದ್ರ ಸರ್ಕಾರದ ವಿಧಾನಗಳನ್ನೇ ಬಳಸುತ್ತಿರುವುದು ಸರಿಯಲ್ಲ. ಜನ ವಿರೋಧಿ ನೀತಿಗಳ ವಿರುದ್ಧ ಮತ್ತು ಜನರ ಸಮಸ್ಯೆಗಳ ಪರಿಹಾರಕ್ಕೆ ಪ್ರತಿರೋಧವನ್ನು ಒಡ್ಡಲು ಅಸಾಧ್ಯವೆನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಬದಲಾಯಿಸಬೇಕು.
ಧರ್ಮಸ್ಥಳದಲ್ಲಿನ ಎಲ್ಲಾ ಅಸಹಜ ಸಾವುಗಳು, ಭೂಕಬಳಿಕೆ, ಮೈಕ್ರೋಫೈನಾನ್ಸ್ ಕುರಿತು ಸಮಗ್ರ ತನಿಖೆ ನಡೆಯಬೇಕು.
ಈ ಸಂದರ್ಭದಲ್ಲಿ ಸಿಪಿಐಎಂ ಹಾಸನ ಜಿಲ್ಲಾ ಕಾರ್ಯದರ್ಶಿ ಹೆಚ್.ಆರ್.ನವೀನ್ಕುಮಾರ್, ಜಿಲ್ಲಾ ಸಮಿತಿ ಸದಸ್ಯರುಗಳಾದ ಧರ್ಮೇಶ್, ಎಂ.ಜಿ.ಪೃಥ್ವಿ, ಹೆಚ್.ಎಸ್.ಮಂಜುನಾಥ್, ಜಿ.ಪಿ.ಸತ್ಯನಾರಾಯಣ, ಸೌಮ್ಯ ಹಾಗೂ ಅರವಿಂದ ಉಪಸ್ಥಿತರಿದ್ದರು.
Hassan
ವಿಜೃಂಭಣೆಯಿಂದ ಜರುಗಿದ ಶ್ರೀ ಅಯ್ಯಪ್ಪ ಸ್ವಾಮಿ ಪಡಿ ಪೂಜಾ ಕಾರ್ಯಕ್ರಮ
ಅರಸೀಕೆರೆ: ನಗರದ ಹಾಸನ ರಸ್ತೆ ಬಲಭಾಗದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಇರುವ ಪಿರಿಯಾಪಟ್ಟಣ ಅಮ್ಮ ದೇವಿಯ ದೇವಾಲಯದಲ್ಲಿ ವಿಜೃಂಭಣೆಯಿಂದ ಅಯ್ಯಪ್ಪ ಸ್ವಾಮಿ ಪಡಿಪೂಜಾ ಕಾರ್ಯಕ್ರಮ ನೆರವೇರಿತು.
ಅಯ್ಯಪ್ಪ ಭಕ್ತ ಮಾಲಾಧಾರಿಗಳು ಕಾರ್ತಿಕ ಮಾಸದಲ್ಲಿ ಮಾಲೆಯನ್ನು ಧರಿಸಿ ಶಿಸ್ತಿನಿಂದ ವ್ರತವನ್ನು ಆಚರಿಸಿ ಶ್ರೀ ಅಯ್ಯಪ್ಪನಿಗೆ ಶರಣು ಶರಣು ಎನ್ನುತ್ತಾ ಇರುಮುಡಿಯನ್ನು ಕಟ್ಟಿಕೊಂಡು ಶಬರಿಮಲೆ ಯಾತ್ರೆಗೆ ತೆರಳುತ್ತಾರೆ. ಅರಸೀಕೆರೆ ನಗರದ ಹಾಸನ ರಸ್ತೆಯ ಬಲಭಾಗ ಒಂದನೇ ಕ್ರಾಸ್ ನಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಇರುವ ಪಿರಿಯಾಪಟ್ಟಣದಮ್ಮ ನೆಲೆಸಿರುವ ಈ ದೇವಾಲಯದಲ್ಲಿ ಅಯ್ಯಪ್ಪ ಪಡಿ ಪೂಜ ಕಾರ್ಯಕ್ರಮವನ್ನು ಮನು ಸ್ವಾಮಿ ಮತ್ತು ಅವರ ಸಹೋದರರು ಲೋಕ ಕಲ್ಯಾಣಾರ್ಥಕವಾಗಿ ಶ್ರದ್ದಾ ಭಕ್ತಿಯಿಂದ ಪ್ರತಿ ವರ್ಷವೂ ಈ ಪಡಿ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿದ್ದಾರೆ.

ಈ ಪೂಜಾ ಕಾರ್ಯಕ್ರಮದಲ್ಲಿ ಅಯ್ಯಪ್ಪ ಮಾಲಾಧಾರಿಗಳು ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಅಯ್ಯಪ್ಪ ಭಜನೆ ಅಯ್ಯಪ್ಪ ನಾಮಸ್ಮರಣೆ ಮಾಡುತ್ತಾ ಶ್ರೀ ಧರ್ಮ ಶಾಸ್ತರ ಕೃಪೆಗೆ ಪಾತ್ರರಾದರು. ಪಡಿ ಪೂಜೆ ಮುಗಿದ ನಂತರ ಮಾಲಾಧಾರಿಗಳಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಗುರು ಸ್ವಾಮಿಗಳಾದ ರಾಜನ್ , ಜವರಪ್ಪ, ತೇಜಸ್, ಶ್ರೀಧರ್, ಧರ್ಮ ಹಾಗೂ ಅಯ್ಯಪ್ಪ ಭಕ್ತರು ಪಡಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.
Hassan
2026ರ ಜು.18ಕ್ಕೆ ದಿ.ಹೆಚ್.ಸಿ.ಶ್ರೀಕಂಠಯ್ಯ ಜನ್ಮ ಶತಮಾನೋತ್ಸವ: ಉದಯಕುಮಾರ್
ವರದಿ: ದಯಾನಂದ ಶೆಟ್ಟಿಹಳ್ಳಿ
ಚನ್ನರಾಯಪಟ್ಟಣ: ತಾಲೂಕಿಗೆ ಹಲವಾರು ಕೊಡಿಗೆ ನೀಡಿರುವ ಮಾಜಿ ಕಂದಾಯ ಸಚಿವ ದಿ.ಹೆಚ್.ಸಿ.ಶ್ರೀಕಂಠಯ್ಯ ಅವರ ಜನ್ಮ ಶತಮಾನೋತ್ಸವವನ್ನು 2026ರ ಜು.18 ರಂದು ಆಚರಿಸಲಾಗುವುದು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಉದಯಕುಮಾರ್ ಹೇಳಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ, ಜಿಲ್ಲೆ ಹಾಗೂ ತಾಲೂಕಿಗೆ ಅವರ ಕೊಡುಗೆ ಅಪಾರ ಎಂದರು.

ಚನ್ನರಾಯಪಟ್ಟಣ ಹಾಗೂ ಹಿರೀಸಾವೆ ಗ್ರಾಮದ ಸೂಕ್ತ ಸ್ಥಳದಲ್ಲಿ ಶ್ರೀಕಂಠಯ್ಯ ಅವರ ಕಂಚಿನ ಪ್ರತಿಮೆ ಸ್ಥಾಪಿಸಲಾಗುವುದು. ರಾಜ್ಯ ಮಟ್ಟದ ಮಹಿಳಾ ಸಬಲೀಕರಣ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.
ಮುಖಂಡರೆಲ್ಲಾ ಸೇರಿ ಪೂರ್ವಭಾವಿ ಸಭೆ ನಡೆಸಿ ದಿನಾಂಕ ನಿಗದಿಪಡಿಸಲಿದ್ದು ಹಂತ ಹಂತವಾಗಿ ಅವರ ಹೆಸರಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಕ್ರೀಡಾಕೂಟಗಳು ಹಾಗೂ ವಿವಿಧ ವಿಶೇಷ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಮಾಜಿ ಕಂದಾಯ ಸಚಿವ ದಿ.ಹೆಚ್.ಸಿ.ಶ್ರೀಕಂಠಯ್ಯ ಅವರ ಸಾಧನೆ ಕುರಿತ ವಿಚಾರಗಳನ್ನು ಒಳಗೊಂಡ 2026 ನೇ ಸಾಲಿನ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಾಬು, ತಾಲ್ಲೂಕು ಯೂಥ್ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಆಕರ್ಷಗೌಡ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರುದ್ರೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರು, ವಾಸಣ್ಣ, ಪ್ರಮುಖರಾದ ಅಶೋಕ್ ಹಾಗೂ ಇತರರು ಇದ್ದರು.
-
Mandya11 hours agoಡಿ.17ಕ್ಕೆ ಮಳವಳ್ಳಿಗೆ ರಾಷ್ಟ್ರಪತಿ ಆಗಮನ : ಜಿಲ್ಲಾಧಿಕಾರಿಗಳಿಂದ ಸ್ಧಳ ಪರಿಶೀಲನೆ
-
Mysore9 hours agoಮೈಸೂರು ದಸರಾ: ಮಹಿಳಾ ಉದ್ಯಮಿ ಉಪಸಮಿತಿಗೆ ಎಸ್. ರಂಗನಾಥ ಸಂಚಾಲಕರಾಗಿ ನೇಮಕ
-
Mandya18 hours agoಡಿ 10 ಶ್ರೀರಂಗಪಟ್ಟಣ ಸೇರಿದಂತೆ ವಿವಿದೆಡೆ ವಿದ್ಯುತ್ ಕಡಿತ
-
Hassan14 hours agoಜಿಲ್ಲಾ ಮಟ್ಟದ ಅಂತರಶಾಲಾ ಚೆಸ್ ಸ್ಪರ್ಧೆ ಯಶಸ್ವಿ
-
Hassan13 hours agoಎಂಸಿಇ ಕಾಲೇಜಿನ ಸಿವಿಲ್ ವಿಭಾಗದಲ್ಲಿ ಸ್ಪೋರ್ಟ್ಸ್ ವಿಜೇತರಿಗೆ ಸನ್ಮಾನ
-
Mysore19 hours agoಡಾ.ಬಿ.ಆರ್. ಅಂಬೇಡ್ಕರ್ 69ನೇ ಮಹಾ ಪರಿನಿಬ್ಬಾಣ ದಿನ: ಸೇವಾ ಕಾರ್ಯದೊಂದಿಗೆ ಗೌರವ ನಮನ
-
Kodagu15 hours agoಸಂವಿಧಾನದ ರಕ್ಷಣೆ ನಮ್ಮೆಲ್ಲರ ಹೊಣೆ : ಗಾಯತ್ರಿ ನರಸಿಂಹ
-
Mysore13 hours agoದೌರ್ಜನ್ಯ ತಡೆಗೆ ಕೆಪಿಎ- ಸಾವಿತ್ರಿಬಾ ಫುಲೆ ಸಂಸ್ಥೆ ನಡುವೆ ಒಡಂಬಡಿಕೆ
