National - International
ಭಾನುವಾರ ಒಂದೇ ದಿನ 2.7 ಮಿಲಿಯನ್ ಐಟಿ ರಿಟರ್ನ್ಸ್ ಸಲ್ಲಿಕೆ; ಗಡುವು ಮುಗಿದರೂ ಸಲ್ಲಿಕೆಗೆ ಅವಕಾಶ ಇದೆ.. ಆದರೆ..!

ನವದೆಹಲಿ: ವ್ಯಕ್ತಿಗಳು ಮತ್ತು ಎಚ್ಯುಎಫ್ಗಳಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇಂದು ಅಂದರೆ ಜುಲೈ 31 ಕೊನೆಯ ದಿನಾಂಕವಾಗಿದ್ದು, ಭಾನುವಾರ ಒಂದೇ ದಿನ 2.7 ಮಿಲಿಯನ್ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿವೆ ಎಂದು ತಿಳಿದುಬಂದಿದೆ.
ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್ಸೈಟ್ ಭಾನುವಾರ ಸಂಜೆ 6:30 ರ ವೇಳೆಗೆ 1.3 ಕೋಟಿಗೂ ಹೆಚ್ಚು ಲಾಗಿನ್ಗಳಿಗೆ ಸಾಕ್ಷಿಯಾಗಿದ್ದು, ಆದಾಯ ತೆರಿಗೆ ಇಲಾಖೆಯ ಪ್ರಕಾರ, ಭಾನುವಾರ ಸಂಜೆ 6.30 ರವರೆಗೆ ಸುಮಾರು 26.76 ಲಕ್ಷ ಐಟಿಆರ್ಗಳನ್ನು ಸಲ್ಲಿಸಲಾಗಿದೆ. ಜುಲೈ 30ರವರೆಗೆ 6 ಕೋಟಿಗೂ ಹೆಚ್ಚು ಐಟಿಆರ್ಗಳನ್ನು ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.
ತೆರಿಗೆ ವೃತ್ತಿಪರರು ಮತ್ತು ಚಾರ್ಟರ್ಡ್ ಅಕೌಂಟೆಂಟ್ಗಳು ಗಡುವನ್ನು ವಿಸ್ತರಿಸುವ ಸಾಧ್ಯತೆಯಿಲ್ಲ ಎಂದು ಹೇಳಿದ್ದರಿಂದ ಭಾನುವಾರ ರಿಟರ್ನ್ಸ್ ಸಲ್ಲಿಕೆಗೆ ನೂಕುನುಗ್ಗಲು ಕಂಡುಬಂದಿದೆ. AY 2023-24 ಗಾಗಿ ಐಟಿಆರ್ ಅನ್ನು ಸಲ್ಲಿಸದ ಎಲ್ಲರಿಗೂ, ಕೊನೆಯ ಕ್ಷಣದ ಗೊಂದಲ ತಪ್ಪಿಸಿಕೊಳ್ಳಲು ತಮ್ಮ ಐಟಿಆರ್ ಅನ್ನು ಆದಷ್ಟು ಬೇಗ ಸಲ್ಲಿಸುವಂತೆ ತೆರಿಗೆ ಇಲಾಖೆ ಭಾನುವಾರ ಸಂಜೆ ಟ್ವೀಟ್ ಮೂಲಕ ಒತ್ತಾಯಿಸಿದೆ.
ಆದಾಯ ತೆರಿಗೆ ವೆಬ್ಸೈಟ್ ಪ್ರಕಾರ, ಜುಲೈ 29 ರಂದು ಸುಮಾರು 5 ಕೋಟಿ ರಿಟರ್ನ್ಗಳನ್ನು ಪರಿಶೀಲಿಸಲಾಗಿದೆ, ಆದರೆ 3 ಕೋಟಿಗೂ ಹೆಚ್ಚು ಐಟಿಆರ್ಗಳನ್ನು ಪ್ರಕ್ರಿಯೆಗೊಳಿಸಲಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಅಧ್ಯಕ್ಷ ನಿತಿನ್ ಗುಪ್ತಾ ಅವರು ಸಲ್ಲಿಸಿದವರ ಬಗ್ಗೆ ಮಾಹಿತಿಯೊಂದನ್ನು ಹಂಚಿಕೊಂಡಿದ್ದು, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಿದವರ ಪೈಕಿ ಸುಮಾರು 7% ಮೊದಲ ಬಾರಿಗೆ ಸಲ್ಲಿಸುವವರಾಗಿದ್ದಾರೆ ಎಂದು ಹೇಳಿದ್ದಾರೆ.
ಸಂಸತ್ತಿನಲ್ಲಿ ಇತ್ತೀಚಿನ ಹಣಕಾಸು ಸಚಿವಾಲಯದ ಸಲ್ಲಿಕೆ ಪ್ರಕಾರ, 2022-23ರಲ್ಲಿ 7.4 ಕೋಟಿ ತೆರಿಗೆ ಪಾವತಿದಾರರು ರಿಟರ್ನ್ಸ್ ಸಲ್ಲಿಸಿದ್ದರು. ಅದರ ಹಿಂದಿನ ವರ್ಷ ಅಂದರೆ 2021-22ರಲ್ಲಿ 6.94 ಕೋಟಿ ರಿಟರ್ನ್ಸ್ ಸಲ್ಲಿಕೆಯಾಗಿತ್ತು. 2021-22ಕ್ಕೆ ಹೋಲಿಕೆ ಮಾಡಿದರೆ 2022-23ರಲ್ಲಿ ಐಟಿಆರ್ ಸಲ್ಲಿಸುವ ವ್ಯಕ್ತಿಗಳ ಸಂಖ್ಯೆಯಲ್ಲಿ 6.18% ಹೆಚ್ಚಳವಾಗಿದೆ. ಈ ವರ್ಷ ಆದಾಯ ತೆರಿಗೆ ರಿಟರ್ನ್ಸ್ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆದಿದೆ. ಈ ತಿಂಗಳ ಆರಂಭದಲ್ಲಿ ನಡೆದ ಆದಾಯ ತೆರಿಗೆ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, 50 ಲಕ್ಷಕ್ಕಿಂತ ಹೆಚ್ಚಿನ ಆದಾಯ ಕಂಡುಬಂದ ಪ್ರಕರಣಗಳಲ್ಲಿ ಸುಮಾರು ಒಂದು ಲಕ್ಷ ನೋಟಿಸ್ಗಳನ್ನು ಕಳುಹಿಸಲಾಗಿದೆ ಎಂದು ಹೇಳಿದ್ದರು.
ಗಡುವು ಮುಗಿದರೂ ಸಲ್ಲಿಕೆಗೆ ಅವಕಾಶ.. ಆದರೆ..!!
ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವ ಗಡುವು ಸೋಮವಾರ ಕೊನೆಗೊಳ್ಳಲಿದ್ದು, ಈ ವರ್ಷ, ಐಟಿಆರ್ ಸಲ್ಲಿಸಲು ಗಡುವನ್ನು ಕಳೆದುಕೊಂಡಿರುವ ತೆರಿಗೆದಾರರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ದೇಶದ ಹಲವೆಡೆ ಭಾರೀ ಮಳೆ ಮತ್ತು ಪ್ರವಾಹವು ಹಾನಿಯನ್ನುಂಟುಮಾಡುವುದರಿಂದ, ಅನೇಕ ತೆರಿಗೆದಾರರು ಜುಲೈ 31 ರ ಮೊದಲು ITR ಗಳನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ.
ಆದಾಯ ತೆರಿಗೆ ಸಲ್ಲಿಕೆ ಗಡುವು ವಿಸ್ತರಿಸಲು ಮನವಿ
ಇನ್ನು ಇತ್ತೀಚಿನ ಸಮೀಕ್ಷೆಯ ಪ್ರಕಾರ ಶೇ.14% ಕ್ಕಿಂತ ಹೆಚ್ಚು ವೈಯಕ್ತಿಕ ಆದಾಯ ತೆರಿಗೆದಾರರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31 ರ ಗಡುವನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಮಹಾರಾಷ್ಟ್ರ, ತೆಲಂಗಾಣ, ಗುಜರಾತ್, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ದೆಹಲಿ NCR ಸೇರಿದಂತೆ ಪ್ರವಾಹ ಪೀಡಿತ ರಾಜ್ಯಗಳಲ್ಲಿ ವೈಯಕ್ತಿಕ ತೆರಿಗೆದಾರರು ಹವಾಮಾನ ವೈಪರೀತ್ಯದಿಂದಾಗಿ ತಮ್ಮ ಆದಾಯ ತೆರಿಗೆ ರಿಟರ್ನ್ಗಳನ್ನು ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ಸಮುದಾಯ ಆಧಾರಿತ ಸಾಮಾಜಿಕ ಮಾಧ್ಯಮ ವೇದಿಕೆಯು ನಡೆಸಿದ ಸಮೀಕ್ಷೆಯು ದೇಶಾದ್ಯಂತ 315 ಜಿಲ್ಲೆಗಳಲ್ಲಿ ನೆಲೆಗೊಂಡಿರುವ ನಾಗರಿಕರಿಂದ 12,000 ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಆಧರಿಸಿದೆ.
ಗಡುವನ್ನು ವಿಸ್ತರಿಸಲು ಕರೆಗಳು ಬಂದಿವೆ ಆದರೆ ಈ ನಿಟ್ಟಿನಲ್ಲಿ ತೆರಿಗೆದಾರರಿಗೆ ಯಾವುದೇ ಪರಿಹಾರ ನೀಡಲು ಸರ್ಕಾರ ಹಿಂದೇಟು ಹಾಕುತ್ತಿದೆ. 2022-23ನೇ ಹಣಕಾಸು ವರ್ಷದಲ್ಲಿ ಗಳಿಸಿದ ಆದಾಯಕ್ಕಾಗಿ 5.03 ಕೋಟಿಗೂ ಹೆಚ್ಚು ಐಟಿಆರ್ಗಳನ್ನು ಜುಲೈ 27 ರವರೆಗೆ ಸಲ್ಲಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಶುಕ್ರವಾರ ತಿಳಿಸಿದೆ, ಅದರಲ್ಲಿ ಶೇ.88% ವಿದ್ಯುನ್ಮಾನವಾಗಿ ಪರಿಶೀಲಿಸಲಾಗಿದೆ. ಜುಲೈ 31, 2022 ಕ್ಕೆ ಸುಮಾರು 5.83 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಾಗಿದೆ. ಇದು ಹಿಂದಿನ ವರ್ಷಕ್ಕಿಂತ ಹೆಚ್ಚಿನದಾಗಿದೆ ಏಕೆಂದರೆ ಒಂದು ವರ್ಷದ ಹಿಂದೆ 4.83 ಕೋಟಿ ರಿಟರ್ನ್ಸ್ ಸಲ್ಲಿಸಲಾಗಿದೆ.
ಗಡುವು ಮೀರಿದರೆ ಏನಾಗುತ್ತದೆ?
ಒಂದು ವೇಳೆ ಇಲಾಖೆ ನಿಗದಿಪಡಿಸಿದ ಗಡುವಿನೊಳಗೆ ನೀವು ಐಟಿ ರಿಟರ್ನ್ ಸಲ್ಲಿಸದಿದ್ದರೆ ಕೆಲ ಪ್ರಮುಖ ನಷ್ಟಗಳು ತಲೆದೋರಬಹುದು. ಉದಾಹರಣೆಗೆ ನೀವು ತಡವಾಗಿ ರಿಟರ್ನ್ ಫೈಲ್ ಮಾಡಿದಾಗ, ತೆರಿಗೆ ಬಾಕಿ ಹಣಕ್ಕೆ ಶೇ. 50ರಿಂದ ಶೇ. 200ರಷ್ಟು ಮೊತ್ತವನ್ನು ಸೇರಿಸಿ ದಂಡವಾಗಿ ಕಟ್ಟಬೇಕಾಗುತ್ತದೆ. ನೀವು 2,000 ರೂ ತೆರಿಗೆ ಬಾಕಿ ಉಳಿಸಿಕೊಂಡಿದ್ದರೆ 1,000 ರೂನಿಂದ 4,000 ರೂವರೆಗೆ ದಂಡ ಸೇರಿಸಿ ಕಟ್ಟಬೇಕು. ಅಂದರೆ 3,000 ರೂನಿಂದ 6,000 ರೂವರೆಗೂ ನೀವು ಕಟ್ಟಬೇಕಾಗಬಹುದು. ಹಾಗೆಯೇ, ನೀವು ಡೆಡ್ಲೈನ್ ತಪ್ಪಿಸಿದಾಗ ಕಾನೂನು ಕ್ರಮ ಜರುಗಿಸಲು ನೋಟೀಸ್ ಕೊಡಲಾಗುತ್ತದೆ.
ಏನು ಮಾಡಬೇಕು?
ಗಡುವಿನ ನಂತರವೂ ರಿಟರ್ನ್ಸ್ ಅನ್ನು ಸಲ್ಲಿಸಬಹುದು, ಆದರೆ ತೆರಿಗೆದಾರರು ದಂಡವನ್ನು ಪಾವತಿಸಬೇಕಾಗುತ್ತದೆ. ಒಬ್ಬ ವ್ಯಕ್ತಿಯ ಒಟ್ಟು ಆದಾಯವು ರೂ 5 ಲಕ್ಷಕ್ಕಿಂತ ಹೆಚ್ಚಿಲ್ಲದಿದ್ದರೆ, ದಂಡವು R1,000 ಆಗಿರುತ್ತದೆ ಮತ್ತು R5 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ವ್ಯಕ್ತಿಗಳಿಗೆ ಗಡುವಿನ ನಂತರ ರಿಟರ್ನ್ ಸಲ್ಲಿಸಲು ದಂಡವು R5,000 ಆಗಿದೆ. ತಡವಾಗಿ ರಿಟರ್ನ್ಸ್ ಸಲ್ಲಿಸುವುದರಿಂದ ಯಾವುದೇ ವಿಶೇಷ ಕಡಿತಕ್ಕೆ ಅನರ್ಹರಾಗುತ್ತಾರೆ.
ನೀವು ಐಟಿಆರ್ ಅನ್ನೇ ಸಲ್ಲಿಸದಿದ್ದರೆ ಏನಾಗುತ್ತದೆ?
2022-23 ರ ಹಣಕಾಸು ವರ್ಷದಲ್ಲಿ ನೀವು ಕಟ್ಟಬೇಕಿರುವ ತೆರಿಗೆ ಹಣಕ್ಕೆ ಶೇ. 200ರಷ್ಟು ದಂಡ ವಿಧಿಸಲಾಗುತ್ತದೆ. ನಿಮಗೆ ಯಾವುದಾದರೂ ವ್ಯವಹಾರದಲ್ಲಿ ನಷ್ಟವಾಗಿದ್ದರೆ ಅದನ್ನು ಬಳಸಿ ತೆರಿಗೆ ರಿಯಾಯಿತಿ ಪಡೆಯಲು ಅವಕಾಶ ಇರುತ್ತದೆ. ಆದರೆ, ನೀವು ಐಟಿ ರಿಟರ್ನ್ ಫೈಲ್ ಮಾಡದೇ ಹೋದಾಗ ಈ ನಷ್ಟವನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಆಗುವುದಿಲ್ಲ. ಜೊತೆಗೆ, ಐಟಿ ಇಲಾಖೆಯಿಂದ ಕಾನೂನು ಕ್ರಮ ಜಾರಿಗೊಳಿಸಲು ನೋಟೀಸ್ ಸ್ವೀಕರಿಸಬೇಕಾಗುತ್ತದೆ.
ಐಟಿ ರಿಟರ್ನ್ ಯಾಕೆ ಸಲ್ಲಿಸಬೇಕು?
ಕಳೆದ ಹಣಕಾಸು ವರ್ಷದಂದು (2022-23) ನಿಮ್ಮ ಒಟ್ಟಾರೆ ಎಲ್ಲಾ ಆದಾಯಗಳು, ಹೂಡಿಕೆಗಳು, ಸಾಲಗಳು ಇತ್ಯಾದಿಯನ್ನು ನೀವು ಘೋಷಿಸಲು ಐಟಿಆರ್ ಸಲ್ಲಿಸಲಾಗುತ್ತದೆ. ನಿಮ್ಮ ಆದಾಯಕ್ಕೆ ತಕ್ಕಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಅಥವಾ ಹೆಚ್ಚಾಗಿ ತೆರಿಗೆ ಕಟ್ಟಿದ್ದರೆ ಅದನ್ನು ಕ್ಲೈಮ್ ಮಾಡಿಕೊಳ್ಳುವ ಅವಕಾಶವೂ ಇರುತ್ತದೆ. ಐಟಿ ರಿಟರ್ನ್ ಸಲ್ಲಿಸುವುದು ಹಲವು ಕಾರಣಗಳಿಗೆ ಅಗತ್ಯ ಎನಿಸಿದೆ. ಬ್ಯಾಂಕ್ ಸಾಲದಿಂದ ಹಿಡಿದು ಹಲವು ಕಾರ್ಯಗಳಿಗೆ ಐಟಿಆರ್ಗಳನ್ನು ಕೇಳಲಾಗುತ್ತದೆ. ನಿಮ್ಮ ಆದಾಯವು ತೆರಿಗೆ ವಿಂಗಡಣೆಯಿಂದ ಹೊರತಾಗಿದ್ದರೂ ಕೂಡ ಐಟಿಆರ್ ಸಲ್ಲಿಸಲು ಅಡ್ಡಿ ಇಲ್ಲ.

National - International
ಹಣಕಾಸು ವಂಚನೆಯಲ್ಲಿ ಭಾಗಿಯಾಗಿದ್ದ 70 ಲಕ್ಷ ಮೊಬೈಲ್ ಸಂಪರ್ಕ ಕಡಿತ

ಡಿಜಿಟಲ್ ವಂಚನೆಗಳನ್ನು ಪರಿಶೀಲಿಸಲು, ಸೈಬರ್ ಅಪರಾಧ ಅಥವಾ ಹಣಕಾಸು ವಂಚನೆಗಳಲ್ಲಿ ಭಾಗಿಯಾಗಿರುವ 70 ಲಕ್ಷ ಮೊಬೈಲ್ ಸಂಖ್ಯೆಗಳನ್ನು ಸರ್ಕಾರ ಕಡಿತಗೊಳಿಸಿದೆ ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ವಿವೇಕ್ ಜೋಶಿ ಹೇಳಿದ್ದಾರೆ.
ಹಣಕಾಸು ಸೈಬರ್ ಭದ್ರತೆ ಮತ್ತು ಹೆಚ್ಚುತ್ತಿರುವ ಡಿಜಿಟಲ್ ಪಾವತಿ ವಂಚನೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಈ ನಿಟ್ಟಿನಲ್ಲಿ ವ್ಯವಸ್ಥೆ ಮತ್ತು ಪ್ರಕ್ರಿಯೆಗಳನ್ನು ಬಲಪಡಿಸಲು ಬ್ಯಾಂಕುಗಳನ್ನು ಕೇಳಲಾಗಿದೆ ಎಂದು ಹೇಳಿದರು. ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್ಫಾರ್ಮ್ಗಳ ಮೂಲಕ ವರದಿಯಾದ ಸೈಬರ್ ಅಪರಾಧ / ಆರ್ಥಿಕ ವಂಚನೆಗಳಲ್ಲಿ ಭಾಗಿಯಾಗಿರುವ 70 ಲಕ್ಷ ಮೊಬೈಲ್ ಸಂಪರ್ಕಗಳನ್ನು ಇಲ್ಲಿಯವರೆಗೆ ಕಡಿತಗೊಳಿಸಲಾಗಿದೆ ಎಂದಿದ್ದಾರೆ.
ಸುಮಾರು 900 ಕೋಟಿ ರೂ.ಗಳ ವಂಚನೆಗೊಳಗಾದ ಹಣವನ್ನು ಉಳಿಸಲಾಗಿದ್ದು, 3.5 ಲಕ್ಷ ಸಂತ್ರಸ್ತರಿಗೆ ಪ್ರಯೋಜನವಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಇತ್ತೀಚೆಗೆ ವರದಿಯಾದ ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (ಎಇಪಿಎಸ್) ವಂಚನೆಗೆ ಸಂಬಂಧಿಸಿದಂತೆ, ಈ ವಿಷಯವನ್ನು ಪರಿಶೀಲಿಸಲು ಮತ್ತು ಡೇಟಾ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರಾಜ್ಯಗಳನ್ನು ಕೇಳಲಾಗಿದೆ ಎಂದು ಅವರು ಹೇಳಿದರು.
National - International
ಉತ್ತರಕಾಶಿ ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಕಾರ್ಮಿಕರ ರಕ್ಷಣೆ : 17 ದಿನಗಳ ಕಾರ್ಯಾಚರಣೆ ಯಶಸ್ವಿ

ಕಳೆದ 17 ದಿನಗಳಿಂದ ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾದ ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ಇಂದು (ನ.28) ಸಂಜೆ 8 ಗಂಟೆ ಸುಮಾರಿಗೆ ಯಶಸ್ವಿಯಾಗಿ ರಕ್ಷಿಸಲಾಗಿದೆ; ಸ್ಟ್ರೆಚರ್ ಮೂಲಕ ಒಬ್ಬೊಬ್ಬರನ್ನೇ ಕರೆತರಲಾಗುತ್ತಿದೆ.
ಭಾರತೀಯ ಸೇನೆಯ ಸುರಂಗ ತಜ್ಞರ ತಂಡ, ಅಂತಾರಾಷ್ಟ್ರೀಯ ಸುರಂಗ ತಜ್ಞರು ಹಾಗೂ ರಾಷ್ಟ್ರೀಯ ವಿಪತ್ತು ಕಾರ್ಯನಿರ್ವಹಣಾ ಪಡೆಯ (ಎನ್ಡಿಆರ್ಎಫ್) ಕಾರ್ಯಾಚರಣೆಯಲ್ಲಿ ಸುರಂಗದಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರನ್ನು ಯಶ್ವಸಿಯಾಗಿ ರಕ್ಷಿಸಲಾಗಿದೆ. 41 ಕಾರ್ಮಿಕರ ರಕ್ಷಣೆಗೆ ಯಂತ್ರ ಬಳಸದೆ 6 ಮಂದಿ ರ್ಯಾಟ್ ಹೋಲ್ ಮೈನರ್ಗಳು (ಒಬ್ಬ ವ್ಯಕ್ತಿಗಷ್ಟೇ ಹೋಗಿ ಬರಲು ಸಾಧ್ಯವಾಗುವಂಥ ಕಿರಿದಾದ
ಗುಂಡಿಗಳನ್ನು ಅಗೆಯುವವರು) ಸುರಂಗ ಕೊರೆಯುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಇದರ ಜೊತೆಗೆ ಏಕಕಾಲದಲ್ಲಿ, ಸುರಂಗದ ಮೇಲಿನಿಂದ ಲಂಬ ಕೊರೆಯುವಿಕೆಯನ್ನೂ ಮುಂದುವರಿಸಲಾಗಿತ್ತು.
ಆರೋಗ್ಯದ ಹಿತದೃಷ್ಟಿಯಿಂದ ಸುರಂಗದಿಂದ ಹೊರಬಂದ ಎಲ್ಲ ಕಾರ್ಮಿಕರನ್ನು ಏರ್ ಲಿಫ್ಟ್ ಮಾಡಿ ಚಿನ್ಯಾಲಿಸೌರ್ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಚಾರ್ಧಾಮ್ ಸರ್ವಋತು ರಸ್ತೆ ಯೋಜನೆಯಡಿ ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾದಲ್ಲಿ ನಿರ್ಮಿಸುತ್ತಿರುವ ಸುರಂಗದ ಕೆಲಭಾಗಗಳು ಕಳೆದ ಶನಿವಾರ (ನ.12) ಕುಸಿದು, 41 ಕಾರ್ಮಿ ಕರು ಸಿಲುಕಿಕೊಂಡಿದ್ದರು.
ವಾಕಿಟಾಕಿ, ರೇಡಿಯೊ ಮೂಲಕ ಕಾರ್ಮಿಕರೊಂದಿಗೆ ಸಂವಹನ ನಡೆಸಲಾಗುತ್ತಿದ್ದು, ನಿರಂತರವಾಗಿ ವಿದ್ಯುತ್, ಆಮ್ಲಜನಕ, ಆಹಾರ, ನೀರು ಪೂರೈಸಲಾಗುತ್ತಿತ್ತು.
ಕಾರ್ಮಿಕರಿಗೆ ಸಾಕಷ್ಟು ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ತಲುಪಿಸುವ ಉದ್ದೇಶದಿಂದ ಸುರಂಗದಲ್ಲಿ ಕಳೆದ 17 ದಿನಗಳಿಂದ ಅವಶೇಷಗಳ ನಡುವೆ 39 ಮೀಟರ್ (128 ಅಡಿ) ದೂರ ಕೊರೆಯಲಾಗಿತ್ತು.
ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಗಾಗಿ ವಾಯುಪಡೆ ಮೂಲಕ ದೆಹಲಿಯಿಂದ ರಂಧ್ರ ಕೊರೆಯುವ ವಿಶೇಷ ಯಂತ್ರವನ್ನು ಗುರುವಾರ (ನ.16) ತರಲಾಗಿತ್ತು. ಈ ಯಂತ್ರದ ಮೂಲಕ ಸುರಂಗದಲ್ಲಿ ರಂಧ್ರ ಕೊರೆಯುವ ಕಾರ್ಯಾಚರಣೆಗೆ ಚಾಲನೆ ನೀಡಲಾಗಿತ್ತು.
ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ವಿಫಲವಾಗಿದ್ದರಿಂದ ಭಾರತೀಯ ವಾಯುಪಡೆಯು ಗುರುವಾರ ಸಿ–130 ಹರ್ಕ್ಯುಲಸ್ ಸಾಗಣೆ ವಿಮಾನಗಳ ಮೂಲಕ ಹೊಸ ಯಂತ್ರವನ್ನು ದೆಹಲಿಯಿಂದ ಉತ್ತರಕಾಶಿಗೆ ಸಾಗಿಸಿತ್ತು.
ಈ ಯಂತ್ರ ಅಮೆರಿಕದಲ್ಲಿ ತಯಾರಾಗಿತ್ತು. ರಕ್ಷಣಾ ಕಾರ್ಯಾಚರಣೆಗೆ ಅಂತಾರಾಷ್ಟ್ರೀಯ ಸುರಂಗ ತಜ್ಞರನ್ನು ಕರೆಸಲಾಗಿತ್ತು. ಅಮೆರಿಕ ಯಂತ್ರವೂ ಕೂಡ ವಿಫಲವಾಗಿತ್ತು. ಅಲ್ಲದೆ ಸುರಂಗ ಕೊರೆಯುವ ಅಗರ್ ಯಂತ್ರದ ಬ್ಲೇಡುಗಳು ಮುರಿದು ಅವಶೇಷಗಳಡಿ ಸಿಲುಕಿಕೊಂಡಿತ್ತು. ಇದಕ್ಕಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗಿರುವ ಅವಶೇಷಗಳನ್ನು ಕೊರೆಯಲು ಹೈದರಾಬಾದ್ನಿಂದ ಪ್ಲಾಸ್ಮಾ ಕಟ್ಟರ್ ಯಂತ್ರವನ್ನು ತರಲಾಗಿತ್ತು.
ರ್ಯಾಟ್ ಹೋಲ್ ಮೈನರ್ಗಳಿಂದ ಕೈಯಿಂದ ಕೊರೆತ
6 ಮಂದಿ ರ್ಯಾಟ್ ಹೋಲ್ ಮೈನರ್ಗಳ (ಒಬ್ಬ ವ್ಯಕ್ತಿಗಷ್ಟೇ ಹೋಗಿ ಬರಲು ಸಾಧ್ಯವಾಗುವಂಥ ಕಿರಿದಾದ
ಗುಂಡಿಗಳನ್ನು ಅಗೆಯುವವರು) ತಂಡವು ಸೋಮವಾರ ಸ್ಥಳಕ್ಕೆ ಆಗಮಿಸಿತ್ತು. ಈ ತಂಡದ ಪ್ರತಿ ಸದಸ್ಯನು ಒಂದು ಬಾರಿಗೆ ಒಬ್ಬನಂತೆ ಸುರಂಗದ ಅವಶೇಷಗಳ ಒಳಗೆ ತೂರಿಸಲಾಗಿರುವ 800 ಎಂಎಂ ವ್ಯಾಸದ ಪೈಪಿನೊಳಗೆ ಹೋಗಿ, ಸನಿಕೆಯ ಮೂಲಕ ಕೈಯಿಂದಲೇ ಅಗೆದಿದ್ದರು. ಇದು ಅತ್ಯಂತ ನಿಧಾನ ಹಾಗೂ ಕಷ್ಟಕರ ಕೆಲಸವಾಗಿದ್ದರೂ, ಕಾರ್ಮಿಕರನ್ನು ತಲುಪಲು ಬಾಕಿಯುಳಿದ ಕೇವಲ 10-12 ಮೀಟರ್ ದೂರವಿರುವ ಕಾರಣ, ಇದುವೇ ಸದ್ಯಕ್ಕಿರುವ ಉತ್ತಮ ಆಯ್ಕೆ ಎಂದು ತಜ್ಞರು ತಿಳಿಸಿದ್ದರು.
ಈ ಯಂತ್ರದಿಂದ ಸುರಂಗದಲ್ಲಿ ಅಡ್ಡಿಯುಂಟಾಗಿರುವ ಕಲ್ಲುಮಣ್ಣುಗಳನ್ನು ಹೊರತೆಗೆಯಲು ಹಾಗೂ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವ ಸುರಂಗ ಕೊರೆಯುವ ಆಗರ್ ಯಂತ್ರದ ಬ್ಲೇಡ್ಗಳನ್ನು ಹೊರತೆಗೆಯಲು ಪ್ಲಾಸ್ಮಾ ಕಟ್ಟರ್ ಯಂತ್ರ ಸಹಾಯ ಮಾಡಿತ್ತು.
ಸುರಂಗ ಕುಸಿದಿದ್ದು ಹೇಗೆ?
4.5 ಕಿಮೀ-ಸುರಂಗವು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಚಾರ್ ಧಾಮ್ ಯೋಜನೆಯ ಭಾಗವಾಗಿದ್ದು, ಉತ್ತರಾಖಂಡದ ನಾಲ್ಕು ಪ್ರಮುಖ ಹಿಂದೂ ಪುಣ್ಯಕ್ಷೇತ್ರಗಳಾದ ಬದರಿನಾಥ್, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ ನಡುವೆ ಎಲ್ಲ ಹವಾಮಾನ ಸಂದರ್ಭದಲ್ಲಿ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಸಿಲ್ಕ್ಯಾರಾ ಸುರಂಗ ಎಂದೂ ಕರೆಯಲ್ಪಡುವ ಈ ಸುರಂಗವು ಉತ್ತರಕಾಶಿ ಜಿಲ್ಲೆಯ ಸಿಲ್ಯಾರಾ ಮತ್ತು ದಂಡಲ್ಗಾಂವ್ ಅನ್ನು ಸಂಪರ್ಕಿಸುವ ಮಾರ್ಗದಲ್ಲಿದೆ.
ಇದು ದ್ವಿಪಥ ಸುರಂಗ ಮತ್ತು ಚಾರ್ ಧಾಮ್ ಯೋಜನೆಯಡಿಯಲ್ಲಿನ ಅತಿ ಉದ್ದದ ಸುರಂಗ ಮಾರ್ಗವಾಗಿದೆ. ಸಿಲ್ಕ್ಯಾರ ಕಡೆಯಿಂದ ಸುಮಾರು 2.4 ಕಿ.ಮೀ ಮತ್ತು ಇನ್ನೊಂದು ಬದಿಯಿಂದ 1.75 ಕಿ.ಮೀ ಮೂಲಕ ಸುರಂಗವನ್ನು ನಿರ್ಮಿಸಲಾಗುತ್ತಿದೆ. ಸುರಂಗವು ಪೂರ್ಣಗೊಂಡ ನಂತರ, ಒಂದು ಗಂಟೆಯ ಪ್ರಯಾಣದ ಸಮಯವನ್ನು ಕಡಿತಗೊಳಿಸುವ ನಿರೀಕ್ಷೆಯಿದೆ. ಸುರಂಗವನ್ನು ನಿರ್ಮಿಸುವ ಯೋಜನೆಯನ್ನು ಹೈದರಾಬಾದ್ ಮೂಲದ ನವಯುಗ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್ ನಡೆಸುತ್ತಿದೆ.
ನವೆಂಬರ್ 12 ರಂದು, ಸಿಲ್ಕ್ಯಾರಾ ಕಡೆಯಿಂದ 205 ಮತ್ತು 260 ಮೀಟರ್ ನಡುವಿನ ಸುರಂಗದ ಒಂದು ಭಾಗ ಕುಸಿದಿದೆ. 260 ಮೀಟರ್ಗಳ ಗಡಿಯಿಂದ ದೂರವಿದ್ದ ಕಾರ್ಮಿಕರು ಸುರಂಗದಲ್ಲಿ ಸಿಲುಕಿಕೊಂಡಿದ್ದರು. ಅದೃಷ್ಟವಶಾತ್, ಅವರು ಸಿಲುಕಿದ್ದ ಸುರಂಗದ ಭಾಗವು ವಿದ್ಯುತ್ ಮತ್ತು ನೀರಿನ ಪೂರೈಕೆಯನ್ನು ಹೊಂದಿದೆ. ಯಾವ ಕಾರಣಕ್ಕೆ ಸುರಂಗ ಕುಸಿಯಿತು ಎಂಬ ವಿವರವನ್ನು ಅಧಿಕಾರಿಗಳು ತಿಳಿಸಿಲ್ಲ. ಆದರೆ ಸುರಂಗ ನಿರ್ಮಿಸುವ ಬೆಟ್ಟದ ಪ್ರದೇಶ ಸುರಂಗ ನಿರ್ಮಾಣಕ್ಕೆ ಯೋಗ್ಯವಿಲ್ಲ ಎಂದು ಭೂವಿಜ್ಞಾನಿಗಳು, ಪರಿಸರವಾದಿಗಳು ಹಲವಾರು ವರ್ಷಗಳಿಂದ ಎಚ್ಚರಿಕೆ ನೀಡುತ್ತಲೇ ಬಂದಿದ್ದರು.
National - International
6ನೇ ಬಾರಿಗೆ ಆಸೀಸ್ ಚಾಂಪಿಯನ್

ಟೀಮ್ ಇಂಡಿಯಾ ನೀಡಿದ್ದ 241 ರನ್ಗಳನ್ನು ಬೆನ್ನತ್ತಿದ ಆಸೀಸ್, 47 ರನ್ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತ್ತಾದರೂ, ಬಳಿಕ ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ಸಮಯೋಚಿತ ಆಟದಿಂದ 43 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಆ ಮೂಲಕ ಟೀಮ್ ಇಂಡಿಯಾ ಮೂರನೇ ಬಾರಿಗೆ ಚಾಂಪಿಯನ್ ಆಗಬೇಕೆಂಬ ಕೋಟ್ಯಂತರ ಭಾರತೀಯರ ಕನಸು ನುಚ್ಚು ನೂರಾಗಿದೆ.
ಆಸೀಸ್ ಪರ ಬ್ಯಾಟಿಂಗ್ನಲ್ಲಿ ಟ್ರಾವಿಸ್ ಹೆಡ್ ಹಾಗೂ ಲಾಬೂಶೈನ್ ಅವರು ನಡೆದ 192 ರನ್ಗಳ ಬೃಹತ್ ಜೊತೆಯಾಟದ ಪರಿಣಾಮ ಟೀಮ್ ಇಂಡಿಯಾ ಸೋಲನುಭವಿಸಿತು. ಟ್ರಾವಿಸ್ ಹೆಡ್ ಶತಕ(137) ಬಾರಿಸಿ ಮಿಂಚಿದರೆ, ಲಾಬೂಶೈನ್ ಔಟಾಗದೆ 58 ರನ್ ದಾಖಲಿಸಿದರು. ಈ ಜೋಡಿ 4ನೇ ವಿಕೆಟ್ಗೆ 192 ರನ್ಗಳ ಜೊತೆಯಾಟ ನಡೆಸಿ, ಆಸ್ಟ್ರೇಲಿಯಾವನ್ನು ವಿಜಯದ ಕಡೆಗೆ ತೆಗೆದುಕೊಂಡು ಹೋದರು.
6ನೇ ಬಾರಿಗೆ ಆಸೀಸ್ ಚಾಂಪಿಯನ್
ಈ ಪ್ರಶಸ್ತಿಯ ಮೂಲಕ ಆಸ್ಟ್ರೇಲಿಯಾ ತಂಡ 6ನೇ ಬಾರಿಗೆ ಚಾಂಪಿಯನ್ ಆಗಿದೆ. ಈ ಮೊದಲು 1987, 1999, 2003, 2007 ಹಾಗೂ 2015ರಲ್ಲಿ ಚಾಂಪಿಯನ್ ಆಗಿತ್ತು.
ವಿಶ್ವಕಪ್ ಟೂರ್ನಿಯುದ್ಧಕ್ಕೂ ಉತ್ತಮ ಪ್ರದರ್ಶನ ತೋರಿದ್ದ ಟೀಮ್ ಇಂಡಿಯಾ, ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ನೀರಸ ಪ್ರದರ್ಶನ ತೋರಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ, ಆಸೀಸ್ನ ಉತ್ತಮ ಕ್ಷೇತ್ರ ರಕ್ಷಣೆ ಹಾಗೂ ಅತ್ಯುತ್ತಮ ಬೌಲಿಂಗ್ನಿಂದ 50 ಓವರ್ಗಳಲ್ಲಿ ಆಲೌಟ್ ಆಗಿ 240 ರನ್ ಗಳಿಸಿ ಆಸ್ಟ್ರೇಲಿಯಾಗೆ ಸಾಧಾರಣ ಗುರಿ ನೀಡಿತ್ತು.
ಅಹಮದಾಬಾದ್ನ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಭಾರತವನ್ನು ಬ್ಯಾಟಿಂಗ್ ಆಹ್ವಾನಿಸಿದ್ದರು.
ಆರಂಭದಲ್ಲಿ ಮೇಲುಗೈ ಸಾಧಿಸಿದ್ದ ಟೀಮ್ ಇಂಡಿಯಾ ಬೌಲರ್ಗಳು
ಬುಮ್ರಾ ಎಸೆದ ಮೊದಲ ಓವರ್ನಲ್ಲೇ ಆಸೀಸ್ನ ಆರಂಭಿಕ ಬ್ಯಾಟರ್ಗಳು 15 ರನ್ಗಳನ್ನು ಬಾಚುವ ಮೂಲಕ ಸ್ಫೋಟಕ ಆರಂಭದ ಮುನ್ಸೂಚನೆ ನೀಡಿದರು. ಆದರೆ ಇದಕ್ಕೆ 2ನೇ ಓವರ್ ಎಸೆದ ಸೆಮಿಫೈನಲ್ ಪಂದ್ಯದ ಹೀರೋ ಮೊಹಮ್ಮದ್ ಶಮಿ ಅವಕಾಶ ನೀಡಲಿಲ್ಲ.
ಮೊಹಮ್ಮದ್ ಶಮಿ ಎಸೆದ 2ನೇ ಓವರ್ನ 2ನೇ ಎಸೆತದಲ್ಲಿ ಸ್ಲಿಪ್ನಲ್ಲಿದ್ದ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡುವ ಮೂಲಕ ಡೇವಿಡ್ ವಾರ್ನರ್ 7 ರನ್ ಬಾರಿಸಿ ಔಟಾದರೆ, ಜಸ್ಪ್ರೀತ್ ಬುಮ್ರಾ ಎಸೆದ 5ನೇ ಓವರ್ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್ ಕೆಎಲ್ ರಾಹುಲ್ಗೆ ಕ್ಯಾಚ್ ನೀಡಿ 15 ಎಸೆತಗಳಲ್ಲಿ 15 ರನ್ ಬಾರಿಸಿದ್ದ ಮಿಚೆಲ್ ಮಾರ್ಷ್ ಔಟಾದರು.
ಆ ಬಳಿಕ ಜಸ್ಪ್ರೀತ್ ಬುಮ್ರಾ ಎಸೆದ 7ನೇ ಓವರ್ನ 4ನೇ ಎಸೆತದಲ್ಲಿ ಆಕರ್ಷಕ ಸ್ಟ್ರೈಡ್ ಡ್ರೈವ್ ಫೋರ್ ಬಾರಿಸಿದ ಸ್ಟೀವ್ ಸ್ಮಿತ್, ಕೊನೆಯ ಎಸೆತದಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದು, 4 ರನ್ ಗಳಿಸಿದ್ದ ಸ್ಟೀವ್ ಸ್ಮಿತ್ ನಿರ್ಗಮಿಸಿದರು. ಆ ಮೂಲಕ ಟೀಮ್ ಇಂಡಿಯಾಗೆ ಜಸ್ಪ್ರೀತ್ ಬುಮ್ರಾ ಮೂರನೇ ಯಶಸ್ಸು ತಂದುಕೊಟ್ಟರು.
ಸ್ಟೀವ್ ಸ್ಮಿತ್ ಎಲ್ಬಿಡಬ್ಲ್ಯೂ ನಿಜವಾಗಿಯೂ ಔಟ್ ಅಲ್ಲ. ರಿವೀವ್ಯೂ ತೆಗೆಯುವ ಅವಕಾಶವಿದ್ದರೂ ಅದನ್ನು ಬಳಸಿಕೊಳ್ಳದೇ, ನೇರವಾಗಿ ಪೆವಿಲಿಯನ್ ಕಡೆಗೆ ತೆರಳಿದರು.
-
Hassan1 month ago
ಮಲಗಿದಲ್ಲಿಯೇ ವ್ಯಕ್ತಿ ಸಾವು
-
Mysore1 month ago
KSRTC BUS – ಚಲಿಸುವಾಗ ನಿಯಂತ್ರಣ ತಪ್ಪಿ ಅಪಘಾತ
-
Crime2 weeks ago
ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
Hassan2 months ago
ಹಾಸನ-ಅರ್ಧ ಗಂಟೆಯಲ್ಲಿ 1 ಲೀಟರ್ ಮದ್ಯ ಕುಡಿಯುವ ಚಾಲೆಂಜ್- ಓರ್ವ ಸಾವು
-
Hassan6 days ago
ಜಿಲ್ಲಾಧಿಕಾರಿ ಕಛೇರಿ ಎಸ್ಡಿಎ ಆತ್ಮಹತ್ಯೆ
-
Mysore1 month ago
ಮಾಂಗಲ್ಯ ಸರ ಅಪಹರಣ, ಪೊಲೀಸ್ ವತಿಯಿಂದ ತಪಾಸಣೆ
-
Crime1 month ago
ಕ್ಷುಲ್ಲಕ ಕಾರಣಕ್ಕೆ ಪೆಟ್ರೋಲ್ ಬಂಕ್ಗೆ ನುಗ್ಗಿ ಯುವಕನ ಮಚ್ಚಿನಿಂದ ಹಲ್ಲೆ
-
State1 month ago
ರೇಷನ್ ಕಾರ್ಡ್ ತಿದ್ದುಪಡಿಗೆ ಅವಧಿ ವಿಸ್ತರಸಿದ ಸರಕಾರ