Kodagu
ನಾಪೋಕ್ಲು ರಸ್ತೆಯ ಗುಂಡಿಗೆ ಬಿದ್ದು ಆಟೋ ಪಲ್ಟಿ ಪ್ರಯಾಣಿಕರಿಗೆ ಗಾಯ
ನಾಪೋಕ್ಲು : ರಸ್ತೆಯಲ್ಲಿದ್ದ ಗುಂಡಿಗೆ ಬಿದ್ದು ಆಟೋರಿಕ್ಷಾವೊಂದು ಪಲ್ಟಿಯಾಗಿ ಪ್ರಯಾಣಿಕರು ಗಾಯ ಗೊಂಡು ಆಸ್ಪತ್ರೆ ಸೇರಿರುವ ಘಟನೆ ನಾಪೋಕ್ಲುವಿನಲ್ಲಿ ಗುರುವಾರ ಸಂಜೆ ನಡೆದಿದೆ.
ನಾಪೋಕ್ಲು ಮಡಿಕೇರಿ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ತೋಟಗಾರಿಕಾ ಇಲಾಖೆಯ ಮುಂಭಾಗದ ರಸ್ತೆಯಲ್ಲಿರುವ ಗುಂಡಿಗೆ ಬಿದ್ದ ಆಟೋರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಹಂಚಿಗೆ ಪಲ್ಟಿ ಹೊಡೆದಿದೆ. ಇದರಿಂದ ಆಟೋದಲ್ಲಿದ್ದ 3 ಪ್ರಯಾಣಿಕರಿಗೆ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಅಪಘಾತದಿಂದ ಆಟೋರಿಕ್ಷಾದ ಒಂದು ಭಾಗ ಜಖಂಗೊಂಡಿದೆ.
ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸಲು ರಸ್ತೆಯನ್ನು ಹಗೆದು ಹಾಕಲಾಗಿತ್ತು.ಆದರೆ ಸರಿಯಾದ ರೀತಿಯಲ್ಲಿ ಗುಂಡಿ ಮುಚ್ಚದೆ ಇರುವುದರಿಂದ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೆ ಈ ಸ್ಥಳದಲ್ಲಿ ದ್ವಿಚಕ್ರ ವಾಹನ ಸೇರಿದಂತೆ ಹಲವು ವಾಹನಗಳು ಅಪಘಾತಕೀಡಾಗುತ್ತಿದ್ದು ಸಂಬಂಧಪಟ್ಟ ಇಲಾಖೆಯವರು ಕೂಡಲೇ ರಸ್ತೆಯ ಗುಂಡಿಯನ್ನು ಮುಚ್ಚಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಕ್ಕೆ ಇಲಾಖೆಯವರೇ ನೇರಹೊಣೆ ಹೊರಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
ವರದಿ :ಝಕರಿಯ ನಾಪೋಕ್ಲು
Kodagu
ನೆಮ್ಮಲೆ ಬಳಿ ಕಾರು ಅಪಘಾತದಿಂದ ಪಾದಾಚಾರಿಗೆ ಡಿಕ್ಕಿ: ಓರ್ವ ಕಾರ್ಮಿಕ ಸಾ*ವು
ಮಡಿಕೇರಿ: ಜಿಲ್ಲೆಯ ಟಿ. ಶೆಟ್ಟಿಗೇರಿ, ಬಿರುನಾಣಿ ಮುಖ್ಯ ರಸ್ತೆಯ ನೆಮ್ಮಲೆ ಬಳಿ ಕಾರು ಅಪಘಾತದಿಂದ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ದಾರಿಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಮಾರುತಿ ಬ್ರಿಜಾ ವಾಹನ ಡಿಕ್ಕಿ ಹೊಡೆದಿದ್ದು, ಟ್ರಾನ್ಸ್ಫರ್ಗೆ ಗುದ್ದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಚಾಲಕನಿಗೂ ಗಂಭೀರ ಗಾಯವಾಗಿದೆ.

ಇನ್ನೂ ವೆಸ್ಟ್ ನೆಮ್ಮಲೆ ನಿವಾಸಿ ಕಾರ್ಮಿಕ ಗಪ್ಪು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಲ್ಲದೇ ವಾಹನ ಚಾಲಕನಿಗೂ ಗಂಭೀರ ಗಾಯವಾಗಿರುವುದರಿಂದ ಆತನನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
Kodagu
ಅಪಹರಿಸಲಾಗದ ಸಂಪತ್ತು ವಿದ್ಯೆ – ಹರಪಳ್ಳಿ ಎನ್.ರವೀಂದ್ರ
ಸುಂಟಿಕೊಪ್ಪ : ಪ್ರಪಂಚದಲ್ಲಿ ಒಬ್ಬರಿಂದ ಕಿತ್ತುಕೊಳ್ಳಲಾಗದ ಮತ್ತು ಅಪಹರಿಸಲಾಗದ ಸಂಪತ್ತು ಎಂದರೆ ಅದು ವಿದ್ಯೆ ಎಂದು ಸಮಾಜ ಸೇವಕ ಹರಪಳ್ಳಿ ಎನ್.ರವೀಂದ್ರ ಹೇಳಿದರು.
ಶನಿವಾರದಂದು ಇಲ್ಲಿಗೆ ಸಮೀಪದ ಕೊಡಗರಹಳ್ಳಿಯ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ 61ನೇ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಳ್ಳಿಯಲ್ಲಿರುವ ಈ ಶಾಲೆ ಕನ್ನಡ ಮಾದ್ಯಮದಾಗಿದ್ದು, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಸಾಧನೆ ಮಾಡಿದೆ ಎಂದು ಪ್ರಶಂಸಿದರು.
ಬದುಕಿನಲ್ಲಿ ನಾವು ಕೊಟ್ಟು ಹೋಗಬೇಕು ಇಲ್ಲವೇ ಬಿಟ್ಟು ಹೋಗಬೇಕು. ತತ್ವಕ್ಕೆ ಅನುಸಾರವಾಗಿ ಬದುಕಬೇಕೆಂದು ಹೇಳಿದ ಅವರು ಸ್ವಾಮಿ ವಿವೇಕಾನಂದರು ಹೇಳಿದ ಮನುಷ್ಯನಲ್ಲಿರುವ ಪರಿಪೂರ್ಣತೆಯನ್ನು ಪ್ರಕಾಶಗೊಳಿಸುವುದೇ ವಿದ್ಯೆ ಎಂದರು.

ವಿದ್ಯೆಯಿಂದ ನಮ್ಮ ಬಾಳು ಮಾತ್ರವಲ್ಲ ಸಮಾಜವನ್ನು ಬೆಳಗುವಂತಾಗಬೇಕೆಂದು ಕಿವಿಮಾತು ಹೇಳಿದರು. ನಾವು ಏನೇ ಕಲಿತರು ಎಷ್ಟೇ ದೊಡ್ಡವರಾದರೂ ಸಮಾಜಕ್ಕಾಗಿ ಮತ್ತು ಪರಹಿತಕ್ಕಾಗಿ ನಾವು ನಮ್ಮನ್ನು ಸಮರ್ಪಿಸಿಕೊಳ್ಳುವುದು ನಮ್ಮ ವ್ಯಕ್ತಿತ್ವದ ಭಾಗವಾಗಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿ ಪಾಲ್ಗೊಂಡು ಶಾಲೆಯ 138 ಮಕ್ಕಳಿಗೆ ಟ್ರ್ಯಾಕ್ಶೂಟ್ ಕೊಡುಗೆಯಾಗಿ ನೀಡಿ ಮಾತನಾಡಿದ ಅವರು,ಕಾಫಿ ಬೆಳೆಗಾರ ಮತ್ತು ಸಮಾಜ ಸೇವಕ ಟಿ.ಕೆ.ಸಾಯಿಕುಮಾರ್, ಸರಕಾರಿ ಶಾಲೆ ಮತ್ತು ಕನ್ನಡ ಮಾದ್ಯಮ ಶಾಲೆ ಎಂಬ ಕೀಳರಿಮೆ ಬೇಕಾಗಿಲ್ಲ. ಸುಂಟಿಕೊಪ್ಪ ನಾಡು ಪ್ರೌಢಶಾಲೆಯು ಈ ಸಮಾಜಕ್ಕೆ ಅತ್ಯುತ್ತಮ ನಾಗರೀಕರನ್ನು ಕೊಡುಗೆಯಾಗಿ ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆಯ ರಾಜ್ಯ ಪ್ರಶಸ್ತಿ ಪುರಸ್ಕೃತ ಮುಖ್ಯೋಪಾದ್ಯಾಯನಿ ಜೋವಿಟಾ ವಾಸ್ ಅವರನ್ನು ಸನ್ಮಾನಿಸಲಾಯಿತು.
ಶಾಲಾಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಕೆ.ಎಸ್.ಮಂಜುನಾಥ್ ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ಸರಕಾರಿ ಅನುದಾನಿತ ಶಾಲೆಗಳಿಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಶಾಲೆಗಳಲ್ಲಿ ವರ್ಗಾವಣೆಯಾದರೆ ಅಥವಾ ವಯೋಸಹಜ ನಿವೃತ್ತಿ ಹೊಂದಿದ್ದರೆ ಆ ಹುದ್ದೆಗಳಿಗೆ ಮರು ನೇಮಕಾತಿಗೊಳಿಸುವ ಪ್ರಕ್ರಿಯೆಯನ್ನು ಕೈ ಬಿಟ್ಟಿದೆ. ಶಿಕ್ಷಕರ ವೇತನ ಹೊರತು ಪಡಿಸಿ ಬೇರೆ ಯಾವುದೇ ಅನುದಾನವನ್ನು ನೀಡುತ್ತಿಲ್ಲ.

ಶಾಲಾ ಆಡಳಿತ ಮಂಡಳಿಯು8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳ ವಾರ್ಷಿಕ ಶಾಲಾ ಶುಲ್ಕವನ್ನು ಪಾವತಿಸಿದ್ದು, ಶಿಕ್ಷಕ ವೃಂದದವರು ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ಪ್ರಾಯೋಜಿಸಿದ್ದಾರೆಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಬಿ.ಶಂಕರ್, ಉಪಾಧ್ಯಕ್ಷ ಎಂ.ಎ.ಕುಟ್ಟಪ್ಪ, ಆಡಳಿತ ಮಂಡಳಿ ನಿರ್ದೇಶ ಎಂ.ಎಸ್.ಸುರೇಶ್ ಚಂಗಪ್ಪ, ಭಾರತೀಯ ಎಜುಕೇಷನ್ ಟ್ರಸ್ಟ್ನ ಕಾರ್ಯದರ್ಶಿ ಪಿ.ಎಂ.ರಂಜಿತ್ ಕಾರ್ಯಪ್ಪ, ಕಂಬಿಬಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯನಿ ನಯನ, ಗಿರಿಧರ್ ಮತ್ತು ಧರ್ಮಪ್ಪ ಉಪಸ್ಥಿತರಿದ್ದರು.
ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನೆರೆದವರ ಮನಸೂರೆಗೊಳಿಸಿತು.
Kodagu
ಫೀ.ಮಾ.ಕಾರ್ಯಪ್ಪ ಕಾಲೇಜು ಹಳೇ ವಿದ್ಯಾರ್ಥಿಗಳ ಸಂಘದ ಸಭೆ : ಸುಸಜ್ಜಿತ ಫೈರಿಂಗ್ ರೇಂಜನ್ನು ನಿರ್ಮಾಣ ಮಾಡಲು ನಿರ್ಧಾರ
ಮಡಿಕೇರಿ: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ವಿದ್ಯಾರ್ಥಿಗಳು ಹಾಗೂ ಎನ್ಸಿಸಿ ವಿದ್ಯಾರ್ಥಿಗಳಿಗಾಗಿ ಕಾಲೇಜು ಮತ್ತು ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜ್ ನ ಮೈದಾನದಲ್ಲಿ ಸುಸಜ್ಜಿತ ಫೈರಿಂಗ್ ರೇಂಜನ್ನು ನಿರ್ಮಾಣ ಮಾಡಲು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಹಳೇ ವಿದ್ಯಾರ್ಥಿಗಳ ಸಂಘ ನಿರ್ಧರಿಸಿದೆ.
ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಕಾಲೇಜ್ ನ ಸೆಮಿನಾರ್ ಹಾಲ್ ನಲ್ಲಿ ನಡೆದ ಸಂಘದ ಸಭೆಯಲ್ಲಿ ಮುಂಬರುವ ದಿನಗಳಲ್ಲಿ ನಡೆಸಲಾಗುವ ವಿವಿಧ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು.

ಸಾರ್ವಜನಿಕರು, ಹಳೇ ವಿದ್ಯಾರ್ಥಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ಗುಂಡು ಹೊಡೆಯುವ ಸ್ಪರ್ಧೆಯನ್ನು ಶೀಘ್ರ ಆಯೋಜಿಸಲು ಮತ್ತು ಹಳೇ ವಿದ್ಯಾರ್ಥಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಕ್ರೀಡೆ ಮತ್ತು ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಯಿತು.
ಹಳೇ ವಿದ್ಯಾರ್ಥಿ ಸಂಘಕ್ಕೆ ನೂತನ ಕಟ್ಟಡವನ್ನು ನಿರ್ಮಿಸುವ ಕುರಿತು ಚರ್ಚಿಸಿ, ಖಾತೆಯಲ್ಲಿ ಹೆಚ್ಚು ಹಣ ಇಲ್ಲದಿರುವ ಕಾರಣ ಮುಂದಿನ ದಿನಗಳಲ್ಲಿ ದಾನಿಗಳನ್ನು ಸಂಪರ್ಕಿಸಿ, ಸೂಕ್ತ ನಿರ್ಣಯ ಕೈಗೊಳ್ಳಲು ತೀರ್ಮಾನಿಸಲಾಯಿತು.
ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಮಾತನಾಡಿ, ಈ ಭಾರಿಯ ಮಹಾಸಭೆಯು ಅತ್ಯಂತ ಅಚ್ಚುಕಟ್ಟಾಗಿ ನಡೆದಿದ್ದು, ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಮುಂದಿನ ಮಹಾಸಭೆಗೆ ಸದಸ್ಯತ್ವವನ್ನು ಹೆಚ್ಚಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸದಸ್ಯರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಆಡಳಿತ ಮಂಡಳಿಯ ಸದಸ್ಯರು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಸಂಘ ಮತ್ತು ಕಾಲೇಜ್ ನ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ಕೋರಿದರು.

ಬೈಲಾನುಸಾರ ನಿರಂತರ ಮೂರು ಸಭೆಗೆ ಗೈರು ಹಾಜರಾದ ಸದಸ್ಯರು ಸದಸ್ಯತ್ವವನ್ನು ಕಳೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಇದೇ ನಿಯಮವನ್ನು ಪಾಲಿಸುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಲೆಕ್ಕಪತ್ರ ಮಂಡಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಕಳೆದ ಸಭೆ ಹಾಗೂ ಮಹಾಸಭೆಯ ವರದಿ ವಾಚಿಸಿ, ಅನುಮೋದನೆ ಪಡೆದರು.
ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ.ರಾಘವ ಬಿ, ಸಂಘದ ಉಪಾಧ್ಯಕ್ಷ ಬೊಟ್ಟಂಗಡ ಗಣಪತಿ, ನಿರ್ದೇಶಕರಾದ ಪೆಬ್ಬಟ್ಟೀರ ಶೀತಲ್ ಕಾರ್ಯಪ್ಪ, ಕೆ.ಹೆಚ್.ಖುರ್ಷಿದ್ ಬಾನು, ಲೋಹಿತ್ ಮಾಗಲು, ಆದರ್ಶ್ ಅದ್ಕಲೆಗಾರ್, ಎಸ್.ಆರ್.ವತ್ಸಲ ಹಾಗೂ ಬಲ್ಯದ ಚರಣ್ ಉಪಸ್ಥಿತರಿದ್ದರು.
ಸಂಘದ ನಿರ್ದೇಶಕರಾದ ಐತಿಚಂಡ ರಶ್ಮಿ ಮೇದಪ್ಪ ಪ್ರಾರ್ಥಿಸಿದರು, ಸಬ್ಬಂಡ್ರ ಜಗದೀಶ್ ಸ್ವಾಗತಿಸಿದರು, ಆಪಾಡಂಡ ಜಾನ್ಸಿ ಗಣಪತಿ ವಂದಿಸಿದರು.
ಕ್ರೀಡಾ ಸಮಿತಿ ರಚನೆ:
ಮುಂದಿನ ದಿನಗಳಲ್ಲಿ ನಡೆಯಲಿರುವ ಕ್ರೀಡಾಕೂಟಗಳಿಗೆ ಸಭೆಯಲ್ಲಿ ಕ್ರೀಡಾ ಸಮಿತಿಯನ್ನು ರಚಿಸಲಾಯಿತು. ಸಂಚಾಲಕರನ್ನಾಗಿ ಸಬ್ಬಂಡ್ರ ಜಗದೀಶ್, ದಿಶಾಂತ್ ಗಾಳಿಬೀಡು, ಐಚಂಡ ರಶ್ಮಿ ಮೇದಪ್ಪ, ಆಪಾಡಂಡ ಜಾನ್ಸಿ ಗಣಪತಿ ಹಾಗೂ ಕರವಂಡ ಸೀಮಾ ಗಣಪತಿ ಅವರನ್ನು ನೇಮಕ ಮಾಡಲಾಯಿತು.
-
Hassan10 hours agoಒಳ್ಳೆಯ ಕೆಲಸ ಬ್ಯಾಂಕ್ ಠೇವಣಿಯಂತೆ; ಸಮಯ ಬಂದಾಗ ಫಲ ನೀಡುತ್ತದೆ: ರವಿಕುಮಾರ್ ಬಲ್ಲೇನಹಳ್ಳಿ
-
Kodagu10 hours agoಅನಧಿಕೃತ ಹೋಸ್ಟೇಗಳಿಗೆ ಕಡಿವಾಣ ನಿಟ್ಟಿನಲ್ಲಿ ವಾರ್ಡ್ವಾರ್ ಸಮಿತಿ ರಚನೆ: 15 ದಿನಗಳೊಳಗೆ ಪೊಲೀಸರಿಂದ ದಲ್ಲಾಳಿಗಳ ವಿರುದ್ದ ಕ್ರಮ
-
Hassan17 hours agoಟಿಕೆಟ್ ಪರಿಶೀಲನೆ ವೇಳೆ ಭೀಕರ ಅಪಘಾತ: ಲಾರಿ ಗುದ್ದಿ KSRTC ಟಿಕೆಟ್ ತನಿಖಾಧಿಕಾರಿ ಸ್ಥಳದಲ್ಲೇ ಸಾ*ವು
-
State6 hours agoರಾಹುಲ್, ಖರ್ಗೆ ಕಾಂಗ್ರೆಸ್ಸಿನ ಹೈಕಮಾಂಡೇ ಅಥವಾ ಯತೀಂದ್ರ ಹೈಕಮಾಂಡೇ: ಬಿ.ವೈ.ವಿಜಯೇಂದ್ರ
-
State10 hours agoಡಾ.ಜಿ.ಪರಮೇಶ್ವರ್ ಈ ರಾಜ್ಯದ ಸಿಎಂ ಆಗಲಿ ಎಂಬುದು ನನ್ನ ವೈಯಕ್ತಿಕ ಆಸೆ: ವಿ.ಸೋಮಣ್ಣ
-
Mandya9 hours agoವಿಕಲಚೇತನ ಯುವತಿ ಮೇಲೆ ಅತ್ಯಾಚಾರ ಆರೋಪ : ದೂರು ದಾಖಲು
-
Hassan8 hours agoರೋಟರಿ ಬೆಂಗಳೂರು ದಕ್ಷಿಣದಿಂದ MCE ಕಾಲೇಜಿನ 51 ವಿದ್ಯಾರ್ಥಿಗಳಿಗೆ 15 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ
-
Kodagu8 hours agoಫೀ.ಮಾ.ಕಾರ್ಯಪ್ಪ ಕಾಲೇಜು ಹಳೇ ವಿದ್ಯಾರ್ಥಿಗಳ ಸಂಘದ ಸಭೆ : ಸುಸಜ್ಜಿತ ಫೈರಿಂಗ್ ರೇಂಜನ್ನು ನಿರ್ಮಾಣ ಮಾಡಲು ನಿರ್ಧಾರ
