Connect with us

Hassan

ಫೆ.೨೮ ರಂದು ರಾಷ್ಟ್ರೀಯ ವಿಜ್ಞಾನೋತ್ಸವ ಹೆಚ್.ಎಸ್. ಚಂದ್ರಶೇಖರ್

Published

on

ಹಾಸನ: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಸಿ.ವಿ. ರಾಮನ್ನರ ಜನ್ಮ ಶತಮಾನೋತ್ಸವ ಸ್ಮರಣೆಯ ಸಂದರ್ಭದಲ್ಲಿ ಫೆಬ್ರವರಿ ೨೮ರ ಬುಧವಾರದಂದು ಎವಿಕೆ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ್ ಮತ್ತು ಬಿಜಿಎಸ್ ಶಿಕ್ಷಣ ಉಪಸಮಿತಿ ಸಂಚಾಲಕಿ ಕೆ.ವಿ. ಕವಿತ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಎ.ವಿ.ಕೆ ಪದವಿಪೂರ್ವ ಕಾಲೇಜು, ಹಾಸನ. ಭಾರತ ಜ್ಞಾನ ವಿಜ್ಞಾನ ಸಮಿತಿ, ಹಾಸನ ಜಿಲ್ಲೆ ಕ್ವಾರ್ಕ್ ಅಕಾಡೆಮಿ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನೋತ್ಸವ ಆಚರಣೆ ಮಾಡಲಾಗುತ್ತಿದೆ. ಭಾರತಕ್ಕೆ ವಿಜ್ಞಾನ ಕ್ಷೇತ್ರದಲ್ಲಿ ಮೊಟ್ಟಮೊದಲ ನೊಬೆಲ್ ಪಾರಿತೋಷಕ ತಂದುಕೊಟ್ಟು ವಿಜ್ಞಾನದಂಗಳದಲ್ಲಿ ಸ್ವಾವಲಂಬಿಯಾಗಿಸಲು ಪ್ರೇರಣೆಯಾದ ಭಾರತದ ಶ್ರೇಷ್ಠ ಭೌತವಿಜ್ಞಾನಿ ಭಾರತರತ್ನ ಸರ್.ಸಿ.ವಿ.ರಾಮನ್ನರ ರಾಮನ್ ಪರಿಣಾಮ ಜಗತ್ತಾಹೀರುಗೊಳಿಸಿದ ದಿನ ಫೆಬ್ರವರಿ ೨೮ ಆಗಿದ್ದು, ೧೯೨೮ ಆ ನೆನಪಿನಲ್ಲಿ ಭಾರತದ ವಿಜ್ಞಾನದ ಸಾಧನೆಯನ್ನು ಜನತೆಗೆ ತಿಳಿಸುವ, ವಿಜ್ಞಾನ ಶಿಕ್ಷಣಕ್ಕೆ ಉತ್ತೇಜನ ನೀಡುವ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಸಂಶೋಧನೆಗೆ ಪ್ರೋತ್ಸಾಹ ನೀಡಲು ಹಾಗೂ ವೈಜ್ಞಾನಿಕ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಜಗತ್ತು ೨೦೨೪ರ ರಾಷ್ಟ್ರೀಯ ವಿಜ್ಞಾನ ದಿನದ ಘೋಷಣೆ ’ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ” ಶೀರ್ಷಿಕೆಯಡಿ ಹಾಗೂ ಭಾರತ ಎದುರಿಸುತ್ತಿರುವ ಪರಿಸರ, ಆರೋಗ್ಯ ಹಾಗೂ ಆರ್ಥಿಕ ಕ ಸಮಸ್ಯೆಗಳಿಗೆ ವಿಜ್ಞಾನ ಹಾಗೂ ವೈಜ್ಞಾನಿಕ ಸಂಶೋಧನೆಗಳ ಅಭಿವೃದ್ಧಿಗೆ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲು ಕರೆನೀಡಿದೆ. ಈ ಹಿನ್ನಲೆಯಲ್ಲಿ, ಎ.ವಿ.ಕೆ ಪದವಿಪೂರ್ವ ಕಾಲೇಜು, ಭಾರತ ಜ್ಞಾನ ವಿಜ್ಞಾನ ಸಮಿತಿ. ಹಾಸನ ಜಿಲ್ಲೆ ಹಾಗೂ ಕ್ವಾರ್ಕ್ ಅಕಾಡೆಮಿ ಇವರ ಸಹಯೋಗದಲ್ಲಿ ಎ.ವಿ.ಕೆ ಕಾಲೇಜಿನ ಆವರಣದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಈ ಕೆಳ ಕಂಡ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. ೨೦೨೪ ಫೆಬ್ರವರಿ ೨೮ ರಂದು ಬೆಳಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆಯವರೆಗೂ ಬಾಲವಿಜ್ಞಾನಿ ಹಾಗೂ ವಿಜ್ಞಾನಶಾಲೆ ಸ್ಪರ್ಧೆಗಳನ್ನು ಪ್ರೌಢಶಾಲೆಗಳಿಗಾಗಿ ಆಯೋಜಿಸಲಾಗಿದೆ. ಹಾಸನ ಜಿಲ್ಲೆಯ ಪ್ರೌಢಶಾಲೆಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ವಿಜೇತ ತಂಡಗಳಿಗೆ ಆಕರ್ಷಕ ನಗದು ಬಹುಮಾನ, ಪಾರಿತೋಷಕ ಹಾಗೂ ಪ್ರಶಸ್ತಿಪತ್ರ ಮತ್ತು ಭಾಗವಹಿಸಿದ ಎಲ್ಲಾ ಶಾಲೆ ಹಾಗೂ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುವುದು.

ಸ್ಪರ್ಧೆ-೧: ಬಾಲವಿಜ್ಞಾನಿ” ಈ ಸ್ಪರ್ಧೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಹಾಗೂ ಒಬ್ಬರು ಮಾರ್ಗದರ್ಶಿ ಶಿಕ್ಷರನ್ನೊಳಗೊಂಡ ತಂಡ “ದೈನಂದಿನ ಜೀವನದಲ್ಲಿ ರಾಮನ್ ಪರಿಣಾಮಗಳ ಉಪಯೋಗಗಳ” ಕುರಿತು “ಸಂಶೋಧನಾ ಚಟುವಟಿಕೆ ಸೂಕ್ತ ದಾಖಲೆಗಳ ಮೂಲಕ ನಡೆಸಿ ೧೦ ನಿಮಿಷಗಳಲ್ಲಿ ಆಕರ್ಷಕವಾಗಿ ಪ್ರಬಂಧ ಮಂಡಿಸಬೇಕಾಗಿರುತ್ತದೆ. ಸ್ಪರ್ಧೆ-೨: ನನ್ನನ್ನು ಬೆರಗುಗೊಳಿಸಿದ ವಿಜ್ಞಾನಿ ಮತ್ತವರ ಸಂಶೋಧನೆ ಕುರಿತು ವಿದ್ಯಾರ್ಥಿಯು ೫ ನಿಮಿಷಗಳಲ್ಲಿ “ಕಥಾವಿವರಣೆ ನೀಡುವ ಸ್ಪರ್ಧೆ ಇದರಲ್ಲಿ ಪ್ರತಿ ಪ್ರೌಢಶಾಲೆಗೆ ಒಬ್ಬರು ವಿದ್ಯಾರ್ಥಿಗಳು ಭಾಗವಹಿಸಬಹುದು. ಸ್ಪರ್ದೆ-೩: ವಿಜ್ಞಾನಶಾಲೆ ಈ ಸ್ಪರ್ಧೆಯಲ್ಲಿ ವಿಜ್ಞಾನ ಕ್ಷೇತ್ರ ಅಥವ ಬೋಧನೆಯಲ್ಲಿ ಪ್ರೌಢಶಾಲೆಯೊಂದು ಸಾಧಿಸಿದ ಪ್ರಗತಿಯನ್ನು ಪ್ರದರ್ಶಿಸುವ ಶಾಲಾ ವಿಜ್ಞಾನ ವಸ್ತುಪ್ರದರ್ಶನ (ಸೈನ್ಸ್‌ಎಕ್ಸಪೋ) ಸ್ಪರ್ಧೆ. ಫೆ-೨೮, ೨೦೨೪ ರಂದು ಹಾಸನ ನಗರದ ಎ.ವಿ.ಕೆ. ಕಾಲೇಜಿನಲ್ಲಿ ಬೆಳಗ್ಗೆ ೯ ರಿಂದ ಸಂಜೆ ೫ ರವರೆಗೆ ನಡೆಯುವ ವಿಜ್ಞಾನೋತ್ಸವದಲ್ಲಿ ಸ್ಪರ್ಧೆಗಳ ಆಯೋಜನೆ ಹಾಗೂ ಬಹುಮಾನ ವಿತರಣೆ ಮಾಡಲಾಗುವುದು ಎಂದು ಹೇಳಿದರು.

Continue Reading
Click to comment

Leave a Reply

Your email address will not be published. Required fields are marked *

Hassan

ಎಡಪಂಥೀಯರು ಸರ್ಕಾರದೊಂದಿಗೆ ಸೇರಿಕೊಂಡು ಧಾರ್ಮಿಕ ಕ್ಷೇತ್ರಗಳಿಗೆ ಕಳಂಕ ತರುವ ಕೆಲಸ ಮಾಡಿದ್ದಾರೆ: ಛಲವಾದಿ ನಾರಾಯಣಸ್ವಾಮಿ

Published

on

ಸಕಲೇಶಪುರ: ಎಡಪಂಥೀಯರು ಸರ್ಕಾರದ ಜೊತೆ ಸೇರಿಕೊಂಡು ಧಾರ್ಮಿಕ ಕ್ಷೇತ್ರಗಳಿಗೆ ಕಳಂಕ‌ ತರುವ ಕೆಲಸವನ್ನು ಪ್ರಾರಂಭ ಮಾಡಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಆರೋಪಿಸಿದ್ದಾರೆ.

ಹಾಸನ ಜಿಲ್ಲೆಯ, ಸಕಲೇಶಪುರದಲ್ಲಿ ಇಂದು ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಒಂದು ಧಾರ್ಮಿಕ ಕ್ಷೇತ್ರಕ್ಕೆ ಕಳಂಕ ತರಲು ಕೆಲವರು ಪ್ರಾರಂಭ ಮಾಡಿದ್ದಾರೆ. ವೀರೇಂದ್ರ ಹೆಗ್ಗಡೆ ಅವರು ಒಮ್ಮೆ ಅಂತ್ಯ ಹಾಡಲಿ ಎಂದು ಸುಮ್ಮನ್ನಿದ್ದರು. ಇದನ್ನು ಶಬರಿಮಲೆಯಲ್ಲೇ ಮೊದಲು ಪ್ರಾರಂಭ ಮಾಡಿದರು. ಆದರೆ ಅಲ್ಲಿ ಏನು ಮಾಡಲು ಆಗಲಿಲ್ಲ. ಆನಂತರ ಒಂದೊಂದೆ ಕ್ಷೇತ್ರವನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದರು.

ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿದ್ದು ಯಾರು, ಇವತ್ತು ಏನು ಸಿಕ್ಕಿದೆ ನಿಮಗೆ ಮಣ್ಣು ಸಿಕ್ಕಿದೆ, ಮಣ್ಣನ್ನೇ ಅಗೆದು ಮಣ್ಣನ್ನೇ ತೆಗೆದಿದ್ದೀರಿ ಬೇರೇನು ಸಿಕ್ಕಿಲ್ಲ. ಆ ಅನಾಮಿಕ ಕ್ರಿಮಿನಲ್ ಇದ್ದಾನೆ. ಎಡಪಂಥೀಯರು ಸೇರಿ ಒಬ್ಬನನ್ನು ಕ್ರಿಯೇಟ್ ಮಾಡಿ ಸರ್ಕಾರಕ್ಕೆ ಕೊಟ್ಟಿದ್ದಾರೆ. ಇಡೀ ರಾಜ್ಯದಲ್ಲಿ ಭಕ್ತರು ಕೋಪಗೊಂಡಿದ್ದಾರೆ, ಬೇಸರಗೊಂಡಿದ್ದಾರೆ, ನೊಂದುಕೊಂಡಿದ್ದಾರೆ. ನಾವು ಕೂಡ ಭಕ್ತರೇ, ಅವರ ಜೊತೆ ನಾವು ಸೇರಿ ಕಳಂಕ ಹೋಗಲಾಡಿಸಲು ದೇವರ ದರ್ಶನ ಮಾಡಿದ್ದೇವೆ ಎಂದು ಕಿಡಿಕಾರಿದರು.

ವೀರೇಂದ್ರ ಹೆಗ್ಗಡೆ ಅವರು ನೊಂದುಕೊಂಡಿದ್ದರು, ಅವರ ಜೊತೆ ನಾವೀದ್ದೇವೆಂದು ಹೇಳಿ ಬಂದಿದ್ದೇವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿಕೆಗೆ ತಿರುಗೇಟು ನೀಡಿದ ನಾರಾಯಣಸ್ವಾಮಿ, ಕಳ್ಳರು ಯಾವಾಗಲೂ ಬೇರೆಯವರನ್ನ ಕಳ್ಳರು ಮಾಡಲು ಹೋಗುತ್ತಾರೆ. ಕಾಂಗ್ರೆಸ್‌ನವರು ಪಿಕ್‌ಪ್ಯಾಕೇಟ್ ಕಳ್ಳರಿದ್ದಂತೆ. ಬುರುಡೆ ತಂದಿದ್ದು ಯಾರು, ಆ ಅನಾಮಿಕ, ಅವನು ಕಾಂಗ್ರೆಸ್‌, ಎಡಪಂಥೀಯರ ಕೈವಶದಲ್ಲಿದ್ದಾನೆ. ಇದನ್ನು ಮಾಡಿಸಿರುವ ಕಳ್ಳರು ಯಾರು ಎಂದರೆ ಕಾಂಗ್ರೆಸ್‌ನವರು, ಎಡಪಂಥೀಯರು ಎಂದರು.

ಬೆಂಗಳೂರು ಕಾಲ್ತುಳಿತ ಆದಾಗ ಪೊಲೀಸರ ಮೇಲೆ ಹಾಕಿದ್ರು. ಈಗ ಯೂಟರ್ನ್ ಹೊಡೆಯುತ್ತಿದ್ದಾರೆ. ಈಗ ಸಿಕ್ಕಿಬಿದ್ದಿದ್ದೀವಿ ಎನ್ನುವ ಕಾರಣಕ್ಕೆ ನಿರೀಕ್ಷಿಣಾ ಜಾಮೀನು ತೆಗೆದುಕೊಳ್ಳಲು‌ ನೋಡುತ್ತಿದ್ದಾರೆ. ದೇವರ ವಿಷಯದಲ್ಲಿ ಯಾರು ಕೂಡ ಆಟವಾಡಬಾರದು. ಭಕ್ತರು ಒಂದು ಸಾರಿ ತಿರುಗಿ ನಿಮ್ಮ ಮೇಲೆ ಬಿದ್ದರೆ ಏನಾಗುತ್ತೆ ನೋಡಿ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಒಂದು ಟರ್ನ್ ಕೊಟ್ಟರೆ ಜನರು ಬೇರೆ ಕಡೆ ಗಮನಹರಿಸುತ್ತಾರೆ ಎಂದು ಇದನ್ನು ಬಳಸಿಕೊಂಡರು ಎಂದು ಹೇಳಿದರು. ಮತಗಳ್ಳತನ ನಡಿತಿದೆ ಎಂದು ಆರೋಪ ಮಾಡುತ್ತಿದ್ದಾರೆ. ಜನ ಯಾರಿಗೆ ಓಟು ಹಾಕಬೇಕು ಅವರಿಗೆ ಹಾಕುತ್ತಿದ್ದಾರೆ. ಜನಮನ್ನಣೆ ಕೊಡದಿದ್ದಾಗ ಈ ರೀತಿ ಹೇಳುತ್ತಾರೆ. ಅರವತ್ತು ವರ್ಷ ಕಾಂಗ್ರೆಸ್ ಅಧಿಕಾರ ಮಾಡಿದಾಗ ಎಲೆಕ್ಷನ್ ಕಮಿಷನ್ ಇದೆ ಅನ್ನುವುದು ಗೊತ್ತಿರಲಿಲ್ಲ. ನೀವು ಮಾಡಿರುವ ಕಳ್ಳತವನ್ನು ನಮ್ಮ ಮೇಲೆ ಹಾಕುತ್ತಿದ್ದೀರಿ. ಅವರ ಮಾಡಿದ್ದ ತಪ್ಪುಗಳನ್ನು ಮುಚ್ಚಿಕೊಳ್ಳಲು ಈ ರೀತಿ ಆಪಾದನೆ ಮಾಡುತ್ತಿದ್ದಾರೆ ಎಂದರು.

Continue Reading

Hassan

ಧರ್ಮಸ್ಥಳ ಪ್ರಕರಣ| ಸರ್ಕಾರ ಎಚ್ಚೆತ್ತುಕೊಳ್ಳಬೇಕು: ಬಿ.ವೈ.ವಿಜಯೇಂದ್ರ

Published

on

ಸಕಲೇಶಪುರ: ಧರ್ಮಸ್ಥಳ ಅಸಂಖ್ಯಾತ ಭಕ್ತರು ನಂಬಿರುವ ಪುಣ್ಯ ಕ್ಷೇತ್ರ. ಹಿಂದೂಗಳ ಭಾವನೆಗಳಿಗೆ ಧಕ್ಕೆ ಬಂದಾಗ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಸಕಲೇಶಪುರ ಪಟ್ಟಣದಲ್ಲಿ ಮಾತನಾಡಿದ ಅವರು, ನಮ್ಮೆಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರೊಂದಿಗೆ ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆದಿದ್ದೇವೆ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ, ಚರ್ಚೆ ಮಾಡಿ ಬಂದಿದ್ದೇವೆ. ರಾಜ್ಯ ಸರ್ಕಾರ ಧರ್ಮಸ್ಥಳದ ವಿಚಾರದಲ್ಲಿ ಎಸ್‌ಐಟಿ ರಚನೆ ಮಾಡಿದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಯುತ್ತಿದೆ. ಇದು ಕೋಟಿ ಕೋಟಿ ಭಕ್ತರಿಗೆ ನೋವುಂಟು ಮಾಡಿದೆ ಎಂದರು.


ಸಚಿವ ದಿನೇಶ್ ಗುಂಡೂರಾವ್ ಅವರು ಎಡಪಂಥೀಯರ ಒತ್ತಡಕ್ಕೆ ಮಣಿದು ಎಸ್‌ಐಟಿ ರಚನೆ ಮಾಡಿದ್ದೇವೆ ಅಂಥ ಹೇಳಿದರೆ, ಡಿ.ಕೆ.ಶಿವಕುಮಾರ್ ಅವರು ಷಡ್ಯಂತ್ರ ಇದೆ, ಸಮಯ ಬಂದಾಗ ಬಹಿರಂಗ ಪಡಿಸುತ್ತೇನೆ ಎಂದು ಹೇಳಿದ್ದಾರೆ. ತನಿಖೆ ಆಗಲಿ, ಸತ್ಯ ಹೊರಬರಲಿ ಎಂದು ರಾಜ್ಯದ ಜನತೆ ಕೇಳುತ್ತಿದ್ದರೆ, ಒತ್ತಡಕ್ಕೆ ಮಣಿದು ತನಿಖೆ ಹಾದಿ ತಪ್ಪುತ್ತಿದೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದರು.

ಅಪಪ್ರಚಾರ ತಡೆಯುವ ಕೆಲಸವನ್ನು ಸರ್ಕಾರ ಏಕೆ ಮಾಡಲಿಲ್ಲ. ತನಿಖೆ ಬೇಗ ಮುಗಿಯಬೇಕು, ಸದನದಲ್ಲಿ ಮಧ್ಯಂತರ ವರದಿ ಮಂಡನೆ ಮಾಡಬೇಕು. ದೂರದಾರನ ಹಿಂದೆ ಇರುವ ಶಕ್ತಿಗಳು ಯಾರು, ಅವರ ಉದ್ದೇಶ ಏನು ಎಲ್ಲದರ ಬಗ್ಗೆ ಸಮಗ್ರ ತನಿಖೆ ಆಗಬೇಕು. ಈ ವಿಚಾರದಲ್ಲಿ ಬಿಜೆಪಿ ಇದರಲ್ಲಿ ರಾಜಕಾರಣ ಮಾಡುತ್ತಿಲ್ಲ. ಬಿಜೆಪಿಯ ನಿಲುವಿನಲ್ಲಿ ಯಾವುದೇ ಒಂದು ಬದಲಾವಣೆ ಇಲ್ಲ ಎಂದು ತಿಳಿಸಿದರು.


ಎಸ್‌ಐಟಿ ರಚನೆ ಮಾಡಿದಾಗ ಸ್ವಾಗತ ಮಾಡಿದ್ದೆವು. ತನಿಖೆ ಅಂಥ ಹೇಳಿ ದಿನಕ್ಕೊಂದು ಕಡೆ ಗುಂಡಿ ತೆಗೆದು ಸರ್ಕಾರ ಏನು ಮಾಡಲು ಹೊರಟಿದೆ. ತನಿಖೆ ಸಂಸ್ಥೆಗಳ ಮೇಲೆ ಅಪನಂಬಿಕೆ ಹುಟ್ಟುವ ಸಂದರ್ಭ ಸೃಷ್ಟಿಯಾಗಿದೆ. ಜನರ ಭಾವನೆಗಳಿಗೆ ಧಾರ್ಮಿಕ ಶ್ರದ್ದೆಗೆ ಧಕ್ಕೆ ಆಗಬಾರದು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿದ್ದೇವೆ ಎಂದರು. ಸದನದಲ್ಲಿ ಈ ಬಗ್ಗೆ ನಾವು ಮಾತನಾಡಿದ್ದೇವೆ. ಎಲ್ಲದಕ್ಕೂ ಇತಿಮಿತಿಗಳು ಇದೆ. ನಾಡಿನ ಜನ ಶಾಂತಿಯಿಂದ ಎದುರು ನೋಡುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಜನರು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಆ ಸಂದರ್ಭ ಸೃಷ್ಟಿಯಾಗಬಾರದು, ಸರ್ಕಾರ ಎಚ್ಚೆತ್ತುಕೊಂಡು ಮಧ್ಯಂತರ ವರದಿ ನೀಡಬೇಕು, ನಾವು ಅದನ್ನ ಎದುರು ನೋಡುತ್ತಿದ್ದೇವೆ ಎಂದರು.

ಸೌಜನ್ಯ ಹತ್ಯೆ ಪ್ರಕರಣ, ಯಾವುದೇ ಪ್ರಕರಣ ಇದ್ದರು ಸಮಗ್ರ ತನಿಖೆ ಆಗಲಿ, ಆದರೆ ಆ ನೆಪದಲ್ಲಿ ನಮ್ಮ ಭಾವನೆಗಳಿಗೆ ಧಕ್ಕೆ ಬರುವಾಗ ಸರ್ಕಾರ ಕೈಕಟ್ಟಿ ಕುಳಿತರೆ ಯಾರು ಒಪ್ಪಲ್ಲ. ವೀರೇಂದ್ರ ಹೆಗ್ಗಡೆ ಅವರಿಗೆ ಸಹಜವಾಗಿ ನೋವಾಗಿದೆ. ಎಸ್‌ಐಟಿ ರಚನೆ ಮಾಡಿದಾಗ ಸ್ವಾಗತ ಮಾಡಿದ್ದು, ತನಿಖೆ ಮುಗಿಯಬೇಕು ಎನ್ನುವ ಅಪೇಕ್ಷೆ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರದಿಂದ ಸಹವಾಗಿಯೇ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಸದನದಲ್ಲಿ ಎಲ್ಲಾ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

 

Continue Reading

Hassan

ಹಾಸನದ ಸ್ಕಾಲರ್ಸ್ ಶಾಲೆ ವತಿಯಿಂದ ಹಸಿರುಮಯ ವಾತಾವರಣದಲ್ಲಿ ಶಿಕ್ಷಣದ ಮಾದರಿ

Published

on

ಹಾಸನ : ಇಂದಿನ ಕಾಲದಲ್ಲಿ ಶಿಕ್ಷಣವೆಂದರೆ ಕೇವಲ ಪಾಠಪುಸ್ತಕಗಳ ಕಲಿಕೆಯಲ್ಲ, ಬದಲಾಗಿ ವ್ಯಕ್ತಿತ್ವ ವಿಕಸನ, ಶಿಸ್ತು, ನೈತಿಕ ಮೌಲ್ಯಗಳು, ಸಾಮಾಜಿಕ ಹೊಣೆಗಾರಿಕೆ ಹಾಗೂ ಸಾಂಸ್ಕೃತಿಕ ಅರಿವುಗಳನ್ನು ಬೆಳೆಸುವ ಕಾರ್ಯ. ಈ ದೃಷ್ಟಿಯಿಂದ ಹಾಸನದ ಮಹಾಲಕ್ಷ್ಮಿ ಬಡಾವಣೆಯಲ್ಲಿ ಪುಟ್ಟು ಶಿಕ್ಷಣ ಟ್ರಸ್ಟ್‌ನಡಿ ಆರಂಭಗೊಂಡು 14 ವರ್ಷಗಳ ಇತಿಹಾಸವನ್ನು ಹೊಂದಿರುವ ಸ್ಕಾಲರ್ಸ್ ಶಾಲೆ ಇಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿ ಹೆಸರು ಮಾಡಿದೆ.

ಇಟಾಲಿಯ ಶೈಲಿಯ ಕಟ್ಟಡ ವಿನ್ಯಾಸ, ಒಳಗೆ ಹಸಿರಿನಿಂದ ಆವರಿಸಲ್ಪಟ್ಟ ಆವರಣ, ವಿಶಾಲ ಮೈದಾನ ಹಾಗೂ ಪ್ರಕೃತಿಯೊಂದಿಗೆ ಬೆರೆತುಹೋಗುವ ವಾತಾವರಣ, ಒಟ್ಟಾಗಿ ಮಕ್ಕಳಿಗೆ ಓದುವ ಜೊತೆಗೆ ಪ್ರಕೃತಿಯನ್ನು ಅನುಭವಿಸುವ ಅವಕಾಶವನ್ನು ಕಲ್ಪಿಸುತ್ತವೆ. ಸಂಸ್ಥಾಪಕ ಅಧ್ಯಕ್ಷರಾದ ಡಾಕ್ಟರ್ ಎಚ್. ಎನ್. ಚಂದ್ರಶೇಖರ ಹಾಗೂ ಕಾರ್ಯದರ್ಶಿ ಮಮತಾ ಚಂದ್ರಶೇಖರ ಅವರ ಪರಿಶ್ರಮ, ದೀರ್ಘದೃಷ್ಟಿ ಮತ್ತು ತ್ಯಾಗದಿಂದ ಈ ಶಾಲೆ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.

ಈ ಶಾಲೆಯ ಪ್ರಮುಖ ವೈಶಿಷ್ಟ್ಯವೆಂದರೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಬೇರೆ ರಾಜ್ಯಗಳಿಂದ ಬಂದಿರುವ ಶೈಕ್ಷಣಿಕ ಅರ್ಹತೆ ಹೊಂದಿದ ಬೋಧಕರು. ಅವರು ತಮ್ಮ ವಿಷಯದಲ್ಲಿ ಪರಿಣತಿಯನ್ನು ತೋರಿಸುತ್ತಾ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಬೆಳೆಸುತ್ತಿದ್ದಾರೆ. ಶಾಲೆಯ ಎಲ್ಲಾ ತರಗತಿ ಕೊಠಡಿಗಳು ವಿಶಾಲವಾಗಿದ್ದು ಪ್ರಕಾಶಮಾನ ವಾತಾವರಣ ಹೊಂದಿವೆ. ಪ್ರತಿ ವಿಷಯಕ್ಕೂ ಪ್ರತ್ಯೇಕ ಪ್ರಯೋಗಾಲಯಗಳಿದ್ದು, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಗಣಕಯಂತ್ರ ವಿಭಾಗಗಳು ವಿದ್ಯಾರ್ಥಿಗಳ ಕುತೂಹಲವನ್ನು ಪೂರೈಸುತ್ತವೆ. ಮಾಂಟೆಸರಿ ವಿಭಾಗದಿಂದ ಪ್ರೌಢ ಪೂರ್ವ ಶಿಕ್ಷಣದವರೆಗೆ ಶಿಕ್ಷಣ ನೀಡಲಾಗುತ್ತಿರುವುದು ಪೋಷಕರಿಗೂ ಮಕ್ಕಳಿಗೂ ನಿರಂತರ ಶಿಕ್ಷಣದ ಸುಲಭ ಅವಕಾಶ ಒದಗಿಸಿದೆ. ವಿದ್ಯಾರ್ಥಿಗಳ ಸುರಕ್ಷತೆಗೆ ಶಾಲೆಯು ವಿಶೇಷ ಒತ್ತು ನೀಡಿದ್ದು, ನಿಗಾದರ್ಶಕ ದೂರದರ್ಶಕ ಯಂತ್ರಗಳ ವ್ಯವಸ್ಥೆ, ಸ್ಥಳಾನ್ವೇಷಣಾ ತಂತ್ರಜ್ಞಾನ ಹೊಂದಿದ ವಾಹನಗಳ ಮೂಲಕ ಸಾರಿಗೆ ಇವೆಲ್ಲವೂ ಪೋಷಕರಲ್ಲಿ ಭರವಸೆಯನ್ನು ಮೂಡಿಸಿದೆ.

ಇದಲ್ಲದೆ ಸ್ಕಾಲರ್ಸ್ ಶಾಲೆ ಕೇವಲ ಪಠ್ಯ ಶಿಕ್ಷಣಕ್ಕೆ ಸೀಮಿತವಾಗದೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ಸಂಗೀತ, ನೃತ್ಯ, ನಾಟಕ ಇತ್ಯಾದಿಗಳಿಗೆ ಸಮಾನ ಆದ್ಯತೆ ನೀಡುತ್ತಿದೆ. ವಾರ್ಷಿಕ ಕ್ರೀಡಾಕೂಟಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ ತಂಡಭಾವನೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುತ್ತವೆ. ಶಾಲೆಯಲ್ಲಿ ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ, ಶಿಕ್ಷಕರ ದಿನದಂತಹ ರಾಷ್ಟ್ರೀಯ ಹಬ್ಬಗಳ ಜೊತೆಗೆ ದೀಪಾವಳಿ, ಕ್ರಿಸ್‌ಮಸ್, ಮೊಹರಂ, ಹೋಳಿ ಮುಂತಾದ ಧಾರ್ಮಿಕ ಹಬ್ಬಗಳನ್ನು ಸಹಭಾಗಿತ್ವದಿಂದ ಆಚರಿಸಲಾಗುತ್ತದೆ. ಇದರಿಂದ ಮಕ್ಕಳು ಸಹಬಾಳ್ವೆ, ಸಮಾನತೆ ಮತ್ತು ಧಾರ್ಮಿಕ ಸಹಿಷ್ಣುತೆಯ ಮೌಲ್ಯಗಳನ್ನು ಬಾಲ್ಯದಿಂದಲೇ ಅಳವಡಿಸಿಕೊಳ್ಳುತ್ತಾರೆ.

ಪ್ರತಿವರ್ಷ ಶೈಕ್ಷಣಿಕ ಪ್ರವಾಸಗಳನ್ನು ಆಯೋಜಿಸಲಾಗುತ್ತಿದ್ದು, ಪುಸ್ತಕಗಳಲ್ಲಿ ಕಲಿತಿರುವ ವಿಷಯಗಳನ್ನು ನೈಜ ಜೀವನದಲ್ಲಿ ಅನುಭವಿಸಲು ಮಕ್ಕಳಿಗೆ ಅವಕಾಶ ಸಿಗುತ್ತದೆ. ಹೀಗೆ ಶಿಸ್ತು, ನೈತಿಕ ಮೌಲ್ಯಗಳು ಹಾಗೂ ಸಮಗ್ರ ವ್ಯಕ್ತಿತ್ವ ವಿಕಸನದ ಮೂಲಕ ಸಮಾಜಕ್ಕೆ ಆದರ್ಶ ವಿದ್ಯಾರ್ಥಿಗಳನ್ನು ನೀಡುತ್ತಿರುವುದು ಈ ಸಂಸ್ಥೆಯ ಹೆಮ್ಮೆ. ಕಳೆದ ಹದಿನಾಲ್ಕು ವರ್ಷಗಳಲ್ಲಿ ಅನೇಕ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ, ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು, ಶಾಲೆಯ ಖ್ಯಾತಿಯನ್ನು ಹೆಚ್ಚಿಸಿದ್ದಾರೆ. ಹಸಿರುಮಯ ವಾತಾವರಣ, ಆಧುನಿಕ ಸೌಲಭ್ಯಗಳು, ಬದ್ಧ ಗುರುಗಳು ಹಾಗೂ ಸಮಗ್ರ ಚಟುವಟಿಕೆಗಳ ಮೂಲಕ ಹಾಸನದ ಸ್ಕಾಲರ್ಸ್ ಶಾಲೆ ನಿಜವಾದ ಅರ್ಥದಲ್ಲಿ “ಗುಣಮಟ್ಟದ ಶಿಕ್ಷಣದ ಕೇಂದ್ರ”ವಾಗಿ ಪೋಷಕರ ವಿಶ್ವಾಸವನ್ನು ಗಳಿಸಿದೆ.ಅದು ಮಾತ್ರವಲ್ಲದೆ ಈ ಶೈಕ್ಷಣಿಕ ಸಾಲಿನಲ್ಲಿ ಪಿ ಯು ಕಾಲೇಜು ಸಹಾ ಆರಂಭಗೊಂಡಿದೆ.

Continue Reading

Trending

error: Content is protected !!